ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧವು ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿರುವ ಹಿನ್ನೆಲೆ ಅದರ ಪರಿಣಾಮಗಳು ಜಾಗತಿಕ ಮಟ್ಟದಲ್ಲಿ ಆರ್ಥಿಕತೆಯನ್ನು ಹಿಂಡಿ ಹಿಪ್ಪೆ ಮಾಡುತ್ತಿವೆ. ಈ ಸಂಘರ್ಷದ ನೇರ ಮತ್ತು ಪರೋಕ್ಷ ಪರಿಣಾಮಗಳಿಂದ ಭಾರತವೂ ತತ್ತರಿಸುತ್ತಿದೆ. ಮುಖ್ಯವಾಗಿ LPG ಅಭಾವದಿಂದಾಗಿ ಹೋಟೆಲ್ ಉದ್ಯಮಕ್ಕೆ ಭಾರೀ ಹೊಡೆತ ಬೀಳುತ್ತಿದೆ.
ಭಾರತ ತನ್ನ ತೈಲ ಮತ್ತು ಅನಿಲ ಅಗತ್ಯಗಳ ಬಹುಪಾಲನ್ನು ಗಲ್ಫ್ ರಾಷ್ಟ್ರಗಳಿಂದ ಪೂರೈಸಿಕೊಳ್ಳುತ್ತದೆ. ಆದರೆ ಯುದ್ಧ ಪರಿಸ್ಥಿತಿ, ಸಾಗಣೆ ಮಾರ್ಗಗಳ ಅಸ್ತವ್ಯಸ್ತತೆ ಮತ್ತು ಭದ್ರತಾ ಆತಂಕಗಳ ಹಿನ್ನೆಲೆಯಲ್ಲಿ ತೈಲ ಹಾಗೂ ಅನಿಲ ಪೂರೈಕೆ ಮೇಲೆ ಅಡ್ಡಿ ಉಂಟಾಗುತ್ತಿದೆ. ಪರಿಣಾಮವಾಗಿ ದೇಶದ ಹಲವೆಡೆ ಎಲ್ಪಿಜಿ ಸಿಲಿಂಡರ್ಗಳ ಲಭ್ಯತೆ ಕುಸಿದಿರುವುದು ಗೊತ್ತೇ ಇದೆ. ಸದ್ಯ ಕೋಲಾರವೂ ಈ ಸಮಸ್ಯೆ ಎದುರಿಸುತ್ತಿದೆ.
ಮನೆ ಬಳಕೆಗೆ ಅಗತ್ಯವಿರುವ ಸಿಲಿಂಡರ್ಗಳು ಕೆಲವು ದಿನಗಳ ಹೆಚ್ಚುವರಿ ವಿಳಂಬದೊಂದಿಗೆ ಲಭ್ಯವಾಗುತ್ತಿದ್ದರೂ, ವಾಣಿಜ್ಯ ಬಳಕೆಗೆ ಅಗತ್ಯವಿರುವ ಸಿಲಿಂಡರ್ಗಳು ಸಿಗದೆ ಹೋಟೆಲ್ಗಳು, ಢಾಬಾಗಳು, ಕ್ಯಾಟರಿಂಗ್ ಸೇವೆ ನೀಡುವವರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಹಲವಾರು ಸಣ್ಣ ಉದ್ಯಮಿಗಳು ದಿನನಿತ್ಯದ ವ್ಯವಹಾರ ನಡೆಸಲು ಕಷ್ಟಪಡುತ್ತಿದ್ದು, ಆದಾಯದಲ್ಲಿ ಭಾರೀ ಕುಸಿತ ಕಂಡುಬಂದಿದೆ. ಈ ಹಿನ್ನೆಲೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಕ್ಷಣ ಹಸ್ತಕ್ಷೇಪ ಮಾಡಿ, ತೈಲ ಮತ್ತು ಅನಿಲ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಎಲ್ಲೆಡೆ ವ್ಯಕ್ತವಾಗುತ್ತಿದೆ.
ಪ್ರಧಾನಿ ಮೋದಿಯ ನೀತಿಯಿಂದಲೇ ಗ್ಯಾಸ್ ಸಿಲಿಂಡರ್ ಸಿಗದೆ ಇರುವುದಕ್ಕೆ ಕಾರಣ
ಇರಾನ್–ಇಸ್ರೇಲ್ ಯುದ್ಧದಂತಹ ಅಂತಾರಾಷ್ಟ್ರೀಯ ಸಂಘರ್ಷಗಳ ಸಂದರ್ಭದಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅನುಸರಿಸುತ್ತಿರುವ ವಿದೇಶಾಂಗ ನೀತಿ ಕುರಿತು ರಾಜಕೀಯ ಮತ್ತು ಬೌದ್ಧಿಕ ವಲಯಗಳಲ್ಲಿ ಟೀಕೆಗಳು ಕೇಳಿಬರುತ್ತಿವೆ. ಯುದ್ಧದ ವಿಷಯದಲ್ಲಿ ಪ್ರಧಾನಿ ಮೋದಿ ಅವರು ಸಮತೋಲನ ಕಾಯ್ದುಕೊಳ್ಳುವಲ್ಲಿ ಎಡವಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಭಾರತಕ್ಕೆ ಸ್ವಾತಂತ್ರ್ಯ ದೊರೆತ ನಂತರದಿಂದಲೇ ದೇಶವು ಅಲಿಪ್ತ ರಾಷ್ಟ್ರಗಳ ಒಕ್ಕೂಟದ ಪ್ರಮುಖ ಸದಸ್ಯರಾಗಿದ್ದು, ಜಾಗತಿಕ ಶಕ್ತಿ ರಾಜಕೀಯದಲ್ಲಿ ಯಾವುದೇ ಒಂದು ಬಣದ ಜೊತೆಗೂ ನೇರವಾಗಿ ನಿಲ್ಲದೇ ಸ್ವತಂತ್ರ ವಿದೇಶಾಂಗ ನೀತಿಯನ್ನು ಅನುಸರಿಸಿಕೊಂಡು ಬಂದಿತ್ತು. ಜವಾಹರಲಾಲ್ ನೆಹರು ಅವರಿಂದ ಹಿಡಿದು ಅನೇಕ ಹಿಂದಿನ ಪ್ರಧಾನ ಮಂತ್ರಿಗಳು, ರಾಷ್ಟ್ರದ ಹಿತಾಸಕ್ತಿಯೇ ಮೊದಲ ಆದ್ಯತೆ ಎಂಬ ನಿಲುವಿನಲ್ಲಿ, ಮಹಾಶಕ್ತಿಗಳ ಒತ್ತಡಕ್ಕೆ ಒಳಗಾಗದೇ ನಿರ್ಧಾರ ಕೈಗೊಂಡಿದ್ದರು ಎಂಬುದು ಇತಿಹಾಸ.

ಆದರೆ ಇತ್ತೀಚಿನ ವರ್ಷಗಳಲ್ಲಿ ಈ ಪರಂಪರಾತ್ಮಕ ಅಲಿಪ್ತ ನಿಲುವಿನಿಂದ ಭಾರತ ದೂರ ಸರಿಯುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ವಿಶೇಷವಾಗಿ ಯುದ್ಧ ಮತ್ತು ಜಾಗತಿಕ ಸಂಘರ್ಷಗಳ ವಿಚಾರದಲ್ಲಿ ಭಾರತ, ಅಮೆರಿಕದ ನಿಲುವಿಗೆ ಹೆಚ್ಚು ಸಮೀಪವಾಗುತ್ತಿರುವಂತೆ ವರ್ತಿಸುತ್ತಿದೆ ಎಂಬ ಟೀಕೆಗಳು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿವೆ. “ವಿದೇಶಾಂಗ ನೀತಿ ಎಂದರೆ ಕೇವಲ ಸ್ನೇಹ ರಾಷ್ಟ್ರಗಳ ಮೆಚ್ಚುಗೆ ಪಡೆಯುವುದು ಅಲ್ಲ, ಅದು ದೇಶದ ದೀರ್ಘಕಾಲೀನ ಹಿತಾಸಕ್ತಿಯನ್ನು ರಕ್ಷಿಸುವುದು. ಆದರೆ ಇಂದಿನ ಸರ್ಕಾರ ಅಮೆರಿಕದ ಹೇಳಿಕೆಗಳಿಗೆ ಪ್ರತಿಧ್ವನಿಸುವ ರೀತಿಯಲ್ಲಿ ನಡೆದುಕೊಳ್ಳುತ್ತಿದೆ,” ಎಂದು ವಿಮರ್ಶಕರು ಆರೋಪಿಸುತ್ತಿದ್ದಾರೆ. ಈ ನಿಲುವು ಮುಂದುವರಿದರೆ ಭಾರತ ತನ್ನ ಸ್ವತಂತ್ರ ಧ್ವನಿಯನ್ನು ಕಳೆದುಕೊಳ್ಳುವ ಅಪಾಯವಿದೆ ಎಂಬ ಆತಂಕವೂ ವ್ಯಕ್ತವಾಗುತ್ತಿದೆ.
ದೇಶದ ಹಿತಾಸಕ್ತಿಗಿಂತ ಹೆಚ್ಚಾಗಿ ತಮ್ಮ ಸ್ನೇಹಿತರ ಹಿತಾಸಕ್ತಿಗೆ ಹೆಚ್ಚು ಮಣೆ ಹಾಕುತ್ತಿರುವಂತಿದೆ. ಭಾರತ ಸುಮಾರು ವರ್ಷಗಳಿಂದ ಇರಾನ್ ಜೊತೆ ಉತ್ತಮ ಬಾಂಧವ್ಯ ಹೊಂದಿದೆ. ಸಂಕಷ್ಟದ ಸಮಯದಲ್ಲಿ ಎರಡೂ ದೇಶಗಳು ಪರಿಸ್ಪರ ಸಹಾಯಕರಾಗಿ, ಆತ್ಮಸ್ಥೈರ್ಯ ತುಂಬುವವರಾಗಿ ತಮ್ಮ ಅಂತಾರಾಷ್ಟ್ರೀಯ ಸಂಬಂಧವನ್ನು ಬೆಳೆಸಿಕೊಂಡಿವೆ. ಆದರೆ, ಯುದ್ಧ ಆರಂಭದ ಮುನ್ನವೇ ಇಸ್ರೇಲ್ ಜೊತೆ ಮಾತುಕತೆ ಆಡಿದ ಕ್ರಮಗಳ ಕುರಿತು ʼಅದರ ಅಗತ್ಯವೇನು?ʼ ಎಂಬ ಪ್ರಶ್ನೆಗಳನ್ನು ಹಲವರು ಎತ್ತಿದ್ದಾರೆ. ಇಸ್ರೇಲ್ ಅನ್ನು ಅನೇಕರು ಆತಂಕಕಾರಿ ಮತ್ತು ವಿವಾದಾತ್ಮಕವಾಗಿ ಹುಟ್ಟಿಕೊಂಡ ರಾಷ್ಟ್ರ ಎಂದು ಪರಿಗಣಿಸುತ್ತಿದ್ದು, ಇತಿಹಾಸಾತ್ಮಕವಾಗಿ ಭಾರತದ ಹಿಂದಿನ ಪ್ರಧಾನಿಗಳು ಇಸ್ರೇಲ್ ವಿಷಯದಲ್ಲಿ ಹೆಚ್ಚು ಎಚ್ಚರಿಕೆಯ, ವಿರೋಧಾತ್ಮಕ ನಿಲುವನ್ನೇ ಅನುಸರಿಸಿದ್ದರು. “ಹಳೆಯ ವಿದೇಶಾಂಗ ನೀತಿಯನ್ನು ಬದಿಗೊತ್ತಿ, ಏಕಾಏಕಿ ನಿಲುವು ಬದಲಿಸುವ ಮೂಲಕ ಭಾರತವನ್ನು ಜಾಗತಿಕ ಗೊಂದಲಕ್ಕೆ ಸಿಕ್ಕಾಕಲಾಗಿದೆ,” ಎಂಬ ಆಕ್ಷೇಪವೂ ಕೇಳಿಬರುತ್ತಿದೆ. ಇದಕ್ಕಿಂತಲೂ ಗಂಭೀರ ಆರೋಪವೆಂದರೆ, ಅಮೆರಿಕದ ಒತ್ತಡಕ್ಕೆ ಭಾರತ ತಲೆಬಾಗುತ್ತಿರುವುದು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ನಿಂದ ತೈಲ ಖರೀದಿಸಬಾರದೆಂದು ಸೂಚಿಸಿದಾಗ, ಭಾರತ ಅದಕ್ಕೆ ಮೌನಸಮ್ಮತಿ ಸೂಚಿಸಿದ ರೀತಿಯಲ್ಲಿ ನಡೆದುಕೊಂಡಿತು ಎಂದು ಟೀಕಿಸಲಾಗುತ್ತಿದೆ. ಇದರ ಪರಿಣಾಮವಾಗಿ ಭಾರತದ ಇಂಧನ ಭದ್ರತೆ ಮತ್ತು ಆರ್ಥಿಕ ಹಿತಾಸಕ್ತಿಗಳಿಗೆ ಧಕ್ಕೆಯಾಗಿದೆ ಎಂಬ ಆರೋಪವೂ ಇದೆ.
ಈ ದಿನ.ಕಾಮ್ಗೆ ಪ್ರತಿಕ್ರಿಯಿಸಿದ ಕೋಲಾರ ಸಾಮಾಜಿಕ ಕಾರ್ಯಕರ್ತ ಅನ್ವರ್ ಪಾಷ, “ಇಂದು ದೇಶದ ಗ್ಯಾಸ್ ಸಿಲಿಂಡರ್ ಸಮಸ್ಯೆ ನೂರಕ್ಕೆ ನೂರು ಮೋದಿ ಅವರಿಂದಲೇ ಆಗಿದೆ. ಗೊಂದಲಕಾರಿ ವಿದೇಶಿ ನೀತಿ ನಿರ್ಧಾರಗಳು ಇಂಧನ ಪೂರೈಕೆಯನ್ನು ಅಸ್ತವ್ಯಸ್ತಗೊಳಿಸಿದ್ದು, ಅದರ ಹೊರೆ ನೇರವಾಗಿ ಸಾಮಾನ್ಯ ಜನರ ಮೇಲೆ ಬಿದ್ದಿದೆ. ದೇಶದಲ್ಲಿ ಆರ್ಥಿಕ ಕುಸಿತ ಗಾಢವಾಗಲು ಕೂಡ ಕೇಂದ್ರ ಸರ್ಕಾರದ ನೀತಿಗಳೇ ಕಾರಣ. ಎಫ್ಸ್ಟಿನ್ ಫೈಲ್ನಲ್ಲಿ ಟ್ರಂಪ್ ಹೆಸರು ಇರುವ ಕಾರಣ, ಅದನ್ನು ಮುಚ್ಚಿಹಾಕುವ ಉದ್ದೇಶದಿಂದ ಯುದ್ಧದ ವಾತಾವರಣ ನಿರ್ಮಿಸಲಾಗುತ್ತಿದೆ ಎಂಬ ಅನುಮಾನಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ” ಎಂದು ಹೇಳಿದರು.

ಕೋಲಾರ MRS ಕ್ಯಾಟರಿಂಗ್ ಮಾಲೀಕ ರವಿ ಅವರು ಮಾತನಾಡಿ, “ಗ್ಯಾಸ್ ಸಿಲಿಂಡರ್ ಗಳ ಕೊರತೆಯಿಂದ ನಮಗೆ ಬಹಳ ಅನಾನುಕೂಲವಾಗಿದೆ. ವಾಣಿಜ್ಯ ಬಳಕೆಗೆ ಸಿಲಿಂಡರ್ ಸಿಗುತ್ತಿಲ್ಲ. ನಾವು ಸುಮಾರು ದಿನಗಳ ಹಿಂದೆ ಮದುವೆ ಹಾಗೂ ಕೆಲವೊಂದು ಕಾರ್ಯಕ್ರಮಗಳಿಗೆ ನಮ್ಮ ಕ್ಯಾಟರಿಂಗ್ ಮೂಲಕ ಅಡುಗೆ ಮಾಡಿಕೊಡಲು ಒಪ್ಪಿಕೊಂಡಿದ್ದೇವೆ. ಆದರೆ ನಮಗೆ ಕೆಲವು ದಿನಗಳಿಂದ ಸಿಲಿಂಡರ್ ಸಿಗದಿರುವ ಕಾರಣ ಬಹಳಷ್ಟು ತೊಂದರೆಗೆ ಒಳಗಾಗಿದ್ದು ಒತ್ತಡಕ್ಕೆ ಸಿಲುಕಿಕೊಂಡಿದ್ದೇವೆ. ನಾವು ಹೆಚ್ಚು ಹಣ ಕೊಡುತ್ತೇವೆ ಎಂದ್ರು ಸಹ ಎಲ್ಲಿಯೂ ಸಿಲಿಂಡರ್ ಸಿಗದೆ ಪರಡಾಡುವ ಸ್ಥಿತಿ ನಿರ್ಮಾಣವಾಗಿದೆ. ಹಾಗೂ ಹಲವಾರು ಚೌಟರಿಗಳಲ್ಲಿ ಅಡುಗೆ ಮಾಡಲು ಗ್ಯಾಸ್ ಸಿಲಿಂಡರ್ ಬಳಸಬೇಕು, ಸೌದೆಗೆ ಅವಕಾಶ ಇಲ್ಲದಿರುವುದು ಸಹ ಈ ಪರಿಸ್ಥಿತಿಯಲ್ಲಿ ಕಷ್ಟವಾಗುತ್ತಿದೆ. ಪ್ರಸ್ತುತ ದಿನಗಳಲ್ಲಿ ಕ್ಯಾಟರಿಂಗ್ ಗೆ ಬಹಳ ಡಿಮ್ಯಾಂಡ್ ಇದ್ದು ಸಿಲಿಂಡರ್ ಸಿಗದೆ ಇರುವುದು ನಮಗೆ ಕಷ್ಟ ವಾಗಿದೆ. ಜನರು ನಮಗೆ ಅಡುಗೆಯ ಆರ್ಡರ್ ನೀಡುತ್ತಿದ್ದು ಅದನ್ನು ಒಪ್ಪಿಕೊಳ್ಳಲು ಭಯವಾಗ್ತಿದೆ. ಹಿಂದೆ ತಗೊಂಡಿರುವ ಆರ್ಡರ್ ಗಳಿಗೆ ಯಾವ ರೀತಿ ಮಾಡಬೇಕು ಎಂದು ನಮಗೆ ಈಗ ಚಿಂತೆ ಶುರುವಾಗಿದೆ ಹಲವಾರು ಕಾರ್ಯಕ್ರಮಗಳ ಆರ್ಡರ್ ನಾವು ಬೇಡ ಎಂದು ಹೇಳುತ್ತಿದ್ದೇವೆ” ಎಂದು ಅಸಹಾಯಕರಾದರು.

ನಮ್ಮ ಕ್ಯಾಟರಿಂಗ್ ನಲ್ಲಿ 300 ಜನರು ಕೆಲಸ ಮಾಡುತ್ತಿದ್ದು, ಕೆಲಸಗಾರರ ಹೊಟ್ಟೆಪಾಡಿಗೆ ಕಷ್ಟವಾಗ್ತಿದೆ. ಈ ಬಗ್ಗೆ ಸರ್ಕಾರ ಗಮನವಹಿಸಿ ಕೂಡಲೇ ಸಿಲಿಂಡರ್ ನೀಡುವ ನಿಟ್ಟಿನಲ್ಲಿ ಕಾರ್ಯಮಾಡಬೇಕು ಇಲ್ಲದಿದ್ದರೆ ಸುಮಾರು ಜನರಿಗೆ ತೊಂದರೆಯಾಗುತ್ತದೆ. ಒಂದು ಮದುವೆಗೆ ಸುಮಾರು 6 ರಿಂದ 8 ಸಿಲಿಂಡರ್ ಬೇಕಾಗಿದ್ದು, ಸಿಗದೆ ನಾವು ಕಾರ್ಯಕ್ರಮಗಳಲ್ಲಿ ಅಡುಗೆ ಮಾಡುವುದು ರದ್ದು ಮಾಡಬೇಕಾದ ಸನ್ನಿವೇಶ ಉಂಟಾಗಿದೆ” ಎಂದರು.
ಪ್ರತಿದಿನ 4ರಿಂದ 5 ಗ್ಯಾಸ್ ಸಿಲಿಂಡರ್ ಬೇಕಾಗುತ್ತದೆ. ಗ್ಯಾಸ್ ಏಜೆನ್ಸಿಯವರು ಸ್ಟಾಕ್ ಇಲ್ಲ ಎನ್ನುತ್ತಾರೆ. ಒಂದೆರಡು ದಿನ ನಾವು ಅರೇಂಜ್ ಮಾಡಬಹುದು. ಆದರೆ ಮುಂದಿನ ದಿನಗಳಲ್ಲಿ ಹೋಟೆಲ್ ಕ್ಲೋಸ್ ಮಾಡಬೇಕಾಗಿ ಬರುತ್ತದೆ. ನಮ್ಮಲ್ಲಿ ಬೇರೆ ವ್ಯವಸ್ಥೆ ಕೂಡ ಇಲ್ಲ. ಇದೇ ಸಮಸ್ಯೆಯಿಂದ ಹಲವು ಹೋಟೆಲ್ಗಳು ಬಂದಾಗುತ್ತಿವೆ. ಇದರಿಂದ ಸಾರ್ವಜನಿಕರಿಗೆ ಬಹಳ ತೊಂದರೆಯಾಗುತ್ತಿದ್ದು, ಸರ್ಕಾರ ಕೂಡಲೇ ಸಿಲಿಂಡರ್ ವಿತರಣೆ ಮಾಡಬೇಕು” ಎನ್ನುತ್ತಾರೆ ಕೋಲಾರ ಸಾಯಿಧಾಮ್ ಹೋಟೆಲ್ ಮ್ಯಾನೇಜರ್ ಸಂತೋಷ್.

ಇದನ್ನೂ ಓದಿ: ಕೋಲಾರ | ಮಾನವೀಯ ಮೌಲ್ಯಗಳನ್ನು ಹರಡಿದರಷ್ಟೇ ಸಮಸಮಾಜ ನಿರ್ಮಾಣ ಸಾಧ್ಯ: ಡಿಸಿ ಡಾ.ರವಿ
ಈ ಹಿನ್ನೆಲೆ ಸರ್ಕಾರ ತಕ್ಷಣ ಆತ್ಮಾವಲೋಕನ ಮಾಡಿಕೊಳ್ಳಬೇಕು. ಸ್ಪಷ್ಟ ಹಾಗೂ ಸ್ವಾಭಿಮಾನಿ ವಿದೇಶಾಂಗ ನೀತಿಗೆ ಮರಳಬೇಕು ಮತ್ತು ದೇಶದ ಆರ್ಥಿಕ ಹಾಗೂ ಇಂಧನ ಭದ್ರತೆಯನ್ನು ಮೊದಲ ಆದ್ಯತೆಯಾಗಿ ಪರಿಗಣಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯ. ಇಲ್ಲದಿದ್ದರೆ, ಇಂದಿನ ಸಂಕಷ್ಟಗಳು ಮುಂದಿನ ದಿನಗಳಲ್ಲಿ ಇನ್ನಷ್ಟು ಗಂಭೀರ ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಗಳಾಗಿ ಪರಿಣಮಿಸುವ ಸಾಧ್ಯತೆಯನ್ನು ತಳ್ಳಿಹಾಕಲಾಗದು.





