ಧರ್ಮ, ಜಾತಿ, ರಾಜಕೀಯ ಗುರುತುಗಳನ್ನು ಮೀರಿ ಮಾನವೀಯತೆ ಪ್ರದರ್ಶಿಸಿದ ವ್ಯಕ್ತಿಯೇ ಮತಾಂಧರಿಗೆ ಗುರಿಯಾಗುತ್ತಿದ್ದಾರೆ. ಇದು ಸಂವಿಧಾನ ಬೋಧಿಸುವ ಸಮಾನತೆ, ಸಹಿಷ್ಣುತೆ ಮತ್ತು ಭ್ರಾತೃತ್ವ ಮೌಲ್ಯಗಳಿಗೆ ಸವಾಲು ಎಸೆದಂತಾಗಿದೆ.
ದೇಶದಲ್ಲಿ ಮನುಷ್ಯತ್ವ ಮರೆತುಹೋಗಿ ದ್ವೇಷದ ಹೊಗೆಯೇ ಹೆಚ್ಚಾಗಿದೆ. ಇದಕ್ಕೆ ಉದಾಹರಣೆ ಎಂದರೆ, ಮನುಷ್ಯತ್ವದಿಂದ ವೃದ್ಧ ಮುಸ್ಲಿಂ ವ್ಯಕ್ತಿಗೆ ಸಹಾಯ ಮಾಡಿದ ಹಿಂದು ವ್ಯಕ್ತಿಯೇ ಇದೀಗ ಹಿಂದುತ್ವವಾದಿಗಳಿಂದ ಕಿರುಕುಳ ಅನುಭವಿಸುವಂತಾಗಿದೆ.
ಹೌದು, ಕಷ್ಟದ ಸಮಯದಲ್ಲಿದ್ದ ಮುಸ್ಲಿಂ ವೃದ್ಧನಿಗೆ ಬೆನ್ನೆಲುಬಾಗಿ ನಿಂತ ದೀಪಕ್ ಹಿಂದುತ್ವವಾದಿಗಳನ್ನ ಎದುರಿಸಿ ‘ಮೊಹಮ್ಮದ್ ದೀಪಕ್’ ಆದರು. ಒಬ್ಬ ವ್ಯಕ್ತಿಗೆ ಮಾನವೀಯತೆ ದೃಷ್ಟಿಯಿಂದ ಸಹಾಯ ಮಾಡಿದ್ದಕ್ಕೆ ದೀಪಕ್ ಈಗ ಕಷ್ಟದ ಸುಳಿಯಲ್ಲಿ ಸಿಲುಕಿದ್ದಾರೆ. ಎಗ್ಗಿಲ್ಲದೇ ಹಿಂಸೆ ನೀಡುತ್ತಿರುವ ಹಿಂದುತ್ವವಾದಿಗಳು ದೀಪಕ್ ಹತ್ಯೆಗೆ 2ಲಕ್ಷ ರೂ. ಘೋಷಣೆ ಮಾಡಿದ ಘಟನೆ ನಡೆದಿದೆ.
“ದೀಪಕ್ಗೆ ಸನಾತನ ಧರ್ಮದ ಬಗ್ಗೆ ಶಿಕ್ಷಣ ನೀಡುವ ಕೆಲಸವನ್ನು ಮಾಡುವ ವ್ಯಕ್ತಿಗೆ 2 ಲಕ್ಷ ರೂ. ನೀಡಲಾಗುವುದು” ಎಂದು ವ್ಯಕ್ತಿಯೊಬ್ಬರು ಹೇಳಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ದೀಪಕ್ ಕುಮಾರ್ ದೂರಿನ ಆಧಾರದ ಮೇಲೆ ಉತ್ತರಾಖಂಡ ಪೊಲೀಸರು ವ್ಯಕ್ತಿಯೊಬ್ಬರನ್ನು ಬಂಧಿಸಿದ್ದಾರೆ.
ಹಿಂದೂ ರಕ್ಷಾ ದಳದ ನಾಯಕ ಪಿಂಕಿ ಚೌಧರಿ ಹಲವಾರು ವೀಡಿಯೊಗಳನ್ನು ಪೋಸ್ಟ್ ಮಾಡಿ ದೀಪಕ್ ವಿರುದ್ಧ ಬೆದರಿಕೆ ಹಾಕಿದ್ದಾನೆ. ತಮ್ಮ ಅನುಯಾಯಿಗಳ ಜೊತೆಗೆ ಜಿಮ್ ಮುಂದೆ ಸೇರುವುದಾಗಿ ಬೆದರಿಕೆ ಹಾಕಿದ್ದಾನೆ.
“ಉತ್ತರಾಖಂಡ ಸರ್ಕಾರವು ನಮ್ಮನ್ನು ಅಲ್ಲಿಗೆ ಹೋಗದಂತೆ ತಡೆದಿದೆ. ಹೀಗಾಗಿ, ನನ್ನ ಅನುಯಾಯಿಗಳು ಅಲ್ಲಿಗೆ ಹೋಗುತ್ತಿದ್ದಾರೆ. ಯಾರಾದರೂ ಸನಾತನ ಭಾವನೆಗಳಿಗೆ, ಹಿಂದೂ ಧರ್ಮಕ್ಕೆ ನೋವುಂಟು ಮಾಡಿದ್ದರೆ ಅವರನ್ನು ಸರಿಪಡಿಸುತ್ತೇವೆ” ಎಂದು ಪಿಂಕಿ ಚೌಧರಿ ಹೇಳಿದ್ದಾನೆ.

ಇದಿಷ್ಟೇ ಅಲ್ಲ, ಹಿಂದುತ್ವವಾದಿ ಕ್ರಿಮಿಗಳಿಂದ ಸತತವಾಗಿ ನೋವನ್ನ ಅನುಭವಿಸುತ್ತಿರುವ ದೀಪಕ್ಗೆ ಸಾಲು ಸಾಲು ಬೆದರಿಕೆ ಕರೆಗಳು ಬರುತ್ತಿವೆ. ಜತೆಗೆ, ಆರ್ಥಿಕವಾಗಿ ದೀಪಕ್ ಸಂಕಷ್ಟವನ್ನು ಅನುಭವಿಸುವಂತಾಗಿದೆ.
ಜನನಿಬಿಡ ಕೇಂದ್ರವಾಗಿದ್ದ ಉತ್ತರಾಖಂಡದ ಕೋಟ್ ದ್ವಾರದಲ್ಲಿರುವ ‘ಹಲ್ಕ್ ಜಿಮ್ ಸೆಂಟರ್’ ನಡೆಸುತ್ತಿರುವ ದೀಪಕ್ 150ಕ್ಕೂ ಹೆಚ್ಚು ಜಿಮ್ ಸದಸ್ಯರನ್ನ ಹೊಂದಿದ್ದರು. ಆದರೆ, ಈ ವಾಗ್ವಾದದ ನಂತರ ಜಿಮ್ ಸದಸ್ಯರ ಸಂಖ್ಯೆ 12ಕ್ಕೆ ಕುಸಿದಿದೆ. ಈ ಸಮಯದಲ್ಲಿ ದೀಪಕ್ಗೆ ಬೆಂಬಲವಾಗಿ ಹಲವು ಜನರು ನಿಂತಿದ್ದಾರೆ.
ದೀಪಕ್ನ ಜಿಮ್ ಸದಸ್ಯತ್ವ ಮತ್ತು ಆದಾಯ ಕುಸಿತದ ನಂತರ ದೀಪಕ್ ಜಿಮ್ ಉಳಿಸಲು ಸುಪ್ರೀಂ ಕೋರ್ಟ್ನ 15 ಹಿರಿಯ ವಕೀಲರನ್ನೊಳಗೊಂಡ ಕಾನೂನು ತಂಡವು ಸಹಾಯ ಮಾಡಲು ಮುಂದಾಗಿದೆ.
ರಾಜ್ಯಸಭೆಯಲ್ಲಿ ಸಿಪಿಐ(ಎಂ)ನ ನಾಯಕ, ಸಂಸತ್ ಸದಸ್ಯ ಜಾನ್ ಬ್ರಿಟ್ಟಾಸ್, ಬಾಬಾ ಡ್ರೆಸ್ನ ಮಾಲೀಕ ವಕೀಲ್ ಅಹ್ಮದ್ ಮತ್ತು ಕುಮಾರ್ ಅವರನ್ನು ಭೇಟಿಯಾಗಿದ್ದರು. ಜತೆಗೆ, ಸಂಕಷ್ಟದಲ್ಲಿರುವ ದೀಪಕ್ಗೆ ಬೆಂಬಲ ನೀಡಲು ಜಿಮ್ ಸದಸ್ಯತ್ವವನ್ನು ಪಡೆದಿದ್ದಾರೆ. ಇವರ ನಡೆಯೂ ಹಲವು ಜನರಿಗೆ ಸ್ಪೂರ್ತಿದಾಯವಾಗಿದ್ದು, ಇವರು ನಡೆದ ದಾರಿಯಲ್ಲಿಯೇ ಇದೀಗ ಸುಪ್ರೀಂ ಕೋರ್ಟ್ನ ಹಿರಿಯ ವಕೀಲರು ಹೆಜ್ಜೆ ಹಾಕಿದ್ದಾರೆ. ಹಿರಿಯ ವಕೀಲರು ತಲಾ 10,000 ರೂ.ಗಳನ್ನು ಒಂದು ವರ್ಷದ ಸದಸ್ಯತ್ವ ಶುಲ್ಕವಾಗಿ ನೀಡಿ ಜಿಮ್ ಸೇರಿದ್ದಾರೆ.
“ಹಣವನ್ನು ಸ್ವೀಕರಿಸಲು ದೀಪಕ್ ನಿರಾಕರಿಸಿದರು. ಹೀಗಾಗಿ, ವಕೀಲರು ಹಣಕಾಸು ಒದಗಿಸಲು ಪರ್ಯಾಯ ಮಾರ್ಗವನ್ನು ಹುಡುಕಿಕೊಂಡೆವು. ಜಿಮ್ ಸದಸ್ಯತ್ವವನ್ನು ಪಡೆದೆವು. ಜತೆಗೆ, ಶುಲ್ಕವನ್ನು ಭರಿಸಲಾಗದೇ ಜಿಮ್ಗೆ ತೆರಳುವ ಸ್ಥಳೀಯರಿಗೆ ವಾರ್ಷಿಕ ಸದಸ್ಯತ್ವವನ್ನು ನೀಡಲು ನಿರ್ಧರಿಸಿದ್ದಾರೆ. ಜಿಮ್ಗೆ ಹೋಗುವವರಿಗೆ ನೀಡಲಾಗುವ ಸದಸ್ಯತ್ವ ಕಾರ್ಡ್ನಲ್ಲಿ ಸದಸ್ಯತ್ವಕ್ಕೆ ಪಾವತಿಸಿದ ಕೊಡುಗೆದಾರರ ಹೆಸರು ಇರುತ್ತದೆ. ದೀಪಕ್ ಇದಕ್ಕೆ ಒಪ್ಪಿಕೊಂಡಿದ್ದಾರೆ. ರಶೀದಿ ನೀಡಲು ಪ್ರಾರಂಭಿಸಿದ್ದಾರೆ. ದೀಪಕ್ಗೆ ಉಚಿತ ಕಾನೂನು ನೆರವು ನೀಡಲಾಗುವುದು. 20ಕ್ಕೂ ಹ್ಚು ವಕೀಲರು ಈ ಅಭಿಯಾನದಲ್ಲಿ ಸೇರಿದ್ದಾರೆ” ಎಂದು ಅಭಿಯಾನದ ನೇತೃತ್ವ ವಹಿಸಿದ ಹಿರಿಯ ವಕೀಲ ದೀಪಕ್ ಹೇಳಿದ್ದಾರೆ.
ಇನ್ನೂ ಅನೇಕರು ಸಾಮಾಜಿಕ ಮಾಧ್ಯಮದಲ್ಲಿ ದೀಪಕ್ ಅವರಿಗೆ ಬೆಂಬಲ ನೀಡುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ನಟಿ ಸ್ವರಾ ಭಾಸ್ಕರ್ ಮತ್ತು ಲೇಖಕ ಹರ್ಷ ಮಂದರ್ ಕೂಡ ಸಹಾಯ ಮಾಡಲು ಸದಸ್ಯತ್ವ ತಗೆದುಕೊಳ್ಳಲಿದ್ದಾರೆ.
“ನಾನು ಹಣವನ್ನು ತೆಗೆದುಕೊಳ್ಳುವುದಿಲ್ಲ ಎಂದು ನನ್ನ ಭೇಟಿ ಮಾಡಿದ ಎಲ್ಲರಿಗೂ ಹೇಳಿದ್ದೇನೆ. ಹಣಕ್ಕಿಂತ ಹೆಚ್ಚಾಗಿ ಸದಸ್ಯತ್ವವನ್ನ ಪಡೆಯುತ್ತೇನೆ. ಅನೇಕ ಜನರು ಸದಸ್ಯತ್ವಕ್ಕಾಗಿ ಕರೆ ಮಾಡಿದ್ದಾರೆ” ಎಂದು ದೀಪಕ್ ಹೇಳಿದ್ದಾರೆ.
ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿರುವ 70 ವರ್ಷದ ಮುಸ್ಲಿಂ ವೃದ್ಧ ಉತ್ತರಾಖಂಡದ ಪೌರಿ ಜಿಲ್ಲೆಯ ಕೋಟ್ದ್ವಾರ ಪಟ್ಟಣದಲ್ಲಿ ಬಾಬಾ ಕಲೆಕ್ಷನ್ ಎಂಬ ಬಟ್ಟೆ ಅಂಗಡಿಯೊಂದನ್ನ 30 ವರ್ಷಗಳಿಂದ ನಡೆಸುತ್ತಿದ್ದರು. ಬಾಬಾ ಎಂಬ ಹೆಸರನ್ನು ಬದಲಾಯಿಸುವಂತೆ ಬಜರಂಗದಳ ಸದಸ್ಯರು ಮುಸ್ಲಿಂ ವೃದ್ಧನಿಗೆ ಒತ್ತಡ ಹೇರುತ್ತಿದ್ದರು. ಈ ವೇಳೆ, 38 ವರ್ಷದ ದೀಪಕ್ ಆ ವೃದ್ಧನ ಪರವಾಗಿ ನಿಂತರು. ಈ ವೇಳೆ, ಬಜರಂಗದಳದ ಪುಂಡರನ್ನು ಎದುರಿಸಿದ ದೀಪಕ್ ತಮ್ಮನ್ನ ತಾವು ‘ಮೊಹಮ್ಮದ್ ದೀಪಕ್’ ಎಂದು ಹೇಳಿಕೊಂಡರು. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಈ ಘಟನೆ ಜನವರಿ 26ರಂದು ನಡೆದಿದೆ. ಅಂದಿನಿಂದ ಇಂದಿನವರೆಗೂ ಇದು ಸುದ್ದಿಯಲ್ಲಿದೆ. ಮುಸ್ಲಿಂ ವೃದ್ದನಿಗೆ ಸಹಾಯ ಮಾಡಿದ ದೀಪಕ್ ಬೆನ್ನು ಬಿದ್ದಿರುವ ಹಿಂದುತ್ವವಾದಿಗಳು ದೀಪಕ್ಗೆ ಎಲ್ಲಿಲ್ಲದ ಸಮಸ್ಯೆಯನ್ನ ತಂದೊಡ್ಡುತ್ತಿದ್ದಾರೆ. ಒಗ್ಗಟ್ಟಿನ ಮಂತ್ರವನ್ನ ಪಠಿಸಿದವರೇ ದೂಷಿಸಲ್ಪಡುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬಂಗಾಳ SIR | ವಿಚಾರಣೆಗೆ ಒಳಗಾಗುತ್ತಿರುವ ಮತದಾರರಲ್ಲಿ ಅಲ್ಪಸಂಖ್ಯಾತರೇ ಹೆಚ್ಚು!
ದೇಶದಲ್ಲಿ ಸಾಮಾಜಿಕ ವೈಷಮ್ಯ ಮತ್ತು ಧಾರ್ಮಿಕ ಧ್ರುವೀಕರಣದ ಚರ್ಚೆಗಳು ಹೆಚ್ಚುತ್ತಿರುವ ಸಂದರ್ಭದಲ್ಲೇ, ಮಾನವೀಯತೆಯ ಹೆಸರಿನಲ್ಲಿ ನೆರವಾದ ವ್ಯಕ್ತಿಯೊಬ್ಬರು ಕಿರುಕುಳಕ್ಕೆ ಗುರಿಯಾಗಿದ್ದಾರೆ. ಇದೇ ವೇಳೆ, ದೀಪಕ್ಗೆ ಬೆಂಬಲ ಸೂಚಿಸಿ ಹಲವರು ಬೀದಿಗಿಳಿದಿದ್ದಾರೆ. ಮಾನವೀಯ ಕಾರ್ಯಕ್ಕೆ ಬೆಂಬಲ ವ್ಯಕ್ತಪಡಿಸುವ ಅಭಿಯಾನಗಳು ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿವೆ.
ಮಾನವೀಯ ಸಹಾಯವೂ ಧಾರ್ಮಿಕ ವಿವಾದಕ್ಕೆ ಕಾರಣವಾಗಬೇಕೇ? ಸಾಮಾಜಿಕ ಒತ್ತಡಗಳು ವ್ಯಕ್ತಿಯ ಜೀವನೋಪಾಯಕ್ಕೆ ಹೊಡೆತ ನೀಡಿದರೆ, ಅದಕ್ಕೆ ಯಾರು ಜವಾಬ್ದಾರರು? ಸಂವಿಧಾನಾತ್ಮಕ ಮೌಲ್ಯಗಳ ಕುರಿತು ನಾವು ಎಲ್ಲಿ ನಿಂತಿದ್ದೇವೆ? ಎಂಬ ಪ್ರಶ್ನೆಗಳು ಮುನ್ನೆಲೆಗೆ ಬರುತ್ತಿವೆ.
ದೀಪಕ್ ಪ್ರಕರಣವು ಕೇವಲ ಒಂದು ವ್ಯಕ್ತಿಯ ಕಷ್ಟದ ಕಥೆಯಲ್ಲ; ಅದು ನಮ್ಮ ಸಮಾಜದ ನೈತಿಕತೆ ಯಾವ ಕಡೆಗೆ ಸಾಗುತ್ತಿದೆ ಎಂಬ ಪ್ರಶ್ನೆಯನ್ನು ಹುಟ್ಟಿಸುತ್ತದೆ. ಧರ್ಮ, ಜಾತಿ, ರಾಜಕೀಯ ಗುರುತುಗಳನ್ನು ಮೀರಿ ಮಾನವೀಯತೆ ಪ್ರದರ್ಶಿಸಿದ ವ್ಯಕ್ತಿಯೇ ಗುರಿಯಾಗುತ್ತಿದ್ದರೆ, ಅದು ಸಂವಿಧಾನ ಬೋಧಿಸುವ ಸಮಾನತೆ, ಸಹಿಷ್ಣುತೆ ಮತ್ತು ಭ್ರಾತೃತ್ವ ಮೌಲ್ಯಗಳಿಗೆ ಸವಾಲು ಎಸೆಯುವಂತಾಗಿದೆ.
ಭಾರತದ ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ಧರ್ಮನಿರಪೇಕ್ಷತೆ, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಮಾನವೀಯ ಗೌರವದ ಹಕ್ಕನ್ನು ನೀಡಿದೆ. ಮಾನವೀಯ ಸಹಾಯ ಕಾರ್ಯವನ್ನು ವಿರೋಧಿಸುವುದು ಅಥವಾ ಅದಕ್ಕಾಗಿ ವ್ಯಕ್ತಿಗೆ ಕಿರುಕುಳ ನೀಡುವುದು ಕಾನೂನು ಹಾಗೂ ಪ್ರಜಾಸತ್ತಾತ್ಮಕ ಮೌಲ್ಯಗಳ ಆತ್ಮಕ್ಕೆ ವಿರುದ್ಧವಾಗಿದೆ.
ಇನ್ನು, ದೀಪಕ್ ನಗದು ನೆರವನ್ನು ತಿರಸ್ಕರಿಸಿ ತನ್ನ ಜಿಮ್ ಸದಸ್ಯತ್ವದ ಮೂಲಕ ಬೆಂಬಲ ಸ್ವೀಕರಿಸಿರುವುದು ಸ್ವಾಭಿಮಾನ ಮತ್ತು ಸ್ವಾವಲಂಬನೆಯ ಸಂಕೇತ. ಈ ಘಟನೆ ಸಮಾಜದಲ್ಲಿ ಇನ್ನೂ ಮಾನವೀಯತೆ ಜೀವಂತವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಏಕೆಂದರೆ, ಬೆಂಬಲದ ಕೈಗಳು ಕೂಡ ಮುಂದೆ ಬಂದಿವೆ.




