ಭಾರತೀಯ ಮುಸ್ಲಿಂರನ್ನು ವಿಲನ್ಗಳಾಗಿ, ಭಯೋತ್ಪಾದಕರಾಗಿ ಬಿಂಬಿಸಲು ಹಿಂದುತ್ವ ಕೋಮುವಾದಿ ಗುಂಪುಗಳು ಕುತಂತ್ರ ನಡೆಸುತ್ತಲೇ ಇವೆ. ಒಂದು ಸಮುದಾಯವನ್ನು ಆರೋಪಿ ಸ್ಥಾನದಲ್ಲಿಟ್ಟು, ಕೀಳಾಗಿ ಕಾಣುವ ಮನಸ್ಥಿತಿಯನ್ನು ಸೃಷ್ಟಿಸಲು ದ್ವೇಷದ ವಿಷವಿಕ್ಕುವ ಯತ್ನಗಳು ನಡೆಯುತ್ತಲೇ ಇವೆ.
ಬಹುತ್ವ, ಸಾಮರಸ್ಯ, ಸರ್ವಜನಾಂಗದ ಶಾಂತಿಯ ತೋಟವಾಗಿರುವ ಭಾರತವನ್ನು ದ್ವೇಷ, ಅಸೂಯೆ, ಗಲಭೆ, ಹಿಂಸಾಚಾರಗಳ ನಾಡನ್ನಾಗಿ ಮಾಡಲು ಹಿಂದುತ್ವ ಕೋಮುವಾದಿಗಳು ನಿರಂತರವಾಗಿ ಯತ್ನಿಸುತ್ತಲೇ ಇದ್ದಾರೆ. ತಮ್ಮ ರಾಜಕೀಯ ಲಾಲಸೆಗಾಗಿ ದೇಶದ ಸಾಮರಸ್ಯಕ್ಕೆ ಬೆಂಕಿ ಇಡುತ್ತಿದ್ದಾರೆ. ದ್ವೇಷದ ವಿಷವನ್ನು ಬಿತ್ತುತ್ತಿದ್ದಾರೆ. ಈ ಬೆಂಕಿ ಕಿಡಿ ಹೊತ್ತಿಸಿದ ಪರಿಣಾಮವಾಗಿಯೇ ಈಗ ಕರಾವಳಿ ಭಾಗ ಕೋಮುದಳ್ಳುರಿಯಲ್ಲಿ ತತ್ತರಿಸಿದೆ. ಕರಾವಳಿಯಂತೆಯೇ ಇಡೀ ರಾಜ್ಯವನ್ನ ಬದಲು ಮಾಡಲು ಸಂಘಿಗಳು ಮತ್ತು ಬಿಜೆಪಿಗರು ಹಿಂದೂ ಹಬ್ಬಗಳನ್ನ ಬಲಿಕೊಡುತ್ತಿದ್ದಾರೆ. ಮುಖ್ಯವಾಗಿ, ಗಣೇಶ್ ಹಬ್ಬವನ್ನು ಕೋಮು ಹಬ್ಬವನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ಪ್ರೀತಿಯ ಅಂಗಡಿಯನ್ನ ತೆರೆಯಬೇಕಿದ್ದ ಈ ದೇಶದಲ್ಲಿ ಕೋಮುಕ್ರಿಮಿಗಳು ಹಗೆ, ಮತ್ಸರ, ದ್ವೇಷವನ್ನ ಬಿತ್ತುತ್ತಿದ್ದಾರೆ. ಮುಸ್ಲಿಮರ ಮೇಲೆ ಕೋಮು ಭಾವನೆ ಹೆಚ್ಚಳವಾಗಲು ಅವಿರತವಾಗಿ ಪ್ರಯತ್ನಿಸುತ್ತಿದ್ದಾರೆ. ದ್ವೇಷವನ್ನು ಪ್ರಚೋದಿಸುತ್ತಿದ್ದಾರೆ. ಇಷ್ಟು ಮಾತ್ರವಲ್ಲ, ‘ಕೋತಿ ತಾನು ತಿಂದು ಮೇಕೆ ಬಾಯಿಗೆ ಒರೆಸಿತು’ ಎನ್ನುವಂತೆ ತಾವೇ ಕೃತ್ಯಗಳನ್ನು ಎಸಗಿ, ಮುಸ್ಲಿಮರ ಹಣೆಗೆ ಕಟ್ಟುವ ಕುತಂತ್ರಗಳನ್ನೂ ಹಿಂದುತ್ವ ಕೋಮುವಾದಿಗಳು ಮಾಡುತ್ತಿದ್ದಾರೆ. ಇದಕ್ಕೆ ಹಲವಾರು ಉದಾಹರಣೆಗಳಿವೆ.
ದೇವಸ್ಥಾನದ ಗೋಡೆ ಮೇಲೆ ‘ಐ ಲವ್ ಮುಹಮ್ಮದ್’ ಬರೆದ ಹಿಂದುತ್ವವಾದಿಗಳು!
ಇತ್ತೀಚೆಗೆ, ಉತ್ತರಪ್ರದೇಶದಲ್ಲಿ ನಡೆದ ಘಟನೆಯೂ ಸದ್ಯ ಭಾರತದಲ್ಲಿ ನಡೆಯುತ್ತಿರುವ ಸಮುದಾಯಗಳ ನಡುವಿನ ದ್ವೇಷದ ಕರಾಳತೆಗೆ ಕನ್ನಡಿ ಹಿಡಿದಿದೆ. ಹೌದು, ದೇವಾಲಯಗಳ ಗೋಡೆಯ ಮೇಲೆ ‘ಐ ಲವ್ ಮುಹಮ್ಮದ್’ ಎಂದು ಬರೆದ ಹಿಂದುಗಳೇ ಇದು ಮುಸ್ಲಿಮರ ಕೆಲಸ ಎಂದು ಆ ಸಮುದಾಯವನ್ನು ದೂಷಿಸಿದ ಘಟನೆ ನಡೆದಿತ್ತು.
ಉತ್ತರಪ್ರದೇಶದ ಅಲಿಘಡ ಜಿಲ್ಲೆಯ ಲೋಧಾ ಠಾಣಾ ವ್ಯಾಪ್ತಿಯ ಭಗವಾನ್ ಪುರ ಮತ್ತು ಬಲ್ಕ್ಗಢಿ ಗ್ರಾಮಗಳಲ್ಲಿನ ದೇವಾಲಯಗಳ ಗೋಡೆಗಳ ಮೇಲೆ ಕಿಡಿಗೇಡಿಗಳು ‘ಐ ಲವ್ ಮುಹಮ್ಮದ್’ ಎಂದು ಬರೆದಿದ್ದ ಬರಹಗಳು ಕಾಣಿಸಿಕೊಂಡಿದ್ದವು. ಜೀಶಾನ್ ಸಿಂಗ್ ಅವರ ದೂರಿನ ಆಧಾರದಲ್ಲಿ ಮುಸ್ತಕೀಮ್ ವಿರುದ್ಧ ಪ್ರಕರಣ ದಾಖಲಾಗಿತ್ತು.
ಕೂಡಲೇ ಕಾರ್ಯಪ್ರವೃತ್ತರಾದ ಉತ್ತರಪ್ರದೇಶದ ಪೊಲೀಸರು ಮುಸ್ತಕೀಮ್, ಗುಲ್ ಮುಹಮ್ಮದ್, ಸುಲೈಮಾನ್, ಸೋನು, ಅಲ್ಲಾಬಕ್ಷ್, ಹಮೀದ್ ಮತ್ತು ಯೂಸುಫ್ ಸೇರಿದಂತೆ ಎಂಟು ಮಂದಿಯ ವಿರುದ್ಧ ಪ್ರಕರಣ ದಾಖಲು ಮಾಡಿದ್ದರು. ಆದರೆ, ಪೊಲೀಸ್ ತನಿಖೆಯಿಂದ ನಿಜಾಂಶ ತಿಳಿದಾಗ ಆರೋಪಿಗಳು ಯಾರು ಎಂಬುದು ಪತ್ತೆಯಾಗಿದೆ.
2024ರಲ್ಲಿ ಗುಲ್ ಮುಹಮ್ಮದ್ ಅವರ ಕುಟುಂಬ ಮತ್ತು ಮುಖೇಶ್ ಅವರ ಕುಟುಂಬದ ನಡುವೆ ನಡೆದ ಭೂ ವಿವಾದವೇ ಈ ಘಟನೆಗೆ ಕಾರಣವಾಗಿರುವುದು ಪತ್ತೆಯಾಗಿದೆ. ಭೂ ವಿವಾದದಲ್ಲಿ ಮುಸ್ಲಿಂ ಸಮುದಾಯದ ವ್ಯಕ್ತಿಗಳನ್ನು ಸಿಲುಕಿಸಲು ನಡೆದ ಯತ್ನವಾಗಿತ್ತು ಎಂಬುದು ತನಿಖೆಯಿಂದ ಬಹಿರಂಗವಾಗಿದೆ.

ಈ ಕುರಿತಂತೆ ತನಿಖೆ ಶುರು ಮಾಡಿದ ಪೊಲೀಸರಿಗೆ ಮೊದಲನೆಯದಾಗಿ ಗೋಡೆಯಲ್ಲಿ ಬರೆದ ಆ ಬರಹಗಳಲ್ಲಿ ಕಾಗುಣಿತ ದೋಷಗಳು ಕಂಡುಬಂದಿತು. ಪ್ರತಿಯೊಂದು ಘೋಷಣೆಯಲ್ಲಿಯೂ ಒಂದೇ ರೀತಿಯ ತಪ್ಪು ಕಂಡುಬಂದಿತು. ಹಿಂದಿನ ಭೂ ವಿವಾದ ಮತ್ತು ದಾಖಲೆಗಳನ್ನು ಪರಿಶೀಲಿಸಿದಾಗ ಘಟನೆಗೆ ಹೊಸ ತಿರುವು ಸಿಕ್ಕಿತು ಎಂದು ಎಸ್ ಎಸ್ ಪಿ ನೀರಜ್ ಕುಮಾರ್ ಜದೌನ್ ಹೇಳಿದ್ದಾರೆ.
ಭೂ ವಿವಾದಕ್ಕೆ ಸಂಬಂಧಿಸಿದಂತೆ ಮುಸ್ತಕೀಮ್ ಮತ್ತು ಜೀಶಾಂತ್ ಸಿಂಗ್ ನಡುವೆ ವಾಗ್ವಾದ ನಡೆದಿತ್ತು. ಮುಸ್ತಕೀಮ್ ಮೇಲಿನ ದ್ವೇಷಕ್ಕಾಗಿ ಆತನ ವಿರುದ್ಧ ಕ್ರಮಕ್ಕಾಗಿ ದೇವಾಲಯಗಳ ಗೋಡೆಗಳ ಮೇಲೆ ಘೋಷಣೆ ಬರೆದಿದ್ದರು.
“ಹಿಂದಿನ ಎಂಟು ಮಂದಿಯ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಹಿಂಪಡೆಯಲಾಗುವುದು. ಬಂಧಿತರ ವಿರುದ್ಧ ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ದ್ವೇಷ ಪ್ರಚೋದನೆ ಹಾಗೂ ಸಾರ್ವಜನಿಕ ಶಾಂತಿ ಭಂಗಗೊಳಿಸಿದ ಆರೋಪಗಳು ದಾಖಲಾಗಿವೆ. ಬಂಧಿತರನ್ನು ಜೀಶಾಂತ್ ಸಿಂಗ್, ಆಕಾಶ್ ಸಾರಸ್ವತ್, ದಿಲೀಪ್ ಶರ್ಮಾ ಮತ್ತು ಅಭಿಷೇಕ್ ಸಾರಸ್ವತ್ ಎಂದು ಗುರುತಿಸಲಾಗಿದೆ. ಐದನೇ ಆರೋಪಿ ರಾಹುಲ್ ಗಾಗಿ ಶೋಧ ಮುಂದುವರೆದಿದೆ” ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತರಾಗಿರುವ ನಾಲ್ವರೂ ಮೇಲ್ವರ್ಗದವರು ಎಂಬುದು ಗಮನಾರ್ಹ.
ಹಿಂದೂ – ಮುಸ್ಲಿಂ ಎಂದು ಬೆಂಕಿ ಹಚ್ಚಿ ತಮಾಷೆ ನೋಡುವ ಹಿಂದುತ್ವ ಕೋಮುವಾದಿಗಳ ಕುತಂತ್ರ ತನಿಖೆಯ ವೇಳೆ ಬಯಲಾಗಿದೆ. ಆರೋಪಿಗಳು ಮುಸ್ತಕೀಮ್, ಗುಲ್ ಮುಹಮ್ಮದ್, ಸುಲೈಮಾನ್, ಸೋನು, ಅಲ್ಲಾಬಕ್ಷ್, ಹಮೀದ್ ಮತ್ತು ಯೂಸುಫ್ ಇವರಲ್ಲ, ಬದಲಾಗಿ ಜೀಶಾಂತ್ ಸಿಂಗ್, ಆಕಾಶ್ ಸಾರಸ್ವತ್, ದಿಲೀಪ್ ಶರ್ಮಾ ಮತ್ತು ಅಭಿಷೇಕ್ ಸಾರಸ್ವತ್ ಆರೋಪಿಗಳು ಎಂಬುದು ಗೊತ್ತಾಗಿದೆ. ಇದೇ ರೀತಿಯಾಗಿ ತಾವೇ ಕೃತ್ಯಗಳನ್ನ ಎಸಗಿ ಮುಸ್ಲಿಂರನ್ನ ಆರೋಪಿ ಸ್ಥಾನದಲ್ಲಿಟ್ಟಿದ್ದ ಹಲವಾರು ಪ್ರಕರಣಗಳು ನಮ್ಮ ಮುಂದೆ ಇವೆ.
ಈ ಲೇಖನ ಓದಿದ್ದೀರಾ? ಕುವೆಂಪು ಭಾಷಣ | ಕನ್ನಡ ನಾಡಿನ ರಾಜಧಾನಿಯಲ್ಲಿ ಕನ್ನಡವೇ ಸಾರ್ವಭೌಮ ಭಾಷೆ
1- 2012ರ ಏಪ್ರಿಲ್ 8ರಂದು ಹೈದರಾಬಾದ್ನ ಕುರ್ಮದುಡಾದಲ್ಲಿರುವ ಹನುಮಂತ ದೇವಾಲಯದ ಆವರಣದಲ್ಲಿ ಹಿಂದುತ್ವ ಕೋಮುವಾದಿ ಕಿಡಿಗೇಡಿಗಳೇ ಗೋಮಾಂಸವನ್ನು ಎಸೆದು, ದೇವಾಲಯದ ಮೇಲೆ ಹಸಿರು ಬಣ್ಣ ಬಳಿದಿದ್ದರು. ಈ ಕೃತ್ಯವನ್ನು ಮುಸ್ಲಿಮರು ಎಸಗಿದ್ದಾರೆ ಎಂದು ಬಿಂಬಿಸಲು ಯತ್ನಿಸಿದ್ದರು.
ಹನುಮ ಜಯಂತಿ ನಡೆದಿದ್ದ ಎರಡು ದಿನಗಳ ಬಳಿಕ ನಡೆದಿದ್ದ ಈ ಘಟನೆ ಕೋಮು ಉದ್ವಿಗ್ನತೆಯನ್ನು ಸೃಷ್ಟಿಸಿತ್ತು. ಕೋಮು ಗಲಭೆ ನಡೆದು, ಸುಮಾರು 5 ಮಂದಿ ಗಾಯಗೊಂಡಿದ್ದರು. ಪ್ರದೇಶದಲ್ಲಿ ಪೊಲೀಸರು ಕರ್ಫ್ಯೂ ಘೋಷಿಸಿದ್ದರು. ಪ್ರಕರಣದ ಕುರಿತು ತನಿಖೆ ನಡೆಸಿದಾಗ, ಹಿಂದುತ್ವ ಕೋಮುವಾದಿ ಕಾರ್ಯಕರ್ತರಾದ ಕಿರಣ್ ಕುಮಾರ್, ರಮೇಶ್, ದಯಾನಂದ್ ಸಿಂಗ್ ಎಂಬ ಕಿಡಿಗೇಡಿಗಳು ಕೃತ್ಯ ಎಸಗಿದ್ದರು. ಈ ಕೃತ್ಯ ಎಸಗಲು ನಿರಂಜನ್ ಮತ್ತು ಶ್ರೀನಿವಾಸ್ ಎಂಬವರು ಕುಮ್ಮಕ್ಕು ನೀಡಿದ್ದರು ಎಂಬುದು ಬೆಳಕಿಗೆ ಬಂದಿತ್ತು. ಪೊಲೀಸರು ನೈಜ ಆರೋಪಿಗಳನ್ನು ಬಂಧಿಸಿದ್ದರು.
2- 2024ರ ಜುಲೈನಲ್ಲಿ ಉತ್ತರಪ್ರದೇಶದ ಸಿದ್ಧಾರ್ಥ್ ನಗರ ಜಿಲ್ಲೆಯ ಚೌಧರಿ ಪ್ರದೇಶದಲ್ಲಿ ಗಣೇಶ ದೇವಾಲಯದ ಪೂಜಾರಿ ಕೃಷ್ಣ ರಾಮ್ ಎಂಬವರು ತಾನೇ ಗಣೇಶನ ವಿಗ್ರಹವನ್ನು ವಿರೂಪಗೊಳಿಸಿದ್ದರು. ಆದರೆ, ಮುಸ್ಲಿಂ ಯುವಕರಾದ ಮನ್ನನ್ ಮತ್ತು ಸೋನು ರಾತ್ರಿ ವೇಳೆ ದೇವಾಲಯಕ್ಕೆ ನುಗ್ಗಿ ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದರು.
ಪರಿಣಾಮ, ಹಿಂದು-ಮುಸ್ಲಿಮರು ಒಟ್ಟಿಗೆ ವಾಸಿಸುತ್ತಿದ್ದ ಚೌಧರಿ ಪ್ರದೇಶದಲ್ಲಿ ಸ್ಥಳೀಯ ಹಿಂದುಗಳು ಮುಸ್ಲಿಮರ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಸಂಭವನೀಯ ಗಲಭೆಯನ್ನು ತಪ್ಪಿಸಲು ಪೊಲೀಸರು ಹೆಚ್ಚಿನ ಭದ್ರತೆ ನಿಯೋಜಿಸಿದ್ದರು. ಪ್ರಕರಣದ ತನಿಖೆ ವೇಳೆ, ಕೃಷ್ ರಾಮ್ ಅವರೇ ವಿಗ್ರಹವನ್ನು ಸ್ವತಃ ಧ್ವಂಸಗೊಳಿಸಿದ್ದರು ಎಂಬುದು ಬೆಳಕಿಗೆ ಬಂದಿತು. ಭಕ್ತರಿಗೆ ಹೆಚ್ಚು ದೇಣಿಗೆ ಸಂಗ್ರಹಿಸುವ ಉದ್ದೇಶದಿಂದ ಈ ಕೃತ್ಯ ಎಸಗಿದ್ದರು ಎಂದು ಪೊಲೀಸರು ಪತ್ತೆ ಹಚ್ಚಿದ್ದರು.

3- 2007ರಲ್ಲಿ ಭಾರತ-ಪಾಕಿಸ್ತಾನ ನಡುವಿನ ಸಂಬಂಧವನ್ನು ಮತ್ತಷ್ಟು ಕದಡುವ ಕೃತ್ಯ ನಡೆದಿತ್ತು. ದೆಹಲಿ ಮತ್ತು ಪಂಜಾಬ್ನ ಲಾಹೋರ್ ನಡುವೆ ಸಂಚರಿಸುವ ಸಾಮಝೌತಾ ಎಕ್ಸ್ಪ್ರೆಸ್ ರೈಲಿನಲ್ಲಿ ಬಾಂಬ್ ಇಟ್ಟು ಸ್ಪೋಟಿಸಲಾಗಿತ್ತು. ಈ ಬಾಂಬ್ ಸ್ಪೋಟವನ್ನು ಪಾಕಿಸ್ತಾನದ ಭಯೋತ್ಪಾದಕರು ನಡೆಸಿದ್ದಾರೆ ಎಂದು ಆರೋಪಿಸಲಾಗಿತ್ತು. ಆದರೆ, ಎನ್ ಐ ಎ ತನಿಖೆ ನಡೆಸಿದಾಗ, ಹಿಂದುತ್ವ ಕೋಮುವಾದಿ ಸಂಘಟನೆಗಳ ಕಾರ್ಯಕರ್ತರು ಈ ಸ್ಪೋಟದ ರುವಾರಿಗಳು ಎಂಬುದು ಬಹಿರಂಗಗೊಂಡಿತು.
2007ರ ಫೆಬ್ರವರಿ 18ರಂದು ರೈಲು ಹರಿಯಾಣದ ಪಾಣಿಪತ್ನ ದೀವಾನಾ ರೈಲು ನಿಲ್ದಾಣದ ಬಳಿ ಚಲಿಸುತ್ತಿದ್ದಾಗ, ರೈಲಿನ S-5 ಮತ್ತು S-6 ಬೋಗಿಗಳಲ್ಲಿ ಸ್ಪೋಟ ಸಂಭವಿಸಿತ್ತು. ಕೆಲವು ಬ್ಯಾಗ್ಗಳಲ್ಲಿ ‘ಇಂಪ್ರೋವ್ಡ್ ಎಕ್ಸ್ಫ್ಲೋಸಿವ್ ಡಿವೈಸ್’ ಗಳನ್ನ ಇಟ್ಟು ಸ್ಪೋಟಿಸಲಾಗಿತ್ತು. ದುರ್ಘಟನೆಯಲ್ಲಿ 68 ಮಂದಿ ಸಾವನ್ನಪ್ಪಿದ್ದರು. 100ಕ್ಕೂ ಹೆಚ್ಚು ಗಾಯಗೊಂಡಿದ್ದರು. ಈ ಸ್ಫೋಟವನ್ನು ಪಾಕಿಸ್ತಾನ ಮೂಲದ ಇಸ್ಲಾಮಿಕ್ ಭಯೋತ್ಪಾದಕ ಸಂಘಟನೆಗಳು ನೆಡಸಿವೆ ಎಂದು ಆರೋಪಿಸಲಾಗಿತ್ತು. ಆದರೆ, ಪ್ರಕರಣದ ತನಿಖೆ ನಡೆಸಿದ ಎನ್ ಐ ಎ ಹಿಂದುತ್ವ ಕೋಮುವಾದಿ ಸಂಘಟನೆ ‘ಅಭಿನವ್ ಭಾರತ್’ನ ಮುಖಂಡರು ಮತ್ತು ಕಾರ್ಯಕರ್ತರು ಈ ಸ್ಪೋಟದ ಹಿಂದಿನ ರೂವಾರಿಗಳು ಎಂದು ಕಂಡುಹಿಡಿಯಿತು. ಆರ್ ಎಸ್ ಎಸ್ ಪ್ರಚಾರಕ ಸ್ವಾಮಿ ಅಸೀಮಾನಂದ್ ಈ ಸ್ಪೋಟದ ಮಾಸ್ಟರ್ ಮೈಂಡ್ ಎಂದು ಎನ್ಐಎ ಬಹಿರಂಗಪಡಿಸಿತು. ಆತ, ಮುಸ್ಲಿಮರ ಮೇಲಿನ ಪ್ರತೀಕಾರಕ್ಕಾಗಿ ಈ ಕೃತ್ಯ ಎಸಗಿದ್ದಾಗಿ ಒಪ್ಪಿಕೊಂಡಿದ್ದಾನೆಂದು ವರದಿಯಾಗಿದೆ. ಈ ಸ್ಪೋಟದಲ್ಲಿ ಸ್ವಾಮಿ ಅಸೀಮಾನಂದ್ ಜೊತೆಗೆ, ರಾಮಜಿ ಕಲ್ಸಾಂಗ್ರಾ. ಸಂದೀಪ್ ಡಾಂಗೆ, ಲೋಕೇಶ್ ಶರ್ಮಾ, ಕಮಲ್ ಚೌಹಾನ್, ರಾಜಿಂಡರ್ ಚೌಧರಿ ಕೈಜೋಡಿಸಿದ್ದರು ಎಂದು ಆರೋಪಿಸಲಾಗಿದೆ.
4- 2006ರ ಸೆಪ್ಟೆಂಬರ್ 8ರಂದು ಮಹಾರಾಷ್ಟ್ರದ ಮಲೇಗಾಂವ್ನ ಮಸೀದಿ ಬಳಿ 4 ಬಾಂಬ್ಗಳನ್ನು ಇಟ್ಟು ಸ್ಫೋಟಿಸಲಾಗಿತ್ತು. ಘಟನೆಯಲ್ಲಿ 37 ಮಂದಿ ಸಾವನ್ನಪ್ಪಿದ್ದು, 100 ಮಂದಿ ಗಾಯಗೊಂಡಿದ್ದರು. ಆರಂಭದಲ್ಲಿ ಈ ಸ್ಪೋಟವನ್ನು ಮುಸ್ಲಿಮರು ನಡೆಸಿದ್ದಾರೆ ಎಂದು ಆರೋಪಿಸಲಾಗಿತ್ತು. ಆದರೆ, ಈ ಕೃತ್ಯದ ಹಿಂದೆ ಹಿಂದುತ್ವವಾದಿ ಸಂಘಟನೆ ಅಭಿನವ್ ಭಾರತ್ನ ನಾಯಕರಿದ್ದಾರೆ ಎಂಬುದು ಬೆಳಕಿಗೆ ಬಂದಿತು. ಪ್ರಕರಣದ ತನಿಖೆ ನಡೆಸಿದ ‘ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ’ವು ಬಿಜೆಪಿ ಮಾಜಿ ಸಂಸದೆ ಪ್ರಗ್ಯಾ ಠಾಕುರ್, ಕರ್ನಲ್ ಪ್ರಸಾದ್ ಪುರೋಹಿತ್ ಸೇರಿದಂತೆ 11 ಮಂದಿ ಆರೋಪಿಗಳ ವಿರುದ್ಧ ಜಾರ್ಜ್ಶೀಟ್ ಸಲ್ಲಿಸಿತ್ತು. ತನಿಖೆಯು 2024ರವರೆಗೂ ನಡೆಯಿತು. 2025ರ ಜುಲೈ 31ರಂದು ಎನ್ ಐ ಎ ವಿಶೇಷ ನ್ಯಾಯಾಲಯವು, ಸಾಕ್ಷ್ಯ ಕೊರತೆ ಆಧಾರದ ಮೇಲೆ ಆರೋಪಿಗಳನ್ನು ಖುಲಾಸೆಗೊಳಿಸಿ ತೀರ್ಪು ಪ್ರಕಟಿಸಿದೆ.
5- ಕೊರೊನಾ ಸಮಯದಲ್ಲಿ( 2020) ಮುಸ್ಲಿಂರ ಬಗ್ಗೆ ಆತಂಕಕಾರಿ ವಿಷಯಗಳನ್ನ ಹರಿಬಿಟ್ಟಿದ್ದರು. ಕೃಷ್ಣರಾಜಪೇಟೆ ತಾಲ್ಲೂಕಿನ ತೆಂಡೇಕೆರೆ ಚೆಕ್ಪೋಸ್ಟ್ನಲ್ಲಿ ಚೆಕ್ಪೋಸ್ಟ್ ಅಧಿಕಾರಿಗಳು ಹಾಗೂ ಪೊಲೀಸರಿಗೆ ನಮಗೆ ಕೊರೊನಾ ಇದೆ, ನಿಮಗೂ ಬರಬಹುದು ಎಂದು ಹೆದರಿಸಿ ಆಟೋದಲ್ಲಿ ಪರಾರಿಯಾಗಿದ್ದ ಮೂವರು ಯುವಕರು ಮುಸ್ಲಿಮರು ಎಂದು ಸುದ್ದಿ ಹರಡಲಾಗಿತ್ತು. ಆದರೆ, ಪೊಲೀಸ್ ತನಿಖೆಯ ಬಳಿಕ ಅವರು ಹಿಂದೂಗಳೂ ಎಂಬುದು ತಿಳಿದಿತ್ತು.
6- ಗೋಹತ್ಯೆ ಪ್ರಕರಣದಲ್ಲಿ ನಾಲ್ವರು ಮುಸ್ಲಿಂರ ಬಂಧನ ಮಾಡಿಸಲು ಸಂಚು ರೂಪಿಸಿದ್ದ ಅಖಿಲ ಭಾರತ ಹಿಂದೂ ಮಹಾಸಭಾದ ನಾಲ್ವರು ಮಾಜಿ ಕಾರ್ಯಕರ್ತರನ್ನು ಆಗ್ರಾ ಪೊಲೀಸರು 2023ರಲ್ಲಿ ಬಂಧನ ಮಾಡಿದ್ದರು.
7- ಮುಸ್ಲಿಮರ ವಿರುದ್ಧ ಪ್ರಚೋದಿಸುವ ಉದ್ದೇಶದಿಂದ ಹಿಂದೂ ವ್ಯಕ್ತಿಯೊಬ್ಬ ಮುಸ್ಲಿಮರ ವೇಷ ಹಾಕಿ ಅಯೋಧ್ಯೆಯ ಹಿಂದೂಗಳನ್ನು ಟೀಕಿಸಿದ್ದನು. ಸ್ಕಲ್ಕ್ಯಾಪ್ ಧರಿಸಿದ ವ್ಯಕ್ತಿಯೊಬ್ಬ “ದೋಗ್ಲೆ” (ಎರಡು ಮುಖದವರು) ಹಿಂದೂಗಳನ್ನು ಉದ್ದೇಶಿಸಿ ಮಾತನಾಡುವ ವಿಡಿಯೊ ವೈರಲ್ ಆಗಿತ್ತು. ಮುಸ್ಲಿಂ ವ್ಯಕ್ತಿ ಎಂದು ಹೇಳಿಕೊಂಡ ಆತ, ಅಯೋಧ್ಯೆಯ ಹಿಂದೂಗಳನ್ನು ಎರಡು ಮುಖದವರು ಎಂದು ಕರೆದು, ರಾಹುಲ್ ಗಾಂಧಿ ಅಧಿಕಾರಕ್ಕೆ ಬಂದಿದ್ದರೆ, ಮುಸ್ಲಿಮರಿಗೆ ಮೀಸಲಾತಿ ನೀಡುತ್ತಿದ್ದರು ಎಂದು ವಿಡಿಯೋದಲ್ಲಿ ಹೇಳಿದ್ದನು. ಮುಸ್ಲಿಮರ ವೇಷ ಹಾಕಿ ಹಿಂದೂಗಳನ್ನು ಟೀಕಿಸಿ ಗಲಭೆ ಸೃಷ್ಟಿಸಲು ಯತ್ನಿಸಿದ ಧೀರೇಂದ್ರ ರಾಘವ್ನನ್ನು ಪೊಲೀಸರು ಬಂಧಿಸಿದ್ದರು. ಹಿಂದೂಗಳನ್ನು ಮುಸ್ಲಿಮರ ವಿರುದ್ಧ ಪ್ರಚೋದಿಸುವ ಉದ್ದೇಶದಿಂದ ಈ ವಿಡಿಯೋ ತಯಾರಿಸಿದ್ದಾಗಿ ಆಪಾದಿಸಲಾಗಿತ್ತು.
8- ಇನ್ನು ಕರ್ನಾಟಕದ ಬಿಜಾಪುರ ಜಿಲ್ಲೆಯ ಸಿಂದಗಿಯ ಮಿನಿ ವಿಧಾನಸೌಧದ ಎದುರು 2012ರ ಜ.1ರಂದು ಪಾಕಿಸ್ತಾನದ ಧ್ವಜ ಹಾರಿಸಿದ್ದರು. ಈ ಧ್ವಜವನ್ನು ಹಾರಿಸಿದ್ದು, ಆರ್ ಎಸ್ ಎಸ್ ಕಾರ್ಯಕರ್ತರು ಎಂದು ಶ್ರೀರಾಮ ಸೇನೆಯ ಪ್ರಮೋದ್ ಮುತಾಲಿಕ್ ಹೇಳಿದ್ದರು. “ಬಂಧಿತ ವಿದ್ಯಾರ್ಥಿಗಳು ಆರ್ ಎಸ್ ಎಸ್ ಸಂಘಟನೆಗೆ ಸೇರಿದವರು ಎನ್ನುವುದಕ್ಕೆ ನನ್ನ ಬಳಿ ಬಲವಾದ ಸಾಕ್ಷ್ಯವಿದೆ” ಎಂದು ಅವರು ಹೇಳಿದ್ದರು.
ಇಷ್ಟೇ ಅಲ್ಲ, ಇನ್ನೂ ಹಲವಾರು ಇಂತಹದೇ ಘಟನೆಗಳಿವೆ. ಒಟ್ಟಿನಲ್ಲಿ ಮುಸ್ಲಿಂರನ್ನ ವಿಲನ್ಗಳಾಗಿ, ಭಯೋತ್ಪಾದಕರಾಗಿ ಬಿಂಬಿಸುವ ಯತ್ನದ ಭಾಗವಾಗಿ ಈ ಘಟನೆಗಳು ನಡೆದಿವೆ. ಒಂದು ಸಮುದಾಯವನ್ನ ಆರೋಪಿ ಸ್ಥಾನದಲ್ಲಿಟ್ಟು, ಕೀಳಾಗಿ ಕಾಣುವ ಮನಸ್ಥಿತಿಯನ್ನ ನಿರ್ಮಾಣ ಮಾಡಲು ಹೊರಟಿದ್ದಾರೆ.

ಮೋದಿ ಕಾಲದಲ್ಲಿ ನ್ಯಾಯಾಂಗದ ಮೇಲೆಯೇ ಸನಾತನಿಗಳು ನಂಜು ಕಾರುತ್ತಿರುವಾಗ, ದೇಶದ ಪ್ರಧಾನಿಯೇ ಸಂವಿಧಾನ ಬದ್ಧವಾಗಿ ‘ನಾವೆಲ್ಲರೂ ಒಂದೇ’ ಎಂದು ನೋಡದಿರುವಾಗ ಇಂತಹ ಪ್ರಕರಣಗಳು ಹುಟ್ಟಿಕೊಳ್ಳುತ್ತವೆ. ಒಂದು ಸಮುದಾಯವನ್ನು ಶತ್ರುಗಳಂತೆ ನೋಡುವುದನ್ನ ಬಿಟ್ಟು ನಾವೆಲ್ಲ ಒಂದೇ ಎಂದೂ ಎಲ್ಲರೂ ತಿಳಿಯಬೇಕಿದೆ. ನಂಜು ಕಾರುವವರ ಹುನ್ನಾರ ಏನೂ ಎಂಬುದನ್ನ ದೇಶವಾಸಿಗಳು ಅರಿತು ಎಚ್ಚೆತ್ತುಕೊಳ್ಳಬೇಕಿದೆ. ಕೋಮುವಾದಿಗಳ ಕುತಂತ್ರವನ್ನು ಬಡುಮೇಲು ಮಾಡಬೇಕಿದೆ. ಅವರಿಗೆ ಸಹಬಾಳ್ವೆಯ ಪಾಠ ಹೇಳಬೇಕಿದೆ.




