ನಂದಿನಿ ಕುರಿತಾದ ವಿವಾದ-ವದಂತಿಗಳು ಸ್ಥಳೀಯ ಅಸ್ಮಿತೆ ಮತ್ತು ಮಾರುಕಟ್ಟೆ ಪೈಪೋಟಿಗೆ ಸಂಬಂಧಿಸಿದಂತೆ ಅಮುಲ್ ಮತ್ತು ನಂದಿನಿ ಬ್ರ್ಯಾಂಡ್ಗಳ ನಡುವಿನ ವಿವಾದದತ್ತ ಕಣ್ಣು ಹಾಯುವಂತೆ ಮಾಡಿದೆ. ಜತೆಗೆ ಅಮುಲ್ ಉತ್ಪನ್ನಗಳಲ್ಲಿ ಬ್ಯಾಕ್ಟೀರಿಯಾ ಪತ್ತೆಯಾಗಿದೆ ಎಂಬ ಸುದ್ದಿಯ ಬಗ್ಗೆಯೂ ಮತ್ತೆ ಚರ್ಚೆ ಆರಂಭವಾಗಿದೆ.
ಸದ್ಯ ಕರ್ನಾಟಕ ಹಾಲು ಒಕ್ಕೂಟದ (ಕೆಎಂಎಫ್) ನಂದಿನಿ ಬ್ರ್ಯಾಂಡ್ನ ಉತ್ಪನ್ನಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಊಹಾಪೋಹಗಳು, ವದಂತಿಗಳು ಅತಿ ವೇಗವಾಗಿ ಹರಡುತ್ತಿವೆ. ಅದಕ್ಕೆ ಕಾರಣ ಡಾ. ಶರಣ್ಯ ಸಂತೋಷ್ ಎಂಬುವವರು ಮಾಡಿರುವ ವಿಡಿಯೋ. “ಕೆಎಂಎಫ್ನ ಉತ್ಪನ್ನಗಳಲ್ಲಿ ‘ಫುಡ್ ಕಲರ್’ ಮತ್ತು ಇತರೆ ಹಾನಿಕಾರಕ ರಾಸಾಯನಿಕಗಳಿವೆ. ಇದರಿಂದಾಗಿ ಕ್ಯಾನ್ಸರ್ ಬರುತ್ತದೆ” ಎಂಬುದು ಡಾ. ಶರಣ್ಯ ಅವರ ಆರೋಪ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿವೆ. ಕೆಲವರು ಶರಣ್ಯ ಬೆಂಬಲಕ್ಕೆ ನಿಂತರೆ ಇನ್ನು ಕೆಲವರು ಇವೆಲ್ಲವೂ ನಂದಿನಿಗೆ ಜಾಗತಿಕವಾಗಿ ಇರುವ ಸ್ಥಾನಮಾನವನ್ನು ತಗ್ಗಿಸಲು ಇತರೆ ಕಂಪನಿಗಳು ನಡೆಸುತ್ತಿರುವ ಮಾರುಕಟ್ಟೆ ತಂತ್ರವೆಂದು ಹೇಳುತ್ತಿದ್ದಾರೆ. ಈ ವಾದ-ವಿವಾದಗಳ ನಡುವೆ ಈವರೆಗೆ ನಂದಿನಿ ಉತ್ಪನ್ನಗಳನ್ನು ಬಳಸುತ್ತಾ ಮತ್ತು ಈಗಲೂ ಬಳಸುತ್ತಿರುವ ಜನರು ಆತಂಕಕ್ಕೆ ಒಳಗಾಗುತ್ತಿರುವುದು ವಾಸ್ತವ.
ಇದನ್ನು ಓದಿದ್ದೀರಾ? ನಂದಿನಿ ಉತ್ಪನ್ನಗಳಿಂದ ಕ್ಯಾನ್ಸರ್ ಬರುವುದಾಗಿ ಅಪಪ್ರಚಾರ: ಎಫ್ಐಆರ್ ದಾಖಲು
ಡಾ. ಶರಣ್ಯ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ಕೆಎಂಎಫ್ ತನ್ನ ಜನಪ್ರಿಯ ಉತ್ಪನ್ನಗಳು ಸುರಕ್ಷಿತವೆಂದು ಸ್ಪಷ್ಟಣೆಯನ್ನು ನೀಡಿದೆ. ಹಾಗೆಯೇ ಡಾ. ಶರಣ್ಯ ಸಂತೋಷ್ ವಿರುದ್ಧ ಎಫ್ಐಆರ್ ಕೂಡಾ ದಾಖಲಾಗಿದೆ. “ಈ ಆರೋಪಗಳು ಶುದ್ಧ ಸುಳ್ಳು. ಕೆಎಂಎಫ್ ಉತ್ಪನ್ನ ನೈಸರ್ಗಿಕವಾಗಿ ತಯಾರಿಸುತ್ತಿದ್ದೇವೆ. ಈವರೆಗೂ ಕೆಎಂಎಫ್ ಉತ್ಪನ್ನಗಳ ಬಗ್ಗೆ ಯಾವುದೇ ದೂರು ಬಂದಿಲ್ಲ. ಯಾವುದೇ ರಾಸಾಯನಿಕಗಳನ್ನು ನಾವು ಹಾಕುವುದಿಲ್ಲ” ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ ಶಿವಸ್ವಾಮಿ ಸ್ಪಷ್ಟನೆಯನ್ನು ನೀಡಿದ್ದಾರೆ. ಇನ್ನೊಂದೆಡೆ “ಇತರ ಕಂಪನಿಯವರು ನಮ್ಮ ನಂದಿನಿಯ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ” ಎಂದು ಪಶುಸಂಗೋಪನಾ ಇಲಾಖೆ ಸಚಿವ ಕೆ. ವೆಂಕಟೇಶ್ ಆರೋಪಿಸಿದ್ದಾರೆ.
ಈ ಎಲ್ಲ ಬೆಳವಣಿಗೆಗಳು ಸ್ಥಳೀಯ ಅಸ್ಮಿತೆ ಮತ್ತು ಮಾರುಕಟ್ಟೆ ಪೈಪೋಟಿಗೆ ಸಂಬಂಧಿಸಿದಂತೆ ಅಮುಲ್ ಮತ್ತು ನಂದಿನಿ ಬ್ರ್ಯಾಂಡ್ಗಳ ನಡುವಿನ ವಿವಾದದತ್ತ ಕಣ್ಣು ಹಾಯುವಂತೆ ಮಾಡಿದೆ. ಜತೆಗೆ ಅಮುಲ್ ಉತ್ಪನ್ನಗಳಲ್ಲಿ ಬ್ಯಾಕ್ಟೀರಿಯಾ ಪತ್ತೆಯಾಗಿದೆ ಎಂಬ ಸುದ್ದಿಯ ಬಗ್ಗೆಯೂ ಮತ್ತೆ ಚರ್ಚೆ ಆರಂಭವಾಗಿದೆ. ಇವೆಲ್ಲವೂ ನಂದಿನಿ ಉತ್ಪನ್ನದ ವಿಸ್ತರಣೆಗೊಂಡಿರುವ ಮಾರುಕಟ್ಟೆಯನ್ನು ಕ್ಷೀಣಿಸುವಂತೆ ಮಾಡುವ ತಂತ್ರದತ್ತ ಬೆರಳು ಮಾಡಿದೆ.
2022ರ ಡಿಸೆಂಬರ್ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಂಡ್ಯದಲ್ಲಿ ಮೆಗಾ ಡೈರಿ ಉದ್ಘಾಟಿಸುವಾಗ, ಗುಜರಾತ್ನ ಅಮುಲ್ ಮತ್ತು ಕರ್ನಾಟಕದ ನಂದಿನಿ ಪರಸ್ಪರ ಸಹಕರಿಸಬೇಕು. ಕರ್ನಾಟಕದ ಹೈನುಗಾರಿಕೆಯನ್ನು ಉತ್ತೇಜಿಸಲು ಅಮುಲ್ ಸಂಸ್ಥೆಯು ಕೆಎಂಎಫ್ಗೆ ಎಲ್ಲ ರೀತಿಯ ತಾಂತ್ರಿಕ ಸಹಕಾರ ಮತ್ತು ಮಾರ್ಗದರ್ಶನ ನೀಡಲಿದೆ. ಮೂರು ವರ್ಷಗಳಲ್ಲಿ ರಾಜ್ಯದ ಪ್ರತಿ ಗ್ರಾಮ ಪಂಚಾಯತ್ನಲ್ಲಿ ಪ್ರಾಥಮಿಕ ಡೈರಿಗಳನ್ನು ಸ್ಥಾಪಿಸಲಿದೆ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಯು ವಿವಾದಕ್ಕೆ ನಾಂದಿ ಹಾಡಿತ್ತು. ಸರ್ಕಾರಿ ಬ್ಯಾಂಕ್ಗಳನ್ನು ಗುಜರಾತ್ನ ಖಾಸಗಿ ಬ್ಯಾಂಕ್ಗಳೊಂದಿಗೆ ವಿಲೀನ ಮಾಡಿದಂತೆ ನಂದಿನಿಯನ್ನು ಅಮುಲ್ ಜೊತೆ ವಿಲೀನಗೊಳಿಸುವ ಸಂಚು ರೂಪಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದವು.
ಅಂತೆಯೇ, 2023ರ ಏಪ್ರಿಲ್ನಲ್ಲಿ ಅಮುಲ್ ಸಂಸ್ಥೆಯು ಬೆಂಗಳೂರಿನಲ್ಲಿ ತನ್ನ ಹಾಲು ಮತ್ತು ಮೊಸರನ್ನು ಆನ್ಲೈನ್ ಮೂಲಕ ಮಾರಾಟ ಮಾಡುವುದಾಗಿ ಘೋಷಿಸಿದ್ದು, ತೀವ್ರ ವಿರೋಧಕ್ಕೆ ಕಾರಣವಾಗಿತ್ತು. ಇವೆಲ್ಲವುದರ ನಡುವೆ ಇತ್ತೀಚೆಗೆ ಬೆಂಗಳೂರಿನ ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಅಮುಲ್ ಮಳಿಗೆಗಳನ್ನು ತೆರೆಯಲು ಅವಕಾಶ ನೀಡಿದ್ದು, ಮತ್ತೆ ವಿವಾದಕ್ಕೆ ಕಾರಣವಾಗಿತ್ತು. 10 ಮೆಟ್ರೋ ನಿಲ್ದಾಣಗಳಲ್ಲಿ ಅಮುಲ್ ಕಿಯೋಸ್ಕ್ಗಳಿಗೆ ಟೆಂಡರ್ ಮೂಲಕ ಅನುಮತಿ ನೀಡಲಾಗಿದ್ದು, ನಂದಿನಿಗೆ ಆದ್ಯತೆ ನೀಡಿಲ್ಲ ಎಂದು ವಿಪಕ್ಷಗಳು ಟೀಕಿಸಿವೆ. ಆದರೆ ಮೆಟ್ರೋ ಟೆಂಡರ್ ಪ್ರಕ್ರಿಯೆಯಲ್ಲಿ ಅಮುಲ್ ಮಾತ್ರ ಭಾಗವಹಿಸಿತ್ತು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದರು. ಹಾಗೆಯೇ ಉಳಿದ ಎಂಟು ನಿಲ್ದಾಣಗಳಲ್ಲಿ ನಂದಿನಿ ಮಳಿಗೆಗಳನ್ನು ತೆರೆಯಲು ಕೆಎಂಎಫ್ಗೆ ಸೂಚಿಸಲಾಗಿತ್ತು.
ಇವಿಷ್ಟು ನಂದಿನಿ ಮತ್ತು ಅಮುಲ್ ಬ್ರ್ಯಾಂಡ್ ನಡುವೆ ವಿವಾದವನ್ನು ಹೆಚ್ಚಿಸುತ್ತಿರುವಂತೆಯೇ ಅಮುಲ್ ಬ್ಯಾಕ್ಟೀರಿಯಾ ಪ್ರಕರಣ ಮುನ್ನೆಲೆಗೆ ಬಂದಿದೆ. ಅಮುಲ್ ಹಾಲು, ಮೊಸರಿನಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಬ್ಯಾಕ್ಟೀರಿಯಾಗಳಿವೆ ಎಂದು ‘ಲ್ಯಾಬ್ ಟೆಸ್ಟಿಂಗ್ ಪ್ಲಾಟ್ಫಾರ್ಮ್ ಟ್ರಸ್ಟಿಫೈಡ್’ ಎಂಬ ಸ್ವತಂತ್ರ ಸಂಸ್ಥೆಯು ಹೇಳಿದೆ. ಅಮುಲ್ ಹಾಲು ಮತ್ತು ಮೊಸರನ್ನು ಬ್ಲೈಂಡ್ ಟೆಸ್ಟ್ಗೆ ಅಂದರೆ ಬ್ರ್ಯಾಂಡ್ ಹೆಸರನ್ನು ಉಲ್ಲೇಖಿಸದೆ ಒಳಪಡಿಸಿದಾಗ, ಅಮುಲ್ ಪೌಚ್ ಹಾಲಿನಲ್ಲಿ ‘ಕಾಲಿಫಾರ್ಮ್ ಬ್ಯಾಕ್ಟೀರಿಯಾ’ಗಳ ಸಂಖ್ಯೆ ‘ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ’ (FSSAI) ನಿಗದಿಪಡಿಸಿದ ಮಿತಿಗಿಂತ 98 ಪಟ್ಟು ಹೆಚ್ಚು ಇದೆ. ಅಂತೆಯೇ, ಅಮುಲ್ ಮಸ್ತಿ ಮೊಸರಿನಲ್ಲಿಯೂ 2,100 ಪಟ್ಟು ಹೆಚ್ಚಿವೆ ಎಂಬುದು ಕಂಡುಬಂದಿದೆ ಎಂದು ವರದಿಯಾಗಿದೆ. ಇದರಿಂದಾಗಿ ಹೊಟ್ಟೆ ಉಬ್ಬರ, ಅತಿಸಾರ, ವಾಂತಿ, ತಲೆನೋವು, ಜ್ವರ ಲಕ್ಷಣಗಳು ಕಂಡುಬರುತ್ತವೆ ಎಂದು ಹೇಳಲಾಗಿತ್ತು.

ಆದರೆ ಈ ಆರೋಪಗಳನ್ನು ಅಮುಲ್ ಸಂಸ್ಥೆಯು ತಿರಸ್ಕರಿಸಿತ್ತು. ಮೊಸರು ಎಂಬುದು ಜೈವಿಕ ಉತ್ಪನ್ನ, ಅದರಲ್ಲಿ ಆರೋಗ್ಯಕರ ಬ್ಯಾಕ್ಟೀರಿಯಾಗಳು ಇರುತ್ತವೆ ಎಂದು ತಿಳಿಸಿದೆ. ಹಾಗೆಯೇ ಪರೀಕ್ಷೆಗೆ ಒಳಪಡಿಸಿದ ಮಾದರಿಗಳನ್ನು ಹೇಗೆ ಸಂಗ್ರಹಿಸಲಾಗಿದೆ ಮತ್ತು ಸಾಗಿಸಲಾಗಿದೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲದ ಕಾರಣ ವರದಿಯನ್ನು ನಂಬಲಾಗದು ಎಂದು ಕಂಪನಿ ಹೇಳಿದೆ. ಈ ಆರೋಪ ಕೇವಲ ಅಮುಲ್ ಮೇಲಷ್ಟೇ ಅಲ್ಲದೆ, ಮದರ್ ಡೈರಿ (Mother Dairy) ಮತ್ತು ಕಂಟ್ರಿ ಡಿಲೈಟ್ (Country Delight) ನಂತಹ ಇತರ ಪ್ರಮುಖ ಬ್ರ್ಯಾಂಡ್ಗಳ ಮೇಲೆಯೂ ಕೇಳಿಬಂದಿದೆ. ಇವೆಲ್ಲವುದರ ನಡುವೆ ಈ ಎಲ್ಲಾ ವದಂತಿಗಳನ್ನು ಅಮುಲ್ನ ಪ್ರತಿಸ್ಪರ್ಧಿ ಸಂಸ್ಥೆ ನಡೆಸುತ್ತಿರುವುದು ಎಂಬ ವಾದಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಇದೀಗ ನಂದಿನಿ ವಿಚಾರದಲ್ಲಿಯೂ ನಡೆಯುತ್ತಿರುವುದು ಅದುವೇ. ಇತರೆ ಕಂಪನಿಗಳ ಮಾರುಕಟ್ಟೆ ತಂತ್ರವೋ ಎಂಬ ಪ್ರಶ್ನೆಯೂ ನೆಟ್ಟಿಗರಲ್ಲಿ ಹುಟ್ಟಿಕೊಂಡಿದೆ.
ಏನೇ ಆದರೂ ಅಂತಿಮವಾಗಿ ಗೊಂದಲಕ್ಕೆ, ಆತಂಕಕ್ಕೆ ಒಳಗಾಗುತ್ತಿರುವುದು ಜನಸಾಮಾನ್ಯರು. ಡಾ. ಶರಣ್ಯ ವಿಡಿಯೋ ಮೂಲಕ ಮಾಡಿದ ಒಂದು ಆರೋಪವು, ಬರೀ ಆರೋಪವಾಗಿ ಕಾಣದು. ಇದು ಜನರ ನಂಬಿಕೆಯನ್ನು ಪ್ರಶ್ನಿಸುವ, ಜನರನ್ನು ಗೊಂದಲಕ್ಕೆ ದೂಡುವ ಕೃತ್ಯವಲ್ಲವೇ? ಕ್ಯಾನ್ಸರ್ ಎಂದರೆ ಯಾರಾದರೂ ಭಯಪಡುತ್ತಾರೆ. ಹಾಗಿದ್ದಾಗ ಶರಣ್ಯ ಯಾವ ಆಧಾರದಲ್ಲಿ ನಂದಿನಿ ಉತ್ಪನ್ನಗಳಿಂದ ಕ್ಯಾನ್ಸರ್ ಬರುತ್ತದೆ ಎಂದು ಹೇಳಿರುವುದು? ಪರೀಕ್ಷಾ ವರದಿ ಆಧಾರದಲ್ಲಿ ಶರಣ್ಯ ಈ ಆರೋಪ ಮಾಡಿರುವುದೇ? ಹೀಗಿರುವಾಗ ಸದ್ಯ ನಂದಿನಿ ಉತ್ಪನ್ನಗಳನ್ನೂ ಪುನರ್ ಪರೀಕ್ಷೆಗೆ ಒಳಪಡಿಸಬೇಕಾಗುತ್ತದೆಯೇ? ಅಷ್ಟಕ್ಕೂ ಅಮುಲ್ನಲ್ಲಿ ಬ್ಯಾಕ್ಟೀರಿಯಾಗಳು ಅಧಿಕವಾಗಿವೆ ಎಂಬ ಪರೀಕ್ಷಾ ವರದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದಾಗ ಶರಣ್ಯ ಅವರು ಏಕೆ ಧ್ವನಿ ಎತ್ತಿಲ್ಲ? – ಹೀಗೆ ಹಲವು ಪ್ರಶ್ನೆಗಳು ನೆಟ್ಟಿಗರದ್ದು, ನಮ್ಮದು ನಿಮ್ಮದು!

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.




