ಬಂಗಾಳ ಜನರು ಸಾಮಾನ್ಯವಾಗಿ ಸೆಕ್ಯುಲರ್ ಮತ್ತು ಸೌಹಾರ್ದತೆಯನ್ನು ಬಯಸುವವರು. ಬಂಗಾಳಿ ಗುರುತು ಟ್ಯಾಗೋರ್ ಮತ್ತು ಅವರ ಸೆಕ್ಯುಲರ್ ಆದರ್ಶಗಳೊಂದಿಗೆ ಬೆಸೆದಿದೆ. ಹೀಗಾಗಿ, ಬಿಜೆಪಿಯ ಕುತಂತ್ರವು ವಿಫಲವಾಗಿ, ವಿರೋಧ ಪಕ್ಷಗಳಿಗೆ ಲಾಭವಾಗಬಹುದು. ಆದ್ದರಿಂದಲೇ, ಕೆಲವು ವಿಮರ್ಶಕರು ಬಿಜೆಪಿಯ ಈ ಧೋರಣೆಯನ್ನು 'ವಿನಾಶ ಕಾಲೇ ವಿಪರೀತ ಬುದ್ಧಿ' ಎಂದು ಬಣ್ಣಿಸಿದ್ದಾರೆ.
ಪಶ್ಚಿಮ ಬಂಗಾಳದ 2026ರ ವಿಧಾನಸಭಾ ಚುನಾವಣೆಗಳು ಸಮೀಪಿಸುತ್ತಿರುವ ಸಮಯದಲ್ಲಿ, ಮೋದಿ ಸರ್ಕಾರವು ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ ಮತ್ತು ರಾಷ್ಟ್ರಗೀತೆ ‘ಜನಗಣಮನ’ಗಳ ನಡುವೆ ವಿವಾದ ಹುಟ್ಟುಹಾಕಿದೆ. ಕೇಂದ್ರ ಸರ್ಕಾರದ ಇತ್ತೀಚಿನ ಆದೇಶದ ಪ್ರಕಾರ, ಸರ್ಕಾರಿ ಕಾರ್ಯಕ್ರಮಗಳಲ್ಲಿ ರಾಷ್ಟ್ರಗೀತೆಯ ಜೊತೆಗೆ ರಾಷ್ಟ್ರೀಯ ಗೀತೆಯನ್ನೂ ಹಾಡಬೇಕು. ಅದರಲ್ಲೂ, ಮೊದಲು ವಂದೇ ಮಾತರಂ ಹಾಡಬೇಕು. ಅದೂ, ವಂದೇ ಮಾತರಂನಲ್ಲಿ ಈವರೆಗೆ ಬಳಸಲಾಗುತ್ತಿರುವ 2 ಚರಣಗಳನ್ನು ಮಾತ್ರವಲ್ಲ, ಇಡೀ ಗೀತೆಯ ಆರೂ ಚರಣಗಳನ್ನೂ ಹಾಡಲೇಬೇಕು. ವಂದೇ ಮಾತರಂ ಹಾಡಿದ ನಂತರ, ರಾಷ್ಟ್ರಗೀತೆಯನ್ನು ಹಾಡಬೇಕೆಂದು ಹೇಳಿದೆ. ವಂದೇ ಮಾತರಂ ಅನ್ನು ಮೊದಲ ಸ್ಥಾನಕ್ಕೇರಿಸಿ, ರಾಷ್ಟ್ರಗೀತೆಯನ್ನು ದ್ವಿತೀಯ ಸ್ಥಾನಕ್ಕೆ ಇಳಿಸಿದೆ. ಮೋದಿ ಸರ್ಕಾರ, ತನ್ನ ಈ ಕೃತ್ಯಕ್ಕೆ ವಂದೇ ಮಾತರಂನ 150ನೇ ವಾರ್ಷಿಕೋತ್ಸವದ ನೆಪ ನೀಡುತ್ತಿದೆ. ಆದರೆ, ಇದು ಬಂಗಾಳ ಚುನಾವಣೆಯ ಸಮಯದಲ್ಲಿ, ಬಂಗಾಳಿಗರನ್ನು ಸೆಳೆಯಲು ಮಾಡಲಾಗುತ್ತಿರುವ ಕುತಂತ್ರ ಎಂಬುದು ದೇಶವಾಸಿಗಳಿಗೆ ಅರ್ಥವಾಗಿದೆ.
ಈ ವಂದೇ ಮಾತರಂ ಗೀತೆಯನ್ನು 1880ರಲ್ಲಿ ಬಂಕಿಮ ಚಂದ್ರ ಚಟರ್ಜಿ ಬರೆದರು. ವಂದೇ ಮಾತರಂ ಎಂದರೆ, ತಾಯಿಗೆ ನಮಸ್ಕರಿಸು ಎಂದರ್ಥ. ಈ ಗೀತೆಯನ್ನು 1882ರಲ್ಲಿ ಚಟರ್ಜಿ ಅವರ ಕಾದಂಬರಿ ‘ಆನಂದಮಠ್’ದಲ್ಲಿ ಸೇರಿಸಲಾಯಿತು.

ಈ ಗೀತೆಯು ಇಂದು ನಾವು ನೋಡುತ್ತಿರುವಂತೆ, ಕೇವಲ ಎರಡು ಚರಣಗಳಿಗೆ ಸೀಮಿತವಾಗಿಲ್ಲ. ಅದು ವಿಸ್ತೃತ ಗೀತೆಯಾಗಿದೆ. ಆದರೆ, ಇಂದು ಎರಡು ಪ್ಯಾರಾಗಳನ್ನು ಮಾತ್ರವೇ ಹಾಡಲಾಗುತ್ತಿದೆ. ಯಾಕೆಂದರೆ, ಗೀತೆಯ ಉಳಿದ ಭಾಗವು ಸಾಕಷ್ಟು ವಿರೋಧಾಭಾಸವನ್ನು ಹೊಂದಿದೆ. ಆ ಭಾಗವು ಮುಸ್ಲಿಂ ದ್ವೇಷವನ್ನು ಪ್ರಚೋದಿಸುತ್ತದೆ. ಹಿಂದು ಪ್ರಬಲ ಜಾತಿಯ ಒಂದು ಗುಂಪು ಮುಸ್ಲಿಮರನ್ನು ಕೊಲ್ಲುವಂತೆ, ಅವರ ಗುಡಿಸಲುಗಳನ್ನು ದೋಚುವಂತೆ, ಅವರ ಮಸೀದಿಗಳನ್ನು ಕೆಡವುವಂತೆ, ಮುಸ್ಲಿಂ ಮಹಿಳೆಯರನ್ನು ಸೆರೆಹಿಡಿಯಲು ಹಾಗೂ ಸತ್ತ ಮುಸ್ಲಿಮರ ಮುಖಗಳ ಮೇಲೆ ಮುದ್ರೆ ಹಾಕುವಂತೆ ಹಿಂದುಗಳನ್ನು ಪ್ರಚೋದಿಸಿದೆ. ಈ ಕೃತ್ಯಗಳು ನಡೆಯುವವರೆಗೆ ಶ್ರೇಣೀಕೃತ ಜಾತಿ ವ್ಯವಸ್ಥೆಯನ್ನು ಸ್ಥಗಿತಗೊಳಿಸುವುದಾಗಿಯೂ, ವಿಜಯದ ನಂತರ ವ್ಯವಸ್ಥೆಯನ್ನು ಮರುಸ್ಥಾಪಿಸುವುದಾಗಿಯೂ ಚಟರ್ಜಿ ತಮ್ಮ ವಂದೇ ಮಾತರಂ ಗೀತೆಯಲ್ಲಿ ಹೇಳಿದ್ದಾರೆ. ಮುಸ್ಲಿಮರ ಮೇಲಿನ ರಕ್ತಪಾತವು ತಮ್ಮ ಅತ್ಯುನ್ನತ ಪವಿತ್ರ ಕರ್ತವ್ಯವಾಗಿದ್ದು, ಇದನ್ನು ದೇವತೆ ಸೂಚಿಸಿದ್ದಾಳೆಂದು ಬಡ ಹಿಂದುಗಳನ್ನು ಈ ಗೀತೆಯಲ್ಲಿ ನಂಬಿಸಲಾಗಿದೆ.
1937ರಲ್ಲಿ ನೆಹರು ಅವರು ‘ಆನಂದಮಠ್’ ಕಾದಂಬರಿಯನ್ನು ಓದಿದಾಗ, ಕಾದಂಬರಿ ಮತ್ತು ವಂದೇ ಮಾತರಂ ಗೀತೆಯಲ್ಲಿನ ವಿರೋಧಾತ್ಮಕ ಅಂಶಗಳನ್ನು ಗಮನಿಸಿದರು. ‘ವಂದೇ ಮಾತರಂ’ ಕುರಿತು ರವೀಂದ್ರನಾಥ ಟ್ಯಾಗೋರ್ ಬಳಿ ಸಲಹೆ ಕೇಳಿದರು. ‘ಗೀತೆಯ ಮೊದಲ ಎರಡು ಚರಣಗಳು ಸುಂದರವಾದ ಭೂಮಿಯನ್ನು ಹೊಗಳುವುದರಿಂದ, ಅವುಗಳನ್ನು ಕಾಂಗ್ರೆಸ್ ಅಧಿವೇಶನಗಳಲ್ಲಿ ಹಾಡಬಹುದು. ಆದರೆ, ಉಳಿದವುಗಳನ್ನು ಬಳಸಬಾರದು’ ಎಂದು ಟ್ಯಾಗೋರ್ ಸಲಹೆ ನೀಡಿದರು. ಆನಂತರ, 1951ರಲ್ಲಿ, ಸಂವಿಧಾನ ಸಭೆಯು ‘ವಂದೇ ಮಾತರಂ’ನ ಎರಡು ಚರಣಗಳನ್ನು ರಾಷ್ಟ್ರೀಯ ಗೀತೆಯಾಗಿ ಉಳಿಸಿಕೊಂಡಿತು. ಟ್ಯಾಗೋರ್ ಅವರ ಮರಣದ ನಂತರ, ಅವರ ‘ಜನ ಗಣ ಮನ’ವನ್ನು ರಾಷ್ಟ್ರಗೀತೆಯಾಗಿ ಸಂವಿಧಾನ ಸಭೆ ಘೋಷಿಸಿತು.
ಟ್ಯಾಗೋರ್ ಅವರು 1911ರಲ್ಲಿ ಬರೆದ ‘ಜನಗಣಮನ’ ಗೀತೆಯು ಭಾರತದ ವೈವಿಧ್ಯತೆಯನ್ನು ವಿವರಿಸುತ್ತದೆ. ಜ್ಯಾತ್ಯತೀತೆಯನ್ನು ಪ್ರತಿಬಿಂಬಿಸುತ್ತದೆ. ಜನಗಣಮನವು ಬಂಗಾಳಿ ಗೌರವದ ಸಂಕೇತವೂ ಆಗಿದೆ. ಆದ್ದರಿಂದಲೇ, ಬಂಗಾಳದಲ್ಲಿ ಟ್ಯಾಗೋರ್ ಅವರನ್ನು ‘ಸಾಂಸ್ಕೃತಿಕ ಐಕಾನ್’ ಎಂದೇ ಆಚರಿಸಲಾಗುತ್ತದೆ.
ಈ ಸುದ್ದಿ ಓದಿದ್ದೀರಾ? ತರ್ಕವಿಲ್ಲದ ಭಯ ʼಫೋಬಿಯಾʼ ಕುರಿತು ನಿಮಗೆಷ್ಟು ಗೊತ್ತು?
ಆದರೆ, ಕೋಮುವಾದಿ, ಜಾತಿವಾದಿ RSS ಮತ್ತು ಬಿಜೆಪಿಗರು ಕೋಮು ದ್ವೇಷ ಪ್ರಚೋದಿಸುವ ‘ವಂದೇ ಮಾತರಂ’ಗೆ ಹೆಚ್ಚು ಪ್ರಾಧಾನ್ಯತೆ ನೀಡುತ್ತಿದ್ದಾರೆ. ಮುಸ್ಲಿಮರ ವಿರುದ್ಧದ ದ್ವೇಷ ಪ್ರಚಾರಕ್ಕೂ, ಚುನಾವಣೆಯಲ್ಲಿ ಬಂಗಾಳಿ ಮತದಾರರ ಮತಗಳನ್ನು ಸೆಳೆಯುವುದಕ್ಕೂ ಬಳಿಸಿಕೊಳ್ಳುತ್ತಿದ್ದಾರೆ.
ಆದರೆ, ಚಟರ್ಜಿ ಮತ್ತು ಟ್ಯಾಗೋರ್ ಇಬ್ಬರೂ ಬಂಗಾಳದವರೇ ಆಗಿದ್ದಾರೆ. ಟ್ಯಾಗೋರ್ ಅವರ ರಾಷ್ಟ್ರಗೀತೆಯನ್ನು ಹಿಂದೆ ತಳ್ಳಿ, ಚಟರ್ಜಿ ಅವರ ವಂದೇ ಮಾತರಂ ಅನ್ನು ಮುನ್ನೆಲೆಗೆ ತರುವುದರಿಂದ ಬಂಗಾಳಿಗರು ಬಿಜೆಪಿ ಎಡೆಗೆ ವಾಲುವುದಿಲ್ಲ. ಯಾಕೆಂದರೆ, ಬಂಗಾಳಿಗರು ತಮ್ಮ ಸಾಂಸ್ಕೃತಿಕ ಐಕಾನ್ ಆಗಿ ನೋಡುತ್ತಿರುವುದು ಟ್ಯಾಗೋರ್ ಅವರನ್ನೇ ಹೊರತು, ಚಟರ್ಜಿ ಅವರನ್ನಲ್ಲ. ಹೀಗಿರುವಾಗ, ರಾಷ್ಟ್ರಗೀತೆಯನ್ನು ಹಿಂದೆ ತಳ್ಳುವುದನ್ನು ಬಂಗಾಳಿ ಜನರು ಟ್ಯಾಗೋರ್ ಅವರಿಗೆ ಬಿಜೆಪಿ ಸರ್ಕಾರ ಮಾಡಿದ ಅಪಮಾನ ಎಂದೇ ಭಾವಿಸುತ್ತಾರೆ.
ಬಿಜೆಪಿಯು ಬಂಕಿಮ್ ಚಂದ್ರ ಚಟರ್ಜಿ ಅವರನ್ನು ಬಳಸಿಕೊಂಡು ಟ್ಯಾಗೋರ್ ಅವರ ಸೆಕ್ಯುಲರ್ ಆದರ್ಶಗಳನ್ನು ಬುಡಮೇಲು ಮಾಡುತ್ತಿದೆ ಎಂಬ ಅಸಹನೆ ಬಂಗಾಳಿಗರಲ್ಲಿ ಬೇರೂರುತ್ತಿದೆ.
ಬಂಗಾಳದ ಆಡಳಿತಾರೂಢ ಟಿಎಂಸಿ ಸೇರಿದಂತೆ ಕಾಂಗ್ರೆಸ್ ಹಾಗೂ ಎಡ ಪಕ್ಷಗಳು ಮೋದಿ ಸರ್ಕಾರದ ಧೋರಣೆಯನ್ನು ಧ್ರುವೀಕರಣದ ಕುತಂತ್ರ ಎಂದು ಟೀಕಿಸಿವೆ. ಇದು ಅಸಾಂವಿಧಾನಿಕ ನಡೆಯೆಂದು ಖಂಡಿಸಿವೆ.

ಬಿಜೆಪಿಯು ಬಂಗಾಳದಲ್ಲಿ ಹಿಂದು ಮತದಾರನ್ನು ಧ್ರುವೀಕರಿಸಲು ಈ ವಿವಾದವನ್ನು ಬಳಸಿಕೊಳ್ಳುತ್ತಿದೆ ಎಂಬುದು ಸ್ಪಷ್ಟ. 2021ರ ಚುನಾವಣೆಯಲ್ಲಿ ಬಿಜೆಪಿಯು ವಂದೇ ಮಾತರಂ ಮತ್ತು ಜೈ ಶ್ರೀರಾಮ್ ಸ್ಲೋಗನ್ಗಳನ್ನು ಬಳಸಿ ಹಿಂದು ಧ್ರುವೀಕರಣ ಮಾಡಿತು. ಆದರೆ, ಟಿಎಂಸಿ ಗೆದ್ದಿತು. ಈಗ 2026ರಲ್ಲಿ, ಬಿಜೆಪಿಯು ಬಂಕಿಮ್ ಚಂದ್ರರ ಬಂಗಾಳಿ ಮೂಲವನ್ನು ಬಳಸಿಕೊಂಡು ಹಿಂದುತ್ವವನ್ನು ಬಲಪಡಿಸಲು ಪ್ರಯತ್ನಿಸುತ್ತಿದೆ. ರಾಜಕೀಯ ವಿಶ್ಲೇಷಕರು ಹೇಳುವಂತೆ, ಇದು ಚುನಾವಣಾ ಲಾಭಕ್ಕಾಗಿ ಸಾಂಸ್ಕೃತಿಕ ಸಂಕೇತಗಳನ್ನು ಬಳಸುವುದಾಗಿದೆ.
ಆದರೆ, ಬಂಗಾಳ ಜನರು ಸಾಮಾನ್ಯವಾಗಿ ಸೆಕ್ಯುಲರ್ ಮತ್ತು ಸೌಹಾರ್ದತೆಯನ್ನು ಬಯಸುವವರು. ಬಂಗಾಳಿ ಗುರುತು ಟ್ಯಾಗೋರ್ ಮತ್ತು ಅವರ ಸೆಕ್ಯುಲರ್ ಆದರ್ಶಗಳೊಂದಿಗೆ ಬೆಸೆದಿದೆ. ಹೀಗಾಗಿ, ಬಿಜೆಪಿಯ ಕುತಂತ್ರವು ವಿಫಲವಾಗಿ, ವಿರೋಧ ಪಕ್ಷಗಳಿಗೆ ಲಾಭವಾಗಬಹುದು. ಆದ್ದರಿಂದಲೇ, ಕೆಲವು ವಿಮರ್ಶಕರು ಬಿಜೆಪಿಯ ಈ ಧೋರಣೆಯನ್ನು ‘ವಿನಾಶ ಕಾಲೇ ವಿಪರೀತ ಬುದ್ಧಿ’ ಎಂದು ಬಣ್ಣಿಸಿದ್ದಾರೆ.
ಸಾಂಸ್ಕೃತಿಕವಾಗಿ ಜಾಗೃತವಾಗಿರುವ ಬಂಗಾಳದಂತಹ ರಾಜ್ಯದಲ್ಲಿ ರಾಷ್ಟ್ರಭಕ್ತಿ ಚಿಹ್ನೆಗಳ ಪ್ರಾಮುಖ್ಯತೆಯನ್ನು ರಾಜಕೀಯ ತಂತ್ರವಾಗಿ ಬಳಸಲಾಗುತ್ತಿದೆ. ಆದರೆ, ಬಂಗಾಳದ ಜನರು ಸಾಹಿತ್ಯ, ಸಂಸ್ಕೃತಿ ಮತ್ತು ಸೌಹಾರ್ದತೆಯ ಮೌಲ್ಯಗಳನ್ನು ಕಾಪಾಡಿಕೊಂಡವರು. ರವೀಂದ್ರನಾಥ ಟ್ಯಾಗೋರ್ ಅವರ ‘ಜನಗಣಮನ’ ಅವರ ಭೂಮಿಯಿಂದಲೇ ಹುಟ್ಟಿದ ಗೀತೆಯಾಗಿರುವುದರಿಂದ, ಅದು ವೈವಿಧ್ಯತೆಯಲ್ಲಿನ ಏಕತೆಯ ಸಂಕೇತವಾಗಿ ಹೆಚ್ಚು ಹತ್ತಿರವಾಗಿದೆ.
ಇನ್ನೊಂದೆಡೆ, ‘ವಂದೇ ಮಾತರಂ’ ಕುರಿತ ರಾಜಕೀಯ ವ್ಯಾಖ್ಯಾನಗಳು ಕೆಲವೊಮ್ಮೆ ಧಾರ್ಮಿಕ ಅಥವಾ ಕೋಮುದ್ವೇಷಕ್ಕೆ ದಾರಿ ಮಾಡಿಕೊಟ್ಟಿರುವುದು ಮುಚ್ಚಿಡುವ ಸಂಗತಿಯೇನಲ್ಲ. ಹಾಗಾಗಿ, ಸೌಹಾರ್ದತೆ ಮತ್ತು ಸಮಾನತೆಯನ್ನು ಮೆಚ್ಚುವ ಮತದಾರರು ಎಲ್ಲರನ್ನು ಒಳಗೊಂಡ ಸಂದೇಶ ನೀಡುವ ಗೀತೆಯತ್ತ ಹೆಚ್ಚು ಆಕರ್ಷಿತರಾಗುವ ಸಾಧ್ಯತೆಯಿದೆ.




