ಇಂದಿನ ಖಾಸಗಿ ವೈದ್ಯಕೀಯ ವ್ಯವಸ್ಥೆಯಲ್ಲಿ ಚಿಕಿತ್ಸೆಯ ದರಗಳು ಯಾವುದೇ ವೈಜ್ಞಾನಿಕ ಮಾನದಂಡಗಳಿಲ್ಲದೆ ನಿಗದಿಯಾಗುತ್ತಿವೆ ಎನ್ನುವುದು ಕಟುಸತ್ಯ. ಒಂದೇ ಕಾಯಿಲೆಗೆ, ಒಂದೇ ರೀತಿಯ ಚಿಕಿತ್ಸೆಗೆ ಆಸ್ಪತ್ರೆಯಿಂದ ಆಸ್ಪತ್ರೆಗೆ ದರಗಳಲ್ಲಿ ಆಕಾಶ-ಭೂಮಿಯಷ್ಟು ವ್ಯತ್ಯಾಸ ಕಂಡುಬರುತ್ತದೆ.
ಆರೋಗ್ಯ ಎಂಬುದು ಮಾನವನ ಬದುಕಿನ ಅತ್ಯಮೂಲ್ಯ ಸಂಪತ್ತು ಹಾಗೂ ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕು. ಭಾರತದ ಸಂವಿಧಾನದ ‘ಜೀವಿಸುವ ಹಕ್ಕಿನ’ (Article 21) ಆಶಯದಂತೆಯೇ ಸರ್ಕಾರವು ತನ್ನೆಲ್ಲಾ ಪ್ರಜೆಗಳಿಗೆ ಸಮಾನ ಹಾಗೂ ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸಬೇಕಾದ ಹೊಣೆಗಾರಿಕೆಯನ್ನು ಹೊಂದಿದೆ. ಆದರೆ, ಪ್ರಸ್ತುತ ಸನ್ನಿವೇಶದಲ್ಲಿ ವೈದ್ಯಕೀಯ ಕ್ಷೇತ್ರವು ಸೇವೆಯ ಹಾದಿಯನ್ನು ಬಿಟ್ಟು, ಸಂಪೂರ್ಣವಾಗಿ ವಾಣಿಜ್ಯೀಕರಣದತ್ತ ವಾಲಿದೆ. ಜೀವ ಉಳಿಸಿಕೊಳ್ಳಲು ಆಸ್ತಿ-ಪಾಸ್ತಿ ಮಾರಾಟ ಮಾಡುವಂತಹ ದುಃಸ್ಥಿತಿ ಸಾಮಾನ್ಯ ಜನರಿಗೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ, ಖಾಸಗಿ ಆಸ್ಪತ್ರೆಗಳ ಅನಿಯಂತ್ರಿತ ದರಗಳಿಗೆ ಕಡಿವಾಣ ಹಾಕಲು ಮತ್ತು ಪಾರದರ್ಶಕತೆಯನ್ನು ತರಲು ‘ಆಸ್ಪತ್ರೆ ದರ ನಿಯಂತ್ರಣ ಕಾಯ್ದೆ’ ಜಾರಿಯಾಗುವುದು ಇಂದಿನ ತುರ್ತು ಮತ್ತು ಅನಿವಾರ್ಯವಾಗಿದೆ.
ಇಂದಿನ ಖಾಸಗಿ ವೈದ್ಯಕೀಯ ವ್ಯವಸ್ಥೆಯಲ್ಲಿ ಚಿಕಿತ್ಸೆಯ ದರಗಳು ಯಾವುದೇ ವೈಜ್ಞಾನಿಕ ಮಾನದಂಡಗಳಿಲ್ಲದೆ ನಿಗದಿಯಾಗುತ್ತಿವೆ ಎನ್ನುವುದು ಕಟುಸತ್ಯ. ಒಂದೇ ಕಾಯಿಲೆಗೆ, ಒಂದೇ ರೀತಿಯ ಚಿಕಿತ್ಸೆಗೆ ಆಸ್ಪತ್ರೆಯಿಂದ ಆಸ್ಪತ್ರೆಗೆ ದರಗಳಲ್ಲಿ ಆಕಾಶ-ಭೂಮಿಯಷ್ಟು ವ್ಯತ್ಯಾಸ ಕಂಡುಬರುತ್ತದೆ. ಉದಾಹರಣೆಗೆ, ಹೃದಯ ಶಸ್ತ್ರಚಿಕಿತ್ಸೆಗೆ ಒಂದು ಆಸ್ಪತ್ರೆಯಲ್ಲಿ ಎರಡು ಲಕ್ಷವಾದರೆ, ಕಾರ್ಪೊರೇಟ್ ಆಸ್ಪತ್ರೆಗಳು ಎಂಟು ಲಕ್ಷ ರೂಪಾಯಿಗಳವರೆಗೂ ಬಿಲ್ ಮಾಡುತ್ತವೆ. ಇತ್ತೀಚೆಗೆ ಸ್ವತಃ ಸುಪ್ರೀಂ ಕೋರ್ಟ್ ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, “ಸರ್ಕಾರವು ಆಸ್ಪತ್ರೆಗಳ ದರ ನಿಗದಿಪಡಿಸುವಲ್ಲಿ ವಿಫಲವಾದರೆ, ನಾವೇ ಮಧ್ಯಪ್ರವೇಶಿಸಿ ಸಿ.ಜಿ.ಎಚ್.ಎಸ್ (CGHS) ದರಗಳನ್ನು ಜಾರಿಗೊಳಿಸಬೇಕಾಗುತ್ತದೆ” ಎಂದು ಎಚ್ಚರಿಸಿದೆ. ಇದು ಸಮಸ್ಯೆಯ ಗಂಭೀರತೆಯನ್ನು ತೋರಿಸುತ್ತದೆ.
ಅಂಕಿ-ಅಂಶಗಳ ಪ್ರಕಾರ, ಭಾರತದಲ್ಲಿ ಶೇ. 60ಕ್ಕೂ ಹೆಚ್ಚು ಆರೋಗ್ಯ ವೆಚ್ಚವನ್ನು ಜನರು ತಮ್ಮ ಸ್ವಂತ ಜೇಬಿನಿಂದಲೇ ಭರಿಸುತ್ತಿದ್ದಾರೆ. ಜಗತ್ತಿನ ಬೇರೆ ದೇಶಗಳಿಗೆ ಹೋಲಿಸಿದರೆ ಇದು ಅತ್ಯಂತ ಹೆಚ್ಚು. ಪ್ರತಿ ವರ್ಷ ವೈದ್ಯಕೀಯ ವೆಚ್ಚದ ಸಾಲದ ಸುಳಿಗೆ ಸಿಲುಕಿ ಸುಮಾರು 6 ಕೋಟಿ ಭಾರತೀಯರು ಬಡತನ ರೇಖೆಯ ಕೆಳಗೆ ಜಾರುತ್ತಿದ್ದಾರೆ. ಮಧ್ಯಮ ವರ್ಗದ ಕುಟುಂಬವೊಂದು ಒಂದು ದೊಡ್ಡ ಕಾಯಿಲೆ ಬಂದರೆ ಬಡತನಕ್ಕೆ ಇಳಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ, ದರ ನಿಯಂತ್ರಣ ಕಾಯ್ದೆಯು ಕೇವಲ ಆರ್ಥಿಕ ವಿಷಯವಾಗಿರದೆ, ಇದು ಸಾಮಾಜಿಕ ನ್ಯಾಯದ ಭಾಗವಾಗಿದೆ.
ಭಾರತದಲ್ಲಿ ‘ಕ್ಲಿನಿಕಲ್ ಎಸ್ಟಾಬ್ಲಿಷ್ಮೆಂಟ್ ಆಕ್ಟ್ (clinical establishment act)’ ಇದ್ದರೂ, ಅದು ದರ ನಿಯಂತ್ರಣದ ಬಗ್ಗೆ ಮೌನವಾಗಿದೆ. ಕರ್ನಾಟಕದಲ್ಲಿ ಕೆ.ಪಿ.ಎಂ.ಇ ಕಾಯ್ದೆ ಇದ್ದರೂ ಪ್ರಬಲ ಲಾಬಿಗಳಿಂದಾಗಿ ಅದು ಹಲ್ಲಿಲ್ಲದ ಹಾವಿನಂತಾಗಿದೆ. ಇದರ ಲಾಭ ಪಡೆಯುತ್ತಿರುವ ಖಾಸಗಿ ಆಸ್ಪತ್ರೆಗಳು, ಕೇವಲ ಬೆಡ್ ಚಾರ್ಜ್ ಅಥವಾ ಡಾಕ್ಟರ್ ಫೀಸ್ ಮಾತ್ರವಲ್ಲದೆ, ಔಷಧ ಮತ್ತು ಉಪಕರಣಗಳ ಮೇಲೂ ಅತಿಯಾದ ಲಾಭ ಪಡೆಯುತ್ತಿವೆ. ಹೊರಗಡೆ ಕಡಿಮೆ ದರಕ್ಕೆ ಸಿಗುವ ಔಷಧಗಳನ್ನು ಆಸ್ಪತ್ರೆಯ ಫಾರ್ಮಸಿಯಲ್ಲಿ ದುಪ್ಪಟ್ಟು ಬೆಲೆಗೆ ಮಾರಾಟ ಮಾಡುವುದು, ರೋಗಿಗೆ ಅಗತ್ಯವಿಲ್ಲದಿದ್ದರೂ ಅನಗತ್ಯ ಸ್ಕ್ಯಾನಿಂಗ್, ರಕ್ತ ಪರೀಕ್ಷೆಗಳನ್ನು ಮಾಡಿಸುವುದು ಮತ್ತು ಐಸಿಯುನಲ್ಲಿ ಅಗತ್ಯಕ್ಕಿಂತ ಹೆಚ್ಚು ದಿನ ಇರಿಸಿಕೊಳ್ಳುವ ದಂಧೆ ಅಕ್ರಮವಾಗಿ ನಡೆದಿದೆ. ಪ್ರಸ್ತಾಪಿತ ಕಾಯ್ದೆಯು ಈ ಎಲ್ಲಾ ‘ಪ್ಯಾಕೇಜ್ ದಂಧೆ’ ಮತ್ತು ‘ಮಾರ್ಜಿನ್ ಲೂಟಿ’ಗೆ ಕಡಿವಾಣ ಹಾಕಬೇಕು.
ಅಭಿವೃದ್ಧಿ ಹೊಂದಿದ ರಾಷ್ಟ್ರಗಳಾದ ಜರ್ಮನಿ, ಕೆನಡಾ, ಯು.ಕೆ ಗಳಲ್ಲಿ ಆರೋಗ್ಯ ಸೇವೆಯನ್ನು ಮಾರುಕಟ್ಟೆಯ ಸರಕಾಗಿ ನೋಡುವುದಿಲ್ಲ. ಅಲ್ಲಿ ಸರ್ಕಾರವೇ ದರಗಳನ್ನು ನಿಯಂತ್ರಿಸುತ್ತದೆ ಅಥವಾ ಉಚಿತ ಸೇವೆ ನೀಡುತ್ತದೆ. ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ ನಮ್ಮ ಸರ್ಕಾರಗಳೂ ದರ ನಿಗದಿಪಡಿಸಿದಾಗ ಆಸ್ಪತ್ರೆಗಳು ಅದನ್ನು ಪಾಲಿಸಿದ್ದವು. ಇದು ಸರ್ಕಾರಕ್ಕೆ ಇಚ್ಛಾಶಕ್ತಿ ಇದ್ದರೆ ದರ ನಿಯಂತ್ರಣ ಖಂಡಿತ ಸಾಧ್ಯ ಎಂಬುದಕ್ಕೆ ಸಾಕ್ಷಿ.
ಇದನ್ನೂ ಓದಿ ಕರ್ನಾಟಕದಲ್ಲಿ ‘ಯುವಜನ ಆಯೋಗ’ದ ಅಗತ್ಯ: ಭವಿಷ್ಯದ ದಿಕ್ಸೂಚಿ
ಈ ಕಾಯ್ದೆಯಲ್ಲಿ ವೈಜ್ಞಾನಿಕವಾಗಿ ಕಾಣಿಸಿಕೊಳ್ಳಬೇಕಾದ ಪ್ರಮುಖ ಅಂಶಗಳು:-
- ವರ್ಗೀಕರಣ: ಎಲ್ಲ ಆಸ್ಪತ್ರೆಗಳಿಗೂ ಒಂದೇ ದರ ಇರಲು ಸಾಧ್ಯವಿಲ್ಲ. ಮೂಲಸೌಕರ್ಯಗಳ ಆಧಾರದ ಮೇಲೆ ಆಸ್ಪತ್ರೆಗಳನ್ನು ‘ಎ’, ‘ಬಿ’, ‘ಸಿ’ ಎಂದು ವರ್ಗೀಕರಿಸಿ, ಅದಕ್ಕೆ ತಕ್ಕಂತೆ ದರ ಪಟ್ಟಿ ನಿಗದಿಪಡಿಸಬೇಕು.
- ಪಾರದರ್ಶಕತೆ: ಹೋಟೆಲ್ ಮೆನುವಿನಂತೆ ಆಸ್ಪತ್ರೆಗಳು ಚಿಕಿತ್ಸಾ ದರಪಟ್ಟಿಯನ್ನು ಸ್ವಾಗತ ದ್ವಾರದಲ್ಲಿ ಪ್ರದರ್ಶಿಸಬೇಕು.
- ದೂರು ನಿರ್ವಹಣೆ: ರೋಗಿಗಳಿಗೆ ಅನ್ಯಾಯವಾದರೆ ಪ್ರಶ್ನಿಸಲು ಜಿಲ್ಲಾಮಟ್ಟದಲ್ಲಿ ಪ್ರತ್ಯೇಕ ‘ದೂರು ಪ್ರಾಧಿಕಾರ’ ಸ್ಥಾಪನೆಯಾಗಬೇಕು.
- ಕಲ್ಯಾಣಕ್ಕೆ ಒತ್ತು: ಸರ್ಕಾರಿ ಆಸ್ಪತ್ರೆಗಳಿಗೆ ಸಂಪೂರ್ಣ ಮೂಲ ಸೌಕರ್ಯಗಳನ್ನು ಒದಗಿಸುವುದು. ಪ್ರತಿಯೊಬ್ಬರಿಗೆ ಉಚಿತ ಆರೋಗ್ಯ ಸೇವೆ ಸಿಗುವಂತೆ ನೋಡಿಕೊಳ್ಳುವುದು.
ಕೊನೆಯದಾಗಿ ಹೇಳುವುದಾದರೆ, ಆಸ್ಪತ್ರೆ ದರ ನಿಯಂತ್ರಣ ಮತ್ತು ಪಾರದರ್ಶಕತೆ ಕಾಯ್ದೆಯು ರೋಗಿಗಳ ಆರ್ಥಿಕ ಹೊರೆ ತಗ್ಗಿಸುವ ಸಾಧನವಷ್ಟೇ ಅಲ್ಲ, ಇದು ಆರೋಗ್ಯ ಕ್ಷೇತ್ರದ ಶುದ್ಧೀಕರಣದ ಪ್ರಕ್ರಿಯೆ. ಆರೋಗ್ಯ ಸೇವೆಯನ್ನು ಲಾಭಕೋರತನದ ಹಿಡಿತದಿಂದ ಬಿಡಿಸಿ, ಅದೊಂದು ಪವಿತ್ರ ಸೇವೆ ಎಂದು ಮರುಸ್ಥಾಪಿಸಲು ಈ ಕಾನೂನು ಅಡಿಪಾಯವಾಗಲಿದೆ. ಜನಸಾಮಾನ್ಯರ ಬದುಕಿನಲ್ಲಿ ಆರ್ಥಿಕ ಸುರಕ್ಷತೆ ಮತ್ತು ನೆಮ್ಮದಿಯನ್ನು ತರಲು ಸರ್ಕಾರವು ವಿಳಂಬ ಮಾಡದೆ ಈ ಕಾಯ್ದೆಯನ್ನು ಜಾರಿಗೆ ತರುವುದು ಜನಪರ ಕಾಳಜಿಯ ದ್ಯೋತಕವಾಗಿದೆ.

ಜಿ. ಎಸ್. ಶರಣು
ಪತ್ರಿಕೋದ್ಯಮ ಪದವೀಧರ, ಕುಷ್ಟಗಿ




