ಪ್ರಧಾನಿ ಮೋದಿ ನೇತೃತ್ವದ ಮೂರು ಅವಧಿಯ ಎನ್ಡಿಎ ಸರ್ಕಾರವು ಭಾರತದಲ್ಲಿ ಉದ್ಯೋಗ ಸೃಷ್ಟಿಯಲ್ಲಿ ಕಳಪೆ ಸಾಧನೆ ಮಾಡಿದೆ. ಮಾತ್ರವಲ್ಲ, ಸಾಕಷ್ಟು ಉದ್ಯೋಗ ನಷ್ಟಕ್ಕೂ ಕಾರಣವಾಗಿದೆ. ಆದರೆ, ಉದ್ಯೋಗ ಕ್ಷೇತ್ರವನ್ನು ಬಲಪಡಿಸುವಲ್ಲಿ ಮೋದಿ ಸರ್ಕಾರ ವಿಫಲವಾಗಿದೆ.
2014ರಲ್ಲಿ ನಿರುದ್ಯೋಗ ವಿಚಾರವನ್ನ ಮುನ್ನೆಲೆಗೆ ತಂದು ನಾವೇನಾದರೂ ಅಧಿಕಾರಕ್ಕೆ ಬಂದರೆ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಜ್ಞೆ ಮಾಡಿದ್ದರು. ಮೋದಿ ಪ್ರತಿಜ್ಞೆ ಮಾಡಿದಂತೆ ನಡೆದುಕೊಂಡಿದ್ದರೇ, ಈಗಾಗಲೇ 22 ಕೋಟಿಗೂ ಅಧಿಕ ಉದ್ಯೋಗ ಸೃಷ್ಟಿ ಮಾಡಬೇಕಿತ್ತು. ಆದರೆ, ಹಾಗೇ ಆಗಿಲ್ಲ. ಹೆಚ್ಚಿನ ಜನರು ಉದ್ಯೋಗಕ್ಕೆ ಪ್ರವೇಶ ಮಾಡುತ್ತಿದ್ದಾರೆ ಎಂದು ಸರ್ಕಾರ ಹೇಳಿಕೊಂಡರೂ, ಅನೇಕ ಕಾರ್ಮಿಕರು ಕಡಿಮೆ ಸಂಬಳ, ಅಸುರಕ್ಷಿತ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬುದು ವಾಸ್ತವ. ಜಿಡಿಪಿ ಏರಿಕೆಯಾಗಿ ಭಾರತ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾದಾಗಲೂ, ಇದು ಉದ್ಯೋಗ ಸ್ವರೂಪದಲ್ಲಿ ಯಾವುದೇ ಸುಧಾರಣೆಗೆ ಕಾರಣವಾಗಿಲ್ಲ.
ಆದಾಗ್ಯೂ, ಭಾರತವು ಉದ್ಯೋಗ ಸೃಷ್ಟಿಯಲ್ಲಿ ಮುಮ್ಮುಖವಾಗಿ ಬೆಳೆಯುತ್ತಿಲ್ಲ. ಬದಲಾಗಿ, ಹಿಮ್ಮುಖ ಚಲನೆಯಲ್ಲಿದೆ. ಪ್ರಸ್ತುತ ಸಂದರ್ಭದಲ್ಲಿ, ಕಾರ್ಮಿಕರು ಕೃಷಿ ಕ್ಷೇತ್ರದಿಂದ ಉತ್ಪಾದನೆ ಮತ್ತು ಸೇವಾ ವಲಯದೆಡೆ ಹೆಚ್ಚು ಬದಲಾವಣೆ ಕಾಣಬೇಕಿತ್ತು. ಆದರೆ, ಕೋವಿಡ್ ನಂತರದ ಅವಧಿಯಲ್ಲಿ, ಉತ್ಪಾದನಾ ವಲಯದಲ್ಲಿದ್ದ ಕಾರ್ಮಿಕರೇ ಕೃಷಿಯೆಡೆಗೆ ವಾಲುತ್ತಿದ್ದಾರೆ. ಉತ್ಪಾದನಾ ವಲಯವು ಅನೌಪಚಾರಿಕ ಮತ್ತು ಅನಿಶ್ಚಿತ ಉದ್ಯೋಗದ ಬೆಳವಣಿಗೆಯಿಂದ ಕೂಡಿದೆ. ಇಂತಹ ಪರಿಸ್ಥಿತಿಯಲ್ಲಿ, ಉತ್ಪಾದನಾ ವಲಯಗಳಲ್ಲಿ ಉದ್ಯೋಗವನ್ನು ಹೆಚ್ಚಿಸುತ್ತೇವೆಂದು ಹೇಳುತ್ತಿದ್ದ ಸರ್ಕಾರವು ನಿಜವಾಗಿಯೂ ಯಶಸ್ವಿಯಾಗಿದೆಯೇ?

ಉದ್ಯೋಗ ಸೃಷ್ಟಿಸುವಲ್ಲಿ ವಿಫಲತೆ
2014ರಲ್ಲಿ ಅಧಿಕಾರಕ್ಕೆ ಬಂದ ಮೋದಿ ಸರ್ಕಾರ, ಮೇಕ್ ಇನ್ ಇಂಡಿಯಾ ಯೋಜನೆಯನ್ನು ಆರಂಭಿಸಿತು. ಈ ಯೋಜನೆಯು ಉತ್ಪಾದನಾ ವಲಯವನ್ನು ಉತ್ತೇಜಿಸುತ್ತದೆ ಮತ್ತು ಉದ್ಯೋಗ ಸೃಷ್ಟಿಗೆ ನೆರವಾಗುತ್ತದೆ. 10 ಕೋಟಿ ಉದ್ಯೋಗ ಸೃಷ್ಟಿ ಮಾಡುವ ಗುರಿ ಹಾಕಿಕೊಳ್ಳಲಾಗಿದೆ ಎಂದು ಸರ್ಕಾರ ಹೇಳಿಕೊಂಡಿತ್ತು. ಆದರೆ, ಈ ಯೋಜನೆಯು 2023ರ ಹೊತ್ತಿಗೆ 10ನೇ ವರ್ಷಕ್ಕೆ ಕಾಲಿಟ್ಟಾಗ ತನ್ನ ಗುರಿಯನ್ನು ಸಾಧಿಸಿರಲಿಲ್ಲ. ಈ 10 ವರ್ಷಗಳಲ್ಲಿ ಕೇವಲ 1.85 ಕೋಟಿ ಉದ್ಯೋಗಗಳು ಮಾತ್ರವೇ ಸೃಷ್ಟಿಯಾಗಿವೆ ಎಂದು ಸರ್ಕಾರವೇ ಲೋಕಸಭೆಯಲ್ಲಿ ಹೇಳಿಕೊಂಡಿದೆ.
ಕೋವಿಡ್ ನಂತರ 2020ರ ನವೆಂಬರ್ನಲ್ಲಿ, ದೇಶದ ಉತ್ಪಾದನಾ ಸಾಮರ್ಥ್ಯಗಳನ್ನು ಹೆಚ್ಚಿಸಲು ಮೋದಿ ಸರ್ಕಾರವು ‘ಉತ್ಪಾದನಾ ಪ್ರೋತ್ಸಾಹಕ ಯೋಜನೆ’ಯನ್ನು ಘೋಷಿಸಿತು. ಅದಕ್ಕಾಗಿ, ಒಟ್ಟು 1.97ಲಕ್ಷ ಕೋಟಿ ರೂ.ಗಳನ್ನು ಮೀಸಲಿಟ್ಟಿತು. ಆದರೆ, ಕೆಲವು ವಲಯಗಳಲ್ಲಿ ಉತ್ಪಾದನಾ ಗುರಿಗಳಲ್ಲಿ 37% ಗುರಿಯನ್ನು ಸಾಧಿಸಿದರೂ, ಗಣನೀಯ ಯಶಸ್ಸು ಕಾಣಲಿಲ್ಲ. ಪರಿಣಾಮ, ಈ ಯೋಜನೆ 2025ರ ಆರಂಭದಲ್ಲಿ ರದ್ದಾಗಿತ್ತು.
ಉತ್ಪಾದನೆಯಲ್ಲಿನ ನಿಶ್ಚಲತೆಯೂ ಉದ್ಯೋಗದ ಮೇಲೆ ಪರಿಣಾಮ ಬೀರಿದೆ. 2011-12ರಲ್ಲಿ ಒಟ್ಟು ಉದ್ಯೋಗಗಳ ಪೈಕಿ ಉತ್ಪಾದನಾ ವಲಯವು 12.6%ರಷ್ಟು ಉದ್ಯೋಗ ಪಾಲನ್ನು ಹೊಂದಿತ್ತು. ಆ ನಂತರ, ಉತ್ಪಾದನಾ ವಲಯದಲ್ಲಿ ಉದ್ಯೋಗಗಳ ಸ್ಥಿರವಾದ ಕುಸಿತ ಕಂಡುಬಂದಿದೆ.
ಸಂಕಷ್ಟದಲ್ಲಿರುವ MSMEಗಳು, ಉದ್ಯೋಗ ಕುಸಿತ
ಸರ್ಕಾರದ ಉದ್ಯೋಗ ಕಾರ್ಯಸೂಚಿಯ ಬಹುಪಾಲು ಭಾಗವು MSME ವಲಯದ ಮೇಲೆ ನಿಂತಿದೆ. MSMEಗಳು ಆರ್ಥಿಕತೆಯ ಬೆಳವಣಿಗೆ ಮತ್ತು ಉದ್ಯೋಗಗಳ ಎಂಜಿನ್ ಎಂಬ ನಿರೂಪಣೆಯ ಹೊರತಾಗಿಯೂ, ಭಾರತದ ಒಟ್ಟು ಮೌಲ್ಯವರ್ಧನೆಯಲ್ಲಿ MSMEಗಳ ಪಾಲು 2014 ರಿಂದ ಸುಮಾರು 29.6% ರಷ್ಟಿದೆ. ಆದಾಗ್ಯೂ, ನೋಟು ರದ್ದತಿ ಮತ್ತು GST ಅನುಷ್ಠಾನದಂತಹ ನೀತಿ-ನಿರ್ಧಾರಗಳು ಮತ್ತು ಕೋವಿಡ್ ಸಾಂಕ್ರಾಮಿಕ ಹಾಗೂ ಅಮೆರಿಕದ ಸುಂಕ ಹೇರಿಕೆಗಳಿಂದ ಎಂಎಸ್ಎಂಇ ವಲಯವು ತೀವ್ರ ಆರ್ಥಿಕ ಆಘಾತಕ್ಕೆ ಸಿಲುಕಿದೆ. MSMEಗಳು ಗಂಭೀರವಾಗಿ ಹಾನಿಗೊಳಗಾಗಿವೆ. ಪರಿಣಾಮ, ಎಂಎಸ್ಎಂಇಗಳು ಮುಚ್ಚುತ್ತಿವೆ ಮತ್ತು ಉದ್ಯೋಗ ನಷ್ಟವೂ ಹೆಚ್ಚಾಗಿದೆ. 2021-22 ಮತ್ತು 2024-25ರ ನಡುವೆ, ಸುಮಾರು 79,000 MSMEಗಳು ಮುಚ್ಚಲ್ಪಟ್ಟಿವೆ. MSMEಗಳ ಮುಚ್ಚುವಿಕೆಯ ಸಂಖ್ಯೆಯು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ.
ಎಂಎಸ್ಎಂಇಗಳನ್ನು ಗಟ್ಟಿಗೊಳಿಸಲು ಇರುವ ಏಕೈಕ ಮಾರ್ಗ, ಸಾಲದ ಲಭ್ಯತೆ. ಆದರೆ, ಸಾಲ ಸೌಲಭ್ಯಗಳಲ್ಲಿಯೂ ಸಮಸ್ಯೆಗಳಿವೆ. ಎಂಎಸ್ಎಂಇಗೆ ಸಾಲ ಒದಗಿಸಬಹುದಾದ, ಪ್ರಧಾನ ಮಂತ್ರಿ ಉದ್ಯೋಗ ಸೃಷ್ಟಿ ಕಾರ್ಯಕ್ರಮಕ್ಕೆ 2019-20 ರಿಂದ ಬಜೆಟ್ ಹಂಚಿಕೆಗಳು ಕುಸಿಯುತ್ತವೇ ಬಂದಿವೆ. ಪರಿಣಾಮ, ಯೋಜನೆಯ ಮೂಲಕ ಸಹಾಯ ಪಡೆದ ಉದ್ಯಮಗಳು ಮತ್ತು ಉದ್ಯೋಗ ಸೃಷ್ಟಿಯ ಸಂಖ್ಯೆ ತೀವ್ರವಾಗಿ ಕುಸಿದಿವೆ.
ಉದ್ಯಮಶೀಲತೆಯನ್ನು ಉತ್ತೇಜಿಸುವ ಸರ್ಕಾರದ ಪ್ರಮುಖ ಯೋಜನೆಯಾದ ಪ್ರಧಾನ ಮಂತ್ರಿ ಮುದ್ರಾ ಯೋಜನೆ (PMMY) ಪ್ರಕಾರ, 2020-21ನೇ ಹಣಕಾಸು ವರ್ಷದಿಂದ 2024-25ನೇ ಹಣಕಾಸು ವರ್ಷದ ಅಂತ್ಯದವರೆಗೆ ಹೆಚ್ಚಿನ ಸಾಲ ಖಾತೆಗಳು 50,000 ರೂ.ಗಿಂತ ಕಡಿಮೆ ಸಾಲದ ಗಾತ್ರವನ್ನು ಹೊಂದಿವೆ. ಈ ಅವಧಿಯಲ್ಲಿ ಸರಿಸುಮಾರು 28.83 ಕೋಟಿ ಸಾಲ ಖಾತೆಗಳಲ್ಲಿ, ಸುಮಾರು 67% ಖಾತೆಗಳು ಕಡಿಮೆ ಮೊತ್ತದ ಸಾಲ ಪಡೆದಿವೆ. ಈ ಕಡಿಮೆ ಮೊತ್ತದ ಸಾಲಗಳ ಹೆಚ್ಚಿನ ಪ್ರಮಾಣವು ಉದ್ಯಮಗಳ ದೀರ್ಘಕಾಲೀನ ಪೋಷಣೆಯನ್ನು ಸರಿಯಾದ ರೀತಿಯಲ್ಲಿ ಬೆಂಬಲಿಸಿಲ್ಲ.

ಕೃಷಿ ಮತ್ತು ಗ್ರಾಮೀಣ ಆರ್ಥಿಕತೆಯ ಕಡೆಗಣನೆ
2023-24ರ ಪಿಎಲ್ಎಫ್ಎಸ್ ಪ್ರಕಾರ, ಭಾರತದ ಜನಸಂಖ್ಯೆಯ 46.1% ಜನರು ಇನ್ನೂ ಜೀವನೋಪಾಯಕ್ಕಾಗಿ ಕೃಷಿ ಮತ್ತು ಕೃಷಿ ಸಂಬಂಧಿತ ಚಟುವಟಿಕೆಗಳನ್ನು ಅವಲಂಬಿಸಿದ್ದಾರೆ. ಅವರೆಲ್ಲರೂ, ಜಿಡಿಪಿಯಲ್ಲಿ 16% ಕೊಡುಗೆ ನೀಡುತ್ತಿದ್ದಾರೆ. ಇದು ಹೆಚ್ಚು ಕಾರ್ಮಿಕರು ಅತೀ ಕಡಿಮೆ ಆದಾಯ ಮತ್ತು ಕಡಿಮೆ ಉತ್ಪಾದಕತೆಯ ಉದ್ಯೋಗಗಳಲ್ಲಿ ತೊಡಗಿದ್ದಾರೆ ಎಂಬುದನ್ನು ಒತ್ತಿಹೇಳುತ್ತದೆ.
ಇದೇ ಸಮಯದಲ್ಲಿ, ಗ್ರಾಮೀಣ ಉದ್ಯೋಗ ಸೃಷ್ಟಿಗೆ ಪ್ರಮುಖ ಯೋಜನೆಯಾದ ಮನರೇಗಾ ಅಡಿಯಲ್ಲಿಯೂ ಕೂಡ ಕೇಂದ್ರ ಸರ್ಕಾರವು, ಕೆಲಸದ ಬೇಡಿಕೆಗೆ ತಕ್ಕಷ್ಟು ಉದ್ಯೋಗಗಳನ್ನು ಸ್ಪಷ್ಟಿಸುತ್ತಿಲ್ಲ. ಮನರೇಗಾ ಯೋಜನೆಯು ಸತತ ಬಜೆಟ್ ಕಡಿತ ಮತ್ತು ದೀರ್ಘಕಾಲದ ಹಣದ ಕೊರತೆಯನ್ನು ಎದುರಿಸುತ್ತಿದೆ. ಪ್ರತಿ ವರ್ಷ ಹಂಚಿಕೆಯಾಗುವ ಬಜೆಟ್ನಲ್ಲಿ, ಸುಮಾರು 20%ರಷ್ಟು ಹಣವನ್ನು ಹಿಂದಿನ ವರ್ಷದ ಬಾಕಿ ಪಾವತಿಸಲು ಬಳಸಲಾಗುತ್ತದೆ. ಇದು ಉದ್ಯೋಗ ಸೃಷ್ಟಿಗೆ ಸಾಕಷ್ಟು ಕಡಿತ ಮಾಡಿದೆ.
2023ರಲ್ಲಿ ಮನರೇಗಾ ಸಂಘರ್ಷ ಮೋರ್ಚಾ ಹೇಳುವಂತೆ, ನೋಂದಾಯಿತ ಕುಟುಂಬಗಳಿಗೆ 100 ದಿನಗಳ ಉದ್ಯೋಗವನ್ನು ಪೂರೈಸಲು ಮನರೇಗಾಗಿನ ಬಜೆಟ್ ಅನ್ನು 2 ಲಕ್ಷ ಕೋಟಿ ರೂ.ಗಳಿಗೆ ಹೆಚ್ಚಿಸುವ ಅಗತ್ಯವಿದೆ. ಆದರೆ, ಕೇಂದ್ರ ಸರ್ಕಾರವು ಮನರೇಗಾವನ್ನೇ ಬುಡಮೇಲು ಮಾಡಿ, ಹೊಸದಾಗಿ VB GRAM G ಕಾಯ್ದೆಯನ್ನು ಜಾರಿಗೊಳಿಸಲು ಮುಂದಾಗಿದೆ. ಇದು ರಾಜ್ಯಗಳ ಮೇಲೆ ಹಣಕಾಸಿನ ಹೊರೆಯನ್ನು ಹೇರುತ್ತದೆ. ಜೊತೆಗೆ, ಗ್ರಾಮೀಣ ಉದ್ಯೋಗ ಸೃಷ್ಟಿಯನ್ನು ಮತ್ತಷ್ಟು ನಿರ್ಬಂಧಿಸುತ್ತದೆ.
ಈ ಸುದ್ದಿ ಓದಿದ್ದೀರಾ? ಕೇರಳದಲ್ಲಿ ಕುಂಭಮೇಳ ರಾಜಕಾರಣ!
ಸಂಕಷ್ಟದಲ್ಲಿರುವ ಅಸಂಘಟಿತ ವಲಯದ ಕಾರ್ಮಿಕರು
ಭಾರತವು ಉದ್ಯೋಗ ಮತ್ತು ಉದ್ಯೋಗ ಗುಣಮಟ್ಟದ ಬಿಕ್ಕಟ್ಟನ್ನು ಎದುರಿಸುತ್ತಿದೆ. ವಿಶೇಷವಾಗಿ, ಕೋವಿಡ್ ನಂತರದ ಅವಧಿಯಲ್ಲಿ ಗಿಗ್, ಅನೌಪಚಾರಿಕ ಹಾಗೂ ಅಸಂಘಟಿತ ವಲಯದ ಕೆಲಸಗಳು ಹೆಚ್ಚುತ್ತಿವೆ. ಇದು, ಉದ್ಯೋಗ ಹೆಚ್ಚುತ್ತಿದೆ ಎಂಬುದನ್ನು ಸೂಚಿಸಬಹುದು. ಆದರೆ, ಯಾವ ರೀತಿಯ ಉದ್ಯೋಗವನ್ನು ಸೃಷ್ಟಿಸಲಾಗುತ್ತಿದೆ ಎಂಬುದು ಗಮನಾರ್ಹ ಪ್ರಶ್ನೆಯಾಗಿದೆ. ಈ ಅನೌಪಚಾರಿಕ ಉದ್ಯೋಗಗಳು ಅನಿಶ್ಚಿತವಾಗಿವೆ. ಇಪಿಎಫ್ ರೀತಿಯ ಸೌಲಭ್ಯಗಳಿಂದ ಹೊರಗುಳಿಯುತ್ತವೆ. ಜನವರಿ 29ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಆರ್ಥಿಕ ಸಮೀಕ್ಷೆ ಪ್ರಕಾರ, ಬಹುತೇಕ ಗಿಗ್ ಕಾರ್ಮಿಕರು ಮಾಸಿಕ 15,000ಕ್ಕಿಂತ ಕಡಿಮೆ ಆದಾಯ ಪಡೆಯುತ್ತಿದ್ದಾರೆ.
ಇದೆಲ್ಲವೂ, ಪ್ರಧಾನಿ ಮೋದಿ ನೇತೃತ್ವದ ಮೂರು ಅವಧಿಯ ಎನ್ಡಿಎ ಸರ್ಕಾರವು ಭಾರತದಲ್ಲಿ ಉದ್ಯೋಗ ಸೃಷ್ಟಿಯಲ್ಲಿ ಕಳಪೆ ಸಾಧನೆ ಮಾಡಿದೆ. ಮಾತ್ರವಲ್ಲ, ಸಾಕಷ್ಟು ಉದ್ಯೋಗ ನಷ್ಟಕ್ಕೂ ಕಾರಣವಾಗಿದೆ. ಆದರೆ, ಉದ್ಯೋಗ ಕ್ಷೇತ್ರವನ್ನು ಬಲಪಡಿಸುವಲ್ಲಿ ಮೋದಿ ಸರ್ಕಾರ ವಿಫಲವಾಗಿದೆ ಎಂಬುದನ್ನು ಸ್ಪಷ್ಟವಾಗಿ ಸೂಚಿಸುತ್ತದೆ.




