ಯಾವ ಉತ್ತರ ಪತ್ರಿಕೆಯನ್ನು ತಿರುಚಬೇಕೋ ಆ ಪತ್ರಿಕೆಗಳ ಕೊನೆಯಲ್ಲಿ ಬಣ್ಣಬಣ್ಣದ ಶಾಯಿಯ ಮೂಲಕ ಗುರುತು ಹಾಕಿರುವುದನ್ನು ಮತ್ತು ಸ್ಟಾರ್ ಚಿಹ್ನೆಗಳನ್ನು ಬರೆದಿರುವುದನ್ನು ರೀಕೋಡಿಂಗ್ ವರದಿಯಲ್ಲಿ ನಮೂದಿಸಲಾಗಿದೆ
ಗುಲಬರ್ಗಾ ವಿಶ್ವವಿದ್ಯಾಲಯದ ಪರೀಕ್ಷಾ ಅಕ್ರಮಗಳು ಅಗೆದಷ್ಟೂ ಆಳವಾಗಿ ತೆರೆದುಕೊಳ್ಳುತ್ತಲೇ ಇವೆ. 2024ರ ಡಿಸೆಂಬರ್ ತಿಂಗಳಲ್ಲಿ ವಿವಿ ನಡೆಸಿರುವ ದ್ವಿತೀಯ ಮತ್ತು ನಾಲ್ಕನೇ ಸೆಮಿಸ್ಟರ್ ಬಿ.ಎಡ್ ಪರೀಕ್ಷೆಯಲ್ಲಿ ಭಾರೀ ಅಕ್ರಮಗಳು ನಡೆದಿರುವುದು ಬೆಳಕಿಗೆ ಬಂದಿದೆ.
ಈ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಕೆಲವು ಕಾಲೇಜುಗಳಿಂದ ಹಣವನ್ನು ಪಡೆದು ಹಲವು ಉತ್ತರ ಪತ್ರಿಕೆಗಳನ್ನು ತಿರುಚಿರುವ ಆರೋಪ ಕೇಳಿಬಂದಿತ್ತು. ಆನಂತರ ಗುಲಬರ್ಗಾ ವಿವಿ ಶಿಕ್ಷಣ ನಿಕಾಯದ ಡೀನ್ ಪ್ರೊ.ಬಾಬಣ್ಣ ಹೂವಿನಬಾವಿ ಮತ್ತು ಗಣಿತ ವಿಭಾಗದ ಎನ್.ಬಿ.ನಡುವಿನಮನಿ ನೇತೃತ್ವದಲ್ಲಿ ರೀಕೋಡಿಂಗ್ ಮಾಡಲು ಆದೇಶಿಸಲಾಗಿತ್ತು. ನಂತರ ನಡೆದ ಪ್ರಕ್ರಿಯೆಯು ಅನೇಕ ಸತ್ಯಗಳನ್ನು ಕಂಡುಕೊಂಡಿದ್ದು, ಸುಮಾರು 300 ಉತ್ತರ ಪತ್ರಿಕೆಗಳಿಗೆ ಸಂಬಂಧಿಸಿದಂತೆ ಅಕ್ರಮಗಳು ನಡೆದಿರುವುದು ಗೊತ್ತಾಗಿದೆ.
“ರೀಕೋಡಿಂಗ್ ಮಾಡಲು ಮುಂದಾದಾಗ ಕಾಣೆಯಾದ ಉತ್ತರ ಪತ್ರಿಕೆಗಳು ಎಲ್ಲಿದ್ದವು ಎಂಬುದೇ ಸುಳಿವಿರಲಿಲ್ಲ. ಆದರೆ ಕಟ್ಟುನಿಟ್ಟಿನ ಕ್ರಮ ಜರುಗಿಸುವುದಾಗಿ ಎಚ್ಚರಿಸಿದ ನಂತರ, ನಾಪತ್ತೆಯಾಗಿದ್ದ ಉತ್ತರ ಪತ್ರಿಕೆಗಳೆಲ್ಲ ಎರಡು ಮೂರು ದಿನಗಳಲ್ಲಿ ಸಮಿತಿಯ ಕೈ ಸೇರಿದವು” ಎಂದೂ ಮೂಲಗಳು ಖಚಿತಪಡಿಸಿವೆ.
ಯಾವ ಉತ್ತರ ಪತ್ರಿಕೆಯನ್ನು ತಿರುಚಬೇಕೋ ಆ ಪತ್ರಿಕೆಗಳ ಕೊನೆಯಲ್ಲಿ ಬಣ್ಣಬಣ್ಣದ ಶಾಯಿಯ ಮೂಲಕ ಗುರುತು ಹಾಕಿರುವುದನ್ನು ಮತ್ತು ಸ್ಟಾರ್ ಚಿಹ್ನೆಗಳನ್ನು ಬರೆದಿರುವುದನ್ನು ರೀಕೋಡಿಂಗ್ ವರದಿಯಲ್ಲಿ ನಮೂದಿಸಲಾಗಿದೆ.
ಇದನ್ನು ಓದಿದ್ದೀರಾ? ಗುಲಬರ್ಗಾ ವಿವಿ ಕರ್ಮಕಾಂಡ-1: ಅಂಕಗಳನ್ನೇ ತಿದ್ದಿದ ಭೂಪರು; ಭಾರೀ ಅಕ್ರಮ ಬಯಲು
ಬಿ.ಎಡ್ ನಾಲ್ಕು ಮತ್ತು ಎರಡನೇ ಸೆಮಿಸ್ಟರ್ಗಳಿಗೆ ಬೋಧಿಸಲಾಗುತ್ತಿರುವ ದೈಹಿಕ ವಿಜ್ಞಾನ, ಗಣಿತ, ಜೀವ ವಿಜ್ಞಾನ, ಇಂಗ್ಲಿಷ್, ಕನ್ನಡ, ಸಮಾಜ ವಿಜ್ಞಾನ, ಉರ್ದು, ಸಂಸ್ಕೃತ, ವಾಣಿಜ್ಯ, ಶಿಕ್ಷಣ ನಿರ್ವಹಣೆ ಮತ್ತು ಸಂಸ್ಥೆ, ಜೆಂಡರ್ ಅಂಡ್ ಸ್ಕೂಲ್ ಅಂಡ್ ಸೊಸೈಟಿ, ಕಲಿಕೆ ಮತ್ತು ಶಿಕ್ಷಣ ವಿಧಾನ, ಜ್ಞಾನ ಮತ್ತು ಪಠ್ಯಕ್ರಮ, ಸಮಕಾಲೀನ ಭಾರತದಲ್ಲಿ ಶಿಕ್ಷಣ, ಪೆಡಗಾಜಿ ಪತ್ರಿಕೆಗಳಿಗೆ ಸಂಬಂಧಿಸಿದಂತೆ ಅತ್ಯಂತ ಸಮಗ್ರವಾಗಿ ತನಿಖೆ ನಡೆಸಲಾಗಿದೆ. ಯಾವ ವಿಷಯದ, ಯಾವ ಉತ್ತರ ಪತ್ರಿಕೆಯಲ್ಲಿ, ಯಾವ ವ್ಯತ್ಯಾಸವಾಗಿದೆ ಎಂಬುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ. ರೀಕೋಡಿಂಗ್ ವರದಿಯ ದಾಖಲೆಗಳು ‘ಈದಿನ ಡಾಟ್ ಕಾಮ್’ಗೆ ಲಭ್ಯವಾಗಿವೆ.
ಪಠ್ಯದಲ್ಲಿ ರೂಪಿಸಲಾಗಿರುವ ವಿಷಯ, ಎ ಫಾರ್ಮ್ ಪ್ರಕಾರ ಲಭ್ಯವಿರುವ ಸ್ಕ್ರಿಪ್ಟ್ಗಳು, ಕೋಡಿಂಗ್/ಡೀಕೋಡಿಂಗ್ಗೆ ಲಭ್ಯವಾದ ಸ್ಕ್ರಿಪ್ಟ್ಗಳು ಹಾಗೂ ಇವುಗಳಿಗೆ ಸಂಬಂಧಿಸಿದಂತೆ ಕಂಡುಕೊಂಡ ಸತ್ಯಗಳನ್ನು ವರದಿಯಲ್ಲಿ ದಾಖಲಿಸಲಾಗಿದೆ.

ಗುಲಬರ್ಗಾ ವಿವಿಯ ಸಿಂಡಿಕೇಟ್ ಸದಸ್ಯ ಮಲ್ಲಣ್ಣ ಮಡಿವಾಳ ಅವರು ‘ಈದಿನ ಡಾಟ್ ಕಾಮ್’ಗೆ ಪ್ರತಿಕ್ರಿಯಿಸಿ, “ಕಳೆದ ಡಿಸೆಂಬರ್ 2024ರಲ್ಲಿ ನಡೆದ ಬಿ.ಎಡ್ 2ನೇ ಮತ್ತು 4ನೇ ಸೆಮಿಸ್ಟರ್ ಪರೀಕ್ಷೆಯಲ್ಲಿ ನಡೆದ ಅಕ್ರಮ ಒಂದೆರಡಲ್ಲ. ಇದೊಂದು ದೊಡ್ಡ ಹಗರಣ. ಕ್ರಮ ಜರುಗಿಸಲು ಸಿಂಡಿಕೇಟ್ ಸಭೆ ಸರ್ವಾನುಮತದಿಂದ ತೀರ್ಮಾನಿಸಿದರೂ ಮಾನ್ಯ ಕುಲಪತಿ ಈವರೆಗೂ ಕ್ರಮ ತೆಗೆದುಕೊಂಡಿಲ್ಲ. ಸಿಂಡಿಕೇಟ್ಗೆ ಅನುಮಾನ ಬಂದು ಪ್ರೊ.ಬಾಬಣ್ಣ ಹೂವಿನಬಾವಿ ಹಾಗೂ ಪ್ರೊ.ಎನ್.ವಿ. ನಡುವಿನಮನಿ ಅವರಿಂದ ರೀ-ಕೋಡಿಂಗ್ ಮಾಡಿಸಿತು. ಆಗ ಈ ಹಗರಣ ಹೊರಗೆ ಬಂದಿವೆ. ಅವರು ವರದಿ ನೀಡಿದ್ದಾರೆ. ಆದರೆ ಆ ವರದಿ ಕುರಿತು ಕುಲಪತಿಯವರಾಗಲೀ, ಪರೀಕ್ಷಾ ವಿಭಾಗದ ಕುಲಸಚಿವರಾಗಲಿ ಸಿಂಡಿಕೇಟ್ ಗಮನಕ್ಕೆ ತಂದಿಲ್ಲ. ಇದು ಏನು ಸೂಚಿಸುತ್ತದೆ? ಈ ಘಟನೆಯೇ ಎಲ್ಲವೂ ಹೇಳುತ್ತಿದೆ” ಎಂದರು.
ಇದನ್ನು ಓದಿದ್ದೀರಾ? ಗುಲಬರ್ಗಾ ವಿವಿ ಕರ್ಮಕಾಂಡ-2: ತಿಪ್ಪೆಗುಂಡಿಯಲ್ಲಿ ಉತ್ತರ ಪತ್ರಿಕೆಗಳ ಬಂಡಲ್!
“ಈ ಹಗರಣದ ಕುರಿತು ಕುಲಪತಿಗಳು ಹಾಗೂ ಕುಲಸಚಿವರ ಮೌನ ನೂರೆಂಟು ಅನುಮಾನಗಳು ಹುಟ್ಟು ಹಾಕುತ್ತಿವೆ. ತಕ್ಷಣ ಬಿ.ಎಡ್ ವಿಭಾಗದ ಎಲ್ಲಾ ಸಿಬ್ಬಂದಿಗಳ ವರ್ಗಾವಣೆ ಆಗಬೇಕು. ಉನ್ನತ ಮಟ್ಟದ ತನಿಖೆ ಆಗಬೇಕು. ವಿಸಿ ಅವರು ಕ್ರಮ ಜರುಗಿಸದಿದ್ದರೆ ನಾವು ಸರ್ಕಾರಕ್ಕೆ, ರಾಜ್ಯಪಾಲರಿಗೆ ಹಾಗೂ ಉನ್ನತ ಶಿಕ್ಷಣ ಸಚಿವರಿಗೆ ಪತ್ರ ಬರೆಯುತ್ತೇವೆ; ಅವರನ್ನು ಭೇಟಿ ಮಾಡಿ ಎಲ್ಲಾ ದಾಖಲೆಗಳು ನೀಡುತ್ತೇವೆ” ಎಂದರು.
ಹೇಗೆ ಹಗರಣ ನಡೆದಿದೆ ಎಂಬುದನ್ನು ನೋಡಿದರೆ ಗಾಬರಿಯಾಗುತ್ತದೆ.
ಉದಾಹರಣೆಗೆ ಹೇಳುವುದಾದರೆ ನಾಲ್ಕನೇ ಸೆಮಿಸ್ಟರ್ಗೆ ಸಂಬಂಧಿಸಿದಂತೆ ವರದಿ ಕಂಡುಕೊಂಡಿರುವ ಸತ್ಯಗಳನ್ನೇ ನೋಡಿ:
ದೈಹಿಕ ಶಿಕ್ಷಣ ಪತ್ರಿಕೆ: 1042-ಪ್ಯಾಕೆಟ್ ಸಂಖ್ಯೆಯಲ್ಲಿ ಉತ್ತರ ಪತ್ರಿಕೆಯನ್ನು ಎಗರಿಸಲಾಗಿದೆ (ಅಂದರೆ ಜಿಗಿತ ಕಂಡು ಬರುತ್ತದೆ). 20 ಉತ್ತರ ಪತ್ರಿಕೆಗಳು ಕಾಣೆಯಾಗಿವೆ. ‘ಎ’ ಫಾರ್ಮ್ನಲ್ಲಿ 72 ಉತ್ತರ ಪತ್ರಿಕೆಗಳು ಕಾಣೆಯಾಗಿವೆ. ಕೆಲವು ಖಾಲಿ ಅಂಕ ಪಟ್ಟಿಗಳಲ್ಲಿ ಮುಂಚಿತವಾಗಿ ಅಂಕಗಳನ್ನು ನೀಡಲಾಗಿದೆ. ಕೆಲವು ಉತ್ತರ ಪತ್ರಿಕೆಗಳಲ್ಲಿ ಸ್ಟಾರ್ ಚಿಹ್ನೆಯನ್ನು ಹಾಕಲಾಗಿದೆ. ಎಲ್ಲಾ ಉತ್ತರ ಪತ್ರಿಕೆಗಳ ಕೊನೆಯ ಪುಟದಲ್ಲಿ ಬಣ್ಣದ ಸ್ಕೆಚ್ ಪೆನ್ನುಗಳಿಂದ (ನೀಲಿ/ಹಸಿರು/ಕಪ್ಪು/ಗಿಳಿ ಹಸಿರು) ಗೀಚಲಾಗಿದೆ. ಕೆಲವು ಉತ್ತರ ಪತ್ರಿಕೆಗಳಲ್ಲಿ ಒಂದರಕ್ಷರವೂ ಇಲ್ಲ.
ಗಣಿತ: ಉತ್ತರ ಪತ್ರಿಕೆಗಳ ಜಿಗಿತ ಕಂಡು ಬರುತ್ತದೆ. ಕೆಲವೊಂದು ಉತ್ತರ ಪತ್ರಿಕೆಗಳೇ ಇಲ್ಲ. ‘ಎ’ ಫಾರ್ಮ್ನಲ್ಲಿ 57 ಉತ್ತರ ಪತ್ರಿಕೆಗಳು ಕಾಣೆಯಾಗಿವೆ. ಕೆಲವು ಖಾಲಿ ಅಂಕ ಪಟ್ಟಿಗಳಲ್ಲಿ ಮುಂಚಿತವಾಗಿ ಅಂಕಗಳನ್ನು ನೀಡಲಾಗಿದೆ. ಕೆಲವು ಉತ್ತರ ಪತ್ರಿಕೆಗಳಲ್ಲಿ ಸ್ಟಾರ್ ಚಿಹ್ನೆಯನ್ನು ಹಾಕಲಾಗಿದೆ. ಉತ್ತರ ಪತ್ರಿಕೆಗಳ ಕೊನೆಯ ಪುಟದಲ್ಲಿ ಬಣ್ಣದ ಸ್ಕೆಚ್ ಪೆನ್ನುಗಳಿಂದ (ನೀಲಿ/ಹಸಿರು/ಕಪ್ಪು/ಗಿಳಿ ಹಸಿರು) ಗೀಚಲಾಗಿದೆ.
ಜೀವ ವಿಜ್ಞಾನ: ‘ಎ’ ಫಾರ್ಮ್ನಲ್ಲಿ 12 ಉತ್ತರ ಪತ್ರಿಕೆಗಳು ಕಾಣೆಯಾಗಿವೆ. ಕೆಲವು ಖಾಲಿ ಅಂಕ ಪಟ್ಟಿಗಳಲ್ಲಿ ಮುಂಚಿತವಾಗಿ ಅಂಕಗಳನ್ನು ನೀಡಲಾಗಿದೆ. ಕೆಲವು ಉತ್ತರ ಪತ್ರಿಕೆಗಳಲ್ಲಿ ಸ್ಟಾರ್ ಚಿಹ್ನೆಯನ್ನು ಗುರುತು ಮಾಡಲಾಗಿದೆ. ಎಲ್ಲಾ ಉತ್ತರ ಪತ್ರಿಕೆಗಳ ಕೊನೆಯ ಪುಟದಲ್ಲಿ ಬಣ್ಣದ ಸ್ಕೆಚ್ ಪೆನ್ನುಗಳಿಂದ (ನೀಲಿ/ಹಸಿರು/ಕಪ್ಪು/ಗಿಳಿ ಹಸಿರು) ಗೀಚಲಾಗಿದೆ. ಕೆಲವು ಉತ್ತರ ಪತ್ರಿಕೆಗಳಲ್ಲಿ ಒಂದರಕ್ಷವೂ ಇಲ್ಲ. ಕೆಲವು ಕಡೆ ಉತ್ತರ ಪತ್ರಿಕೆ ಇಲ್ಲ.
ಇದನ್ನು ಓದಿದ್ದೀರಾ? ಗುಲಬರ್ಗಾ ವಿವಿ ಕರ್ಮಕಾಂಡ-3: ಮೂರು ವರ್ಷಗಳಿಂದ 9,024 ಫಲಿತಾಂಶ ಪೆಂಡಿಂಗ್!
ಹೀಗೆ ಪ್ರತಿ ವಿಷಯಕ್ಕೆ ಸಂಬಂಧಿಸಿದ ವಿವರಗಳನ್ನು ನಾವು ರೀಕೋಡಿಂಗ್ ವರದಿಯಲ್ಲಿ ಕಾಣಬಹುದು.
ಮೇಲೆ ನೀಡಿರುವುದು ಕೆಲವು ಉದಾಹರಣೆಗಳಷ್ಟೇ, ಯಾವ ವಿಷಯದ ಉತ್ತರ ಪತ್ರಿಕೆಯನ್ನು ಯಾವ ಪ್ಯಾಕೆಟ್ನಿಂದ ಎಗರಿಸಲಾಗಿದೆ ಎಂಬುದನ್ನು ವಿಸ್ತೃತವಾಗಿ ವರದಿ ನಮೂದಿಸಿದೆ.
ನಾಲ್ಕನೇ ಸೆಮಿಸ್ಟರ್ಗೆ ಸಂಬಂಧಿಸಿದಂತೆ ದಾಖಲೆಗಳು:




ಎರಡನೇ ಸೆಮಿಸ್ಟರ್ಗೆ ಸಂಬಂಧಿಸಿದಂತೆ ದಾಖಲೆಗಳು:




ಯತಿರಾಜ್ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.




