ಅಟಲ್ ಕ್ಯಾಂಟೀನ್ ಹೆಸರಿನಲ್ಲಿ ಆರಂಭಗೊಂಡಿರುವ ಈ ಯೋಜನೆ, ಅಟಲ್ ಬಿಹಾರಿ ವಾಜಪೇಯಿ ಅವರ ಸ್ಮರಣೆಗಿಂತ ನರೇಂದ್ರ ಮೋದಿ ಅವರ ಪ್ರಚಾರದ ವೇದಿಕೆಯಾಗುತ್ತಿದೆ. ಯೋಜನೆಗಳಿಗೆ ಹೆಸರು ಬದಲಿಸುವುದಕ್ಕಿಂತ, ಅವುಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವುದು ಸರ್ಕಾರದ ಜವಾಬ್ದಾರಿ. ವ್ಯಕ್ತಿಪೂಜೆ ರಾಜಕಾರಣದಿಂದ ಹೊರಬಂದು, ಜನಕೇಂದ್ರಿತ ಆಡಳಿತದತ್ತ ಸರ್ಕಾರ ಸಾಗಬೇಕಿದೆ.
ಸರ್ಕಾರಗಳು ಘೋಷಣೆ ಮಾಡುವ ಸಾರ್ವಜನಿಕ ಯೋಜನೆಗಳು ಜನರ ಅನುಕೂಲಕ್ಕಿಂತ ಹೆಚ್ಚಾಗಿ ಪ್ರಚಾರದ ಸರಕಾಗಿವೆಯೇ? ಸರ್ಕಾರದ ವ್ಯಕ್ತಿಪೂಜೆಯ ವೇದಿಕೆಯಾಗಿವೆಯೇ? ಎಂಬ ಪ್ರಶ್ನೆಗಳು ಹುಟ್ಟುತ್ತವೆ. ಇತ್ತೀಚೆಗೆ, ದೆಹಲಿಯಲ್ಲಿ ಆರಂಭಗೊಂಡಿರುವ ‘ಅಟಲ್ ಕ್ಯಾಂಟೀನ್’ ಯೋಜನೆ ಇದೇ ಚರ್ಚೆಗೆ ಕಾರಣವಾಗಿದೆ. ಹೆಸರಿನಲ್ಲಿ ಅಟಲ್ ಇದ್ದರೂ, ಕ್ಯಾಂಟೀನ್ ಗೋಡೆಗಳ ಮೇಲೆ ಎಲ್ಲೆಡೆ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋಗಳೇ ರಾರಾಜಿಸುತ್ತಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆಗೆ ಕಾರಣವಾಗಿದೆ.
ಹೌದು, ಬಡವರು ಮತ್ತು ಶ್ರಮಜೀವಿಗಳ ಹಸಿವು ನೀಗಿಸುವ ಮಹತ್ವದ ಯೋಜನೆಯನ್ನು ಕರ್ನಾಟಕ ಸರ್ಕಾರ ಜಾರಿಗೆ ತಂದಿತ್ತು. ಕರ್ನಾಟಕದಲ್ಲಿ ಇಂದಿರಾ ಕ್ಯಾಂಟೀನ್ನಂತೆ ನವದೆಹಲಿಯಲ್ಲಿ ಅಟಲ್ ಕ್ಯಾಂಟೀನ್ ಜಾರಿಗೆ ತರಲಾಗಿದೆ. ಕೇವಲ 5 ರೂಪಾಯಿಗೆ ಬಡವನ ಹೊಟ್ಟೆ ತುಂಬುವಷ್ಟು ಊಟ ನೀಡಲಾಗುತ್ತಿದೆ. ದೆಹಲಿಯ ಬಿಜೆಪಿ ನೇತೃತ್ವದ ಸರ್ಕಾರ ಮಹತ್ವದ ಹೆಜ್ಜೆಯನ್ನಿಟ್ಟಿದ್ದು, 100 ಅಟಲ್ ಕ್ಯಾಂಟೀನ್ ಆರಂಭ ಮಾಡುವ ಯೋಜನೆ ಹೊಂದಿದೆ. ಅದರ ಭಾಗವಾಗಿ ಈಗ 45 ಕ್ಯಾಂಟೀನ್ಗಳಿಗೆ ಚಾಲನೆ ನೀಡಿದೆ. ಇನ್ನುಳಿದ 55 ಕ್ಯಾಂಟೀನ್ಗಳು ಮುಂದಿನ 15 ರಿಂದ 20 ದಿನಗಳಲ್ಲಿ ಆರಂಭವಾಗಲಿವೆ ಎಂದು ದೆಹಲಿ ಸಿಎಂ ರೇಖಾ ಗುಪ್ತಾ ಹೇಳಿದ್ದಾರೆ.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ, ದೆಹಲಿ ಸರ್ಕಾರ ಗುರುವಾರ ‘ಅಟಲ್ ಕ್ಯಾಂಟೀನ್’ಗಳನ್ನು ಲೋಕಾರ್ಪಣೆ ಮಾಡಿದೆ.
ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಜಾರಿಗೆ ತಂದಿದ್ದ ‘ಇಂದಿರಾ ಕ್ಯಾಂಟೀನ್‘ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದೆ. ಕೇವಲ 5ರೂಪಾಯಿಗೆ ಜನರಿಗೆ ಊಟ ನೀಡುತ್ತಿದೆ. ಬಡವರ ಪಾಲಿಗೆ ಅಕ್ಷಯಪಾತ್ರೆಯಾಗಿದೆ. ಹಾಗೇಯೇ, ಇಂದಿರಾ ಕ್ಯಾಂಟೀನ್ ವಿನ್ಯಾಸವೂ ಕೂಡ ಆಕರ್ಷಕವಾಗಿದೆ. ವಿಭಿನ್ನವಾಗಿದೆ. ಹೆಸರಿಗೆ ತಕ್ಕಂತೆ ಕ್ಯಾಂಟೀನ್ ವಿನ್ಯಾಸ ಕೂಡ ಇದೆ. ಮುಂಭಾಗ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಫೋಟೋ ಹಾಕಲಾಗಿದೆ. ಹೆಸರಿಗೆ ತಕ್ಕಂತೆ ಕ್ಯಾಂಟೀನ್ ವಿನ್ಯಾಸ ಮಾಡಲಾಗಿದೆ. ಇದು ಯೋಜನೆಯ ಸ್ಫೂರ್ತಿಯನ್ನು ಸೂಚಿಸುತ್ತದೆ. ಆದರೆ, ಅಟಲ್ ಕ್ಯಾಂಟೀನ್ ವಿನ್ಯಾಸ ಅದರ ಹೆಸರಿಗೆ ತದ್ವಿರುದ್ಧವಾಗಿದೆ. ಯಾಕೆಂದರೆ, ಈ ಕ್ಯಾಂಟೀನ್ ಎನ್ನುವುದು ಪ್ರಚಾರದ ಸರಕಾಗಿದೇಯಾ ಎಂಬ ಅನುಮಾನವನ್ನು ಹುಟ್ಟು ಹಾಕುತ್ತದೆ.
ಅಟಲ್ ಬಿಹಾರಿ ವಾಜಪೇಯಿ ಅವರು ಭಾರತೀಯ ರಾಜಕಾರಣದ ಗೌರವಾನ್ವಿತ ನಾಯಕರು. ಬಹುಜನರ ಪ್ರಿಯ ರಾಜಕಾರಣಿ. ಬಿಜೆಪಿ ಸರ್ಕಾರವು ಅವರ ಹೆಸರಿನಲ್ಲಿ ಕ್ಯಾಂಟೀನ್ ಯೋಜನೆಗೆ ಚಾಲನೆ ನೀಡಿರುವುದು ಸ್ವಾಗತಾರ್ಹವೇ. ಆದರೆ, ಯೋಜನೆಯ ಫಲಕಗಳು, ಗೋಡೆ ಬರಹಗಳು, ಬ್ಯಾನರ್ಗಳಲ್ಲಿ ಮೋದಿ ಅವರ ಫೋಟೋ ಮಾತ್ರ ಕಾಣಿಸುತ್ತಿರುವುದು ಹಲವು ಪ್ರಶ್ನೆಗಳನ್ನು ಹುಟ್ಟಿಸುತ್ತದೆ. ಅಟಲ್ ಹೆಸರಿನ ಯೋಜನೆಯಲ್ಲಿ ಅಟಲ್ ಅವರ ಒಂದೇ ಫೋಟೋ ಹಾಕಲಾಗಿದೆ. ಅದು ಕೂಡ ಚಿಕ್ಕದಾಗಿದ್ದು, ಯಾವುದೋ ಒಂದು ಮೂಲೆಯಲ್ಲಿ ಹಾಕಲಾಗಿದೆ ಎನ್ನುವಂತಿದೆ. ಈ ಫೋಟೋಗೂ ಮೋದಿಯವರ ಫೋಟೋ ಗಾತ್ರಕ್ಕೂ ತುಂಬಾನೇ ವ್ಯತ್ಯಾಸ ಇದೆ. ಇದು ಯೋಜನೆಯ ಉದ್ದೇಶದ ಗೇಲಿಗೂ ಕಾರಣವಾಗಿದೆ.
“ಇದು ಅಟಲ್ ಕ್ಯಾಂಟೀನ್ ಅಲ್ಲ, ಮೋದಿ ಕ್ಯಾಂಟೀನ್” ಎಂಬ ವ್ಯಂಗ್ಯದ ಮಾತು ಕೇಳಿಬರುತ್ತಿದೆ.
ಸಾರ್ವಜನಿಕ ಹಣದಿಂದ ನಡೆಯುವ ಯೋಜನೆಗಳು ವ್ಯಕ್ತಿಯ ಪ್ರಚಾರಕ್ಕೆ ಬಳಸಬಾರದು ಎಂಬ ಸಾಮಾನ್ಯ ಜ್ಞಾನವೂ ಕೂಡ ಕೆಲವು ರಾಜಕಾರಣಿಗಳಲ್ಲಿ ಇಲ್ಲದಾಗಿದೆ. ಆದರೆ, ಮೋದಿ ಸರ್ಕಾರದ ಬಹುತೇಕ ಯೋಜನೆಗಳಲ್ಲಿ ಪ್ರಧಾನಿ ಅವರ ಭಾವಚಿತ್ರ ಕಡ್ಡಾಯವಾಗಿ ಇರಲೇಬೇಕು ಎನ್ನುವಂತೆ ಎಲ್ಲೆಡೆ ಮೋದಿ ಅವರ ಫೋಟೋಗಳು ಬ್ಯಾನರ್ಗಳು ರಾರಾಜಿಸುತ್ತಿರುತ್ತವೆ. ಉಚಿತ ಆಹಾರ ಯೋಜನೆಗಳಿಂದ ಹಿಡಿದು, ಜನೌಷಧಿ ಕೇಂದ್ರ, ಪೆಟರೋಲ್ ಬಂಕ್, ಆರೋಗ್ಯ, ವಸತಿ ಯೋಜನೆಗಳವರೆಗೆ ಎಲ್ಲೆಡೆ ಮೋದಿ ಅವರ ಫೋಟೋ ಅನಿವಾರ್ಯವಾಗಿರುವುದು ವ್ಯಕ್ತಿಪೂಜೆ ರಾಜಕಾರಣದ ಸ್ಪಷ್ಟ ಉದಾಹರಣೆ ಎಂಬ ಆರೋಪ ಕೇಳಿಬರುತ್ತಿದೆ.
ಇದೀಗ, ನಾಮಕಾವಸ್ಥೆಗೆ ಅಟಲ್ ಕ್ಯಾಂಟೀನ್ ಹೆಸರಿಟ್ಟಿದ್ದಾರೆ ಎಂಬುದು ಎಲ್ಲೆಡೆ ಮೋದಿ ಫೋಟೋ ಜಗಮಗಿಸುವುದೇ ತಿಳಿಸುತ್ತೆ.

ಇನ್ನೊಂದು ಮಹತ್ವದ ವಿಚಾರವೆಂದರೆ, ಹಿಂದಿನ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ ಹಲವಾರು ಜನಪರ ಯೋಜನೆಗಳನ್ನು ಹೆಸರು ಬದಲಿಸಿ, ಹೊಸ ಬಣ್ಣ ಹಚ್ಚಿ ಜಾರಿಗೊಳಿಸಲಾಗುತ್ತಿದೆ ಎಂಬ ಟೀಕೆಯೂ ಕೂಡ ಮೋದಿ ಸರ್ಕಾರದ ಮೇಲಿದೆ.
ಈ ಸುದ್ದಿ ಓದಿದ್ದೀರಾ? ಕಣ್ಣೀರಲ್ಲಿ ಕರಗಿದ ಕುಸ್ತಿಪಟುಗಳ ಕನಸು: ಲೈಂಗಿಕ ಕಿರುಕುಳ ಆರೋಪಿ ಬ್ರಿಜ್ಭೂಷಣ್ಗೆ ಬಿಜೆಪಿ ‘ರಕ್ಷಾ ಕವಚ’
ಬಡವರಿಗೆ ಆಹಾರ ಯೋಜನೆಗಳು, ಆರೋಗ್ಯ ವಿಮಾ ಯೋಜನೆಗಳು, ಗ್ರಾಮೀಣ ಉದ್ಯೋಗ ಮತ್ತು ಮೂಲಸೌಕರ್ಯ ಸಂಬಂಧಿತ ಯೋಜನೆಗಳು, ಮಹಿಳೆಯರು ಮತ್ತು ಕಾರ್ಮಿಕರ ಕಲ್ಯಾಣ ಯೋಜನೆಗಳು ಇವುಗಳೆಲ್ಲವೂ ಹಿಂದಿನ ಸರ್ಕಾರಗಳ ಕಾಲದಲ್ಲೇ ಅಸ್ತಿತ್ವದಲ್ಲಿದ್ದವು. ಆದರೆ, ಇಂದಿನ ಸರ್ಕಾರ ಅವುಗಳಿಗೆ ಹೊಸ ಹೆಸರು ನೀಡಿ, ಪ್ರಧಾನಿ ಅವರ ಮುಖಚಿತ್ರದೊಂದಿಗೆ ಹೊಸ ಯೋಜನೆ ಎಂಬಂತೆ ಪ್ರಚಾರ ಮಾಡುತ್ತಿದೆ ಎಂಬ ಆರೋಪ ರಾಜಕೀಯ ವಲಯದಲ್ಲಿ ನಿರಂತರವಾಗಿದೆ.
ಅಟಲ್ ಬಿಹಾರಿ ವಾಜಪೇಯಿ ಅವರು ಬಿಜೆಪಿ ಮತ್ತು ದೇಶದ ರಾಜಕೀಯಕ್ಕೆ ನೀಡಿದ ಕೊಡುಗೆ ಅಪಾರ. ಆದರೆ, ಅವರ ಹೆಸರಿನ ಯೋಜನೆಯಲ್ಲಿ ಅವರ ಚಿತ್ರವೇ ಕಾಣಿಸುತ್ತಿಲ್ಲ. ಸ್ವಂತ ಪಕ್ಷದ ಹಿರಿಯ ನಾಯಕರನ್ನೂ ಮರೆತು, ಒಬ್ಬ ವ್ಯಕ್ತಿಯನ್ನೇ ಕೇಂದ್ರಗೊಳಿಸಲಾಗುತ್ತಿದೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ. ಇದು “ತಮ್ಮ ಪಕ್ಷದವರನ್ನೂ ಇವರು ಸೇರಿಸುವುದಿಲ್ಲ, ಇಷ್ಟಪಡುವುದಿಲ್ಲ, ಅಸೂಯೆ ಪಡುತ್ತಾರೆ” ಎಂಬ ಟೀಕೆಗೆ ಬಲ ನೀಡುತ್ತಿದೆ.
ಪ್ರಮುಖವಾಗಿ, ಅಗ್ಗದ ಬೆಲೆಯಲ್ಲಿ ಜನರಿಗೆ ಆಹಾರ ಸಿಗುವುದು ಮುಖ್ಯ. ಅದು ಯಾರ ಹೆಸರಿನಲ್ಲಿ ಬರುತ್ತಿದೆ ಎಂಬುದು ಮುಖ್ಯವಲ್ಲ. ಆದರೆ, ಸಾರ್ವಜನಿಕ ಯೋಜನೆಗಳನ್ನು ನಿರಂತರವಾಗಿ ರಾಜಕೀಯ ಪ್ರಚಾರದ ಸಾಧನವಾಗಿಸುವುದು ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ಅಪಾಯಕಾರಿಯಾಗಿದೆ. ಯೋಜನೆಯ ಉದ್ದೇಶ ಸೇವೆಯಾಗಬೇಕೇ ಹೊರತು, ವ್ಯಕ್ತಿಯ ಪ್ರಚಾರವಾಗಬಾರದು.

ಅಟಲ್ ಕ್ಯಾಂಟೀನ್ ಹೆಸರಿನಲ್ಲಿ ಆರಂಭಗೊಂಡಿರುವ ಈ ಯೋಜನೆ, ಅಟಲ್ ಬಿಹಾರಿ ವಾಜಪೇಯಿ ಅವರ ಸ್ಮರಣೆಗಿಂತ ನರೇಂದ್ರ ಮೋದಿ ಅವರ ಪ್ರಚಾರದ ವೇದಿಕೆಯಾಗುತ್ತಿದೆ. ಯೋಜನೆಗಳಿಗೆ ಹೆಸರು ಬದಲಿಸುವುದಕ್ಕಿಂತ, ಅವುಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವುದು ಸರ್ಕಾರದ ಜವಾಬ್ದಾರಿ. ವ್ಯಕ್ತಿಪೂಜೆ ರಾಜಕಾರಣದಿಂದ ಹೊರಬಂದು, ಜನಕೇಂದ್ರಿತ ಆಡಳಿತದತ್ತ ಸರ್ಕಾರ ಸಾಗಬೇಕಿದೆ. ಇಲ್ಲದಿದ್ದರೆ, ಮುಂದಿನ ದಿನಗಳಲ್ಲಿ ‘ಅಟಲ್ ಕ್ಯಾಂಟೀನ್’ ಕೂಡ ‘ಮೋದಿ ಕ್ಯಾಂಟೀನ್‘ ಆಗಿ ಬದಲಾಗುವ ದಿನ ದೂರ ಉಳಿದಿಲ್ಲ.




