ಬೆಂಗಳೂರಿನ ಚಿಕ್ಕಪೇಟೆ-ಬಳೆಪೇಟೆ ನಡುವಿನ ಮೈಸೂರು ರಸ್ತೆಯಲ್ಲಿರುವ ವೃತ್ತವು ‘ಶಿರಸಿ ಸರ್ಕಲ್’ ಎಂಬ ಹೆಸರನ್ನು ಹೊಂದಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ಪಟ್ಟಣದ ಹೆಸರು ಬೆಂಗಳೂರಿನ ವೃತ್ತಕ್ಕೆ ಬಂದಿದ್ದು ಹೇಗೆ ಎಂಬುದು ಹಲವರಲ್ಲಿ ಕುತೂಹಲವನ್ನು ಹುಟ್ಟು ಹಾಕಿರುತ್ತದೆ, ಆಲೋಚನೆಗೆ ಹಚ್ಚಿರುತ್ತದೆ. ಈ ಕುತೂಹಲದ ಪ್ರಶ್ನೆಗೆ ಪರಿಪೂರ್ಣ ಉತ್ತರ ಇಲ್ಲಿದೆ…!
ಪಶ್ಚಿಮ ಘಟ್ಟಗಳ ಸಾಲಿನಲ್ಲಿರುವ ಪ್ರಮುಖ ಪಟ್ಟಣಗಳಲ್ಲಿ ಶಿರಸಿ ನಗರವೂ ಒಂದು. ಅಡಿಕೆ, ಮಸಾಲೆ ಪದಾರ್ಥಗಳು ಹಾಗೂ ಮೌಲ್ಯಯುತ ಮರಗಳನ್ನು ಬೆಳೆಯುವ ತಾಲೂಕು ಕೂಡ. ಶಿರಸಿ ತಾಲೂಕಿನಲ್ಲಿ ಬ್ರಿಟಿಷ್ ಮತ್ತು ಮೈಸೂರು ಆಳ್ವಿಕೆಯ ಸಮಯದಲ್ಲಿ ಹೆಚ್ಚಾಗಿ ಮರದ ವ್ಯಾಪಾರಗಳು ನಡೆಯುತ್ತಿದ್ದವು. ಮಾತ್ರವಲ್ಲ ಕದಂಬ ಯುಗದ ಸ್ಮಾರಕಗಳು ಮತ್ತು ನಂತರದ ರಾಜಮನೆತನಗಳನ್ನು ಸೂಚಿಸುವ ಮರದ ನಾನಾ ಬಗೆಯ ವಸ್ತುಗಳು ಶಿರಸಿಯ ಮರದ ಇತಿಹಾಸವನ್ನು ವಿವರಿಸುತ್ತದೆ.
ಶಿರಸಿ ತಾಲೂಕಿನ ಮರದ ವ್ಯಾಪಾರಿಗಳು 19 ಮತ್ತು 20ನೇ ಶತಮಾನದಲ್ಲಿ ಅಡಿಕೆ, ಮಸಾಲೆ ಹಾಗೂ ಮರದ ವ್ಯಾಪಾರಕ್ಕಾಗಿ ಬೆಂಗಳೂರಿನ ವಲಸೆ ಬಂದರು. ಅವರೆಲ್ಲರೂ, ಬೆಂಗಳೂರಿನ ಹಳೆಯ ವಾಣಿಜ್ಯ ಕೇಂದ್ರವಾಗಿದ್ದ ಚಿಕ್ಕಪೇಟೆ ಮತ್ತು ಬಳೆಪೇಟೆ ಪ್ರದೇಶದಲ್ಲಿ ನೆಲೆಸಿದರು. ಮರ ಮತ್ತು ಪ್ಲೈವುಡ್ ವ್ಯವಹಾರವನ್ನು ವಿಸ್ತರಿಸಿದರು. ಆ ಪ್ರದೇಶದಲ್ಲಿ ಶಿರಸಿ ವ್ಯಾಪಾರಿಗಳ ಪ್ರಾಬಲ್ಯ ಹೆಚ್ಚಾಯಿತು.
ಈ ಎಲ್ಲ ವ್ಯಾಪಾರಿಗಳು ಚಿಕ್ಕಪೇಟೆ-ಬಳೆಪೇಟೆ ನಡುವಿನ ವೃತ್ತವು ಸಂಪರ್ಕ ಕೇಂದ್ರವಾಗಿತ್ತು. ಆ ಸರ್ಕಲ್ ಅನ್ನು ‘ಶಿರಸಿ ವೃತ್ತ’ವೆಂದು ಗುರುತಿಸಿಕೊಂಡರು. ಅದೇ ಹೆಸರು ಶಾಶ್ವತವಾಗಿ ಉಳಿದುಕೊಂಡಿತು.
ಇಂದಿಗೂ, ಚಿಕ್ಕಪೇಟೆ, ಒಟಿಸಿ ರಸ್ತೆ, ಬಳೆಪೇಟೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಮರದ/ಪ್ಲೈವುಡ್ ಅಂಗಡಿಗಳು ಹೆಚ್ಚಾಗಿವೆ. ಆ ಎಲ್ಲ ಅಂಗಡಿಗಳು ಮೂಲತಃ ಶಿರಸಿ ಮೂಲದ ಕುಟುಂಬಗಳ ಒಡೆತನದಲ್ಲಿವೆ. ಶಿರಸಿ ಮೂಲದ ನಾಮಧಾರಿ ಗೌಡ, ಹವ್ಯಕ ಬ್ರಾಹ್ಮಣ ಹಾಗೂ ಶಿರಸಿಯ ಇತರ ಸಮುದಾಯಗಳ ಅಂಗಡಿಗಳು ಹೆಚ್ಚಿನ ಸಂಖ್ಯೆಯಲ್ಲಿವೆ.
ಶಿರಸಿ ವ್ಯಾಪಾರಿಗಳು ಬೆಂಗಳೂರಿನಲ್ಲಿ ಒಂದೆಡೆ ತಮ್ಮ ವ್ಯಾಪಾರವನ್ನು ವಿಸ್ತರಿಸಿದ್ದರಿಂದ ಹುಟ್ಟಿಕೊಂಡ ಶಿರಸಿ ವೃತ್ತ ಎಂಬ ಹೆಸರಿನ ಇತಿಹಾಸವು ಬೆಂಗಳೂರಿನ ಸ್ಥಳೀಯರು, ನಿವಾಸಿಗಳು, ಇತಿಹಾಸಕಾರರು ಹಾಗೂ ವ್ಯಾಪಾರ ಸಮುದಾಯಗಳಲ್ಲಿ ಅನೌಪಚಾರಿಕವಾಗಿ ಉಳಿದಿದೆ. ಯಾವುದೇ ಇತಿಹಾಸ ದಾಖಲೆಗಳು ಇದನ್ನು ವಿವರಿಸದೇ ಇದ್ದರೂ, ಬೆಂಗಳೂರಿನ ಹಲವು ಪ್ರದೇಶಗಳು ಹೆಸರು ಇದೇ ರೀತಿಯಲ್ಲಿ ಸ್ಥಳೀಯ ನಾಯಕರು, ಗುಂಪುಗುಂಪಾದ ವಲಸೆಗಳ ಕಾರಣದಿಂದಲೇ ಹುಟ್ಟಿಕೊಂಡಿರುವ ಹೆಸರುಗಳಾಗಿವೆ. ಮಲ್ಲೇಶ್ವರಂ, ಕಾರ್ಪೋರೇಷನ್ ಸರ್ಕಲ್, ಟೋಲ್ಗೇಟ್, ಮೈಸೂರು ವೃತ್ತ ಸೇರಿದಂತೆ ನಾನಾ ಹೆಸರುಗಳು ಮಾರ್ಗ, ರಸ್ತೆ, ಸ್ಥಳೀಯತೆಯ ಆಧಾರದಲ್ಲಿಯೇ ಬಂದಿವೆ. ಅಂತೆಯೇ, ಶಿರಸಿ ವೃತ್ತದ ಹೆಸರು ಕೂಡ ಬೆಳೆದುಬಂದಿದೆ. ಇದನ್ನು ಹಲವಾರು ವಿಶ್ವಾಸಾರ್ಹ ಮೂಲಗಳು ದೃಢೀಕರಿಸಲ್ಪಟ್ಟಿದೆ.
ಈ ಲೇಖನ ಓದಿದ್ದೀರಾ?: ಈ ʼಗಣ್ಯರುʼ ಸರ್ಕಾರದ ತುತ್ತೂರಿಯಾದರೆ ಸಾಕೇ? ಸತ್ಯವಂತ ಸಮಾಜಮುಖಿ ಆಗಲೂ ಬೇಕೇ?
ಬೆಂಗಳೂರು ನಿವಾಸಿಯಾಗಿರುವ ಎಂ.ಎಂ ನಿರಂಜನ್ ಅವರು 2008ರಲ್ಲಿ ಅಂಕಣವೊಂದನ್ನು ಪ್ರಕಟಿಸಿದ್ದು, ಉತ್ತರ ಕನ್ನಡ ಜಿಲ್ಲೆಯ ಶಿರಸಿಗೂ ಬೆಂಗಳೂರಿನ ಶಿರಸಿ ವೃತ್ತಕ್ಕೂ ವ್ಯಾಪಾರಾತ್ಮಕ ಅವಿನಾಭಾವ ಸಂಪರ್ಕ ಹೊಂದಿದೆ. ಮರದ ವ್ಯಾಪಾರವು ಶಿರಸಿ ವೃತ್ತ ಹೆಸರಿನ ಮೂಲವಾಗಿದೆ ಎಂಬುದನ್ನು ವಿವರಿಸಿದ್ದಾರೆ.
‘ಒನ್ಫೈವೆನೈನ್ ಲೋಕಾಲಿಟಿ ಗೈಡ್’ ಪ್ರಕಾರ, “ಶಿರಸಿ ವೃತ್ತದ ಹೆಸರು ಶಿರಸಿ ಪಟ್ಟಣಕ್ಕೆ ನೇರವಾಗಿ ಸಂಪರ್ಕಿಸುತ್ತದೆ. 1948ರ ಸುಮಾರಿಗೆ (ಸ್ವಾತಂತ್ರ್ಯ ನಂತರದ ಆರಂಭ) ಉತ್ತರ ಕನ್ನಡ ಮೂಲದ ಮರದ ವ್ಯಾಪಾರಿಗಳು ತಮ್ಮ ವ್ಯಾಪಾರವನ್ನು ಹೆಚ್ಚಾಗಿ ವಿಸ್ತರಿಸಿದರು. ಅವರು ಎತ್ತಿನ ಬಂಡಿಗಳಿಗೆ ಮಾರ್ಗ ಒದಗಿಸುತ್ತಿದ್ದ ವೃತ್ತ (ಶಿರಸಿ ಸರ್ಕಲ್)ನಲ್ಲಿ ಬಸ್ ನಿಲ್ದಾಣವನ್ನು ಆರಂಭಿಸಿದರು. ಅಂದಿನಿಂದ, ಅದನ್ನು ಶಿರಸಿ ಸರ್ಕಲ್ ಎಂದು ಕರೆಯಲಾಗಿದೆ.”




