ಕುಡಿಯುವ ನೀರಿನ ಮೂಲಗಳು ವಿಷವಾಗುತ್ತಿವೆ. ಅಂತರ್ಜಲದ ಅತಿಯಾದ ಬಳಕೆಯಿಂದ ದೇಶದ 135ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ನೀರಿನ ಮಟ್ಟವು ಸರಿಪಡಿಸಲಾಗದಷ್ಟು ದೊಡ್ಡ ಸಮಸ್ಯೆಗೆ ಸಿಲುಕಿಕೊಂಡಿದೆ. ಇದು ಭವಿಷ್ಯದಲ್ಲಿ ನೀರಿನ ಯುದ್ಧಗಳಿಗೆ ನಾಂದಿ ಹಾಡಬಹುದು ಎಂಬ ಆತಂಕಕ್ಕೆ ಕಾರಣವಾಗಿದೆ.
ಭಾರತವು ಜಗತ್ತಿನ ಮುಂಚೂಣಿಯ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುತ್ತಿದೆ. ಆದರೆ, ನೈಸರ್ಗಿಕವಾಗಿ ಎಷ್ಟು ಆರೋಗ್ಯಯುತವಾಗಿದೆ ಎಂಬುದನ್ನು ತಿಳಿದರೆ ಆಘಾತವಾಗುವುದು ಖಚಿತ. ಸೆಂಟರ್ ಫಾರ್ ಸೈನ್ಸ್ ಅಂಡ್ ಎನ್ವಿರಾನ್ಮೆಂಟ್ (CSE) ಬಿಡುಗಡೆ ಮಾಡಿರುವ ‘State of India’s Environment-2025’ ವರದಿಯು, ಅಭಿವೃದ್ಧಿಯ ಹೆಸರಿನಲ್ಲಿ ನಾವು ಅರಿವಿದ್ದೂ ಜೀವಸಂಕುಲದ ಅಸ್ತಿತ್ವಕ್ಕೆ ಯಾವ ರೀತಿ ಕುಂದು ತರುತ್ತಿದ್ದೇವೆ ಎಂಬ ಆತಂಕಕಾರಿ ಸತ್ಯವನ್ನು ಬಿಚ್ಚಿಟ್ಟಿದೆ.
CSE ವರದಿಯನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಭಾರತದ ಪ್ರಗತಿಯ ವೇಗದ ಜತೆಗೆ ಪರಿಸರದ ಅವನತಿಯ ವೇಗ ಸ್ಪರ್ಧೆ ನಡೆಸುತ್ತಿರುವುದು ಎದ್ದು ಕಾಣುತ್ತದೆ. 2024 ಮತ್ತು 2025ರ ಅವಧಿಯಲ್ಲಿ ಭಾರತ ಕಂಡ ಹವಾಮಾನ ಬದಲಾವಣೆಯ ವಿಪರೀತಗಳು ದಶಕಗಳ ಕಾಲ ನಾವು ಪರಿಸರದ ಮೇಲೆ ನಡೆಸಿದ ನಿತ್ಯ ದೌರ್ಜನ್ಯದ ಪ್ರತಿಫಲವೇ ಆಗಿದೆ. 2025ರ 365 ದಿನಗಳ ಪೈಕಿ ಶೇ.88ರಷ್ಟು ದಿನಗಳಲ್ಲಿ ದೇಶದ ಯಾವುದಾದರೂ ಒಂದು ಭಾಗದಲ್ಲಿ ಹವಾಮಾನ ವೈಪರೀತ್ಯ ಸಂಭವಿಸಿದೆ. ಉತ್ತರ ಭಾರತದ ರಾಜ್ಯಗಳು 50°Cಗೂ ಅಧಿಕ ತಾಪಮಾನ ದಾಖಲಿಸಿವೆ. ಮುಂಗಾರು ಅವಧಿಯ ಬದಲಾವಣೆ ಮತ್ತು ಅಕಾಲಿಕ ಮಳೆಯಿಂದಾಗಿ ಕೃಷಿ ಉತ್ಪಾದನೆ ಪಾತಾಳಕ್ಕೆ ಕುಸಿದಿದೆ. ನಾವೀಗ ʼಹೊಸ ಸಾಮಾನ್ಯʼ (New Normal) ಸ್ಥಿತಿಗೆ ತಲುಪಿದ್ದೇವೆ. ಅಂದರೆ, ಅತಿಯಾದ ಬಿಸಿಲು, ಹಠಾತ್ ಪ್ರವಾಹ ಅಥವಾ ಅಕಾಲಿಕ ಚಳಿ ಎಂಬುದು ಇನ್ನು ಮುಂದೆ ಅಪರೂಪಕ್ಕೆ ಸಂಭವಿಸುವ ವೈಪರೀತ್ಯಗಳಾಗಿರುವುದಿಲ್ಲ. ಅವು ನಮ್ಮ ದೈನಂದಿನ ಜೀವನದ ಭಾಗವಾಗಿಬಿಟ್ಟಿವೆ ಎನ್ನುತ್ತದೆ ವರದಿ.
ಈ ಹವಾಮಾನ ವೈಪರೀತ್ಯದ ನೇರ ಹೊಡೆತ ಬೀಳುತ್ತಿರುವುದು ದೇಶದ ಬೆನ್ನೆಲುಬಾದ ಕೃಷಿ ವಲಯದ ಮೇಲೆ. ಅಕಾಲಿಕ ಮಳೆ ಮತ್ತು ಸುದೀರ್ಘ ಬಿಸಿಗಾಳಿಯಿಂದಾಗಿ ಬೆಳೆಗಳು ನಾಶವಾಗುತ್ತಿರುವುದು ರೈತರ ಆತ್ಮಹತ್ಯೆಗೆ ಕಾರಣ ಮಾತ್ರವಲ್ಲ, ಇಡೀ ದೇಶದ ಆಹಾರ ಭದ್ರತೆಯನ್ನು ಅಲುಗಾಡಿಸುತ್ತಿದೆ.
ಈ ಪರಿಸರ ಬಿಕ್ಕಟ್ಟು ದೇಶದ ಜಿಡಿಪಿಯ ಮೇಲೆ ಶೇ.3ರಿಂದ 5ರಷ್ಟು ನಕಾರಾತ್ಮಕ ಪರಿಣಾಮ ಬೀರುತ್ತಿದೆ. ಅಂದರೆ, ನಾವು ಗಳಿಸುವ ಆರ್ಥಿಕ ಲಾಭದ ಬಹುಪಾಲು ಹಣ ಹವಾಮಾನ ವೈಪರೀತ್ಯದಿಂದ ಉಂಟಾದ ಹಾನಿಯನ್ನು ಸರಿಪಡಿಸಲು ಮತ್ತು ಆರೋಗ್ಯ ವೆಚ್ಚಗಳಿಗಾಗಿಯೇ ವ್ಯಯವಾಗುತ್ತಿದೆ. ವಾಯು ಮಾಲಿನ್ಯದ ವಿಚಾರಕ್ಕೆ ಬಂದರೆ, ದೇಶದ ವಿಷಗಾಳಿ ಮಾನವನ ಸರಾಸರಿ ಜೀವಿತಾವಧಿಯನ್ನೇ ಕಸಿಯುತ್ತಿದೆ. ದೆಹಲಿಯಂತಹ ನಗರಗಳಲ್ಲಿ ಜನರು ತಮ್ಮ ಆಯಸ್ಸಿನ 8 ವರ್ಷಗಳನ್ನು ಮಾಲಿನ್ಯಕ್ಕೆ ಬಲಿ ನೀಡುತ್ತಿದ್ದಾರೆ. ಉತ್ತರ ಭಾರತದ ಬಯಲು ಸೀಮೆಯಿಂದ ಹಿಡಿದು ದಕ್ಷಿಣದ ನಗರಗಳವರೆಗೆ ಗಾಳಿಯ ಗುಣಮಟ್ಟ ಕುಸಿಯುತ್ತಿರುವುದು ಒಂದು ರಾಷ್ಟ್ರೀಯ ತುರ್ತು ಪರಿಸ್ಥಿತಿಯಂತೆ ಗೋಚರಿಸುತ್ತಿದೆ ಎಂದು ʼದಿ ಹಿಂದೂʼ ವಿಶ್ಲೇಷಿಸಿದೆ.

ಜಲ ಸಂಪನ್ಮೂಲಗಳ ಸ್ಥಿತಿಯಂತೂ ಇನ್ನೂ ಶೋಚನೀಯ. ಭಾರತದ ಪ್ರಮುಖ ನದಿಗಳಲ್ಲಿ ವಿಷಕಾರಿ ಭಾರೀ ಲೋಹಗಳ ಅಂಶ ಪತ್ತೆಯಾಗುತ್ತಿದೆ. ಇದು ರಾಜ್ಯ ಹಾಗೂ ಕೇಂದ್ರಗಳ ನದಿ ಪುನಶ್ಚೇತನ ಯೋಜನೆಗಳ ವೈಫಲ್ಯವನ್ನು ಎತ್ತಿ ತೋರಿಸುವುದರೊಂದಿಗೆ ನಡೆದಿರಬಹುದಾದ ಅವ್ಯವಹಾರದ ಕುರಿತೂ ಹಲವು ಅನುಮಾನ ಹುಟ್ಟು ಹಾಕುತ್ತದೆ. ಕೈಗಾರಿಕಾ ತ್ಯಾಜ್ಯ ಮತ್ತು ಸಂಸ್ಕರಿಸದ ಒಳಚರಂಡಿ ನೀರು ನೇರವಾಗಿ ನದಿಗಳನ್ನು ಸೇರುತ್ತಿರುವುದು ಕುಡಿಯುವ ನೀರಿನ ಮೂಲಗಳನ್ನು ವಿಷವಾಗಿಸುತ್ತಿದೆ. ಜೊತೆಗೆ, ಅಂತರ್ಜಲದ ಅತಿಯಾದ ಬಳಕೆಯಿಂದಾಗಿ ದೇಶದ 135ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ನೀರಿನ ಮಟ್ಟವು ಸರಿಪಡಿಸಲಾಗದಷ್ಟು ದೊಡ್ಡ ಸಮಸ್ಯೆಗೆ ಸಿಲುಕಿಕೊಂಡಿದೆ. ಇದು ಭವಿಷ್ಯದಲ್ಲಿ ನೀರಿನ ಯುದ್ಧಗಳಿಗೆ ನಾಂದಿ ಹಾಡಬಹುದು ಎಂಬ ಆತಂಕಕ್ಕೆ ಕಾರಣವಾಗಿದೆ.
ಅರಣ್ಯಗಳ ಕತೆ ಇದಕ್ಕಿಂತ ಹೊರತಾಗಿಲ್ಲ. ಅಂಕಿ-ಅಂಶಗಳಲ್ಲಿ ಅರಣ್ಯ ಪ್ರದೇಶ ಹೆಚ್ಚಾದಂತೆ ಕಂಡರೂ, ನೈಜ ದಟ್ಟ ಅರಣ್ಯಗಳು ಮೂಲಸೌಕರ್ಯ ಯೋಜನೆಗಳ ಹೆಸರಿನಲ್ಲಿ ಬಲಿಯಾಗುತ್ತಿವೆ. ಕಳೆದ ವರ್ಷವೊಂದರಲ್ಲೇ ಸಾವಿರಾರು ಹೆಕ್ಟೇರ್ ಅರಣ್ಯ ಭೂಮಿಯನ್ನು ಗಣಿಗಾರಿಕೆ ಮತ್ತು ರಸ್ತೆ ನಿರ್ಮಾಣಕ್ಕೆ ಬಳಸಿಕೊಳ್ಳಲಾಗಿದೆ. ಇದರಿಂದಾಗಿ ವನ್ಯಜೀವಿಗಳ ಆವಾಸಸ್ಥಾನಗಳು ಧ್ವಂಸಗೊಂಡು, ಮಾನವ-ಪ್ರಾಣಿ ಸಂಘರ್ಷ ದಿನೇ ದಿನೇ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಆನೆ, ಚಿರತೆಗಳು ಕಾಡಿನಿಂದ ನಾಡಿಗೆ ಬರುವುದು ಹಸಿವಿನಿಂದಲ್ಲ, ಅವುಗಳ ಮನೆಗಳನ್ನು ನಾವು ನಾಶಪಡಿಸಿದ್ದರಿಂದ ಎಂಬ ಕಹಿ ಸತ್ಯವನ್ನು ನಾವು ಅರ್ಥಮಾಡಿಕೊಳ್ಳುವುದೆಂದೋ!
ನಗರೀಕರಣದ ಜೊತೆಜೊತೆಗೆ ಬೆಳೆಯುತ್ತಿರುವ ತ್ಯಾಜ್ಯದ ಸಮಸ್ಯೆ ಮತ್ತೊಂದು ನುಂಗಲಾರದ ತುತ್ತು. ಪ್ಲಾಸ್ಟಿಕ್ ಮುಕ್ತ ಭಾರತದ ಗುರಿಯಿದ್ದರೂ, ವಾಸ್ತವದಲ್ಲಿ ಪ್ಲಾಸ್ಟಿಕ್ ಉತ್ಪಾದನೆ ಮತ್ತು ಬಳಕೆ ಪ್ರತಿವರ್ಷ ಏರುತ್ತಲೇ ಇದೆ. ಡಿಜಿಟಲ್ ಕ್ರಾಂತಿಯ ಅಡ್ಡಪರಿಣಾಮವಾಗಿ ಇ-ತ್ಯಾಜ್ಯದ ಪ್ರಮಾಣ ಮುಗಿಲು ಮುಟ್ಟಿದೆ. ಎಲೆಕ್ಟ್ರಾನಿಕ್ ಉಪಕರಣಗಳ ವೈಜ್ಞಾನಿಕ ವಿಲೇವಾರಿಗೆ ಭಾರತದಲ್ಲಿ ಇನ್ನೂ ಸಮರ್ಪಕ ವ್ಯವಸ್ಥೆ ಇಲ್ಲದಿರುವುದು ಪರಿಸರಕ್ಕೆ ದೀರ್ಘಕಾಲದ ಹಾನಿಯನ್ನುಂಟುಮಾಡುತ್ತಿದೆ.

ಭಾರತದ ಪರಿಸರ ಸೂಚ್ಯಂಕ 2025ರ ಅಂಕಿ-ಅಂಶಗಳ ಒಳನೋಟ ಹೀಗಿದೆ…
| ವಿಷಯ | ಅಂಕಿ-ಅಂಶ (ವರದಿಯ ಅಂದಾಜು) | ಪ್ರಭಾವ / ಪರಿಣಾಮ |
| ಹವಾಮಾನ ವೈಪರೀತ್ಯ | ವರ್ಷದ 88% ದಿನಗಳು ವೈಪರೀತ್ಯ ದಾಖಲು | ಕೃಷಿ ನಾಶ ಮತ್ತು ಆರ್ಥಿಕ ನಷ್ಟ |
| ವಾಯು ಮಾಲಿನ್ಯ | ಸರಾಸರಿ ಜೀವಿತಾವಧಿ 3.5 ವರ್ಷ ಇಳಿಕೆ (ದೆಹಲಿಯಲ್ಲಿ ಸುಮಾರು 8 ವರ್ಷಗಳ ಆಸುಪಾಸು) | ಆರೋಗ್ಯ ವೆಚ್ಚದಲ್ಲಿ ಗಣನೀಯ ಏರಿಕೆ (ವೈದ್ಯಕೀಯ ವೆಚ್ಚ ಶೇ.20ರಷ್ಟು ಏರಿದೆ) |
| ಅಂತರ್ಜಲ | 135 ಜಿಲ್ಲೆಗಳಲ್ಲಿ ತೀವ್ರ ಕುಸಿತ (40ಮೀ.ಗಿಂತಲೂ ಹೆಚ್ಚು) (ಶೇ.50ರಷ್ಟು ನದಿ ಮಾನಿಟರಿಂಗ್ ಕೇಂದ್ರಗಳಲ್ಲಿ ವಿಷಕಾರಿ ಭಾರೀ ಲೋಹಗಳು ಪತ್ತೆಯಾಗಿವೆ) | ಕುಡಿಯುವ ನೀರಿನ ಭೀಕರ ಅಭಾವ |
| ಅರಣ್ಯ ನಾಶ | 29,000 ಹೆಕ್ಟೇರ್ ಭೂಮಿ ಬಳಕೆ | ವನ್ಯಜೀವಿಗಳ ಆವಾಸಸ್ಥಾನ ನಾಶ |
| ಇ-ತ್ಯಾಜ್ಯ | ಕಳೆದ 7 ವರ್ಷಗಳಲ್ಲಿ 147% ಏರಿಕೆ (ಇದರ ವೈಜ್ಞಾನಿಕ ವಿಲೇವಾರಿ ಇನ್ನೂ ಶೇ. 25ರಷ್ಟು ದಾಟಿಲ್ಲ.) | ಮಣ್ಣು ಮತ್ತು ನೀರಿನಲ್ಲಿ ವಿಷಕಾರಿ ಅಂಶ |
CSE 2025ರ ವರದಿಯು ಭಾರತದ ಪರಿಸರ ಸುಧಾರಣೆಗೆ ಮೂರು ಆಯಾಮಗಳ ಬದಲಾವಣೆಯನ್ನು ಪ್ರತಿಪಾದಿಸುತ್ತದೆ. ಮೊದಲನೆಯದಾಗಿ, ಬೃಹತ್ ಅಣೆಕಟ್ಟುಗಳು ಅಥವಾ ಅತಿ ದೊಡ್ಡ ಕೇಂದ್ರೀಕೃತ ಯೋಜನೆಗಳ ಮೊರೆ ಹೋಗುವ ಬದಲು, ಸ್ಥಳೀಯ ಮಟ್ಟದ ವಿಕೇಂದ್ರೀಕೃತ ಪರಿಹಾರಗಳಿಗೆ ಆದ್ಯತೆ ನೀಡಬೇಕು. ಅಂದರೆ, ಸಾಂಪ್ರದಾಯಿಕ ಕೆರೆ-ಕಟ್ಟೆಗಳ ಪುನಶ್ಚೇತನ ಮತ್ತು ಮಳೆ ನೀರು ಕೊಯ್ಲು ವ್ಯವಸ್ಥೆಯನ್ನು ಬಲಪಡಿಸುವುದರಿಂದ ಮಾತ್ರ ನೀರಿನ ಭದ್ರತೆಯನ್ನು ಶಾಶ್ವತವಾಗಿ ಸಾಧಿಸಲು ಸಾಧ್ಯ. ಎರಡನೆಯದಾಗಿ, ಹವಾಮಾನ ಬದಲಾವಣೆಯ ತೀವ್ರತೆಯನ್ನು ತಗ್ಗಿಸಲು ಶಕ್ತಿ ಉತ್ಪಾದನಾ ವಲಯದಲ್ಲಿ ಬದಲಾವಣೆಯ ಅಗತ್ಯವಿದೆ. ಪರಿಸರಕ್ಕೆ ಮಾರಕವಾಗಿರುವ ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳ ಮೇಲಿನ ಅವಲಂಬನೆಯನ್ನು ಹಂತ-ಹಂತವಾಗಿ ಕಡಿಮೆ ಮಾಡಿ, ಸೌರ ಮತ್ತು ಪವನ ಶಕ್ತಿಯಂತಹ ಹಸಿರು ಇಂಧನಗಳತ್ತ ಭಾರತವು ವೇಗವಾಗಿ ಹೆಜ್ಜೆ ಹಾಕಬೇಕಿದೆ. ಇದು ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವುದಲ್ಲದೆ, ದೀರ್ಘಕಾಲಿಕ ಇಂಧನ ಭದ್ರತೆ ಒದಗಿಸುತ್ತದೆ.
ಭಾರತದಲ್ಲಿ ಈಗಾಗಲೇ ಹಲವು ಬಲಿಷ್ಠ ಪರಿಸರ ಕಾಯ್ದೆಗಳಿದ್ದರೂ, ಅವುಗಳ ಅನುಷ್ಠಾನದಲ್ಲಿ ರಾಜಕೀಯ ಇಚ್ಛಾಶಕ್ತಿಯ ಕೊರತೆ ಇದೆ. ಇದನ್ನು ಸರಿಪಡಿಸಲು ಅಧಿಕಾರ ಮತ್ತು ಜವಾಬ್ದಾರಿಯನ್ನು ತಳಮಟ್ಟದವರೆಗೆ ಹಂಚಿಕೆ ಮಾಡಬೇಕು. ಗ್ರಾಮ ಪಂಚಾಯತ್ಗಳು ಮತ್ತು ನಗರ ಪಾಲಿಕೆಗಳಂತಹ ಸ್ಥಳೀಯ ಸಂಸ್ಥೆಗಳಿಗೆ ಹೆಚ್ಚಿನ ಸ್ವಾಯತ್ತತೆ, ಆರ್ಥಿಕ ನೆರವು ಮತ್ತು ತಾಂತ್ರಿಕ ಬೆಂಬಲ ನೀಡಬೇಕು. ಆಗ ಮಾತ್ರ ಪರಿಸರ ರಕ್ಷಣೆಯು ಒಂದು ಜನಚಳವಳಿಯಾಗಿ ರೂಪಾಂತರಗೊಳ್ಳಲು ಸಾಧ್ಯ. ಈ ಮೂರು ಸ್ತರದ ಸುಧಾರಣೆಗಳು ಏಕಕಾಲಕ್ಕೆ ಜಾರಿಯಾದಾಗ ಭಾರತವು ತನ್ನ ನೈಸರ್ಗಿಕ ಸಂಪತ್ತನ್ನು ಉಳಿಸಿಕೊಂಡು ಸುಸ್ಥಿರ ಅಭಿವೃದ್ಧಿಯತ್ತ ಸಾಗಬಲ್ಲದು.


ನಮ್ಮ ಭವಿಷ್ಯದ ನೆತ್ತಿ ಮೇಲೆ ತೂಗುತ್ತಿರುವ ಅಪಾಯದ ತೂಗುಗತ್ತಿಯನ್ನೂ, ಅದು ಒಮ್ಮೆ ತಿವಿದರೆ ಆಗಬಹುದಾದ ನಷ್ಟವನ್ನೂ ವರದಿಯ ಅಂಕಿಅಂಶಗಳು ತೋರಿಸುತ್ತವೆ. ಇನ್ನು ಕರ್ನಾಟಕದ ಸುದ್ದಿಗೆ ಬಂದರೆ, ಪಶ್ಚಿಮ ಘಟ್ಟಗಳ ರಕ್ಷಣೆ ಮತ್ತು ಬೆಂಗಳೂರಿನಂತಹ ನಗರಗಳ ಹವಾಮಾನ ಸಮತೋಲನವನ್ನು ಕಾಯ್ದುಕೊಳ್ಳುವುದು ಈಗ ಅನಿವಾರ್ಯವೇನೋ ಆಗಿದೆ. ಆದರೆ ರಾಜ್ಯದ ಕರಾವಳಿ ತೀರಗಳಲ್ಲಿ ಸಮುದ್ರ ಮಟ್ಟ ಏರಿಕೆಯಾಗುತ್ತಿರುವುದು ಮತ್ತು ಒಳನಾಡಿನಲ್ಲಿ ಅಕಾಲಿಕ ಬರಗಾಲ ಕಾಡುತ್ತಿರುವುದು ಇನ್ನೂ ಅಂಕೆಗೆ ಸಿಕ್ಕಿಲ್ಲ.
ಇದನ್ನೂ ಓದಿ: ʼಕಾಂಕ್ರೀಟ್ʼ ಮಾಡುವ ಗಾಯಕ್ಕೆ ಜಪಾನಿ ʼಮಿಯಾವಾಕಿʼಯೇ ಮದ್ದು!
ಈ ಬಿಕ್ಕಟ್ಟಿನಿಂದ ಹೊರಬರಲು ಇರುವ ಏಕೈಕ ದಾರಿ ಎಂದರೆ ‘ಸುಸ್ಥಿರ ಜೀವನಶೈಲಿ’ ಮತ್ತು ಸರ್ಕಾರದ ಮಟ್ಟದಲ್ಲಿ ಪರಿಸರ ಸ್ನೇಹಿ ಉದ್ಯಮಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವುದು. ಪ್ರಕೃತಿಯನ್ನು ನಾವು ರಕ್ಷಿಸಿದರೆ, ಪ್ರಕೃತಿ ನಮ್ಮನ್ನು ರಕ್ಷಿಸುತ್ತದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ, ಪರಿಸರದ ಜೊತೆ ನಾವೂ ವಿಳಾಸಕ್ಕಿಲ್ಲದಂತೆ ಹೊರಡಲು ಅಣಿಯಾಗಬೇಕಿರುವ ಸಂದರ್ಭದಲ್ಲಿ ತೇಜಸ್ವಿಯರ ನುಡಿಮುತ್ತೊಂದು ನೆನಪಾಗುತ್ತದೆ. “ಪರಿಸರ ಅನ್ನೋದು ಏನು? ಮನುಷ್ಯನ ಸಮಾಜ ಅನ್ನೋದು ಮತ್ತು ಮನುಷ್ಯನ ಆತ್ಮ ಅನ್ನೋದು ಈ ಮೂರು ಹಾಳಾದರು ಒಟ್ಟಿಗೆ ಹಾಳಾಗೋದು; ಉದ್ಧಾರ ಆದರೂ ಒಟ್ಟಿಗೆ ಉದ್ಧಾರ ಆಗೋದು!”





