ಬಾಂಗ್ಲಾದೇಶದ ಹಿಂದುಗಳು ತಮ್ಮ ಹಕ್ಕುಗಳಿಗಾಗಿ ಸಂಘಟಿತರಾಗಬೇಕು ಎನ್ನುವುದು ತಪ್ಪಲ್ಲ. ಆದರೆ ಇದೇ ಹೋರಾಟದ ಹಕ್ಕು ಭಾರತದ ಮುಸಲ್ಮಾನರಿಗೆ ಬಂದಾಗ, ಅದು ಶಂಕೆಯ ದೃಷ್ಟಿಯಿಂದಲೇ ಯಾಕೆ ನೋಡಲ್ಪಡುತ್ತದೆ ಎಂಬ ಪ್ರಶ್ನೆ ಅನಿವಾರ್ಯ.
ಫೆಬ್ರವರಿ 8 ರಂದು ಮುಂಬೈನಲ್ಲಿ ಆರ್ಎಸ್ಎಸ್ನ 100 ವರ್ಷಗಳ ಸಂಭ್ರಮದಲ್ಲಿ ಮಾತನಾಡುತ್ತಾ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ್ ಭಾಗವತ್ ಅವರು ಒಂದು ದೊಡ್ಡ ಹೇಳಿಕೆ ನೀಡಿದರು. “ಬಾಂಗ್ಲಾದೇಶದ ಹಿಂದು ಜನಸಂಖ್ಯೆಯು ತನ್ನ ಹಕ್ಕುಗಳಿಗಾಗಿ ನಿಂತು ಹೋರಾಡಲು ನಿರ್ಧರಿಸಿದರೆ, ತಿರುಗಿ ನಿಂತರೆ ಅವರಿಗೆ ಪ್ರಪಂಚದಾದ್ಯಂತ ಹಿಂದುಗಳ ಬೆಂಬಲ ಸಿಗುತ್ತದೆ” ಎಂದು ಹೇಳಿದ್ದಾರೆ. “ಬಾಂಗ್ಲಾದೇಶದಲ್ಲಿ ಸುಮಾರು 1.25 ಕೋಟಿ ಹಿಂದೂಗಳಿದ್ದಾರೆ. ಅವರು ಅಲ್ಲಿಯೇ ಇದ್ದು ಹೋರಾಡಲು ನಿರ್ಧರಿಸಿದರೆ, ಪ್ರಪಂಚದಾದ್ಯಂತದ ಎಲ್ಲಾ ಹಿಂದುಗಳು ಅವರಿಗೆ ಖಂಡಿತ ಸಹಾಯ ಮಾಡುತ್ತಾರೆ” ಎಂದು ಮುಂಬೈನಲ್ಲಿ ನಡೆದ ಆರ್ಎಸ್ಎಸ್ ಉಪನ್ಯಾಸ ಸರಣಿಯ ಎರಡನೇ ದಿನವನ್ನುದ್ದೇಶಿಸಿ ಮೋಹನ್ ಭಾಗವತ್ ಹೇಳಿದರು.
ಈ ಮಾತುಗಳು ವಿಶ್ವದಾದ್ಯಂತ ಸುದ್ದಿಯಾದವು. ಮೋಹನ್ ಭಾಗವತ್ ಅವರು ಹೇಳಿದಂತೆ, ಹಿಂದುಗಳು ಓಡಿಹೋಗದೆ ಅಲ್ಲಿಯೇ ನಿಂತು ಹೋರಾಡುತ್ತಿದ್ದಾರೆ ಎಂದು ಅವರು ಹೇಳಿದರು. ಅವರ ಒಗ್ಗಟ್ಟು, ರಾಜಕೀಯ ವ್ಯವಸ್ಥೆಯನ್ನು ತಮ್ಮ ಪರವಾಗಿ ಬಳಸಿಕೊಳ್ಳುವುದು ಅಗತ್ಯ ಅಂತಲೂ ಕರೆ ನೀಡಿದರು.

ಆದರೆ, ಇಲ್ಲೊಂದು ಪ್ರಶ್ನೆ ಉದ್ಭವಿಸುತ್ತದೆ. ಮೋಹನ್ ಭಾಗವತ್ ಅವರೇ, ಬಾಂಗ್ಲಾದೇಶದ ಹಿಂದುಗಳು ಹೋರಾಡಬೇಕು ಎಂದು ನೀವು ಹೇಳುತ್ತೀರಿ. ಅದು ಸರಿ. ಆದರೆ ಭಾರತದಲ್ಲಿ ಮುಸಲ್ಮಾನರು ತಮ್ಮ ಹಕ್ಕುಗಳಿಗಾಗಿ, ಅನ್ಯಾಯಕ್ಕೆ ವಿರುದ್ಧವಾಗಿ ಧ್ವನಿ ಎತ್ತಿದಾಗ ಅವರನ್ನು “ದೇಶದ್ರೋಹಿಗಳು”, “ಪಾಕಿಸ್ತಾನ ಪ್ರೀತಿಗಳು”, “ಜಿಹಾದಿಗಳು” “ಟುಕ್ಡೆ ಟುಕ್ಡೆ ಗ್ಯಾಂಗ್” ಎಂದು ಆರೋಪಿಸುತ್ತೀರಿ. ಅವರು ಮೌನವಾಗಿರಬೇಕೇ? ಅವರ ಧ್ವನಿ ಸತ್ತಂತೆ ಇರಬೇಕೇ?
ಅಲ್ಪಸಂಖ್ಯಾತರು ಹೋರಾಡುವುದು ಜನತಾಂತ್ರಿಕ ಹಕ್ಕು. ಇದು ಯಾವುದೇ ರಾಷ್ಟ್ರದ ಸಂವಿಧಾನಾತ್ಮಕ ಮೂಲಭೂತತೆಯ ಭಾಗ. ಬಾಂಗ್ಲಾದೇಶದ ಹಿಂದುಗಳು ತಮ್ಮ ಹಕ್ಕುಗಳಿಗಾಗಿ ಸಂಘಟಿತರಾಗಬೇಕು ಎನ್ನುವುದು ತಪ್ಪಲ್ಲ. ಆದರೆ ಇದೇ ಹೋರಾಟದ ಹಕ್ಕು ಭಾರತದ ಮುಸಲ್ಮಾನರಿಗೆ ಬಂದಾಗ, ಅದು ಶಂಕೆಯ ದೃಷ್ಟಿಯಿಂದಲೇ ಯಾಕೆ ನೋಡಲ್ಪಡುತ್ತದೆ ಎಂಬ ಪ್ರಶ್ನೆ ಅನಿವಾರ್ಯ.

1947ರ ವಿಭಜನೆಯ ಸಂದರ್ಭದಲ್ಲಿ ಪೂರ್ವ ಬಂಗಾಳದಲ್ಲಿ (ಈಗಿನ ಬಾಂಗ್ಲಾದೇಶ) ಹಿಂದುಗಳು ಸುಮಾರು 28% ಇದ್ದರು. 2022ರ ಜನಗಣತಿಯ ಪ್ರಕಾರ ಈಗ 7.95% ಮಾತ್ರ – ಸುಮಾರು 1.31 ಕೋಟಿ. ಅಂದರೆ 75 ವರ್ಷಗಳಲ್ಲಿ ಸಂಖ್ಯೆ ಅರ್ಧಕ್ಕೂ ಕಡಿಮೆಯಾಗಿದೆ. ದೇವಾಲಯಗಳ ಮೇಲೆ ದಾಳಿ, ಭೂಮಿ ಅಪಹರಣ, ಮಹಿಳೆಯರ ಮೇಲೆ ಅತ್ಯಾಚಾರ, ಕೊಲೆಗಳು – ಇವುಗಳು ಹೊಸ ವಿಷಯವಲ್ಲ. ಹಿಂದು ಬೌದ್ಧ ಕ್ರಿಶ್ಚಿಯನ್ ಐಕ್ಯ ಪರಿಷತ್ ಪ್ರಕಾರ 2024ರಲ್ಲಿ 2000ಕ್ಕೂ ಹೆಚ್ಚು ಘಟನೆಗಳು ನಡೆದಿವೆ. ಇದು ನಿಜ. ಆದರೆ ಇದೇ ದೇಶದಲ್ಲಿ ಮುಸಲ್ಮಾನರು ಬಹುಸಂಖ್ಯಾತರಾಗಿದ್ದರೂ ಅಲ್ಲಿ ಹಿಂದುಗಳು “ಹೋರಾಡಬೇಕು” ಎಂದು ಮೋಹನ್ ಭಾಗವತ್ ಹೇಳುತ್ತಾರೆ. ಇದು ಸರಿ.
ಭಾರತದಲ್ಲಿ ಮುಸಲ್ಮಾನರು ಸುಮಾರು 20 ಕೋಟಿಗೂ ಹೆಚ್ಚು. ಅವರು ದೇಶದ ಪ್ರಜೆಗಳು. ಆದರೆ ಕಳೆದ ಹತ್ತು ವರ್ಷಗಳಲ್ಲಿ ಮುಸ್ಲಿಂಮರ ಮೇಲೆ ಲಿಂಚಿಂಗ್, ಗೋರಕ್ಷಣೆ ಹೆಸರಲ್ಲಿ ದಾಳಿ, ಸಾಮೂಹಿಕ ಹಲ್ಲೆ, CAA-NRC ವಿರೋಧಿ ಪ್ರತಿಭಟನೆಗಳಲ್ಲಿ ಪೊಲೀಸ್ ದೌರ್ಜನ್ಯ, ಬುಲ್ಡೋಜರ್ ನ್ಯಾಯ – ಇವುಗಳು ಸಾಮಾನ್ಯವಾಗಿವೆ. ಅವರು ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತಿದಾಗ “ಅಂತರರಾಷ್ಟ್ರೀಯ ಒಳಸಂಚು”, “ಜಿಹಾದ್”, “ಪಾಪ್ಯುಲೇಷನ್ ಜಿಹಾದ್” ಎಂದು ಆರೋಪಿಸಲಾಗುತ್ತದೆ.

ಮೋಹನ್ ಭಾಗವತ್ ಅವರ ಸಂಘ ಪರಿವಾರವೇ “ಅಖಂಡ ಭಾರತ”ದ ಕನಸು ಕಾಣುತ್ತದೆ. ಆದರೆ ಬಾಂಗ್ಲಾದೇಶದಲ್ಲಿ ಹಿಂದುಗಳು ಹೋರಾಡಬೇಕು ಎಂದು ಹೇಳುವ ಅದೇ ಸಂಘ, ಭಾರತದಲ್ಲಿ ಮುಸಲ್ಮಾನರು ತಮ್ಮ ಧರ್ಮ, ಸಂಸ್ಕೃತಿ, ಹಕ್ಕುಗಳನ್ನು ರಕ್ಷಿಸಲು ಹೋರಾಡುವುದನ್ನು “ವಿಭಜನೆ” ಎಂದು ಕರೆಯುತ್ತದೆ. ಇದು ಏಕೆ?
ಒಂದು ಕಡೆ ಬಹುಸಂಖ್ಯಾತ ದೇಶದಲ್ಲಿ ಅಲ್ಲ ಸಂಖ್ಯಾತರು ಹೋರಾಡಬೇಕು ಎಂದು ಪ್ರೋತ್ಸಾಹಿಸುವುದು, ಮತ್ತೊಂದು ಕಡೆ ಹಿಂದು ಬಹುಸಂಖ್ಯಾತ ದೇಶದಲ್ಲಿ ಅಲ್ಪ ಸಂಖ್ಯಾತರು ಮೌನವಾಗಿರಬೇಕು ಎಂದು ಹೇಳುವುದು, ಇದು ನ್ಯಾಯವೇ?
ಇನ್ನೂ ದೊಡ್ಡ ಪ್ರಶ್ನೆ ಎಂದರೆ, ಅಲ್ಪಸಂಖ್ಯಾತರ ನೋವು ಗಡಿಯಿಂಧ ಗಡಿಗೆ ಬದಲಾಗುತ್ತದೆಯೇ ಎಂಬುದು. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ನಡೆದರೆ, ಅದು ಮಾನವ ಹಕ್ಕುಗಳ ಪ್ರಶ್ನೆಯಾಗುತ್ತದೆ. ಭಾರತದಲ್ಲಿ ಮುಸಲ್ಮಾನರ ಮೇಲೆ ದೌರ್ಜನ್ಯ ನಡೆದರೆ, ಅದು ಬರೀ ಘಟನೆ’ ಎಂದು ಮುಚ್ಚಿ ಹಾಕುವ ಎಲ್ಲಾ ಪ್ರಯತ್ನಗಳು ನಡೆಯತ್ತವೆ. ಅಲ್ಪಸಂಖ್ಯಾತರಿಗೆ ಹೋರಾಟದ ಹಕ್ಕು ಧರ್ಮದ ಆಧಾರದಲ್ಲಿ ಬದಲಾಗುತ್ತದೆಯೇ? ಹೌದು ಎಂದಾದರೆ, ಅದು ಸಂವಿಧಾನದ ಸೋಲು. ಇಲ್ಲ ಎಂದಾದರೆ, ಆ ಸಮಾನತೆಯನ್ನು ಎಲ್ಲರಿಗೂ ಅನ್ವಯಿಸಬೇಕು.

ಆರ್ಎಸ್ಎಸ್ನ ತತ್ವವೇ ಹಿಂದುತ್ವವನ್ನು ರಾಷ್ಟ್ರೀಯತೆಯೊಂದಿಗೆ ಗುರುತಿಸುವುದು. ಮುಸಲ್ಮಾನರನ್ನು “ಅನ್ಯ” ಎಂದು ನೋಡುವುದು ಅದರ ಮೂಲದಲ್ಲೇ ಇದೆ. ಆದ್ದರಿಂದ ಬಾಂಗ್ಲಾದೇಶದ ಹಿಂದುಗಳು “ನಮ್ಮವರು”, ಅವರ ಹೋರಾಟ “ರಾಷ್ಟ್ರೀಯ ಹೋರಾಟ”. ಆದರೆ ಭಾರತದ ಮುಸಲ್ಮಾನರು “ನಮ್ಮವರು” ಅಲ್ಲ, ಅವರ ಹೋರಾಟ “ವಿಭಜನಾವಾದ”.
ಆದರೆ ಇದು ಯಾರಿಗೂ ಒಳ್ಳೆಯದಲ್ಲ. ಬಾಂಗ್ಲಾದೇಶದಲ್ಲಿ ಹಿಂದುಗಳು ನಿಜವಾಗಿಯೂ ಭಯಭೀತರಾಗಿದ್ದಾರೆ. ಭಾರತದಲ್ಲಿ ಮುಸಲ್ಮಾನರು ಅಸುರಕ್ಷಿತರಾಗಿದ್ದಾರೆ. ಇಬ್ಬರೂ ಪ್ರಜೆಗಳು. ಇಬ್ಬರೂ ಸಮಾನ ಹಕ್ಕುಗಳನ್ನು ಹೊಂದಿದ್ದಾರೆ. ಭಾರತ ಒಂದು ಧರ್ಮಾಧಾರಿತ ರಾಷ್ಟ್ರವಲ್ಲ. ಇದು ಸಂವಿಧಾನಾಧಾರಿತ ಪ್ರಜಾಸತ್ತಾತ್ಮಕ ರಾಷ್ಟ್ರ. ಇಲ್ಲಿ ಹೋರಾಟ, ಪ್ರತಿಭಟನೆ, ಅಭಿವ್ಯಕ್ತಿ — ಎಲ್ಲವೂ ಮೂಲಭೂತ ಹಕ್ಕುಗಳು. ಭಾರತದ ಮುಸಲ್ಮಾನರು ದೇಶಕ್ಕಾಗಿ ಹೋರಾಡಿದ್ದಾರೆ, ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ್ದಾರೆ, ಸೇನೆ, ವಿಜ್ಞಾನ, ಕಲೆ, ಸಾಹಿತ್ಯ ಎಲ್ಲ ಕ್ಷೇತ್ರಗಳಲ್ಲೂ ಕೊಡುಗೆ ನೀಡಿದ್ದಾರೆ. ಆದರೂ, ಅವರ ದೇಶಭಕ್ತಿಯ ಮೇಲೆ ಸದಾ ಅನುಮಾನ.

ಮೋಹನ್ ಭಾಗವತ್ ಅವರೇ, ನೀವು ಬಾಂಗ್ಲಾದೇಶದ ಹಿಂದುಗಳಿಗೆ “ಹೋರಾಡಿ” ಎಂದು ಹೇಳಿದಂತೆ, ಭಾರತದ ಮುಸಲ್ಮಾನರಿಗೂ “ನಿಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತಿ, ಆದರೆ ಸಂವಿಧಾನದ ಚೌಕಟ್ಟಿನಲ್ಲಿ” ಎಂದು ಹೇಳೋಕೆ ಸಾಧ್ಯವಿಲ್ಲವೇ? ಅಥವಾ ಅವರು ಮೌನವಾಗಿರಬೇಕೇ? ಸಮಾಜದಲ್ಲಿ ಶಾಂತಿ ಬೇಕಾದರೆ ಎಲ್ಲರೂ ಸಮಾನರಾಗಿ ಜೀವಿಸಬೇಕು. ಒಂದು ಕಡೆ ಪ್ರೋತ್ಸಾಹ, ಮತ್ತೊಂದು ಕಡೆ ಮೌನ. ಇದೆಂಥಾ ನ್ಯಾಯ? ಅಲ್ಪ ಸಂಖ್ಯಾತರ ಹಕ್ಕುಗಳನ್ನು ರಕ್ಷಿಸುವುದು ಮುಖ್ಯ. ಆದರೆ ಅದು ಎಲ್ಲರಿಗೂ ಅನ್ವಯಿಸಬೇಕು. ಭಾರತದ ಮುಸಲ್ಮಾನರಿಗೂ ಅದೇ ಹಕ್ಕು ಇದೆ.





