ಬೆಂಗಳೂರಿನಲ್ಲಿ ವಾಸಿಸುವ ಇತರ ರಾಜ್ಯದ ಜನರು ತಮ್ಮ ಮಾತೃಭಾಷೆಯ, ಪ್ರಾದೇಶಿಕ ಸಂಸ್ಕೃತಿಯ ದೃಷ್ಟಿಯಿಂದ ಯಾರೇ ಆಗಿರಲಿ, ಇಲ್ಲಿ ಅವರು ಕನ್ನಡನಾಡಿನವರು. ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಎಲ್ಲದರ ಪ್ರಗತಿಯಲ್ಲಿಯೂ ಅವರು ಭಾಗಿಗಳಾಗಿರಬೇಕು. ಅವರಿದ್ದಾರೆ ಎನ್ನುವುದು ಕನ್ನಡಕ್ಕೆ ಕಾಲ್ತೊಡಕಾಗಬಾರದು.
ಕನ್ನಡ ನಾಡಿನ ರಾಜಧಾನಿಯಲ್ಲಿ ಕನ್ನಡವೇ ಅಗ್ರಗಣ್ಯ ಮತ್ತು ಅಗ್ರಮಾನ್ಯ; ಆಡಳಿತ ಭಾಷೆಯಿಂದ ಹಿಡಿದು ಶಿಕ್ಷಣ ಮಾಧ್ಯಮದವರೆಗೆ ಸರ್ವಕ್ಷೇತ್ರಗಳಲ್ಲಿಯೂ ಸತ್ವಸ್ತರಗಳಲ್ಲಿಯೂ ಕನ್ನಡ ಭಾಷೆಗೇ ಅಗ್ರಸ್ಥಾನ- ಈ ಧ್ಯೇಹಗಳನ್ನು ದೂರದೃಷ್ಟಿಯಿಂದಲೂ ಮತ್ತು ಧೈರ್ಯದಿಂದಲೂ ಅವರು ಕಾರ್ಯಗತಗೊಳಸುತ್ತಾರೆ ಎಂದು ನಾನು ಸಂಪೂರ್ಣವಾಗಿ ಭರವಸೆ ಹೊಂದಿದ್ದೇನೆ.
ಭಾರತದಂತಹ ವೈವಿಧ್ಯಮಯವಾದ ವಿಶಾಲ ರಾಷ್ಟ್ರದ ದೊಡ್ಡ ದೊಡ್ಡ ಔದ್ಯೋಗಿಕ ನಗರಗಳೆಲ್ಲ ವೇಷ ಭೂಷಣ ಭಾಷೆ ಸಂಸ್ಕೃತಿ ಮೊದಲಾದವುಗಳಲ್ಲಿ ಸಂಕ್ಷಿಪ್ತ ಭಾರತಗಳೇ ಆಗಿರಬೇಕಾದುದು ಅನಿವಾರ್ಯ. ಕನ್ನಡನಾಡಿನ ರಾಜಧಾನಿಯಾದ ಬೆಂಗಳೂರು ನಗರವೂ ಅಂಥ ಒಂದು ಸಂಕ್ಷಿಪ್ತ ಭಾರತವೇ ಆಗಿದೆ. ಇಲ್ಲಿ ಅನೇಕ ಭಾಷೆಗಳನ್ನು ಮಾತನಾಡುವ ಅಲ್ಪ ಸಂಖ್ಯಾತರಿರುವುದು ಸಹಜ. ಆ ಎಲ್ಲ ಭಾಷೆಗಳಿಗೂ ಸಲ್ಲಬೇಕಾದುದನ್ನು ಸಲ್ಲಿಸಬೇಕಾದುದು ನಮ್ಮ ಕರ್ತವ್ಯವಾದರೂ ಇಲ್ಲಿ ಕನ್ನಡವೇ ಸಾರ್ವಜನಿಕ ಕ್ಷೇತ್ರದ ಸಾರ್ವಭೌಮ ಭಾಷೆಯಾಗಿರಬೇಕಾಗುತ್ತದೆ; ಕನ್ನಡಕ್ಕೆ ಮೊದಲ ಮನ್ನಣೆ ಸಲ್ಲಬೇಕಾದದ್ದು ಅಗತ್ಯವಾಗುತ್ತದೆ.
ಈ ಮಾತು ಕನ್ನಡಿಗರಿಗೆ ಮಾತ್ರ ಅನ್ವಯಿಸುವುದಲ್ಲ. ಎಲ್ಲ ರಾಜ್ಯಗಳ, ಎಲ್ಲ ನಗರಗಳ ವಿಚಾರದಲ್ಲಿಯೂ ಇದೇ ಸೂತ್ರ ಆವಶ್ಯಕ. ಆಯಾ ರಾಜ್ಯದಲ್ಲಿ ಆಯಾ ರಾಜ್ಯಭಾಷೆಗಳೇ ಪ್ರಥಮ ಮತ್ತು ಪ್ರಧಾನ. ಬೆಂಗಳೂರಿನಲ್ಲಿ ಅನ್ಯ ಭಾಷೆಗಳನ್ನಾಡುವ ಜನರಿದ್ದಾರೆ ಎಂದರೆ ಅದು ನಮ್ಮ ಆತಿಥ್ಯದ ಔದಾರ್ಯವನ್ನು ಸೂಚಿಸುತ್ತದೆ; ಅದು ನಮಗೆ ಹೆಮ್ಮೆ ಹಾಗೂ ಗೌರವ. ಆದರೆ ಇದೇ ಕಾರಣದಿಂದಾಗಿ ಕನ್ನಡಕ್ಕೆ ನ್ಯಾಯವಾಗಿ ದೊರಕಬೇಕಾದ ಸ್ಥಾನಮಾನಗಳಿಗೆ ಯಾವ ಅಡಚಣೆಯೂ ಉಂಟಾಗಬಾರದು. ಮುಂಬಯಿನಲ್ಲೊ ಮದ್ರಾಸಿನಲ್ಲೊ ಅಥವಾ ಬೇರೆ ಇನ್ನೆಲ್ಲೊ ಕನ್ನಡಿಗರು ಹೋಗಿ ವಾಸಿಸುತ್ತಿದ್ದರೆ, ಅವರ ಇರುವಿಕೆ ಆ ಪ್ರದೇಶದ ಭಾಷೆಯ ಪ್ರಗತಿಗೆ ತಡೆಯಾಗಬಾರದು. ಕನ್ನಡಿಗರು ಕನ್ನಡನಾಡಿನ ಹೊರಗಿದ್ದಾಗ ವೈಯಕ್ತಿಕವಾಗಿ ಕನ್ನಡಿಗರು, ಅಷ್ಟೆ. ಪ್ರಾದೇಶಿಕವಾಗಿ ಅವರು ತಾವು ಇರುವ ಪ್ರದೇಶದವರೇ, ಈ ಮಾತು ಕನ್ನಡ ನಾಡಿನಲ್ಲಿರುವ ಅನ್ಯ ಭಾಷಿಯರಿಗೂ ಅನ್ವಯವಾಗುತ್ತದೆ. ಅವರು ತಮ್ಮ ಮಾತೃಭಾಷೆಯ, ಪ್ರಾದೇಶಿಕ ಸಂಸ್ಕೃತಿಯ ದೃಷ್ಟಿಯಿಂದ ಯಾರೇ ಆಗಿರಲಿ ಇಲ್ಲಿ ಅವರು ಕನ್ನಡನಾಡಿನವರು. ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಎಲ್ಲದರ ಪ್ರಗತಿಯಲ್ಲಿಯೂ ಅವರು ಭಾಗಿಗಳಾಗಿರಬೇಕು. ಅವರಿದ್ದಾರೆ ಎನ್ನುವುದು ಕನ್ನಡಕ್ಕೆ ಕಾಲ್ತೊಡಕಾಗಬಾರದು.
ಬೆಂಗಳೂರಿನಂತಹ ಮಹಾನಗರಗಳ ವಿಚಾರದಲ್ಲಿ ನಾವು ಈ ಮಾತನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕು. ಈ ಹಿನ್ನೆಲೆಯಲ್ಲಿ, ಕನ್ನಡನಾಡಿನ ರಾಜಧಾನಿಯಾದ ಬೆಂಗಳೂರಿನಲ್ಲಿ, ಅಲ್ಲಿನ ವಿಶ್ವವಿದ್ಯಾನಿಲಯದಲ್ಲಿ ಕನ್ನಡಕ್ಕೆ ಯಾವ ಸ್ಥಾನವಿರಬೇಕೆಂದು ಯೋಚಿಸುವುದರಲ್ಲಾಗಲಿ ಚರ್ಚಿಸುವುದರಲ್ಲಾಗಲಿ ನನಗೆ ಯಾವ ಅರ್ಥವೂ ಕಾಣಿಸುವುದಿಲ್ಲ. ಕನ್ನಡ ಮಾತೃಭಾಷೆಯಲ್ಲದವರ ಶಿಕ್ಷಣಕ್ಕೆ ಇಲ್ಲಿ ಅವಕಾಶವನ್ನು ಕಲ್ಪಿಸುವುದು ನಮ್ಮ ಹೊಣೆಯಾದರೂ, ಕನ್ನಡವನ್ನು ಭದ್ರಸ್ಥಾನದಲ್ಲಿರಿಸಬೇಕಾದುದು ಆದ್ಯ ಕರ್ತವ್ಯ. ಆ ಭದ್ರಸ್ಥಾನವು ಸಂಸ್ಥಾಪಿತವಾಗುವುದಕ್ಕೆ ಮುನ್ನ ಅದನ್ನು ಭಂಗಗೊಳಿಸುವ ಯಾವ ಕಾರ್ಯ ವ್ಯೂಹಕ್ಕೂ ಕೈಹಾಕದಿರುವುದು ಲೇಸು.
ಈ ಲೇಖನ ಓದಿದ್ದೀರಾ?: ಕನ್ನಡ ಭಾಷಿಕರನ್ನು ಒಂದೆಡೆ ತರುವ ‘ಕರ್ನಾಟಕ ಏಕೀಕರಣ’ ಹೋರಾಟಗಳತ್ತ ಒಂದು ನೋಟ
ಬೆಂಗಳೂರು ವಿಶ್ವವಿದ್ಯಾನಿಲಯವನ್ನು ಕೇಂದ್ರ ವಿಶ್ವವಿದ್ಯಾನಿಲಯವನ್ನಾಗಿ ಪರಿವರ್ತಿಸುವ ಯೋಜನೆಯ ಅಂಗವಾಗಿ ಅಲ್ಲಿ, ಸಂಪರ್ಕ ಭಾಷೆಯಾದ ಹಿಂದಿ ಮಾಧ್ಯಮದ ಪ್ರಸ್ತಾಪವೆತ್ತಿರುವುದನ್ನು ನಾನು ಮೊನ್ನೆ ಮೊನ್ನೆ ಪತ್ರಿಕೆಗಳಲ್ಲಿ ಓದಿದ್ದೇನೆ. ಅದೇನಾದರೂ ನಿಜವಾಗಿದ್ದ ಪಕ್ಷದಲ್ಲಿ ಅಚಾತುರದ ನೀತಿಯೆಂದೇ ಭಾವಿಸಬೇಕಾಗುತ್ತದೆ. ಇದು ಈ ಘಟ್ಟದಲ್ಲಿ ತುಂಬ ಅಪಾಯಕಾರಿ ಹೆಜ್ಜೆ ಎಂಬುದನ್ನು ನಾನು ಸ್ಪಷ್ಟಪಡಿಸಬೇಕಾಗಿದೆ. ನಾವು ಇನ್ನೂ ಇಂಗ್ಲಿಷಿನ ನೊಗದಿಂದಲೆ ಹೆಗಲು ಕಳಚಿಲ್ಲ; ಆಗಲೇ ಬೇರೊಂದು ನೊಗಕ್ಕೆ ಹೆಗಲು ಕೊಡಲು ಸಿದ್ಧರಾಗಿದ್ದೇವೆ.
ಈ ದುರದೃಷ್ಟಕರ ಪರಿಸ್ಥಿತಿ ಕನ್ನಡನಾಡಿನಲ್ಲಲ್ಲದೆ ಬೇರೆ ಯಾವ ಕಡೆಯೂ ಇರಲಾರದು. ಕನ್ನಡಕ್ಕೆ ಎಂದೋ ದೊರೆಯಬೇಕಾಗಿದ್ದ ಗೌರವದ ಮನ್ನಣೆಯ ಸ್ಥಾನವನ್ನು ಕೊಡಲು ಇನ್ನೂ ಮೀನ ಮೇಷ ಎಣಿಸುತ್ತಿರುವ ನಾವು ಹಿಂದಿ ಮಾಧ್ಯಮದ ಬಗೆಗೆ ಕಾತರತೆ ತೋರುತ್ತಿರುವುದು ಒಂದು ಬಗೆಯ ವಿಪರ್ಯಾಸವೇ ಸರಿ. ಮುಂದೆ ಎಂದಾದರೂ ಹಿಂದಿ ಮಾಧ್ಯಮದ ತರಗತಿಗಳು ಬರಬಹುದು. ಆದರೆ ಕನ್ನಡ ನಮ್ಮ ಶಿಕ್ಷಣವನ್ನೂ ಸಮಸ್ತ ಜೀವನವನ್ನೂ ಸಂಪೂರ್ಣವಾಗಿ ಆವರಿಸಿಕೊಳ್ಳುವ ಮೊದಲೇ ಇದಕ್ಕೆ ಅವಕಾಶ ಕೊಡುವುದು ರಾಷ್ಟ್ರಘಾತಕವಾಗುತ್ತದೆ; ಅನೈಕ್ಯತೆಗೆ ದಾರಿಮಾಡಿ ಕೊಟ್ಟಂತಾಗುತ್ತದೆ. ಈ ದಿಸೆಯಲ್ಲಿ ಕನ್ನಡಿಗರ ಔದಾರ್ಯ ಸಲ್ಲಕ್ಷಣಗಳು ಅಸಹಾಯಕತೆಯಾಗಬಾರದು; ನಿರ್ವಿಣ್ಣತೆಯಾಗಬಾರದು.
ಕನ್ನಡ ನಾಡಿನ ವಿಶ್ವವಿದ್ಯಾನಿಲಯವಾದ ಈ ಬೆಂಗಳೂರು ವಿಶ್ವವಿದ್ಯಾನಿಲಯವು ಮೊದಲು ಈ ಪ್ರದೇಶದ ಆವಶ್ಯಕತೆಗಳನ್ನು ಗುರುತಿಸಿ ಈಡೇರಿಸಬೇಕು. ಈ ಭಾಗದ ಜನತೆಯ ಋಣ ತೀರಿಸಬೇಕು. ಅದು ಕನ್ನಡದಿಂದ ಮಾತ್ರ ಸಾಧ್ಯ; ಇನ್ನಾವ ಭಾಷೆಯಿಂದಲೂ ಸಾಧ್ಯವಿಲ್ಲ. ಫಲವಾಗಿ ವಿಶ್ವವಿದ್ಯಾನಿಲಯದ ಎಲ್ಲ ತರಗತಿಗಳಲ್ಲೂ ವ್ಯಾಪಕವಾಗಿ ಕನ್ನಡ ಮಾಧ್ಯಮ ಜಾರಿಗೆ ಬರಬೇಕು. ಮಾತೃಭಾಷೆಯ ಮೂಲಕವಾಗಿ ನಡೆಯುವ ಶಿಕ್ಷಣವೇ ಸವೋತ್ಕೃಷ್ಟವಾದುದೆಂಬುದು ಎಂದೂ ಚರ್ಚೆಯ ವಿಷಯವಲ್ಲ. ಇನ್ನು ಭಾಷೆಯ ವಿಷಯವಾಗಿ ಹೇಳುವುದಾದರೆ, ನಾನು ಯಾವುದೇ ಭಾಷೆಯನ್ನು ಕಡ್ಡಾಯಮಾಡಿ ಎಂದು ಹೇಳುವುದಿಲ್ಲ. ಯಾವುದಾದರೂ ಎರಡು ಭಾಷೆಗಳನ್ನು ಆಯ್ದುಕೊಂಡು ಅಭ್ಯಾಸ ಮಾಡಲು ಅವಕಾಶವಿರಬೇಕು ಎಂಬುದಷ್ಟೇ ನನ್ನ ಅಪೇಕ್ಷೆ.
ಕಲಿಕೆಯ ಭಾಷೆಯಾಗಿ ಇಂಗ್ಲಿಷ್ ಬಲಾತ್ಕಾರದ್ದಾಗಿ ಉಳಿಯುವುದು ಬೇಡ. ಬೇಕೆಂದರೆ ನೂರಕ್ಕೆ ನೂರು ಜನರೂ ಅದನ್ನೇ ಆರಿಸಿಕೊಳ್ಳಲಿ; ಬೇಡವಾದರೆ ಒಬ್ಬನಿಗಾದರೂ ಅದನ್ನು ಬಿಡುವ ಅವಕಾಶವಿರಲಿ. ಇಂಗ್ಲಿಷನ್ನು ಬಲಾತ್ಕಾರದ ಸ್ಥಾನದಿಂದ ಐಚ್ಛಿಕಸ್ಥಾನಕ್ಕೆ ಇಳಿಸುವುದಷ್ಟೆ ಈಗ ಆಗಬೇಕಾದ ಕೆಲಸ. ಇಂಗ್ಲಿಷ್ ಬೇಡ ಎನ್ನುವವರ ಗುಂಪಿಗೆ ನಾನು ಸೇರಿದವನಲ್ಲ. ಆದರೆ ಯಾವುದೇ ಭಾಷೆಯನ್ನಾದರೂ ಯಾರಿಗೆ? ಎಷ್ಟು? ಏಕೆ? ಎನ್ನುವ ತತ್ವದ ಒರೆಗಲ್ಲಿಗೆ ಹಚ್ಚದೆ ಮುಂದುವರಿಯುವುದು ಕ್ಷೇಮವಲ್ಲ. ಬಲಾತ್ಕಾರದ ಅಂಶವಂತೂ ಪ್ರಜಾಸತ್ತೆಗೆ ಮಾರಕವಾಗುತ್ತದೆ.
‘ಬೆಂಗಳೂರು ವಿಶ್ವವಿದ್ಯಾನಿಲಯದ ಗೌರವ ಡಿ.ಲಿಟ್. ಪ್ರಶಸ್ತಿ ಸ್ವೀಕರಿಸಿ ಮಾಡಿದ ಭಾಷಣ.
ಬೆಂಗಳೂರು: ಜನವರಿ 8, 1969′
‘ಕುವೆಂಪು ವಿರಚಿತ ಕನ್ನಡ ಭಾಷಾ ಸಂವಿಧಾನ’ ಪುಸ್ತಕದಿಂದ ಆಯ್ದ ಲೇಖನ




