ರಣ ರಣ ಬಿಸಿಲು, ಊರಾಗ ಒಂದ ನರಪಿಳ್ಳಿನೂ ಕಾಣಸಾಕತ್ತಿಲ್ಲ, ಎಲ್ಲಿ ಹ್ವಾದರು ಅನಕೋತ, ಬೆವರು ಒರೆಸಿಕೊಂಡು ಗುಡಿ ಕಟ್ಟಿಗಿ ಯಾರರ ಸಿಗತಾರೇನಂತ ನೋಡಿದರ, ಅದೂ ಬಿಕೋ, ಸ್ವಲ್ಪ ಮುಂದ ಬಂದ್ರ ಸಣ್ಣು ಪಿಳ್ಳಿ ಮಣ್ಣಾಗ ಆಡಾಕತ್ತಿದ್ವು. ಅಲ್ಲೇ ಒಬ್ಬಾಕಿ ಹೆಣಮಗಳು ಕೂದಲಾ ಸೀಳಿ ಸೀಳಿ ಹಿಕ್ಕೊಂಡು ಸಿಕ್ಕ ಹೇನ ಒರಿಯಾಕತ್ತಿದ್ಲು.
ಅವಳ ಹತ್ರಾ ಹೋಗಿ, ʼಏನವ್ವ, ಆರಾಮ ಅದಿ ಅಂದೆ? ಅಕಿ ಹುಳು ಹುಳು ಮುಖಾ ನೋಡಾಕತ್ತಳು. ಕನ್ನಡ ತಿಳಿಯೂದಿಲ್ಲಾ ಅಂದಾಗನೂ ಸುಮ್ಮನ ನೋಡಾಕತ್ತಿದ್ಲು. ಮರಾಠಿಯಲ್ಲಿ ಕೇಳಿದಾಗ, ʼಛಾನ ಕಾಯʼ ಅಂತ ಆಕಾಶಕ್ಕ ಮುಖಾ ಮಾಡಿದ್ಲು. ಅಕಿ ಹತ್ರ ಕುಂತು ಮರಾಠಿಯಲ್ಲಿಯೇ ಅಕಿನ್ನ ವಿಶ್ವಾಸಕ್ಕ ತೊಗೊಂಡ ಕೇಳಿದಾಗ, ಇದೊಂದು ಕಚ್ಚಾ ಮನಿ ಅಂತ ತಾ ಕುಂತಿದ್ದ ಹಿಂದಿನ ಮನಿ ತೋರಿಸಿದಳು.
ಎರಡು ಎಕರೆ ಹೊಲಾ ಐತಿ. ನೀರಿಲ್ಲಾ ಏನಿಲ್ಲಾ. ನಾಲ್ಕು ಚೀಲಾ ತೊಗರಿ ಬೆಳದೈತಿ, ಭೂಮಿ ಅಂಥಾ ಛಂದ ಇಲ್ಲಾ ಅಂತ ಹೇಳಿದ್ಲು. ಆ ಮಕ್ಕಳು ಅಂತ ಕೈ ಮಾಡಿದೆ, ಅವು ಮಣ್ಣಾಗ ಮುಣಗಿ ಎದ್ದಿದ್ವು. ಅವು ನನ್ನುವ, ಅವುಕರ ಹಾಲತ ನೋಡಿ, ಏನ ಒಂದಿಷ್ಟು ಬೈಯುತ್ತಿರುವಾಗ, ನಿನ್ನ ಯಜಮಾನ ಅಂತ ಮೀಸಿ ಕೈ ಮಾಡಿ ತೋರಿಸಿದೆ.
ಹೈದ್ರಾಬಾದಿಗೆ ಹೋಗ್ಯಾನ ತಿಂಗಳಾತು, ಯಾಕ ಅಂದೆ? ಇಲ್ಲಿ ಏನ ಧಂದೆ ಇಲ್ಲಾ, ದುಡಿಯಾಕ ಹೋಗ್ಯಾನ, ಮಕ್ಕಳನ್ನ ಕರಕೊಂಡ ನಾ ಇಲ್ಲೇ ಅದೀನಿ ಅಂದ್ಲು. ನೀ ಏನೂ ಧಂದೆಕ್ಕ ಹೋಗೂದಿಲ್ಲೇನಂತ ಕೇಳಿದೆ? ಏನಿಲ್ಲ, ಕೂಸಗೋಳು ಸಣ್ಣು ಅದಾವಂದಳು. ಅಲ್ಲಾ ಅವುಕ್ಕ ಅಂಗನವಾಡ್ಯಾಗ ಬಿಡಬಹುದಲ್ಲ ಅಂದ್ರ, ಅಕಿ ಒಮ್ಮಿ ತಗಿತಾಳ, ಒಮ್ಮಿ ತಗಿಯೂದಿಲ್ಲ , ಮಕ್ಕಳಿಗಿ ತಿನ್ನಾಕರ ಏನ ಕೊಡತಾಳೊ ಇಲ್ಲೊ, ನಾನು ಕಳಿಸಿಲ್ಲ ಅಂದ್ಲು.
ನೀ ವಾರಕ್ಕ 10 ರೂ, 20 ರೂ ಉಳಸೂ ಸಂಘದಾಗ ಇಲ್ಲೇನು ಅಂದೆ? ಹೂಂ ಹಾಕತೀವಿ ವಾರಾ 10 ರೂ. ಎಷ್ಟ ವರ್ಷ ಆತು ಸಂಘ ಮಾಡಿ ಅಂತ ಕೇಳಿದಾಗ ೩ ವರಸ ಆದು, ಮತ್ ಸಾಲಾ ತೊಗೊಂಡಿಲ್ಲೇನ ಅಂತ ಕೇಳಿದಾಗ , ತೊಗೊಂಡಿದ್ದೆ, ಅತ್ತಿಗೆ
ಆರಾಮ ಇರಲಿಲ್ಲಾ, ದವಾಖಾನಿ ಅದೂ ಇದೂ ಏನ ಮಾಡಿದರೂ ಅಕಿನೂ ಉಳಿಲಿಲ್ಲ ಅಂತ ಹೇಳಿದಾಗ ನನ್ನ ಮನಸ್ಸು ಆದ್ರವಾಗಿತ್ತು.
ಹಂಗಿದ್ರ ಅದ ಸಾಲಾ ತೀರಸಾಕ ನಿನ ಗಂಡ ಧಂದೆಕ್ಕ ಹೈದ್ರಾಬಾದಿಗೆ ಹೋಗ್ಯಾನೇನ ಅಂತ ಕೇಳಿದಾಗ, ಹೌದಂತ ಗೋಣ ಹಾಕಿದ್ಲು. ಇನ್ನ ಮುಂದ ಸಾಲಾ ತೊಗೊಂಡ ಎಮ್ಮಿ ಗಿಮ್ಮಿ ಮಾಡಬೇಕಲ್ಲಾ, ಅದಿದ್ರ ನಿನಗೂ ಒಂದಿಷ್ಟು ಆಸರಾಕೈತಿ ಅಂತ ಹೇಳಕೋತ, ಅಲ್ಲಾ ಊರಾಗ ಮಂದೀನ ಕಾಣವಲ್ಲರಲ್ಲಾ, 100 ಮನಿ ಅದಾವ ಅಂತ ಕೇಳಿದಾಗ, ಎಲ್ಲಾ ಧಂದೆಕ್ಕ ಹೈದ್ರಾಬಾದಿಗೆ ಹೋಗ್ಯಾರ ಅಂದ್ಳು.
ಮಕ್ಕಳು ಸಣ್ಣೂ ಇದ್ದಾವರು, ವಯಸ್ಸಾದವರು ಓರಾಗ ಅದೀವಿ ಅಂತ ಸೆರಗು ಎಳಕೊಂಡ ಹೊಚಕೊಂಡಳು. ದೊಡ್ಡ ಮಕ್ಕಳು ಅಂದ್ರ ಅವಕ್ಕ ಸಾಲೀಗೆ ಹಾಕಿಲ್ಲೇನ ಅಂದ್ರ, ಸಾಲೀನ ಇಲ್ಲ, ಅಕ್ಷರ ಗೊತ್ತಿಲ್ಲ, ಹೊಟ್ಟಿ ನೆತ್ತಿ ನೋಡೂದ ದೊಡ್ಡ ಹಣಗಲ, ಈಗ ಸಾಲಿ ಎಲ್ಲಿ? ಅಲ್ಲಾ ಸರಕಾರ ಫ್ರೀ ಶಿಕ್ಷಣ ಅಂತ ಸರಕಾರಿ ಸಾಲಿ, ಬಿಸಿ ಊಟಾ ಎಲ್ಲಾ ಐತಲ್ಲಾ, ನಾಕ ಅಕ್ಷರ ಇದ್ರ ನಾಳೆ ಏನರ ಉಪಯೋಗ ಆಕೈತಿ, ಇಲ್ಲಂದ್ರ ಹ್ಯಾಂಗ, ಏಳನೆಯತ್ತೆ ಕಲತರರ ಅದರ ಜೋಡಿ ಹೊಲಿಗಿ, ಅವು ಇವು ನೂರಾ ಎಂಟ ಕೌಶಲ್ಯ ಕಲಸಾಕ ತರಬೇತಿ ಮಾಡತಾರ, ಅವನ್ನ ಕಲತರ ಇಲ್ಲೇ ಊರಾಗ ಮನೀ ಮುಂದ, ಮನ್ಯಾವರ ಗೂಡ ಕೆಲಸಾ ಮಾಡಿಕೊಂಡ ಇದ್ರ ಛೋಲೋ ಅಲ್ಲೇನ ಅಂತ ಅಕಿ ತಲ್ಯಾಗ ಹುಳಾ ಬಿಟ್ಟೆ.
ನೀವು ಹೇಳೂದು ಖರೆ ಐತಿ, ಮಡ್ ತಲ್ಯಾಗ ಹೋಗಬೇಕಲ್ಲಾ ಅಂತ ಮುಖಾ ನೋಡಿದಳು. ಊರಿಂದೂರಿಗೆ ದುಡ್ಯಾಕ ಹೋಗೂದರಾಗ ಏನ ಸುಖಾ ಐತಿ, ಮಕ್ಕಳಾ ಮರಿ ಎಲ್ಲಾ ಅಸ್ತವ್ಯಸ್ಥ, ಸಾಲಿ ಇಲ್ಲಾ ಸಂಸ್ಕಾರಾ ಇಲ್ಲಾ, ಶಾರದಾಗ ನಮ್ಮಾವರ ಅನ್ನಾವರರ ಯಾರ ಇರತಾರ, ಅಡಿಗಿ ಎಲ್ಲೊ, ಊಟ ಎಲ್ಲೊ, ಉಂಡದ್ದ ಹೊರಗ ಹಾಕೂದ ಎಲ್ಲೊ, ನಾವು ಬರೇ ಬೆಂಗಳೂರ, ಮುಂಬೈ , ಹೈದ್ರಾಬಾದ ಬೆಳಸಾಕತ್ತೀವಿ, ಹಳ್ಳಿ ಬಿಕೋ ಅನ್ನಾಕತ್ತಾವ.
ಇದನ್ನೂ ಓದಿ : ಬೀದರ್ | ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನ : ಪಾದಯಾತ್ರೆ, ಹಣ್ಣು ಹಂಪಲು ವಿತರಣೆ
ಸರಕಾರ ಎಷ್ಟ ನಮೂನಿ ಯೋಜನಾ ತರತಾವ ಖರೆ, ಜನರಿಗಿ ಮುಟ್ಟೂದಿಲ್ಲಾ ಅನಬೇಕೊ, ಮುಟಸೂದಿಲ್ಲಾ ಅನಬೇಕೋ ಅಂತೂ ಎಲ್ಲೋ ಒಂದು ಗ್ಯಾಪ. ಈ ಗ್ಯಾಪ ತುಂಬಸೂದ ದೊಡ್ಡ ಕೆಲಸಾ. ಈ ಗ್ಯಾಪ ತುಂಬೂದಿಲ್ಲಾ ನಮ್ ಬಾಳೆ ನೆಟ್ಟಗಾಗೂದಿಲ್ಲಾ , ಅಯ್ಯೋ ದೈವವೇ ಎಷ್ಟಂತ ನೆಳ್ಳೂದಿಲ್ಲೆ.

ರಜಿಯಾ ಬಳಬಟ್ಟಿ
ಹಿರಿಯ ಸಾಹಿತಿ, ಲೇಖಕರು




