ರಾಜ್ಯ ಸರ್ಕಾರ ಈ ಹಿಂದೆ ಮಾಡಿಸಿದ್ದ ಜಾತಿ ಸಮೀಕ್ಷೆಯ ಪ್ರಕಾರ ಲಿಂಗಾಯತರ ಸಂಖ್ಯೆಯಲ್ಲಿ ಕುಸಿತ ಕಂಡಿದೆ ಎನ್ನುವ ಕಾರಣಕ್ಕೆ ರಾಜಕಾರಣಿಗಳು ಹಾಗೂ ಈ ಪಂಚಪೀಠಗಳ ಆಚಾರ್ಯರು ಹೆದರಿಕೊಂಡಂತೆ ಕಾಣುತ್ತಿದೆ. ಅಸಲಿಗೆ ಲಿಂಗಾಯತರ ಸಂಖ್ಯೆಯಲ್ಲಿ ಕುಸಿತ ಕಂಡಿರುವುದಕ್ಕೆ ಲಿಂಗಾಯತ ರಾಜಕಾರಣಿಗಳೆ ನೇರ ಕಾರಣವೆನ್ನುವ ಸಂಗತಿ ಪಾಪ ಸಾಮಾನ್ಯ ಲಿಂಗಾಯತರಿಗೆ ತಿಳಿದಿಲ್ಲ. ಮೀಸಲಾತಿಯ ಆಮಿಷವೊಡ್ಡಿ ಬಹುತೇಕ ಲಿಂಗಾಯತ ಉಪವರ್ಗಗಳು ಹಿಂದೂ ಎಂದು ಬರೆಸಿದ ಕಾರಣಕ್ಕೆ ಲಿಂಗಾಯತರ ಸಂಖ್ಯೆಯಲ್ಲಿ ಕುಸಿತವಾಗಿದೆ.
ಶತಮಾನಗಳಿಂದ ಬಸವಣ್ಣನವರ ಪ್ರಭಾವ ತಗ್ಗಿಸುವ ವಿಫಲ ಯತ್ನದ ನಂತರ ವೀರಶೈವ ಆರಾಧ್ಯ ಬ್ರಾಹ್ಮಣರ ಐದು ಆಚಾರ್ಯರು ಕೊನೆಗೆ ಬಸವಣ್ಣನವರು ವೀರಶೈವ ಧರ್ಮ ಪ್ರಚಾರ ಮಾಡಿದ್ದರು ಎನ್ನುವ ಹಸಿ ಸುಳ್ಳುಗಳನ್ನು ಹೇಳುತ್ತಿದ್ದಾರೆ. ಶ್ರೀಮಂತ ಲಿಂಗಾಯತರ ಹಣದಲ್ಲಿ ಪಂಚಾಚಾರ್ಯರ ಶೃಂಗಸಭೆಯ ಹೆಸರಿನಲ್ಲಿ 2025 ರ ಜುಲೈ 21, 22ರಂದು ದಾವಣಗೆರೆಯಲ್ಲಿ ಮೆರವಣಿಗೆ ಹಾಗು ದಿಬ್ಬಣ ಮಾಡಿದ ಇವರು ಅಪ್ಪಟ ಸಾಂಪ್ರದಾಯವಾದಿಗಳು ಹಾಗೂ ಅಪ್ರತಿಮ ಬಸವದ್ರೋಹಿಗಳು. ಲಿಂಗಾಯತರಲ್ಲಿ ಬಸವಪ್ರಜ್ಞೆ ಹೆಚ್ಚುತ್ತಿದ್ದಂತೆ ಗಲಿಬಿಲಿಗೊಂಡಿರುವ ಈ ಆಂಧ್ರ ಮೂಲದ ಆರಾಧ್ಯ ಬ್ರಾಹ್ಮಣರು ಎಂದಿಗೂ ಕೂಡದ, ಸೈದ್ಧಾಂತಿಕವಾಗಿ ಯಾವ ರೀತಿಯಲ್ಲೂ ತಾಳೆಯಾಗದ ವೀರಶೈವ ಮತ್ತು ಲಿಂಗಾಯತ ಸಮುದಾಯ ಎರಡೂ ಒಂದೇ ಎಂದು ವಿಕಾರವಾಗಿ ಊಳಿಡಲಾರಂಭಿಸುತ್ತಾರೆ. ಬಸವಪ್ರಜ್ಞೆಯ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಹಾಗೂ ಬಸವಪರ ಲಿಂಗಾಯತ ಸಂಘಟನೆಗಳ ಜಂಟಿ ಆಶ್ರಯದಲ್ಲಿ 2025, ಸೆಪ್ಟೆಂಬರ್ ತಿಂಗಳಲ್ಲಿ ರಾಜ್ಯವ್ಯಾಪಿ ಹಮ್ಮಿಕೊಂಡಿರುವ ಬಸವ ಸಾಂಸ್ಕೃತಿಕ ಅಭಿಯಾನಕ್ಕೆ ಹೆದರಿಕೊಂಡು ತರಾತುರಿಯಲ್ಲಿ ದಾವಣಗೆರೆಯಲ್ಲಿ ಪಂಚಾಚಾರ್ಯರ ಶೃಂಗಸಭೆಯನ್ನು ಆಯೋಜಿಸಿದ್ದು ಎಲ್ಲರಿಗೂ ತಿಳಿದ ಸಂಗತಿಯಾಗಿದೆ.
ರಾಜ್ಯ ಸರ್ಕಾರ ಮಾಡಲು ಉದ್ದೇಶಿಸಿರುವ ಜಾತಿ ಮರು ಸಮೀಕ್ಷೆ ಹಾಗೂ ಒಕ್ಕೂಟ ಸರಕಾರ ಮಾಡಲು ಉದ್ದೇಶಿಸಿರುವ ಜಾತಿ ಸಮೀಕ್ಷೆ ಲಿಂಗಾಯತ ರಾಜಕಾರಣಿಗಳು ಹಾಗೂ ಸಾಂಪ್ರದಾಯವಾದಿ ಮಠಾಧೀಶರಿಗೆ ನಡುಕ ಹುಟ್ಟಿಸಿದೆ. ಅಷ್ಟಕ್ಕೂ ಲಿಂಗಾಯತರ ಸಂಖ್ಯೆಯಲ್ಲಿ ಕುಸಿತವಾದರೆ ಸಾಮಾನ್ಯ ಲಿಂಗಾಯತನಿಗೆ ಲಾಭವೂ ಇಲ್ಲ ಅಥವಾ ನಷ್ಟವೂ ಇಲ್ಲ. ಲಿಂಗಾಯತರ ಜನಸಂಖ್ಯೆ ಹೆಚ್ಚಳವಾದರೆ ಅದರ ಆಧಾರದಲ್ಲಿ ಶಾಸಕ/ಸಚಿವ ಸ್ಥಾನಕ್ಕಾಗಿ ಚೌಕಾಸಿ ಮಾಡಲು ಅವಕಾಶವಿರುವುದು ರಾಜಕಾರಣಿಗಳಿಗೆ ಹಾಗೂ ಅವರನ್ನು ಓಲೈಸುವ ಮಠಾಧೀಶರಿಗೆ. ರಾಜ್ಯ ಸರ್ಕಾರ ಈ ಹಿಂದೆ ಮಾಡಿಸಿದ್ದ ಜಾತಿ ಸಮೀಕ್ಷೆಯ ಪ್ರಕಾರ ಲಿಂಗಾಯತರ ಸಂಖ್ಯೆಯಲ್ಲಿ ಕುಸಿತ ಕಂಡಿದೆ ಎನ್ನುವ ಕಾರಣಕ್ಕೆ ರಾಜಕಾರಣಿಗಳು ಹಾಗೂ ಈ ಪಂಚಪೀಠಗಳ ಆಚಾರ್ಯರು ಹೆದರಿಕೊಂಡಂತೆ ಕಾಣುತ್ತಿದೆ. ಅಸಲಿಗೆ ಲಿಂಗಾಯತರ ಸಂಖ್ಯೆಯಲ್ಲಿ ಕುಸಿತ ಕಂಡಿರುವುದಕ್ಕೆ ಲಿಂಗಾಯತ ರಾಜಕಾರಣಿಗಳೆ ನೇರ ಕಾರಣವೆನ್ನುವ ಸಂಗತಿ ಪಾಪ ಸಾಮಾನ್ಯ ಲಿಂಗಾಯತರಿಗೆ ತಿಳಿದಿಲ್ಲ. ಮೀಸಲಾತಿಯ ಆಮಿಷವೊಡ್ಡಿ ಬಹುತೇಕ ಲಿಂಗಾಯತ ಉಪವರ್ಗಗಳು ಹಿಂದೂ ಎಂದು ಬರೆಸಿದ ಕಾರಣಕ್ಕೆ ಲಿಂಗಾಯತರ ಸಂಖ್ಯೆಯಲ್ಲಿ ಕುಸಿತವಾಗಿದೆ. ಮೀಸಲಾತಿಯ ರುಚಿ ಕಂಡಿರುವ ಆ ಎಲ್ಲಾ ಉಪವರ್ಗಗಳು ಈಗ ಲಿಂಗಾಯತ ಎಂದು ಗುರುತಿಸಿಕೊಳ್ಳಲು ಹಿಂದೇಟು ಹಾಕುತ್ತಿವೆ.

ಲಿಂಗಾಯತ ಉಪವರ್ಗಗಳು ಹಿಂದೂ ಎಂದು ಬರೆಯುವುದಕ್ಕೆ ಬಿಜೆಪಿಯ ಲಿಂಗಾಯತ ನಾಯಕರುಗಳೇ ಕಾರಣ. ರಾಜಕಾರಣಿಗಳು ಮಾಡಿದ ಈ ಐತಿಹಾಸಿಕ ಪ್ರಮಾದವು ಈಗ ಅವರಿಗೇನೇ ತಿರುಮಂತ್ರವಾಗಿದೆ. ಮೀಸಲಾತಿಯ ಹೆಸರಿನಲ್ಲಿ ಇಲ್ಲಿ ಈ ವೀರಶೈವ ಪಂಚಾಚಾರ್ಯರು ಮಾಡಿದ ಮತ್ತೂಂದು ಭಯಂಕರ ಪ್ರಮಾದವೆಂದರೆ ವೀರಶೈವ ಜಂಗಮರನ್ನು ಬೇಡ ಜಂಗಮರೆಂದು ಪರಿಶಿಷ್ಟ ವರ್ಗದಲ್ಲಿ ಸೇರಿಸಲು ಅಂದಿನ ಪ್ರಧಾನಿ ವಾಜಪೇಯಿ ಅವರಿಗೆ ಪತ್ರ ಬರೆದದ್ದು. ಬಸವ ಪ್ರಣೀತ ಲಿಂಗಾಯತರು ಅಲ್ಪಸಂಖ್ಯಾತರ ಸೌಲಭ್ಯಕ್ಕಾಗಿ ಹೋರಾಟ ಮಾಡಿದರೆ ಧರ್ಮ ಪಡೆಯುತ್ತಿದ್ದಾರೆ ಎಂದು ಮೈಮೇಲೆ ದೆವ್ವ ಬಂದವರಂತೆ ಹೌಹಾರಿ ಚೀರಾಡುವ ಪಂಚಾಚಾರ್ಯರು ತಮ್ಮ ಜಾತಿ ಬಾಂಧವರು ಬೇಡ ಜಂಗಮರಾಗಲು ಹೊರಟಾಗ ಜಾಣ ಮೌನ ತಾಳುತ್ತ ಒಳಗೂಳಗೆ ತಮ್ಮವರನ್ನು ಬೆಂಬಲಿಸುತ್ತಾರೆ. ಹಿಂದೂಂದು ಕಾಲದಲ್ಲಿ ಬಸವಣ್ಣನವರ ಭಾವಚಿತ್ರದ ಕೆಳಗೆ ಹಾದು ಹೋಗಲು ಒಪ್ಪದಿದ್ದವರು, ಬಸವಣ್ಣನವರನ್ನು ಹಾಗೂ ಅವರ ಜನಪರ ಸಿದ್ಧಾಂತವನ್ನು ಒಪ್ಪದಿದ್ದವರು ಇಂದು ಲಿಂಗಾಯತರಲ್ಲಿ ಬಸವಪ್ರಜ್ಞೆ ಹೆಚ್ಚುತ್ತಿದ್ದಂತೆ ಬಸವಣ್ಣ ನಮ್ಮವ, ವೀರಶೈವ, ಲಿಂಗಾಯತ ಎರಡೂ ಒಂದೇ ಎಂದು ಪ್ರಲಾಪಿಸುತ್ತಿದ್ದಾರೆ.
ಸರ್ಕಾರ ಬಸವಣ್ಣನವರನ್ನು ರಾಜ್ಯದ ಸಾಂಸ್ಕೃತಿಕ ನಾಯಕನಾಗಿ ಘೋಷಿಸಿದ ಮೇಲೆ ಕಂಗಾಲಾಗಿರುವ ಇವರು ಅದನ್ನು ಜೀರ್ಣಿಸಿಕೊಳ್ಳಲು ಆಗದೆ ಪರಿತಪಿಸುತ್ತಿದ್ದಾರೆ. ಶತಮಾನಗಳ ಒರೆಗೆ ಬಸವಣ್ಣ, ಶರಣರು ಹಾಗೂ ವಚನಗಳನ್ನು ಲಿಂಗಾಯತರಿಂದ ಮುಚ್ಚಿಡಲಾಗಿತ್ತು. ಲಿಂಗಾಯತರು ಈಗ ಶರಣರ ವಚನಗಳನ್ನು ಓದಿಕೊಳ್ಳುತ್ತಿದ್ದಾರೆ. ಪಂಚಪೀಠಗಳ ವಂಚನೆ ಈಗ ನಡೆಯದಾಗಿದೆ. ಅದರಿಂದ ಮತಿಭ್ರಮಣೆಗೊಳಗಾಗಿರುವ ಇವರು ಲಿಂಗಾಯತರಲ್ಲಿ ಅನೇಕ ಗೂಂದಲಗಳನ್ನು ಸೃಷ್ಟಿಸುತ್ತಿದ್ದಾರೆ. ವೀರಶೈವ ಹಾಗೂ ಲಿಂಗಾಯತ ಎರಡೂ ಒಂದೇ ಎನ್ನುವ ಪಂಚಾಚಾರ್ಯರು ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಬಲ್ಲರೆ?
ಇದನ್ನೂ ಓದಿ ಭಾರತದ ತಲಾ ಆದಾಯದಲ್ಲಿ ಕರ್ನಾಟಕವೇ ನಂ.1: ಗ್ಯಾರಂಟಿಗಳು ಹೊರೆ ಎಂದವರಿಗೆ ಇಲ್ಲಿದೆ ಉತ್ತರ
೧. ಬಸವಣ್ಣನವರು ವೀರಶೈವ ಧರ್ಮ ಸೇರಿದ್ದು ನಿಜವಾಗಿದ್ದಲ್ಲಿ ವಚನ ಸಿದ್ಧಾಂತದ ಸಮಾನತಾ ತತ್ವಗಳನ್ನು ಪಂಚಾಚಾರ್ಯರು ಏಕೆ ಪಾಲಿಸುತ್ತಿಲ್ಲ?
೨. ಗುರು-ವಿರಕ್ತರು ಒಂದೇ ಆದಲ್ಲಿ ವೇದಿಕೆಯ ಮೇಲೆ ವಿರಕ್ತರೊಂದಿಗೆ ಪಂಚಾಚಾರ್ಯರು ಸಮಾನವಾದ ಆಸನಗಳಲ್ಲಿ ಕೂಡಬಲ್ಲರೆ?
೩. ವೀರಶೈವವು ಒಂದು ಧರ್ಮವೆನ್ನುವ ಪಂಚಾಚಾರ್ಯರು ತಾವು ಸನಾತನ ವೈದಿಕ (ಹಿಂದೂ) ಧರ್ಮದ ಭಾಗವೆಂದು ಹೇಳುವುದು ಏಕೆ?
೪. ಲಿಂಗಾಯತರು ತಲೆಯ ಮೇಲೆ ಹೊತ್ತುಕೂಂಡು ಮೆರೆಸಿದರೂ, ಹಾಗೂ ಇವರ ಪಾದ ತೊಳೆದು ನೀರು ಕುಡಿದರೂ ಪರಿಶಿಷ್ಟ ಬೇಡ ಜಂಗಮರಾಗಲು ಹೊರಟು ಲಿಂಗಾಯತರ ಮರ್ಯಾದೆ ತೆಗೆಯುತ್ತಿರುವುದು ಏಕೆ?
೪. ಬಸವಣ್ಣನವರ ಶೋಷಿತರನ್ನು ಮೇಲೆತ್ತುವ ತತ್ವಗಳನ್ನು ಗಾಳಿಗೆ ತೂರಿ ದಲಿತರ ಹಕ್ಕುಗಳನ್ನು ಕಿತ್ತು ತಿನ್ನುವ ಬೇಡ ಜಂಗಮರಾಗಲು ಹವಣಿಸುತ್ತಿರುವುದೇಕೆ?
೫. ಲಿಂಗಾಯತ ಧರ್ಮೀಯರಲ್ಲಿ ಕಂದಾಚಾರ, ಮೌಢ್ಯಗಳನ್ನು ಬಿತ್ತಿ ಭೇದ ಭಾವಗಳು ಸೃಷ್ಟಿಸಿ ಲಿಂಗಾಯತ ಧರ್ಮವನ್ನು ಒಡೆಯುತ್ತಿರುವುದೇಕೆ?
೬. ಬಸವಣ್ಣನವರ ಬೋಧನೆಗಳನ್ನು ಕಡೆಗಣಿಸಿ ಬಸವಣ್ಣ ತಿರಸ್ಕರಿಸಿದ ಬ್ರಾಹ್ಮಣ್ಯವನ್ನು ಲಿಂಗಾಯತರಲ್ಲಿ ಮತ್ತೆ ನುಸುಳಿಸುತ್ತಿರುವುದೇಕೆ?
ಹೀಗೆ ಪಂಚಾಚಾರ್ಯರ ಗೊಂದಲಗಳು, ದ್ವಂದ್ವಗಳು, ಲಿಂಗಾಯತರನ್ನು ಹಾದಿ ತಪ್ಪಿಸುವ ಹುನ್ನಾರಗಳು, ಅವರು ಅನುಸರಿಸುತ್ತಿರುವ ಮೌಢ್ಯಗಳು, ಮಾಡುತ್ತಿರುವ ಶೋಷಣೆ, ಇವುಗಳ ಕುರಿತು ಅನೇಕ ಪ್ರಶ್ನೆಗಳಿವೆ. ಈ ಪ್ರಶ್ನೆಗಳಿಗೆ ಇವರು ಎಂದಿಗೂ ಉತ್ತರಿಸಲಾರರು. ಶ್ರೀಮಂತ ಲಿಂಗಾಯತ ರಾಜಕಾರಣಿಗಳೊಂದಿಗೆ ಸೇರಿ ಬಡ ಹಾಗೂ ಮಧ್ಯಮ ವರ್ಗದ ಲಿಂಗಾಯತರನ್ನು ಹಾದಿ ತಪ್ಪಿಸುವ ಕೃತ್ಯಗಳು ಇನ್ನಾದರೂ ನಿಲ್ಲಿಸಲಿ.

ಡಾ ಜೆ ಎಸ್ ಪಾಟೀಲ್
ಬಸವ ತತ್ವ ಪ್ರಚಾರಕ, ಪ್ರಗತಿಪರ ಚಿಂತಕ




