ಕರ್ನಾಟಕದ ಇಂಧನ ಸ್ವಾವಲಂಬನೆಯ ಹಾದಿಯಲ್ಲಿ ದಶಕಗಳಿಂದ ದೀಪದಂತೆ ಬೆಳಗುತ್ತಿರುವ ಶರಾವತಿ ಕಣಿವೆ ಇಂದು ಸುದ್ದಿಯ ಕೇಂದ್ರಬಿಂದುವಾಗಿದೆ. ಸುಮಾರು 2000 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಯೋಜನೆಗೆ ಸರ್ಕಾರ ಮುಂದಾಗಿದೆ. ಆದರೆ ಈ ಯೋಜನೆಯು ಸ್ವಾತಂತ್ರ್ಯಾನಂತರದ ಭಾರತದ ಅತ್ಯಂತ ವಿವಾದಾತ್ಮಕ ಜಲವಿದ್ಯುತ್ ಯೋಜನೆಯಾಗಿ ಹೊರಹೊಮ್ಮುತ್ತಿದ್ದು, ಮಲೆನಾಡಿನ ಜನರ ನಿದ್ದೆಗೆಡಿಸಿದೆ.
ಅಂದು 1964ರಲ್ಲಿ ಲಿಂಗನಮಕ್ಕಿ ಅಣೆಕಟ್ಟು ನಿರ್ಮಾಣವಾದಾಗ ಸುಮಾರು ಒಂದು ಲಕ್ಷ ಹೆಕ್ಟೇರ್ ಪ್ರದೇಶ ಮುಳುಗಡೆಯಾಗಿತ್ತು. ಇಂದು ಅದೇ ಕಣಿವೆಯಲ್ಲಿ ‘ಪಂಪ್ಡ್ ಸ್ಟೋರೇಜ್’ (PSP) ಎಂಬ ಹೊಸ ತಂತ್ರಜ್ಞಾನದ ಮೂಲಕ ಸುಮಾರು 2000 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ₹10,250 ಕೋಟಿಗೂ ಅಧಿಕ ವೆಚ್ಚದ ಬೃಹತ್ ಯೋಜನೆಗೆ ಸರ್ಕಾರ ಕೈಹಾಕಿದೆ.
ಹೋರಾಟದ ಇತಿಹಾಸ ಮತ್ತು ವರ್ತಮಾನ:
1980ರ ದಶಕದಲ್ಲಿ ಶಿವರಾಮ ಕಾರಂತ ಮತ್ತು ಕುಸುಮಾ ಸೊರಬ ಅವರಂತಹ ದೈತ್ಯ ಪ್ರತಿಭೆಗಳು ‘ಪಶ್ಚಿಮ ಘಟ್ಟ ಉಳಿಸಿ’ ಚಳವಳಿಯ ಮೂಲಕ ತದಡಿ ಶಾಖೋತ್ಪನ್ನ ಘಟಕವನ್ನು ಮಣಿಸಿದ್ದರು. ಅಂತಹದ್ದೇ ಕಿಚ್ಚು 2025ರ ಸೆಪ್ಟೆಂಬರ್ ತಿಂಗಳಿನಲ್ಲಿ ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕಂಡುಬಂದು ಸರ್ಕಾರಕ್ಕೆ ಮತ್ತೊಮ್ಮೆ ಬಿಸಿ ಮುಟ್ಟಿಸಿದೆ. ಪರಿಸರ ಸಾರ್ವಜನಿಕ ವಿಚಾರಣೆಗಳ ವಿರುದ್ಧ ಸಾಗರ, ಹೊನ್ನಾವರ ಮತ್ತು ಗೇರುಸೊಪ್ಪ ಭಾಗಗಳಲ್ಲಿ ಜನಾಕ್ರೋಶ ಭುಗಿಲೆದ್ದಿದೆ.

ಬಂಗಾರಮಕ್ಕಿಯ ಮಾರುತಿ ಗುರೂಜಿ, “ಯೋಜನೆ ಮಾಡುವುದಿದ್ದರೆ ಮೊದಲು ನನ್ನ ಎದೆಯ ಮೇಲೆ ಜೆಸಿಬಿ ಹತ್ತಿಸಿ” ಎಂದು ಗುಡುಗಿದ್ದು, ಈ ಹೋರಾಟಕ್ಕೆ ಮಠಾಧೀಶರ ಬೆಂಬಲ ಸಿಕ್ಕಿರುವುದು ಹೋರಾಟದ ತೀವ್ರತೆ ಮತ್ತು ಗಂಭೀರತೆ ಎಷ್ಟಿದೆ ಎಂಬುದನ್ನು ಸಾರುತ್ತಿದೆ.
ಇಂಧನ ಸಚಿವ ಕೆ ಜೆ ಜಾರ್ಜ್ ಅವರ ಪ್ರಕಾರ, ರಾಜ್ಯದ ಏರುತ್ತಿರುವ ವಿದ್ಯುತ್ ಬೇಡಿಕೆಯನ್ನು ಪೂರೈಸಲು ಇದೊಂದು ‘ಬೃಹತ್ ಬ್ಯಾಟರಿ’ಯಂತೆ ಕಾರ್ಯನಿರ್ವಹಿಸಲಿದೆ. ಸೌರ ಮತ್ತು ಪವನ ಶಕ್ತಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು, ಬೇಡಿಕೆ ಕಡಿಮೆ ಇರುವಾಗ ನೀರನ್ನು ಮೇಲೆ ಪಂಪ್ ಮಾಡುವುದು ಮತ್ತು ಬೇಡಿಕೆ ಹೆಚ್ಚಾದಾಗ 250 ಮೆಗಾವ್ಯಾಟ್ನ 8 ಪವರ್ ಪ್ಲಾಂಟ್ಗಳ ಮೂಲಕ ವಿದ್ಯುತ್ ಉತ್ಪಾದಿಸುವುದು ಇದರ ಉದ್ದೇಶ. ಕೇವಲ 25 ಎಕರೆ ಭೂಮಿ ಸಾಕಾಗುತ್ತದೆ ಮತ್ತು ಸುರಂಗ ಮಾರ್ಗಗಳ ಮೂಲಕ ಕಾಮಗಾರಿ ಮಾಡುವುದರಿಂದ ಅರಣ್ಯ ನಾಶವಾಗುವುದಿಲ್ಲ ಎಂಬ ಭರವಸೆಯನ್ನು ಸರ್ಕಾರ ನೀಡುತ್ತಿದೆ.
ಆದರೆ ಅಂಕಿ-ಅಂಶಗಳು ಬೇರೆಯದೇ ಕಥೆ ಹೇಳುತ್ತಿವೆ. ಪರಿಸರವಾದಿಗಳು ಈ ಯೋಜನೆಯನ್ನು ‘ವಿದ್ಯುತ್ ನುಂಗುವ ಬಕಾಸುರ’ ಎಂದು ಕರೆಯುತ್ತಿದ್ದಾರೆ. ಇದಕ್ಕೆ ಬಲವಾದ ಕಾರಣಗಳೂ ಇವೆ. ಕೆಳಮಟ್ಟದ ಜಲಾಶಯದಿಂದ ಮೇಲಕ್ಕೆ ನೀರು ಪಂಪ್ ಮಾಡಲು ಬೇಕಾಗುವ ವಿದ್ಯುತ್, ಉತ್ಪಾದನೆಯಾಗುವ ವಿದ್ಯುತ್ಗಿಂತ 25% ರಷ್ಟು ಹೆಚ್ಚು. 2017ರ ಪೂರ್ವ-ಸಾಧ್ಯತಾ ವರದಿಯಂತೆ, 12,000 MWh ವಿದ್ಯುತ್ ಉತ್ಪಾದಿಸಲು 14,833 MWh ವಿದ್ಯುತ್ ಬೇಕಾಗುತ್ತದೆ. ಅಂದರೆ, ಲಾಭಕ್ಕಿಂತ ನಷ್ಟವೇ ಹೆಚ್ಚು.

ಸರ್ಕಾರ ಕೇವಲ 25 ಎಕರೆ ಭೂಮಿ ಬೇಕಾಗಬಹುದು ಎನ್ನುತ್ತಿದ್ದರೂ, ಪರಿಸರ ಪರಿಣಾಮ ಮೌಲ್ಯಮಾಪನ (EIA) ವರದಿಯ ಪ್ರಕಾರ 142 ರಿಂದ 145 ಹೆಕ್ಟೇರ್ ಅರಣ್ಯ ಪ್ರದೇಶಕ್ಕೆ ಕೊಡಲಿ ಬೀಳಲಿದೆ. ಈ ಅಂಕಿಯ ಕುರಿತು ಸರ್ಕಾರವಾಗಲೀ ಯೋಜನೆ ಪರ ವಾದಿಸುವವರಾಗಲೀ ಉಸಿರೆತ್ತುತ್ತಿಲ್ಲ. ಅಥವಾ ನಾಶವಾದ ಅರಣ್ಯಕ್ಕೆ ಪರ್ಯಾಯವಾಗಿ ಏನು ಮಾಡಲಾಗುತ್ತದೆ ಎನ್ನುವ ಸಮರ್ಥನೆಯನ್ನೂ ಸರ್ಕಾರ ಕೊಡುತ್ತಿಲ್ಲ.
ಅಷ್ಟೇ ಅಲ್ಲ. ವಿಶ್ವದ ಎಂಟು ಅತ್ಯಂತ ಸೂಕ್ಷ್ಮ ಜೀವವೈವಿಧ್ಯ ತಾಣಗಳಲ್ಲಿ ಒಂದಾದ ಪಶ್ಚಿಮ ಘಟ್ಟದ ‘ಶರಾವತಿ ಸಿಂಗಳೀಕ (LTM) ಅಭಯಾರಣ್ಯ’ದ ಹೃದಯಭಾಗದಲ್ಲೇ ಈ ಯೋಜನೆ ಸಿದ್ಧವಾಗುತ್ತಿದೆ. ಸಿಂಗಳೀಕಗಳು ‘ಅರ್ಬೋರಿಯಲ್’ ಜೀವಿಗಳಾಗಿದ್ದು, ಮರದಿಂದ ಮರಕ್ಕೆ ಜಿಗಿಯುತ್ತಾ ಬದುಕುತ್ತವೆ. ತಾಂತ್ರಿಕವಾಗಿ ನೋಡಿದಾಗ, ಇವುಗಳು ನೆಲಕ್ಕೆ ಇಳಿಯದೆ ಕೇವಲ ಮರಗಳ ಮೇಲ್ಭಾಗದ ದಟ್ಟ ಕವಚದಲ್ಲಿ ಮಾತ್ರ ಸಂಚರಿಸುತ್ತವೆ. ಯೋಜನೆಯ ಕಾಮಗಾರಿಗಾಗಿ ಅರಣ್ಯದ ನಡುವೆ ರಸ್ತೆ ನಿರ್ಮಿಸುವುದು ಅಥವಾ ವಿದ್ಯುತ್ ತಂತಿಗಳ ಲೈನ್ ಎಳೆಯುವುದರಿಂದ ಈ ಮರಗಳ ಕವಚವು ತುಂಡಾಗುತ್ತದೆ. ಇದರಿಂದ ಕಪಿಗಳ ಒಂದು ಗುಂಪು ಮತ್ತೊಂದು ಗುಂಪಿನೊಂದಿಗೆ ಸಂಪರ್ಕ ಕಳೆದುಕೊಂಡು, ಅವುಗಳ ನಡುವಿನ ವಂಶವಾಹಿ ಹರಿವು ನಿಂತುಹೋಗುವ ಅಪಾಯವಿದೆ. ಇದು ದೀರ್ಘಕಾಲದಲ್ಲಿ ಈ ತಳಿಯ ವಿನಾಶಕ್ಕೆ ನಾಂದಿಯಾಗಬಹುದು. ಅಲ್ಲದೆ, ಹಿಮಾಲಯದ ತೆಹ್ರಿ ಅಣೆಕಟ್ಟು ಅನುಭವಿಸಿದಂತೆ, ಇಲ್ಲಿನ ಸೂಕ್ಷ್ಮ ಭೂಪದರಗಳಲ್ಲಿ ನಡೆಸುವ ಸ್ಫೋಟಗಳು ಭೂಕುಸಿತದ ಅಪಾಯವನ್ನು ಹತ್ತು ಪಟ್ಟು ಹೆಚ್ಚಿಸುತ್ತವೆ.


ನ್ಯಾಯಾಂಗ ಮತ್ತು ಆರ್ಥಿಕ ಸಂಘರ್ಷ: ಯೋಜನೆಯ ಟೆಂಡರ್ ಪ್ರಕ್ರಿಯೆಯೂ ವಿವಾದದಿಂದ ಮುಕ್ತವಾಗಿಲ್ಲ. ಎಲ್ ಅಂಡ್ ಟಿ (L&T) ಸಂಸ್ಥೆಯು ಟೆಂಡರ್ ಲೋಪದ ಬಗ್ಗೆ ಹೈಕೋರ್ಟ್ ಮೆಟ್ಟಿಲೇರಿತ್ತು. ಅಲ್ಲದೆ, ಪರಿಸರ ಅನುಮತಿ ಸಿಗುವ ಮೊದಲೇ ಕರ್ನಾಟಕ ವಿದ್ಯುತ್ ನಿಗಮವು ಕಾಮಗಾರಿ ಆರಂಭಿಸಲು ತೋರಿದ ಆತುರಕ್ಕೆ ನ್ಯಾಯಾಲಯ ತಡೆ ನೀಡಿದೆ. ಇತ್ತ ಮೆಘಾ ಎಂಜಿನಿಯರಿಂಗ್ (MEIL) ಸಂಸ್ಥೆಗೆ ಟೆಂಡರ್ ನೀಡಿದ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯ ಕೊರತೆಯಿದೆ ಎಂಬ ಆರೋಪಗಳೂ ಕೇಳಿಬರುತ್ತಿವೆ.
ಈಗಾಗಲೇ ಗುಜರಾತ್ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ‘ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಮ್’ (BESS) ಗೆ ಒತ್ತು ನೀಡಲಾಗುತ್ತಿದೆ. ಪಂಪ್ಡ್ ಸ್ಟೋರೇಜ್ಗಿಂತ ಕಡಿಮೆ ಸಮಯದಲ್ಲಿ ಮತ್ತು ಪರಿಸರಕ್ಕೆ ಹಾನಿಯಾಗದಂತೆ ಇದನ್ನು ಅಳವಡಿಸಬಹುದು. ಕೇವಲ ಆರು ವರ್ಷಗಳ ಅವಧಿಯಲ್ಲಿ ಸೌರ ವಿದ್ಯುತ್ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗಳಾಗುವ ಸಾಧ್ಯತೆ ಇರುವಾಗ, ಇಂತಹ ವಿನಾಶಕಾರಿ ಯೋಜನೆಗೆ ಇಷ್ಟೊಂದು ಆತುರ ಏಕೆ ಎನ್ನುವುದು ಪರಿಸರವಾದಿಗಳ ಪ್ರಶ್ನೆ.


ಕಾಂಗ್ರೆಸ್ ಪಕ್ಷದ ಪರಂಪರೆಯನ್ನೇ ನೋಡಿದರೆ, ಹಿಂದೆ ಇಂದಿರಾ ಗಾಂಧಿಯವರು ಸೈಲೆಂಟ್ ವ್ಯಾಲಿ ಯೋಜನೆಯನ್ನು ಮತ್ತು ರಾಜೀವ್ ಗಾಂಧಿಯವರು ಪರಿಸರ ಹಾನಿಯ ಕಾರಣಕ್ಕೆ ಹಲವು ಯೋಜನೆಗಳನ್ನು ತಿರಸ್ಕರಿಸಿದ್ದರು. ಆದರೆ ಇಂದು ಅದೇ ಪಕ್ಷದ ಸರ್ಕಾರ ಪರಿಸರವಾದಿಗಳ ಎಚ್ಚರಿಕೆಯನ್ನು ನಿರ್ಲಕ್ಷಿಸಿ ಮುನ್ನುಗ್ಗುತ್ತಿರುವುದು ವಿಪರ್ಯಾಸ.
ಈ ಕುರಿತು ಪರಿಸರ ಸಂಶೋಧಕ ಎನ್ ಎಂ ಗುರುಪ್ರಸಾದ್ ಪ್ರತಿಕ್ರಿಯಿಸಿ, “ಶರಾವತಿ ಯೋಜನೆಯ ಡಿಪಿಆರ್ (DPR) ಅನ್ನು ಉದ್ದೇಶಪೂರ್ವಕವಾಗಿ ಸಾರ್ವಜನಿಕರಿಂದ ಮುಚ್ಚಿಡಲಾಗಿದೆ. ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದರೂ ಈ ವರದಿ ಸಿಗುತ್ತಿಲ್ಲ. ಯೋಜನೆಯಿಂದ ಕಾಡಿನ ಮೇಲೆ ಆಗುವ ಪರಿಣಾಮ, ಆರ್ಥಿಕ ವೆಚ್ಚಗಳು ಮತ್ತು ಪರ್ಯಾಯ ಮಾರ್ಗಗಳ ಬಗ್ಗೆ ಜನರಿಗೆ ಸರಿಯಾದ ಮಾಹಿತಿಯೇ ಇಲ್ಲ. ಪರಿಸರ ಸಾರ್ವಜನಿಕ ವಿಚಾರಣೆಯು ಕೇವಲ ಹೆಸರಿಗಷ್ಟೇ ನಡೆಯಬಾರದು, ಅದು ಸಂವಿಧಾನಬದ್ಧವಾದ ‘ಜನಸಂಪರ್ಕ’ ಪ್ರಕ್ರಿಯೆಯಾಗಬೇಕು. ಸರ್ಕಾರ ಕೂಡಲೇ ಈ ಡಿಪಿಆರ್ ಅನ್ನು ವೆಬ್ಸೈಟ್ನಲ್ಲಿ ಪ್ರಕಟಿಸಿ, ಜನರಿಗೆ ಅಧ್ಯಯನ ಮಾಡಲು 6 ತಿಂಗಳ ಸಮಯ ನೀಡಬೇಕು. ಅಲ್ಲಿಯವರೆಗೆ ಈಗ ನಿಗದಿಪಡಿಸಿರುವ ಸಾರ್ವಜನಿಕ ವಿಚಾರಣೆಯನ್ನು ತಕ್ಷಣ ರದ್ದುಗೊಳಿಸಬೇಕು” ಎಂದರು.
ಇದನ್ನೂ ಓದಿ: ಬೇಡ್ತಿ-ವರದಾ ಯೋಜನೆ ಹಿಂದೆ ಬಸವರಾಜ ಬೊಮ್ಮಾಯಿ ರಾಜಕೀಯ ಅಜೆಂಡಾ ಇದೆಯೇ?
ಅಭಿವೃದ್ಧಿಯ ಹೆಸರಿನಲ್ಲಿ ಮರಳಿ ಸೃಷ್ಟಿಸಲಾಗದ ಪಾರಂಪರಿಕ ಅರಣ್ಯವನ್ನು ನಾಶ ಮಾಡುವುದು ಬುದ್ಧಿವಂತಿಕೆಯಲ್ಲ. ಶರಾವತಿಯ ಹರಿವಿನ 128 ಕಿಮೀ ನಲ್ಲಿ ಈಗಾಗಲೇ 114 ಕಿಮೀ ಪ್ರದೇಶ ವಿವಿಧ ಯೋಜನೆಗಳಿಗೆ ಬಳಕೆಯಾಗಿದೆ. ಉಳಿದಿರುವ ಅಲ್ಪಸ್ವಲ್ಪ ಪ್ರಕೃತಿಯನ್ನು ಉಳಿಸಿಕೊಳ್ಳುವುದು ನಮ್ಮ ಕರ್ತವ್ಯ. ಸರ್ಕಾರವು ಹಠಮಾರಿ ಧೋರಣೆ ಬಿಟ್ಟು, ತಜ್ಞರ ಮತ್ತು ಸ್ಥಳೀಯರ ಆತಂಕಗಳಿಗೆ ಕಿವಿಕೊಡಬೇಕಿದೆ. ಇಲ್ಲದಿದ್ದರೆ ಮುಂದಿನ ಪೀಳಿಗೆಗೆ ನಾವು ನೀಡುವ ಕಾಣಿಕೆ ಕೇವಲ ಕಾಂಕ್ರೀಟ್ ಸುರಂಗಗಳು ಮತ್ತು ಬರಿದಾದ ಕಾಡುಗಳಷ್ಟೇ ಆಗಿರುತ್ತವೆ.




