ಪುತ್ತೂರು ಆರೆಸ್ಸೆಸ್ ಮುಖಂಡ ಮತ್ತು ನಗರ ಪಂಚಾಯ್ತಿ ಸದಸ್ಯ ಜಗನ್ನಿವಾಸ ರಾವ್ ಅವರ ಪುತ್ರ ಕೃಷ್ಣ ಜೆ ರಾವ್ನ ಲವ್, ಸೆಕ್ಸ್, ದೋಖಾ ಪ್ರಕರಣ ಮಾಧ್ಯಮಗಳ ಬಾಯಿಗೆ ಬೀಳುವ ಮುನ್ನವೇ ಹಿಂದೂ ಸಂಘಟನೆಗಳ ಮುಖಂಡರಿಗೆ ತಿಳಿದಿತ್ತು. ಅವರು ಯುವತಿಯ ಮನೆಯವರಿಗೆ ಮದುವೆ ಮಾಡಿಸುವ ಭರವಸೆ ನೀಡಿ ನಂತರ ಆರೋಪಿಯ ಕುಟುಂಬವನ್ನು ಮದುವೆಗೆ ಒಪ್ಪಿಸುವ ಕೆಲಸ ಮಾಡದೇ ಮೌನಕ್ಕೆ ಶರಣಾಗಿದ್ದರು.
ಪುತ್ತೂರು ಆರೆಸ್ಸೆಸ್ ಮುಖಂಡ ಮತ್ತು ನಗರ ಪಂಚಾಯ್ತಿ ಸದಸ್ಯ ಜಗನ್ನಿವಾಸ ರಾವ್ ಅವರ ಪುತ್ರ ಕೃಷ್ಣ ಜೆ ರಾವ್ ಎಂಬ ಯುವಕರ ಯುವತಿಯೋರ್ವಳನ್ನು ಪ್ರೀತಿಸಿ ಗರ್ಭಿಣಿಯಾಗುವಂತೆ ಮಾಡಿ ನಂತರ ಮದುವೆಗೆ ನಿರಾಕರಿಸಿದ ಪ್ರಕರಣದಲ್ಲಿ ಆರೋಪಿ ಜೈಲಿನಿಂದ ಜಾಮೀನಿನಲ್ಲಿ ಬಿಡುಗಡೆಯಾಗಿದ್ದಾನೆ. ಈ ಮಧ್ಯೆ ಆತ ಆ ಮಗುವಿನ ಅಪ್ಪ ಅಲ್ಲ ಎಂದು ಹೇಳಿ ಮದುವೆಗೆ ಆತ ಮತ್ತು ಆತನ ಕುಟುಂಬ ನಿರಾಕರಿಸುತ್ತಲೇ ಬಂದಿತ್ತು. ಈಗ ಆತನ ಡಿಎನ್ಎ ಪರೀಕ್ಷೆ ನಡೆದು ಆತನೇ ಮಗುವಿನ ತಂದೆ ಎಂದು ದೃಢಪಟ್ಟಿದೆ. ಯುವತಿಯ ಪಾಲಿಗೆ ಮದುವೆಗೂ ಮುನ್ನ ಮಗುವಾಗಿದ್ದು ಒಂದು ಅವಮಾನವಾದರೆ, ಮದುವೆಗೆ ನಿರಾಕರಿಸಿದ್ದು ಮತ್ತೊಂದು ಅವಮಾನ. ಅದರ ಮಧ್ಯೆ ಆಕೆಯ ಜೊತೆಗೆ ಏಳು ವರ್ಷ ಕಳೆದಿದ್ದ ಕೃಷ್ಣ “ಆ ಮಗು ನಂದಲ್ಲ, ಆಕೆಗೆ ಹಲವರು ಗೆಳೆಯರಿದ್ದರು” ಎಂದು ಹೇಳಿ ಆಕೆಯ ಚಾರಿತ್ರ್ಯವಧೆ ಮಾಡಿ ಇನ್ನಷ್ಟು ನೋವು ಕೊಟ್ಟಿದ್ದ. ಈಗ ಡಿ ಎನ್ಎ ಪರೀಕ್ಷೆ ಯುವತಿಯ ಮೇಲಿನ ಕಳಂಕ ಕಳೆದಿದೆ. ಈಗಿರುವ ಪ್ರಶ್ನೆ ಈಗಲಾದರೂ ಪುತ್ತೂರಿನ ʼಮಾನವಂತʼರೆಲ್ಲ ಸೇರಿ ಈ ಯುವತಿಗೆ ನ್ಯಾಯ ಕೊಡಿಸುವರೇ? ಆ ಮಗುವಿಗೆ ತಂದೆಯನ್ನು ಕರುಣಿಸುವರೇ? ಅಥವಾ ಕೃಷ್ಣನ ಲೀಲೆಗಳನ್ನು ನೋಡುತ್ತ ಸುಮ್ಮನಿರುವರೇ? ಎಂಬುದು.
ಈ ಪ್ರಕರಣ ಬೆಳಕಿಗೆ ಬಂದಾಗ ದಕ್ಷಿಣ ಕನ್ನಡ ಜಿಲ್ಲೆಯ ಹಿಂದೂ ಮುಖಂಡರ ಮೌನವನ್ನು ಹಲವರು ಪ್ರಶ್ನೆ ಮಾಡಿದ್ದರು. ಕೃಷ್ಣನ ಜಾಗದಲ್ಲಿ ಶರೀಫ್ ಇದ್ದಿದ್ದರೆ ಏನಾಗುತ್ತಿತ್ತು? ಹಿಂದೂ ಹೆಣ್ಣುಮಕ್ಕಳ ರಕ್ಷಣೆಗೆ ಟೊಂಕಕಟ್ಟಿ ನಿಂತಿದ್ದ ಶೋಭಾ ಕರಂದ್ಲಾಜೆ ಎಲ್ಲಿ ಕಾಣಿಯಾಗಿದ್ದಾರೆ? ಆರೆಸ್ಸೆಸ್ ಮುಖಂಡನ ಪುತ್ರ ಹಿಂದೂ ಯುವತಿಗೆ ಅನ್ಯಾಯ ಮಾಡಿದಾಗ ಆರೆಸ್ಸೆಸ್ ಮುಖಂಡರು ಯಾಕೆ ಧ್ವನಿ ಎತ್ತಿಲ್ಲ? ಮದುವೆಗೆ ಆ ಕುಟುಂಬವನ್ನು ಒಪ್ಪಿಸಿಲ್ಲ ಯಾಕೆ? ಕಲ್ಲಡ್ಕ ಪ್ರಭಾಕರ ಭಟ್ಟ, ಅರುಣ್ ಕುಮಾರ್ ಪುತ್ತಿಲ, ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಶಾಸಕರಾದ ಹರೀಶ್ ಪೂಂಜಾ, ವೇದವ್ಯಾಸ ಕಾಮತ್, ಡಾ ಭರತ್ ಶೆಟ್ಟಿ, ಭಾಗೀರಥಿ ಮುರುಳ್ಯ ಎಲ್ಲಿದ್ದಾರೆ? ಯಾಕೆ ಹಿಂದೂ ಹೆಣ್ಣುಮಗಳ ಕುಟುಂಬದ ಪರ ನಿಂತಿಲ್ಲ ಎಂಬ ಪ್ರಶ್ನೆಯನ್ನು ಹಲವರು ಕೇಳಿದ್ದರು. ಈ ಒಂದು ಪ್ರಕರಣದಲ್ಲಿ ಹಿಂದೂ ಸಂಘಟನೆಗಳು ಮತ್ತು ಸದಾ ಜಿಲ್ಲೆಯನ್ನು ಉದ್ವಿಗ್ನಗೊಳಿಸುತ್ತಿದ್ದ ಹಿಂದುತ್ವದ ಮುಖಂಡರ ಬಣ್ಣ ಬಯಲಾಗಿತ್ತು. ಅತ್ಯಾಚಾರ, ಕೊಲೆ, ಗಲಭೆಯಲ್ಲಿ ಮುಸ್ಲಿಂ ಆರೋಪಿಗಳಿದ್ದರೆ ಮಾತ್ರ ಇಡೀ ರಾಜ್ಯದ ಬಿಜೆಪಿ ನಾಯಕರು ಮಂಗಳೂರಿಗೆ ಬಂದಿಳಿದು ಪ್ರತಿಭಟಿಸುತ್ತಾರೆ. ಹಿಂದೂಗಳಿಂದಲೇ ಹಿಂದೂಗಳ ಅತ್ಯಾಚಾರ ಕೊಲೆ ಆದಾಗ ದೀರ್ಘ ಮೌನಕ್ಕೆ ಜಾರುವುದು ಬಿಜೆಪಿ ನಾಯಕರಿಗೆ ಹೊಸದೇನಲ್ಲ. ಪುತ್ತೂರಿನ ಸಂತ್ರಸ್ತೆಯ ಮನೆಗೆ ಯಾವೊಬ್ಬ ಬಿಜೆಪಿ ನಾಯಕರೂ ಹೋಗಿಲ್ಲ. ಮುಸ್ಲಿಂ ಆಂಗಲ್ ಇದ್ದರೆ ಬಾಯಿ ತೆರೆದು ಬರುವ ಶೋಭಾ ಮೇಡಂಗೆ ಈ ವಿಚಾರ ಗೊತ್ತೇ ಆಗಿಲ್ಲವೇನೋ!

ಈ ಪ್ರಕರಣ ಮಾಧ್ಯಮಗಳ ಬಾಯಿಗೆ ಬೀಳುವ ಮುನ್ನವೇ ಹಿಂದೂ ಸಂಘಟನೆಗಳ ಮುಖಂಡರಿಗೆ ತಿಳಿದಿತ್ತು. ಯುವತಿಯ ಮನೆಯವರಿಗೆ ಮದುವೆ ಮಾಡಿಸುವ ಭರವಸೆ ನೀಡಿ ನಂತರ ಆರೋಪಿಯ ಕುಟುಂಬವನ್ನು ಮದುವೆಗೆ ಒಪ್ಪಿಸುವ ಕೆಲಸ ಮಾಡದೇ ಮೌನಕ್ಕೆ ಶರಣಾಗಿದ್ದರು. ಶಾಸಕ ಅಶೋಕ್ ರೈ ಅವರು ಎರಡೂ ಕುಟುಂಬಗಳ ಜೊತೆಗೆ ಮಾತನಾಡಿ, ಯುವಕನ ಕುಟುಂಬ ಮದುವೆಗೆ ಒಪ್ಪಿರುವ ಕಾರಣ ಕೇಸು ದಾಖಲಿಸುವುದು ಬೇಡ ಎಂದು ಯುವತಿಯ ಕುಟುಂಬದ ಮನವೊಲಿಸಿದ್ದಾರೆ. ಆದರೆ 21ವರ್ಷ ತುಂಬಲು ಒಂದು ತಿಂಗಳಷ್ಟೇ ಇದೆ, ಆನಂತರ ಮದುವೆ ಮಾಡಿಸುತ್ತೇವೆ ಎಂದು ಪೊಲೀಸರ ಮುಂದೆ ಒಪ್ಪಿದ್ದ ಕುಟುಂಬ ಆತನಿಗೆ 21ವರ್ಷ ತುಂಬಿದ ನಂತರ ನಿರಾಕರಿಸಿದೆ. ಅಲ್ಲದೇ ಯುವತಿಯ ಸಂಪರ್ಕಕ್ಕೆ ಸಿಗದಂತೆ ಮಾಡಿದ್ದಾರೆ. ನಂತರ ಯುವತಿಗೆ ಮಗು ಜನಿಸಿದೆ. ಯುವತಿಯ ಕುಟುಂಬ ಪುತ್ತೂರು ಠಾಣೆಯಲ್ಲಿ ದೂರು ದಾಖಲಿಸಿದ ಒಂದು ವಾರದ ನಂತರ ಮೈಸೂರಿನಿಂದ ಕೃಷ್ಣನನ್ನು ಬಂಧಿಸಿ ಕರೆತಂದಿದ್ದರು. ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಜಾಮೀನಿನ ಮೇಲೆ ಹೊರ ಬಂದಿದ್ದರೂ ಮದುವೆಗೆ ಒಪ್ಪಿಲ್ಲ.
ಈ ಮಧ್ಯೆ ಯುವತಿಯ ನಡತೆಯ ಬಗ್ಗೆ ಅನುಮಾನ ವ್ಯಕ್ತಪಡಿಸುವ ಹೇಳಿಕೆ ಬಂದಾಗ, ಯುವತಿಯ ಮನೆಯವರು ಡಿಎನ್ಎ ಪರೀಕ್ಷೆಗೆ ಮುಂದಾಗಿದ್ದಾರೆ. ಶುಕ್ರವಾರ ಡಿಎನ್ಎ ವರದಿಯನ್ನು ಪುತ್ತೂರು ಕೋರ್ಟ್ ನೀಡಲಾಗಿದೆ. ಕೋರ್ಟಿನಲ್ಲಿ ಸೋಮವಾರದಿಂದ ಟ್ರಯಲ್ ಶುರುವಾಗಲಿದೆ ಎಂದು ಸಂತ್ರಸ್ತೆಯ ಕುಟುಂಬದ ಪರ ನಿಂತು ಹೋರಾಟ ನಡೆಸುತ್ತಿರುವ ವಿಶ್ವಕರ್ಮ ಸಮುದಾಯದ ಮುಖಂಡ ಕೆ ಪಿ ನಂಜುಂಡಿ ತಿಳಿಸಿದ್ದಾರೆ. ಯುವಕನ ತಂದೆ- ತಾಯಿ ಈ ಯುವತಿಯನ್ನು ಮನೆ ತುಂಬಿಸಿಕೊಳ್ಳಬೇಕು. ಕಾನೂನಡಿ ಶಿಕ್ಷೆ ಕೊಡಿಸುವ ಬಗ್ಗೆ ನಾವು ಯೋಚಿಸುತ್ತಿಲ್ಲ. ಮಗುವಿಗೆ ತಂದೆ ಬೇಕು, ಆ ಯುವತಿಯ ಬದುಕು ಹಾಳಾಗಿದೆ. ಆಕೆಗೆ ಬದುಕು ಬೇಕು ಎಂದು ಅವರು ಹೇಳಿದ್ದಾರೆ.
“ಹಿಂದುತ್ವದ ಮೂಲ ಪುತ್ತೂರಿನಲ್ಲಿದೆ. ಹಿಂದುತ್ವದ ಮುಖವಾಣಿ ಪುತ್ತೂರು. ಆ ಊರಿನಲ್ಲಿ ಹಿಂದೂ ಯುವತಿಗೆ ಆದ ಅನ್ಯಾಯಕ್ಕೆ ಹಿಂದುತ್ವವಾದಿಗಳು ನ್ಯಾಯ ಕೊಡಿಸಬೇಕು. ಅವರೇ ಮದುವೆ ಮಾಡಿಸಬೇಕು. ಭಜರಂಗದಳ, ಬಿಜೆಪಿ, ಆರೆಸ್ಸೆಸ್, ಮಹಿಳಾ ಸಂಘಟನೆಗಳು ಇಲ್ಲಿವೆ. ಹಿಂದುತ್ವದ ಪ್ರತಿರೂಪ ವಿಶ್ವಕರ್ಮ ಸಮಾಜ, ಆ ಸಮುದಾಯದ ಹೆಣ್ಣುಮಗಳಿಗೆ ಅನ್ಯಾಯವಾಗಿದೆ. ಇದಕ್ಕಿಂತ ಬೇರೆ ಕಾರಣ ಬೇಕಾ ಹೋರಾಟಕ್ಕೆ. ನಾನು ಬೆಂಗಳೂರಿನಿಂದ ಬಂದು ಇಲ್ಲಿ ಹೋರಾಟ ಮಾಡುವುದು ಹಿಂದುತ್ವಕ್ಕೆ ಮಾಡುವ ಅವಮಾನ. ಮೊದಲ ಆಯ್ಕೆ ರಾಜಿ ಸಂದಾನ, ಈ ಕೆಲಸವನ್ನು ಹಿಂದೂ ಸಂಘಟನೆಗಳು ಮಾಡಬೇಕು. ಮೊದಲ ಸ್ಥಾನ ಅವರಿಗೇ ಕೊಡುತ್ತೇನೆ. ಅವರಿಂದ ಆಗದಿದ್ದರೆ ಮತ್ತೆ ಕಾನೂನು ಹೋರಾಟ ಮುಂದುವರಿಸುತ್ತೇವೆ. ಒಂದು ಮಗುವಿಗೆ ಜನ್ಮ ನೀಡಿದ್ದಾನೆಂದರೆ ಅದು ಗಂಡ ಹೆಂಡತಿಗಿಂತ ಮೀರಿದ ಸಂಬಂಧ. ಇವರಿಬ್ಬರು ಏಳು ವರ್ಷಗಳ ಕಾಲ ಜೊತೆಗಿದ್ದರು. ಇದಕ್ಕಿಂತ ಸಾಕ್ಷಿ ಬೇಕಾ” ಎಂದು ನಂಜುಂಡಿ ಪ್ರಶ್ನಿಸಿದ್ದಾರೆ. ಆ ಮೂಲಕ ಪುತ್ತೂರಿನ ಹಿಂದುತ್ವವಾದಿ ಸಂಘಟನೆಗಳ ಹೆಗಲಿಗೆ ಈ ಪ್ರಕರಣವನ್ನು ವರ್ಗಾಯಿಸಿದ್ದಾರೆ.
ಡಿಎನ್ಎ ವರದಿ ಬಂದ ನಂತರ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಂತ್ರಸ್ತ ಯುವತಿ ಪೂಜಾ, “ನಾನು ಮೊದಲೇ ಹೇಳಿದ್ದೆ ಮಗು ಅವನದ್ದೇ ಅಂತ, ಆದರೆ ಕೃಷ್ಣ, ಅವನ ತಂದೆ ತಾಯಿ ಕೂಡ ಮಗು ಬೇರೆಯವರದ್ದು ಅಂತ ಹೇಳಿ ಅವಮಾನಿಸಿದ್ರು. ಆದರೆ ಈಗ ದೇವರು ನನ್ನ ಕೈ ಹಿಡಿದಿದ್ದಾರೆ. ಮೊದಲು ಆತನ ತಂದೆ ಡಿಎನ್ಎ ಪರೀಕ್ಷೆ ಬೇಡ ಎಂದು ಹೇಳಿದ್ದರು, ಆದರೆ ನಾನು ಡಿಎನ್ಎ ಪರೀಕ್ಷೆ ಮಾಡಿಸಲೇಬೇಕು ಅಂತ ಹಟ ಹಿಡಿದೆ. ಡಿಎನ್ಎ ಪರೀಕ್ಷೆಯಲ್ಲಿ ನೆಗೆಟಿವ್ ಬರುತ್ತದೆ ಎಂದು ಕೆಲವರು ಹೇಳಿದ್ರು. ಆದರೆ ನನಗೆ ಏನೆಂದು ಗೊತ್ತಿತ್ತು. ಈಗ ಅದು ಎಲ್ಲರಿಗೂ ಗೊತ್ತಾಗಿದೆ. ಗೊತ್ತಿಲ್ಲದೇ ಒಬ್ಬ ಹೆಣ್ಣುಮಗಳನ್ನು ಅವಮಾನಿಸಿದ ಎಲ್ಲರಿಗೂ ಈಗ ಉತ್ತರ ಸಿಕ್ಕಿದೆ” ಎಂದು ಹೇಳಿದ್ದಾರೆ.

ಹೇಮಾ ವೆಂಕಟ್
ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು.
ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ.
ಮೂರು ಪುಸ್ತಕಗಳು ಪ್ರಕಟಗೊಂಡಿವೆ.




