ಈ ನೂರು ವರ್ಷಗಳ ನಿಮ್ಮ ಆಲೋಚನೆಗಳು ಇನ್ನೂ ಯಾಕೆ ಬದಲಾಗುತ್ತಿಲ್ಲ? ನಿಮ್ಮಲ್ಲಿ ಕೇವಲ ಬ್ರಾಹ್ಮಣರು ಮಾತ್ರ ಪ್ರಮುಖ ಸ್ಥಾನದಲ್ಲಿ ಇರುತ್ತಾರೆ ಯಾಕೆ? ಈಗ ಮೇಲ್ಜಾತಿ ಎಂದರೆ ಕರ್ನಾಟಕದಲ್ಲಿ ಬ್ರಾಹ್ಮಣರು ಮಾತ್ರ ಎಂಬಂತಿದೆ. ಯಾಕೆಂದರೆ, ಒಕ್ಕಲಿಗರು ಕುವೆಂಪು ಪ್ರತಿಪಾದಿತ ವಿಶ್ವಧರ್ಮದ ಬಗ್ಗೆ ಮಾತಾಡುತ್ತಿದ್ದಾರೆ, ದಲಿತರು ಅಂಬೇಡ್ಕರ್ ಪ್ರತಿಪಾದಿತ ಬೌದ್ದಧರ್ಮದ ಬಗ್ಗೆ ಮಾತಾಡುತ್ತಿದ್ದಾರೆ. ಲಿಂಗಾಯತರು ಬಸವಣ್ಣನವರ ಪ್ರತಿಪಾದಿತ ʼಲಿಂಗಾಯತ ಧರ್ಮʼದ ಬಗ್ಗೆ ಮಾತಾಡುತ್ತಿದ್ದಾರೆ. ಈಗಲೂ ಕಾಲ ಮಿಂಚಿಲ್ಲ. ಇಲ್ಲಿನ ಹಲವು ಧರ್ಮಗಳ ತಾತ್ವಿಕತೆಯನ್ನು ಭಾರತೀಯ ತತ್ವಮೀಮಾಂಸೆಯ ಭಾಗ ಎಂದು ಒಪ್ಪಿಕೊಳ್ಳಿ.
ಈಗ ಆರ್ಥಿಕ, ಶೈಕ್ಷಣಿಕ, ಔದ್ಯೋಗಿಕ ಗಣತಿ ಕರ್ನಾಟಕ ಸರ್ಕಾರದಿಂದ ನಡೆಯುತ್ತಿದೆ. ಮೊದಲಿಗೆ ಇದಕ್ಕೆ ಬಿಜೆಪಿಯ ಪ್ರಲ್ಹಾದ ಜೋಶಿ ಹಾಗೂ ತೇಜಸ್ವಿ ಸೂರ್ಯನಂತವರು ವಿರೋಧ ವ್ಯಕ್ತಪಡಿಸಿದರು. ಪ್ರಲ್ಹಾದ ಜೋಶಿಯಂತೂ ನಾನು ಗಣತಿಗೆ ಸಹಕಾರ ನೀಡುವುದಿಲ್ಲ ಎಂದರು. ಇದರ ಹಿನ್ನೆಲೆ ಬಹಳ ಸ್ಪಷ್ಟ ಇದೆ. ಮೇಲ್ಜಾತಿಯ ಅದರಲ್ಲೂ ಬ್ರಾಹ್ಮಣ್ಯದ ಭಿನ್ನಭೇದಗಳ ತಾತ್ವಿಕತೆ ಈ ಗಣತಿಯಿಂದ ನುಚ್ಚುನೂರಾಗುತ್ತದೆ ಎಂಬ ಭಯ. ಇದರ ಮುಂದುವರಿಕೆ ಎಂಬಂತೆ ನಾರಾಯಣಮೂರ್ತಿ, ಸುಧಾಮೂರ್ತಿ ದಂಪತಿಗಳು ನಾವು ಮುಂದುವರಿದವರು ಹಿಂದುಳಿದವರಲ್ಲ, ಹಾಗಾಗಿ ಗಣತಿಗೆ ಸಹಕರಿಸುವುದಿಲ್ಲ ಎಂದರು.
ಸಿದ್ದರಾಮಯ್ಯನವರು, “ಗ್ಯಾರಂಟಿ ಯೋಜನೆಗಳು ಕೇವಲ ಹಿಂದುಳಿದವರಿಗೆ ಮಾತ್ರ ಕೊಡುತ್ತಿದ್ದೇವಾ? ಎಲ್ಲಾ ಜಾತಿ, ಧರ್ಮಗಳು ಪಡೆಯುತ್ತಿಲ್ಲವಾ? ಇದು ಆರ್ಥಿಕ, ಸಾಮಾಜಿಕ ಅಂಕಿಅಂಶಗಳ ಗಣತಿ ಎಲ್ಲರೂ ಭಾಹವಹಿಸಿ ಪೂರ್ವಗ್ರಹ ಬೇಡ” ಎಂಬಂತೆ ಮಾತಾಡಿದರು.
ನಾನು ಒಂದು ಬೇಕರಿಗೆ ಟೀ ಕುಡಿಯಲು ಹೋಗಿದ್ದಾಗ ಅಲ್ಲಿಗೆ ಬಂದ ಒಬ್ಬ RSS ಕಾರ್ಯಕರ್ತ ಈ ಗಣತಿಯನ್ನು ತಿರಸ್ಕರಿಸಿದ್ದಾಗಿ “ನೀವು ಹೇಳಿದಂತೆ ಅಲ್ಲ, ನಾನು ಹೇಳಿದಂತೆ ಬರೆದುಕೊಳ್ಳಿ” ಎಂದು ಹೇಳಿದೆ ಎಂದು ವಾದಿಸುತ್ತಿದ್ದ. ಇವನಿಗೆ ಬೆಂಬಲವಾಗಿ ಬೇಕರಿ ಮಾಲೀಕ ಹಾಗೂ ಇನ್ನೊಬ್ಬ ವ್ಯಕ್ತಿ ಯಥಾಪ್ರಕಾರ ಸಿದ್ದರಾಮಯ್ಯನವರಿಗೆ ಬೈಯುತ್ತಾ ಕಾಲಕಳೆದರು. ಮುಂದುವರೆದು ಆರ್ಎಸ್ಎಸ್ ಕಾರ್ಯಕರ್ತ ಪಥಸಂಚಲನಕ್ಕೆ ಹೋಗುವುದಾಗಿ, ನಾವು ಆರ್ಎಸ್ಎಸ್ ವಿಚಾರಗಳ ಸಣ್ಣಪುಸ್ತಕವನ್ನು ಮನೆಮನೆಗೆ ಹಂಚುವುದಾಗಿ ಹೇಳಿದ. ಅಲ್ಲೆ ಇದ್ದ ವ್ಯಕ್ತಿ ತನ್ನ ಮಗನನ್ನು ಶಾಖೆ ಕಳಿಸುವುದಾಗಿ, ಎಲ್ಲಿ ಕಳಿಸುವುದು? ಎಂದು ಕೇಳಿದ್ದಕ್ಕೆ ಆತ ಸರ್ಕಾರಿ ಶಾಲೆಯ ಅಡ್ರೆಸ್ ಕೊಟ್ಟ.
ಇದಾದ ಕೆಲದಿನಗಳ ನಂತರ ನಾನು ಫೇಸ್ಬುಕ್ ನಲ್ಲಿ ದೇವನೂರ ಮಹಾದೇವರ ಆರೆಸ್ಸೆಸ್ ಆಳ ಅಗಲ ಕೃತಿಯನ್ನು ಕಾಂಗ್ರೆಸ್ ಮನೆಮನೆಗೆ ಹಂಚುವ ಕಾರ್ಯಕ್ರಮ ಕೈಗೊಳ್ಳಲಿ ಎಂದು ಬರೆದೆ. ಅಷ್ಟರಲ್ಲಾಗಲೇ ಸರ್ಕಾರಿ ಸ್ಥಳಗಳಲ್ಲಿ ಆರ್ಎಸ್ಎಸ್ ಕಾರ್ಯಕ್ರಮ ನಡೆಯಕೂಡದು ಎಂದು ಪ್ರಿಯಾಂಕ್ ಖರ್ಗೆಯವರ ಮಾತು ಅಂತಹ ಕಾರ್ಯಕ್ರಮಕ್ಕೆ ಸರ್ಕಾರದ ಅನುಮತಿ ಪಡೆಯಬೇಕು ಎನ್ನುವ ಮಾತುಗಳು ಚರ್ಚೆಯಲ್ಲಿ ಇತ್ತು. ಕಡೆಗೆ ಸಚಿವ ಸಂಪುಟ ಪ್ರಿಯಾಂಕ್ ಖರ್ಗೆಯವರ ನಿಲುವಿಗೆ ಸಮ್ಮತಿ ಸೂಚಿಸಿ ಅಧಿಸೂಚನೆಯನ್ನು ಹೊರಡಿಸಿತು. ಈಗ ಮುಖ್ಯ ಚರ್ಚೆಗೆ ಬರುತ್ತೇನೆ.
ನಾನು ಫೇಸ್ ಬುಕ್ ನಲ್ಲಿ ದೇವನೂರರ ಪುಸ್ತಕ ಕಾಂಗ್ರೆಸ್ ಹಂಚಲಿ ಅಂದ ಕೂಡಲೇ ಆರ್ಎಸ್ಎಸ್ ವಕ್ತಾರರಾದ ವಾದಿರಾಜ್ ರವರು ನನ್ನ ಆಲೋಚನೆಯ ಮೇಲೆ ಮುಗಿಬಿದ್ದರು. ಅಲ್ಲದೆ ದೇವನೂರರು ಸ್ವರಾಜ್ ಪಾರ್ಟಿಯನ್ನು ಬಿಟ್ಟು ಕಾಂಗ್ರೆಸ್ ವಕ್ತಾರರಂತೆ ವರ್ತಿಸುವುದು ಸರಿಯಲ್ಲ ಎಂಬಂತೆ ವಾದಿಸಿದರು. ನಾನು ಕಾಂಗ್ರೆಸ್ ಬೆಂಬಲ ಎನ್ನುವುದು ವಿರೋಧಪಕ್ಷಗಳು ಒಗ್ಗೂಡಿರುವ ಭಾರತ್ ಜೋಡೋ ಭಾಗ ಅಂತ ವಾದಿಸಿದೆ. ಮುಂದುವರೆದು ನಿಮ್ಮ ಆರ್ಎಸ್ಎಸ್ ಶಾಖೆಗಳಲ್ಲಿ ಏಕೆ ವಿವೇಕಾನಂದರ, ರಮಣರ, ಯೋಗಾನಂದ ಪರಮಹಂಸರ, ನಾರಾಯಣಗುರುಗಳ ವಿಚಾರಗಳನ್ನು ಹೇಳುವುದಿಲ್ಲ. ಇಂಥ ಸಹಬಾಳ್ವೆಯ, ಸೌಹಾರ್ದ ಪರಂಪರೆಯ ಬದಲಾಗಿ ಅನ್ಯಧರ್ಮ ದ್ವೇಷ ಹಾಗೂ ಶ್ರೇಣಿಕೃತ ಸಮಾಜದ ಪರಿಕಲ್ಪನೆಗಳನ್ನು ಬಿತ್ತಿ ಮನಸ್ಸನ್ನು ಕಲುಷಿತಗೊಳಿಸುತ್ತಿದ್ದೀರ ಎಂದು ವಾದಿಸಿದೆ. ವಾದ ಮುಂದುವರೆಯುತ್ತಾ ಹೋಯಿತು. ಈ ಚರ್ಚೆಯಲ್ಲಿ ಹಲವು ಜನ ಭಾಗವಹಿಸಿ ನನ್ನನ್ನು ಬೆಂಬಲಿಸಿ, ವಿರೋಧಿಸಿ ಕಮೆಂಟ್ ಹಾಕಿದರು. ಈ ಮಧ್ಯೆ ಮೈಸೂರಲ್ಲಿ ಬೌದ್ದ ಸಮ್ಮೇಳನ ವ್ಯಾಪಕ ಯಶಸ್ವಿಯಾಯಿತು. ಮುಂದಿನ ಬೌದ್ದ ಸಮ್ಮೇಳನ ಚಾಮರಾಜನಗರದಲ್ಲಿ ಆಯೋಜನೆಗೊಳ್ಳುವುದಾಗಿ ಧಮ್ಮಜ್ಯೋತಿಯನ್ನು ಸಿದ್ದರಾಮಯ್ಯ ಹಸ್ತಾಂತರಿಸಿದರು.

ನಿವೃತ್ತ ಐ.ಎ.ಎಸ್ ಅಧಿಕಾರಿ ಜಾಮದಾರ್ ಪ್ರತ್ಯೇಕ ಲಿಂಗಾಯಿತ ಧರ್ಮ ಅಸ್ತಿತ್ವ ಹಾಗೂ ಅದರ ತಾತ್ವಿಕ ಹಿನ್ನಲೆಯ ಬಗ್ಗೆ ಸಂದರ್ಶನದಲ್ಲಿ ಮಾತಾಡಿದ್ದು ಫೇಸ್ ಬುಕ್ ನಲ್ಲಿ ನೋಡಿದೆ. ಈ ಎಲ್ಲಾ ಚರ್ಚೆಗಳು ಮತ್ತೆ ಈ ಆರ್ಎಸ್ಎಸ್ ಪ್ರತಿಪಾದಿಸುವ ವೈದಿಕ ನೆಲೆಯ ಶ್ರೇಣೀಕರಣದ ಚಿಂತನೆ ಅದಕ್ಕೆ ಉಂಟಾಗಿರುವ ಪ್ರತಿರೋಧದ ಕುರಿತು ನನ್ನನ್ನು ಯೋಚನೆಗೆ ದೂಡಿತು. ಅಂಥ ಆಲೋಚನೆಗಳನ್ನು ಈ ಲೇಖನದ ಮೂಲಕ ಹಂಚಿಕೊಳ್ಳಲು ಪ್ರಯತ್ನಿಸುತ್ತೇನೆ. ಯಾಕೆಂದರೆ ಆರ್ಎಸ್ಎಸ್ ನೂರು ವರ್ಷಗಳ ತನ್ನ ಇತಿಹಾಸವನ್ನು ಮೆಲುಕು ಹಾಕುತ್ತಿರುವಾಗ ಹಲವಾರು ಚಿಂತಕರು, ಸಾಹಿತಿಗಳು, ರಾಜಕಾರಣಿಗಳು ಪ್ರತಿಕ್ರಿಯಿಸುತ್ತಿದ್ದಾರೆ.
ಪ್ರಜಾವಾಣಿಯ ದೇವನೂರರ ಲೇಖನ ಹಲವು ಚರ್ಚೆ ಹುಟ್ಟು ಹಾಕಿದೆ. ಬಿ.ಕೆ ಹರಿಪ್ರಸಾದ್ ಮುಂತಾದವರು ದೇವನೂರರನ್ನು ಬೆಂಬಲಿಸಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಬಹುಷ ಆರ್ಎಸ್ಎಸ್ ತನ್ನ ನೂರು ವರ್ಷದ ಸಂಭ್ರಮದಲ್ಲಿ ತನ್ನ ತಾತ್ವಿಕತೆಯ ಬಗ್ಗೆ ಬೇರೆ ಬೇರೆ ವಲಯದ ಆಲೋಚನೆಗಳ ವಲಯಗಳಿಂದ ವಿರೋಧವಾಗಿ ಇಷ್ಟೊಂದು ಪ್ರತಿಕ್ರಿಯೆ ಬರುತ್ತೆ ಎಂದು ಅಂದುಕೊಂಡಿರಲಿಲ್ಲವೇನೋ. ಅದು ಅಲ್ಲದೆ ಈ ದಿನ ಡಾಟ್.ಕಾಮ್ ಆರ್.ಎಸ್.ಎಸ್ ಕರಾಳ ಮುಖಗಳ ಬಗ್ಗೆ ಬಂದಿರುವ ಎ.ಕೆ ಸುಬ್ಬಯ್ಯ, ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಮುಕುಂದರಾಜ್, ದೇವನೂರ ಮಹದೇವ, ಹನುಮಂತೇಗೌಡ ಮುಂತಾದವರ ಪುಸ್ತಕಗಳ ಬಗ್ಗೆ ಯತಿರಾಜ್ ಮೂಲಕ ವಿವರಿಸಿ ವರದಿಯನ್ನು ಮಾಡಿತು. ಇವೆಲ್ಲವೂ ಈಗ ಆರ್ಎಸ್ಎಸ್ ತಾತ್ವಿಕತೆ ಕುರಿತು ಗಂಭೀರ ಚರ್ಚೆ ಹುಟ್ಟು ಹಾಕಿದೆ ಅಲ್ಲದೆ ಈಗ ಆರ್ಎಸ್ಎಸ್ ವಕ್ತಾರರು ಅವಾಚ್ಯ ಶಬ್ದಗಳಿಂದ ಬೈದರೆ, ಕೊಲೆ ಬೆದರಿಕೆ ಹಾಕಿದರೆ ಸಾಮಾಜಿಕ ಜಾಲತಾಣಗಳಲ್ಲಿ ಆ ವ್ಯಕ್ತಿ ಅಥವಾ ವ್ಯಕ್ತಿತ್ವದ ಬಗ್ಗೆ ವಿವರಿಸಿ ಅಂಥವರ ಸದ್ದನ್ನು ಅಡಗಿಸಲಾಗುತ್ತಿದೆ. ಮುಖ್ಯವಾಗಿ ಗಾಂಧಿ ಕೊಲೆಯಿಂದ ಆರ್ಎಸ್ಎಸ್ ಬಗ್ಗೆ ಈ ದೇಶದಲ್ಲಿ ದೊಡ್ಡ ಚರ್ಚೆ ಶುರುವಾಯಿತು. ಇದಕ್ಕೆ ಚಿತ್ಪಾವನ ಬ್ರಾಹ್ಮಣರ ಜಾತಿ ಶ್ರೇಷ್ಠತೆಯೇ ಪ್ರಮುಖ ಕಾರಣ ಎನ್ನುವುದು ಗುಟ್ಟಾಗಿ ಏನು ಉಳಿದಿಲ್ಲ. ಗಾಂಧೀಜಿ ಅಸ್ಪೃಶ್ಯರನ್ನು, ಮುಸ್ಲಿಮರನ್ನು ಮುಖ್ಯವಾಹಿನಿಗೆ ತಂದು ತಮ್ಮ ಜಾತಿ ಶ್ರೇಷ್ಠತೆಯನ್ನು ತಲೆಕೆಳಗು ಮಾಡುತ್ತಿದ್ದಾರೆಂಬುದು ಈ ಕೊಲೆಯ ಹಿಂದಿನ ಉದ್ದೇಶ. ಈಗ ಕಾಂಗ್ರೆಸ್ನೊಳಗೆ ಈ ಕೊಲೆಯನ್ನು ಪ್ರಶ್ನಿಸುವಂತೆ ರಾಹುಲ್ ಗಾಂಧಿ ಹಲವು ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ಅದನ್ನು ಮುಂದುವರೆಸಿ ಸಿದ್ದರಾಮಯ್ಯ, ಪ್ರಿಯಾಂಕ್ ಖರ್ಗೆ, ಬಿ.ಕೆ. ಹರಿಪ್ರಸಾದ್, ಸಂತೋಷ್ ಲಾಡ್ ಮುಂತಾದವರು ಅಖಾಡಕ್ಕೆ ಇಳಿದಿದ್ದಾರೆ. ಗಾಂಧಿ ಕೊಲೆಯ ಮುಂದುವರಿಕೆಯಾಗಿ ಕಲ್ಬುರ್ಗಿ, ಗೌರಿ, ಪಾನ್ಸರೆ, ದಾಬೋಲ್ಕರ್ ಕೊಲೆಗಳು ಸಂಘಪರಿವಾರದಿಂದ ನಡೆದು, ಈಗ ಗೌರಿಯ ಮೂಲಕವಾಗಲಿ, ಗಾಂಧಿ ಮೂಲಕವಾಗಲಿ, ಕಲ್ಬುರ್ಗಿ ಮೂಲಕವಾಗಲಿ ಆ ಆಲೋಚನೆಗಳನ್ನು ಬೆಂಬಲಿಸಿ ಸಾವಿರಾರು ನದಿಗಳು ಹೋರಾಟದ ಸಾಗರಕ್ಕೆ ಸೇರಲು ಜೊತೆಯಾಗಿವೆ. ಬರಿ ಅಷ್ಟೇ ಅಲ್ಲ ಭಾರತದ ಮುಖ್ಯ ನ್ಯಾಯಮೂರ್ತಿಗಳ ಮೇಲೆ ಚಪ್ಪಲಿ ಎಸೆದಿದ್ದು ಕೂಡ ಈ ಸಂಘಪರಿವಾರದ ಆಲೋಚನೆಯ ಭಾಗವೇ ಆಗಿದೆ.
ನ್ಯಾಯಮೂರ್ತಿಗಳ ತಾಯಿ “ನಾನು ಅಂಬೇಡ್ಕರ್ ವಾದಿ ಆರ್ಎಸ್ಎಸ್ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ” ಎಂದು ಹೇಳಿದ್ದು, ನ್ಯಾಯಮೂರ್ತಿಗಳು ಸಂಸತ್ ಹಾಗೂ ನ್ಯಾಯಾಲಯಕ್ಕಿಂತ ಸಂವಿಧಾನವೇ ದೊಡ್ಡದು ಎಂದು ಹೇಳಿದ್ದು, ಮನುವಾದಿ ಶ್ರೇಣೀಕರಣದ ತಾತ್ವಿಕತೆಯನ್ನು ಹೊಂದಿರುವ ಸಂಘಪರಿವಾರದ ಮುಖ್ಯ ಅಂಗವಾದ ಆರ್ಎಸ್ಎಸ್ ನ್ನು ಕೆರಳಿಸಿದೆ. ತಮ್ಮ ಆರ್.ಎಸ್.ಎಸ್ ಶಾಖೆಗಳಲ್ಲಿ ಸಂವಿಧಾನ ಬದಲಾಯಿಸಬೇಕೆಂಬ ಇವರ ಹುನ್ನಾರಗಳು ಗೌಪ್ಯವಾಗಿ ನಡೆಯುತ್ತಿದ್ದದ್ದು ಈಗ ಬಹಿರಂಗವಾಗಿ ಎಲ್ಲರನ್ನು ಎಚ್ಚರಿಸಿದೆ. ಈಗ ಆರ್ಎಸ್ಎಸ್ ತಾತ್ವಿಕತೆಯನ್ನು ವಿರೋಧಿಸುತ್ತಿರುವವರಿಗೆ ಅವರ ಅವಾಚ್ಯ ಬೈಗುಳಗಳಾಗಲಿ, ಕೊಲೆ ಬೆದರಿಕೆಗಳಾಗಲಿ ತಟ್ಟುತ್ತಿಲ್ಲ. ಇಷ್ಟೊಂದು ತೀವ್ರತರವಾಗಿ ಆರ್ಎಸ್ಎಸ್ ಅನ್ನು ವಿರೋಧಿಸುತ್ತಿರುವ ಹಿನ್ನಲೆಯ ತಾತ್ವಿಕತೆಯನ್ನು ಆರ್ಎಸ್ಎಸ್ ಸ್ವವಿಮರ್ಶೆಯಾಗಿ ತೆಗೆದುಕೊಳ್ಳುತ್ತಲೇ ಇಲ್ಲ. ಅದು ಮತ್ತೆ ಮತ್ತೆ ತನ್ನ ಮನುಸ್ಮೃತಿಯ ವಾದವನ್ನೆ ಪ್ರತಿಪಾದಿಸುತ್ತಿದೆ. ಇದರ ಮುಖ್ಯ ಪ್ರತಿರೋಧ ಈಗ ಗಣತಿಯಲ್ಲಿ ಸೇರಿಸಲು ಹೊರಟಿರುವ ಬೌದ್ದಧರ್ಮ, ಲಿಂಗಾಯಿತ ಧರ್ಮ ಹಾಗೂ ವಿಶ್ವಮಾನವ ಧರ್ಮದ ಪ್ರತಿಪಾದನೆಗಳೆ ಸಾಕ್ಷಿ.

ಇಷ್ಟಾದರೂ ಹಿಂದೂ ಧರ್ಮವನ್ನು ಶುಚಿಗೊಳಿಸಿ ಅಲ್ಲಿನ ಶ್ರೇಣೀಕರಣವನ್ನು ತೆಗೆದುಹಾಕಿ ಸ್ವಚ್ಛಗೊಳಿಸಲು ಹಾತೊರೆದ ಗಾಂಧೀಜಿಯಾಗಲಿ, ವಿವೇಕಾನಂದರಾಗಲಿ, ನಾರಾಯಣಗುರುಗಳಾಗಲಿ ಇವರಿಗೆ ಮುಖ್ಯವಾಗುವುದಿಲ್ಲ. ಇವರಿಗೆ ಸಂವಿಧಾನದ ಬದಲಾಗಿ ಅಸಮಾನತೆಯನ್ನು ಪ್ರತಿಪಾದಿಸುವ ಮನುವಾದ ಬರಬೇಕು, ಭಾರತದ ಜಾತ್ಯತೀತ ಆಶೋಕ ಚಕ್ರದ ಬದಲಾಗಿ ಭಗವಾಧ್ವಜ ಬರಬೇಕು. ಇದು ಇವರ ಗುಪ್ತ ಅಜೆಂಡಾ. ಇವರು ಹಿಟ್ಲರ್, ಮುಸಲೋನಿಯನ್ನು ಆದರ್ಶವಾಗಿ ಅನುಸರಿಸಿದಲ್ಲದೆ ಧರ್ಮಾಂಧತೆಯ ತಾಲಿಬಾನಿಗಳನ್ನು ತಮ್ಮ ಆದರ್ಶವಾಗಿ ಅನುಸರಿಸುತ್ತಿದ್ದಾರೆ. ಉದ್ಯೋಗ, ಶಿಕ್ಷಣ, ವೈಜ್ಞಾನಿಕ ಆಲೋಚನೆಗಳನ್ನು ಅಲ್ಲಗಳೆದು ಈಗಿನ ಕ್ವಾಟಂ ಯುಗದಲ್ಲೂ ಶತಮಾನಗಳ ಹಿಂದಿನ ಯುಗಕ್ಕೆ ನಮ್ಮನ್ನು ಕರೆದುಕೊಂಡು ಹೋಗುತ್ತಿದ್ದಾರೆ. ಬಿ.ಜೆ.ಪಿ.ಯ ಸಚಿವರ ಮಕ್ಕಳು ಮುಸ್ಲಿಮರನ್ನು ಮದುವೆಯಾಗಬಹುದು, ವಿದೇಶದಲ್ಲಿ ಓದಬಹುದು, ಕ್ರಿಕೆಟ್ ಮಂಡಲಿಯ ಅಧ್ಯಕ್ಷರಾಗಬಹುದು, ವಿದೇಶಕ್ಕೆ ಇವರು ಗೋಮಾಂಸ ರಫ್ತು ಮಾಡಿ ಎರಡನೆ ಸ್ಥಾನಕ್ಕೆ ಬರಬಹುದು, ಚೈನಾದಂತಹ ಕಮ್ಯುನಿಸ್ಟ್ ರಾಷ್ಟ್ರದ ಸಹಾಯಹಸ್ತ ಚಾಚಬಹುದು ಆದರೆ ಇವರ ಶೂದ್ರ ಕಾಲಾಳುಗಳು ಮಾತ್ರ ಗೋವಿನ ಹೆಸರಲ್ಲಿ ಮುಸ್ಲಿಮರ ಮೇಲೆ ಮುಗಿಬೀಳಬೇಕು, ಇಲ್ಲಿನ ಕಮ್ಯುನಿಸ್ಟ್ ರನ್ನು ನಗರ ನಕ್ಸಲರು ಎನ್ನಬೇಕು, ಅಸ್ಪೃಶ್ಯರನ್ನು ದೇಗುಲದ ಒಳಗೆ ಬಿಡಕೂಡದು, ಅವರು ಪುರೋಹಿತರಾಗಬಾರದು ಇಂಥ ಇಬ್ಬಂದಿ ನೀತಿಗಳ ಜಾರಿ ಎಲ್ಲಿ ಜಗಜ್ಜಾಹೀರು ಆಗುತ್ತದೋ ಎಂದು ಆರ್ಎಸ್ಎಸ್ ಸಂಸ್ಥೆಯನ್ನು ರಿಜಿಸ್ಟರ್ ಮಾಡದೇ ಗುಪ್ತಸಂಘಿಗಳಂತೆ ಒಳಗೊಂದು, ಹೊರಗೊಂದು ಎಂಬಂತೆ ನಡೆದುಕೊಳ್ಳುತ್ತಿರುವುದು.
RSS – ಸಂಶಯಾಸ್ಪದ ಮತ್ತು ಅಕ್ರಮ ಅಸ್ತಿತ್ವದ ಪ್ರಶ್ನೆಗಳಿಗೆ ಉತ್ತರಿಸುವವರು ಯಾರು?
ಈ ನೂರು ವರ್ಷಗಳ ಆರ್ಎಸ್ಎಸ್ ಆಲೋಚನೆಗಳು ಇನ್ನು ಯಾಕೆ ಬದಲಾಗುತ್ತಿಲ್ಲ? ನಿಮ್ಮ ಅಧ್ಯಕ್ಷರುಗಳು ಯಾಕೆ ಕೇವಲ ಬ್ರಾಹ್ಮಣರು ಮಾತ್ರ ಇರುತ್ತಾರೆ. ಈಗ ಮೇಲ್ಜಾತಿ ಎಂದರೆ ಕರ್ನಾಟಕದಲ್ಲಿ ಬ್ರಾಹ್ಮಣರು ಮಾತ್ರ ಎಂಬಂತಿದೆ, ಯಾಕೆಂದರೆ ಒಕ್ಕಲಿಗರು ಕುವೆಂಪು ಪ್ರತಿಪಾದಿತ ವಿಶ್ವಧರ್ಮದ ಬಗ್ಗೆ ಮಾತಾಡುತ್ತಿದ್ದಾರೆ. ದಲಿತರು ಅಂಬೇಡ್ಕರ್ ಪ್ರತಿಪಾದಿತ ಬೌದ್ದಧರ್ಮದ ಬಗ್ಗೆ ಮಾತಾಡುತ್ತಿದ್ದಾರೆ. ಲಿಂಗಾಯತರು ಬಸವಣ್ಣನವರ ಪ್ರತಿಪಾದಿತ ಲಿಂಗಾಯತ ಧರ್ಮದ ಬಗ್ಗೆ ಮಾತಾಡುತ್ತಿದ್ದಾರೆ. ಈಗಲೂ ಕಾಲ ಮಿಂಚಿಲ್ಲ. ಇಲ್ಲಿನ ಹಲವು ಧರ್ಮಗಳ ತಾತ್ವಿಕತೆಯನ್ನು ಭಾರತೀಯ ತತ್ವಮೀಮಾಂಸೆಯ ಭಾಗ ಎಂದು ಒಪ್ಪಿಕೊಳ್ಳಿ. ಅದನ್ನು ಹಿಂದೂ ಧರ್ಮವು ವಿಶೇಷವಾಗಿ ಬ್ರಾಹ್ಮಣ್ಯವೂ ಗೌರವಿಸುತ್ತದೆ ಎಂದು ಒಪ್ಪಿಕೊಳ್ಳಿ. ಮನುಷ್ಯ ಕುಲ ಒಂದೇ ಶ್ರೇಣೀಕರಣ ಜಾತಿ ವ್ಯವಸ್ಥೆ ಬೇಡ ಎಂದು ಒಪ್ಪಿಕೊಳ್ಳಿ. ಈಗಿರುವ ಪರಿಸರ ಹಾನಿಯ ಕುರಿತು, ನೀರು ಕಲುಷಿತಗೊಳ್ಳುತ್ತಿರುವ ಕುರಿತು, ಕ್ವಾಟಂ ಯುಗದ ವೈಜ್ಞಾನಿಕ ಪ್ರಗತಿಯ ಕುರಿತು ಗಂಭೀರವಾಗಿ ಚಿಂತಿಸಿ. ಇಲ್ಲದಿದ್ದರೆ ನೇಪಾಳದಲ್ಲಿ ಆದಂತೆ ಹೊಸ ಜನರೇಷನ್ ಯುವಕರು ನಿಮ್ಮ ತಾತ್ವಿಕತೆಯ ವಿರುದ್ದ ತಿರುಗಿ ಬೀಳುತ್ತಾರೆ.
ಇದನ್ನೂ ಓದಿ Rss 100 ವರ್ಷ | ಮುಂದಿನ ಕಾರ್ಯಕ್ರಮಗಳೇನು ಗೊತ್ತೇ?
ಮೊದಲು ಸಂವಿಧಾನವನ್ನು ಗೌರವಿಸಿ. ಕೇವಲ ಅದಾನಿ ತರಹದ ಶ್ರೀಮಂತರಿಗೆ ಮಣೆಹಾಕುವುದನ್ನು ಬಿಟ್ಟು ಆರ್ಥಿಕ ಸಮಾನತೆಗೆ ಶಾಸನ ಜಾರಿಗೆ ತನ್ನಿ. ಇಲ್ಲದಿದ್ದರೆ ತಮಿಳುನಾಡಿನ ಪೆರಿಯಾರ್ ಕ್ರಾಂತಿ ದೇಶದಲ್ಲಿ ಹಬ್ಬುತ್ತೆ. ಸೋನಮ್ ವಾಂಗ್ಚುಕ್ ಹಾಗೂ ಇತರೆ ದೇಶಭಕ್ತರನ್ನು ಅರೆಸ್ಟ್ ಮಾಡಿ, ಓಟು ಕಳವು, ವಿದ್ಯೆ ಕಳವು, ಅಧಿಕಾರದ ಕಳವು ಮಾಡಿ ಮನುವಾದವನ್ನು ಜೀವಂತವಾಗಿ ಇಡಬಹುದು ಎನ್ನುವುದು ನಿಮ್ಮ ಭ್ರಮೆ. ತಪ್ಪನ್ನು ತಿದ್ದಿಕೊಂಡು ಪರಿವರ್ತನೆಗೊಂಡರೆ ನಿಮಗೆ ಸ್ವಾಗತ ಇಲ್ಲದಿದ್ದರೆ ನಿಮಗೆ ಪ್ರತಿರೋಧ ಒಡ್ಡಲು ಇಡೀ ದೇಶವೇ ಕಾತುರದಿಂದ ಕಾಯುತ್ತಿದೆ. ನಾವು ವೈಚಾರಿಕತೆಯನ್ನು ಅಹಿಂಸೆಯ ಮೂಲಕ ಪ್ರತಿಪಾದಿಸುತ್ತೇವೆ. ಎಲ್ಲಾ ದೈವಗಳು, ತಾತ್ವಿಕತೆಗಳು ಈ ಭಾರತದ ಪರಂಪರೆಯಲ್ಲೆ ಇದೆ. ದೇವರು ಎನ್ನುವ ವಾದ ಇರುವಂತೆಯೇ ದೇವರ ರೂಪ ಪ್ರಜ್ಞೆಯ ಸ್ಥರದಲ್ಲಿ ಇಡೀ ಬ್ರಹ್ಮಾಂಡದ ಒಂದಕ್ಕೊಂದರ ಸಂಬಂಧದ ತಾತ್ವಿಕತೆಯಲ್ಲಿ ಇದೆ ಎಂಬ ಆಲೋಚನೆಯೂ ಭಾರತೀಯ ತತ್ವ ಮೀಮಾಂಸೆಯಲ್ಲಿ ಇದೆ. ಹಾಗಾಗಿ ಬಹುತ್ವದೊಳಗಿನ ಏಕತೆಗೆ ಗಮನಕೊಡಿ. ಅದು ಬಿಟ್ಟು ಸರ್ವಾಧಿಕಾರಿಗಳಂತೆ ವರ್ತಿಸುತ್ತಾ ಹೋದರೆ ಈ ವೈಜ್ಞಾನಿಕ ಯುಗದಲ್ಲಿ ನಿಮ್ಮ ಅಸ್ತಿತ್ವಕ್ಕೆ ಬೆಲೆ ಇಲ್ಲದಂತಾಗುತ್ತದೆ.





