ಹಸಿಹಸಿ ಸುಳ್ಳುಗಳನ್ನು ಪೋಸ್ಟ್ ಮಾಡುತ್ತಿರುವ ಈ ಖಾತೆಯು ನಿರಂತರವಾಗಿ ದಲಿತರ ವಿರುದ್ಧ, ಬಾಬಾಸಾಹೇಬ್ ಅಂಬೇಡ್ಕರ್ ಅವರ ವಿರುದ್ಧ ದ್ವೇಷವನ್ನು ಬಿತ್ತುತ್ತಿದೆ. ಅಂಬೇಡ್ಕರ್ ಅವರನ್ನು ಅತ್ಯಾಚಾರಿ ಎಂದು ಬಿಂಬಿಸುವ ವಿಕೃತಿಗೂ ಈ ಖಾತೆ ಇಳಿದಿದೆ.
”ಸ್ವತಂತ್ರ ಭಾರತದ ಮೊದಲ ರೇಪಿಸ್ಟ್ ಡಾ. ಬಿ.ಆರ್. ಅಂಬೇಡ್ಕರ್”- ಹೀಗೆ ಹಸಿಹಸಿಯಾಗಿ ಸುಳ್ಳನ್ನು ಬಿಂಬಿಸಿ, ‘ಗುಲಾಮರ ಅಪ್ಪ’ ಎಂಬ ಫೇಸ್ಬುಕ್ ಖಾತೆಯಲ್ಲಿ ಡಿಸೆಂಬರ್ 10ರಂದು ಪೋಸ್ಟ್ ಹಾಕಲಾಗಿತ್ತು. ”First Rapist of Independence India- Googleನಲ್ಲಿ Images search ಮಾಡಿ ಯಾರ ಫೋಟೋ ಮೊದಲು ಬರುತ್ತೆ, ಅದನ್ನ ಕಮೆಂಟ್ ಹಾಕಿ… ನಾನು first Comment ಹಾಕಿದಿನಿ” ಎಂದು ಮಾಡಲಾಗಿದ್ದ ಪೋಸ್ಟ್ನ ಕೆಳಗಿನ ಕಮೆಂಟ್ನಲ್ಲಿ ಬಾಬಾಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಗಳಿದ್ದವು.
ಅಂಬೇಡ್ಕರ್ ಅವರ ವಿದ್ವತ್ ಪರಂಪರೆಯನ್ನು ಸಹಿಸದ ವಿಕೃತ ಮನಸ್ಥಿತಿಗಳು ಇಂತಹ ಹಸಿಹಸಿ ಸುಳ್ಳನ್ನು ಇಂಟರ್ನೆಟ್ನಲ್ಲಿ ಹರಿಬಿಟ್ಟಿದ್ದಾರೆ. ಆದರೆ ಈ ವಾದಕ್ಕೆ ಯಾವುದೇ ಪುರಾವೆ ಇಲ್ಲ ಎಂದು ‘ಫ್ಯಾಕ್ಟ್ಚೆಕ್’ಗಳು ಹೇಳುತ್ತವೆ. ದಮನಿತ ಸಮುದಾಯಗಳ ಹಕ್ಕುಗಳಿಗಾಗಿ ಹೋರಾಡಿದ ಅಂಬೇಡ್ಕರ್ ಅವರನ್ನು ಅವಹೇಳನ ಮಾಡುವ ಕೆಲಸವನ್ನು ಹಲವು ಬಲಪಂಥೀಯ ಖಾತೆಗಳು ನಿರಂತರವಾಗಿ ಮಾಡುತ್ತಿವೆ. ಅವುಗಳ ಪೈಕಿ ‘ಗುಲಾಮರ ಅಪ್ಪ’ ಎಂಬ ಖಾತೆ ಹೆಚ್ಚು ಆಕ್ಟೀವ್ ಆಗಿದ್ದು ವಿಷಕಾರಿ ಪೋಸ್ಟ್ಗಳನ್ನು ಹಂಚುತ್ತಿದೆ, ಸಮುದಾಯಗಳ ನಡುವೆ ವೈಷಮ್ಯ ಬಿತ್ತುತ್ತಿದೆ ಮತ್ತು ಅಂಬೇಡ್ಕರ್ ಅವರನ್ನು ತುಚ್ಛೀಕರಿಸಿ ದಲಿತ ನಾಯಕನ ಮೇಲಿನ ದ್ವೇಷವನ್ನು ಪ್ರೋತ್ಸಾಹಿಸುತ್ತಿದೆ.


ಬಾಬಾಸಾಹೇಬರು ಸಂವಿಧಾನ ಕರಡು ಸಮಿತಿ ಅಧ್ಯಕ್ಷರಾಗಿ ಮಾಡಿದ ಸೇವೆ ಅನನ್ಯ. ತಮ್ಮ ಪ್ರಖರ ವಿದ್ವತ್ತಿನ ಮೂಲಕ ಸಂವಿಧಾನ ಸಭೆಯಲ್ಲಿ ಅವರು ಕೊಟ್ಟಿರುವ ಪ್ರತಿಕ್ರಿಯೆಗಳು ಚಾರಿತ್ರಿಕ ದಾಖಲೆಗಳಾಗಿಯೇ ಉಳಿದಿವೆ. ಇಂತಹ ಮಹಾನ್ ವ್ಯಕ್ತಿಯನ್ನು ಅಗೌರವಿಸಲೆಂದೇ ‘ಸಂವಿಧಾನಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅಲ್ಲ, ಬಿ.ಎನ್. ರಾವ್’ ಎಂದು ಬಿಂಬಿಸುವ ಕೆಲಸವನ್ನು ಸಂಘಪರಿವಾರದ ಮುಖೇಡಿಗಳು ಮಾಡುತ್ತಿದ್ದಾರೆ. ಬೈಗುಳದ ಮಾದರಿಯ ಹೆಸರು ಇಟ್ಟುಕೊಂಡಿರುವ ‘ಗುಲಾಮರ ಅಪ್ಪ’ ಖಾತೆದಾರನು ಸಮಾಜದಲ್ಲಿ ಸಂಘರ್ಷ ಸೃಷ್ಟಿಸಲು ಯತ್ನಿಸುತ್ತಿದ್ದಾನೆ ಎಂಬುದು ‘ಈದಿನ’ಕ್ಕೆ ಪ್ರತಿಕ್ರಿಯಿಸಿರುವ ಕೆಲವು ಫೇಸ್ಬುಕ್ ಬಳಕೆದಾರರ ಅಭಿಪ್ರಾಯ.
ಮಹಾನ್ ಕ್ರಾಂತಿಕಾರಿ, ಸೋಷಿಯಲಿಸ್ಟ್ ಆಗಿದ್ದ ಮತ್ತು ಕೋಮುವಾದದ ವಿರುದ್ಧವಿದ್ದ ‘ಭಗತ್ ಸಿಂಗ್’ ಅವರ ಫೋಟೋವನ್ನು ‘ಪ್ರೊಫೈಲ್’ಗೆ ಬಳಸಿರುವ ‘ಗುಲಾಮರ ಅಪ್ಪ’ ಖಾತೆಯು ‘ಹಿಂದುತ್ವ ಬೆಂಬಲಿತ’ ವಿಚಾರಗಳನ್ನು ಪ್ರೋತ್ಸಾಹಿಸುತ್ತಿದೆ. ಈ ನಕಲಿ ಖಾತೆಯ ಹಿಂದೆ, ಬಲಪಂಥೀಯ ಗುಂಪುಗಳ ದೊಡ್ಡ ಪಡೆಯೇ ಇರುವಂತೆ ಕಾಣುತ್ತದೆ. ದಿನಕ್ಕೆ ಕನಿಷ್ಠ ‘ಹತ್ತು’ ಪೋಸ್ಟ್ಗಳನ್ನಾದರೂ ಹಾಕುವ ಈ ಖಾತೆಯಲ್ಲಿ ಮುಖ್ಯವಾಗಿ ಕಾಣಸಿಗುವುದು ದಲಿತರ ಮೇಲಿನ ಅಸಹನೆ ಮತ್ತು ಅಂಬೇಡ್ಕರ್ ಮೇಲಿನ ದ್ವೇಷ.
ಇದನ್ನೂ ಓದಿರಿ: ಸ್ವಾತಂತ್ರ್ಯ ಹೋರಾಟದ ವೇಳೆ ಆರ್ಎಸ್ಎಸ್ ನಾಯಕರು ಮಾಡಿದ್ದೇನು ಗೊತ್ತೆ?
ಅಂಬೇಡ್ಕರಿಸಂನ ಗುರುತಾದ ‘ನೀಲಿ’ ಬಣ್ಣದ ತುಚ್ಛೀಕರಣ, ಅಂಬೇಡ್ಕರ್ ಅವರ ಸಾಧನೆಯೇ ಸುಳ್ಳೆಂದು ಬಿಂಬಿಸುವುದು, ಅಂಬೇಡ್ಕರ್ ಅನುಯಾಯಿಗಳನ್ನು ಕೆರಳಿಸುವುದು, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅಲ್ಲ- ಬಿ.ಎನ್. ರಾವ್ ಎಂದು ನಿರಂತರ ಪ್ರಚಾರ ಮಾಡುವುದು ಮತ್ತು ಆ ಮೂಲಕ ಸುಳ್ಳನ್ನೇ ಸತ್ಯವಾಗಿಸುವುದು, ಅಂಬೇಡ್ಕರ್ ಮಹಾನಾಯಕನಲ್ಲ ಎನ್ನುವುದು, ಮಹಿಳೆಯರನ್ನು ಅಂಬೇಡ್ಕರ್ ಅಗೌರವಿಸಿದ್ದಾರೆಂದು ಸುಳ್ಳನ್ನು ಬಿತ್ತುವುದು, ದಲಿತ ಹಿನ್ನೆಲೆಯ ನಾಯಕರನ್ನು ಹೀಯಾಳಿಸುವುದು, ನೀಲಿ ಮತ್ತು ಕೇಸರಿ ಬಣ್ಣಗಳ ನಡುವೆ ವೈಷಮ್ಯ ಬಿತ್ತುವುದು ಈ ಖಾತೆಯ ಮುಖ್ಯ ಉದ್ದೇಶವಾಗಿದೆ. ಆಗಾಗ್ಗೆ ಕಾಂಗ್ರೆಸ್ ವಿರೋಧಿ ಪೋಸ್ಟ್ಗಳನ್ನೂ ಹಾಕಲಾಗುತ್ತಿದೆ.
ಈ ಖಾತೆಯ ವಿರುದ್ಧ ಹಲವು ದಲಿತರು ಆಕ್ರೋಶವನ್ನು ಹೊರಹಾಕಿದ್ದಾರೆ. ಕಾನೂನು ಕ್ರಮದ ಎಚ್ಚರಿಕೆ ಕೊಟ್ಟಿದ್ದಾರೆ. ಆದರೆ ಸ್ವಯಃಪ್ರೇರಿತವಾಗಿ ಪೊಲೀಸರೇ ಈವರೆಗೆ ಕ್ರಮ ಜರುಗಿಸದೆ ಇರುವುದು ಅನೇಕರಿಗೆ ಆಶ್ಚರ್ಯ ತಂದಿದೆ. ಈ ಖಾತೆದಾರನಿಗೂ ಕಾನೂನಿನ ಭಯ ಇದ್ದಂತೆ ಕಾಣುವುದಿಲ್ಲ. ”ಯುದ್ಧ ಮಾಡಕ್ಕೆ ಅಂತ ನಿಂತಾಗಿದೆ, ನನಗೆ ತಿಳಿದ ಅಷ್ಟೂ ಸತ್ಯದರ್ಶನ ಮಾಡಿಸ್ತಿನಿ. ಯಾರೋ ಪುಡಂಗಿಗಳ ಗೊಡ್ಡು ಬೆದರಿಕೆಗಳಿಗೆ ಹೆದರಿ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಧರ್ಮೋ ರಕ್ಷತಿ ರಕ್ಷಿತಃ”- ಇದು ಡಿ.16ರಂದು ಸದರಿ ಖಾತೆಯಲ್ಲಿ ಹಾಕಿರುವ ಪೋಸ್ಟ್.

ಈ ಸುದ್ದಿ ಬರೆಯುವ ಸಮಯಕ್ಕೆ ಮತ್ತೊಂದು ಪೋಸ್ಟ್ ಇದೇ ಭಂಡ ಧೈರ್ಯವನ್ನು ಹೊರಹಾಕಿದೆ: “ನನ್ನ ಅರೆಸ್ಟ್ ಮಾಡಿಸಿ ಜೈಲಿಗೆ ಹಾಕ್ತಾರಂತೆ. ಹಾಕಲಿ, ಜೈಲಿಗೆ ತಾನೇ ಹೋಗ್ತೀನಿ ಅಷ್ಟೇ, ಸತ್ಯ ಸಾಯಲ್ಲ, ಜೈಲಲ್ಲಿ ಎಲ್ಲಾ ಕೈದಿಗಳಿಗೆ ನಿಮ್ಮ ಮಹಾನಾಯಕನ ಮಹಾ ಚರಿತ್ರೆ ಹರಿಕಥೆ ಹೇಳ್ತೀನಿ ಆಯ್ತಾ”.

‘ಗುಲಾಮರ ಅಪ್ಪ’ ಖಾತೆಯಲ್ಲಿ ಹಾಕಿರುವ ಕೆಲವು ಪೋಸ್ಟ್ಗಳು ಮತ್ತು ಕಮೆಂಟ್ಗಳನ್ನು ನೋಡಿದರೆ ಈ ಖಾತೆಯ ಗುರಿ ಹಾಗೂ ಸ್ವರೂಪದ ಕ್ರೊನಾಲಜಿ ಅರ್ಥವಾಗುತ್ತದೆ. (ಖಾತೆಗಳಲ್ಲಿ ಬಳಸಲಾಗಿರುವ ಭಾಷೆಯನ್ನು ಯಥಾವತ್ತು ಉಳಿಸಿಕೊಳ್ಳಲಾಗಿದೆ.)
ಡಿಸೆಂಬರ್ 16ರ ಪೋಸ್ಟ್: ”ಸಂವಿಧಾನದ 243 article, 13 ಅನುಚ್ಚೇದಗಳನ್ನು ಬರೆದ B N ರಾವ್ ಅವರೇ ನಮ್ಮ ಸಂವಿಧಾನ ಶಿಲ್ಪಿ”

ಡಿಸೆಂಬರ್ 16: ”ಸಂವಿಧಾನ ಸಭೆಗೆ 11 Dec 1946 ರಲ್ಲಿ B N ರಾವ್ ನೇಮಕ ಆಗ್ತಾರೆ. ಅಂಬೇಡ್ಕರ್ 29 Aug 1947ರಲ್ಲಿ ಸಂವಿಧಾನ ಕರಡು ಸಮಿತಿ ಅಧ್ಯಕ್ಷ ಆಗ್ತಾರೆ. ಈಗ ಹೇಳಿ ಯಾರು ನಿಜವಾದ ಸಂವಿಧಾನ ಶಿಲ್ಪಿ ಅಂತ.”

ಡಿಸೆಂಬರ್ 6: ”ಚೋಟಾಗಳೇ ಇನ್ಮೇಲೆ ಸಂವಿಧಾನ ಬರೆದದ್ದು ನಮ್ಮ ಅಪ್ಪಾಜಿ ಅಂತ ಅಪ್ಪಿ ತಪ್ಪಿಯೂ ಕೂಡ ಹೇಳಬೇಡಿ. ಯಾಕಂದ್ರೆ ಸಂವಿಧಾನ ರಚನೆಯಲ್ಲಿ 295 ಜನ ಇದ್ರೂ, ಅದ್ರಲ್ಲಿ 15 ಮಹಿಳೆಯರು.”

ಡಿಸೆಂಬರ್ 17: “Zee ಕನ್ನಡ ಮಹಾ ನಾಯಕ ಸೀರಿಯಲ್ನಲ್ಲಿ ಎಲ್ಲಾದ್ರೂ ಅಂಬೇಡ್ಕರ್ ಅಪ್ಪ ಸುಬೇದಾರ್, ತಾತ ಹವಾಲ್ದಾರ್, ಆತ ಓದಿದ್ದು ಎಲ್ಫಿನ್ ಸ್ಟೋನ್ ಇಂಗ್ಲಿಷ್ ಸ್ಕೂಲ್ ಅನ್ನೋ ಸತ್ಯ ಹೇಳಿದ್ರಾ..”

ಡಿಸೆಂಬರ್ 15: “ಬ್ರಿಟೀಷರ ಸೈನ್ಯದಲ್ಲಿ ಸುಬೇದಾರ್ ಆಗಿದ್ದ ರಾಮ್ ಜೀ ಸಕ್ಪಲ್ ಅವರ ಮಗ ಭೀಮ ರಾವ್ ಸಕ್ಪಲ್ ಗೆ ಆತ ಸೇರಿದ್ದ ಇಂಗಿಷ್ ಶಾಲೆಯಲ್ಲಿ ಕುಡಿಯಲು ನೀರು ಕೊಡಲಿಲ್ಲ ಅಂದ್ರೆ ನಂಬಬಹುದಾ”

ಡಿಸೆಂಬರ್ 16: “ಅಂಬೇಡ್ಕರ್ ಸ್ವಂತ ಕಾರನ್ನು ಹೊಂದಿದ್ದರು. ಅಂಬೇಡ್ಕರ್ ಎರಡನೇ ಹೆಂಡತಿ ಡಾಕ್ಟರ್ ಸವಿತಾ, ಆದ್ರೂ ಅಂಬೇಡ್ಕರ್ ನಿಧನ ಹೊಂದಿದಾಗ ಅವರ ಶವ ಸಾಗಿಸಲು ಏರೋಪ್ಲೇನ್ಗೆ ಕೊಡಲು ಹಣ ಇರಲಿಲ್ಲ.”

‘ಬಿಹಾರದ ಕಾಂಗ್ರೆಸ್ ಪಕ್ಷದ ರ್ಯಾಲಿಯಲ್ಲಿ ಕಂಡು ಬಂದಿದ್ದ ಅಂಬೇಡ್ಕರ್’ ಎಂದು ಡಿಸೆಂಬರ್ 16ರಂದು ಹಂಚಿಕೊಳ್ಳಲಾಗಿದ್ದ ವಿಡಿಯೊ ತುಣುಕಿಗೆ ಅವಹೇಳನಕಾರಿ ಕಮೆಂಟ್ಗಳು ಬಂದಿವೆ. (ದ್ವೇಷದ ಕಮೆಂಟ್ಗಳನ್ನು ಅವರದ್ದೇ ಭಾಷೆಯಲ್ಲಿ ಯಥಾವತ್ತು ಬಳಸಲಾಗಿದೆ.)

ಕೆಲವು ಕಮೆಂಟ್ಗಳನ್ನೇ ನೋಡಿ: (Manvit) “ಯಾರಿ ಇವನು ಚಿಂಪಾಂಜಿ ಸೂಟ್ ಅಕಿದಾಗೆ ಕಾಂತನೆ, ಎಲ್ಲಿಂಫ ಬರ್ತಿರೋ ನೀನು ಎಲ್ಲ, ಒಂದೂ ಸುಳ್ಳ ಸಾವಿರ ಸಾಲ ಹೇಳಿ ಹೇಳಿ ನೀಜ ಮಾಡೋಕೆ ಹೋಗ್ತಿದ್ದೀರ ಸಂವಿಧಾನದ ನಿಜವಾದ ನಾಯಕ ಬಿ ಎನ್ ರಾವ್”
Krishna Udupi: “ಸುಪರ್ ಚೋಟಾ..ಎಸ್ಟು ಚೆಂದ ಚೆಂದ…ಮೋರಿಯಲ್ಲಿ ಇದ್ದ ಕೆಸರು ಹಂದಿ ಹಾಗೆ ಕಂಡಿತು..”

ಅಂಬೇಡ್ಕರ್ ಅವರನ್ನು ಆನೆಗೆ ಹೋಲಿಸುವುದು ಸಾಮಾನ್ಯ. ‘ಗುಲಾಮರ ಅಪ್ಪ’ ಖಾತೆಯಲ್ಲಿ ಡಿ. 15ರಂದು ಪುಟ್ಟ ವಿಡಿಯೊ ತುಣುಕೊಂದನ್ನು ಹಂಚಿಕೊಂಡು ”ಹೊಡದ್ರೆ ನೀಲಿ ಆನೇನೆ ಹೊಡಿಬೇಕು ಅಷ್ಟೇ”ಎಂದು ಪೋಸ್ಟ್ ಮಾಡಲಾಗಿತ್ತು.

ಡಿಸೆಂಬರ್ 15: “Breaking NEWS ರಾಜ್ಯದಾದ್ಯಂತ ಮುಗಿಲು ಮುಟ್ಟಿತ್ತು ಬರ್ನೊಲ್ ಗಳ ಬೇಡಿಕೆ, ಮೀಸಲಾತಿ ಮೇಲೆ ದರ ಇಳಿಸಬೇಕು ಅಂತ ನೀಲಿ ಪಾರಿವಾಳಗಳ ಭಾರೀ ಪ್ರತಿಭಟನೆ. ಪೂರೈಕೆಗಾಗಿ ಕೇಂದ್ರಕ್ಕೆ ಮನವಿ.”

ಡಿಸೆಂಬರ್ 14: “ಮೀಸಲಾತಿ ಮೇಲೆ IAS ಅಧಿಕಾರಿ ಅದವನ ಮಗ ಕಟ್ಟೋ EXAM ಫೀಸ್ 30 ಆದ್ರೆ ಅದೇ ಆಫೀಸಲ್ಲಿ ಇರುವ ಸಾಮಾನ್ಯ ವರ್ಗದ ಗುಮಾಸ್ತನ ಮಗ ಕಟ್ಟೋ ಫೀಸ್ 100. ಇದು ನಮ್ಮ ದೇಶ ಸಮಾನತೆ”

ಡಿಸೆಂಬರ್ 13ರಂದು ಹಂಚಿಕೊಳ್ಳಲಾಗಿರುವ ಪೋಸ್ಟ್ನಲ್ಲಿ, “ನೀಲಿ ಪಾರಿವಾಳಗಳು ಉಗುರು ಉದ್ದ ಬಂದ್ರೆ ಹದ್ದು ಆಗ್ಬಿಡ್ತೀವಿ ಅಂದ್ಕೊಂಡಿದ್ದಾರೆ. ಭಗವಾನ್ ವಿಷ್ಣುವಿನ ವಾಹನ ಗರುಡನ ಸಂತತಿಗಳು ನಾವು ನೆನಪಿರಲಿ” ಎನ್ನುವ ಸಂದೇಶ ಕೊಟ್ಟಿದೆ. ಆ ಮೂಲಕ ದಲಿತರ ಮೇಲೆ ಹಿಂದುತ್ವ ಪ್ರತಿಪಾದಕರಿಂದ ಹಿಂಸೆ ನಡೆಸಲಾಗುವುದು ಎಂಬ ಎಚ್ಚರಿಕೆ ನೀಡಲಾಗಿದೆ.


ಡಿಸೆಂಬರ್ 13ರಂದು ಹಾಕಲಾಗಿರುವ ಇನ್ನೊಂದು ಪೋಸ್ಟ್ನಲ್ಲಿ “ಹಿಂದೂ ಧರ್ಮದ ವಿಷಯಕ್ಕೆ ಬಂದ್ರೆ ನೀಲಿ ಪಾರಿವಾಳಗಳನ್ನು ತುಳಿದು ವಸಕಿ ಹಾಕ್ತೀವಿ” ಎಂಬುದು ಕೂಡ ಹಿಂಸೆಗೆ ಕೊಟ್ಟಿರುವ ಕರೆಯಾಗಿದೆ.
ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ‘ಡಾಬಾಸಾಹೇಬ್’ ಎಂದು ಅವಹೇಳನ ಮಾಡುವುದು ‘ಗುಲಾಮರ ಅಪ್ಪ’ ಖಾತೆಯ ಮತ್ತೊಂದು ಪಿತೂರಿ. ”ಡಾಬಾನಿಂದ ನಾವು ಇವತ್ತು ಮಾತಾಡ್ತಾ ಇರೋದು, ಊಟ ಮಾಡ್ತ ಇರೋದು, ಓಡಾಡ್ತಾ ಇರೋದು, ಬಟ್ಟೆ ಹಾಕ್ತಾ ಇರೋದು, ನೀರು ಕುಡಿತಾ ಇರೋದು, ತಿ ತೊಳಿತಾ ಇರೋದು.. ಮುಂದಾ?”- ಹೀಗೆ ಅಂಬೇಡ್ಕರ್ ಹೋರಾಟವನ್ನು ನಿಂದನೆ ಮಾಡಲಾಗುತ್ತಿದೆ.
ಇದನ್ನೂ ಓದಿರಿ: ‘ಭಾರತದ ಪ್ರಜೆಗಳಾದ ನಾವು’- ಸಂವಿಧಾನದಲ್ಲಿ ಅಡಕವಾಗಿದ್ದು ಹೇಗೆ?
ಡಿಸೆಂಬರ್ 13ರಂದು ಮಾಡಿದ ಪೋಸ್ಟ್ನಲ್ಲಿ “ಅಂಬೇಡ್ಕರ್ ದೇಶದ ಸಮಾನತೆಯ ಹರಿಕಾರ ಅನ್ನೋದಾದ್ರೆ ಆತ 1942ರಲ್ಲಿ ಸ್ಥಾಪಿಸಿದ ಪಾರ್ಟಿ ಹೆಸರು All-India Scheduled Castes Federation (SCF) ಅಂತ ಒಂದು ಜಾತಿಗೆ ಏಕೆ ಸೀಮಿತ ಆಗಿತ್ತು” ಎಂದು ಬರೆಯಲಾಗಿತ್ತು. ಇತಿಹಾಸವನ್ನು ಸಂಘಪರಿವಾರದ ಮೂಗಿನ ನೇರಕ್ಕೆ ಬಿಂಬಿಸುವ ಕೆಲಸವನ್ನು ಇಂತಹ ಪೋಸ್ಟ್ಗಳಲ್ಲಿ ಕಾಣಬಹುದು.

***
ಡಿಸೆಂಬರ್ 13: “ಸಂವಿಧಾನ ಶಿಲ್ಪಿ ❌ , ಮಹಾ ನಾಯಕ ❌, 32 ಡಿಗ್ರೀ ❌, ಮಾತು ತಪ್ಪದ ಮಗ ❌, Next Loading ,,,,,”

***
ಅಂಬೇಡ್ಕರ್ ಅವರ ವಿರುದ್ಧ ವಿಷಕಾರಿಕೊಂಡ ಮತ್ತಷ್ಟು ನಕಲಿ ಪ್ರತಿಪಾದನೆಗಳ ಪೋಸ್ಟ್ಗಳು ಹೀಗಿವೆ:
”ಬಿ.ಆರ್. ಅಂಬೇಡ್ಕರ್ ಅವರು ಜೂನ್ 4, 1913ರಂದು ಬರೋಡಾದ ಮಹಾರಾಜ ಸಯಾಜಿರಾವ್ ಗಾಯಕ್ವಾಡ್ III ಅವರೊಂದಿಗೆ ವಿದೇಶದಲ್ಲಿ ಉನ್ನತ ಶಿಕ್ಷಣಕ್ಕಾಗಿ ವಿದ್ಯಾರ್ಥಿವೇತನವನ್ನು ಪಡೆಯಲು ಒಪ್ಪಂದ ಮಾಡಿಕೊಂಡರು. ಅದಕ್ಕೆ ಬದಲಾಗಿ 10 ವರ್ಷ ಅವರ ರಾಜ್ಯದಲ್ಲಿ ಕೆಲಸ ಮಾಡುವುದಾಗಿ ಒಪ್ಪಂದ ಮಾಡಿಕೊಂಡು, ನಂತರ ಅಸ್ಪೃಶ್ಯತೆ ನಾಟಕ ಆಡಿ ಮೂರೇ ವರ್ಷಕ್ಕೆ ಮೋಸಮಾಡಿ ಓಡಿ ಹೋದರು..”

ಡಿಸೆಂಬರ್ 12: “ವಿದ್ಯಾರ್ಥಿ ವೇತನಕ್ಕಾಗಿ ಮಹಾರಾಜರ ಹತ್ತಿರ 10 ವರ್ಷ ಕೆಲಸ ಮಾಡುವುದಾಗಿ ಒಪ್ಪಂದ ಮಾಡಿ, ವಿದ್ಯಾಭ್ಯಾಸ ಮುಗಿದ ನಂತರ 10 ವರ್ಷ ಕೆಲಸ ಮಾಡದೆ 3 ವರ್ಷಕ್ಕೆ ಓಡಿ ಹೋದ ಮಹಾ ನಾಯಕ”

***
ಡಿಸೆಂಬರ್ 11: “ಡಾಬಾನಿಂದಾಗಿ 5000 ವರ್ಷಗಳ ನಂತರ ಮೊದಲ ಬಾರಿ ನೀರು ಮುಟ್ಟಿದ…” ಎಂದು ವಿಡಿಯೊ ತುಣುಕೊಂದನ್ನು ಅಣಕಿಸಿ, ಬಾಬಾಸಾಹೇಬರು ನಡೆಸಿದ ಮಹಾಡ್ ಹೋರಾಟವನ್ನು ಹೀಯಾಳಿಸುತ್ತಿರುವುದು ಇಲ್ಲಿ ಸ್ಪಷ್ಟವಾಗಿದೆ.

-ಹೀಗೆ ನಿರಂತರವಾಗಿ ದ್ವೇಷ ಬಿತ್ತಲಾಗುತ್ತಿದೆ. ಈ ಕುರಿತು ‘ಈದಿನ’ಕ್ಕೆ ಪ್ರತಿಕ್ರಿಯಿಸಿರುವ ಬರೆಹಗಾರ ಹುಲಿಕುಂಟೆ ಮೂರ್ತಿ, “ಸತ್ಯ ಮಾತನಾಡುವುದಕ್ಕೆ ಮುಖ ಇರಬೇಕು. ಇವರ ಮುಖೇಡಿತನವೇ ಇವರು ಹೇಳುತ್ತಿರುವುದು ಅಸತ್ಯವೆಂದು ತಿಳಿಸುತ್ತದೆ. ಅಂಬೇಡ್ಕರ್ ಅವರ ಬಗ್ಗೆ ಅವಹೇಳನ ಮಾಡುವುದು ಫ್ಯಾಷನ್ ಆಗುತ್ತಿದೆ. ಇದು ಕ್ರೌರ್ಯ ಮತ್ತು ದ್ವೇಷ ಬಿತ್ತನೆಯ ಸಂಚು. ಮೆಟಾ ಸಂಸ್ಥೆಯ ಕೆಲವು ನಿಯಮಗಳನ್ನು ನಕಲಿ ಖಾತೆದಾರರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಮೆಟಾಕ್ಕೂ ಹೊಣೆಗಾರಿಕೆ ಇದೆ. ಸರ್ಕಾರ ಇಂತಹ ಸಂಗತಿಗಳನ್ನು ಸೀರಿಯಸ್ ಆಗಿ ತೆಗೆದುಕೊಳ್ಳಬೇಕು. ಕೆಲವು ಕಡೆ ದೂರುಗಳು ದಾಖಲಾಗಿವೆ. ಪ್ರಕರಣಗಳಾದರೂ ಇಂತಹ ವಿಚಾರಗಳಲ್ಲಿ ಶಿಕ್ಷೆಯಾಗುವುದಿಲ್ಲ. ಯಾಕೆಂದರೆ ಸರ್ಕಾರಕ್ಕೆ ಮೆಟಾದವರು ಸರಿಯಾಗಿ ಸ್ಪಂದಿಸುವುದಿಲ್ಲ. ಹೀಗಾಗಿ ಸರ್ಕಾರ ಈ ವಿಚಾರದಲ್ಲಿ ಗಂಭೀರವಾಗಿ ಯೋಚಿಸಬೇಕಾಗುತ್ತದೆ. ಅಂಬೇಡ್ಕರ್ ವಿರುದ್ಧ ಮಾತನಾಡಿದರೆ ಬರೀ ದಲಿತರೇ ಕೇಸ್ಗಳನ್ನು ಹಾಕುತ್ತಾರೆ. ದಲಿತೇತರರು ಪ್ರಕರಣ ದಾಖಲಿಸಲು ಮುಂದೆ ಬರಬೇಕು” ಎಂದು ಅಭಿಪ್ರಾಯಪಟ್ಟರು.
ಯುವ ವಕೀಲ ಹನುಮೇಶ್ ಗುಂಡೂರು ಪ್ರತಿಕ್ರಿಯಿಸಿ, “ಸದರಿ ಫೇಸ್ಬುಕ್ ಖಾತೆಯ ಮುಖಾಂತರ ಬಾಬಾಸಾಹೇಬ್ ಮತ್ತು ಸಂವಿಧಾನದ ವಿರುದ್ಧವಾಗಿ ಬರೆಯಲಾಗುತ್ತಿದೆ. ದಲಿತರು ಮತ್ತು ಇತರೆ ಸಮುದಾಯಗಳ ಮಧ್ಯೆ ಕಂದಕ ಸೃಷ್ಟಿಸಲು ಯತ್ನಿಸಲಾಗುತ್ತಿದೆ. ಅಶಾಂತಿ ಮತ್ತು ದ್ವೇಷ ಹಬ್ಬಿಸುವ ಇಂತಹ ಖಾತೆಗಳ ಮೇಲೆ ಪೊಲೀಸ್ ಇಲಾಖೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಈ ಕೂಡಲೇ ಖಾತೆದಾರನನ್ನು ಬಂಧಿಸಿ ಮುಂದೆ ಆಗುವ ಘರ್ಷಣೆ ನಿಲ್ಲಿಸಬೇಕು” ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿರಿ: ಬಾಬಾಸಾಹೇಬರ ಕಣ್ಣಲ್ಲಿ ಭಗವದ್ಗೀತೆ; ಸತ್ಯ ಮರೆಯಲಾದೀತೆ?
ಬರೆಹಗಾರ ರಘೋತ್ತಮ ಹೊ.ಬ. ಪ್ರತಿಕ್ರಿಯಿಸಿ, “ಇದು ಸಂಘಪರಿವಾರದ ಹಿಡನ್ ಅಜೆಂಡಾದ ಭಾಗ. ಫೇಕ್ ಐಡಿಗಳನ್ನು ಬಳಸಿಕೊಂಡು ಜನರ ಬೌದ್ಧಿಕತೆಯನ್ನು ನಾಶ ಮಾಡಿ, ಅವರನ್ನು ಬೌದ್ಧಿಕ ಗುಲಾಮರನ್ನಾಗಿ ಮಾಡುವ ಹುನ್ನಾರ ಇದರ ಹಿಂದೆ ಇದೆ. ತಮ್ಮ ಯಜಮಾನಿಕೆಯನ್ನು ಉಳಿಸಿಕೊಳ್ಳುವುದಕ್ಕಾಗಿ ತಳಸಮುದಾಯಗಳನ್ನು ಬೌದ್ಧಿಕವಾಗಿ ಹತ್ತಿಕ್ಕಲು ಮಾಡುವ ವೈಚಾರಿಕ ದಾಳಿ ಇದಾಗಿದೆ. ಆ ಮೂಲಕ ನೈಜ ಸಮಸ್ಯೆಗಳ ಬಗ್ಗೆ ಜಾಗೃತವಾಗದಂತೆ ತಡೆಯುವ ತಂತ್ರ ಮತ್ತು ಕುತಂತ್ರವೂ ಇಲ್ಲಿ ಅಡಗಿದೆ” ಎಂದು ತಿಳಿಸಿದ್ದಾರೆ.
ಸಾಮಾಜಿಕ ಮಾಧ್ಯಮಗಳ ಮೂಲಕ ಸಮುದಾಯಗಳ ನಡುವೆ ಅಸಹನೆ ಮತ್ತು ದ್ವೇಷವನ್ನು ಬಿತ್ತಿ, ದಲಿತರ ಮೇಲೆ ದೌರ್ಜನ್ಯಗಳಾಗುವಂತೆ ಪ್ರಚೋದಿಸುತ್ತಿರುವ ‘ಗುಲಾಮರ ಅಪ್ಪ’ ಎಂಬ ಖಾತೆದಾರರನ್ನು ಪೊಲೀಸರು ಪತ್ತೆ ಹಚ್ಚುತ್ತಾರೆಯೇ ಎಂಬುದು ಸದ್ಯದ ಪ್ರಶ್ನೆ.

ಯತಿರಾಜ್ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.




