154 ಎಕರೆ ಭೂಮಿಯನ್ನು ಕೊಡುವುದಾಗಿ ಹೇಳಿರುವವರನ್ನಷ್ಟೇ ಸಭೆ ಕರೆಯದೆ, ಎರಡೂ ಗ್ರಾಮಗಳ ಎಲ್ಲ ರೈತರನ್ನು ಆಹ್ವಾನಿಸಿದ್ದೇಕೆ? ಎಂದು ಪ್ರಶ್ನಿಸುತ್ತಾರೆ ರೈತ ಮುಖಂಡರು.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿ ವ್ಯಾಪ್ತಿಯ 13 ಹಳ್ಳಿಗಳ 1,777 ಎಕರೆ ಭೂಮಿಯನ್ನು ಸ್ವಾಧೀನದಿಂದ ಕೈಬಿಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಘೋಷಿಸಿ ಮೂರು ತಿಂಗಳು ಕಳೆದಿವೆ. ಆದರೆ ಈವರೆಗೂ ಅಧಿಕೃತ ಆದೇಶ ಹೊರಬಿದ್ದಿಲ್ಲ. ಮತ್ತೊಂದೆಡೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ತೆರೆಮರೆಯಲ್ಲಿ ಆಟವಾಡುತ್ತಾ, ರೈತರ ಭೂಮಿ ಕಬಳಿಸಲು ಯತ್ನಿಸುತ್ತಿದೆ ಎಂಬ ಆರೋಪಗಳು ಬಂದಿವೆ.
1,190 ದಿನಗಳ ಕಾಲ ರೈತರು ನಡೆಸಿದ ಚಾರಿತ್ರಿಕ ಹೋರಾಟದ ಫಲವಾಗಿ ಭೂಸ್ವಾಧೀನವನ್ನು ಕೈಬಿಡುವುದಾಗಿ ಮುಖ್ಯಮಂತ್ರಿಯವರು ಘೋಷಿಸಿದರು. ಜುಲೈ 15ರಂದು ಸಿಎಂ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯು ರೈತಪರ ನಿಲುವು ತಾಳಿತ್ತು. ಆದರೆ ಭೂಮಿಯನ್ನು ಮಾರಲು ಸಿದ್ಧವಿರುವವರು ಸರ್ಕಾರಕ್ಕೆ ನೀಡಬಹುದು ಎಂದು ತಿಳಿಸಲಾಗಿತ್ತು.
ಇಚ್ಛೆಪಟ್ಟವರು ಭೂಮಿ ಬಿಟ್ಟುಕೊಡಬಹುದು ಎಂಬ ನೆಪದಲ್ಲಿ ತೆರೆಮರೆಯಲ್ಲಿ ರೈತರ ಭೂಮಿ ಸ್ವಾಧೀನಕ್ಕೆ ಪ್ರಯತ್ನ ನಡೆಸಲಾಗುತ್ತಿದೆ. ಹೀಗಾಗಿಯೇ ಅಧಿಕೃತವಾಗಿ ಆದೇಶ ರದ್ದು ಮಾಡದೆ, ಕಾಲ ಮುಂದೂಡಲಾಗುತ್ತಿದೆ. ರೈತರನ್ನು ಒಡೆದು ಆಳಲು ಕೈಗಾರಿಕಾ ಇಲಾಖೆ ಸಚಿವ ಎಂ.ಬಿ.ಪಾಟೀಲರು ಯತ್ನಿಸುತ್ತಿದ್ದಾರೆ ಎಂದು ಹೋರಾಟಗಾರರು ದೂರಿದ್ದಾರೆ.
ಇದನ್ನೂ ಓದಿರಿ: ಫಿಲಿಪೈನ್ಸ್ ಕೃಷಿ ವಿವಿಗಳಿಗೆ ಸಚಿವ ಎನ್ ಚಲುವರಾಯಸ್ವಾಮಿ ಭೇಟಿ: ತಜ್ಞರೊಂದಿಗೆ ವಿಚಾರ ವಿನಿಮಯ
ಈ ಸಂಬಂಧ ಪತ್ರಿಕಾಗೋಷ್ಠಿಯನ್ನು ನಡೆಸಿರುವ ಚನ್ನರಾಯಪಟ್ಟಣ ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿಯು, “ಸರ್ಕಾರ ಕೂಡಲೇ ಅಂತಿಮ ಆದೇಶ ಹೊರಡಿಸದಿದ್ದರೆ, ಮತ್ತೆ ಹೋರಾಟವನ್ನು ಆರಂಭಿಸಲಾಗುವುದು” ಎಂದು ಎಚ್ಚರಿಸಿದೆ.
“ಸರ್ಕಾರ ಕೂಡಲೇ ಭೂಸ್ವಾಧೀನ ಆದೇಶ ರದ್ದುಪಡಿಸುವ ಮೂಲಕ ರೈತರು ನೆಮ್ಮದಿಯಾಗಿ ಕೃಷಿ ಚಟುವಟಿಕೆ ನಡೆಸಲು ಅವಕಾಶ ಮಾಡಿಕೊಡಬೇಕು. ಮುಖ್ಯಮಂತ್ರಿಯವರು ಅಕ್ಟೋಬರ್ 19 ರಂದು ಜಿಲ್ಲೆಗೆ ಆಗಮಿಸುವ ಮುನ್ನ ಭೂಸ್ವಾಧೀನ ರದ್ದುಪಡಿಸಿರುವ ಆದೇಶ ಜನರ ಕೈಗೆ ಸೇರಬೇಕು” ಎಂದು ದಸಂಸ ಮುಖಂಡ ಕಾರಹಳ್ಳಿ ಶ್ರೀನಿವಾಸ್ ಆಗ್ರಹಿಸಿದ್ದಾರೆ.
ರೈತರಲ್ಲಿ ಆತಂಕವೇಕೆ?
ಮುಖ್ಯಮಂತ್ರಿಯವರ ಮಾತು ನಂಬಿ, ಹೋರಾಟ ಕೈಬಿಟ್ಟು 2 ತಿಂಗಳಾದ ಬಳಿಕ ಕೆಐಎಡಿಬಿ ಮತ್ತೊಂದು ಸುತ್ತಿನ ಪ್ರಯತ್ನವನ್ನು ಆರಂಭಿಸಿತು. ಗೋಕೆರೆ ಬಚ್ಚೇನಹಳ್ಳಿ ಮತ್ತು ಹ್ಯಾಡಾಳ ಗ್ರಾಮಗಳ ರೈತರಿಗೆ ನೋಟಿಸ್ ನೀಡಿ, ಬೆಲೆ ನಿಗದಿಗೆ ಸೆಪ್ಟೆಂಬರ್ 6ರಂದು ಸಭೆ ಕರೆದಿತ್ತು. ಸಿಟ್ಟಿಗೆದ್ದ ಎರಡು ಹಳ್ಳಿಗಳ ರೈತರು ಕೆಐಎಡಿಬಿಗೆ ಹೋಗಿ ಮುತ್ತಿಗೆ ಹಾಕಿದರು. ಹೀಗಾಗಿ ಈ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಯಿತು.
ರೈತರ ಪ್ರಶ್ನೆಗೆ ಕೆಐಎಡಿಬಿ, “ಮುಖ್ಯಮಂತ್ರಿಯವರು ಹೇಳಿದಂತೆ ನಾವು ಕೊಡುವವರ ಭೂಮಿಯನ್ನಷ್ಟೇ ತೆಗೆದುಕೊಳ್ಳುತ್ತೇವೆ. ಆ ಹಳ್ಳಿಗಳಲ್ಲಿರುವ ರೈತರು ಭೂಮಿ ಕೊಡಲು ಸಿದ್ಧವಿದ್ದಾರೆ. ಹೀಗಾಗಿ ಬೆಲೆ ನಿಗದಿಗಾಗಿ ಸಭೆ ಕರೆದಿದ್ದೇವೆ” ಎಂದಿತ್ತು. ಆದರೆ ಎಷ್ಟು ಭೂಮಿ ನೀಡಲು ರೈತರು ಸಿದ್ಧವಾಗಿದ್ದಾರೆ ಎಂದು ಕೇಳಿದಾಗ, “154 ಎಕರೆ ಜಮೀನು ಕೊಡಲು ರೈತರು ಸಿದ್ಧವಾಗಿದ್ದಾರೆ” ಎಂದಿತ್ತು. ಇದರ ಹಿಂದೆ ಕೆಐಎಡಿಬಿಯ ಲೆಕ್ಕಾಚಾರಗಳೇ ಬೇರೆಯದಿವೆ ಎನ್ನುತ್ತಾರೆ ಚೀಮಾಚನಹಳ್ಳಿಯ ರೈತರಾದ ರಮೇಶ್.
‘ಈದಿನ ಡಾಟ್ ಕಾಮ್’ಗೆ ಪ್ರತಿಕ್ರಿಯಿಸಿದ ರಮೇಶ್ ಅವರು, “ಭೂಮಿ ಕೊಡುವುದಾಗಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಸೂಕ್ಷ್ಮವಾಗಿ ನೋಡಿದರೆ ಗುಮಾನಿ ಹುಟ್ಟುತ್ತದೆ. ಸಾಕಷ್ಟು ಅರ್ಜಿಗಳನ್ನು ಒಬ್ಬರೇ ಒಬ್ಬರು ಬರೆದಿರುವಂತೆ ಕಾಣುತ್ತದೆ. ಭೂ ಸ್ವಾಧೀನ ವಿರೋಧಿ ಹೋರಾಟದೊಂದಿಗೆ ಸಂಪೂರ್ಣವಾಗಿ ಗುರುತಿಸಿಕೊಂಡಿದ್ದ ಇಬ್ಬರು ರೈತರ ಹೆಸರಲ್ಲೂ ಅರ್ಜಿ ಸಲ್ಲಿಕೆಯಾಗಿದ್ದು ಆಶ್ಚರ್ಯ ತಂದಿತ್ತು. ಇವೆಲ್ಲವೂ ಕೆಐಎಡಿಬಿ ಮೇಲೆ ಅನುಮಾನ ಹುಟ್ಟು ಹಾಕುತ್ತವೆ” ಎಂದರು.
ಮುಂದುವರಿದು, “ಬಹುಪಾಲು ಅರ್ಜಿಗಳು ನಕಲಿ ಇರಬಹುದು ಎಂದು ಅನಿಸುತ್ತದೆ. 154 ಎಕರೆ ಭೂಮಿಯನ್ನು ಕೊಡುವುದಾಗಿ ಹೇಳಿರುವವರನ್ನಷ್ಟೇ ಸಭೆ ಕರೆಯದೆ, ಎರಡೂ ಗ್ರಾಮಗಳ ಎಲ್ಲ ರೈತರನ್ನು ಆಹ್ವಾನಿಸಿದ್ದೇಕೆ? 154 ಎಕರೆಯ ನೆಪದಲ್ಲಿ 439 ಎಕರೆ ಭೂಮಿಯ ಬೆಲೆ ನಗದಿ ಮಾಡುವುದು ಆ ನೋಟಿಸ್ನ ಉದ್ದೇಶವಾಗಿತ್ತು” ಎಂದು ಹೇಳಿದರು.
ಇದನ್ನೂ ಓದಿರಿ: Ground Report | ದೆಹಲಿ ರೈತ ಚಳವಳಿ ಮಾದರಿಯಲ್ಲಿ ‘ಚನ್ನರಾಯಪಟ್ಟಣ ಭೂ ಹೋರಾಟ’; ಸರ್ಕಾರಕ್ಕೆ ಜಗ್ಗದ ದಿಟ್ಟ ಜನತೆ
ರೈತರನ್ನು ಚಿಕ್ಕಚಿಕ್ಕದಾಗಿ ಒಡೆದು, ತಮ್ಮ ಹಿತಾಸಕ್ತಿ ಮೆರೆಯಲು ಸಂಚು ರೂಪಿಸುತ್ತಿದ್ದಾರೆ. ಹೀಗಾಗಿ ರೈತರು ಮತ್ತಷ್ಟು ಗಾಬರಿಯಾಗಿದ್ದಾರೆ. ಸುಮ್ಮನೆ ಕೂತರೆ ಆಗಲ್ಲ ಎಂದು ಪ್ರತಿ ಹಳ್ಳಿಗಳಲ್ಲೂ ಸಭೆಗಳನ್ನು ನಡೆಸಲು ಮುಂದಾಗಿದ್ದಾರೆ. ಹೋರಾಟದ ಸಂದರ್ಭದಲ್ಲಿಯೇ ಎಲ್ಲ ಗ್ರಾಮಗಳ ರೈತರು ತಮ್ಮ ನಿಲುವುಗಳನ್ನು ಬರೆದುಕೊಟ್ಟಿದ್ದಾರೆ. ಹೀಗಿದ್ದರೂ ಸರ್ಕಾರ ಸಮಯವನ್ನು ದೂಡುತ್ತಿದೆ ಎಂದು ತಿಳಿಸಿದರು.
ಎಂ.ಬಿ.ಪಾಟೀಲರಿಗೆ ಮನವಿ
ಇಂದು ದೇವನಹಳ್ಳಿಯ ಹರಳೂರು ಕೈಗಾರಿಕಾ ಪ್ರದೇಶದಲ್ಲಿ ಬ್ರಿಗೇಡ್ ಫೌಂಡೇಶನ್ ಸಹಯೋಗದಲ್ಲಿ ಲಕ್ಷ ಗಿಡಗಳು ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಂ.ಬಿ.ಪಾಟೀಲರನ್ನು ರೈತರ ನಿಯೋಗ ಭೇಟಿ ಮಾಡಿತ್ತು. ಈ ಸಂದರ್ಭದಲ್ಲಿ ಸಚಿವರು ಮಾತನಾಡಿ, “ಇದಾಗಲೇ ಸರ್ಕಾರದಲ್ಲಿ ಇದು ಚರ್ಚೆಯಾಗಿದ್ದು, ದೀಪಾವಳಿ ಹಬ್ಬ ಮುಗಿದ ನಂತರ ಸಂಪೂರ್ಣ ಭೂಸ್ವಾಧೀನ ಕೈಬಿಟ್ಟು ನಂತರ ಕೊಡುವವರ ಭೂಮಿಯನ್ನು ತೆಗೆದುಕೊಳ್ಳುತ್ತೇವೆ” ಎಂದು ಹೇಳಿದ್ದಾರೆ. ಅಧಿಕೃತ ಆದೇಶ ಕೈಗೆ ಸಿಕ್ಕರಷ್ಟೇ ರೈತರಿಗೆ ವಿಶ್ವಾಸ ಮೂಡುತ್ತದೆ.





