ಚುನಾವಣಾ ಆಯೋಗವು "ಬಿಜೆಪಿಯ ಕೈಗೊಂಬೆಯಂತೆ" ವರ್ತಿಸುತ್ತಿದೆ ಎಂದು ಟೀಕಿಸಿದೆ. ಪಶ್ಚಿಮ ಬಂಗಾಳದ ಮೊದಲ ಮುಖ್ಯ ಕಾರ್ಯದರ್ಶಿ ನಂದಿನಿ ಚಕ್ರವರ್ತಿ. ಈ ವರ್ಷದ ಆರಂಭದಲ್ಲಷ್ಟೇ ನೇಮಕಗೊಂಡಿದ್ದಾರೆ. ಇದೀಗ ಅಲ್ಪಾವಧಿಯಲ್ಲಿಯೇ ಸ್ಥಾನದಿಂದ ತೆಗೆದುಹಾಕಿರುವುದು ಮಹಿಳಾ ಸಬಲೀಕರಣಕ್ಕೆ ವಿರುದ್ಧವಾದ ನಡೆ ಎಂದು ಟಿಎಂಸಿ ನಾಯಕರು ವಾದಿಸುತ್ತಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಮುಂದಿನ ತಿಂಗಳೇ ಎರಡು ಹಂತಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಇದಕ್ಕೂ ಮುನ್ನವೇ ಚುನಾವಣಾ ಆಯೋಗವು ಹೊಸ ಮುಖ್ಯ ಕಾರ್ಯದರ್ಶಿಯಾಗಿ ದುಷ್ಯಂತ್ ನರಿಯಾಲ ಅವರನ್ನು ನೇಮಿಸುವಂತೆ ಆದೇಶಿಸಿದೆ. ಈವರೆಗೆ ರಾಜ್ಯ ಮುಖ್ಯ ಕಾರ್ಯದರ್ಶಿ ನಂದಿನಿ ಚಕ್ರವರ್ತಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ ಕಳೆದ ಕೆಲವು ತಿಂಗಳುಗಳಲ್ಲಿ ಹಲವಾರು ಸಂದರ್ಭಗಳಲ್ಲಿ ಆಯೋಗದ ನಿರ್ದೇಶನಗಳನ್ನು ಪಾಲಿಸಿಲ್ಲ. ವಿಶೇಷವಾಗಿ ನಾಲ್ವರು ಚುನಾವಣಾ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸುವಲ್ಲಿ ವಿಳಂಬ ಮತ್ತು ಇತರ ಆಡಳಿತಾತ್ಮಕ ವಿಳಂಬಗಳನ್ನು ಮಾಡಿದ್ದಾರೆ ಎಂದು ಕಾರಣ ನೀಡಿ ಚುನಾವಣಾ ಆಯೋಗವು ಈ ಕ್ರಮವನ್ನು ಕೈಗೊಂಡಿದೆ.
ಈ ಸಂಬಂಧ ಭಾನುವಾರ ರಾತ್ರಿಯೇ ರಾಜ್ಯ ಸರ್ಕಾರಕ್ಕೆ ಪತ್ರ ಕಳುಹಿಸಲಾಗಿದ್ದು, ಸಂಘಮಿತ್ರ ಘೋಷ್ ಅವರನ್ನು ಗೃಹ ಮತ್ತು ಗಿರಿ ವ್ಯವಹಾರಗಳ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸುವಂತೆ ಚುನಾವಣಾ ಪ್ರಾಧಿಕಾರ ನಿರ್ದೇಶಿಸಿದೆ. ಹಾಗೆಯೇ, “ವರ್ಗಾವಣೆಗೊಂಡ ಅಧಿಕಾರಿಗಳನ್ನು ಚುನಾವಣೆಗಳು ಪೂರ್ಣಗೊಳ್ಳುವವರೆಗೆ ಯಾವುದೇ ಚುನಾವಣೆಗೆ ಸಂಬಂಧಿಸಿದ ಹುದ್ದೆಗಳಲ್ಲಿ ನಿಯೋಜಿಸಬಾರದು” ಎಂದೂ ಒತ್ತಿ ಹೇಳಿದೆ.
ಇದನ್ನು ಓದಿದ್ದೀರಾ? SIR | ಪಶ್ಚಿಮ ಬಂಗಾಳದ 7 ಅಧಿಕಾರಿಗಳನ್ನು ಅಮಾನತುಗೊಳಿಸಿದ ಚುನಾವಣಾ ಆಯೋಗ
ರಾಜ್ಯದಲ್ಲಿ ಏಪ್ರಿಲ್ 23 ಮತ್ತು 29ರಂದು ವಿಧಾನಸಭಾ ಚುನಾವಣೆ ನಡೆಯಲಿದ್ದು, ಮೇ 4 ರಂದು ಮತ ಎಣಿಕೆ ನಡೆಯಲಿದೆ. ಈಗಾಗಲೇ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಮತ್ತು ಬೂತ್ ಮಟ್ಟದ ಅಧಿಕಾರಿಗಳಿಗೆ ಸಂಭಾವನೆ ಸೇರಿದಂತೆ ವಿವಿಧ ವಿಷಯಗಳ ಕುರಿತು ತೃಣಮೂಲ ಕಾಂಗ್ರೆಸ್ ಸರ್ಕಾರ ಮತ್ತು ಚುನಾವಣಾ ಆಯೋಗದ ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ. ಇವೆಲ್ಲವುದರ ನಡುವೆ ಇದೀಗ ಮುಖ್ಯ ಕಾರ್ಯದರ್ಶಿ ಬದಲಾಯಿಸಿರುವುದು ತೀವ್ರ ವಿರೋಧಕ್ಕೆ ಕಾರಣವಾಗಿದೆ.
ಚುನಾವಣಾ ಆಯೋಗವು “ಬಿಜೆಪಿಯ ಕೈಗೊಂಬೆಯಂತೆ” ವರ್ತಿಸುತ್ತಿದೆ ಎಂದು ಟೀಕಿಸಿದೆ. ಪಶ್ಚಿಮ ಬಂಗಾಳದ ಮೊದಲ ಮಹಿಳಾ ಮುಖ್ಯ ಕಾರ್ಯದರ್ಶಿ ನಂದಿನಿ ಚಕ್ರವರ್ತಿ. ಈ ವರ್ಷದ ಆರಂಭದಲ್ಲಷ್ಟೇ ನೇಮಕಗೊಂಡಿದ್ದಾರೆ. ಇದೀಗ ಅಲ್ಪಾವಧಿಯಲ್ಲಿಯೇ ಸ್ಥಾನದಿಂದ ತೆಗೆದುಹಾಕಿರುವುದು ಮಹಿಳಾ ಸಬಲೀಕರಣಕ್ಕೆ ವಿರುದ್ಧವಾದ ನಡೆ ಎಂದು ಟಿಎಂಸಿ ನಾಯಕರು ವಾದಿಸುತ್ತಿದ್ದಾರೆ. ಚುನಾವಣಾ ಸಮಯದಲ್ಲಿ ಮಹಿಳಾ ಅಧಿಕಾರಿಯನ್ನು ಗುರಿಯಾಗಿಸಿಕೊಂಡಿರುವುದು ಸರಿಯಲ್ಲ ಎಂದಿದ್ದಾರೆ.
ಮುಖ್ಯ ಕಾರ್ಯದರ್ಶಿ ದುಷ್ಯಂತ್ ನರಿಯಾಲ ಯಾರು?
1993ರ ಬ್ಯಾಚ್ನ ಪಶ್ಚಿಮ ಬಂಗಾಳ ಕೇಡರ್ನ ಐಎಎಸ್ ಅಧಿಕಾರಿ ದುಷ್ಯಂತ್ ನರಿಯಾಲ ದೀರ್ಘಕಾಲದಿಂದ ಪಶ್ಚಿಮ ಬಂಗಾಳ ಸರ್ಕಾರದ ವಿವಿಧ ಪ್ರಮುಖ ಇಲಾಖೆಗಳಲ್ಲಿ ಉನ್ನತ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಆಡಳಿತಾತ್ಮಕವಾಗಿ ಅತ್ಯಂತ ಅನುಭವ ಹೊಂದಿರುವ ಅಧಿಕಾರಿಗಳಲ್ಲಿ ಒಬ್ಬರು.
ಇದನ್ನು ಓದಿದ್ದೀರಾ? ಪಶ್ಚಿಮ ಬಂಗಾಳ | ಮುಸ್ಲಿಮರ ಓಲೈಕೆಗೆ ಬಿಜೆಪಿ ತಂತ್ರ-ಕುತಂತ್ರ
ಈ ಹಿಂದೆ ಉತ್ತರ ಬಂಗಾಳ ಅಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದರು. ಗೂರ್ಖಾಲ್ಯಾಂಡ್ ಪ್ರಾದೇಶಿಕ ಆಡಳಿತದ (GTA) ಪ್ರಧಾನ ಕಾರ್ಯದರ್ಶಿಯಾಗಿ ಹೆಚ್ಚುವರಿ ಜವಾಬ್ದಾರಿಯನ್ನು ಹೊತ್ತಿದ್ದರು. ಹಾಗೆಯೇ ವಿಪತ್ತು ನಿರ್ವಹಣೆ, ನಾಗರಿಕ ರಕ್ಷಣೆ ಮತ್ತು ಶಾಲಾ ಶಿಕ್ಷಣ ಇಲಾಖೆಗಳಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಕೇಂದ್ರ ನಿಯೋಜನೆಯಲ್ಲೂ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಇದೀಗ ಚುನಾವಣೆಗೂ ಮುನ್ನ ರಾಜ್ಯದ ಮುಖ್ಯ ಕಾರ್ಯದರ್ಶಿಯಾಗಿ ನೇಮಕ ಮಾಡಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ.
ಚುನಾವಣೆ ನಿಷ್ಪಕ್ಷಪಾತವಾಗಿ ನಡೆಯುವಂತೆ ನೋಡಿಕೊಳ್ಳಲು ಈ ಕ್ರಮಕೈಗೊಂಡಿದೆ ಎಂದು ಆಯೋಗ ಹೇಳಿದರೂ, ಆಯೋಗ ಬಿಜೆಪಿ ಕೈಗೊಂಬೆಯೇ ಎಂಬ ಚರ್ಚೆ ಶುರುವಾಗಿದೆ. ಈ ನೇಮಕವನ್ನು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಟೀಕಿಸಿದೆ. ಚುನಾವಣಾ ಆಯೋಗವು ಕೇಂದ್ರದ ಅಣತಿಯಂತೆ ಅಥವಾ ಬಿಜೆಪಿ ಪರವಾಗಿ ಕೆಲಸ ಮಾಡುತ್ತಿದೆ ಎಂಬುದು ಟಿಎಂಸಿ ವಕ್ತಾರರ ಆರೋಪ. ಇದು ಕೆಲವೆಡೆ ಸಾಬೀತೂ ಆಗಿದೆ. ಇದೀಗ ದುಷ್ಯಂತ್ ನರಿಯಾಲ ಬಿಜೆಪಿಯ ಕೈಗೊಂಬೆಯಾಗುತ್ತಾರೆಯೇ? ಚುನಾವಣಾ ಅವಧಿಯಲ್ಲಿ ನರಿಯಾಲ ಕೈಗೊಳ್ಳುವ ಭದ್ರತಾ ವ್ಯವಸ್ಥೆ, ಅಧಿಕಾರಿಗಳ ವರ್ಗಾವಣೆ ಮತ್ತು ಚುನಾವಣಾ ದೂರುಗಳ ವಿಲೇವಾರಿ ಹೇಗಿರುತ್ತದೆ ಎಂಬುದರ ಮೇಲೆಯೇ ಅವರು ನಿಷ್ಪಕ್ಷಪಾತರೇ ಎಂದು ಅಳೆಯಬೇಕಷ್ಟೆ.





