Rss 100 ಹಿನ್ನೆಲೆಯಲ್ಲಿ ಸಾಮಾಜಿಕ ಸಾಮರಸ್ಯ, ಕುಟುಂಬ ಪ್ರಬೋಧನೆ, ಪರಿಸರ ಸಂರಕ್ಷಣ, ಸ್ವದೇಶಿ ಜೀವನ ಶೈಲಿ, ನಾಗರಿಕ ಕರ್ತವ್ಯಗಳ ಕುರಿತು ಕಾರ್ಯಕ್ರಮ ಹಮ್ಮಿಕೊಳ್ಳಲಿದೆ ಎಂದು ತಿಳಿದುಬಂದಿದೆ
ಬಿಜೆಪಿ ಮುಖಂಡ ಬಿ ಎಲ್ ಸಂತೋಷ್ ಅವರು ತಮ್ಮ ಫೇಸ್ಬುಕ್ನಲ್ಲಿ, “ಈಗ Rss ನಿಂದ 100ನೇ ವರ್ಷದ ಅಂಗವಾಗಿ ನಡೆದಿರುವುದು ಒಂದು ಕಾರ್ಯಕ್ರಮ ಮಾತ್ರ, ಮುಂದೆ ಇನ್ನೂ ಇದೆ” ಎಂದು ಬರೆದಿದ್ದರು. ಅದಕ್ಕೆ ಪ್ರತಿಕ್ರಿಯೆ ನೀಡಿದ ಸ್ವಯಂ ಸೇವಕನೊಬ್ಬ “ಪಿಕ್ಚರ್ ಇನ್ನೂ ಬಾಕಿ ಇದೆ” ಎಂದು ಬರೆದಿದ್ದ.
Rss 100 ಹಿನ್ನೆಲೆಯಲ್ಲಿ ಏನು ಕಾರ್ಯಕ್ರಮ ಇರಬಹುದು ಎಂದು ನೋಡಿದಾಗ ಒಂದಿಷ್ಟು ಮಾಹಿತಿ ಸಿಕ್ಕಿತು. ಸಾಮಾಜಿಕ ಸಾಮರಸ್ಯ, ಕುಟುಂಬ ಪ್ರಬೋಧನೆ, ಪರಿಸರ ಸಂರಕ್ಷಣ, ಸ್ವದೇಶಿ ಜೀವನ ಶೈಲಿ, ನಾಗರಿಕ ಕರ್ತವ್ಯಗಳು, ಇವುಗಳ ಕುರಿತು ಕಾರ್ಯಕ್ರಮ ಹಮ್ಮಿಕೊಳ್ಳುವುದು. ಅಸ್ಪೃಶ್ಯತೆ ಸಮಾಜಕ್ಕೆ ಪಾಪ ಮತ್ತು ಕಳಂಕ’ – ಇದರ ನಿರ್ಮೂಲನಕ್ಕೆ ಕಾರ್ಯಕ್ರಮ.
ಶತಾಬ್ದಿ ವರ್ಷ ವಿಶೇಷ : ಗಣವೇಶದೊಡನೆ ಸ್ಥಳೀಯ ಮಟ್ಟದಲ್ಲಿ ಸೇವಕರ ಸಭೆಗಳು, ಆಯೋಜನೆಗಳು. ಪ್ರತಿ ಗ್ರಾಮ, ಪ್ರತಿ ಬಡಾವಣೆ, ಮನೆ ಮನೆಗೆ ಸಂಪರ್ಕ- ನವೆಂಬರ್ 2025ರಿಂದ–ಜನವರಿ 2026. ಸಂಘ ಸಾಹಿತ್ಯ ವಿತರಣೆ ಹಾಗೂ ಸ್ಥಳೀಯ ಕಾರ್ಯಕ್ರಮಗಳು. ‘ಹಿಂದೂ ಸಮಾವೇಶ’ ಕಾರ್ಯಕ್ರಮಗಳು. ಸ್ಥಳೀಯ ಸಮರಸ ಸಭೆಗಳು, ಪ್ರಮುಖ ನಾಗರಿಕ ಸಂವಾದಗಳು,
ರಾಷ್ಟ್ರೀಯ ವಿಷಯಗಳಲ್ಲಿ ವಿವೇಕಪೂರ್ಣ ಚರ್ಚೆ, ತಪ್ಪು ವಿವಾದಗಳ ನಿವಾರಣೆ.
15–30 ವರ್ಷ ಯುವಕರಿಗೆ: ರಾಷ್ಟ್ರ ನಿರ್ಮಾಣ, ಸೇವಾ ಚಟುವಟಿಕೆಗಳು, ಪಂಚ ಬದಲಾವಣೆ ಕುರಿತಾದ ವಿಶೇಷ ಕಾರ್ಯಕ್ರಮಗಳು. ಈ ಸೇವಾ ಕಾರ್ಯಕ್ರಮಗಳು ಏನು ಎಂದು ಒಂದಿಬ್ಬರ ಬಳಿ ಕೇಳಿದೆ. ಅಂತಹ ಪೂರ್ಣ ಮಾಹಿತಿ ಇಲ್ಲ. ಆದರೆ 100ನೇ ವರ್ಷ ನೆನಪಿನಲ್ಲಿ, ಕೆಲವು ರಾಜ್ಯಗಳಲ್ಲಿ ಹಿಂದೂ ಹೋರಾಟದಲ್ಲಿ ಪಾಲ್ಗೊಂಡು ಕಷ್ಟದಲ್ಲಿರುವ ನೂರು ಯುವಕರಿಗೆ (ಸ್ವಯಂ ಉದ್ಯೋಗ ಮಾಡಲು ಆರ್ಥಿಕವಾಗಿ ಸಹಾಯ), ಬದುಕು ಕಟ್ಟಿ ಕೊಡಲು ಯೋಜನೆ ಇದೆಯಂತೆ. ಅದೂ ಕರ್ನಾಟಕದಲ್ಲೂ ಇದೆಯಂತೆ. ಹಾಗೆ ಸಂಘಕ್ಕೆ ಸೇರಿದ ಮತ್ತು ಸಂಘ ಪರಿವಾರದ ನಾಯಕರು ನಡೆಸುವ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಒಂದು ರಾಜ್ಯದಲ್ಲಿ ನೂರು ಬಡ ವಿದ್ಯಾರ್ಥಿಗಳಿಗೆ ಸಂಘವೇ ಶುಲ್ಕ ನೀಡುವ ಯೋಜನೆ ಇದೆಯಂತೆ. ಬಡ ಹಿಂದೂ ಕುಟುಂಬಗಳಿಗೆ ಸಾಮೂಹಿಕವಾಗಿ ಆರೋಗ್ಯ ವಿಮೆ ಮಾಡುವ ಯೋಜನೆ ಕೂಡಾ ಇದೆಯಂತೆ.
ಪರವಾಗಿಲ್ಲ ಕೆಲವು ಒಳ್ಳೆಯ ಯೋಜನೆಯಿದೆ. ಆದರೆ ಇದು ನನಗೆ ಅಧಿಕೃತವಾಗಿ ಸಿಕ್ಕ ಮಾಹಿತಿ ಅಲ್ಲ. ತಪ್ಪುಗಳಿದ್ದರೆ ಬಿ ಎಲ್ ಸಂತೋಷರು ಅಥವಾ ಸಂಘದ ಮುಖಂಡರು ಸರಿ ಮಾಡಬಹುದು. ನಾನೂ ತಿದ್ದುಪಡಿ ಮಾಡುವೆ.
ಆದರೆ, ಪ್ರಶ್ನೆ – 100 ವರ್ಷಗಳ ನಂತರವೂ ಅಸ್ಪೃಶ್ಯತೆ ಒಂದು ಪಾಪ, ಅದರ ವಿರುದ್ಧ ಕಾರ್ಯಕ್ರಮ ಎಂದು ಇವರುಗಳು ಹೇಳಿದರೆ, ಈ ಪಿಡುಗು ಇನ್ನು ಗಂಭೀರವಾಗಿದೆ ಎಂದು ಒಪ್ಪಿಕೊಂಡಂತಾಯಿತು. ಹಾಗಾದರೆ ಈ ಕುರಿತು ಈಗಲೂ ಮುಕ್ತ ಸಂವಾದ ಮಾಡಿದರೆ ಇವರದೇ ಜನಗಳು ಮೈ ಮೇಲೆ ಏರಿ ಬರುವಂತಿಲ್ಲ. ಅಲ್ಲವೇ?
ಈ ಸ್ವದೇಶೀ ಜೀವನ ಶೈಲಿ ಅಂದರೆ ಏನು? ಯಾರ ಕುಟುಂಬಗಳ ಜೀವನ ಶೈಲಿಯ ಬಗ್ಗೆ ನಿಮ್ಮ ಚಳವಳಿ? ನಾಗರಿಕ ಕರ್ತವ್ಯ ಎಂದರೇನು? ನೀವು ಪ್ರಸ್ತುತ ಸಂವಿಧಾನ ಒಪ್ಪುತ್ತಿರೋ ಇಲ್ಲವೋ. ಘರ್ ವಾಪಸಿ ಎಂದು ವಾಪಸ್ ಕರೆದುಕೊಂಡು ಬಂದ ಕುಟುಂಬಗಳ ಪ್ರಸ್ತುತ ಪರಿಸ್ಥಿತಿಯ ಸಮಗ್ರ ವರದಿ ಬಿಡುಗಡೆ ಮಾಡಿದ್ದೀರಾ?
ನೋಡೋಣ, Rss ಮುಖಂಡರು ಉತ್ತರ ನೀಡಿಯಾರು.

ಎಂ ಜಿ ಹೆಗಡೆ, ಮಂಗಳೂರು
ಲೇಖಕ, ಜನಪರ ಹೋರಾಟಗಾರ




