ಭಾರತದ ಅಭಿವೃದ್ಧಿಯ ರಥದ ಚಕ್ರಗಳು ಅರಣ್ಯದ ಎದೆಯ ಮೇಲೆ ಉರುಳುತ್ತಿವೆ. ಗುಜರಾತ್ನಿಂದ ಜಾರ್ಖಂಡ್ವರೆಗೂ, ಮುಂಬೈನ ಧಾರಾವಿಯಿಂದ ಅರಾವಳಿ ಬೆಟ್ಟಗಳವರೆಗೂ ಕೇಳಿ ಬರುತ್ತಿರುವುದು ಒಂದೇ ಸದ್ದು, ಅದು ಜೆಸಿಬಿಗಳ ಘರ್ಜನೆ ಮತ್ತು ಕಾರ್ಪೋರೇಟ್ ಆರ್ಭಟ. ಅದಾನಿ ಸಮೂಹದ ಯೋಜನೆಗಳಿಗಾಗಿ ಪರಿಸರ ಕಾನೂನುಗಳನ್ನು ಸಡಿಲಗೊಳಿಸುತ್ತಿರುವ ಕೇಂದ್ರದ ಕ್ರಮಗಳು ‘ಅಮೃತ ಕಾಲ’ವನ್ನಲ್ಲ, ಬದಲಿಗೆ ‘ಅನಾಹುತ ಕಾಲ’ವನ್ನು ಎತ್ತಿ ತೋರಿಸುತ್ತಿವೆ.
ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಜಾಗತಿಕ ವೇದಿಕೆಗಳಲ್ಲಿ ಹವಾಮಾನ ಬದಲಾವಣೆ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುತ್ತಾರೆ. ಆದರೆ, ತಾಯ್ನಾಡಿನಲ್ಲಿ ಅವರದೇ ಆಡಳಿತ ಅಡಿಯಲ್ಲಿ, ಅವರ ಆಪ್ತ ಉದ್ಯಮಿ ಗೌತಮ ಅದಾನಿ ಅವರ ಸಾಮ್ರಾಜ್ಯ ವಿಸ್ತರಣೆಗಾಗಿ ಸಾವಿರಾರು ಎಕರೆ ಅರಣ್ಯಗಳು ನಾಶವಾಗುತ್ತಿವೆ. ಇದಕ್ಕೆ ಇತ್ತೀಚಿನ ಮತ್ತು ಅತ್ಯಂತ ಆತಂಕಕಾರಿ ಸೇರ್ಪಡೆ ಜಾರ್ಖಂಡ್ನ ‘ಗೋಂಡಲ್ಪುರ’ ಕಲ್ಲಿದ್ದಲು ಗಣಿ ಯೋಜನೆ.
ಗೊಂಡಲ್ಪುರ: ಜೀವಸಂಕುಲದ ಮೇಲೆ ಕಲ್ಲಿದ್ದಲಿನ ಕರಿನೆರಳು
ಜಾರ್ಖಂಡ್ನ ಹಜಾರಿಬಾಗ್ ಜಿಲ್ಲೆಯ ಗೊಂಡಲ್ಪುರದಲ್ಲಿ ಅದಾನಿ ಎಂಟರ್ಪ್ರೈಸ್ಗೆ ಮಂಜೂರಾಗಿರುವ ಕಲ್ಲಿದ್ದಲು ಗಣಿಗಾರಿಕೆ ಯೋಜನೆಯೂ ಕೇವಲ ಭೂಮಿಯ ಮೇಲಿನ ದೌರ್ಜನ್ಯವಲ್ಲ, ಅದು ಅಲ್ಲಿನ ಆದಿವಾಸಿಗಳು ಮತ್ತು ವನ್ಯಜೀವಿಗಳ ಬದುಕಿನ ಮೇಲಿನ ದಾಳಿ. ಸುಮಾರು 513 ಹೆಕ್ಟೇರ್ಗೂ ಹೆಚ್ಚು ಅರಣ್ಯ ಪ್ರದೇಶವನ್ನು ಈ ಯೋಜನೆಗಾಗಿ ಬಲಿ ಕೊಡಲಾಗುತ್ತಿದೆ.
ಈ ಪ್ರದೇಶವು ಆನೆಗಳ ಪ್ರಮುಖ ಸಂಚಾರ ಪಥವಾಗಿದೆ (Elephant Corridor). ಈಗಾಗಲೇ ಹಜಾರಿಬಾಗ್ ಕಲ್ಲಿದ್ದಲು ಗಣಿಗಾರಿಕೆಯಿಂದ ತತ್ತರಿಸಿದೆ. ಈಗ ಗೊಂಡಲ್ಪುರ ಯೋಜನೆಯು ಜಾರಿಯಾದರೆ, ನೂರಾರು ಎಕರೆ ದಟ್ಟ ಕಾಡು ನಾಶವಾಗುವುದಲ್ಲದೆ, ಅಳಿವಿನಂಚಿನಲ್ಲಿರುವ ಪ್ರಾಣಿ ಸಂಕುಲ ನೆಲೆ ಕಳೆದುಕೊಳ್ಳಲಿದೆ. ಸ್ಥಳೀಯ ರೈತರು ತಮ್ಮ ಫಲವತ್ತಾದ ಭೂಮಿಯನ್ನು ಕಳೆದುಕೊಳ್ಳುವ ಭೀತಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದರೂ, ಕೇಂದ್ರ ಸರ್ಕಾರ ಮತ್ತು ಅದಾನಿ ಸಮೂಹ ಪೊಲೀಸ್ ಬಲದ ಮೂಲಕ ಧ್ವನಿ ಅಡಗಿಸುವ ಪ್ರಯತ್ನ ಮಾಡುತ್ತಿವೆ ಎಂಬ ಆರೋಪಗಳು ಬಲವಾಗಿ ಕೇಳಿಬರುತ್ತಿವೆ.

ಗುಜರಾತ್: ಸಂರಕ್ಷಣೆಯ ಹೆಸರಲ್ಲಿ ಸಂಹಾರ
ಮೋದಿಯವರ ತವರು ರಾಜ್ಯ ಗುಜರಾತ್ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಬೇಲಿಯೇ ಎದ್ದು ಹೊಲ ಮೇಯ್ದಂತಿದೆ. ಅದಾನಿ ಸಮೂಹದ ವಿವಿಧ ಕೈಗಾರಿಕಾ ಮತ್ತು ಇಂಧನ ಯೋಜನೆಗಳಿಗೆ ಅನುಕೂಲ ಮಾಡಿಕೊಡುವ ಸಲುವಾಗಿ, ಗುಜರಾತ್ ಸರ್ಕಾರವು ನಾಲ್ಕು ಪ್ರಮುಖ ಅರಣ್ಯ ಪ್ರದೇಶಗಳನ್ನು ‘ಸಂರಕ್ಷಣಾ ಪಟ್ಟಿ’ಯಿಂದ ತೆಗೆದುಹಾಕಲು ಕೇಂದ್ರಕ್ಕೆ ವಿನಂತಿಸಿರುವುದು ಆಘಾತಕಾರಿ ಸಂಗತಿ.
ಇದನ್ನು ಓದಿದ್ದೀರಾ? ರಕ್ಷಣಾ ಕ್ಷೇತ್ರಕ್ಕೂ ‘ಮೋದಿ ಮಿತ್ರ’ನ ಲಗ್ಗೆ: ದೇಶದ ಗಡಿ ಕಾಯುವ ಹೊಣೆ ಇನ್ನು ‘ಅದಾನಿ’ ಪಾಲು!
ಕಚ್ ಮತ್ತು ಸೌರಾಷ್ಟ್ರ ಭಾಗದ ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ಅದಾನಿ ಪೋರ್ಟ್ಸ್ ಮತ್ತು ವಿಶೇಷ ಆರ್ಥಿಕ ವಲಯ (SEZ) ವಿಸ್ತರಣೆಗೆ ಅಡ್ಡಿಯಾಗಬಾರದೆಂಬ ಒಂದೇ ಕಾರಣಕ್ಕೆ, ದಶಕಗಳಿಂದ ರಕ್ಷಿಸಿಕೊಂಡು ಬಂದಿದ್ದ ಕಾಡುಗಳನ್ನು ‘ಬಂಜರು ಭೂಮಿ’ ಎಂದು ಬಿಂಬಿಸುವ ಪ್ರಯತ್ನ ನಡೆಯುತ್ತಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಗಳನ್ನು ಗಾಳಿಗೆ ತೂರಿ, ಉದ್ಯಮಿಯೊಬ್ಬರ ಲಾಭಕ್ಕಾಗಿ ನೈಸರ್ಗಿಕ ಸಂಪತ್ತನ್ನು ಪರಾಭಾರೆ ಮಾಡುತ್ತಿರುವುದು ಪ್ರಜಾಪ್ರಭುತ್ವದ ಅಣಕವಾಗಿದೆ.

ಅರಾವಳಿಯ ಆರ್ತನಾದ ಮತ್ತು ಹರಿಯಾಣದ ಮೌನ
ರಾಜಧಾನಿ ದೆಹಲಿಯ ಶ್ವಾಸಕೋಶದಂತಿರುವ ಅರಾವಳಿ ಬೆಟ್ಟ ಸಾಲುಗಳು ಕೂಡ ಅಕ್ರಮ ಗಣಿಗಾರಿಕೆ ಮತ್ತು ರಿಯಲ್ ಎಸ್ಟೇಟ್ ಮಾಫಿಯಾಗೆ ಬಲಿಯಾಗುತ್ತಿದೆ. ಇದರಲ್ಲಿ ಪರೋಕ್ಷವಾಗಿ ಮತ್ತು ಪ್ರತ್ಯಕ್ಷವಾಗಿ ದೊಡ್ಡ ಕಾರ್ಪೊರೇಟ್ ಶಕ್ತಿಗಳ ಹಿತಾಸಕ್ತಿ ಅಡಗಿದೆ. ಅರಾವಳಿ ಭಾಗದಲ್ಲಿ ಹಸಿರು ಹೊದಿಕೆಯನ್ನು ತೆಗೆದುಹಾಕಿ, ಅಲ್ಲಿ ಕಾಂಕ್ರೀಟ್ ಕಾಡು ನಿರ್ಮಿಸಲು ಹರಿಯಾಣ ಸರ್ಕಾರವು ಅದಾನಿ ಸೇರಿದಂತೆ ಹಲವು ಬೃಹತ್ ಕಂಪನಿಗಳಿಗೆ ಕೆಂಪು ರತ್ನಗಂಬಳಿ ಹಾಸಿದೆ. ಸುಪ್ರೀಂ ಕೋರ್ಟ್ ಆದೇಶಗಳಿದ್ದರೂ, ಹಿಂಬಾಗಿಲ ಮೂಲಕ ಪರಿಸರ ಅನುಮತಿಗಳನ್ನು ನೀಡಲಾಗುತ್ತಿದೆ. ಇದು ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಂತರ್ಜಲ ಕುಸಿತ ಮತ್ತು ವಾಯುಮಾಲಿನ್ಯದ ಹೆಚ್ಚಳಕ್ಕೆ ನೇರ ಕಾರಣವಾಗಿದೆ.

ಧಾರಾವಿ: ಕೊಳೆಗೇರಿ ಅಭಿವೃದ್ಧಿಯೋ ಅಥವಾ ಭೂ ಕಬಳಿಕೆಯೋ?
ಅರಣ್ಯಗಳ ನಂತರ ಅದಾನಿ ಕಣ್ಣು ಈಗ ನಗರದ ಹೃದಯಭಾಗದ ಮೇಲೆ ಬಿದ್ದಿದೆ. ಏಷ್ಯಾದ ಅತಿದೊಡ್ಡ ಕೊಳೆಗೇರಿ ಎಂದೇ ಕರೆಯಲ್ಪಡುವ ಮುಂಬೈನ ‘ಧಾರಾವಿ’ಯ ಪುನರಾಭಿವೃದ್ಧಿ ಯೋಜನೆಯನ್ನು ಅದಾನಿ ಸಮೂಹಕ್ಕೆ ನೀಡಲಾಗಿದೆ. ಮೇಲ್ನೋಟಕ್ಕೆ ಇದೊಂದು ಅಭಿವೃದ್ಧಿ ಯೋಜನೆಯಂತೆ ಕಂಡರೂ, ಇದರ ಒಳಗೆ ಬೃಹತ್ ಭೂ ಹಗರಣದ ವಾಸನೆ ಇದೆ ಎಂದು ವಿಪಕ್ಷಗಳು ಮತ್ತು ಸಾಮಾಜಿಕ ಹೋರಾಟಗಾರರು ಆರೋಪಿಸುತ್ತಿದ್ದಾರೆ.
ಮೋದಿಯವರ ಕೇಂದ್ರ ಸರ್ಕಾರ ಮತ್ತು ಮಹಾರಾಷ್ಟ್ರದ ರಾಜ್ಯ ಸರ್ಕಾರಗಳು ಜಂಟಿಯಾಗಿ ಅದಾನಿಗೆ ಅನುಕೂಲವಾಗುವಂತೆ ಟೆಂಡರ್ ನಿಯಮಗಳನ್ನು ರೂಪಿಸಿವೆ ಎಂಬುದು ಗಂಭೀರ ಆರೋಪ. ಧಾರಾವಿಯ ಲಕ್ಷಾಂತರ ಬಡ ನಿವಾಸಿಗಳನ್ನು ಎತ್ತಂಗಡಿ ಮಾಡಿ, ಆ ಜಾಗವನ್ನು ಐಷಾರಾಮಿ ವಾಣಿಜ್ಯ ಕೇಂದ್ರವನ್ನಾಗಿ ಮಾಡುವುದು ಮತ್ತು ಮುಂಬೈನ ಅತ್ಯಮೂಲ್ಯವಾದ ಜಮೀನನ್ನು (ಟಿಡಿಆರ್ ರೂಪದಲ್ಲಿ) ಅದಾನಿ ಮಡಲಿಗೆ ಹಾಕುವುದು ಈ ಯೋಜನೆಯ ಹಿಂದಿನ ಹುನ್ನಾರವಾಗಿದೆ. ಇದು ಬಡವರ ಸೂರನ್ನು ಕಿತ್ತುಕೊಂಡು ಶ್ರೀಮಂತರ ತಿಜೋರಿ ತುಂಬುವ ಯೋಜನೆಯೇ ಹೊರತು, ನಿಜವಾದ ಪುನರ್ವಸತಿಯಲ್ಲ.

‘ಮಿತ್ರ’ನಿಗಾಗಿ ನಿಯಮಗಳ ಬಲಿ
ಇವೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿದರೆ ಒಂದು ಸ್ಪಷ್ಟ ಮಾದರಿ ಗೋಚರಿಸುತ್ತದೆ. ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರ, ಪರಿಸರ ಅನುಮತಿ ನೀಡುವ ಪ್ರಕ್ರಿಯೆಗಳನ್ನು (Environmental Impact Assessment – EIA) ವ್ಯವಸ್ಥಿತವಾಗಿ ದುರ್ಬಲಗೊಳಿಸಲಾಗಿದೆ. ಕಲ್ಲಿದ್ದಲು ಗಣಿಗಾರಿಕೆಗೆ ಹರಾಜು ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಇದೆಯೆಂದು ಹೇಳಿಕೊಳ್ಳಲಾದರೂ, ಅಂತಿಮವಾಗಿ ಬಹುಪಾಲು ಗಣಿಗಳು ಅದಾನಿ ಪಾಲಾಗುತ್ತಿರುವುದು ಕಾಕತಾಳೀಯವೇನಲ್ಲ.
ಛತ್ತೀಸ್ಗಢದ ಹಸ್ದೇವ್ ಅರಣ್ಯನಾಶವಿರಲಿ, ಗೋವಾದಲ್ಲಿ ಕಲ್ಲಿದ್ದಲು ಸಾಗಣೆಗೆ ರೈಲು ಮಾರ್ಗ ನಿರ್ಮಿಸಲು ಪಶ್ಚಿಮ ಘಟ್ಟಗಳ ನಾಶವಿರಲಿ ಅಥವಾ ಈಗಿನ ಗೊಂಡಲ್ಪುರವಿರಲಿ; ಎಲ್ಲದರ ಹಿಂದಯೂ ‘ಅದಾನಿ’ ಎಂಬ ಹೆಸರು ಮತ್ತು ಅವರಿಗೆ ರಕ್ಷಣೆ ನೀಡುವ ‘ಮೋದಿ ಸರ್ಕಾರದ ನೀತಿ’ಗಳು ಎದ್ದು ಕಾಣುತ್ತವೆ.

ಮುಂದೇನು?
ಅರಣ್ಯ ಎಂದರೆ ಕೇವಲ ಮರಗಳಲ್ಲ, ಅದು ಇಂಗಾಲವನ್ನು ಹೀರಿಕೊಂಡು ಜಗತ್ತನ್ನು ತಂಪಾಗಿಸುವ ವ್ಯವಸ್ಥೆ. ಅದಾನಿ ಸಮೂಹದ ಲಾಭಾಂಶದ ಗ್ರಾಫ್ ಏರುತ್ತಿರಬಹುದು. ಆದರೆ ಭಾರತದ ಅಂತರ್ಜಲ ಮಟ್ಟ, ಗಾಳಿಯ ಗುಣಮಟ್ಟ ಮತ್ತು ಜೀವವೈವಿಧ್ಯದ ಗ್ರಾಫ್ ಪಾತಾಳಕ್ಕೆ ಕುಸಿಯುತ್ತಿದೆ. “ವಿಕಾಸ”ದ ಹೆಸರಿನಲ್ಲಿ ಕೆಲವೇ ಉದ್ಯಮಿಗಳ ಏಳಿಗೆಗಾಗಿ ದೇಶದ ಪ್ರಾಕೃತಿಕ ಸಂಪತ್ತನ್ನು ಬಲಿಕೊಡುವುದು ದೇಶದ್ರೋಹಕ್ಕೆ ಸಮಾನವಾದ ಅಪರಾಧ.
ಇಂದು ಗೊಂಡಲ್ಪುರದ ಆದಿವಾಸಿಗಳು ಅಥವಾ ಧಾರಾವಿಯ ನಿವಾಸಿಗಳು ನಡೆಸುತ್ತಿರುವ ಹೋರಾಟ ಕೇವಲ ಅವರ ಅಸ್ತತ್ವದ ಪ್ರಶ್ನೆಯಲ್ಲ; ಅದು ನಾಳಿನ ಪೀಳಿಗೆಗೆ ಉಳಿಯಬೇಕಾದ ಭೂಮಿಯ ಉಳಿವಿನ ಪ್ರಶ್ನೆ. ಸರ್ಕಾರವು ಕಾರ್ಪೊರೇಟ್ ಗುಲಾಮಗಿರಿಯಿಂದ ಹೊರಬಂದು, ಪರಿಸರ ಮತ್ತು ಜನರ ಪರವಾಗಿ ನಿಲ್ಲದಿದ್ದರೆ, ಮುಂದಿನ ದಿನಗಳಲ್ಲಿ ನಾವು ಉಸಿರಾಡಲು ಆಮ್ಲಜನಕವನ್ನೂ ಕೂಡ ಅದಾನಿ ಕಂಪನಿಯಂದಲೇ ಕೊಂಡುಕೊಳ್ಳಬೇಕಾದ ಪರಿಸ್ಥಿತಿ ಬರಬಹುದು.





