ಕುಕಿ ಸಮುದಾಯವು ಮಣಿಪುರ ಸರ್ಕಾರದಿಂದ ಸಂಪೂರ್ಣವಾಗಿ ಬೇರ್ಪಟ್ಟು, ತಮಗಾಗಿ ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶ ಅಥವಾ ಪ್ರತ್ಯೇಕ ರಾಜ್ಯ ನೀಡಬೇಕೆಂದು ದಶಕಗಳಿಂದ ಒತ್ತಾಯಿಸುತ್ತಿದೆ. ಪ್ರಸ್ತುತ ಸರ್ಕಾರವು ಈ ಬೇಡಿಕೆಯನ್ನು ಪರಿಗಣಿಸದಿರುವುದು ಕುಕಿ ಸಮುದಾಯದ ಅಸಮಾಧಾನಕ್ಕೆ ಮುಖ್ಯ ಕಾರಣವಾಗಿದೆ. ತಮ್ಮ ಬೇಡಿಕೆ ಈಡೇರದೆ ಇರುವಾಗ ಹೊಸ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಕುಕಿ ಶಾಸಕಿ ನೆಮ್ಚಾ ಕಿಪ್ಗೆನ್ ಮತ್ತು ಇತರ ಕುಕಿ ಶಾಸಕರ ವಿರುದ್ಧ ಸಮುದಾಯವು ಅಸಮಾಧಾನ ವ್ಯಕ್ತಪಡಿಸಿದೆ.
ಮಣಿಪುರದಲ್ಲಿ ಹೊಸ ಸರ್ಕಾರ ರಚನೆಯಾಗಿ ಇನ್ನೂ ಒಂದು ವಾರವೂ ಕಳೆದಿಲ್ಲ. ಆದರೆ ಆ ಅಲ್ಪ ಅವಧಿಯಲ್ಲೇ ರಾಜ್ಯ ಮತ್ತೆ ಹಿಂಸಾಚಾರ, ಬಂದ್, ರಸ್ತೆ ತಡೆ ಮತ್ತು ಸಮುದಾಯದ ಅಸಮಾಧಾನದ ಬೆಂಕಿಗೆ ಆಹುತಿಯಾಗಿದೆ. ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಅವಧಿ ಮುಗಿದು ಹೊಸ ಸರ್ಕಾರ ರಚನೆಯಾಗಿದೆ. ಆದರೆ ಅದು ಶಾಂತಿ ತರುವುದರ ಬದಲು ಹಳೆಯ ಹುಣ್ಣುಗಳನ್ನು ಮತ್ತೆ ಗಾಯ ಮಾಡಿದಂತೆ ಕಾಣಿಸುತ್ತಿದೆ. ಚುರಾಚಂದ್ಪುರದಲ್ಲಿ ಪ್ರತಿಭಟನೆಗಳು ಹಿಂಸಾತ್ಮಕ ರೂಪ ತಾಳಿವೆ. ಇಂಫಾಲ್ನಿಂದ ಮಿಜೋರಾಂನ ಐಜ್ವಾಲ್ಗೆ ಹೋಗುವ ಮುಖ್ಯ ಹೆದ್ದಾರಿಯನ್ನು ತಡೆಯಲಾಗಿದೆ. ವಾಹನಗಳಿಗೆ ಹಾನಿ ಮಾಡಲಾಗಿದೆ. ಇದು ಹೊಸ ಸರ್ಕಾರದ ಮೊದಲ ಪರೀಕ್ಷೆಯೇ ಸರಿ. ಹೊಸ ಸರ್ಕಾರವೂ ವಿಫಲವಾಗಿದೆ ಅಂದರೆ ಅದು ಅತಿಶಯೋಕ್ತಿಯಲ್ಲ. ಹೊಸ ಸರ್ಕಾರಕ್ಕೆ ಮೂವರು ಕುಕಿ-ಝೋ ಶಾಸಕರು ಬೆಂಬಲ ನೀಡಿರುವುದೇ ಈ ಗಲಾಟೆಯ ಕೇಂದ್ರಬಿಂದು. ಕಾರಣ ಸ್ಪಷ್ಟವಾಗಿದೆ. ಪ್ರತ್ಯೇಕ ಆಡಳಿತದ ಬೇಡಿಕೆ ಇನ್ನೂ ಪರಿಹಾರ ಕಂಡಿಲ್ಲ. ಆದರೆ ಅದನ್ನು ಬದಿಗಿಟ್ಟು, ಹೊಸ ಸರ್ಕಾರಕ್ಕೆ ಬೆಂಬಲ ನೀಡಲಾಗಿದೆ ಎಂಬ ಆರೋಪ.
ಫೆಬ್ರವರಿ 4 -5 ರಂದು, ಯುಮ್ನಾಮ್ ಖೇಮ್ಚಂದ್ ಸಿಂಗ್ (ಮೈಥೇಯಿ ಸಮುದಾಯದ ಮಾಜಿ ಸ್ಪೀಕರ್) ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಕುಕಿ-ಝೋ ಸಮುದಾಯದ ನೆಮ್ಚಾ ಕಿಪ್ಗೆನ್ ಮತ್ತು ನಾಗಾ ಸಮುದಾಯದ ಲೋಸಿ ಡಿಖೋ ಉಪಮುಖ್ಯಮಂತ್ರಿಗಳಾಗಿ ಹೊಸ ಸರ್ಕಾರಕ್ಕೆ ಬಹು-ಜನಾಂಗೀಯ ಸರ್ಕಾರವಾಗಿ ಸಾರಿದರು. ಇದನ್ನು “ಶಾಂತಿಯ ಕಡೆಗೆ ಒಂದು ಹೆಜ್ಜೆ” ಎಂದು ಕೆಲವರು ನೋಡಿದ್ದರು. ಆದರೆ ಕುಕಿ-ಝೋ ಸಮುದಾಯದಲ್ಲಿ ಇದು “ವಿಶ್ವಾಸದ್ರೋಹ” ಎಂದು ಭಾವಿಸಲಾಗಿದೆ. ಯಾಕೆಂದರೆ ಕುಕಿ-ಝೋ ಸಮುದಾಯದ 10 ಶಾಸಕರಲ್ಲಿ ಏಳು ಬಿಜೆಪಿಯವರು. ಸರ್ಕಾರ ರಚನೆಗೆ ಕುಕಿ ಸಮುದಾಯ ತೀವ್ರ ವಿರೋಧ ವ್ಯಕ್ತಪಡಿಸಿದೆ. ತಮ್ಮ ಸಮುದಾಯದ ಶಾಸಕರು ಸರ್ಕಾರ ರಚನೆಯಲ್ಲಿ ಭಾಗಿಯಾಗಬಾರದು ಎಂದು ಆಗ್ರಹಿಸಿದೆ.
ಕುಕಿ ಸಮುದಾಯವು ಮಣಿಪುರ ಸರ್ಕಾರದಿಂದ ಸಂಪೂರ್ಣವಾಗಿ ಬೇರ್ಪಟ್ಟು, ತಮಗಾಗಿ ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶ ಅಥವಾ ಪ್ರತ್ಯೇಕ ರಾಜ್ಯ ನೀಡಬೇಕೆಂದು ದಶಕಗಳಿಂದ ಒತ್ತಾಯಿಸುತ್ತಿದೆ. ಪ್ರಸ್ತುತ ಸರ್ಕಾರವು ಈ ಬೇಡಿಕೆಯನ್ನು ಪರಿಗಣಿಸದಿರುವುದು ಕುಕಿ ಸಮುದಾಯದ ಅಸಮಾಧಾನಕ್ಕೆ ಮುಖ್ಯ ಕಾರಣವಾಗಿದೆ. ತಮ್ಮ ಬೇಡಿಕೆ ಈಡೇರದೆ ಇರುವಾಗ ಹೊಸ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಕುಕಿ ಶಾಸಕಿ ನೆಮ್ಚಾ ಕಿಪ್ಗೆನ್ ಮತ್ತು ಇತರ ಕುಕಿ ಶಾಸಕರ ವಿರುದ್ಧ ಸಮುದಾಯವು ಅಸಮಾಧಾನ ವ್ಯಕ್ತಪಡಿಸಿದೆ. ಈ ಶಾಸಕರು ಸಮುದಾಯದ ಹೋರಾಟಕ್ಕೆ ದ್ರೋಹ ಬಗೆದಿದ್ದಾರೆ ಎಂದು ಆರೋಪಿಸಿರುವ ಕುಕಿ-ಜೋ ಕೌನ್ಸಿಲ್ ಅವರ ವಿರುದ್ಧ ‘ಸಾಮಾಜಿಕ ಬಹಿಷ್ಕಾರ’ ಘೋಷಿಸಿದೆ. ಏತನ್ಮಧ್ಯೆ, ಕುಕಿ ವಿದ್ಯಾರ್ಥಿಗಳ ಸಂಘಟನೆ (ಕೆಎಸ್ಒ) ಶುಕ್ರವಾರ ಚುರಾಚಂದ್ಪುರ ಜಿಲ್ಲೆಯಾದ್ಯಂತ 24 ಗಂಟೆಗಳ ‘ಸಂಪೂರ್ಣ ಬಂದ್’ ಘೋಷಿಸಿದೆ. ಪ್ರತಿಭಟನಾಕಾರರು ಟೈರ್ಗಳನ್ನು ಸುಡುತ್ತಿದ್ದಾರೆ, ಕಲ್ಲು ತೂರುತ್ತಿದ್ದಾರೆ, ಭದ್ರತಾ ಪಡೆಗಳೊಂದಿಗೆ ಘರ್ಷಣೆ ನಡೆಯುತ್ತಿದೆ. ಚುರಾಚಂದ್ಪುರ ಮೂಲಕ ಸಾಗುವ ಈ ರಸ್ತೆ ಕೇವಲ ಸಾರಿಗೆ ಮಾರ್ಗವಲ್ಲ; ಅದು ರಾಜ್ಯಗಳ ನಡುವಿನ ಜೀವನಾಡಿ. ಆದರೆ ಅದನ್ನೇ ಬಂದ್ ಮಾಡಿ, ವಾಹನಗಳಿಗೆ ಹಾನಿ ಮಾಡಲಾಗಿದ್ದು, ಪ್ರತಿಭಟನೆ ಹಿಂಸಾತ್ಮಕ ಸ್ವರೂಪ ತಾಳಿದೆ.
ಇದು ಕೇವಲ ಒಂದು ದಿನದ ಘಟನೆಯಲ್ಲ. ಮಣಿಪುರದ ಇಂದಿನ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು 2023ರ ಮೇ ತಿಂಗಳ ಹಿನ್ನಲೆಯಲ್ಲಿ ಹೋಗಲೇಬೇಕು. 2023ರ ಮೇನಿಂದ ಮಣಿಪುರದಲ್ಲಿ ಜನಾಂಗೀಯ ಹಿಂಸೆ ನಡೆಯುತ್ತಿದೆ. ನೂರಾರು ಮಂದಿ ಸತ್ತಿದ್ದಾರೆ, 60,000 ಕ್ಕೂ ಹೆಚ್ಚು ಜನರು ನಿರಾಶ್ರಿತರಾಗಿದ್ದಾರೆ. ಆ ಹಿಂಸೆಯ ಬಳಿಕವೇ ರಾಷ್ಟ್ರಪತಿ ಆಡಳಿತ ಹೇರಲಾಗಿತ್ತು. ಆಡಳಿತ ಬದಲಾದರೂ, ಜನರ ಬದುಕಿನ ಭಯ, ಅಸುರಕ್ಷತೆ ಮತ್ತು ಅಸಮಾಧಾನ ಬದಲಾಗಿಲ್ಲ.
ಹೊಸ ಮುಖ್ಯಮಂತ್ರಿ ಖೇಮ್ಚಂದ್ ಸಿಂಗ್ ಹಿಂದೆ ಕುಕಿ ರಿಲೀಫ್ ಕ್ಯಾಂಪ್ಗಳಿಗೆ ಭೇಟಿ ನೀಡಿ ಸಂಭಾಷಣೆಗೆ ಮುಂದಾಗಿದ್ದರು. ಆದರೆ ಈಗ ಅವರ ಸರ್ಕಾರಕ್ಕೆ ಮೊದಲ ದಿನಗಳಲ್ಲೇ ಆತಂಕ ಎದುರಾಗಿದೆ. ಶಾಸಕರ ನಿವಾಸಗಳಿಗೆ ಬಿಗಿ ಭದ್ರತೆ ನೀಡಲಾಗಿದೆ. ಇದು ಶಾಂತಿಯ ಸೂಚನೆಯಲ್ಲ. ಮಣಿಪುರದ ಸಮಸ್ಯೆಗೆ ರಾಜಕೀಯ ಪರಿಹಾರ ಮಾತ್ರ ಸಾಲದು. ಕುಕಿ-ಝೋ ಸಮುದಾಯದ ಪ್ರತ್ಯೇಕ ಆಡಳಿತದ ಬೇಡಿಕೆ, ಪುನರ್ವಸತಿ, ಹಿಂಸೆಗೆ ತುತ್ತಾದವರಿಗೆ ನ್ಯಾಯ – ಇವುಗಳನ್ನು ಮಾತುಕತೆಯ ಮೂಲಕ ಪರಿಹರಿಸದಿದ್ದರೆ, ಹೊಸ ಸರ್ಕಾರವೂ ಹಳೆಯ ಹಾದಿಯಲ್ಲೇ ಹೋಗುತ್ತದೆ. ಇಂದು ಚುರಾಚಂದ್ಪುರದಲ್ಲಿ ಸುಡುತ್ತಿರುವ ಟೈರ್ಗಳು ನಾಳೆ ಇನ್ನೂ ದೊಡ್ಡ ಹಿಂಸೆಗೆ ಕಾರಣವಾಗಬಹುದು.
ಇದನ್ನೂ ಓದಿ NEP ತಿರಸ್ಕರಿಸಿದ್ದೇವೆ ಎನ್ನುವ ರಾಜ್ಯ ಸರ್ಕಾರ ಇಲ್ಲಿ ಅದನ್ನೇ ಜಾರಿಗೊಳಿಸುತ್ತಿದೆ: ಪಿ ನಿರಂಜನಾರಾಧ್ಯ
ಹೊಸ ಸರ್ಕಾರ ರಚನೆಯಾದ ಕೂಡಲೇ ಹಿಂಸೆ ತಲೆದೋರಿದರೆ, ಜನಾಂಗೀಯ ಅಸಮಾಧಾನ ಉಲ್ಬಣಗೊಂಡರೆ, ರಸ್ತೆ ತಡೆ ಮತ್ತು ಬಂದ್ ಸಾಮಾನ್ಯವಾದರೆ ಅದು ಆಡಳಿತದ ಮೇಲಿನ ನಂಬಿಕೆಗೆ ದೊಡ್ಡ ಹೊಡೆತ. ಮಣಿಪುರಕ್ಕೆ ಇನ್ನೊಂದು ಸರ್ಕಾರ ಬೇಕಿರಲಿಲ್ಲ. ಮಣಿಪುರಕ್ಕೆ ಬೇಕಾಗಿದ್ದು ರಾಜಕೀಯ ಧೈರ್ಯ, ಸಮುದಾಯಗಳ ನಡುವಿನ ಪ್ರಾಮಾಣಿಕ ಸಂವಾದ, ಮತ್ತು ಶಾಂತಿ ಸಾಧಿಸುವ ದೃಢ ಇಚ್ಛಾಶಕ್ತಿ. ಇದುವರೆಗೆ ಕಂಡಿರುವ ಲಕ್ಷಣಗಳು ಮಾತ್ರ ಒಂದು ಕಠಿಣ ಸತ್ಯ ಹೇಳುತ್ತಿವೆ, ಹೊಸ ಸರ್ಕಾರವೂ ಮಣಿಪುರವನ್ನು ಶಾಂತಗೊಳಿಸಲು ವಿಫಲವಾಗಿದೆ. ಶಾಂತಿ ಘೋಷಣೆಗಳಿಂದ ಬರುವುದಿಲ್ಲ. ಅದು ನ್ಯಾಯದಿಂದ, ನಂಬಿಕೆಯಿಂದ ಮತ್ತು ಎಲ್ಲ ಸಮುದಾಯಗಳನ್ನು ಕೇಳುವ ಮನಸ್ಸಿನಿಂದ ಮಾತ್ರ ಬರುತ್ತದೆ. ಮಣಿಪುರದಲ್ಲಿ ಆ ದಿನ ಇನ್ನೂ ದೂರದಲ್ಲಿದ್ದಂತಿದೆ.





