2020ರ ದೆಹಲಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿರುವ ಸಾಮಾಜಿಕ ಹೋರಾಟಗಾರರಾದ ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ಅವರ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ತಿರಸ್ಕರಿಸಿದೆ. ಆದರೆ ಈ ಪ್ರಕರಣದಲ್ಲಿ ಇತರ ಆರೋಪಿಗಳಾದ ಗುಲ್ಫಿಶಾ ಫಾತಿಮಾ, ಮೀರನ್ ಹೈದರ್, ಶಿಫಾ ಉರ್ ರೆಹಮಾನ್, ಮೊಹಮ್ಮದ್ ಸಲೀಮ್ ಖಾನ್ ಮತ್ತು ಶಾದಾಬ್ ಅಹ್ಮದ್ ಅವರಿಗೆ ಜಾಮೀನು ನೀಡಿದೆ. ಉಮರ್ ಮತ್ತು ಇಮಾಮ್ಗೆ ಜಾಮೀನು ನೀಡದ ಸುಪ್ರೀಂ, “ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಯೇ ಹೆಚ್ಚು ಮುಖ್ಯವಾದುದು. ಇತರ ಆರೋಪಿಗಳಿಗೆ ಹೋಲಿಸಿದರೆ ಇವರಿಬ್ಬರ ಪಾತ್ರ ಭಿನ್ನವಾದುದ್ದು” ಎಂದು ಹೇಳಿದೆ.
ವಿಚಾರಣಾ ನ್ಯಾಯಾಲಯವು ಮಾರ್ಚ್ 2022 ರಲ್ಲಿ ಮೊದಲು ಅವರಿಗೆ ಜಾಮೀನು ನಿರಾಕರಿಸಿತ್ತು. ನಂತರ ಅವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸುತ್ತಾರೆ. ಹೈಕೋರ್ಟ್ ಅಕ್ಟೋಬರ್ 2022ರಲ್ಲಿ ಅವರ ಜಾಮೀನು ಅರ್ಜಿ ನಿರಾಕರಿಸಿತು. ಇದರಿಂದಾಗಿ ಅವರು ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದರು. ಮೇ 2023 ರಲ್ಲಿ, ಸುಪ್ರೀಂಕೋರ್ಟ್ ಈ ವಿಷಯದಲ್ಲಿ ದೆಹಲಿ ಪೊಲೀಸರ ಪ್ರತಿಕ್ರಿಯೆಯನ್ನು ಕೇಳಿತು. ನಂತರ ಸುಪ್ರೀಂ ಕೋರ್ಟ್ನಲ್ಲಿ ಅವರ ಅರ್ಜಿಯನ್ನು 14 ಬಾರಿ ಮುಂದೂಡಲಾಯಿತು. ಫೆಬ್ರವರಿ 14, 2024ರಂದು, ಪರಿಸ್ಥಿತಿಯಲ್ಲಿನ ಬದಲಾವಣೆಯನ್ನು ಉಲ್ಲೇಖಿಸಿ ಉಮರ್ ಸುಪ್ರೀಂ ಕೋರ್ಟ್ನಿಂದ ಜಾಮೀನು ಅರ್ಜಿಯನ್ನು ಹಿಂತೆಗೆದುಕೊಂಡು ಇನ್ನೊಂದು ಅರ್ಜಿಯನ್ನು ಸಲ್ಲಿಸಿದ್ದರು.

ಮೇ 28ರಂದು ವಿಚಾರಣಾ ನ್ಯಾಯಾಲಯವು ಅವರ ಎರಡನೇ ಜಾಮೀನು ಅರ್ಜಿಯನ್ನು ತಿರಸ್ಕರಿಸಿತು. ಇದರ ವಿರುದ್ಧದ ಮೇಲ್ಮನವಿಯನ್ನು ಸೆಪ್ಟೆಂಬರ್ 2ರಂದು ದೆಹಲಿ ಹೈಕೋರ್ಟ್ ವಜಾಗೊಳಿಸಿತು. ಮತ್ತೆ ಸುಪ್ರೀಂಕೋರ್ಟ್ಗೆ ತಮ್ಮ ಜಾಮೀನು ಅರ್ಜಿ ಸಲ್ಲಿಸಿದರು. ಇದೀಗ ಸುಪ್ರೀಂಕೋರ್ಟ್ನಲ್ಲೂ ತಿರಸ್ಕಾರ ಮಾಡಲಾಗಿದೆ. ಕೋರ್ಟ್ನ ಈ ನಿರ್ಧಾರದ ಬಗ್ಗೆ ಸುಪ್ರೀಂ ಕೋರ್ಟ್ನ ಹಿರಿಯ ವಕೀಲ ಸಂಜಯ್ ಆರ್. ಹೆಗ್ಡೆ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೆಲ ದಿನಗಳ ಹಿಂದೆ ಉಮರ್ ಖಾಲಿದ್ ಅವರನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿ, ಅಮೆರಿಕದ 8 ಶಾಸಕರು ಭಾರತ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಅಷ್ಟೇ ಅಲ್ಲ ಇತ್ತೀಚಿಗಷ್ಟೇ ನ್ಯೂಯಾರ್ಕ್ ಮೇಯರ್ ಆಗಿ ಪ್ರಮಾಣವಚನ ಸ್ವೀಕರಿಸಿರುವ ಜೋಹ್ರಾನ್ ಮಮ್ದಾನಿ ಉಮರ್ ಖಾಲೀದ್ಗೆ ಪತ್ರ ಬರೆದಿದ್ದಾರೆ. ‘ನಾವೆಲ್ಲರೂ ನಿಮ್ಮ ಬಗ್ಗೆ ಯೋಚಿಸುತ್ತಿದ್ದೇವೆ’ ಎಂದು ಪೋಸ್ಟ್ ಮಾಡಿ ಬೆಂಬಲ ವ್ಯಕ್ತಪಡಿಸಿದ್ದರು. ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಹಂಚಿಕೊಂಡ ಕೈಬರಹದ ಟಿಪ್ಪಣಿಯಲ್ಲಿ, ಜೋಹ್ರಾನ್ ಮಮ್ದಾನಿ, ‘ಪ್ರಿಯ ಉಮರ್, ಕಹಿ ಭಾವನೆಯ ಬಗ್ಗೆ ನೀವು ಹೇಳಿದ ಮಾತುಗಳ ಬಗ್ಗೆ ನಾನು ಆಗಾಗ್ಗೆ ಯೋಚಿಸುತ್ತೇನೆ. ನಿಮ್ಮ ಹೆತ್ತವರನ್ನು ಭೇಟಿಯಾಗಲು ಸಂತೋಷವಾಯಿತು. ನಾವೆಲ್ಲರೂ ನಿಮ್ಮ ಬಗ್ಗೆ ಯೋಚಿಸುತ್ತಿದ್ದೇವೆ’ ಎಂದು ಪೋಸ್ಟ್ ಮಾಡಿದ್ದರು. ಉಮರ್ ಖಾಲಿದ್ ಪರವಾಗಿ ಮಮ್ದಾನಿ ಬರೆದ ಪತ್ರ ಸಾಕಷ್ಟು ಸದ್ದು ಮಾಡಿತ್ತು. ಭಾರತದ ರಾಜಕೀಯ ವಲಯದಲ್ಲಿ ಪರ ವಿರೋಧ ಚರ್ಚೆಗಳಿಗೂ ಕಾರಣವಾಗಿತ್ತು.

ಕಳೆದ ಐದು ವರ್ಷಗಳಿಂದ ಉಮರ್ ವಿಚಾರಣಾಧೀನ (Undertrial)ಕೈದಿಯಾಗಿ ದೆಹಲಿಯ ತಿಹಾರ್ ಜೈಲಿನಲ್ಲಿ ಕೊಳೆಯುತ್ತಿದ್ದಾರೆ. ಗುಲ್ಫಿಶಾ ಫಾತಿಮಾ ಎಂಬ ಯುವ ಕಾರ್ಯಕರ್ತೆಯ ಜೊತೆ ಇನ್ನು ಒಂಬತ್ತು ಯುವ ಪುರುಷ ಕಾರ್ಯಕರ್ತರು ಜೈಲುವಾಸಿಗಳಾಗಿದ್ದಾರೆ. ಕಪಿಲ್ ಮಿಶ್ರಾ ದೆಹಲಿ ರಾಜ್ಯ ಸರ್ಕಾರದಲ್ಲಿ ಕಾನೂನು ಮಂತ್ರಿಯಾಗಿ ಮತ್ತು ಅನುರಾಗ್ ಠಾಕೂರ್ ಕೇಂದ್ರದಲ್ಲಿ ಸಚಿವರಾಗಿ ಮೆರೆಯುತ್ತಿದ್ದಾರೆ! ಉಮರ್ ಬೇಲನ್ನು ಪಡೆಯಲು ಅನೇಕ ಕೋರ್ಟುಗಳ ಮೆಟ್ಟಿಲುಗಳನ್ನು ಏರಿದ್ದಾರೆ. ಇತ್ತೀಚೆಗೆ ಅಂದರೆ ಸೆಪ್ಟೆಂಬರ್ 2 ರಂದು ದೆಹಲಿಯ ಹೈಕೋರ್ಟ್ ಪುನಃ ಉಮರ್ಗೆ ಬೇಲನ್ನು ನಿರಾಕರಿಸಿದೆ. ಇದು ಏಳನೆಯ ಬಾರಿ- ಸೆಷನ್ ಕೋರ್ಟಿನಲ್ಲಿ -3, ಹೈ ಕೋರ್ಟಿನಲ್ಲಿ-2, ಸುಪ್ರೀಂ ಕೋರ್ಟಿನಲ್ಲಿ ಎರಡು ಬಾರಿ ಬೇಲ್ ಅರ್ಜಿಯನ್ನು ವಾಪಸ್ಸು ಪಡೆಯಲಾಗಿತ್ತು. ಸುಮಾರು ಐವತ್ತು ವರ್ಷಗಳ ಹಿಂದೆ ಸುಪ್ರೀಂ ಕೋರ್ಟ್ “ಬೇಲ್ ನಿಯಮ, ಜೈಲು ಅಪವಾದ” ಎಂದು ಹೇಳಿತ್ತು. ಅನೇಕ ಕೇಸುಗಳಲ್ಲಿ ಮಧ್ಯ/ತಡರಾತ್ರಿ ಕೂಡ ಬೇಲನ್ನು ನೀಡಲಾಗಿದೆ.
“ಉಮರ್ ಖಾಲಿದ್ ನಿರಪರಾಧಿಯೆಂದು ಸಾಬೀತು ಮಾಡಲು ಸರ್ವೋಚ್ಚ ನ್ಯಾಯಾಲಯ ಇಪ್ಪತ್ತು ನಿಮಿಷ ಸಮಯಾವಕಾಶ ನೀಡಿದರೆ ಸಾಕು” ಎಂದು ಅವನ ಪರ ವಕೀಲರು ಹೇಳಿದ್ದರು. ಆದರೆ 2023ರಿಂದ ಇಲ್ಲಿಯವರೆಗೆ ಉಮರ್ನ ಜಾಮೀನು ಅರ್ಜಿ ಆಲಿಸಲು ಸುಪ್ರೀಮ್ ಕೋರ್ಟಿಗೆ 20 ನಿಮಿಷಗಳಷ್ಟು ವ್ಯವಧಾನವೂ ಇಲ್ಲವಾ ಅನ್ನೋ ಪ್ರಶ್ನೆಗಳು ಎದುರಾಗಿತ್ತು. ಈಗ ಇನ್ನೋಂದು ಪ್ರಶ್ನೆ ಎದುರಾಗಿದೆ. ಅದು ಯಾವ ಪ್ರಶ್ನೆ ಅನ್ನೋದನ್ನ ನಾನು ಹೇಳೋದಿಲ್ಲ. ಬದಲಿಗೆ ಒಂದಿಷ್ಟು ಉದಾಹರಣೆಗಳ ಸಮೇತ ನೋಡೋಣ. ಆ ಉದಾಹರಣೆಗಳು ಮುಗಿದ ಮೇಲೆ ನಿಮಗೆ ಆ ಪ್ರಶ್ನೆ ಏನು ಅನ್ನೋದು ಗೊತ್ತಾಗತ್ತೆ.
ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ, ಆಸಾರಾಮ ಬಾಪುಗೆ 2018 ಮತ್ತು 2023ರಲ್ಲಿ ಎರಡು ಬಾರಿ ಜೀವಾವಧಿ ಶಿಕ್ಷೆಯನ್ನು ನೀಡಲಾಗಿದೆ. ಆದರೆ ಅಕ್ಟೋಬರ್ 31, 2025 ಮತ್ತು ನವೆಂಬರ್ 5, 2025ರಂದು ಕ್ರಮವಾಗಿ ರಾಜಸ್ಥಾನ ಮತ್ತು ಗುಜರಾತ್ ಹೈ ಕೋರ್ಟ್ಗಳು ಈತನಿಗೆ ಆರೋಗ್ಯ ಕ್ಷೀಣಿಸುತ್ತಿರುವ ಕಾರಣದಿಂದ ಆರು ತಿಂಗಳ ಶಿಕ್ಷೆಯ ಅಮಾನತ್ತು/ಮಧ್ಯಂತರ ಬೇಲನ್ನು ನೀಡಿವೆ. ಇದನ್ನು ಈತನಿಂದ ಅತ್ಯಾಚಾರಕ್ಕೆ ಒಳಗಾದ ಒಬ್ಬ ಅಪ್ರಾಪ್ತ ವಯಸ್ಸಿನ ಹುಡುಗಿ ಸುಪ್ರೀಂ ಕೋರ್ಟಿನಲ್ಲಿ ಚಾಲೆಂಜ್ ಮಾಡಿದ್ದಾಳೆ.

ಇನ್ನೊಂದು ಪ್ರಕರಣ ಡೇರಾ ಸಚ್ಛಾ ಸೌಧ ಎಂಬ ಹರಿಯಾಣ ಮೂಲದ ಒಂದು ಆಧ್ಯಾತ್ಮಿಕ ಸಂಸ್ಥೆಯ ಮುಖ್ಯಸ್ಥ. ಪ್ರವಚನಗಳ ಜೊತೆ ಈತ ಸಿನಿಮಾಗಳಲ್ಲಿ, ನಾಟಕಗಳಲ್ಲಿ ನಟಿಸಿದ್ದಾನೆ. ಆಗಸ್ಟ್ 2017ರಲ್ಲಿ ಎರಡು ಅತ್ಯಾಚಾರ ಪ್ರಕರಣಗಳಲ್ಲಿ ಈತ ದೋಷಿ ಎಂದು ಕೋರ್ಟ್ ತೀರ್ಪನ್ನು ನೀಡಿತು. ಇದರ ಪರಿಣಾಮವಾಗಿ ಹರಿಯಾಣದ ಕೆಲವು ಪ್ರದೇಶಗಳಲ್ಲಿ ಮತ್ತು ನಮ್ಮ ದೇಶದ ರಾಜಧಾನಿ ದೆಹಲಿಯಲ್ಲಿ ಈತನ ಅನುಯಾಯಿಗಳು ಹಿಂಸಾ ಕೃತ್ಯಗಳಲ್ಲಿ ತೊಡಗಿದರು. ಅಲ್ಲದೆ ತನ್ನ ಇಬ್ಬರು ಅನುಯಾಯಿಗಳು ಮತ್ತು ಒಬ್ಬ ಪತ್ರಕರ್ತನ ಹತ್ಯೆಯಲ್ಲಿ ಈತನ ಕೈವಾಡವೂ ಇತ್ತೆಂಬ ಆಪಾದನೆಯೂ ಇತ್ತು. ಈ ಕಾರಣದಿಂದ ಈತನಿಗೆ ಜೀವಾವಧಿ ಶಿಕ್ಷೆಯೂ ಆಯಿತು. ಆದರೆ, ನಂತರದ ಕಾಲದಲ್ಲಿ, ಚುನಾವಣೆಗಳ ಸಂದರ್ಭಗಳಲ್ಲಿ, ಈ ಅತ್ಯಾಚಾರಿ ದೇವ ಮಾನವನಿಗೆ ಅನೇಕ ದಿನಗಳ ಪೆರೋಲ್ (Parole) ಸಿಗುತ್ತಿದೆ. ವರ್ಷದಲ್ಲಿ ಕನಿಷ್ಠ ಮೂರು ಬಾರಿ ಸುಮಾರು 30ರಿಂದ 40 ದಿನಗಳ ಪೆರೋಲ್ನಲ್ಲಿ ಈತ ತನ್ನ ಜೀವನ ಕಳೆಯುತ್ತಾ ಇದ್ದಾನೆ. ಏಕೆಂದರೆ ಸುಮಾರು ಐದು ಉತ್ತರದ ರಾಜ್ಯಗಳಲ್ಲಿ ಈತನಿಗೆ ಅಪಾರ ಸಂಖ್ಯೆಯ ಅನುಯಾಯಿಗಳಿದ್ದಾರೆ. ಈ ರಾಜ್ಯಗಳ ಆಡಳಿತಾರೂಢ ಬಿಜೆಪಿಗೂ ಈತನಿಗೂ ನಿಕಟ ಸಂಪರ್ಕವಿದೆ ಎಂಬುದು ರಹಸ್ಯದ ವಿಚಾರವಲ್ಲ.

ಮತ್ತೊಂದು ಪ್ರಕರಣ, ಉತ್ತರ ಪ್ರದೇಶದ ದಾದ್ರಿಯಲ್ಲಿ 2015ರ ಸೆಪ್ಟಂಬರ್ 28ರಂದು ಸುಮಾರು 52 ವರ್ಷದ ಕಮ್ಮಾರ ಮೊಹಮ್ಮದ್ ಅಖ್ಲಾಖ್ನ ಮೇಲೆ ಇಟ್ಟಿಗೆ ಮತ್ತು ರಾಡ್ಗಳಿಂದ ಒಂದು ಉದ್ರಿಕ್ತ ಗುಂಪು ಆಕ್ರಮಣ ಮಾಡಿ ಆತನನ್ನು ಹತ್ಯೆ ಮಾಡಿತು. ಅಖ್ಲಾಖ್ ಹಸುವಿನ ಮಾಂಸವನ್ನು ತನ್ನ ಮನೆಯ ಫ್ರಿಡ್ಜ್ನಲ್ಲಿ ಇಟ್ಟಿದ್ದಾನೆ ಎಂಬ ವದಂತಿಯನ್ನು ಆಧರಿಸಿ ಈ ಆಕ್ರಮಣ ಜರುಗಿತು. ಒಂದು ದಶಕದ ತರುವಾಯ ಉತ್ತರ ಪ್ರದೇಶದ ಬಿಜೆಪಿ ಸರ್ಕಾರ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ತು ಆರೋಪಿಗಳ ಮೇಲಿನ ಆಪಾದನೆಗಳನ್ನು ವಾಪಸ್ಸು ಪಡೆದುಕೊಳ್ಳುವುದಾಗಿ ಕೋರ್ಟಿಗೆ ತಿಳಿಸಿತು. ಪ್ರಸ್ತುತ ಈ ಕೇಸ್ ಕುರಿತಂತೆ 14 ಆಪಾದಿತರು ಜಾಮೀನಿನ ಮೇಲಿದ್ದಾರೆ. 2016ರಲ್ಲಿ ರವಿ ಸಿಸೋಡಿಯಾ ಎಂಬ ಆಪಾದಿತ ಜೈಲಿನಲ್ಲಿ ಸತ್ತ. ಆತನಿಗೆ ಸಕಲ ಗೌರವಗಳ ಅಂತ್ಯಕ್ರಿಯೆ ನಡೆಸಲಾಯಿತು. ಆತನ ಶವಪೆಟ್ಟಿಗೆ ಮೇಲೆ ನಮ್ಮ ರಾಷ್ಟ್ರಧ್ವಜವನ್ನು ಹೊದಿಸಲಾಯಿತು! ಡಿಸೆಂಬರ್ 2025ರಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದ ಫಾಸ್ಟ್ ಕೋರ್ಟ್ ಉತ್ತರ ಪ್ರದೇಶ ಸರ್ಕಾರದ ಆಪಾದನೆಗಳ ವಾಪಸ್ಸು ಪಡೆಯುವಿಕೆಯ ಮನವಿಯನ್ನು ತಿರಿಸ್ಕರಿಸಿತು. ಆಪಾದಿತರ ಪೈಕಿ ಸ್ಥಳೀಯ ಬಿಜೆಪಿ ನಾಯಕ ಸಂಜಯ್ ರಾಣಾನ ಮಗ ವಿಶಾಲ್ ರಾಣಾ ಕೂಡ ಇದ್ದಾನೆ.
ಮತ್ತೊಂದು ಪ್ರಕರಣ ಇದೆ. ಜೂನ್ 2017ರಲ್ಲಿ ಉತ್ತರ ಪ್ರದೇಶದ ಉನ್ನಾಂವ್ನ ಕುಲದೀಪ್ ಸಿಂಗ್ ಸೆಂಗರ್ ಎಂಬ ಶಾಸಕನ ಮನೆಯಲ್ಲಿ ಒಬ್ಬ 17 ವರ್ಷದ ಹುಡುಗಿಯನ್ನು ಈ ಶಾಸಕ ಅತ್ಯಾಚಾರ ಮಾಡಿದ ಎಂದು ಆ ಹುಡುಗಿ ಆಪಾದಿಸಿದಳು. 2018ರ ಏಪ್ರಿಲ್ನಲ್ಲಿ ನ್ಯಾಯಾಂಗ ಬಂಧನದಲ್ಲಿ ಇದ್ದ ಅತ್ಯಾಚಾರ ಸಂತ್ರಸ್ತೆಯ ತಂದೆಯನ್ನು ಸೆಂಗರ್ನ ಸಹೋದರ ಮತ್ತು ಆತನ ಬೆಂಬಲಿಗರು ಹತ್ಯೆಯನ್ನು ಮಾಡಿದರು ಎಂದು ಆಪಾದಿಸಲಾಯಿತು. ಜುಲೈ 2019ರಲ್ಲಿ ಸಂತ್ರಸ್ಥೆ ಪ್ರಯಾಣ ಮಾಡುತ್ತಿದ್ದ ಕಾರ್ಗೆ ಟ್ರಕ್ ಗುದ್ದಿತು. ಈ ಅಪಘಾತದಲ್ಲಿ ಆಕೆಯ ವಕೀಲ (ತರುವಾಯ)ಮತ್ತು ಇಬ್ಬರು ಚಿಕ್ಕಮ್ಮಂದಿರು ಪ್ರಾಣವನ್ನು ಕಳೆದುಕೊಂಡರು. ಈ ದುರ್ಘಟನೆಯ ಹಿಂದೆ ಯಾರ ಕೈವಾಡ ಕೆಲಸವನ್ನು ಮಾಡಿತು ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಸೆಂಗರ್ ಪ್ರಸ್ತುತ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿದ್ದಾನೆ. ದೆಹಲಿಯ ಹೈಕೋರ್ಟ್ 23, 2025ರಂದು ಸೆಂಗರ್ನ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಿ, ಆತನಿಗೆ ಜಾಮೀನನ್ನು ನೀಡಿತು. ಇದನ್ನು ಸಿಬಿಐ ಸುಪ್ರೀಂ ಕೋರ್ಟ್ನಲ್ಲಿ ಚಾಲೆಂಜ್ ಮಾಡಿತು. ಡಿಸೆಂಬರ್ 29, 2025ರಂದು ಸುಪ್ರೀಂ ಕೋರ್ಟ್ ಜಾಮೀನು ಆದೇಶಕ್ಕೆ ತಡೆಯಾಜ್ಞೆಯನ್ನು ನೀಡಿದೆ.






