ಮಾಧ್ಯಮ ಬಲದೊಂದಿಗೆ ಮಾತಾಡಿದ್ದೆಲ್ಲ ಪ್ರಸಾರವಾಗುತ್ತದೆ. ಹಿಂದೂ ದ್ವೇಷವನ್ನು ಆಳುವ ಪಕ್ಷಕ್ಕೆ ಆರೋಪಿಸುತ್ತಾ, ಅವರೇ ಹೆಣೆದ ಬಲೆಯಲ್ಲಿ ಅವರೇ ಬೀಳುವ ದಿನಗಳನ್ನು ನಾವು ಕಾದು ನೋಡಬೇಕಿದೆ. “ಮನೆಯೊಳಗಣ ಕಿಚ್ಚು ಮನೆಯ ಸುಟ್ಟಿತಲ್ಲದೆ, ನೆರೆ ಮನೆಯ ಸುಡದು” ಎನ್ನುತ್ತಾನೆ ಬಸವಣ್ಣ.
ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಪುರಷ್ಕೃತ ಸಾಹಿತಿ ಬಾನು ಮುಷ್ತಾಕ್ ಅವರನ್ನು ರಾಜ್ಯ ಸರ್ಕಾರ ದಸರಾ ಉದ್ಘಾಟನೆಗೆ ಆಹ್ವಾನಿಸಿರುವುದನ್ನು ಬಿಜೆಪಿಗರು ಸಾಂಸ್ಕೃತಿಕ ಮೈಲಿಗೆ ಎಂಬಂತೆ ನೋಡುತ್ತಿದ್ದಾರೆ.
ಮುಸ್ಲಿಮರನ್ನು ವಿರೋಧಿಸುವುದೇ ಆ ಪಕ್ಷದ ಅಜೆಂಡಾ ಆಗಿದೆ. ಬಿಜೆಪಿಗರು ರಾಜಕೀಯವಾಗಿ ನಿಂತಿರುವುದೇ ಮುಸ್ಲಿಮರನ್ನು ದ್ವೇಷಿಸುವ ರಾಜಕೀಯದಲ್ಲಿ. ಶಬ್ದಲಜ್ಜೆ ಎಂಬುದನ್ನು ಬಿಜೆಪಿ ಬೃಹಸ್ಪತಿಗಳು ಮರೆತಂತಿದೆ.
ಮಾಧ್ಯಮ ಬಲದೊಂದಿಗೆ ಮಾತಾಡಿದ್ದೆಲ್ಲ ಪ್ರಸಾರವಾಗುತ್ತದೆ. ಹಿಂದೂ ದ್ವೇಷವನ್ನು ಆಳುವ ಪಕ್ಷಕ್ಕೆ ಆರೋಪಿಸುತ್ತಾ, ಅವರೇ ಹೆಣೆದ ಬಲೆಯಲ್ಲಿ ಅವರೇ ಬೀಳುವ ದಿನಗಳನ್ನು ನಾವು ಕಾದು ನೋಡಬೇಕಿದೆ. “ಮನೆಯೊಳಗಣ ಕಿಚ್ಚು ಮನೆಯ ಸುಟ್ಟಿತಲ್ಲದೆ, ನೆರೆ ಮನೆಯ ಸುಡದು” ಎನ್ನುತ್ತಾನೆ ಬಸವಣ್ಣ.
ಸಂವಿಧಾನದ ಧಾರ್ಮಿಕ ಸಮಾನತೆ ವಿರೋಧಿಸಲು ಬಿಜೆಪಿ ಸದಾ ಮುಸ್ಲಿಂ ನಾಯಕರ ಮೇಲೆ ಮಾತಿನ ದಾಳಿಯನ್ನು ಜೀವಂತವಾಗಿಡುತ್ತದೆ. ಈಗ ಅದು ಕನ್ನಡದ ಪ್ರಖ್ಯಾತ ಲೇಖಕಿ ಬಾನು ಮುಷ್ತಾಕ್ ಅವರ ಮೇಲೆ ತಿರುಗಿದೆ. ಇನ್ನು ಹೆಣ್ಣು ಮಕ್ಕಳು, ಮಹಿಳೆಯರಿಗೆ ತೃತೀಯ ದರ್ಜೆ ಸ್ಥಾನ ಬಿಜೆಪಿಯಲ್ಲಿದೆ. ಆ ಪಕ್ಷದಲ್ಲಿ ಮಹಿಳಾ ಪ್ರಾತಿನಿಧ್ಯ ಸಾಂಕೇತಿಕ ಮಾತ್ರ.
ಮಹಿಳೆಯರು ಬಿಜೆಪಿ ಸೂಚನೆ, ಅಪ್ಪಣೆ ಇಲ್ಲದೆ ಮಾತೂ ಸಹ ಆಡುವಂತಿಲ್ಲ. ಸನಾತನ ಸಂಸ್ಕೃತಿ ಎಂದು ಕೊಚ್ಚಿಕೊಳ್ಳುವ ಬಿಜೆಪಿ, ಮುಸ್ಲಿಂ ಸಮುದಾಯದ ಕತೆಗಾರ್ತಿ ದಸರಾ ಉದ್ಘಾಟನೆಗೆ ಹೋಗಲಿರುವುದನ್ನೇ (ಸರ್ಕಾರದ ಆಹ್ವಾನದ ಮೇರೆಗೆ) ಹಿಂದೂ ಧರ್ಮಕ್ಕೆ ಮತ್ತು ನಂಬಿಕೆಗೆ ಕೊಡಲಿ ಪೆಟ್ಟು ಕೊಟ್ಟಂತೆ ಎಂದು ಬೊಬ್ಬೆ ಹಾಕುತ್ತಿದೆ. ಚಾಮುಂಡೇಶ್ವರಿಗೂ ಹಿಂದೂ ಧರ್ಮಕ್ಕೂ ಎತ್ತಣ ಸಂಬಂಧ? ಚಾಮುಂಡೇಶ್ವರಿ ನಾಡಿನ ಅಧಿದೇವತೆ. ನಾಡಹಬ್ಬ ಕರ್ನಾಟಕದ ಪ್ರತಿ ಪ್ರಜೆಯ ಹಬ್ಬ. ಎಲ್ಲಾ ಧರ್ಮ ಸಮುದಾಯದವರು ದಸರೆಯಲ್ಲಿ ಪಾಲ್ಗೊಳ್ಳುತ್ತಾರೆ. ಸಾರ್ವತ್ರಿಕವಾಗಿ ದಸರೆಯ ಸಂಭ್ರಮ ಎಲ್ಲರನ್ನೂ ಒಳಗೊಳ್ಳುತ್ತದೆ. ಅಂಬಾರಿಯಲ್ಲಿನ ಚಾಮುಂಡೇಶ್ವರಿಯಿಂದ ಆನೆ ನಡೆಸುವ ಮಾವುತರಿಗೂ ಅಲ್ಲಿ ಪ್ರಾಮುಖ್ಯತೆ ಇದೆ.
ಮೈಸೂರು ರಾಜ್ಯವನ್ನು ಒಡೆಯರಂತೆ, ಕೆಲ ಕಾಲ ಮೈಸೂರು ರಾಜ್ಯ ಆಳಿದ ಹೈದರಾಲಿ, ಟಿಪ್ಪು ಸುಲ್ತಾನ್ ಸಹ ದಸರಾವನ್ನು ಸಂಪ್ರದಾಯದಂತೆ ಮುನ್ನಡೆಸಿದ್ದಾರೆ. ಮಿರ್ಜಾ ಇಸ್ಮಾಯಿಲ್ ಒಡೆಯರ ಕಾಲದಲ್ಲಿ, ಅವರ ಅಸ್ಥಾನದಲ್ಲಿ ಉನ್ನತ ಹುದ್ದೆಯಲ್ಲಿ ಇದ್ದರು ಎಂಬುದನ್ನು ಬಿಜೆಪಿ ಮರೆತಂತಿದೆ.
ಮುಸ್ಲಿಮರು ವಿಗ್ರಹ ಆರಾಧನೆ ಮಾಡಲ್ಲ. ಹಾಗಾಗಿ ಬಾನು ಮುಷ್ತಾಕ್ ಹೇಗೆ ಚಾಮುಂಡಿಯನ್ನು ಪೂಜಿಸುತ್ತಾರೆ ಎಂದು ಒಬ್ಬರು ಹೇಳಿದರೆ, ಬಾನು ಮುಷ್ತಾಕ್ ಚಾಮುಂಡಿ ಬೆಟ್ಟ ಹತ್ತಬಾರದು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಫಾರ್ಮಾನು ಹೊರಡಿಸುತ್ತಾರೆ. ಬಾನು ಮುಷ್ತಾಕ್ ಚಾಮುಂಡಿ ಬೆಟ್ಟ ಹತ್ತಿದರೆ ಅಪವಿತ್ರವಾಗುತ್ತದೆ ಎಂಬಂತೆ ಮಾತಾಡಿದ್ದಾರೆ. ಸ್ತ್ರೀ ಸಮಾನತೆಯನ್ನು ತನ್ನ ಪಕ್ಷದ ಚೌಕಟ್ಟಿನಲ್ಲೇ ಒಪ್ಪದ ಬಿಜೆಪಿಗೆ, ಲೇಖಕಿ ಬಾನು ದಸರಾ ಉದ್ಘಾಟಿಸುತ್ತಾರೆ ಎಂದಾಗ ನಖಶಿಖಾಂತ ಉರಿದು ಹೋಯಿತು. ಜಗತ್ತಿನ ಪ್ರಸಿದ್ಧ ಲೇಖಕರು ಇಂತಹ ಮತೀಯವಾದಿಗಳ ಜೊತೆಗೆ ಸಂಘರ್ಷಕ್ಕೆ ಇಳಿಯ ಬೇಕಾಗುತ್ತದೆ. ಬಾನು ಮುಷ್ತಾಕ್ ಅವರು ಸಹ ಸಚಿವೆ ಶೋಭಾಗೆ ಪ್ರತ್ಯುತ್ತರ ನೀಡಿದ್ದಾರೆ. ಕನ್ನಡಿಗರ ನಾಡಹಬ್ಬ ಹಾಗೂ ಚಾಮುಂಡೇಶ್ವರಿಯನ್ನು ಗೌರವಿಸುವುದಾಗಿಯೂ ಹೇಳಿದ್ದಾರೆ.
ಬಿಜೆಪಿ ರಾಜಕೀಯ ಕಾರಣಕ್ಕಾಗಿ ಹುಚ್ಚುಚ್ಚು ಹೇಳಿಕೆ ನೀಡ್ತಿಲ್ಲ. ಉದ್ದೇಶಪೂರ್ವಕವಾಗಿ ಅನ್ಯ ಮತೀಯರ ಮೇಲೆ ಮಾತಿನ ದಾಳಿ ನಡೆಸುತ್ತಲೇ ಬಂದಿದೆ. ಇದು ಬಿಜೆಪಿಯ ಮಾತೃಸಂಸ್ಥೆಯಾದ ಆರ್ಎಸ್ಎಸ್ನ ಮತೀಯ ಪ್ರಯೋಗ ಶಾಲೆಯ ಅಭಿಯಾನ. ಮುಸ್ಲಿಮರ ಆಹಾರ ಬಟ್ಟೆ (ಬುರ್ಖಾ, ಹಿಜಾಬ್) ಅಜಾನ್ (ಪ್ರಾರ್ಥನೆ)ಯನ್ನು ಸಹ ಬಿಟ್ಟಿಲ್ಲ. ಮುಸ್ಲಿಂ ಸಮುದಾಯವನ್ನು ದ್ವೇಷಿಸುವ ಅಜೆಂಡಾ ಬಿಜೆಪಿಯ ಡಿಎನ್ಎಯಲ್ಲಿದೆ. ಮುಸ್ಲಿಂ ದ್ವೇಷವೇ ಅದರ ಸಿದ್ಧಾಂತ. ಗೋಡ್ಸೆ ಹಾಗೂ ಅವರ ಗುರು ಸಾವರ್ಕರ್ ಕಲಿಸಿದ್ದನ್ನೇ ಬಿಜೆಪಿ ಉಸಿರಾಡುತ್ತಿದೆ. ನಿಸಾರ ಅಹಮ್ಮದ್ ಅವರು ಈಗಾಗಲೇ ದಸರಾ ಉದ್ಘಾಟಿಸಿದ ಇತಿಹಾಸವನ್ನು ಉದ್ದೇಶಪೂರ್ವಕವಾಗಿ ಬಿಜೆಪಿ ಮರೆಮಾಚುತ್ತದೆ. ಲೇಖಕಿ, ವಕೀಲೆ, ರಾಜಕಾರಣಿ, ಸಾಮಾಜಿಕ ಹೋರಾಟಗಾರ್ತಿಯಾದ ಬಾನು ಮುಷ್ತಾಕ್ ದಸರಾ ಉದ್ಘಾಟಿಸುವುದನ್ನು ಬಹಿರಂಗವಾಗಿ ವಿರೋಧಿಸುತ್ತದೆ.
“ಕಸವರಮಂ ಮೆಂಬುದು ನೆರೆ ಸೈರಿಸಲಾರ್ಪೊಡೆ ಪರಧರ್ಮಮಂ, ಪರ ವಿಚಾರಮಂ” ಕವಿರಾಜಮಾರ್ಗದಲ್ಲಿ ಬರುವ ಮಾತು. ಬಂಗಾರ ಎಂದರೆ “ಪರ ಧರ್ಮ ಮತ್ತು ಪರರ ವಿಚಾರವನ್ನು ಸಹಿಸುವುದು ಎಂದು ಕವಿರಾಜಮಾರ್ಗಕಾರ ಹೇಳುತ್ತಾನೆ. ಧರ್ಮ ಸಹಿಷ್ಣುತೆ, ವಿಚಾರ ಸಹಿಷ್ಣುತೆಯನ್ನು ಈ ಸಾಲು ಒತ್ತಿ ಹೇಳುತ್ತದೆ. ಕನ್ನಡಿಗರು, ಕರ್ನಾಟಕದವರು ಪರ ಧರ್ಮಕ್ಕೆ, ಪರ ವಿಚಾರಕ್ಕೆ ಆಶ್ರಯ ಕೊಟ್ಟು, ಅದರ ತಿರುಳನ್ನು ಆಲಿಸಿ, ಸಹಬಾಳ್ವೆ ಮಾಡಿದವರು. ಪರ ಧರ್ಮ, ಪರ ವಿಚಾರ ಸಹಿಷ್ಣುತೆ ಕನ್ನಡದ ಪರಂಪರೆ ಎಂಬುದನ್ನು ಕನ್ನಡಿಗರು ಒಪ್ಪಿಕೊಂಡು ಬದುಕಿ ಬಾಳುತ್ತಿದ್ದೇವೆ. ಇದೇ ಕನ್ನಡಿಗರ ಬಂಗಾರದಂತಹ ಗುಣವೂ ಆಗಿದೆ. ಇದನ್ನೇ ಕನ್ನಡ ಸಾಹಿತ್ಯ ಸಹ ಕಾಪಾಡಿಕೊಂಡು ಬಂದಿದೆ.
ಇದನ್ನೂ ಓದಿ “ಕನ್ನಡನಾಡು ನನ್ನ ಪ್ರೀತಿಯ ನಾಡು” ಎಂದು ಇಡೀ ಜಗತ್ತಿಗೆ ಸಾರುತ್ತಾ ಬಂದ ಬಾನು ದಸರಾ ಉದ್ಘಾಟಿಸಿದರೆ ತಪ್ಪೇ!
ಬೂಕರ್ ಪ್ರಶಸ್ತಿ ಬಂದಾಗ, ರಾಜ್ಯ ಸರ್ಕಾರ, ಕನ್ನಡ ಸಾಹಿತ್ಯ ಪರಿಷತ್ತು ಲೇಖಕಿ ಬಾನು ಮುಷ್ತಾಕ್ ಅವರನ್ನು ಗೌರವಿಸಿದೆ. ರಾಜ್ಯ ಸರ್ಕಾರ ಸಾಂಸ್ಕೃತಿಕ ನಾಡಹಬ್ಬ ದಸರಾ ಉದ್ಘಾಟನೆಗೆ ಆಹ್ವಾನಿಸಿದೆ. ಇದನ್ನು ಅಮಾನವೀಯ ನೆಲೆಯಲ್ಲಿ ಬಿಜೆಪಿ ಪ್ರಶ್ನಿಸಿದ್ದು, ಆ ಪಕ್ಷದ ನೈತಿಕ ಅಧಃಪತನ, ದಿವಾಳಿತನವನ್ನು ತೋರಿಸುತ್ತಿದೆ. ಮುಸ್ಲಿಮರಿಗೆ ಸಂವಿಧಾನದ ಪ್ರಕಾರ ಸ್ಥಾನ ಮಾನ ಕೊಡುವುದನ್ನು, ಬಿಜೆಪಿ ಸಹಿಸುತ್ತಿಲ್ಲ. ಇದಕ್ಕೆ ಸ್ಪಷ್ಟ ಉದಾಹರಣೆ ದಸರಾ ಉದ್ಘಾಟನೆ ಪ್ರಸಂಗದಲ್ಲಿ ಬಿಜೆಪಿಗರು ವರ್ತಿಸಿದ ರೀತಿ. ಈ ವರ್ತನೆ ಕನ್ನಡಿಗರ ಸೌಹಾರ್ದ ಪರಂಪರೆಯನ್ನು ವಿರೋಧಿಸಿದಂತಾಗಿದೆ.
ದಸರಾ | ಬಾನು ಮುಸ್ತಾಕ್ಗೆ ವಿರೋಧ; ಮಹಿಳಾ ವಿರೋಧಿಗಳ ಹಳಹಳಿಕೆ

ನಾಗರಾಜ್ ಹರಪನಹಳ್ಳಿ
ಪತ್ರಕರ್ತ. ಹುಟ್ಟೂರು ಚಾಮರಾಜನಗರ. ಬೆಳೆದದ್ದು ಹರಪನಹಳ್ಳಿಯಲ್ಲಿ. ಓದಿದ್ದು ಧಾರವಾಡದಲ್ಲಿ. ಬದುಕು ಹಾಗೂ ನೆಲೆ ಕಾರವಾರ.




