ಶಾಲಾ ಶುಲ್ಕ ಹೆಚ್ಚಳ; ಬಿಸಿತುಪ್ಪವಾದ ಗುಣಮಟ್ಟದ ಶಿಕ್ಷಣ

Date:

2025–26ನೇ ಸಾಲಿನ ಶೈಕ್ಷಣಿಕ ವರ್ಷ ಪ್ರಾರಂಭವಾಗುವ ಹೊಸ್ತಿಲಲ್ಲಿದೆ. ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಬಹುತೇಕ ಜಿಲ್ಲೆಗಳ ಖಾಸಗಿ ಶಾಲೆಗಳು ಶಾಲಾ ಶುಲ್ಕವನ್ನು ಶೇ.10ಕ್ಕಿಂತಲೂ ಹೆಚ್ಚು ಮಾಡಲು ಮುಂದಾಗಿವೆ. ಬೆಲೆ ಏರಿಕೆಯಿಂದ ಬೇಸತ್ತಿದ್ದ ಜನಕ್ಕೆ ಶಾಲಾ ಶುಲ್ಕ ಹೆಚ್ಚಳ ಬಿಸಿ ತುಪ್ಪವಾಗಿ ಪರಿಣಮಿಸಿರುವುದು ಈಗ ಭಾರೀ ಚರ್ಚೆಯಾಗುತ್ತಿದೆ.

ನಿಯಂತ್ರಣ ರಹಿತ ಶುಲ್ಕವಿಧಾನವು ಶಿಕ್ಷಣ ಕ್ಷೇತ್ರದಲ್ಲಿ ಸಮಾಜದ ಸಮತೆ ಕುರಿತು ಗಂಭೀರ ಪ್ರಶ್ನೆಗಳನ್ನು ಎಬ್ಬಿಸುತ್ತಿದೆ. ಈ ಪೈಪೋಟಿಯ ಯುಗದಲ್ಲಿ ಗುಣಮಟ್ಟದ ಶಿಕ್ಷಣ ಎಲ್ಲರಿಗೂ ಲಭ್ಯವಾಗಬೇಕು ಎನ್ನುವುದು ಸಮಯೋಚಿತ. ಆದರೆ ಖಾಸಗಿ ಶಿಕ್ಷಣ ಸಂಸ್ಥೆಗಳ ಶುಲ್ಕ ನೀತಿಯು ಸಾಮಾನ್ಯ ವರ್ಗದ ಪೋಷಕರ ಆರ್ಥಿಕ ಹೊರೆಯನ್ನು ಹೆಚ್ಚಿಸುತ್ತದೆ.

ಸುಮಾರು 18,000ಕ್ಕೂ ಪೋಷಕರನ್ನೊಳಗೊಂಡು ಭಾರತದಾದ್ಯಂತ 301 ಜಿಲ್ಲೆಗಳಲ್ಲಿ ʼಲೋಕಲ್ ಸರ್ಕಲ್ಸ್ʼ ಸಮೀಕ್ಷೆ ನಡೆಸಿದೆ. ಇಷ್ಟು ದೊಡ್ಡ ಮಟ್ಟದ ಸಮೀಕ್ಷೆಯು ಶಾಲಾ ಶುಲ್ಕ ಏರಿಕೆಯ ಬಿಕ್ಕಟ್ಟು ಎಷ್ಟು ವ್ಯಾಪಕವಾಗಿದೆ ಎಂಬುದರ ಸ್ಪಷ್ಟ ಚಿತ್ರಣವನ್ನು ನೀಡುತ್ತದೆ. ಸಮೀಕ್ಷೆಯ ವರದಿ ಪ್ರಕಾರ, ಶೇ.44 ರಷ್ಟು ಪೋಷಕರು ಕಳೆದ ಮೂರು ವರ್ಷಗಳಲ್ಲಿ ಶಾಲೆಗಳು ಶೇ.50–80 ಅಥವಾ ಅದಕ್ಕಿಂತ ಹೆಚ್ಚು ಶುಲ್ಕ ಏರಿಕೆ ಮಾಡಿವೆ ಎಂದು ಹೇಳಿದ್ದಾರೆ. ಹಾಗೆಯೇ ಪ್ರೌಢಶಾಲಾ ತರಗತಿಗಳಲ್ಲಿ ಮಕ್ಕಳಿರುವ ಕುಟುಂಬಗಳಿಗೆ, ವೆಚ್ಚಗಳು ಇನ್ನೂ ಹೆಚ್ಚಿರುತ್ತವೆ. ಬಹುತೇಕ ಪೋಷಕರು ನಿಯಮಿತ ಶಾಲಾ ಶುಲ್ಕದ ಜೊತೆಗೆ ಖಾಸಗಿ ತರಬೇತಿಗೂ (ಟ್ಯೂಷನ್) ಹಣ ಪಾವತಿ ಮಾಡುತ್ತಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಬೆಂಗಳೂರಿನ ಶೇ. 48ರಷ್ಟು ಪೋಷಕರು ಈ ವರ್ಷದ ಶಾಲಾ ಶುಲ್ಕದಲ್ಲಿ ಶೇ.10ಕ್ಕಿಂತ ಅಥವಾ ಅದಕ್ಕಿಂತ ಹೆಚ್ಚು  ಶುಲ್ಕ ಹೆಚ್ಚಳವಾಗಬಹುದು ಎಂದು ತಿಳಿಸಿದ್ದಾರೆ. ಶೇ.46 ರಷ್ಟು ಪೋಷಕರು ತಮ್ಮ ಶಾಲೆಗಳು ಇನ್ನೂ ಪರಿಷ್ಕೃತ ಶುಲ್ಕವನ್ನು ಘೋಷಿಸಿಲ್ಲ ಎಂದು ಹೇಳಿದ್ದಾರೆ. ಮುಂದುವರೆದು ರಾಷ್ಟ್ರೀಯ ಖಾಸಗಿ ಶಾಲೆಗಳಲ್ಲಿ ಮಕ್ಕಳಿರುವ ಪೋಷಕರಲ್ಲಿ ಶೇ.81ರಷ್ಟು ಜನರು ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶುಲ್ಕ ಶೇ.10ಕ್ಕಿಂತ ಹೆಚ್ಚು ಹೆಚ್ಚಳವಾಗಿದೆ ಎಂದು ತಿಳಿಸಿರುವುದಾಗಿ ಲೋಕಲ್ ಸರ್ಕಲ್ಸ್ ವರದಿ ಹೇಳುತ್ತಿದೆ.

ಅವೈಜ್ಞಾನಿಕವಾಗಿ ಅತಿಯಾದ ಬೋಧನಾ ಮತ್ತು ಪಠ್ಯಪುಸ್ತಕ ಶುಲ್ಕವನ್ನು ವಿಧಿಸುತ್ತಿವೆ ಎಂಬ ಆರೋಪದ ಹಿನ್ನೆಲೆ ಕಳೆದ ಏಪ್ರಿಲ್‌ನಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಕೆಎಸ್‌ಸಿಪಿಸಿಆರ್) ಬೆಂಗಳೂರಿನಲ್ಲಿರುವ ಮೂರು ಖಾಸಗಿ ಶಾಲೆಗಳಿಗೆ ನೋಟಿಸ್ ಜಾರಿ ಮಾಡಿತ್ತು. ಶಾಲೆಯ ಸೂಚನಾ ಫಲಕದಲ್ಲಿ ಶುಲ್ಕ ರಚನೆಯನ್ನು ಕಡ್ಡಾಯವಾಗಿ ಪ್ರಕಟಿಸಬೇಕು, ಈ ಕುರಿತು ಶಾಲೆಗಳು ಸರ್ಕಾರಕ್ಕೆ ವರದಿಯನ್ನೂ ಸಲ್ಲಿಸಬೇಕು ಎಂದು ಸುತ್ತೋಲೆ ಹೊರಡಿಸಿತ್ತು. ಆದರೆ, ಇಲ್ಲಿಯವರೆಗೆ ಖಾಸಗಿ ಶಾಲೆಗಳ ಶುಲ್ಕ ನೀತಿಯನ್ನು ಮೇಲ್ವಿಚಾರಣೆ ಮಾಡಲು ಸರ್ಕಾರಿ ಮಟ್ಟದಲ್ಲಿ ಯಾವುದೇ ಸಮಿತಿ ರಚಿಸಲಾಗಿಲ್ಲ. ಬಳಿಕ ಆ ಖಾಸಗಿ ಶಾಲೆಗಳು ಮೂಲಸೌಕರ್ಯ ಮತ್ತು ಇತರ ಸೌಲಭ್ಯಗಳ ಸಬೂಬು ನೀಡಿ ವಾರ್ಷಿಕವಾಗಿ 10% ರಿಂದ 12% ರಷ್ಟು ತಮ್ಮ ಶುಲ್ಕವನ್ನು ಹೆಚ್ಚಿಸಿಕೊಳ್ಳಲು ಅವಕಾಶವಿದೆ ಎಂದಿದ್ದವು.

ಇದನ್ನೂ ಓದಿ: ಭಾರತ-ಪಾಕಿಸ್ತಾನ ಸಂಘರ್ಷದ ಬಳಿಕ ‘ಕೋಮು ಸೌಹಾರ್ದ’ದ ಪಾಠ ಕಲಿತರೇ ಮೋದಿ?

ಇದಕ್ಕೆ ಪ್ರತಿಕ್ರಿಯಿಸಿದ್ದ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ, “ಖಾಸಗಿ ಶಾಲಾ ಶುಲ್ಕವನ್ನು ನಿಯಂತ್ರಿಸುವ ಅಧಿಕಾರ ಸರ್ಕಾರಕ್ಕೆ ಇಲ್ಲ. ನಾವು ಶುಲ್ಕ ನಿಗದಿಪಡಿಸಿದರೆ, ಖಾಸಗಿ ಶಾಲಾ ಆಡಳಿತ ಮಂಡಳಿಗಳು ನ್ಯಾಯಾಲಯದ ಮೊರೆ ಹೋಗುತ್ತವೆ. ಆದ್ದರಿಂದ, ಪೋಷಕರು ಖಾಸಗಿ ಶಾಲೆಗಳಿಗೆ ಶುಲ್ಕ ಪಾವತಿಸಲು ಸಾಧ್ಯವಾಗದಿದ್ದರೆ, ಅವರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಬಹುದು. ಉತ್ತಮ ಶಿಕ್ಷಣದ ಜೊತೆಗೆ, ಸರ್ಕಾರಿ ಶಾಲೆಗಳಲ್ಲಿ ಪುಸ್ತಕಗಳು, ಸಮವಸ್ತ್ರ, ಹಾಲು, ಮೊಟ್ಟೆ ಮತ್ತು ಮಧ್ಯಾಹ್ನದ ಊಟವನ್ನು ಉಚಿತವಾಗಿ ಪಡೆಯುತ್ತಾರೆ” ಎಂದು ಹೇಳಿದ್ದರು.

ಈದಿನ ಡಾಟ್‌ ಕಾಮ್‌ನೊಂದಿಗೆ ಮಾತನಾಡಿದ ಕರ್ನಾಟಕ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಅಸೋಸಿಯೇಟೆಡ್ ಮ್ಯಾನೇಜ್‌ಮೆಂಟ್‌ಗಳ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್, “ನಿಯಮಗಳ ಪ್ರಕಾರ ಪ್ರತಿ ವರ್ಷ ಶಾಲಾ ಶುಲ್ಕದಲ್ಲಿ ಶೇ. 10-15 ರಷ್ಟು ಏರಿಕೆಯಾಗುತ್ತಲೇ ಇರುತ್ತದೆ. ಅದಕ್ಕಿಂತ ಹೆಚ್ಚಾದರೆ ಅದನ್ನು ಖಂಡಿಸಿ ಶಾಲೆಗಳು ಹಾಗೆ ಮಾಡದಂತೆ ಸಲಹೆ ನೀಡುತ್ತೇವೆ. ಶೇ.20ಕ್ಕಿಂತಲೂ ಹೆಚ್ಚು ಶುಲ್ಕ ವಿಧಿಸುವ ಶಾಲೆಗಳು ರಾಜ್ಯದ ಒಟ್ಟು ಶಾಲೆಗಳ ಸಂಖ್ಯೆಯಲ್ಲಿ ಕೇವಲ 0.5% ರಿಂದ 3% ರಷ್ಟಿವೆ. ಶೇ. 95ರಷ್ಟು ಶಾಲೆಗಳು ₹10,000 ರಿಂದ ₹50,000 ವರೆಗೆ ಶುಲ್ಕ ವಿಧಿಸುತ್ತವೆ. ತಮ್ಮ ಮಕ್ಕಳನ್ನು ಪ್ರತಿಷ್ಠಿತ ಮತ್ತು ದುಬಾರಿ ಶಾಲೆಗಳಿಗೆ ಕಳುಹಿಸಲು ಬಯಸುವ ಪೋಷಕರು ಶುಲ್ಕ ಹೆಚ್ಚಳವನ್ನೂ ಅಷ್ಟೇ ಪ್ರತಿಷ್ಠೆಯಾಗಿ ನೋಡುವುದಿಲ್ಲ. ಕೈಗೆಟುಕುವ ಶಾಲೆಗಳಲ್ಲಿ ಹಾಗೂ ದುಬಾರಿ ಶಾಲೆಗಳಲ್ಲಿ ಒಂದೇ ರೀತಿಯ ಬೋಧನಾ ವಿಧಾನದ ಬಗ್ಗೆ ನಿಜವಾಗಿಯೂ ಕಾಳಜಿ ವಹಿಸುವುದಿಲ್ಲ. ಶುಲ್ಕವನ್ನು ನಿಯಂತ್ರಿಸುವ ಮತ್ತು ಕಠಿಣ ನಿಯಮಗಳನ್ನು ತರುವ ಅಧಿಕಾರ ಸರ್ಕಾರಕ್ಕೆ ಇಲ್ಲದ ಕಾರಣ, ಶುಲ್ಕ ನಿಯಂತ್ರಣವನ್ನು ಬೆಂಬಲಿಸಲು ಬರುವುದಿಲ್ಲ” ಎಂದರು.

“ಸ್ವಾಭಾವಿಕವಾಗಿ ಪ್ರತಿ ವರ್ಷ ಶುಲ್ಕ ಹೆಚ್ಚಳ ಮಾಡಲೇಬೇಕಾಗುತ್ತದೆ. ಅದನ್ನು ಆಕ್ಷೇಪಿಸುವವರು ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ದಾಖಲಿಸಬಹುದು. ಸರ್ಕಾರ ಎಲ್ಲ ವಿಭಾಗಗಳಲ್ಲಿಯೂ ಬೆಲೆ ಏರಿಕೆ ಮಾಡಿರುವುದು ಕೂಡ ಕೆಲ ಶಾಲೆಗಳು ಅಸ್ವಾಭಾವಿಕ ಶುಲ್ಕ ವಿಧಿಸಲು ಕಾರಣವಾಗಬಹುದು. ಒಂದು ವೇಳೆ ನಿಯಮಗಳಾಚೆಗೆ ಹೆಚ್ಚಾಗಿ ಶುಲ್ಕ ವಿಧಿಸಿದ್ದು ಕಂಡುಬಂದರೆ ಅಂತಹ ಶಾಲೆಗಳ ವಿರುದ್ಧ ದೂರು ನೀಡಬಹುದು” ಎಂದು ವಿವರಿಸಿದರು.

ಇದನ್ನೂ ಓದಿ: ದಶಕಗಳ ಸಮಸ್ಯೆಗಳಿಗೆ ಶಾಶ್ವತ ಮುಕ್ತಿ: 1 ಲಕ್ಷ ಫಲಾನುಭವಿಗಳಿಗೆ ಕಂದಾಯ ಗ್ರಾಮಗಳ ಹಕ್ಕುಪತ್ರ

ಶಿಕ್ಷಣ ಹಕ್ಕು, ವ್ಯಾಪಾರವಲ್ಲ ಎಂಬ ತತ್ವವನ್ನು ನೆನಪಿನಲ್ಲಿಟ್ಟುಕೊಳ್ಳುವ ಹೊಣೆ ಸರ್ಕಾರದ ಮೇಲೆ ಇದೆ. ಶಿಕ್ಷಕರ ವೇತನ, ಮೂಲಸೌಕರ್ಯ ಹಾಗೂ ಗುಣಮಟ್ಟದ ಬೋಧನೆ ಎಂಬ ಖಾಸಗಿ ಶಾಲೆಗಳ ನಿಖರವಾದ ಆಂತರಿಕ ಖರ್ಚುಗಳ ಕುರಿತ ನಿಖರ ಲೆಕ್ಕಪತ್ರದ ಪರಿಶೀಲನೆಯಿಂದಲೇ ನೈಜವಾದ ಶುಲ್ಕ ಪರಿಷ್ಕರಣೆ ಸಾಧ್ಯವಾಗಬಹುದು. ಇಲ್ಲದಿದ್ದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಶುಲ್ಕ ನೀತಿಯನ್ನು ನಿಭಾಯಿಸಲು ನಿರ್ಬಂಧಗಳಿಲ್ಲವೆಂಬ ತರ್ಕ ಶುಲ್ಕ ಹೆಚ್ಚಳಕ್ಕೆ ಇನ್ನೊಂದು ಮೆಟ್ಟಿಲಾಗಬಹುದು.

ಸರ್ಕಾರಿ ಶಾಲೆಗಳನ್ನು ಪೋಷಕರಿಗೆ ಪರ್ಯಾಯವನ್ನಾಗಿ ಸೂಚಿಸುವುದು ಒಂದೆಡೆ. ಆದರೆ, ಆ ಪರ್ಯಾಯ ಆಯ್ಕೆ ಖಾಸಗಿ ಸಂಸ್ಥೆಗಳಿಗೆ ಪರ್ಯಾಯವಾಗುವಷ್ಟು ಉತ್ತಮವಾಗಿರಬೇಕಾದ ಹೊಣೆಯಿಂದ ಸರ್ಕಾರ ತಪ್ಪಿಕೊಳ್ಳಲಾರದು. ಕೈಗೆಟುಕುವ ಶಿಕ್ಷಣ ಮಾತ್ರವಲ್ಲ, ಗುಣಮಟ್ಟದ ಶಿಕ್ಷಣ ದೊರೆಯುವಂತಾಗಬೇಕು. ಆಧುನಿಕ ಪಠ್ಯಕ್ರಮ, ಬೋಧನಾ ಸಲಕರಣೆ, ಶಿಕ್ಷಕರ ನಿರಂತರ ತರಬೇತಿ, ವಿದ್ಯಾರ್ಥಿ-ಗುರು ಅನುಪಾತ ಇತ್ಯಾದಿ ಅಂಶಗಳಲ್ಲಿ ಪ್ರಾಮಾಣಿಕ ಬದಲಾವಣೆಯಿಲ್ಲದೆ ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯಲು ಸಾಧ್ಯವಿಲ್ಲ.

ಇಂದಿನ ಪರಿಸ್ಥಿತಿಯಲ್ಲಿ ಬಹುತೇಕ ಪೋಷಕರು ಖಾಸಗಿ ಶಾಲೆಗಳ ದುಬಾರಿ ಶುಲ್ಕವನ್ನು ಸಹ ಭರಿಸುತ್ತಿರುವುದು ಸರ್ಕಾರಿ ಶಾಲೆಗಳ ಮೇಲಿನ ನಂಬಿಕೆಯ ಕೊರತೆಯ ಸ್ಪಷ್ಟ ಸೂಚನೆ. ಈ ಧೋರಣೆಯನ್ನು, ಅನಿಸಿಕೆಯನ್ನು ಬದಲಾಯಿಸಲು ಯೋಜನೆ ರೂಪಿಸುವ ಹೊಣೆ ಸರ್ಕಾರದ್ದಾಗಿದೆ.

WhatsApp Image 2025 05 16 at 6.54.26 PM
Sub Editor at Eedina.com |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...