ಕಾರ್ಬೋಹೈಡ್ರೇಟ್ ಹೆಚ್ಚು ಇರುವ ಅಕ್ಕಿ, ಗೋಧಿಯನ್ನೇ ಹೆಚ್ಚಾಗಿ ನೀಡುವುದು ಜನರ ಆರೋಗ್ಯದ ದೃಷ್ಟಿಯಿಂದ ಉತ್ತಮವಲ್ಲ. ಪ್ರೋಟಿನ್ಯುಕ್ತ ಆಹಾರವನ್ನು ಜನರಿಗೆ ನೀಡುವುದು ಸರ್ಕಾರದ ಕರ್ತವ್ಯವೂ ಹೌದು. ಈ ದೃಷ್ಟಿಕೋನದಿಂದ ನೋಡಿದಾಗ ಸರ್ಕಾರ 'ಇಂದಿರಾ ಕಿಟ್' ನೀಡುವುದು ಸ್ವಾಗತಾರ್ಹ.
ಅನ್ನಭಾಗ್ಯ ಯೋಜನೆಯಡಿ ರಾಜ್ಯ ಸರ್ಕಾರವು ‘ಇಂದಿರಾ ಕಿಟ್’ ಎಂಬ ಹೊಸ ಪಡಿತರ ವ್ಯವಸ್ಥೆಯನ್ನು ಜಾರಿಗೆ ತರಲು ಮುಂದಾಗಿದೆ. ಈ ಹಿಂದೆ ಪಡಿತರ ಚೀಟಿದಾರರಿಗೆ ಹೆಚ್ಚುವರಿಯಾಗಿ ನೀಡುತ್ತಿದ್ದ ತಲಾ 5 ಕೆಜಿ ಅಕ್ಕಿ ಬದಲಾಗಿ ಇದೀಗ ಸರ್ಕಾರ ಪೌಷ್ಟಿಕಾಂಶಯುಕ್ತ ಆಹಾರ ಪದಾರ್ಥಗಳ ಕಿಟ್ ವಿತರಿಸಲು ನಿರ್ಧರಿಸಿದೆ. ಆಹಾರ ಭದ್ರತೆಯನ್ನು ಖಚಿತಪಡಿಸಿಕೊಳ್ಳುವ ಜತೆಗೆ ಜನರಿಗೆ ಪೌಷ್ಟಿಕ ಆಹಾರ ಒದಗಿಸುವ ಕ್ರಮ ಇದು ಎಂದರೆ ತಪ್ಪಾಗಲಾರದು.
ಕಾಂಗ್ರೆಸ್ ರಾಜ್ಯದಲ್ಲಿ ಸರ್ಕಾರ ರಚಿಸುವುದಕ್ಕೂ ಮುನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ಭರವಸೆಯನ್ನು ನೀಡಿತ್ತು. ಇದರಲ್ಲಿ ಅನ್ನ ಭಾಗ್ಯ ಕೂಡಾ ಒಂದು. ಬಿಪಿಎಲ್ ಕಾರ್ಡ್ದಾರರ ಕುಟುಂಬದ ಪ್ರತಿ ಅರ್ಹ ಫಲಾನುಭವಿಗೆ ಪ್ರತಿ ತಿಂಗಳು ಒಟ್ಟು 10 ಕೆಜಿ ಅಕ್ಕಿ ವಿತರಿಸುವುದಾಗಿ ಭರವಸೆ ನೀಡಲಾಗಿತ್ತು. ಆದರೆ ಬರೀ ಕಾರ್ಬೋಹೈಡ್ರೇಟ್ ನೀಡುವುದರ ಬದಲಾಗಿ ಪ್ರೋಟಿನ್ಯುಕ್ತ ಇತರ ಪೌಷ್ಟಿಕ ಆಹಾರವನ್ನೂ ನೀಡಬೇಕು ಎಂಬ ಆಗ್ರಹವೂ ಕೇಳಿಬಂದಿತ್ತು.
ಇದನ್ನು ಓದಿದ್ದೀರಾ? ‘ಅನ್ನಭಾಗ್ಯ’ ಯೋಜನೆಯಲ್ಲಿ ‘ಇಂದಿರಾ ಕಿಟ್’; ಪೌಷ್ಠಿಕ ಆಹಾರ ಪೂರೈಕೆಗೆ ಹೊಸ ಮೈಲಿಗಲ್ಲು
ಇವೆಲ್ಲವುದರ ನಡುವೆ ಕೇಂದ್ರದ ರಾಜಕೀಯದಾಟದಲ್ಲಿ 10 ಕೆಜಿ ಅಕ್ಕಿಯೂ ಜನರಿಗೆ ದೊರಕ್ಕದಂತಾಯ್ತು. ಅಕ್ಕಿ ಪೂರೈಕೆಯಲ್ಲಿ ಸಮಸ್ಯೆ ಎದುರಾದಾಗ ಐದು ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡುವುದರ ಜತೆಗೆ ಉಳಿದ ಐದು ಕೆಜಿ ಅಕ್ಕಿ ಬದಲಾಗಿ ಪ್ರತಿ ಕೆಜಿಗೆ 34 ರೂ.ನಂತೆ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ ಮಾಡುವ ಕಾರ್ಯವನ್ನು ಸರ್ಕಾರ ಆರಂಭಿಸಿತು. ಇದೂ ಬಡ ಕುಟುಂಬಗಳಿಗೆ ಅನುಕೂಲವಾಯಿತು.
ಆದರೆ ಈ ರೀತಿ ಹಣ ಜಮೆ ಮಾಡುವ ಬದಲಾಗಿ ಸರ್ಕಾರವೇ ಬೇಳೆ, ರಾಗಿ, ಜೋಳದಂತಹ ಪೌಷ್ಟಿಕ ಆಹಾರವನ್ನು ನೀಡಬೇಕು ಎಂಬುದು ಕರ್ನಾಟಕ ರಾಜ್ಯ ರೈತರ ಸಂಘ ಆಗ್ರಹವಾಗಿತ್ತು. ಅನ್ನಭಾಗ್ಯ ಯೋಜನೆ ಜಾರಿಯಾದ ಆರಂಭದಲ್ಲೇ ಕರ್ನಾಟಕ ರೈತ ಸಂಘ(ಕೆಆರ್ಆರ್ಎಸ್) ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ರೈತ ಸ್ವರಾಜ್ ವೇದಿಕೆಯ ಕವಿತಾ ಕುರುಗಂಟಿ, ಶಾಸಕ ದರ್ಶನ್ ಪುಟ್ಟಣ್ಣಯ್ಯ, ಜಾಗೃತ ಕರ್ನಾಟಕದ ಡಾ. ಎಚ್ ವಿ ವಾಸು ಮತ್ತು ಡಾ. ಬಿಸಿ ಬಸವರಾಜು ಅವರ ತಂಡವು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರಿಗೆ ಮನವಿಯನ್ನು ಸಲ್ಲಿಸಿತ್ತು. ಯಾವ ರೀತಿ ಈ ಯೋಜನೆಯನ್ನು ಜಾರಿ ಮಾಡಬಹುದು ಎಂಬ ಸಂಪೂರ್ಣ ಮಾಹಿತಿಯನ್ನು ಒಳಗೊಂಡ ಪ್ರಸ್ತಾವನೆಯನ್ನೂ ಸಲ್ಲಿಸಿತ್ತು. ಅದನ್ನು ಇದೀಗ ಸರ್ಕಾರ ಭಾಗಶಃ ಜಾರಿಗೊಳಿಸುತ್ತಿರುವುದು ಸ್ವಾಗತಾರ್ಹ ಎನ್ನುತ್ತಾರೆ ಈ ಮುಖಂಡರುಗಳು.
ಸರ್ಕಾರ ಈಗ ಕೊಡಲು ಹೊರಟಿರುವುದೇನು?
ಆರಂಭದಲ್ಲಿ ಕೇಂದ್ರ ಸರ್ಕಾರ ಅಗತ್ಯವಿರುವಷ್ಟು ಅಕ್ಕಿಯನ್ನು ಕಡಿಮೆ ಬೆಲೆಗೆ ನೀಡಲು ನಿರಾಕರಿಸಿದ ಕಾರಣ ಹತ್ತು ಕೆಜಿ ಅಕ್ಕಿಯ ಬದಲಾಗಿ ಹಣ ನೀಡಲು ಆರಂಭಿಸಿತ್ತು. ಆದರೆ ಈ ವರ್ಷದ ಏಪ್ರಿಲ್ನಲ್ಲಿ ಮತ್ತೆ ಅಕ್ಕಿ ನೀಡಲು ಪ್ರಾರಂಭಿಸಿದೆ. ಇದೀಗ 5 ಕೆಜಿ ಅಕ್ಕಿ ಬದಲಾಗಿ ಇಂದಿರಾ ಕಿಟ್ ಅಂದರೆ ಐಎನ್ಡಿಐಆರ್ಎ- ಇಂಟೆಗ್ರೇಟೆಡ್ ನ್ಯೂಟ್ರಿಷನ್ ಮತ್ತು ಡಯೆಟರಿ ಇನಿಶಿಯೇಟಿವ್ ಫಾರ್ ರಿವೈಟಲೈಸಿಂಗ್ ಅನ್ನಭಾಗ್ಯ ಬೆನಿಫಿಷಿಯರೀಸ್ – ಅನ್ನಭಾಗ್ಯ ಫಲಾನುಭವಿಗಳನ್ನು ಪುನರುಜ್ಜೀವನಗೊಳಿಸುವ ಸಮಗ್ರ ಪೋಷಣೆ ಮತ್ತು ಆಹಾರ ಉಪಕ್ರಮವನ್ನು ಅನುಷ್ಠಾನಗೊಳಿಸುವ ಕುರಿತಾಗಿ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಸಭೆ ನಡೆಸಿದ್ದಾರೆ.
ಇದನ್ನು ಓದಿದ್ದೀರಾ? ಉಡುಪಿ | ಅನ್ನಭಾಗ್ಯ ಯೋಜನೆ, ನಗದು ವರ್ಗಾವಣೆ ಬದಲಾಗಿ ಅಕ್ಕಿ ವಿತರಣೆ
ಈ ಯೋಜನೆಯಡಿಯಲ್ಲಿ ತೊಗರಿ ಬೇಳೆ, ಸೂರ್ಯಕಾಂತಿ ಎಣ್ಣೆ(ಅಡುಗೆ ಎಣ್ಣೆ), ಸಕ್ಕರೆ ಮತ್ತು ಉಪ್ಪು ನೀಡಲು ಮುಂದಾಗಿದೆ. ಯೋಜನೆಗೆ ಪ್ರತಿ ತಿಂಗಳು ಒಟ್ಟು 18,628 ಟನ್ ತೊಗರಿ ಬೇಳೆ, ತಲಾ 12,419 ಟನ್ ಸೂರ್ಯಕಾಂತಿ ಎಣ್ಣೆ, ಸಕ್ಕರೆ ಮತ್ತು ಉಪ್ಪು ಬೇಕಾಗಬಹುದು. ಅಂದರೆ ಪ್ರತಿ ತಿಂಗಳು 1.25 ಕೋಟಿ ಇಂದಿರಾ ಆಹಾರ ಕಿಟ್ಗಾಗಿ 466 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಆಹಾರ ಇಲಾಖೆ ಅಂದಾಜು ಮಾಡಿದೆ. ನಾಫೆಡ್, ಎನ್ಸಿಎಫ್ನಂತಹ ಕೇಂದ್ರ ಸರಬರಾಜು ಸಂಸ್ಥೆಗಳ ಮೂಲಕ ಅಥವಾ ಖರೀದಿ ಪ್ರಕ್ರಿಯೆಗಳನ್ನು ಪಾರದರ್ಶಕವಾಗಿ ಕೆಟಿಪಿಪಿ ಕಾಯ್ದೆ ಅನ್ವಯ ಕೈಗೊಳ್ಳಲು ಕ್ರಮ ತೆಗೆದುಕೊಳ್ಳಬೇಕು ಎಂದು ನಿರ್ದೇಶಿಸಲಾಗಿದೆ.
ಇಂದಿರಾ ಕಿಟ್ ಯಾಕೆ ಮುಖ್ಯ?
ಒಟ್ಟು ಮೂರು ಆಯಾಮಗಳಲ್ಲಿ ಈ ಇಂದಿರಾ ಕಿಟ್ ಮುಖ್ಯವಾಗುತ್ತದೆ. ಮೊದಲನೆಯಾಗಿ ಈ ಕಿಟ್ ಜನರಿಗೆ ಆಹಾರ ಭದ್ರತೆಯನ್ನು ಒದಗಿಸಲಿದೆ. ಎರಡನೆಯದಾಗಿ ಪೌಷ್ಟಿಕ ಆಹಾರವನ್ನು ಒದಗಿಸುತ್ತದೆ. ರಾಜ್ಯ ನೀತಿ ನಿರ್ದೇಶಕ ತತ್ವಗಳ ಅನುಚ್ಛೇದ 47ರ ಅಡಿಯಲ್ಲಿ ರಾಜ್ಯವು ತನ್ನ ಜನರ ಪೌಷ್ಟಿಕತೆಯ ಮಟ್ಟವನ್ನು ಮತ್ತು ಜೀವನ ಮಟ್ಟವನ್ನು ಸುಧಾರಿಸುವುದು, ಸಾರ್ವಜನಿಕ ಆರೋಗ್ಯವನ್ನು ಸುಧಾರಿಸುವುದನ್ನು ತನ್ನ ಪ್ರಾಥಮಿಕ ಕರ್ತವ್ಯವೆಂದು ಪರಿಗಣಿಸಬೇಕು. ಕಾರ್ಬೋಹೈಡ್ರೇಟ್ಗಳಾದ ಅಕ್ಕಿ, ಗೋಧಿಯನ್ನೇ ಹೆಚ್ಚಾಗಿ ನೀಡುವುದು ಜನರ ಆರೋಗ್ಯದ ದೃಷ್ಟಿಯಲ್ಲಿ ಉತ್ತಮವಲ್ಲ. ಪ್ರೋಟಿನ್ಯುಕ್ತ ಆಹಾರವನ್ನು ಜನರಿಗೆ ನೀಡುವುದು ಸರ್ಕಾರದ ಕರ್ತವ್ಯವೂ ಹೌದು. ಈ ದೃಷ್ಟಿಕೋನದಿಂದ ನೋಡಿದಾಗ ಸರ್ಕಾರದ ಈ ನಡೆ ಉತ್ತಮವಾದುದ್ದು. ಮೂರನೆಯದಾಗಿ ಸರ್ಕಾರ ಗ್ಯಾರಂಟಿ ಯೋಜನೆಯನ್ನು ಸರಿಯಾದ ರೀತಿಯಲ್ಲಿ ಅನುಷ್ಠಾನ ಮಾಡಿದ್ದಂತಾಗಿದೆ.
ಗ್ಯಾರಂಟಿ ಯೋಜನೆಯ ಸರಿಯಾದ ಜಾರಿ ಹೇಗೆ?
ಸರ್ಕಾರ ಅಕ್ಕಿ ನೀಡುವ ಬದಲಾಗಿ ಪೌಷ್ಟಿಕಾಂಶಯುಕ್ತ ಆಹಾರವನ್ನು ನೀಡಬೇಕು ಎಂಬುದು ರೈತ ಸಂಘಗಳ ಆಗ್ರಹವಾಗಿತ್ತು. ಸರ್ಕಾರ ಜಾರಿಗೊಳಿಸುವ ಯೋಜನೆ ಜನರಿಗೆ ಆರೋಗ್ಯದ ದೃಷ್ಟಿಯಿಂದಲೂ ಸಹಕಾರಿಯಾಗಬೇಕು. ಹಾಗಾದರೆ ಮಾತ್ರ ಗ್ಯಾರಂಟಿ ಯೋಜನೆಯನ್ನು ಅರ್ಥಪೂರ್ಣವಾಗಿ ಜಾರಿಗೊಳಿಸಿದಂತೆ ಆಗುತ್ತದೆ ಎಂಬುದು ಮುಖಂಡರುಗಳ ಅಭಿಪ್ರಾಯವಾಗಿತ್ತು.
ಇದಕ್ಕಾಗಿ ಸರ್ಕಾರಕ್ಕೆ ಹೆಚ್ಚುವರಿ ಹೊರೆಯೂ ಆಗದು ಎಂಬುದನ್ನು ರೈತ ಮುಖಂಡರುಗಳು ಅಂಕಿ-ಅಂಶ ಸಹಿತವಾಗಿ ವಿವರಿಸಿದ್ದರು. ಪ್ರತಿ ಬಿಪಿಎಲ್ ಕಾರ್ಡ್ಗೆ 5 ಕೆಜಿ ರಾಗಿ(ಕೆಜಿಗೆ 43.5 ರೂ.), 5 ಕೆಜಿ ಜೋಳ(ಕೆಜಿಗೆ 37 ರೂ.), 1 ಕೆಜಿ ತೊಗರಿಬೇಳೆ(ಪ್ರತಿ ಕೆಜಿ 90 ರೂ) ಮತ್ತು ಖಾದ್ಯ ತೈಲ ಕಡಲೇಕಾಯಿ ಎಣ್ಣೆ(ಕೆಜಿ 200 ರೂ.) ನೀಡಬೇಕು. ಇದಕ್ಕೆ ಅಗತ್ಯವಿರುವುದು ವರ್ಷಕ್ಕೆ 6800 ಕೋಟಿ ರೂಪಾಯಿ. ಐದು ಕೆಜಿ ಅಕ್ಕಿ ನೀಡುವುದರಿಂದ 9,000 ಕೋಟಿ ರೂ. ವೆಚ್ಚವಾಗುತ್ತದೆ. ಜತೆಗೆ ಇದರಲ್ಲಿ ಕಾರ್ಬೋಹೈಡ್ರೇಟ್ ಮಾತ್ರ ಇರುತ್ತದೆ. ರೈತರಿಗೂ ಅನುಕೂಲವಾಗದು, ಆರೋಗ್ಯದ ಮೇಲೆಯೂ ನಕರಾತ್ಮಕ ಪರಿಣಾಮ ಬೀರುತ್ತದೆ ಎಂದು ರೈತ ಮುಖಂಡರುಗಳು ಪ್ರಸ್ತಾವನೆಯಲ್ಲಿ ತಿಳಿಸಿದ್ದರು. ಇದೀಗ ಭಾಗಶಃ ಪೌಷ್ಟಿಕ ಆಹಾರವನ್ನು ಒದಗಿಸುವ ನಿಟ್ಟಿನಲ್ಲಿಯೇ ಸರ್ಕಾರ ಮುಂದುವರೆದಿದೆ.
ಇದನ್ನು ಓದಿದ್ದೀರಾ? ಅನ್ನಭಾಗ್ಯ ಯೋಜನೆಯಡಿ ಇನ್ಮುಂದೆ ಇಂದಿರಾ ಆಹಾರ ಕಿಟ್!
ಆದರೆ ಈ ಯೋಜನೆಯನ್ನು ರೈತರಿಗೆ ಸಹಕಾರಿಯಾಗುವಂತೆ ಮತ್ತು ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿಸಲು ಬಳಸಿಕೊಳ್ಳಬೇಕು ಎನ್ನುತ್ತಾರೆ ರೈತ ಮುಖಂಡರುಗಳು. ಈ ಬಗ್ಗೆ ಈದಿನ ಡಾಟ್ ಕಾಮ್ಗೆ ಪ್ರತಿಕ್ರಿಯಿಸಿರುವ ರೈತ ಸ್ವರಾಜ್ ವೇದಿಕೆಯ ಕವಿತಾ ಕುರುಗಂಟಿ, “ನೇರ ಹಣ ವರ್ಗಾವಣೆಯನ್ನು ಪೌಷ್ಟಿಕಾಂಶ ಕಿಟ್ ಯೋಜನೆಯಾಗಿ ಬದಲಾಯಿಸಿದ ಬಳಿಕ ಸರ್ಕಾರ ಸ್ಥಳೀಯ ರೈತರಿಗೆ ಲಾಭ ಮಾಡಿಕೊಡುವ ಅವಕಾಶವನ್ನು ಕೈಚೆಲ್ಲುತ್ತಿದೆ ಎಂದನಿಸುತ್ತಿದೆ. ಪೌಷ್ಟಿಕಾಂಶ ಆಹಾರಗಳಾದ ತೊಗರಿಬೇಳೆ ಮೊದಲಾದವುಗಳನ್ನು ಸರ್ಕಾರ ಸ್ಥಳೀಯವಾಗಿ ಖರೀದಿಸಬೇಕು. ಇದರಿಂದ ರೈತರಿಗೆ ಸಹಾಯ ಮಾಡಬೇಕು” ಎಂದು ಆಗ್ರಹಿಸಿದ್ದಾರೆ.

“ಸರ್ಕಾರ ಸ್ಥಳೀಯವಾಗಿ ರೈತರಿಂದ ಪೌಷ್ಟಿಕ ಆಹಾರ ಕಿಟ್ಗೆ ಬೇಕಾದ ಧಾನ್ಯಗಳನ್ನು ಖರೀದಿಸಿದರೆ ಸರ್ಕಾರ ಇದು ಎಂಎಸ್ಪಿ ಖಾತರಿ ನೀಡಿದಂತಾಗುತ್ತದೆ. ಇಂದಿರಾ ಪೌಷ್ಟಿಕ ಕಿಟ್ ನೀಡುವ ನಿರ್ಧಾರ ಸ್ವಾಗತಾರ್ಹ. ಪಡಿತರ ವ್ಯವಸ್ಥೆಗೆ ಬೇಕಾದ ಆಹಾರ ಉತ್ಪನ್ನಗಳನ್ನು ಟೆಂಡರ್ ಮೂಲಕ ಖಾಸಗಿ ಏಜೆನ್ಸಿಗಳಿಂದ ಕೊಳ್ಳುವ ಬದಲಾಗಿ ರೈತರಿಂದಲೇ ಎಂಎಸ್ಪಿ ದರದಲ್ಲಿ ನೇರವಾಗಿ ಕೊಂಡುಕೊಳ್ಳಬೇಕು. ರೈತರಿಂದಲೇ ನೇರವಾಗಿ ಕೊಳ್ಳುವ ಮೂಲಕ ಸರ್ಕಾರ ಅಪೂರ್ವ ಮತ್ತು ಕ್ರಾಂತಿಕಾರಿ ಮಾದರಿಯ ಹೆಜ್ಜೆ ಇಡಬೇಕು” ಎಂದು ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ಪೌಷ್ಟಿಕ ಆಹಾರದ ಕೊರತೆಯು ಒಂದು ಪ್ರಮುಖ ಆರೋಗ್ಯ ಸಮಸ್ಯೆಯಾಗಿಯೇ ಉಳಿದಿದೆ. 2024ರ ವರದಿಯೊಂದರ ಪ್ರಕಾರ ರಾಜ್ಯದಲ್ಲಿ 5 ವರ್ಷದೊಳಗಿನ 1.3 ಲಕ್ಷಕ್ಕೂ ಹೆಚ್ಚು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. 11,000ಕ್ಕೂ ಅಧಿಕ ಮಕ್ಕಳು ‘ತೀವ್ರ ತೀವ್ರ ಅಪೌಷ್ಟಿಕತೆ’ ವರ್ಗಕ್ಕೆ ಸೇರಿದ್ದಾರೆ. Poshan Tracker ದತ್ತಾಂಶದ ಪ್ರಕಾರ ಪ್ರತಿ ಮೂವರು ಮಕ್ಕಳಲ್ಲಿ ಒಬ್ಬರ ಬೆಳವಣಿಗೆ ಕುಂಠಿತವಾಗಿದೆ. ಶೇಕಡ 41.2ರಷ್ಟು ಮಕ್ಕಳ ಬೆಳವಣಿಗೆ ಕುಂಠಿತ ಸಮಸ್ಯೆಯನ್ನು ಹೊಂದಿದ್ದು, ಈ ವಿಚಾರದಲ್ಲಿ ಕರ್ನಾಟಕವು ಭಾರತದಲ್ಲಿಯೇ ಹೆಚ್ಚು ಬಾಧಿತ ರಾಜ್ಯಗಳ ಪೈಕಿ 9ನೇ ಸ್ಥಾನದಲ್ಲಿದೆ.
ಇವೆಲ್ಲವುದಕ್ಕೂ ಜನರ ಆಹಾರ ಶೈಲಿ ಮತ್ತು ಬಡ ಜನರಿಗೆ ಲಭ್ಯವಿರುವ ಆಹಾರ ವ್ಯವಸ್ಥೆಯೇ ಕಾರಣ. ಬಡ ಜನರು ಆಹಾರಕ್ಕಾಗಿ ಹೆಚ್ಚುವರಿ ಖರ್ಚು ಮಾಡಲು ಸಾಧ್ಯವಾಗದೆ ಪಡಿತರದಲ್ಲಿ ಸಿಗುವ ಬರೀ ಕಾರ್ಬೋಹೈಡ್ರೇಟ್ಗಳ ಗುಚ್ಛವಾದ ಅನ್ನವನ್ನೇ ಸೇವಿಸುತ್ತಾರೆ. ಆದರೆ ದೇಹಕ್ಕೆ ಅಗತ್ಯವಾಗಿ ಬೇಕಾದ ಪ್ರೋಟೀನ್ ಲಭ್ಯವಾಗುತ್ತಿದೆಯೇ? ಇಲ್ಲ. ಹೀಗಿರುವಾಗ ಬಡವರಿಗೆ ಪಡಿತರದ ಮೂಲಕವೇ ಪೌಷ್ಟಿಕ ಆಹಾರವನ್ನು ನೀಡುವ ಸರ್ಕಾರದ ನಡೆ ಸ್ವಾಗತಾರ್ಹ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.




