ದೇಶದ ಮುಸಲ್ಮಾನರ ಮೇಲೆ ಇಲ್ಲದ ಪ್ರೀತಿ, ವಿದೇಶಿ ಮುಸ್ಲಿಮರ ಮೇಲ್ಯಾಕೆ? ಇದು ಒಳಗಡೆ ದ್ವೇಷ ಹೊರಗಡೆ ವೇಷ ನೀತಿಯಲ್ಲದೇ ಮತ್ತೇನೂ ಅಲ್ಲ. ದೇಶದಲ್ಲಿ ಚುನಾವಣೆಯಲ್ಲಿ ಗೆಲ್ಲುವುದಕ್ಕೆ ಮುಸ್ಲಿಮರನ್ನ ತೆಗಳುವ ಮೋದಿ, ದೇಶದಾಚೆಗೆ ವಿಶ್ವಗುರು ಎಂದೆನಿಸಿಕೊಳ್ಳಲು ವಿದೇಶಿ ಮುಸ್ಲಿಮರ ಓಲೈಕೆಯಲ್ಲಿದ್ದಾರೆ.
ಇತ್ತೀಚೆಗೆ, ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋವೊಂದು ಭಾರೀ ವೈರಲ್ ಆಗಿದೆ. ಅದು, ಪ್ರವಾದಿ ಮೊಹಮ್ಮದ್ ಅವರ 42ನೇ ವಂಶಸ್ಥ, ರಾಜ ಅಲ್ ಹುಸೈನ್ ಬಿನ್ ಅಬ್ದುಲ್ಲಾ II ಅವರನ್ನು ಮೋದಿ ಅವರು ಭೇಟಿ ಮಾಡಿದ ಫೋಟೋ. ಮೋದಿ ಅವರು ಇದೇ ವಾರ ಜೋರ್ಡಾನ್ಗೆ ಭೇಟಿ ನೀಡಿದ್ದರು. ಈ ವೇಳೆ, ಅಬ್ದುಲ್ಲಾ ಅವರನ್ನು ಭೇಟಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಅಬ್ದುಲ್ಲಾ ಅವರು ಮೋದಿ ಅವರನ್ನು ಕಾರಿನಲ್ಲಿ ಮ್ಯೂಸಿಯಂಗೆ ಕರೆದೊಯ್ದಿದ್ದರು. ಆ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿದೆ. ನೆಟ್ಟಿಗರು, ಮೋದಿ ಅವರ ಧೋರಣೆಯು ‘ಒಳಗೆ ದ್ವೇಷ – ಹೊರಗೆ ವೇಷ’ ಎಂದು ಟ್ರೋಲ್ ಮಾಡುತ್ತಿದ್ದಾರೆ.
ಹೌದು, ಆರ್ ಎಸ್ ಎಸ್ನ ರಾಜಕೀಯ ಘಟಕವಾಗಿರುವ ಬಿಜೆಪಿ ಮುಸ್ಲಿಂ ದ್ವೇಷ ಮತ್ತು ಹಿಂದುತ್ವ ಧೃವೀಕರಣದಿಂದಲೇ ಅಧಿಕಾರಕ್ಕೆ ಬಂದಿದೆ ಎಂಬುದು ಜಗಜ್ಜಾಹೀರಾಗಿರುವ ವಿಚಾರ. ಅದರಲ್ಲೂ ಸಂಘದ ಹಿನ್ನೆಲೆಯುಳ್ಳ ಪ್ರಧಾನಿ ಮೋದಿ ಅವರ ಮುಸ್ಲಿಂ ದ್ವೇಷ ಅವರ ನೀತಿ-ನಿಲುವು, ಧೋರಣೆ, ಭಾಷಣಗಳಲ್ಲಿಯೇ ವ್ಯಕ್ತವಾಗಿದೆ. ಮುಖ್ಯವಾಗಿ, 2024ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಅವರ ಭಾಷಣಗಳು ಮುಸ್ಲಿಮರನ್ನು ಗುರಿಯಾಗಿಸಿಕೊಂಡಿದ್ದ ದ್ವೇಷದಿಂದಲೇ ಕೂಡಿದ್ದವು. ಮುಸ್ಲಿಮರನ್ನು ನುಸುಳುಕೋರರು, ಹೆಚ್ಚು ಮಕ್ಕಳನ್ನು ಹೊಂದಿರುವವರು ಎಂದೆಲ್ಲ ಟೀಕಿಸಿದ್ದರು.

ಆದರೆ, ಭಾರತದ ಆಚೆಗೆ ಮೋದಿ ಅವರು ಸೌಹಾರ್ದತೆ ವೇಷ ಧರಿಸಿ, ಮುಸ್ಲಿಂ ನಾಯಕರನ್ನು ಭೇಟಿ ಮಾಡುವುದು, ಅಪ್ಪಿಕೊಳ್ಳುವುದು, ಜೊತೆಯಾಗಿ ಊಟ ಮಾಡುವುದು, ಫೋಟೋಗೆ ಪೋಸ್ ಕೊಡುವುದನ್ನು ಮಾಡುತ್ತಲೇ ಬಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು 2024ರಲ್ಲಿ ಯುಎಇಗೆ ಭೇಟಿ ನೀಡಿದ್ದರು. ಅಬುಧಾಬಿಯ ಕ್ರೌನ್ ಪ್ರಿನ್ಸ್ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರೊಂದಿಗೆ ಹಿಂದೂ ದೇವಾಲಯ ಉದ್ಘಾಟನೆಯಲ್ಲಿ ಭಾಗಿಯಾಗಿದ್ದರು. ಸೌದಿ ಅರೇಬಿಯಾದ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅವರನ್ನೂ ಭೇಟಿ ಮಾಡಿ, ಜೊತೆಯಾಗಿ ಊಟ ಸವಿದಿದ್ದರು.
ಇದೇ ವರ್ಷ, ಒಮಾನ್ಗೆ ತೆರಳಿದ್ದ ಮೋದಿ, ಸುಲ್ತಾನ್ ಹೈಥಮ್ ಬಿನ್ ತಾರಿಕ್ ಅವರನ್ನು ಭೇಟಿಯಾಗಿ ಆ ದೇಶದ ಅತ್ಯುನ್ನತ ನಾಗರಿಕ ಗೌರವ ಪಡೆದರು. ಈಜಿಪ್ಟ್ನ್ ಅಧ್ಯಕ್ಷ ಅಬ್ದೆಲ್ ಫತಾಹ್ ಅಲ್-ಸಿಸಿ ಅವರನ್ನು ಭೇಟಿ ಮಾಡಿ, ಬೊಹ್ರಾ ಮುಸ್ಲಿಂ ಸಮುದಾಯದೊಂದಿಗೆ ಸಂವಾದ ನಡೆಸಿದ್ದರು. ಅಂತೆಯೇ, ಕತಾರ್, ಬಹ್ರೈನ್, ಇಂಡೋನೇಷ್ಯಾ, ಮಲೇಷ್ಯಾದ ಮುಸ್ಲಿಂ ನಾಯಕರನ್ನು ಭೇಟಿ ಮಾಡಿ ಮಾತುಕತೆ, ಒಪ್ಪಂದಗಳನ್ನು ಮಾಡಿಕೊಂಡಿದ್ದಾರೆ.

ಅಷ್ಟೇ ಯಾಕೆ? ಭಾರತದ ಶತ್ರು ರಾಷ್ಟ್ರವೆಂದು ಬಿಂಬಿಸಲಾಗಿರುವ ಪಾಕಿಸ್ತಾನಕ್ಕೂ ಪ್ರಧಾನಿ ಮೋದಿ ಅವರು ಭೇಟಿ ನೀಡಿದ್ದರು. 2015ರ ಡಿಸೆಂಬರ್ನಲ್ಲಿ ಪಾಕ್ ಪ್ರಧಾನಿ ನವಾಜ್ ಷರೀಫ್ ಅವರ ಜನ್ಮ ದಿನಾಚರಣೆಯಲ್ಲಿ ಮೋದಿ ಪಾಲ್ಗೊಂಡಿದ್ದರು. ಜೊತೆಯಾಗಿ ಬಿರಿಯಾನಿ ತಿಂದು ಬಂದಿದ್ದರು.
ಇಡೀ ಭಾರತದ ಜನರಿಗೆ ಪಾಕಿಸ್ತಾನವನ್ನು ತಮ್ಮ ಆ ಜನ್ಮ ಶತ್ರುಗಳೆಂದು ಬಿಂಬಿಸಿ, ಪಾಕಿಸ್ತಾನದ ವಿರುದ್ಧ ನಿರಂತರ ದ್ವೇಷವನ್ನು ಬಿತ್ತುತ್ತಲೇ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಆದರೆ, ಅದೇ ಬಿಜೆಪಿ ಸರ್ಕಾರದ ಪ್ರಧಾನಿ ಮೋದಿ ಅವರು ಪಾಕಿಸ್ತಾನಕ್ಕೆ ತೆರಳಿ ಬಿರಿಯಾನಿ ತಿಂದು ಬಂದರು.
ಈ ಸುದ್ದಿ ಓದಿದ್ದೀರಾ? ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷಾಪರಾಧಗಳ ತಡೆ ಕಾಯ್ದೆ ಸ್ವಾಗತಾರ್ಹ; ಆದರೆ…!
ಭಾರತದ ಹೊರಗೆ ತಾನೊಬ್ಬ ಸೌಹಾರ್ದ ನಾಯಕ, ವಿಶ್ವಗುರುವೆಂಬ ವೇಷ ಧರಿಸಿರುವ ಇದೇ ಮೋದಿ ಅವರು ದೇಶದೊಳಗಿನ ಮುಸ್ಲಿಮರ ವಿರುದ್ಧ ವಿಷ ಕಾರುತ್ತಲೇ ಇದ್ದಾರೆ. ತಮ್ಮೊಳಗಿನ ದ್ವೇಷವನ್ನು ಹೊರಹಾಕುತ್ತಲೇ ಇದ್ದಾರೆ. ತಾವೊಬ್ಬ ಪ್ರಧಾನಿ, ದೇಶದ ಪ್ರತಿಯೊಬ್ಬ ನಾಗರಿಕನನ್ನು ತಾವು ಸಮಾನವಾಗಿ ನೋಡಬೇಕೆಂಬ ಸಾಮಾನ್ಯ ಪ್ರಜ್ಞೆಯನ್ನೂ ಬೆಳೆಸಿಕೊಳ್ಳದ ಮೋದಿ ಅವರ ಮುಸ್ಲಿಮರ ವಿರುದ್ಧದ ದ್ವೇಷ ಭಾಷಣಗಳ ಪಟ್ಟಿ ದೊಡ್ಡದಿದೆ.
2019ರ ಡಿಸೆಂಬರ್ನಲ್ಲಿ ದೇಶದಾದ್ಯಂತ ಭುಗಿಲೆದ್ದಿದ್ದ ಸಿಎಎ ವಿರೋಧಿ ಹೋರಾಟದ ಸಮಯದಲ್ಲಿ, ಮೋದಿ ಅವರು, ‘ದೆಹಲಿಯಲ್ಲಿ ಬಟ್ಟೆಗಳಿಂದಲೇ ಗಲಭೆಕೋರರನ್ನು ಗುರುತಿಸಬಹುದು’ ಎಂದು ಮುಸ್ಲಿಂ ವಿರೋಧಿ ಮತ್ತು ಇಸ್ಲಾಮಾಫೋಬಿಕ್ ಭಾಷಣ ಮಾಡಿದ್ದರು.

ಹ್ಯೂಮನ್ ರೈಟ್ಸ್ ವಾಚ್ ವರದಿಯ ಪ್ರಕಾರ, 2024ರಲ್ಲಿ 668 ಹೇಟ್ ಸ್ಪೀಚ್ಗಳು ವರದಿಯಾಗಿವೆ. ಈ ಪೈಕಿ, 2024ರ ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಮೋದಿ ಮಾಡಿದ 173 ಭಾಷಣಗಳಲ್ಲಿ 110 ಭಾಷಣಗಳು ಮುಸ್ಲಿಮರ ವಿರುದ್ಧದ ದ್ವೇಷ ಭಾಷಣಗಳಿಂದಲೇ ತುಂಬಿದ್ದವು ಎಂದು ವಿವರಿಸಿದೆ.
2024ರ ಏಪ್ರಿಲ್ 21ರಂದು ರಾಜಸ್ಥಾನದ ಬನ್ಸ್ವಾರಾದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮೋದಿ ಅವರು ಮುಸ್ಲಿಂರನ್ನು ‘ಅತಿಕ್ರಮಣಕಾರರು’ ಮತ್ತು ‘ಹೆಚ್ಚು ಮಕ್ಕಳನ್ನು ಹೊಂದಿರುವವರು’ ಎಂದು ಕರೆದಿದ್ದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಹಿಂದು ಮಹಿಳೆಯರ ಮಾಂಗಲ್ಯವನ್ನು ಕಸಿದುಕೊಂಡು ಮುಸ್ಲಿಮರಿಗೆ ಹಂಚುತ್ತದೆ’ ಎಂದು ಆರೋಪಿಸಿದ್ದರು.
2024ರ ಮೇ ನಲ್ಲಿ ಮಧ್ಯಪ್ರದೇಶದಲ್ಲಿ ಮಾತನಾಡಿದ ಮೋದಿ ಅವರು, “ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಧರ್ಮಾಧಾರಿತ ಮೀಸಲಾತಿಯನ್ನು ಜಾರಿಗೆ ತರಲಿದೆ. ಕ್ರೀಡೆಯಲ್ಲೂ ಅಲ್ಪಸಂಖ್ಯಾತರಿಗೆ ಆದ್ಯತೆ ನೀಡಲು ಯೋಜಿಸುತ್ತಿದೆ. ಕಾಂಗ್ರೆಸ್ ಗೆದ್ದರೆ, ಭಾರತೀಯ ಕ್ರಿಕೆಟ್ ತಂಡದಲ್ಲಿ ಮುಸ್ಲಿಮರೇ ತುಂಬಿಕೊಳ್ಳುತ್ತಾರೆ” ಎಂದು ಹೇಳಿದ್ದರು. ಇನ್ನು 2024ರ ಮೇ 14ರಂದು ಉತ್ತರ ಪ್ರದೇಶದ ವಾರಾಣಸಿಯಲ್ಲಿ ಮತ್ತು ಇತರ ರ್ಯಾಲಿಗಳಲ್ಲಿ ‘ವೋಟ್ ಜಿಹಾದ್’ ಎಂಬ ಹೇಳಿಕೆಯನ್ನು ಪ್ರಧಾನಿ ಮೋದಿ ನೀಡಿದ್ದರು. ಕಾಂಗ್ರೆಸ್ ಮುಸ್ಲಿಮರ ಹಕ್ಕುಗಳನ್ನು ಮಾತ್ರ ರಕ್ಷಿಸುತ್ತದೆ ಎಂದು ಹೇಳಿದ್ದ ಮೋದಿ ಮುಸ್ಲಿಮರು ದೇಶಕ್ಕೆ ಬೆದರಿಕೆ ಎಂಬಂತೆ ಬಿಂಬಿಸಲು ಯತ್ನಿಸಿದ್ದರು.
2024ರ ಮೇ 10ರಂದು ತೆಲಂಗಾಣದ ಹೈದರಾಬಾದ್ನ ರ್ಯಾಲಿಯಲ್ಲಿ ಮುಸ್ಲಿಮರು ಅಲ್ಪಸಂಖ್ಯಾತರ ಹಕ್ಕುಗಳನ್ನು ಮಾತ್ರ ಚಿಂತಿಸುವವರು ಎಂದು ಟೀಕಿಸಿದ್ದರು. ಅವರಿಂದಾಗಿ ಹಿಂದುಗಳಿಗೆ ಅಪಾಯವಿದೆ ಎಂದಿದ್ದ ಮೋದಿ 2024ರ ಏಪ್ರಿಲ್ 19ರಲ್ಲಿ ರಾಜಸ್ಥಾನದ ಅಜ್ಮೀರ್ನಲ್ಲಿ ಚುನಾವಣಾ ರ್ಯಾಲಿಗಳಲ್ಲಿ ಕಾಂಗ್ರೆಸ್ ಪ್ರಣಾಳಿಕೆಯನ್ನು ಮುಸ್ಲಿಮ್ ಲೀಗ್ನ ಪ್ರಣಾಳಿಕೆ ಎಂದಿದ್ದರು. ವಿಪಕ್ಷ ನಾಯಕರನ್ನು ಮೊಘಲರು ಎಂದು ಹೇಳಿದ್ದರು. ಹಾಗೆಯೇ ಇತ್ತೀಚೆಗೆ, ವಿರೋಧ ಪಕ್ಷದವರು ಮೊಘಲರ ಚಿಂತನೆಯುಳ್ಳವರು, ಶ್ರಾವಣದಲ್ಲಿ ಮಾಂಸ ತಿನ್ನುತ್ತಾರೆ ಎಂದು ಟೀಕಿಸಿದ್ದರು.
2024ರ ಮೇ ತಿಂಗಳಿನಲ್ಲಿ ನಡೆದ ರ್ಯಾಲಿಗಳಲ್ಲಿ ‘ಮುಸ್ಲಿಮರು ಹೆಚ್ಚು ಮಕ್ಕಳನ್ನು ಹೊಂದುತ್ತಲೇ, ದೇಶವನ್ನು ಕಸಿದುಕೊಳ್ಳುತ್ತಾರೆ’ ಎಂದು ಪರೋಕ್ಷವಾಗಿ ದೂರಿದ್ದರು. ಇಂತಹ ಹಲವು ದ್ವೇಷ ಭಾಷಣದ ಉದಾಹರಣೆಗಳಿವೆ. ವರದಿಯೊಂದರ ಪ್ರಕಾರ, ಮೋದಿ ಸರ್ಕಾರದ ಅವಧಿಯಲ್ಲಿ ‘ವಿಐಪಿ ಹೇಟ್ ಸ್ಪೀಚ್’ಗಳ ಸಂಖ್ಯೆ 500% ಹೆಚ್ಚಳವಾಗಿದೆ. ಇದರಲ್ಲಿ, ಮೋದಿ ಭಾಷಣಗಳದ್ದು ಪ್ರಧಾನ ಪಾಲಿದೆ.

ಮೋದಿಯವರ ಭಾಷಣಗಳು ಯಾವಾಗಲೂ ಮುಸ್ಲಿಮರನ್ನು ಜಿಹಾದಿಗಳು, ಪಾಕಿಸ್ತಾನಿ ಭಯೋತ್ಪಾದಕರ ಸಂಬಂಧಿಗಳು ಎಂಬ ಆರೋಪಗಳ ಮೇಲೆ ಕೇಂದ್ರೀಕೃತವಾಗಿರುತ್ತವೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಶತಾಯಗತಾಯ ಗೆಲುವು ಸಾಧಿಸಬೇಕು ಎಂಬ ಆಸೆ ಹೊಂದಿದ್ದ ಮೋದಿ ಅವರು ಏಪ್ರಿಲ್ 21ರಿಂದ ಅನೇಕ ಚುನಾವಣಾ ಸಭೆಗಳಲ್ಲಿ ಮುಸ್ಲಿಮರ ವಿರುದ್ಧ ದ್ವೇಷ ಭಾಷಣ ಮಾಡಿದ್ದಾರೆ. ದ್ವೇಷ ಭಾಷಣಗಳಿಗೆ ಸಂಬಂಧಿಸಿದಂತೆ ಖುದ್ದು ಮೋದಿಯೇ ಪ್ರಮುಖ ಅಪರಾಧಿಯಾಗಿದ್ದಾರೆ.
ದೆಹಲಿ ಕೆಂಪು ಕೋಟೆಯಲ್ಲಿ ನಿಂತು ಆರ್ ಎಸ್ ಎಸ್ ಅನ್ನು ಹೊಗಳುವ ಮೋದಿ ದೇಶದ ನಾಗರಿಕರನ್ನ ಸಮುದಾಯ ಕೇಂದ್ರಿತವಾಗಿ ಗುರಿ ಮಾಡಿ ಟೀಕೆ ಮಾಡುತ್ತಾರೆ. ಆದರೆ, ವಿದೇಶಕ್ಕೆ ತೆರಳಿದರೇ ಅದೇ ಮುಸ್ಲಿಮರ ಜತೆಗೆ ಬಿರಿಯಾನಿ ತಿಂದು ಸುತ್ತಾಡುತ್ತಾರೆ. ದೇಶದ ಮುಸಲ್ಮಾನರ ಮೇಲೆ ಇಲ್ಲದ ಪ್ರೀತಿ, ವಿದೇಶಿ ಮುಸ್ಲಿಮರ ಮೇಲ್ಯಾಕೆ? ಇದು ಒಳಗಡೆ ದ್ವೇಷ ಹೊರಗಡೆ ವೇಷ ನೀತಿಯಲ್ಲದೇ ಮತ್ತೇನೂ ಅಲ್ಲ. ದೇಶದಲ್ಲಿ ಚುನಾವಣೆಯಲ್ಲಿ ಗೆಲ್ಲುವುದಕ್ಕೆ ಮುಸ್ಲಿಮರನ್ನ ತೆಗಳುವ ಮೋದಿ, ದೇಶದಾಚೆಗೆ ವಿಶ್ವಗುರು ಎಂದೆನಿಸಿಕೊಳ್ಳಲು ವಿದೇಶಿ ಮುಸ್ಲಿರ ಒಲೈಕೆಯಲ್ಲಿದ್ದಾರೆ.




