ರಾಮನಗರದ ಮುಸ್ಲಿಂ ಉದ್ಯಮಿ, ಎಸ್.ಕೆ ಗ್ರೂಪ್ಸ್ ಮಾಲೀಕ ಸಾಹುಕಾರ್ ಎಸ್.ಕೆ ಸೈಯದ್ ಸಾದತ್ ಉಲ್ಲಾ ಸಖಾಫ್ ಅವರು ಚನ್ನಪಟ್ಟಣ ತಾಲ್ಲೂಕಿನ ಮಂಗಳವಾರಪೇಟೆಯಲ್ಲಿ ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ಬಸವೇಶ್ವರ ದೇವಾಲಯದ ಜೀರ್ಣೋದ್ಧಾರ ಮಾಡಿದ್ದಾರೆ.
ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಅಧಿಕಾರದ ಚುಕ್ಕಾಣಿ ಹಿಡಿದಾಗಿನಿಂದ ದೇಶದಲ್ಲಿ ಇಸ್ಲಾಮೋಫೋಬಿಯಾ ಹೆಚ್ಚಿದೆ ಎಂದು ಅಧ್ಯಯನಗಳು ಹೇಳುತ್ತಿವೆ. ಪ್ರಧಾನಿಯವರ ಭಾಷಣದಲ್ಲಿ ತಪ್ಪು ಮಾಹಿತಿ ಹಾಗೂ ದ್ವೇಷದ ಭಾಷಣವನ್ನು ಹೊರತುಪಡಿಸಿ ಬೇರೇನೂ ಇರುವುದಿಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ಮೋದಿ ಅವರು ಮಾಡಿದ 173 ಭಾಷಣಗಳ ಪೈಕಿ 110 ಮುಸ್ಲಿಂ ದ್ವೇಷದ ಭಾಷಣಗಳಿದ್ದವು. ಮೋದಿಯ ಈ 11 ವರ್ಷಗಳ ಆಡಳಿತದಲ್ಲಿ ಅಲ್ಪಸಂಖ್ಯಾತರ ವಿರುದ್ಧದ ದಾಳಿ ಮತ್ತು ತಾರತಮ್ಯ ಹೆಚ್ಚಾಗಿದೆ. ಮುಸ್ಲಿಮರ ಮೇಲೆ ದ್ವೇಷ ಹೆಚ್ಚಿದೆ. ವಾಸ್ತವವನ್ನ ಮುಚ್ಚಿಹಾಕಿ ತಮ್ಮ ವೋಟ್ ಬ್ಯಾಂಕ್ಗಾಗಿ ಮುಸ್ಲಿಮರನ್ನು ಈ ದೇಶದಲ್ಲಿ ವಿಲನ್ಗಳಾಗಿ ಬಿಂಬಿಸಲಾಗುತ್ತಿದೆ.
ಸಾಮರಸ್ಯದ ಬೀಡಾಗಬೇಕಿದ್ದ ಭಾರತದಲ್ಲಿ ಕೋಮುದ್ವೇಷ ಹೊತ್ತಿ ಉರಿಯುತ್ತಿದೆ. ದೇವರು ಧರ್ಮದ ಹೆಸರಿನಲ್ಲಿ ಕಿತ್ತಾಟ ನಡೆಯುತ್ತಿರುವ ಈ ಸಮಯದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರು ದೇವಸ್ಥಾನವನ್ನ ನಿರ್ಮಿಸಿ ಸಾಮರಸ್ಯದ ಸಂದೇಶವನ್ನು ಸಾರಿದ್ದಾರೆ.
ಹೌದು, ಮುಸ್ಲಿಂ ಉದ್ಯಮಿ, ಎಸ್.ಕೆ ಗ್ರೂಪ್ಸ್ ಮಾಲೀಕ ಸಾಹುಕಾರ್ ಎಸ್.ಕೆ ಸೈಯದ್ ಸಾದತ್ ಉಲ್ಲಾ ಸಖಾಫ್ ಅವರು ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಮಂಗಳವಾರಪೇಟೆಯಲ್ಲಿ ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ಹಿಂದು ದೇವಾಲಯದ ಜೀರ್ಣೋದ್ಧಾರ ಮಾಡಿದ್ದಾರೆ.

ಚನ್ನಪಟ್ಟಣದ ಮಂಗಳವಾರಪೇಟೆಯಲ್ಲಿರುವ ಬಸವೇಶ್ವರ ದೇಗುಲ ಸಂಪೂರ್ಣವಾಗಿ ಶಿಥಿಲಗೊಂಡಿತ್ತು. ಈ ಹಿನ್ನಲೆ, ದೇಗುಲದ ನೂತನ ಕಟ್ಟಡವನ್ನ ತಮ್ಮದೇ ಸಂಪೂರ್ಣ ಖರ್ಚಿನಲ್ಲಿ ಮುಸ್ಲಿಂ ಉದ್ಯಮಿ ನಿರ್ಮಿಸಿಕೊಟ್ಟಿದ್ದಾರೆ. ಶಿಥಿಲಾವಸ್ಥೆ ತಲುಪಿದ್ದ ಹಳೆಯ ದೇಗುಲದ ಜಾಗದಲ್ಲಿ ಇದೀಗ ಸಂಪೂರ್ಣವಾಗಿ ಕಲ್ಲಿನಿಂದಲೇ ನಿರ್ಮಾಣವಾಗಿರುವ ನೂತನ ಭವ್ಯ ದೇವಸ್ಥಾನ ತಲೆಯೆತ್ತಿ ನಿಂತಿದೆ. ಕನ್ನಡ ರಾಜ್ಯೋತ್ಸವ ದಿನದಂದೇ ದೇಗುಲವನ್ನು ಉದ್ಘಾಟಿಸಲಾಗಿದೆ.
ಈ ದೇವಸ್ಥಾನ ನಿರ್ಮಾಣಕ್ಕೆ ಅಗತ್ಯವಿರುವ ಕಲ್ಲುಗಳನ್ನು ತಮಿಳುನಾಡಿನ ಮಹಾಬಲೇಶ್ವರದಿಂದ ತರಿಸಲಾಗಿದ್ದು, ನುರಿತ ಶಿಲ್ಪ ಕಲಾವಿದರು ಶಿಲ್ಪಕಲೆಗಳನ್ನು ಕೆತ್ತಿದ್ದಾರೆ. ದೇವಸ್ಥಾನದ ವಿನ್ಯಾಸಕ್ಕೆ ಅನುಗುಣವಾಗಿ ಕಲ್ಲುಗಳನ್ನ ಕೆತ್ತಿಸಿ ಭವ್ಯ ದೇವಸ್ಥಾನವನ್ನು ಕಟ್ಟಲಾಗಿದೆ.
ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿಯೇ ಈ ದೇವಸ್ಥಾನ ಲೋಕಾರ್ಪಣೆಗೊಂಡಿದೆ. ಸ್ಥಳೀಯ ಶ್ರೀ ಬಸವೇಶ್ವರ ವಿನಾಯಕ ಯುವಕರ ಬಳಗದ ನೇತೃತ್ವದಲ್ಲಿ ನಡೆದ ದೇವಾಲಯ ಉದ್ಘಾಟನಾ ಕಾರ್ಯಕ್ರಮದಲ್ಲಿ ವಿವಿಧ ಸಮುದಾಯಗಳ ಸ್ವಾಮೀಜಿಗಳು ಭಾಗಿಯಾಗಿ, ಹರಿಸಿದ್ದಾರೆ. ದೇವಸ್ಥಾನದ ಲೋಕಾರ್ಪಣೆ ಸಮಯದಲ್ಲಿ ಅನ್ನ ದಾಸೋಹ ಸೇರಿದಂತೆ ಕಳೆದ ಮೂರು ದಿನಗಳಿಂದ ವಿವಿಧ ಕಾರ್ಯಕ್ರಮಗಳು ನಡೆಯುತ್ತಿದ್ದವು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ, ದೇವಸ್ಥಾನದ ಲೋಕಾರ್ಪಣೆಗೆ ಸಾಕ್ಷಿಯಾದರು. ಸಖಾಫ್ ಅವರು ಕೂಡ ದೇವಾಲಯದ ಮೂರ್ತಿ ಪ್ರತಿಷ್ಠಾಪನೆ ಮತ್ತು ಬ್ರಹ್ಮ ಕಲಶೋತ್ಸವ ಪ್ರತಿಷ್ಠಾಪನೆ ಕಾರ್ಯದಲ್ಲಿ ಭಾಗಿಯಾಗಿದ್ದರು. ಸಖಾಫ್ ಅವರನ್ನು ಹಿಂದೂಗಳು ಸನ್ಮಾನಿಸಿ, ಬೆಳ್ಳಿ ಕಿರೀಟ ತೊಡಿಸಿ, ಹೂವಿನ ಮಳೆ ಸುರಿಸಿ ಜೈಕಾರ ಹಾಕಿದರು.

ದೇಗುಲ ನಿರ್ಮಾಣಕ್ಕೆ ಇದೇ ಗ್ರಾಮದ ಕೆಂಪಮ್ಮ ಹಾಗೂ ಮೋಟೇಗೌಡರು ತಮ್ಮ ಸ್ವಂತ ಜಾಗ ಬಿಟ್ಟುಕೊಟ್ಟಿದ್ದು, ನಂತರ ಸೈಯದ್ ಉಲ್ಲಾ ಸಖಾಫ್ ಅವರು 2 ಕೋಟಿ ರೂಪಾಯಿಗೂ ಅಧಿಕ ವೆಚ್ಚದಲ್ಲಿ ಕಲ್ಲಿನ ದೇವಸ್ಥಾನ ಕಟ್ಟಿಸಿಕೊಡುವ ಮೂಲಕ ಮಾದರಿಯಾಗಿದ್ದಾರೆ.
ಬೀಡಿ ಉತ್ಪಾದನೆ ಸೇರಿದಂತೆ ನಾನಾ ಉದ್ಯಮಗಳನ್ನು ಹೊಂದಿರುವ ಸಯ್ಯದ್ ಅವರು ಯಾವುದೇ ಜಾತಿ ಧರ್ಮ ನೋಡದೇ ದಾನ-ಧರ್ಮದಲ್ಲಿ ತೊಡಗಿದ್ದಾರೆ. 2010ರಲ್ಲಿ ಸಂತೇ ಮೊಗೇನಹಳ್ಳಿಯಲ್ಲಿ ಸ್ವಂತ ಹಣದಲ್ಲಿ ವೀರಭದ್ರೇಶ್ವರ ದೇಗುಲವನ್ನು ನಿರ್ಮಾಣ ಮಾಡುವ ಮೂಲಕ ಸೈಯದ್ ಉಲ್ಲಾ ಭಾವೈಕ್ಯತೆ ಮರೆದಿದ್ದರು. ಎಸ್.ಎಂ.ಹಳ್ಳಿ ಗ್ರಾಮದಲ್ಲಿ ಹಳೆಯದಾಗಿದ್ದ ದರ್ಗಾವನ್ನು ಹೊಸದಾಗಿ ನಿರ್ಮಾಣ ಮಾಡಲು ಹೋದಾಗ, ಪಕ್ಕದಲ್ಲಿದ್ದ ಹಿಂದು ದೇವಾಲಯ ಶಿಥಿಲಗೊಂಡಿದ್ದನ್ನು ಕಂಡು, ದರ್ಗಾದ ಜೊತೆಗೆ ಹಿಂದು ದೇವಾಲಯವನ್ನು ನಿರ್ಮಾಣ ಮಾಡಿದ್ದರು. ಇದೀಗ ಮತ್ತೊಂದು ದೇವಾಲಯವನ್ನು ನಿರ್ಮಾಣ ಮಾಡಿದ್ದಾರೆ.
“ಜಾತಿ ಮತ್ತು ಧರ್ಮಕ್ಕಿಂತ ಪ್ರೀತಿ ಮತ್ತು ಸೌಹಾರ್ದ ಮುಖ್ಯ, ಸಖಾಫ್ ಅವರು ಹಿಂದು ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡುವ ಮೂಲಕ ಸಾಹೌರ್ದತೆ ಮೆರೆದಿದ್ದಾರೆ. ದಾನ ಮಾಡುವುದಲ್ಲಿ ಅವರು ಎತ್ತಿದ ಕೈ. ಚನ್ನಪಟ್ಟಣದಲ್ಲಿ ಇಂತಹ ವ್ಯಕ್ತಿ ಇರುವುದು ಹೆಮ್ಮೆ ತರುವ ವಿಷಯ. ಇಂತಹ ಮಹತ್ಕಾರ್ಯದಿಂದ ನಮ್ಮ ಚನ್ನಪಟ್ಟಣ ದೇಶದಲ್ಲಿ ಮಾದರಿಯಾಗಲಿದೆ. ಇಲ್ಲಿ ಹಿಂದೂ ಮತ್ತು ಮುಸ್ಲಿಂ ಎಂಬ ಭೇದ ಭಾವ ಇಲ್ಲ. ನಾವೆಲ್ಲರೂ ಅಣ್ಣ-ತಮ್ಮಂದಿರಾಗಿ ಹೋಗಬೇಕು ಎಂಬ ನಿಟ್ಟಿನಲ್ಲಿ ಈ ಕೆಲಸ ಮಾಡಲಾಗಿದೆ. ಎಲ್ಲರಿಗೂ ಇದು ಮಾದರಿಯಾಗಲಿ” ಎಂದು ಸ್ಥಳೀಯರು ಹೇಳುತ್ತಾರೆ.
“ಈ ದೇವಸ್ಥಾನ ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿತ್ತು. ನೂರಾರು ವರ್ಷಗಳ ಹಿಂದಿನ ದೇವಸ್ಥಾನ ಇದಾಗಿದ್ದರಿಂದ ಹಾಳಾಗುತ್ತಿತ್ತು. ಇದನ್ನು ಮನಗಂಡು ಸೈಯದ್ ಉಲ್ಲಾ ಸಖಾಫ್ ಅವರು ದೊಡ್ಡ ಮನಸ್ಸಿನಿಂದ ಈ ಮಹತ್ಕಾರ್ಯ ನಿರ್ವಹಿಸಿದ್ದಾರೆ” ಎಂದು ಸ್ಥಳೀಯರು ಹೇಳುತ್ತಾರೆ.
ಈ ಸುದ್ದಿ ಓದಿದ್ದೀರಾ? ಬಿಹಾರ ಚುನಾವಣೆ | ನ.6ಕ್ಕೆ ಮೊದಲ ಹಂತದ ಮತದಾನ; ಕಣದಲ್ಲಿರುವ ಘಟಾನುಘಟಿಗಳು ಇವರು!
“ನಾವು ಒಳ್ಳೆಯ ಕೆಲಸ ಮಾಡಿದರೆ ನಮ್ಮ ಮಕ್ಕಳು ಚೆನ್ನಾಗಿರುತ್ತಾರೆ. ಎಲ್ಲರೂ ಸುಖ, ಸಂತೋಷ ಹಾಗೂ ನೆಮ್ಮದಿಯಿಂದ ಇರಲೆಂದು ಹಿಂದೂಗಳು ದೇವಸ್ಥಾನದಲ್ಲಿ ಪೂಜೆ ಮಾಡಿದರೆ, ಮುಸ್ಲಿಮರು ಮಸೀದಿಯಲ್ಲಿ ಮಾಡುತ್ತಾರೆ. ಎಲ್ಲರ ಆಸೆ ಒಂದೇ ಆಗಿದೆ. ಹಿಂದೂ ಮತ್ತು ಮುಸ್ಲಿಂ ಒಗ್ಗಟ್ಟಾಗಿ ಬದುಕುವುದು ಮುಖ್ಯ. ಇದನ್ನು ಬಿಟ್ಟರೆ ಬೇರೇನು ಬೇಕಿಲ್ಲ. ನಾವೆಲ್ಲ ಅಣ್ಣ-ತಮ್ಮಂದಿರಾಗಿ ಜೊತೆ ಜೊತೆಯಲ್ಲಿ ಸಾಗಿದರೆ ದೇಶ ಅಭಿವೃದ್ಧಿಯಾಗುತ್ತದೆ. ಪ್ರತಿಯೊಂದಕ್ಕೂ ಜಗಳ ಮಾಡಿಕೊಂಡಿದ್ದರೆ ಭಾರತ ಮುಂದೆ ಹೋಗುವುದಿಲ್ಲ. ನಾವೆಲ್ಲರೂ ಎಲ್ಲರಿಗೂ ಗೌರವ ಕೊಡಬೇಕು. ಪ್ರಪಂಚದಲ್ಲಿ ದೇಶ ಇನ್ನಷ್ಟು ಮುಂದೆ ಬರಬೇಕು. ಆ ರೀತಿ ನಾವುಗಳು ಕೆಲಸ ಮಾಡಬೇಕು” ಎಂದು ಸೈಯದ್ ಉಲ್ಲಾ ಸಖಾಫ್ ಹೇಳಿದ್ದಾರೆ.
ದೇಶದಲ್ಲಿ ನಡೆಯುತ್ತಿರುವ ಧರ್ಮಾಧಾರಿತ ಗಲಭೆಗಳ ನಡುವೆ ಬೊಂಬೆನಗರಿ ಚನ್ನಪಟ್ಟಣ ಹಿಂದೂ-ಮುಸ್ಲಿಂ ಸಾಮರಸ್ಯಕ್ಕೆ ಸಾಕ್ಷಿಯಾಗಿದೆ. ಮುಸ್ಲಿಂ ಮುಖಂಡರಾದ ಸೈಯದ್ ಉಲ್ಲಾ ಸಖಾಫ್ ಅವರು ಭಾವೈಕ್ಯತೆ ಮೆರೆದಿದ್ದಾರೆ. ಇಂತಹದ್ದೇ ಸಾಮರಸ್ಯ ಘಟನೆಯೊಂದು 2022ರಲ್ಲಿ ಜಾರ್ಖಂಡನಲ್ಲಿ ನಡೆದಿತ್ತು. ಮುಸ್ಲಿಂ ಉದ್ಯಮಿ ನೌಶಾದ್ ಶೇಖ್ ಎಂಬ ವ್ಯಕ್ತಿ ಬರೋಬ್ಬರಿ 42 ಲಕ್ಷ ರೂ. ವೆಚ್ಚದಲ್ಲಿ ಶ್ರೀ ಕೃಷ್ಣನ ದೇವಸ್ಥಾನ ಕಟ್ಟಿಸಿದ್ದರು. ಇನ್ನು 2018ರಲ್ಲಿ ಲಕ್ನೋ ಮೂಲದ ರಶೀದ್ ನಸೀಂ ಉತ್ತರ ಪ್ರದೇಶ ಮತ್ತು ಬಿಹಾರದ 51 ದೇವಾಲಯಗಳಿಗೆ ಅನುದಾನ ನೀಡಿದ್ದರು.

ಹಿಂದು- ಮುಸ್ಲಿಂ ಭಾವೈಕ್ಯತೆಗೆ ಇದಿಷ್ಟೇ ಅಲ್ಲ, ಇಂತಹದ್ದೇ ಹಲವಾರು ಉದಾಹರಣೆಗಳಿವೆ. ಈ ಸಾಮರಸ್ಯದ ಹಾದಿಯಲ್ಲಿ ನಡೆಯಬೇಕಿದ್ದ ಯುವ ಸಮುದಾಯವನ್ನು ಕೆಲವರು ತಮ್ಮ ರಾಜಕೀಯ ಹಿತಾಸಕ್ತಿಗಾಗಿ ದಾರಿ ತಪ್ಪಿಸುತ್ತಿದ್ದಾರೆ. ಕೋಮುವಿಷ ಬಿತ್ತುತ್ತಿದ್ದಾರೆ.
ಸ್ವತಃ ಪ್ರಧಾನಿಯೇ ತಮ್ಮ ಇಷ್ಟು ದಿನದ ಆಡಳಿತದಲ್ಲಿ ಈ ದೇಶದ ಪ್ರಜೆಗಳೆಲ್ಲರೂ ಒಂದೇ, ಸಮಾನರು ಎನ್ನುವ ಭಾವದಲ್ಲಿ ನೋಡಿಲ್ಲ. ಮುಸ್ಲಿಮರ ಬಗ್ಗೆ ಕೇವಲವಾಗಿ ಮಾತಾಡುವುದು ಪಂಕ್ಚರ್ ವಾಲಾಗಳು, ಹೆಚ್ಚು ಮಕ್ಕಳನ್ನು ಹೊರುವವರು ಎನ್ನುವುದು, ನಮ್ಮ ದೇಶ ಇನ್ನೊಂದು ಸಮುದಾಯದ ಪಾಲಾಗುತ್ತೆ ಎಂದು ಹೇಳಿಕೆ ನೀಡುತ್ತ ಹಿಂದೂ ಧರ್ಮದವರನ್ನ ಮುಸ್ಲಿಮರ ವಿರುದ್ಧ ಎತ್ತಿ ಕಟ್ಟುತ್ತಿದ್ದಾರೆ.
ಇದನ್ನೂ ಓದಿ ಕಬ್ಬು ಬೆಳೆಗಾರರನ್ನು ಹಿಂಡಿ ಹಿಪ್ಪೆ ಮಾಡುತ್ತಿರುವ ಸಕ್ಕರೆ ಕಾರ್ಖಾನೆಗಳು & ಸರ್ಕಾರ, ಬೀದಿಯಲ್ಲಿ ರೈತ
ತಮ್ಮ ರಾಜಕೀಯ ಲಾಭಕೋಸ್ಕರ ಹಿಂದೂ ರಾಷ್ಟ್ರ ಎಂದು ಹೇಳಿಕೊಳ್ಳುವ ಈ ಜನರಿಗೆ ಮುಸ್ಲಿಂ ವಿಚಾರ ಬೇಕು. ಸಮಾಜದಲ್ಲಿ ಶಾಂತಿ ಕೆಡಿಸಿ, ಆರೋಪವನ್ನು ತಲೆಗೆ ಕಟ್ಟುವುದಕ್ಕೆ ಮುಸ್ಲಿಂ ಹೆಸರೇ ಬೇಕು. ವೋಟ್ಗಾಗಿಯೇ, ಮುಸ್ಲಿಂ ಸಮುದಾಯದ ವಿರುದ್ದ ದ್ವೇಷ ಹಬ್ಬಿಸಲೆಂದೇ, ಸಮುದಾಯದ ಹೆಸರು ಕೆಡಿಸಲೆಂದೇ ಸಂಚು ರೂಪಿಸುತ್ತಾರೆ. ಮುಸ್ಲಿಮರನ್ನು ವಿಲನ್ಗಳಂತೆ ತೋರಿಸಲು ಹಲವು ಪ್ರಕರಣಗಳಲ್ಲಿ ಇವರೇ ಕೃತ್ಯಗಳನ್ನ ಎಸಗಿ ಅದನ್ನು ಒಂದು ಸಮುದಾಯದ ಮೇಲೆ ಹಾಕಲು ಹೋಗಿ ಸಿಕ್ಕಿಹಾಕಿಕೊಂಡ ಹಲವಾರು ಘಟನೆಗಳು ನಮ್ಮ ಮುಂದೆ ಇವೆ. ರಾಜಕಾರಣಿಗಳ ಹುನ್ನಾರಕ್ಕೆ ದೇಶದ ಜನರು ಬಲಿಯಾಗದೇ, ಇನ್ನಾದರೂ ಸಾಮರಸ್ಯದ ಹಾದಿಯಲ್ಲಿ ನಡೆಯಬೇಕಿದೆ.




