ಮನುವಾದದ ಮಡಿವಂತಿಕೆ, ಜಾತಿ ವ್ಯವಸ್ಥೆ ವಿರುದ್ಧ ಸಿಡಿದೆದ್ದ ಬಂಡಾಯಗಾರ ಕನಕದಾಸ

Date:

ಮನುವಾದದ ಮಡಿವಂತಿಕೆ ಮತ್ತು ಜಾತಿ ವ್ಯವಸ್ಥೆ ವಿರುದ್ಧ ಸಿಡಿದೆದ್ದಿದ್ದ ಬಂಡಾಯಗಾರ ಕನಕದಾಸರನ್ನು ಕೇವಲ ಆಧ್ಯಾತ್ಮದ ಕನ್ನಡಿಯಲ್ಲಿ ಮಾತ್ರ ನೋಡುವವರು ಅವರೊಳಗಿನ ಹೋರಾಟದ ಕಿಚ್ಚು, ಪ್ರತಿಭಟನಾ ಮನೋಭಾವ, ಎಲ್ಲರನ್ನೂ ಒಳಗೊಳ್ಳುವ ಸಮಾನ ದೃಷ್ಟಿಕೋನ, ಮುಖ್ಯವಾಗಿ ಜಾತಿ ಸಾಮರಸ್ಯ ಎಂದಿಗಿಂತಲೂ ಇಂದು ಮುನ್ನಲೆಗೆ ಬರಬೇಕಿರುವ ಅನಿವಾರ್ಯತೆ ಇದೆ.

ಕನಕರನ್ನು ಗುಡಿಯೊಳಗೆ ಬಿಟ್ಟುಕೊಂಡರೆ ತಮ್ಮ ಜಾತಿ ಶ್ರೇಷ್ಠತೆ ಕೆಟ್ಟುಹೋಗುವುದೆಂಬ ವೈದಿಕರ ದುರಾಲೋಚನೆ ಒಂದುಕಡೆ ಇದ್ದರೆ; ಬಸವಣ್ಣ, ಜ್ಯೋತಿಬಾ ಫುಲೆ, ಕುವೆಂಪು, ಅಂಬೇಡ್ಕರ್, ಶರೀಫರಂತಹ ಮಹನೀಯರು ಜಾತಿ ವಿಷಬೀಜವನ್ನು ಕಿತ್ತು ಬಿಸಾಕಲು ಪ್ರಯತ್ನಿಸಿದಂತೆ ಕನಕದಾಸರ ಹೋರಾಟ ಮತ್ತು ಪ್ರತಿಭಟನೆ ಉಚ್ಛ-ನೀಚವೆಂಬ ವ್ಯವಸ್ಥೆ ವಿರುದ್ಧ ಹುಟ್ಟಿಕೊಂಡಿತು. ಕನಕದಾಸ ಶೂದ್ರ ಸಮುದಾಯಕ್ಕೆ ಸೇರಿದ್ದ ಕಾರಣ ಉತ್ತಮರೆನಿಸಿಕೊಂಡವರು ಕನಕನನ್ನು ತಮ್ಮ ಗುಡಿಯೊಳಗೆ ಬಿಟ್ಟುಕೊಳ್ಳದ ಪರಿಣಾಮ, ಅವರಿಗೆ ಬಂಡಾಯ ಅನಿವಾರ್ಯವಾಗುತ್ತದೆ.

ಕನಕರ ಕಾಲದಲ್ಲಿ ಉಡುಪಿಯಲ್ಲಿದ್ದ ಬಹುತೇಕರು ತಳಸಮುದಾಯಕ್ಕೆ ಸೇರಿದ್ದರು. ಕನಕ ಎಲ್ಲರಿಗೂ ಸಿಗುವ ನ್ಯಾಯಕ್ಕಾಗಿ ಹೋರಾಡುತ್ತಾನೆ. ತುಳಿತಕ್ಕೆ ಒಳಗಾದವರೆಲ್ಲ ಕನಕರ ಪ್ರತಿಭಟನೆಗೆ ಮತ್ತಷ್ಟು ಆನೆಬಲ ತಂದುಕೊಡುತ್ತಾರೆ. ವೈದಿಕರು ದೇವಸ್ಥಾನದೊಳಗೆ ಬಿಟ್ಟುಕೊಳ್ಳದೇ ಇದ್ದಾಗ; ‘ಹುಟ್ಟದ ಯೋನಿಗಳಿಲ್ಲ, ಮೆಟ್ಟದ ಭೂಮಿಗಳಿಲ್ಲ, ಅಟ್ಟು ಉಣ್ಣದ ವಸ್ತುಗಳಿಲ್ಲ’ ಎನ್ನುವ ಮೂಲಕ ಮುಟ್ಟಿಸಿಕೊಳ್ಳದವರ ವಿರುದ್ಧ ತಮ್ಮ ಕ್ರಾಂತಿಕಾರಿ ವಿಚಾರಗಳನ್ನು ಹೊರಹಾಕಿದ್ದರು. ‘ಸಕಲ ಜೀವಾತ್ಮರಿಗೂ ಲೇಸ ಬಯಸುವಾತನೇ ಕುಲಜನು’ ಎನ್ನುವ ಶರಣರ ಸಂದೇಶವನ್ನು ಕನಕದಾಸರಲ್ಲಿ ನಾವು ಕಾಣಬಹುದು. ‘ಕುಲ ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ, ಕುಲದ ನೆಲೆಯನೇನಾದರೂ ಬಲ್ಲಿರಾ ಬಲ್ಲಿರಾ?’ ಎಂದು ಜಾತಿವಾದಿಗಳನ್ನು ನೇರವಾಗಿಯೇ ತರಾಟೆಗೆ ತೆಗೆದುಕೊಂಡಿದ್ದ ಧೀಮಂತ ಸಂತ ಕನಕ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
IMG 20241118 093315

ಮನುಷ್ಯರನ್ನು ಕಂಡರೆ ಕಪ್ಪೆಯಂತೆ ಜಿಗಿದು ದೂರ ಸರಿಯುತ್ತಿದ್ದ ಭೂಲೋಕದ ಸುರರು ಎನಿಸಿಕೊಂಡವರನ್ನು ‘ಆತ್ಮ ಯಾವ ಕುಲ, ಜೀವ ಯಾವ ಕುಲ?’ ಎಂದು ತಮ್ಮ ಮಾತಿನ ಮೂಲಕವೇ ಚಾಟಿ ಬೀಸಿದ್ದರು. ‘ಕೆಸರೊಳು ತಾವರೆ ಪುಟ್ಟಲು ಅದ ತಂದು, ಬಿಸಜನಾಭನಿಗರ್ಪಿಸಲಿಲ್ಲವೆ?, ಹಸುವಿನ ಮಾಂಸದೊಳುತ್ಪತ್ತಿ ಕ್ಷೀರವು, ವಸುಧೆಯೊಳಗೆ ಭೂಸುರರುಣ್ಣಲಿಲ್ಲವೆ?’ ಎಂದು ಪ್ರಶ್ನಿಸುವ ಮೂಲಕ ಕೋಮುವಾದಿಗಳ ಅಜ್ಞಾನಕ್ಕೆ ಕನ್ನಡಿ ಹಿಡಿದಿದ್ದರು.

ಕನಕದಾಸ ಮೂಲತಃ ತಿಮ್ಮಪ್ಪ: ಬೆಳೆಯುತ್ತ ಪಾಠ, ಪ್ರವಚನ, ಸಂಗೀತ, ಸಾಹಿತ್ಯ, ತತ್ವಜ್ಞಾನ, ವ್ಯಾಕರಣ, ನಿರಂತರ ಅಧ್ಯಯನದ ನಂತರ ಕತ್ತಿವರಸೆ, ಕೋಲುವರಸೆಗಳನ್ನು ಕಲಿತು 15ನೇ ವಯಸ್ಸಿನಲ್ಲಿಯೇ ಅಪಾರ ರಾಜ್ಯಪಾಲನೆಯ ಧೀರತನ, ಗುರು-ಹಿರಿಯರ ಪ್ರೀತಿ ಗಳಿಸಿಕೊಂಡನು. ತಮ್ಮ ತಂದೆ ಭೀರಪ್ಪನಾಯಕರ ಮರಣಾನಂತರ ಅವರ ಸ್ಥಾನವನ್ನು ಮಂಡಲಿಯ ಜವಾಬ್ದಾರಿ ಹೊರುವಷ್ಟು ಸಾಮರ್ಥ್ಯವಿಲ್ಲದಿದ್ದರೂ ತಾಯಿ ಬಚ್ಚಮ್ಮದೇವಿ ತೀರ್ಮಾನಿಸಿ ತಿಮ್ಮಪ್ಪನಿಗೆ ಮೌಲ್ಯಯುತ ಪಾಳೆಗಾರಿಕೆಯ ಉಸ್ತುವಾರಿಯ ಮಹಾದಂಡನಾಯಕನ ಪಟ್ಟ ಕಟ್ಟುತ್ತಾರೆ. ತಿಮ್ಮಪ್ಪನಾಯಕನು ತೆರಿಗೆ, ಕಂದಾಯ, ರೈತರ ಹಿತರಕ್ಷಣೆ, ಅಧಿಕಾರಿಗಳ ಮತ್ತು ಸಿಬ್ಬಂದಿ ವರ್ಗಗಳ ಸೇವಾ ನಿಷ್ಠೆಗಳನ್ನು ಕಟ್ಟುನಿಟ್ಟಿನಿಂದ ಜಾಗೃತಗೊಳಿಸಿ ತಂದೆಗಿಂತಲೂ ಪ್ರಬಲ ಮಹಾ ಮಾಂಡಲಿಕನಾಗಿ ವಿಜಯನಗರದ ಅರಸರ ಪ್ರೀತಿಗೆ ಪಾತ್ರನಾದನು.

ಒಮ್ಮೆ ತಿಮ್ಮಪ್ಪನಾಯಕನು ಬಾಡ ಗ್ರಾಮದ ಹತ್ತಿರ ದೂರದಿಂದ ಬರುವ ಶತೃಗಳ ಹಾಗು-ಹೋಗುಗಳನ್ನು ವಿಕ್ಷಿಸುವ ಸಲುವಾಗಿ ಎತ್ತರದ ವೀಕ್ಷಣಾ ಗೋಪುರ(ಬುರುಜು)ವನ್ನು‌ ಕಟ್ಟಿಸಲು ನೆಲವನ್ನು ಅಗೆಸುತ್ತಿರಬೇಕಾದರೆ ಅಪಾರ ಪ್ರಮಾಣದ ದೊಡ್ಡ-ದೊಡ್ಡ ಪಾತ್ರೆ(ಕೊಪ್ಪರಿಗೆ)ಗಳಲ್ಲಿ ಕನಕಾಭರಣ, ವಜ್ರ-ವೈಢೂರ್ಯ, ಬಂಗಾರದ ನಿಧಿ ಮತ್ತು ಧನವು ಸಿಗುತ್ತದೆ. ಅದನ್ನೆಲ್ಲ ಹೊರತೆಗೆಸಿ ಖನಿಜಶಾಸ್ತ್ರದ ಪ್ರಕಾರ ಪರಿಶೀಲಿಸಿ, ರಸವಾದದ ಪ್ರಕಾರ ದೃಢೀಕರಿಸಿ ಅರಮೆನೆಗೆ ತಂದು ತನ್ನ ಪರಿವಾರದ ಗುರು-ಹಿರಿಯರ ಸಲಹೆಯೊಂದಿಗೆ ಚರ್ಚಿಸಿದ ನಂತರ ಅದರ ಬಹುಭಾಗವನ್ನು ತನ್ನ ಪ್ರದೇಶದ ಮಾಂಡಲಿಕ ಗ್ರಾಮಗಳ ಬಡಜನರಿಗೆ ನಿರಾಳ ಮನಸ್ಸಿನಿಂದ ಹಂಚುತ್ತಾನೆ. ಎಲ್ಲ ಜನರು ಬಹಳ ಪರಮಾನಂದ ಹೊಂದಿ ಮಹಾಮಾಂಡಲಿಕ ತಿಮ್ಮಪ್ಪನಾಯಕನನ್ನು ಕನಕನಾಯಕನೆಂದು ಕರೆಯುತ್ತಾರೆ.

IMG 20241118 093111

ಕೆಲದಿನಗಳ ನಂತರ ಕನಕನಾಯಕ ತನ್ನ ರಾಜ ಉಡುಪುಗಳನ್ನು ತೆಗೆದು ಪ್ರಧಾನಿಗಳಿಗೆ ಅರ್ಪಿಸಿ, ತನ್ನೆಲ್ಲ ಸಕಲ ಸಂಪತ್ತನ್ನು ಪ್ರಜಾ ಸಮೂಹಕ್ಕೆ ಹಂಚಿ ದಾನಮಾಡಿ ಸಾಮಾನ್ಯನಂತೆ ಒಂದು ಧೋತುರ, ಹೆಗಲಿಗೊಂದು ಕರಿ ಕಂಬಳಿ ಹಾಕಿಕೊಂಡು ಕೈಯಲ್ಲಿ ಏಕತಾರಿ ಹಿಡಿದು ಸಮಾಜಕ್ಕೆ ಅಂಟಿಕೊಂಡ ಜಾತಿಯೆಂಬ ರೋಗವನ್ನು ಹೊಡೆದೋಡಿಸಲು ಮುಂದಾಗುತ್ತಾರೆ.

ನಡೆಯುವ ನೆಲವೊಂದೆ, ಕುಡಿಯುವ ನೀರೊಂದೆ, ಎಲ್ಲರ ದೇಹದಲ್ಲಿ ಹರಿದಾಡುವ ರಕ್ತವೂ ಒಂದೇ ಬಣ್ಣವಾಗಿರುವಾಗ ಕುಲವ್ಯಾಕೆ ಮಧ್ಯದಲ್ಲಿ?! “ಕಾಸಿ ಕಮ್ಮಾರನಾದ, ಬೀಸಿ ಮಡಿವಾಳನಾದ, ಹಾಸನಿಕ್ಕಿ ಸಾಲಿಗನಾದ, ವೇದವನೊಂದಿ ಹಾರುವನಾದ” ಅನ್ನುವ ಶರಣವಾಣಿಯಂತೆ ಕನಕ ತಮ್ಮ ವಿಚಾರಗಳನ್ನು ವ್ಯಕ್ತಪಡಿಸುತ್ತಾರೆ. ಕನಕದಾಸರನ್ನು ಕಂಡರೆ ವಿದ್ವಾಂಸ, ಪಂಡಿತ, ಬ್ರಾಹ್ಮಣ ವೃಂದವೇ ದೂರ ಸರಿಯುವುದು ಎಂಬ ವಾರ್ತೆಗಳನ್ನು ಕೇಳಿದ ಕುರುಬ ಜನಾಂಗವು ತಮ್ಮ ಕುಲದೇವತೆ ಜಾತ್ರೆಗೆ ಅವರನ್ನು ಕರೆತರಬೇಕೆಂದು ವಿಜಯನಗರದಲ್ಲಿದ್ದ ಕನಕದಾಸರನ್ನು ಸುರಾದೇವಿ ಜಾತ್ರೆಗೆ ಬರಲು ಬಂದು ಭಿನ್ನವಿಸಿಕೊಳ್ಳುತ್ತಾರೆ.

ಜನರು ಸಾರಾಯಿಯನ್ನು‌ ಕುಡಿದೇ ಈ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ಒಂದೊಂದು ತಲೆಮಾರಿಗೂ ತಮ್ಮ‌ ಮನೆಯ ಒಂದು‌ ಕನ್ಯೆಯನ್ನು ದಾನಮಾಡಿ ಆಕೆಗೆ ದೇವದಾಸಿ ಪಟ್ಟ ಕಟ್ಟಿಬಿಡುತ್ತಿದ್ದರು. ಈ ದೇವದಾಸಿಯರು ದೇವಾಲಯದಲ್ಲಿ ಮತ್ತು ಮಂಟಪಗಳಲ್ಲಿ ನೃತ್ಯ, ಗಾಯನ ಮಾಡಿಕೊಂಡು ಕಾಲ ಕಳೆಯಬೇಕಿತ್ತು. ಬರುವಂತಹ ಪೂಜಾರಿಗಳ ಹಾಗೂ ಭಕ್ತರ ಕಾಮ ತೃಪ್ತಿಗೊಳಿಸಬೇಕಿತ್ತು. ಇದೊಂದು ರೀತಿಯಲ್ಲಿ ವೈಶ್ಯಾ ವೃತ್ತಿಯೇ ಆಗಿತ್ತು. ಇಂತಹ ದೇವದಾಸಿಯರನ್ನು ಪುರುಷರು ನಿಸ್ಸಂಕೋಚವಾಗಿ ತಮಗಿಷ್ಟಬಂದಂತೆ ಬಳಸಿಕೊಳ್ಳುತ್ತಿದ್ದರು.

ಸುರಾಪಾನ, ವೈಶ್ಯಾವಾಟಿಕೆಯಂತಹ ಅನಿಷ್ಟಗಳನ್ನು ತೊಲಗಿಸಬೇಂಕೆಂದು ಕನಕದಾಸರು ತಮ್ಮ ಕೈಲಾದ ಪ್ರಯೋಗಗಳನ್ನು ಮಾಡುವಲ್ಲಿ ಮುಂದಾಗಿ, ‘ಯಕ್ಕಾನಾತಿಯರ ಕಾಟ ಜೋಗಿಯರು ಕನ್ಯೆಯರು, ಬೆತ್ತಲೆ ಬಾಗಿಲೊಳನಿಂತ ಭೈರೇದೇವರು, ಮತ್ತೆ ಮಾರಿಮಾಸೆಣೆ ದುರ್ಗಿ ಮೈಲಾರಿ ಮೊದಲಾದ, ಈ ಠಕ್ಕ ದೈವದ ಗೊಡವೇಬೇಡಿ ನರಕ ತಪ್ಪದೋ’ ಎಂದು ಹಾಡಿದ ಕನಕರು, ಸುರೆ ಕುಡಿಯುವುದರಿಂದಾಗುವ ಅನಾಹುತ, ಬಡತನ, ಅಜ್ಞಾನ, ಅನಕ್ಷರತೆ, ಹೆಚ್ಚು ಅನಾರೋಗ್ಯ, ದೇವದಾಸಿ(ವೈಶ್ಯಾವಾಟಿಕೆ) ಪದ್ದತಿಯಿಂದ ಸ್ತ್ರೀ ಕುಲಕ್ಕೆ ಬರುವಂತ ಕಳಂಕ, ಅದರಿಂದ ಸಂಸಾರದ ಮೇಲಾಗುವ ದುಷ್ಪರಿಣಾಮಗಳನ್ನು ತಿಳಿಸಿದ್ದರು.

ಇಂತಹ ಅನಾಚಾರ, ಮೌಢ್ಯಾಚಾರಗಳನ್ನು ಮಾಡಿಸಿಕೊಳ್ಳುವ ದೇವರು ಅದೆಂಥ ದೇವರೋ! ಎಂದು ಜನಗಳಲ್ಲಿ ಗಟ್ಟಿಯಾಗಿ ಕುಳಿತಿದ್ದ ಅಂಧಕಾರ, ಅಸಮಾನತೆ, ಅನೀತಿ ಮತ್ತು ಮೌಢ್ಯತೆ ತೊಲಗಿಸುವ ಸಲುವಾಗಿ ನಾವುಗಳೇ ಮುಂದಾಗಬೇಕೆಂದು ಎಲ್ಲರಿಗೂ ಕನಕದಾಸರು ಉಪದೇಶ ನೀಡಿದರು. ಅದರ ಪರಿಣಾಮದಿಂದ ಅದೆಷ್ಟೋ ಜನ ಬದಲಾದರು. ಇಂತಹ ಕನಕರನ್ನು ಪಡೆದ ಕನ್ನಡಿಗರಾದ ನಾವು ಧನ್ಯರು ಮತ್ತು ಅವರನ್ನು ಒಂದು ಜಾತಿ, ಸಮುದಾಯಕ್ಕೆ ಸೀಮಿತಗೊಳಿಸುವ ವಿಚಾರದಿಂದ ನಾವು ಹೊರಬರಬೇಕಿದೆ.

WhatsApp Image 2024 09 06 at 11.32.31 a95e9ba6
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...