ಹಸ್ದೇವ್ ಅರಣ್ಯ ಕೇವಲ ಮರಗಳ ಗುಂಪಲ್ಲ; ಅದು ಮಧ್ಯ ಭಾರತದ ಶ್ವಾಸಕೋಶ. ಸುಮಾರು 1,70,000 ಹೆಕ್ಟೇರ್ ಪ್ರದೇಶದಲ್ಲಿ ಹರಡಿರುವ ಈ ದಟ್ಟಾರಣ್ಯ, ಆನೆಗಳ ಪ್ರಮುಖ ಕಾರಿಡಾರ್ ಮತ್ತು ಅಪರೂಪದ ಜೀವವೈವಿಧ್ಯದ ತಾಣ. ಇಲ್ಲಿನ ಗೋಂಡ್ ಮತ್ತು ಇತರ ಆದಿವಾಸಿ ಸಮುದಾಯಗಳಿಗೆ ಈ ಕಾಡೇ ದೇವರು, ಕಾಡೇ ಬದುಕು. ಆದರೆ, ಈ ಹಸಿರು ಸ್ವರ್ಗದ ಆಳದಲ್ಲಿರುವ ‘ಕಲ್ಲಿದ್ದಲು’ ಎಂಬ ಕಪ್ಪು ಚಿನ್ನದ ಮೇಲೆ ಕಾರ್ಪೊರೇಟ್ ಕಣ್ಣು ಬಿದ್ದಿದೆ
ಛತ್ತೀಸಗಢದ ಹಸ್ದೇವ್ ಅರಣ್ಯ ಪ್ರದೇಶದಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಇಂದು ಭಾರತದ ಪ್ರಜಾಪ್ರಭುತ್ವ ಮತ್ತು ಅಭಿವೃದ್ಧಿಯ ಮಾದರಿಯನ್ನು ಅಣಿಕಿಸುವಂತಿವೆ. ಒಂದಡೆ, ತನ್ನ ಅಸ್ತಿತ್ವ ಮತ್ತು ನೆಲದ ಉಳಿವಿಗಾಗಿ ಹೋರಾಡುತ್ತಿರುವ ಆದಿವಾಸಿ ಸಮುದಾಯದ ಆಕ್ರೋಶವು ಹತೋಟಿ ಮೀರಿ, ಮಹಿಳಾ ಪೊಲೀಸ್ ಪೇದೆಯೊಬ್ಬರ ಮೇಲಿನ ಹಲ್ಲೆಯ ಹಂತಕ್ಕೆ ತಲುಪಿದೆ. ಇದು ಖಂಡಿತವಾಗಿಯೂ ನಾಗರಿಕ ಸಮಾಜ ತಲೆತಗ್ಗಿಸುವಂತಹ ಘೋರ ಅಪರಾಧ. ಆದರೆ, ಇದೇ ಘಟನೆಯನ್ನೇ ಮುಂದಿಟ್ಟುಕೊಂಡು, ಶತಮಾನಗಳಿಂದ ಆ ಕಾಡನ್ನೇ ನಂಬಿ ಬದುಕುತ್ತಿರುವ ಜನರ ಬದುಕನ್ನು ಅಗೆದು, ಲಕ್ಷಾಂತರ ಮರಗಳನ್ನು ಧರೆಗುರುಳಿಸಿ ಕಲ್ಲಿದ್ದಲು ಲೂಟಿ ಮಾಡಲು ಹೊಂಚು ಹಾಕಿರುವ ಕಾರ್ಪೊರೇಟ್ ಕುಳಗಳ ಪಾಪಕೃತ್ಯದ ಮೇಲೆ ‘ತಿಪ್ಪೆ ಸಾರಿಸುವ’ ಪ್ರಯತ್ನ ನಡೆದರೆ, ಅದು ದೊಡ್ಡ ದುರಂತವಾಗುತ್ತದೆ.
ದಾರಿತಪ್ಪಿದ ಆಕ್ರೋಶ ಮತ್ತು ಅಕ್ಷಮ್ಯ ಅಪರಾಧ
ಇತ್ತೀಚೆಗೆ ಗಣಿಗಾರಿಕೆ ವಿರೋಧಿ ಪ್ರದರ್ಶನದ ವೇಳೆ ನಡೆದ ಹಿಂಸಾಚಾರ ಮತ್ತು ಮಹಿಳಾ ಕಾನ್ಸ್ಟೆಬಲ್ ಮೇಲಿನ ದೌರ್ಜನ್ಯವನ್ನು ಯಾವ ನಾಗರಿಕ ಸಮಾಜವೂ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಹೋರಾಟದ ಹಾದಿ ಎಷ್ಟೇ ಪವಿತ್ರವಾಗಿದ್ದರೂ, ಹಿಂಸೆ ಮತ್ತು ಮಹಿಳೆಯ ಮೇಲಿನ ದೌರ್ಜನ್ಯಗಳು ಆ ಹೋರಾಟದ ನೈತಿಕ ಬಲವನ್ನೇ ಕುಂದಿಸುತ್ತವೆ. ಕಾನೂನು ಕೈಗೆತ್ತಿಕೊಂಡವರು, ಮಹಿಳೆಯ ಘನತೆಯ ಧಕ್ಕೆ ತಂದವರು ಶಿಕ್ಷೆಗೆ ಅರ್ಹರು ಎಂಬುದರಲ್ಲಿ ಎರಡು ಮಾತಿಲ್ಲ. ಈ ಕೃತ್ಯವು ಆದಿವಾಸಿಗಳ ಶಾಂತಿಯುತ ಹೋರಾಟಕ್ಕೆ ಕಪ್ಪು ಚುಕ್ಕೆಯಾಗಿರುವುದಂತೂ ಸತ್ಯ. ಆದರೆ, ಈ ಒಂದು ಘಟನೆಯನ್ನೇ ಬಂಡವಾಳವಾಗಿಸಿಕೊಂಡು, ಇಡೀ ಹೋರಾಟವನ್ನೇ ಅರಾಜಕತೆ ಎಂದು ಬಿಂಬಿಸುವ ವ್ಯವಸ್ಥಿತ ಪಿತೂರಿ ನಡೆಯುತ್ತಿದೆಯೇ ಎಂಬ ಅನುಮಾನ ಕಾಡುವುದು ಸಹಜ. ಏಕೆಂದರೆ, ಈ ಘಟನೆಯ ಅಬ್ಬರದಲ್ಲಿ ಅಲ್ಲಿನ ಮೂಲ ಸಮಸ್ಯೆಯಾದ ‘ಅರಣ್ಯನಾಶ’ ಮತ್ತು ‘ಜೀವನಾಶ’ದ ಕೂಗು ಅಡಗಬಾರದು.

ಹಸಿರು ಶ್ವಾಸಕೋಶದ ಮೇಲೆ ‘ಕಾರ್ಪೊರೇಟ್’ ಕತ್ತಿ
ಹಸ್ದೇವ್ ಅರಣ್ಯ ಕೇವಲ ಮರಗಳ ಗುಂಪಲ್ಲ; ಅದು ಮಧ್ಯ ಭಾರತದ ಶ್ವಾಸಕೋಶ. ಸುಮಾರು 1,70,000 ಹೆಕ್ಟೇರ್ ಪ್ರದೇಶದಲ್ಲಿ ಹರಡಿರುವ ಈ ದಟ್ಟಾರಣ್ಯ, ಆನೆಗಳ ಪ್ರಮುಖ ಕಾರಿಡಾರ್ ಮತ್ತು ಅಪರೂಪದ ಜೀವವೈವಿಧ್ಯದ ತಾಣ. ಇಲ್ಲಿನ ಗೋಂಡ್ ಮತ್ತು ಇತರ ಆದಿವಾಸಿ ಸಮುದಾಯಗಳಿಗೆ ಈ ಕಾಡೇ ದೇವರು, ಕಾಡೇ ಬದುಕು. ಆದರೆ, ಈ ಹಸಿರು ಸ್ವರ್ಗದ ಆಳದಲ್ಲಿರುವ ‘ಕಲ್ಲಿದ್ದಲು’ ಎಂಬ ಕಪ್ಪು ಚಿನ್ನದ ಮೇಲೆ ಕಾರ್ಪೊರೇಟ್ ಕಣ್ಣು ಬಿದ್ದಿದೆ. ದೇಶದ ಇಂಧನ ಅಗತ್ಯದ ನೆಪವೊಡ್ಡಿ, ಅದಾನಿ ಸಮೂಹ ಸೇರಿದಂತೆ ಹಲವು ಬೃಹತ್ ಕಾರ್ಪೊರೇಟ್ ಕಂಪನಿಗಳಿಗೆ ಈ ಕಾಡನ್ನು ಹಂಚಿಕೆ ಮಾಡಲಾಗಿದೆ. ‘ಅಭಿವೃದ್ಧಿ’ ಎಂಬ ಸುಂದರ ಮುಖವಾಡದ ಹಿಂದೆ ಅಡಗಿರುವುದು ಅಪ್ಪಟ ವಾಣಿಜ್ಯ ಲಾಭದ ಹಪಾಹಪಿ. ಈ ‘ಆಸೆಬುರುಕ’ ಮತ್ತು ಜನರ ನೆಲೆ ಕೆಡಿಸುವ ‘ಮನೆಮುರುಕ’ ಯೋಜನೆಗಳಿಗೆ ಸರ್ಕಾರದ ಒಪ್ಪಿಗೆಯೂ ಇದೆ ಎಂಬುದು ವಿಪರ್ಯಾಸ.
ಗಣಿಗಾರಿಕೆ ಎಂಬ ‘ಭೂಗತ’ ರೋಗ
ಈಗಾಗಲೇ ಸಾವಿರಾರು ಮರಗಳು ನೆಲಕ್ಕುರುಳಿವೆ. ಸ್ಥಳೀಯ ಗ್ರಾಮಸಭೆಗಳ ವಿರೋಧವಿದ್ದರೂ, ಪೇಸಾ (The Provisions of the Panchayats Act) (PESA) ಕಾಯ್ದೆಯ ನಿಯಮಗಳನ್ನು ಗಾಳಿಗೆ ತೂರಿ ಅನುಮತಿಗಳನ್ನು ನೀಡಲಾಗಿದೆ ಎಂಬ ಆರೋಪಗಳು ಬಲವಾಗಿ ಕೇಳಿಬರುತ್ತಿವೆ.
ಗಣಿಗಾರಿಕೆ ಕಂಪನಿಗಳು ಕೇವಲ ಭೂಮಿಯನ್ನಷ್ಟೇ ಅಗೆಯುತ್ತಿಲ್ಲ; ಅವು ಆದಿವಾಸಿಗಳ ಸಂಸ್ಕೃತಿ, ನಂಬಿಕೆ ಮತ್ತು ಜೀವನೋಪಾಯವನ್ನೂ ಹೂತುಹಾಕುತ್ತಿವೆ. ಗಣಿಗಾರಿಕೆಯಿಂದ ಹೊರಬರುವ ಧೂಳು, ಕಲುಷಿತ ನೀರು ಅಲ್ಲಿನ ಕೃಷಿಯನ್ನು ಹಾಳುಗೆಡವಿದ್ದರೆ, ಆನೆ ಮತ್ತು ಮನುಷ್ಯರ ನಡುವಿನ ಸಂಘರ್ಷವನ್ನು ತೀವ್ರಗೊಳಿಸಿದೆ. ತಮ್ಮ ನೆಲದಲ್ಲೇ ನಿರಾಶ್ರಿತರಾಗುವ ಭಯ ಅಲ್ಲಿನ ಜನರನ್ನು ಕಂಗೆಡಿಸಿದೆ. ಇಂತಹ ಹತಾಶೆಯೇ ಕೆಲವೊಮ್ಮೆ ದಾರಿತಪ್ಪಿದ ಆಕ್ರೋಶಕ್ಕೆ ಕಾರಣವಾಗುತ್ತದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಪಾರ್ಸಾ ಈಸ್ಟ್ ಮತ್ತು ಕಾಂತಾ ಬಸನ್ (PEKB) ಸೇರಿದಂತೆ ಹಲವು ಗಣಿ ಬ್ಲಾಕ್ಗಳಲ್ಲಿ ಮರಗಳ ನಾಶ ಅವ್ಯಾಹತವಾಗಿ ನಡೆದಿದೆ.

ಅಪರಾಧದ ಮರೆಯಲ್ಲಿ ಅರಣ್ಯನಾಶದ ಸಮರ್ಥನೆ ಸಲ್ಲದು
ಈಗ ನಡೆದಿರುವ ಮಹಿಳಾ ಕಾನ್ಸ್ಟೆಬಲ್ ಮೇಲಿನ ಹಲ್ಲೆಯ ಪ್ರಕರಣವನ್ನು ಮುಂದಿಟ್ಟುಕೊಂಡು, ಸರ್ಕಾರ ಮತ್ತು ಕಾರ್ಪೊರೇಟ್ ಪರ ಲಾಬಿಗಳು ಇಡೀ ಗಣಿಗಾರಿಕೆ ವಿರೋಧಿ ಆಂದೋಲನವನ್ನೇ ಹತ್ತಿಕ್ಕುವ ಸಾಧ್ಯತೆ ದಟ್ಟವಾಗಿದೆ. “ನೋಡಿ, ಇವರು ಅಭಿವೃದ್ಧಿ ವಿರೋಧಿಗಳು ಮಾತ್ರವಲ್ಲ, ಸಮಾಜಘಾತುಕರು” ಎಂದು ಬಿಂಬಿಸಿ, ಪೊಲೀಸ್ ಬಲಪ್ರಯೋಗದ ಮೂಲಕ ಗಣಿಗಾರಿಕೆಯನ್ನು ವೇಗಗೊಳಿಸುವ ತಂತ್ರಗಾರಿಕೆ ನಡೆಯಬಹುದು.
ನಾವು ಕೇಳಬೇಕಾದ ಪ್ರಶ್ನೆ ಏನು?
ಒಂದು ಕ್ರಿಮಿನಲ್ ಅಪರಾಧವು (ಕಾನ್ಸ್ಟೆಬಲ್ ಮೇಲಿನ ಹಲ್ಲೆ), ಪರಿಸರದ ಮೇಲಿನ ಮತ್ತೊಂದು ಬೃಹತ್ ಕ್ರಿಮಿನಲ್ ಅಪರಾಧವನ್ನು (ಅರಣ್ಯನಾಶ) ಸರಿ ಎಂದು ಸಮರ್ಥಿಸಬಲ್ಲದೇ? ಖಂಡಿತ ಇಲ್ಲ. ಕಾರ್ಪೊರೇಟ್ ಕಂಪನಿಗಳ ಲಾಭದ ಹಸಿವಿಗಾಗಿ ಲಕ್ಷಾಂತರ ವರ್ಷಗಳ ಹಳೆಯ ಪರಿಸರ ವ್ಯವಸ್ಥೆಯನ್ನು ನಾಶ ಮಾಡುವುದು, ಮುಂದಿನ ಪೀಳಿಗೆಗೆ ಮಾಡುವ ದ್ರೋಹ. ಅರಣ್ಯನಾಶದಿಂದಾಗುವ ಹವಾಮಾನ ವೈಪರೀತ್ಯ, ಅಂತರ್ಜಲ ಕುಸಿತ ಮತ್ತು ಆದಿವಾಸಿಗಳ ಸಾಂಸ್ಕೃತಿಕ ಹತ್ಯೆಗಳು ಕಣ್ಣಿಗೆ ಕಾಣದ ಹಿಂಸೆಗಳಾಗಿವೆ. ಛತ್ತೀಸಗಢದಲ್ಲಿ ನಡೆದಿರುವುದು ದ್ವಿಮುಖ ದುರಂತ. ಒಂದೆಡೆ ಕಾನೂನು ಸುವ್ಯವಸ್ಥೆಯ ವೈಫಲ್ಯ ಮತ್ತು ಸ್ತ್ರೀ ಘನತೆಯ ಮೇಲಿನ ಹಲ್ಲೆ, ಮತ್ತೊಂದೆಡೆ ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆ ಮತ್ತು ಪರಿಸರ ಹತ್ಯೆ.
ಮಹಿಳಾ ಪೇದೆಯ ವಸ್ತ್ರಾಪಹರಣ ಮಾಡಿದ ಕಾಮುಕ ಮನಸ್ಥಿತಿಯ ಕ್ರಿಮಿನಲ್ಗಳಿಗೆ ಕಠಿಣ ಶಿಕ್ಷೆಯಾಗಲಿ. ಆದರೆ, ಇದೇ ನೆಪದಲ್ಲಿ ಹಸ್ದೇವ್ ಅರಣ್ಯದ ಒಡಲನ್ನು ಬಗೆದು, ಲಾಭ ಮಾಡಿಕೊಳ್ಳಲು ಹೊಂಚು ಹಾಕಿರುವ ಕಾರ್ಪೊರೇಟ್ ಶಕ್ತಿಗಳಿಗೆ ‘ಕ್ಲೀನ್ ಚಿಟ್’ ಸಿಗಬಾರದು. ಜನರ ಬದುಕನ್ನು ಹಾಳುಗೆಡವಿ ಕಟ್ಟುವ ಅರಮನೆಗಳು ಮತ್ತು ಅರಣ್ಯದ ಸಮಾಧಿಯ ಮೇಲೆ ನಡೆಯುವ ‘ಅಭಿವೃದ್ಧಿ’ ಶಾಶ್ವತವಲ್ಲ. ಪ್ರಜಾಪ್ರಭುತ್ವದಲ್ಲಿ ಲಾಠಿ ಮತ್ತು ಕಲ್ಲುಗಳ ಸದ್ದಿಗಿಂತ, ನ್ಯಾಯ ಮತ್ತು ಸತ್ಯದ ಧ್ವನಿ ದೊಡ್ಡದಾಗಿರಬೇಕು. ಅರಣ್ಯ ಉಳಿಯಬೇಕು, ಆದಿವಾಸಿಗಳ ಬದುಕು ಹಸನಾಗಬೇಕು ಮತ್ತು ಕಾನೂನು ತನ್ನ ಕೆಲಸ ಮಾಡಬೇಕು – ಇದು ಇಂದಿನ ತುರ್ತು.





