ಭಾರತದ ಅತ್ಯಂತ ಸುಂದರ ತಾಣಗಳಲ್ಲಿ ಪಹಲ್ಗಾಮ್ ಕೂಡ ಒಂದು. ಜಮ್ಮು ಮತ್ತು ಕಾಶ್ಮೀರದಲ್ಲಿ ಇರುವ ಈ ಸ್ಥಳವು ಹಿಮದ ಶಿಖರಗಳು, ಹಸಿರು ಮಲೆಗಳು ಮತ್ತು ನದಿಗಳಿಂದ ಕೂಡಿದೆ. ಆದರೆ ಇದೇ ವರ್ಷದ ಏಪ್ರಿಲ್ 22 ರಂದು ಇಲ್ಲಿ ಒಂದು ಭಯಂಕರ ಘಟನೆ ನಡೆಯಿತು. ಭಯೋತ್ಪಾದಕರು ಪಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ದಾಳಿ ಮಾಡಿದರು. 25 ಮಂದಿ ಅಮಾಯಕ ಪ್ರವಾಸಿಗರು ಓರ್ವ ಸ್ಥಳೀಯ ಜೀವ ಕಳೆದುಕೊಂಡರು. ಇದು ಭಾರತದಲ್ಲಿ 2008 ರ ಮುಂಬೈ ದಾಳಿಯ ನಂತರ ನಡೆದ ಅತ್ಯಂತ ಭೀಕರ ಭಯೋತ್ಪಾದಕ ದಾಳಿಯಾಗಿತ್ತು. ‘ದಿ ರೆಸಿಸ್ಟೆನ್ಸ್ ಫ್ರಂಟ್’ ಎಂಬ ಭಯೋತ್ಪಾದಕ ಗುಂಪು ಈ ದಾಳಿಗೆ ಹೊಣೆ ಹೊತ್ತುಕೊಂಡಿತು. ದಾಳಿಯ ಒಂದು ತಿಂಗಳ ನಂತರ, ಮೇ 7 ರಂದು ಭಾರತ ಸರ್ಕಾರವು ತನ್ನ ಉತ್ತರ ನೀಡಿತು. ‘ಆಪರೇಷನ್ ಸಿಂಧೂರ್’ ಎಂಬ ಕಾರ್ಯಾಚರಣೆಯನ್ನು ಆರಂಭಿಸಿತು. ಈ ಕಾರ್ಯಾಚರಣೆಯಲ್ಲಿ ಭಾರತದ ಸೇನೆಯು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಇರುವ ಭಯೋತ್ಪಾದಕರ ನೆಲೆಗಳ ಮೇಲೆ ದಾಳಿಗಳನ್ನು ನಡೆಸಿತು.

ಸಂಘರ್ಷ ಮುಗಿದ ನಂತರ, ಭಾರತವು ಜಗತ್ತಿಗೆ ತನ್ನ ಮಾತನ್ನು ಹೇಳಬೇಕೆಂದು ನಿರ್ಧರಿಸಿತು. ಭಯೋತ್ಪಾದನೆಯ ವಿರುದ್ಧ ಭಾರತದ ನಿಲುವು ಎಲ್ಲಾ ಪಕ್ಷಗಳಿಂದ ಬೆಂಬಲಿಸಲ್ಪಟ್ಟದ್ದು ಎಂದು ತೋರಿಸಬೇಕಿತ್ತು. ಹೀಗೆ, ಮೇ 23 ರಂದು ಸರ್ಕಾರವು 7 ನಿಯೋಗಗಳನ್ನು ವಿದೇಶಗಳಿಗೆ ಕಳುಹಿಸುವುದಾಗಿ ಘೋಷಿಸಿತು. ಒಟ್ಟು 59 ಮಂದಿ ಸಂಸದರು ಈ ವಿದೇಶಕ್ಕೆ ಹೋದರು. ಅವರು 32 ದೇಶಗಳನ್ನು ಭೇಟಿಯಾದರು. ಈ ನಿಯೋಗ ಸಂಸತ್ತಿನ ಸ್ಪೀಕರ್ಗಳು, ರಾಜಕಾರಣಿಗಳು, ಸಚಿವರೊಂದಿಗೆ ಮಾತಾಡಿದರು. ಉದಾಹರಣೆಗೆ, ಯುರೋಪ್ಗೆ ಹೋದ ನಿಯೋಗ ಫ್ರಾನ್ಸ್, ಇಟಲಿ, ಡೆನ್ಮಾರ್ಕ್, ಯುಕೆ, ಬೆಲ್ಜಿಯಂ, ಜರ್ಮನಿ ಮತ್ತು ಯೂರೋಪಿಯನ್ ಯೂನಿಯನ್ ಸಂಸ್ಥೆಗಳನ್ನು ಭೇಟಿಯಾಯಿತು. ಆದರೆ ಈ ನಿಯೋಗಗಳ ವಿದೇಶಿ ಪ್ರಯಾಣಕ್ಕೆ 13.11 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ಸರ್ಕಾರ ಹೇಳಿಕೊಂಡಿದೆ. ಆಪರೇಷನ್ ಸಿಂಧೂರ್ ಮುಂದುವರಿದ ಭಾಗವಾಗಿ, ಪಾಕಿಸ್ತಾನದ ನೆಲದಲ್ಲಿ ನಡೆಯುತ್ತಿರುವ ಭಯೋತ್ಪಾದಕ ಚಟುವಟಿಕೆಗಳು ಮತ್ತು ಉಗ್ರ ಕೃತ್ಯದಲ್ಲಿ ಝೀರೋ ಟಾಲರೆನ್ಸ್ ಅನ್ನು ಸಾರಲು, ಏಳು ನಿಯೋಗಗಳ ತಂಡ ವಿದೇಶಕ್ಕೆ ತೆರಳಿತ್ತು.
ಇಂಗ್ಲಿಷ್ ಸುದ್ದಿ ಸಂಸ್ಥೆ ‘ದಿ ಕ್ವಿಂಟ್’ ಸಲ್ಲಿಸಿದ್ದ ಮಾಹಿತಿ ಹಕ್ಕು ಅರ್ಜಿ (ಆರ್ಟಿಐ)ಗೆ ಉತ್ತರಿಸಿರುವ ವಿದೇಶಾಂಗ ಸಚಿವಾಲಯ (ಎಂಇಎ), ಸಂಸದರ 7 ನಿಯೋಗಗಳ ಪ್ರಯಾಣಕ್ಕಾಗಿ 13,11,16,647 ರೂ.ಗಳನ್ನು ಖರ್ಚು ಮಾಡಲಾಗಿದೆ ಎಂದು ದೃಢಪಡಿಸಿದೆ. ಆದಾಗ್ಯೂ, ನಿಯೋಗದಲ್ಲಿ ಸಂಸದರ ತಲಾ ವೆಚ್ಚದ ವಿವರ ಅಥವಾ ಪ್ರತ್ಯೇಕ ವೆಚ್ಚದ ಮಾಹಿತಿಯನ್ನು ಬಹಿರಂಗಪಡಿಸಲು ಎಂಇಎ ನಿರಾಕರಿಸಿದೆ. ಈ ಎಲ್ಲಾ ಹಣ ಜನರ ತೆರಿಗೆ ಹಣ ಅನ್ನೋದನ್ನ ನಾವಿಲ್ಲಿ ಮರೆಯೋ ಹಾಗಿಲ್ಲ.

ಆರ್ಟಿಐನಲ್ಲಿ ಕೇಳಲಾಗಿದ್ದ ಪ್ರಶ್ನೆಗಳೇನು? ಮತ್ತು ಎಂಇಎ ಉತ್ತರಗಳೇನು?
ಪ್ರತಿ ಸಂಸದರ ವೆಚ್ಚ, ನಿಯೋಗವಾರು ವೆಚ್ಚದ ವಿವರಗಳು (ಪ್ರಯಾಣ, ವಾಸ್ತವ್ಯ, ಇತರ ವೆಚ್ಚಗಳು), ನಿಯೋಗಗಳ ಖರ್ಚು ಮಾದರಿಗಳು ಹಾಗೂ ನಿಯೋಗದ ಪ್ರವಾಸದಿಂದಾದ ರಾಜತಾಂತ್ರಿಕ ಲಾಭಗಳು ಸೇರಿದಂತೆ ಒಟ್ಟು 15 ಪ್ರಶ್ನೆಗಳನ್ನು ‘ದಿ ಕ್ವಿಂಟ್’ ಕೇಳಿತ್ತು.
ಆದಾಗ್ಯೂ, ಎಂಇಎ ಪ್ರತಿ ಸಂಸದರ ವೆಚ್ಚವನ್ನು ಒದಗಿಸಲು ಅಥವಾ ವೆಚ್ಚದ ವಿವರಗಳನ್ನು ನೀಡಲು ನಿರಾಕರಿಸಿದೆ. ಪ್ರತಿ ನಿಯೋಗಕ್ಕೆ ವ್ಯಯಿಸಲಾದ ಒಟ್ಟು ಅಂಕಿಅಂಶವನ್ನು ಮಾತ್ರವೇ ನೀಡಿದೆ.
ರವಿಶಂಕರ್ ಪ್ರಸಾದ್ ನಿಯೋಗ (ಯುರೋಪ್): 3.44 ಕೋಟಿ ರೂ.
ಬೈಜಯಂತ್ ಪಾಂಡ ನಿಯೋಗ (ಪಶ್ಚಿಮ ಏಷ್ಯಾ ಮತ್ತು ಉತ್ತರ ಆಫ್ರಿಕಾ): 1.35 ಕೋಟಿ ರೂ.
ಶಶಿ ತರೂರ್ ನಿಯೋಗ (ಅಮೆರಿಕ): 2.08 ಕೋಟಿ ರೂ.
ಕನಿಮೋಳಿ ಕರುಣಾನಿಧಿ ನಿಯೋಗ (ಯುರೋಪ್): 1.90 ಕೋಟಿ ರೂ.
ಶ್ರೀಕಾಂತ್ ಏಕನಾಥ್ ಶಿಂಧೆ ನಿಯೋಗ (ಆಫ್ರಿಕಾ): 1.53 ಕೋಟಿ ರೂ.
ಸಂಜಯ್ ಕುಮಾರ್ ಝಾ ನಿಯೋಗ (ಪೂರ್ವ ಏಷ್ಯಾ): 1.48 ಕೋಟಿ ರೂ.
ಸುಪ್ರಿಯಾ ಸುಳೆ ನಿಯೋಗ (ಆಫ್ರಿಕಾ ಮತ್ತು ಪಶ್ಚಿಮ ಏಷ್ಯಾ): 1.31 ಕೋಟಿ ರೂ.
ರವಿಶಂಕರ್ ಪ್ರಸಾದ್ ನೇತೃತ್ವದ ನಿಯೋಗವೊಂದಕ್ಕೆ ಒಟ್ಟು ಖರ್ಚಿನಲ್ಲಿ ಸುಮಾರು 30%ರಷ್ಟು ಹಣವನ್ನು ವೆಚ್ಚ ಮಾಡಲಾಗಿದೆ. ಈ ನಿಯೋಗವು ಫ್ರಾನ್ಸ್, ಇಟಲಿ, ಡೆನ್ಮಾರ್ಕ್, ಯುಕೆ, ಬೆಲ್ಜಿಯಂ, ಜರ್ಮನಿ ಹಾಗೂ ಯುರೋಪಿಯನ್ ಒಕ್ಕೂಟದ ರಾಷ್ಟ್ರಗಳಿಗೆ ಪ್ರಯಾಣಿಸಿತ್ತು.
ಯಾವ ರಾಷ್ಟ್ರಗಳಿಗೆ ನಿಯೋಗಗಳು ಭೇಟಿ ನೀಡಿದ್ದವು ಮತ್ತು ಆ ನಿಯೋಗಗಳ ಒಟ್ಟು ಖರ್ಚಿನ ಪ್ರಮಾಣದ ಹೊರತಾಗಿ, ಪ್ರವಾಸದಿಂದಾದ ರಾಜತಾಂತ್ರಿಕ ಲಾಭ/ಫಲಿತಾಂಶಗಳ ಕುರಿತು ಸಚಿವಾಲಯವು ಉತ್ತರ ನೀಡಿಲ್ಲ. ಆಪರೇಷನ್ ಸಿಂಧೂರ್ ನಂತರ ನಿಯೋಗಗಳು ತಮ್ಮ ಘೋಷಿತ ಉದ್ದೇಶವನ್ನು ಸಾಧಿಸಿವೆಯೇ ಎಂಬ ಬಗ್ಗೆ ಸಚಿವಾಲಯ ಯಾವುದೇ ಮೌಲ್ಯಮಾಪನ ನೀಡಿಲ್ಲ. ಆದಾಗ್ಯೂ, ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಗಳು ಮತ್ತು ವರದಿಗಳು ಕೆಲವು ಅಂಶಗಳತ್ತ ಗಮನ ಸೆಳೆಯುತ್ತವೆ; ಭೇಟಿ ನೀಡಿದ ದೇಶಗಳು ಭಾರತದ ನಿಲುವನ್ನು ಸಮ್ಮತಿಸುವ ಯಾವುದೇ ಜಂಟಿ ಹೇಳಿಕೆ ನೀಡಿಲ್ಲ.
ಹಲವಾರು ದೇಶಗಳು ತಮ್ಮ ಹಿಂದಿನ ತಟಸ್ಥ ನಿಲುವನ್ನೇ ಕಾಯ್ದುಕೊಂಡವು. ಸಂಯಮ ಮತ್ತು ಮಾತುಕತೆಗೆ ಕರೆ ನೀಡುವ ತಮ್ಮ ನಿರ್ಧಾರವನ್ನು ಪುನರುಚ್ಚರಿಸಿದವು. ನಿಯೋಗಗಳ ಭೇಟಿಯು ಹೆಚ್ಚಾಗಿ ಸೌಜನ್ಯ ಸಭೆಗಳು, ಫೋಟೋ ತೆಗೆದುಕೊಳ್ಳುವುದು ಹಾಗೂ ಮುಚ್ಚಿದ ಬಾಗಿಲಿನ ಸಭೆಗಳಿಗೆ ಸೀಮಿತವಾಗಿ ಉಳಿದಿತ್ತು. ಗಮನಾರ್ಹವಾಗಿ, ಸಾಂಪ್ರದಾಯಿಕವಾಗಿ ಭಾರತದ ಮಿತ್ರ ರಾಷ್ಟ್ರಗಳು ಕೂಡ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಸ್ಪಷ್ಟ ರಾಜತಾಂತ್ರಿಕ ಬೆಂಬಲವನ್ನು ವ್ಯಕ್ತಪಡಿಸಲಿಲ್ಲ. 2008ರಲ್ಲಿ ನಡೆದ ಮುಂಬೈ ಭಯೋತ್ಪಾದಕ ದಾಳಿಯನ್ನ ವಿರೋಧಿಸಿ ಹಲವು ದೇಶಗಳು ಭಾರತದ ಪರ ಧ್ವನಿ ಎತ್ತಿದ್ದವು. ಅಷ್ಟೇ ಯಾಕೆ, ಆಗ ವಿರೋಧಪಕ್ಷವಾಗಿದ್ದ ಬಿಜೆಪಿ ಭದ್ರತಾ ವೈಫಲ್ಯದ ಬಗ್ಗೆ ದೊಡ್ಡ ಗಂಟಲಿನಿಂದ ಪ್ರಶ್ನೆ ಮಾಡಿತ್ತು. ಅದರ ಫಲವಾಗಿ ಅಂದಿನ ಗೃಹ ಸಚಿವ ಶಿವರಾಜ್ ಪಾಟೀಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ, ಆ ಸ್ಥಾನಕ್ಕೆ ಘನತೆ ತಂದಿದ್ದರು.
ಮೋದಿ ಅವಧಿಯಲ್ಲಿ, 2019ರಲ್ಲಿ ನಡೆದ ಪುಲ್ವಾಮಾ ದಾಳಿ, 2025ರಲ್ಲಿ ನಡೆದ ಪಹಲ್ಗಾಮ್ ದಾಳಿಯಲ್ಲಿಯೂ ಭದ್ರತಾ ವೈಫಲ್ಯವೇ ಎದ್ದು ಕಂಡಿತ್ತು. ಅದನ್ನು ಖುದ್ದು ಬಿಜೆಪಿ ನಾಯಕರೇ ಸರ್ವಪಕ್ಷ ಸಭೆಯಲ್ಲಿ ಒಪ್ಪಿಕೊಂಡಿದ್ದೂ ಇದೆ. ಆದರೆ, ನೈತಿಕ ಹೊಣೆ ಹೊತ್ತು ಗೃಹ ಸಚಿವರಾದ ಅಮಿತ್ ಶಾ ರಾಜೀನಾಮೆ ಕೊಟ್ಟಿಲ್ಲ, ಕೊಡಬೇಕೆಂದು ಅವರಿಗೂ ಅನಿಸಿಲ್ಲ. ಬದಲಿಗೆ, ಕೇಂದ್ರ ಸರ್ಕಾರದ ಭದ್ರತಾ ವೈಫಲ್ಯದ ಬಗ್ಗೆ ಪ್ರಶ್ನಿಸುವವರ ಮೇಲೆ ದೇಶದ್ರೋಹದ ಆರೋಪ ಹೊರಿಸಿದ್ದರು. ಪುಲ್ವಾಮಾ ದಾಳಿ ಅದರ ನಂತರದ ಬಾಲಾ ಕೋಟ್ ದಾಳಿಯನ್ನು ಬಿಜೆಪಿ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಹೇಗೆಲ್ಲಾ ರಾಜಕೀಯಕ್ಕೆ ಬಳಸಿಕೊಂಡಿದೆ ಎನ್ನುವುದು ದೇಶದ ಜನರ ಕಣ್ಮುಂದಿದೆ. ಇವತ್ತಿಗೂ ಪುಲ್ವಾಮಾ ದಾಳಿಯಲ್ಲಾದ ಭದ್ರತೆಯ ವೈಫಲ್ಯದ ಬಗ್ಗೆ ನಡೆಯಬೇಕಾದ ಚರ್ಚೆಗಳು ನಡೆಯಲಿಲ್ಲ. ಮುಂದೆ ಈ ರೀತಿ ಘಟನೆ ನಡೆಯದಂತೆ ಭದ್ರತೆ ವಿಚಾರದಲ್ಲಿ ತೆಗೆದುಕೊಳ್ಳಬೇಕಾದ ಮುಂಜಾಗರೂಕ ಕ್ರಮವನ್ನೂ ಕೇಂದ್ರ ಸರ್ಕಾರ ತೆಗೆದುಕೊಳ್ಳಲಿಲ್ಲ. ಅದರಿಂದಾಗಿಯೇ ಆಗಿದ್ದು ಪಹಲ್ಗಾಮ್ ಭಯೋತ್ಪಾದಕ ಕೃತ್ಯ. ದೇಶದ ಭದ್ರತೆ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುವ ಬಿಜೆಪಿಯವರು ಕಳೆದ 2014ರಿಂದಲೂ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾರೆ. ಇವರ ಅವಧಿಯಲ್ಲೇ ಪುಲ್ವಾಮಾ, ಪಹಲ್ಗಾಮ್, ದೆಹಲಿ ದಾಳಿ ನಡೆದಿವೆ. ಭಯೋತ್ಪಾದನೆ ನಿಗ್ರಹಕ್ಕೆ ಕೇಂದ್ರ ಸರ್ಕಾರ ಏನು ಕ್ರಮಕೈಗೊಂಡಿದೆ? ಅಂತ ಕೇಳಿದ್ರೆ ಅದಕ್ಕೆ ಉತ್ತರವಿಲ್ಲ.
ಆದರೂ ಮೋದಿಯವರಿಂದ ದೇಶ ಸುಭದ್ರವಾಗಿದೆ ಎಂದು ಅವರ ಭಕ್ತರು ಭಜನೆ ಮಾಡುತ್ತಾರೆ. ಅಷ್ಟು ಸಾಲದು ಎಂಬಂತೆ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ವಂದೇ ಮಾತರಂ ಬಗ್ಗೆ ಇಡೀ ದಿನ ಚರ್ಚೆ ನಡೆಸಿ, ನೆಹರೂ ಮತ್ತು ಕಾಂಗ್ರೆಸ್ ವಿರುದ್ಧ ಟೀಕಾಪ್ರಹಾರ ಮಾಡಿದ ಪ್ರಧಾನಿ ಮೋದಿ ಮತ್ತೆ ವಿದೇಶ ಪ್ರವಾಸದಲ್ಲಿ ಬ್ಯುಸಿಯಾಗಿದ್ದಾರೆ.





