ಮೂಲಸೌಕರ್ಯ ಅಭಿವೃದ್ಧಿಯ ಹೆಸರಿನಲ್ಲಿ ಕಳಪೆ ಕಾಮಗಾರಿಗಳು ನಡೆಯುತ್ತಿರುವುದು ಕೇವಲ ಮಧ್ಯ ಪ್ರದೇಶಕ್ಕೆ ಮಾತ್ರ ಸೀಮಿತವಾಗಿಲ್ಲ. ಇತ್ತೀಚಿನ ವರ್ಷಗಳಲ್ಲಿ ‘ಡಬಲ್ ಎಂಜಿನ್’ ಸರ್ಕಾರಗಳಿರುವ ಇತರ ಹಲವು ರಾಜ್ಯಗಳಲ್ಲೂ ಇಂತಹ ಕಳಪೆ ಕಾಮಗಾರಿಗಳ ಸರಣಿಯೇ ಅನಾವರಣಗೊಳ್ಳುತ್ತಿದೆ. ಗುಜರಾತ್ನ ಮೊರ್ಬಿಯಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನವೀಕರಣಗೊಂಡಿದ್ದ ಮಚ್ಚು ನದಿಯ ತೂಗುಸೇತುವೆಯು, ಉದ್ಘಾಟನೆಯಾದ ಕೇವಲ ಐದೇ ದಿನಗಳಲ್ಲಿ ಕುಸಿದು ಬಿದ್ದು 135ಕ್ಕೂ ಹೆಚ್ಚು ಅಮಾಯಕರು ಜಲಸಮಾಧಿಯಾದ ಘಟನೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು
‘ಡಬಲ್ ಎಂಜಿನ್’ ಸರ್ಕಾರದ ಅಭಿವೃದ್ಧಿಯ ಜಪದ ನಡುವೆಯೇ, ಮಧ್ಯ ಪ್ರದೇಶದಲ್ಲಿ ಬೃಹತ್ ಭ್ರಷ್ಟಾಚಾರ ಹಾಗೂ ಕಳಪೆ ಕಾಮಗಾರಿಯ ಕರಾಳ ಮುಖವೊಂದು ಬಯಲಾಗಿದೆ. ಕೇವಲ ಮೂರು ವರ್ಷಗಳ ಹಿಂದೆ ಸುಮಾರು 400 ಕೋಟಿ ರೂಪಾಯಿಗಳ ಭಾರಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ರೈಲ್ವೆ ಮೇಲ್ಸೇತುವೆಯೊಂದು ದಿಢೀರನೆ ಕುಸಿದುಬಿದ್ದಿದ್ದು, ಸರ್ಕಾರದ ಕಾರ್ಯವೈಖರಿಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ಭುಗಿಲೆದ್ದಿದೆ.
ಜಬಲ್ಪುರ ಮತ್ತು ಭೋಪಾಲ್ ನಗರಗಳನ್ನು ಬೆಸೆಯುವ ಪ್ರಮುಖ ರಾಷ್ಟ್ರೀಯ ಹೆದ್ದಾರಿ 45ರಲ್ಲಿ ಶಹಾಪುರ ಬಳಿ ನಿರ್ಮಿಸಲಾಗಿದ್ದ ಈ ಮೇಲ್ಸೇತುವೆಯ ಬಹುದೊಡ್ಡ ಭಾಗ ಭಾನುವಾರ (ಫೆಬ್ರವರಿ 22) ಸಂಜೆ ಕುಸಿದುಬಿದ್ದಿದೆ. ಶಹಾಪುರ ಬಳಿಯ ರೈಲ್ವೆ ಕ್ರಾಸಿಂಗ್ನಲ್ಲಿ ವಾಹನ ದಟ್ಟಣೆ ನಿಯಂತ್ರಿಸಲು ಮತ್ತು ಸುಗಮ ಸಂಚಾರಕ್ಕಾಗಿ ಈ ಸೇತುವೆಯನ್ನು ನಿರ್ಮಿಸಲಾಗಿತ್ತು. ಆದರೆ, ಕಳಪೆ ಗುಣಮಟ್ಟದ ಕಾಮಗಾರಿಯಿಂದಾಗಿ 2025ರ ಡಿಸೆಂಬರ್ನಲ್ಲಿಯೇ ಸೇತುವೆಯ ಒಂದು ಭಾಗದಲ್ಲಿ ಬಿರುಕು ಬಿಟ್ಟು ಕುಸಿದಿತ್ತು. ಅಂದಿನಿಂದ ಆ ಮಾರ್ಗದಲ್ಲಿ ವಾಹನ ಸಂಚಾರವನ್ನು ಒಂದು ಪಥಕ್ಕೆ ಮಾತ್ರ ಸೀಮಿತಗೊಳಿಸಿ, ದುರಸ್ತಿ ಕಾರ್ಯ ಕೈಗೊಳ್ಳಲಾಗಿತ್ತು. ದುರಸ್ತಿ ಕಾರ್ಯ ನಡೆಯುತ್ತಿರುವಾಗಲೇ ಇದೀಗ ಸೇತುವೆಯ ಮತ್ತೊಂದು ಬೃಹತ್ ಭಾಗ ಸಂಪೂರ್ಣವಾಗಿ ನೆಲಕ್ಕುರುಳಿದೆ.
ಅದೃಷ್ಟವಶಾತ್, ದುರಸ್ತಿ ನಡೆಯುತ್ತಿದ್ದ ಕಾರಣ ವಾಹನಗಳ ಸಂಚಾರವಿರಲಿಲ್ಲ; ಹೀಗಾಗಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೇತುವೆಯ ಕೆಳಗೆ ರೈಲು ಮಾರ್ಗವಿದ್ದು, ರೈಲು ಹಾದುಹೋಗುವಾಗ ಅಥವಾ ವಾಹನ ದಟ್ಟಣೆ ಇರುವಾಗ ಈ ಘಟನೆ ನಡೆದಿದ್ದರೆ ಘೋರ ದುರಂತವೇ ಸಂಭವಿಸುತ್ತಿತ್ತು ಎಂದು ಸ್ಥಳೀಯರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.
ಕಪ್ಪುಪಟ್ಟಿಯಲ್ಲಿದ್ದ ಗುತ್ತಿಗೆದಾರನಿಗೆ ಮಣೆ
ಈ ಬೃಹತ್ ಕಾಮಗಾರಿಯ ಗುತ್ತಿಗೆಯನ್ನು ‘ಬಾಂಗರ್ ಇನ್ಫ್ರಾ’ ಎಂಬ ಕಂಪನಿಗೆ ನೀಡಲಾಗಿತ್ತು. ಅಚ್ಚರಿಯೆಂದರೆ, ಈ ಕಂಪನಿಯು ಈ ಹಿಂದೆಯೇ ಪರಿಸರ ನಿಯಮಗಳನ್ನು ಉಲ್ಲಂಘಿಸಿ ಅಕ್ರಮ ಗಣಿಗಾರಿಕೆ ನಡೆಸಿದ ಆರೋಪದ ಮೇಲೆ 82 ಕೋಟಿ ರೂ.ಗಳ ಭಾರಿ ದಂಡಕ್ಕೆ ಗುರಿಯಾಗಿತ್ತು. ಇಂತಹ ಕಪ್ಪುಪಟ್ಟಿಯಲ್ಲಿರುವ ಕಂಪನಿಗೆ ನೂರಾರು ಕೋಟಿ ರೂಪಾಯಿಗಳ ಯೋಜನೆಯ ಹೊಣೆ ನೀಡಿರುವುದು ವ್ಯವಸ್ಥೆಯಲ್ಲಿ ಬೇರೂರಿರುವ ಭ್ರಷ್ಟಾಚಾರಕ್ಕೆ ಹಿಡಿದ ಕನ್ನಡಿಯಾಗಿದೆ. ಘಟನೆಯ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ , ಈ ಸೇತುವೆಯನ್ನು ಮಧ್ಯಪ್ರದೇಶ ರಸ್ತೆ ಅಭಿವೃದ್ಧಿ ನಿಗಮ ನಿರ್ಮಿಸಿದ್ದು, ಇದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಜಾರಿಕೊಂಡಿದೆ.
ಇದನ್ನು ಓದಿದ್ದೀರಾ? ಶೋಯೆಬ್ ಖಾನ್ | ಬಿಹಾರದ ಕುಗ್ರಾಮದಿಂದ ಯುಎಇ ವಿಶ್ವಕಪ್ ತಂಡದವರೆಗೆ ರೋಚಕ ಪಯಣ
ಸೇತುವೆ ಕುಸಿತವು ಮಧ್ಯ ಪ್ರದೇಶದಲ್ಲಿ ಭಾರೀ ರಾಜಕೀಯ ಸಂಚಲನ ಸೃಷ್ಟಿಸಿದೆ. ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಜಿತು ಪಟ್ವಾರಿ ಅವರು ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. “400 ಕೋಟಿ ರೂ. ವೆಚ್ಚದ ಸೇತುವೆ ಕೇವಲ 3 ವರ್ಷಗಳಲ್ಲಿ ಕುಸಿದುಬಿದ್ದಿರುವುದು ಬಿಜೆಪಿಯ ಸಾಂಸ್ಥಿಕ ಭ್ರಷ್ಟಾಚಾರಕ್ಕೆ ಸ್ಪಷ್ಟ ಸಾಕ್ಷಿ. ಜನರ ತೆರಿಗೆ ಹಣವನ್ನು ಬಹಿರಂಗವಾಗಿ ಲೂಟಿ ಮಾಡಲಾಗುತ್ತಿದೆ. ಈ ಬಗ್ಗೆ ಉನ್ನತ ಮಟ್ಟದ ನ್ಯಾಯಾಂಗ ತನಿಖೆಯಾಗಬೇಕು ಹಾಗೂ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು” ಎಂದು ಆಗ್ರಹಿಸಿದ್ದಾರೆ.
ಬಿಜೆಪಿ ಆಡಳಿತದ ವಿವಿಧ ರಾಜ್ಯಗಳಲ್ಲಿ ಕಳಪೆ ಕಾಮಗಾರಿಗಳ ಸರಮಾಲೆ
ಮೂಲಸೌಕರ್ಯ ಅಭಿವೃದ್ಧಿಯ ಹೆಸರಿನಲ್ಲಿ ಕಳಪೆ ಕಾಮಗಾರಿಗಳು ನಡೆಯುತ್ತಿರುವುದು ಕೇವಲ ಮಧ್ಯ ಪ್ರದೇಶಕ್ಕೆ ಮಾತ್ರ ಸೀಮಿತವಾಗಿಲ್ಲ. ಇತ್ತೀಚಿನ ವರ್ಷಗಳಲ್ಲಿ ‘ಡಬಲ್ ಎಂಜಿನ್’ ಸರ್ಕಾರಗಳಿರುವ ಇತರ ಹಲವು ರಾಜ್ಯಗಳಲ್ಲೂ ಇಂತಹ ಕಳಪೆ ಕಾಮಗಾರಿಗಳ ಸರಣಿಯೇ ಅನಾವರಣಗೊಳ್ಳುತ್ತಿದೆ. ಗುಜರಾತ್ನ ಮೊರ್ಬಿಯಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನವೀಕರಣಗೊಂಡಿದ್ದ ಮಚ್ಚು ನದಿಯ ತೂಗುಸೇತುವೆಯು, ಉದ್ಘಾಟನೆಯಾದ ಕೇವಲ ಐದೇ ದಿನಗಳಲ್ಲಿ ಕುಸಿದು ಬಿದ್ದು 135ಕ್ಕೂ ಹೆಚ್ಚು ಅಮಾಯಕರು ಜಲಸಮಾಧಿಯಾದ ಘಟನೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಅದೇ ಗುಜರಾತ್ನ ರಾಜ್ಕೋಟ್ ವಿಮಾನ ನಿಲ್ದಾಣದಲ್ಲಿ ಮೇಲ್ಛಾವಣಿ ಕುಸಿದ ಘಟನೆಯೂ ವರದಿಯಾಗಿತ್ತು. ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಮೈತ್ರಿ ಸರ್ಕಾರದ ಅವಧಿಯಲ್ಲಿ ಸಿಂಧುದುರ್ಗದಲ್ಲಿ ನಿರ್ಮಿಸಲಾಗಿದ್ದ ಛತ್ರಪತಿ ಶಿವಾಜಿ ಮಹಾರಾಜರ ಬೃಹತ್ ಪ್ರತಿಮೆಯು ಉದ್ಘಾಟನೆಯಾದ ಕೇವಲ 8 ತಿಂಗಳಲ್ಲೇ ಕುಸಿದುಬಿದ್ದಿದ್ದು ವ್ಯಾಪಕ ಜನಾಕ್ರೋಶಕ್ಕೆ ಕಾರಣವಾಗಿತ್ತು.
ಇನ್ನು ಉತ್ತರಪ್ರದೇಶದಲ್ಲಿ ಬಹುಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಅಯೋಧ್ಯೆಯ ‘ರಾಮ್ ಪಥ್’ ರಸ್ತೆಯು ಮಳೆಗೆ ಅಲ್ಲಲ್ಲಿ ಕುಸಿದು ಗುಂಡಿ ಬಿದ್ದಿದ್ದರೆ, ಹೊಸ ವಿಮಾನ ನಿಲ್ದಾಣದ ಮೇಲ್ಛಾವಣಿಯ ಭಾಗಗಳು ಕುಸಿದಿದ್ದವು. ಬಿಹಾರದಲ್ಲಿ ಎನ್ಡಿಎ ಸರ್ಕಾರದ ಅವಧಿಯಲ್ಲಿ ನೂರಾರು ಕೋಟಿ ವೆಚ್ಚದ ಡಜನ್ಗಟ್ಟಲೆ ಸೇತುವೆಗಳು ಉದ್ಘಾಟನೆಗೂ ಮುನ್ನವೇ ಇಸ್ಪೀಟ್ ಎಲೆಗಳಂತೆ ಕುಸಿದು ಬಿದ್ದ ನಿದರ್ಶನಗಳಿವೆ. ಈ ಎಲ್ಲಾ ಘಟನೆಗಳು, ‘ವೇಗದ ಅಭಿವೃದ್ಧಿ’ಯ ಭರಾಟೆಯಲ್ಲಿ ಗುತ್ತಿಗೆದಾರರಿಗೆ ಮಣೆ ಹಾಕಿ, ಗುಣಮಟ್ಟವನ್ನು ಗಾಳಿಗೆ ತೂರುತ್ತಿರುವ ವ್ಯವಸ್ಥಿತ ಭ್ರಷ್ಟಾಚಾರದ ಕರಾಳ ಮುಖವನ್ನು ಜಗಜ್ಜಾಹೀರುಗೊಳಿಸಿವೆ ಎಂದು ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.





