ಬೌದ್ಧರು-ಮುಸ್ಲಿಮರನ್ನು ಪರಸ್ಪರರ ವಿರುದ್ಧ ಎತ್ತಿ ಕಟ್ಟಿ, ಅಭದ್ರತೆ ಸೃಷ್ಟಿಸಿ ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ತಂತ್ರವನ್ನು ಬಿಜೆಪಿ ಕಾರ್ಯಗತಗೊಳಿಸುತ್ತಲೇ ಬಂದಿದೆ, ಇಂದಿಗೂ ಮುಂದುವರೆಸಿದೆ. ಆದರೆ ಸದ್ಯ ಲಡಾಖ್ನ ಜನರು ತಡವಾಗಿಯಾದರೂ ಎಚ್ಚೆತ್ತಿದ್ದಾರೆ. ರಾಜ್ಯದ ಸ್ಥಾನಮಾನಕ್ಕಾಗಿ 2019ರಿಂದ ನಡೆಯುತ್ತಿರುವ ಹೋರಾಟ ಕಾವು ಪಡೆದಿದೆ. ಆದರೆ ಈ ಹೋರಾಟ ಹಿಂಸಾಚಾರಕ್ಕೆ ತಿರುಗಬಾರದಿತ್ತು.
ಜಾತಿ, ಧರ್ಮ ಆಧಾರದಲ್ಲಿ ಒಡೆದು ಆಳುವ ನೀತಿಯನ್ನು ಆರ್ಎಸ್ಎಸ್, ಬಿಜೆಪಿ ದೇಶದ ಬಹುತೇಕ ಎಲ್ಲ ರಾಜ್ಯಗಳು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪ್ರಯೋಗಿಸಿದೆ, ಹಲವೆಡೆ ಬಹುತೇಕ ಯಶಸ್ಸು ಕಂಡಿದೆ. ಕೋಮು ದ್ವೇಷ ಹುಟ್ಟಿಸುವ, ಅಭದ್ರತೆಯನ್ನು ಸೃಷ್ಟಿಸುವ ಮೂಲಕವೇ ನೆಲೆಯೂರತೊಡಗಿದೆ. ಈ ತಂತ್ರಕ್ಕೆ ಲಡಾಖ್ ಕೂಡ ಹೊರತಲ್ಲ.. ಬೌದ್ಧರು-ಮುಸ್ಲಿಮರನ್ನು ಎತ್ತಿ ಕಟ್ಟಿದೆ.
ಲವ್ ಜಿಹಾದ್ ಎಂಬ ಕಪೋಲಕಲ್ಪಿತ ಆತಂಕವನ್ನು ಜನರ ನಡುವೆ ಹುಟ್ಟಿ ಹಾಕುವ ಕುತಂತ್ರವನ್ನು ಬಿಜೆಪಿ ಬಹು ಹಿಂದಿನಿಂದಲೇ ಲಡಾಖ್ನಲ್ಲಿ ಬಿತ್ತಿತ್ತು.. ಜೊತೆಗೆ ಲೇಹ್ನ ಜನರಿಗೆ ಉದ್ಯೋಗ ಮೊದಲಾದವುಗಳಲ್ಲಿ ಸರಿಯಾದ ಅವಕಾಶ ಸಿಗದಿರಲು ಕಾಶ್ಮೀರಿ, ಕಾರ್ಗಿಲ್ನ ಮುಸ್ಲಿಮರೇ ಕಾರಣ ಎಂಬ ಭ್ರಾಂತಿಗೆ ಲಡಾಖಿಗಳನ್ನು ತಳ್ಳಲಾಗಿತ್ತು. ಈ ಮೂಲಕವೇ ಲೇಹ್ ಮತ್ತು ಕಾರ್ಗಿಲ್ ಜನರು ಪರಸ್ಪರರನ್ನು ಹಗೆಗಳಂತೆ ಭಾವಿಸಿ ಬದುಕುವಂತೆ ಮಾಡಿದೆ. ‘370 ವಿಧಿ ಇರುವುದರಿಂದಲೇ ಕಾಶ್ಮೀರಿ-ಕಾರ್ಗಿಲ್ ಮುಸ್ಲಿಮರು ನಿಮ್ಮನ್ನು ತುಳಿಯುತ್ತಿದ್ದಾರೆ’ ಎಂಬ ಭಾವನೆಯನ್ನು ಲೇಹ್ನಲ್ಲಿ ಬಹುಸಂಖ್ಯಾತರಾಗಿರುವ ಬೌದ್ಧ ಜನರಲ್ಲಿ ಸೃಷ್ಟಿಸಿ ರಾಜಕೀಯ ನಡೆಸಿದೆ. ಈ ಅಭದ್ರತೆ ತಂತ್ರ ತನ್ನ ಕೈಹಿಡಿಯಲಿದೆ ಅಂದುಕೊಂಡಿದ್ದ ಬಿಜೆಪಿಗೆ ಲಡಾಖ್ನಲ್ಲಿ ಸದ್ಯ ಮುಖಭಂಗವಾಗಿರುವುದಂತೂ ನಿಜ. ಅದಕ್ಕಾಗಿ ಮೊದಲು ನಾವು ಲಡಾಖ್ನ ಭೌಗೋಳಿಕ ಪರಿಸ್ಥಿತಿಯತ್ತ ಇಣುಕು ನೋಟ ಹರಿಸಬೇಕಿದೆ, ಅದಕ್ಕೂ ಮುನ್ನ ಮುಸ್ಲಿಮರು ಮತ್ತು ಬೌದ್ಧರ ಬೇಡಿಕೆಯಾದ ಆರನೇ ಪರಿಚ್ಛೇದ ಏನು ಹೇಳುತ್ತೆ ಎಂಬುದನ್ನು ನೋಡೋಣ?
ಇದನ್ನು ಓದಿದ್ದೀರಾ? ಲಡಾಖ್ ಗ್ರೌಂಡ್ ರಿಪೋರ್ಟ್ ಸರಣಿ-2 | ‘ಥ್ರೀ ಇಡಿಯಟ್ಸ್’ ಸಿನಿಮಾದ ಸ್ಪೂರ್ತಿ ಸೋನಮ್ ವಾಂಗ್ಚುಕ್ ಮೇಲೆ ಕೇಂದ್ರದ ಕೆಂಗಣ್ಣೇಕೆ?
ಆರನೇ ಪರಿಚ್ಛೇದ ಏನು ಹೇಳುತ್ತೆ, ಏನಿದು?
ಯಾವುದೇ ಒಂದು ಜಿಲ್ಲೆಯ ಒಟ್ಟು ಜನಸಂಖ್ಯೆಯಲ್ಲಿ ಪರಿಶಿಷ್ಟ ಪಂಗಡಕ್ಕೆ ಮತ್ತು ಬುಡಕಟ್ಟು ಸಮುದಾಯಕ್ಕೆ ಸೇರಿದ ಜನರು ಶೇಕಡ 50ಕ್ಕಿಂತಲೂ ಅಧಿಕವಾಗಿದ್ದರೆ, ಆ ಪ್ರದೇಶವನ್ನು ಆರನೇ ಪರಿಚ್ಛೇದದಡಿ ಸೇರಿಸಲು ಸಂವಿಧಾನ ಅವಕಾಶ ನೀಡುತ್ತದೆ. ಸಂವಿಧಾನದ ವಿಧಿ 244(2) ಮತ್ತು ವಿಧಿ 275(1) ಅಡಿಯಲ್ಲಿ ಆರನೇ ಪರಿಚ್ಛೇದವನ್ನು ಸೇರಿಸಲಾಗಿದೆ. ಆದಿವಾಸಿಗಳು ಅಧಿಕ ಸಂಖ್ಯೆಯಲ್ಲಿ ವಾಸಿಸುವ ಪ್ರದೇಶದಲ್ಲಿ ಸ್ವಾಯತ್ತ ಜಿಲ್ಲಾ ಮತ್ತು ಪ್ರಾದೇಶಿಕ ಕೌನ್ಸಿಲ್ಗಳನ್ನು ಸ್ಥಾಪಿಸುವ ಅವಕಾಶವನ್ನು ಈ ಪರಿಚ್ಛೇದ ನೀಡುತ್ತದೆ.
ಸದ್ಯ ದೇಶದ ಈಶಾನ್ಯ ರಾಜ್ಯಗಳಾದ ತ್ರಿಪುರಾ, ಮಿಜೋರಾಂ, ಮೇಘಾಲಯ ಮತ್ತು ಅಸ್ಸಾಂ ಅನ್ನು ಆರನೇ ಪರಿಚ್ಛೇದದಡಿ ಸೇರಿಸಲಾಗಿದೆ. ಈ ರಾಜ್ಯಗಳ ಬುಡಕಟ್ಟು ಜನರು ಹೆಚ್ಚಾಗಿ ವಾಸಿಸುವ ಪ್ರದೇಶಗಳಲ್ಲಿ ಆಡಳಿತವನ್ನು ನಿರ್ವಹಿಸಲು ಅವಕಾಶವನ್ನು ನೀಡಲಾಗಿದೆ. ಸ್ವಯಂ ಆಡಳಿತ ನಡೆಸುವುದು ಮಾತ್ರವಲ್ಲದೆ ಆದಿವಾಸಿ ಸಮುದಾಯಗಳ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಹಕ್ಕುಗಳನ್ನು ರಕ್ಷಿಸಲು ಜಿಲ್ಲಾ ಮತ್ತು ಪ್ರಾದೇಶಿಕ ಕೌನ್ಸಿಲ್ಗಳಿಗೆ ನ್ಯಾಯಾಂಗ, ಶಾಸಕಾಂಗ ಮತ್ತು ಕಾರ್ಯಾಂಗದ ಅಧಿಕಾರವನ್ನು ಈ ಪರಿಚ್ಛೇದ ನೀಡುತ್ತದೆ. ಕೇಂದ್ರದ ಅಂಕಿ ಅಂಶಗಳೇ ಹೇಳುವಂತೆ ಶೇಕಡ 97ರಷ್ಟು ಬುಡಕಟ್ಟು ಸಮುದಾಯವನ್ನು ಹೊಂದಿರುವ ಲಡಾಖ್, ಸಂವಿಧಾನ ಪ್ರಕಾರವಾಗಿ ಆರನೇ ಪರಿಚ್ಛೇದದಡಿ ಸೇರ್ಪಡೆ ಮಾಡಬೇಕಾದ ತಂಪು ಮರುಭೂಮಿ. ಲಡಾಖ್ ಅನ್ನು ಐದನೇ ಅಥವಾ ಆರನೇ ಪರಿಚ್ಛೇದಕ್ಕೆ ಸೇರಿಸಬೇಕೆಂದು 2019ರ ಸೆಪ್ಟೆಂಬರ್ನಲ್ಲೇ ಪರಿಶಿಷ್ಟ ಪಂಗಡಗಳ ರಾಷ್ಟ್ರೀಯ ಆಯೋಗ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಅದೇ ವರ್ಷ ಬಿಜೆಪಿಯೂ ತನ್ನ ಪ್ರಣಾಳಿಕೆಯಲ್ಲಿ ಆರನೇ ಪರಿಚ್ಛೇದಕ್ಕೆ ಸೇರಿಸುವ ಭರವಸೆ ನೀಡಿತ್ತು. ಇವೆಲ್ಲವೂ ಹುಸಿಯಾದಾಗ ಸಹಜವಾಗಿ ಲಡಾಖ್ನ ಮುಸ್ಲಿಮರು ಮತ್ತು ಬೌದ್ಧರು ಎಲ್ಲಾ ವೈಮನಸ್ಸನ್ನು ಬದಿಗೊತ್ತಿ ಹೋರಾಟದಲ್ಲಿ ಜೊತೆಯಾಗಿದ್ದಾರೆ.
ಲಡಾಖ್ ಭೌಗೋಳಿಕ ವಿವರ
ಲಡಾಖ್ನಲ್ಲಿ ಲೇಹ್ ಮತ್ತು ಕಾರ್ಗಿಲ್ ಎಂಬವು ಎರಡು ಪ್ರಮುಖ ಜಿಲ್ಲೆಗಳು. 2011ರ ಜನಗಣತಿ ಪ್ರಕಾರ ಲೇಹ್ನಲ್ಲಿ 1,33,487 ಜನಸಂಖ್ಯೆಯಿದ್ದು, ಕಾರ್ಗಿಲ್ನ ಜನಸಂಖ್ಯೆ 1,40,802. ಒಟ್ಟಾರೆಯಾಗಿ ಲಡಾಖ್ ಜನಸಂಖ್ಯೆ 2,74,289. ಮುಸ್ಲಿಮರು ಮತ್ತು ಬೌದ್ಧ ಧರ್ಮೀಯರು ಇರುವ, ವಿಭಿನ್ನ ಸಂಸ್ಕೃತಿ, ಆಚಾರ-ವಿಚಾರವನ್ನು ಹೊಂದಿರುವ ಕೇಂದ್ರಾಡಳಿತ ಪ್ರದೇಶ ಲಡಾಖ್. ಇಲ್ಲಿನ ಬಹುತೇಕರು ಪರಿಶಿಷ್ಠ ಪಂಗಡಕ್ಕೆ(Schedule Tribe) ಸೇರಿದವರು. ಕೃಷಿ, ಪಶುಸಂಗೋಪಣೆ, ಪ್ರವಾಸೋದ್ಯಮ ಮತ್ತು ಕರಕುಶಲ ವಸ್ತುಗಳ ತಯಾರಿಕೆಯೇ ಇಲ್ಲಿನ ಜನರ ಬದುಕು.

ಕಾರ್ಗಿಲ್ ಜಿಲ್ಲೆಯಲ್ಲಿ ಮುಸ್ಲಿಮರು ಮುಖ್ಯವಾಗಿ ಶಿಯಾ ಮುಸ್ಲಿಮರ ಜನಸಂಖ್ಯೆ ಅಧಿಕವಾಗಿದ್ದು, ಬೌದ್ಧರ ಸಂಖ್ಯೆ ಕಡಿಮೆ. 2011ರ ಜನಗಣತಿ ಪ್ರಕಾರ ಕಾರ್ಗಿಲ್ನಲ್ಲಿ ಶೇಕಡ 76.87ೆರಷ್ಟು ಮುಸ್ಲಿಮರು, ಬೌದ್ಧರು ಶೇ.14.29, ಶೇ.7.34 ಹಿಂದೂಗಳು ಮತ್ತು ಶೇ.0.43ರಷ್ಟು ಕ್ರೈಸ್ತರು ಇದ್ದಾರೆ. ಇದಕ್ಕೆ ಭಿನ್ನವಾಗಿ ಲೇಹ್ನಲ್ಲಿ ಬೌದ್ಧರ ಜನಸಂಖ್ಯೆ ಅಧಿಕ. ಶೇಕಡ 66.40 ಬೌದ್ಧರು, ಶೇ.14.28 ಮುಸ್ಲಿಮರು, ಶೇ.17.14 ಹಿಂದೂಗಳಿದ್ದಾರೆ. ಆದರೆ 2025ರ ಆಗಸ್ಟ್ನಲ್ಲಿ ಲೇಹ್ ಜಿಲ್ಲಾ ವೆಬ್ಸೈಟ್ನಲ್ಲಿ ಉಲ್ಲೇಖಿಸಿರುವಂತೆ ಲೇಹ್ನಲ್ಲಿ ಬೌದ್ದರು, ಮುಸ್ಲಿಮರು ಮತ್ತು ಹಿಂದೂಗಳ ಶೇಕಡವಾರು ಜನಸಂಖ್ಯೆ ಕ್ರಮವಾಗಿ 77.30, 13.78 ಮತ್ತು 8.16 ಆಗಿದೆ.
ಬೌದ್ದ ಮತ್ತು ಮುಸ್ಲಿಮ್ ಪ್ರತ್ಯೇಕ ಧರ್ಮವಾದರೂ ಲಡಾಖ್ನಲ್ಲಿ ಎರಡೂ ಧರ್ಮೀಯರ ಭಾಷೆ, ಉಡುಗೆ ಸೇರಿದಂತೆ ಬಹುತೇಕ ಒಂದೇ ರೀತಿಯದ್ದಾಗಿದೆ, ಪರಸ್ಪರ ಹೋಲುವ ಸಂಸ್ಕೃತಿಯನ್ನು ಹೊಂದಿದ್ದಾರೆ. ಸಣ್ಣ ಪುಟ್ಟ ಭಿನ್ನತೆಯಷ್ಟೇ ಇದೆ. ಲಡಾಖ್ನ ಇತಿಹಾಸವನ್ನು ನಾವು ತಿರುವಿ ನೋಡಿದಾಗ ಅಂತರ್ಧರ್ಮೀಯ ವಿವಾಹ ಅಸಾಮಾನ್ಯವೇನಲ್ಲ. ಇದನ್ನು ಅಲ್ಲಿನ ಸ್ಥಳೀಯರೇ ಹೇಳುತ್ತಾರೆ. ಆದರೆ ಯಾವಾಗ ರಾಜಕೀಯ ಮಧ್ಯಪ್ರವೇಶ ಆರಂಭವಾಯಿತೋ, ಈ ಪ್ರೇಮ ವಿವಾಹಗಳಿಗೆ ಲವ್ ಜಿಹಾದ್ ಎಂಬ ಬಣ್ಣವನ್ನು ಹಚ್ಚಲಾಗಿದೆ ಎನ್ನುತ್ತಾರೆ ಸ್ಥಳೀಯರು. ತಮ್ಮ ಹೆಣ್ಣುಮಕ್ಕಳನ್ನು ಅನ್ಯಧರ್ಮೀಯರು ಮತಾಂತರ ಮಾಡುತ್ತಾರೆ ಎಂಬ ಆತಂಕವನ್ನು ಸೃಷ್ಟಿಸಿದ್ದು ರಾಜಕಾರಣಿಗಳೇ. ಲೇಹ್ನಲ್ಲಿ ಮುಸ್ಲಿಮರಲ್ಲಿ, ಕಾರ್ಗಿಲ್ನಲ್ಲಿ ಬೌದ್ಧರಲ್ಲಿ ಈ ಭಯ ಹೇವರಿಕೆ ಹುಟ್ಟಿಸಲಾಗಿದೆ. ಈ ವಿಭಜನೆಯ ಯತ್ನ ಇಂದಿಗೂ ನಿಂತಿಲ್ಲ.
ಆದರೆ ಇವೆಲ್ಲವನ್ನು ದಾಟಿ ಕಾರ್ಗಿಲ್ನ ಮುಸ್ಲಿಮರು ಮತ್ತು ಲೇಹ್ನ ಬೌದ್ಧರನ್ನು ಒಟ್ಟುಗೂಡಿಸಿರುವುದು ಲೇಹ್ ಅಪೆಕ್ಸ್ ಬಾಡಿ(LAB) ಮತ್ತು ಕಾರ್ಗಿಲ್ ಡೆಮಾಕ್ರಟಿಕ್ ಅಲಯನ್ಸ್(KDA) ಜಂಟಿ ಹೋರಾಟ. ಜಮ್ಮು-ಕಾಶ್ಮೀರಕ್ಕೆ ವಿಶೇಷ ಸಾಂವಿಧಾನಿಕ ಸ್ಥಾನಮಾನ ಕಲ್ಪಿಸಿದ್ದ 370ನೆಯ ವಿಧಿಯನ್ನು 2019ರ ಆಗಸ್ಟ್ 5ರಂದು ರದ್ದುಗೊಳಿಸಿದ ಬಳಿಕ ಲಡಾಖ್ ಅನ್ನು ಜಮ್ಮು ಕಾಶ್ಮೀರದಿಂದ ಪ್ರತ್ಯೇಕಗೊಳಿಸಿ ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಲಾಗಿದೆ. “ಈ ವಿಧಿಯೇ ನಮಗೆ ತಡೆಯಾಗಿರುವುದು, ಇದರ ರದ್ಧತಿಯಿಂದ ನಮಗೆ ಆದ್ಯತೆ ಸಿಗುತ್ತದೆ, ಕಾಶ್ಮೀರಿ ಮುಸ್ಲಿಮರ ಪ್ರಾಬಲ್ಯ ಕಡಿಮೆಯಾಗುತ್ತದೆ” ಎಂದು ನಂಬಿದ್ದ ಲಡಾಖ್ನ ಲೇಹ್ ಜಿಲ್ಲೆಯ ಬೌದ್ದರು ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ಅತ್ಯುತ್ಸಾಹದಿಂದ ಸ್ವಾಗತಿಸಿ, ಸಂಭ್ರಮಿಸಿದರು. ಆದರೆ ಇದಕ್ಕೆ ಭಿನ್ನವಾಗಿ ಲಡಾಖ್ನ ಕಾರ್ಗಿಲ್ನ ಮುಸ್ಲಿಮರು ಎನ್ಡಿಎ ಸರ್ಕಾರದ ತೀರ್ಮಾನವನ್ನು ವಿರೋಧಿಸಿದರು. ಕೇಂದ್ರಾಡಳಿತ ಪ್ರದೇಶದ ಎರಡು ಜಿಲ್ಲೆಗಳ ಈ ಭಿನ್ನಾಭಿಪ್ರಾಯವು ಆರಂಭದಲ್ಲಿ ಮುಸ್ಲಿಮರು ಮತ್ತು ಬೌದ್ಧರ ನಡುವೆ ವೈಮನಸ್ಸನ್ನು ಇನ್ನಷ್ಟೂ ಹೆಚ್ಚಿಸಿತ್ತು.

ಆದರೆ ಲೇಹ್ನ ಜನರ ಸಂಭ್ರಮವು ಅತಿ ಶೀಘ್ರವೇ ಕೇಂದ್ರದ ವಿರುದ್ಧದ ಹೋರಾಟವಾಗಿ ಬದಲಾಯಿತು.. 370ರ ರದ್ಧತಿ ಬಳಿಕ ದೇಶದ ಇತರೆ ಭಾಗಗಳ ಜನರು ಲಡಾಖ್ನಲ್ಲಿ, ಜಮ್ಮು ಕಾಶ್ಮೀರದಲ್ಲಿ ವಾಸ ಮಾಡಬಹುದು, ಉದ್ಯೋಗ ಪಡೆಯಬಹುದಾಗಿದೆ. ಕೈಗಾರಿಕೆಗಳನ್ನು ಸ್ಥಾಪಿಸಬಹುದು. ಗಣಿಗಾರಿಕೆ ನಡೆಸಬಹುದು ಇದರಿಂದಾಗಿ ತಮ್ಮ ಉದ್ಯೋಗ ಭದ್ರತೆ, ಸಂಸ್ಕೃತಿಯ ರಕ್ಷಣೆಗೆ ತೊಡಕು ಉಂಟಾಗುತ್ತದೆ ಎಂಬ ಅರಿವು ಮೂಡುತ್ತಿದ್ದಂತೆ ಲೇಹ್ನ ಜನರು ಆತಂಕಕ್ಕೆ ಒಳಗಾದರು. ಲಡಾಖ್ನ ಭಾಗವಾಗಿರುವ ಕಾರ್ಗಿಲ್ನೊಂದಿಗೆ ಲೇಹ್ ನಾಯಕರುಗಳು ಕೈಜೋಡಿಸಿದರು. ಲಡಾಖ್ಗೆ ರಾಜ್ಯದ ಸ್ಥಾನಮಾನ, ಪರಿಶಿಷ್ಟ ಪಂಗಡಗಳ ಅಸ್ಮಿತೆ ಗುರುತಿಸಿ ಇತರೆ ಈಶಾನ್ಯ ರಾಜ್ಯಗಳಂತೆ ಆರನೇ ಪರಿಚ್ಛೇದಕ್ಕೆ ಸೇರ್ಪಡೆ, ಲೇಹ್ ಮತ್ತು ಕಾರ್ಗಿಲ್ಗೆ ಪ್ರತ್ಯೇಕ ಲೋಕಸಭೆ ಸ್ಥಾನ ಮತ್ತು ಲಡಾಖ್ ಲೋಕ ಸೇವಾ ಆಯೋಗ(ಪಿಎಸ್ಎ) ರಚಿಸಬೇಕೆಂಬ ಬೇಡಿಕೆಗಳು ಮುಸ್ಲಿಮರು ಮತ್ತು ಬೌದ್ಧರನ್ನು ಒಗ್ಗೂಡಿಸಿದೆ.
2022ರಲ್ಲಿ ಶಿಯಾ ಮುಸ್ಲಿಮರು ಬೌದ್ದ ಮಠಕ್ಕಾಗಿ ಭೂಮಿ ಕೊಡುಗೆಯಾಗಿ ನೀಡುವ ಮೂಲಕ ಸುಮಾರು 42 ವರ್ಷಗಳ ವಿವಾದವೊಂದಕ್ಕೆ ತೆರೆ ಎಳೆದಿದ್ದಾರೆ. ಈ ಮೂಲಕ ಲಡಾಖ್ನಲ್ಲಿ ಸೌಹಾರ್ದತೆಯಿದೆ ಎಂಬ ಸಂದೇಶವನ್ನು ಸಾರಿದ್ದಾರೆ. ಆದರೆ ಇಂದಿಗೂ ಮುಸ್ಲಿಮರು ಮತ್ತು ಬೌದ್ದರ ನಡುವೆ ವಿಷ ಬೀಜವನ್ನು ಬಿತ್ತುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಲೇ ಇದೆ. ಲಡಾಖ್ಗೆ ಪ್ರತ್ಯೇಕ ರಾಜ್ಯದ ಸ್ಥಾನಮಾನ ಸೇರಿದಂತೆ ನಾಲ್ಕು ಬೇಡಿಕೆಗಳನ್ನು ಮುಂದಿಟ್ಟು ಪರಿಸರವಾದಿ ಸೋನಮ್ ವಾಂಗ್ಚುಕ್ ನೇತೃತ್ವದಲ್ಲಿ ಉಪವಾಸ ಸತ್ಯಾಗ್ರಹ ನಡೆದಿದ್ದು, ಇದಕ್ಕೂ ಮುನ್ನ ಸರ್ವಧರ್ಮೀಯ ಪ್ರಾರ್ಥನೆಯನ್ನು ನಡೆಸಲಾಗಿದೆ. ಈ ವೇಳೆ ಹಿಂದೂ ಧರ್ಮದ ಪ್ರಾರ್ಥನೆಯನ್ನು ಸಲ್ಲಿಸಿದ್ದಕ್ಕೆ ಬಿಜೆಪಿ ವಿರೋಧವನ್ನು ವ್ಯಕ್ತಪಡಿಸುವ ಕೀಳು ರಾಜಕೀಯಕ್ಕೆ ಇಳಿದಿದೆ. ಏನೇ ಆದರೂ ಉತ್ತರ ಪ್ರದೇಶ, ಕರ್ನಾಟಕದ ದಕ್ಷಿಣ ಕನ್ನಡದಲ್ಲಿ ನಡೆಯುವಂತಹ ಕೋಮು ಗಲಭೆಗೆ, ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯಕ್ಕೆ ಲಡಾಖ್ ಸಾಕ್ಷಿಯಾಗಿಲ್ಲ ಎನ್ನುತ್ತಾರೆ ಅಲ್ಲಿನ ಸ್ಥಳೀಯರು.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.




