ಶಿವನ ಜೀವಿತದ ಮಹತ್ ಘಟನೆಗಳಲ್ಲಿ ಒಂದು, ಸತಿಯ ಮರಣಾನಂತರ ಆತನ ದೈತ್ಯಶೋಕ. ಸತಿಯ ಕಳೇವರವನ್ನು ಬೆನ್ನಿಗೂ, ಹೆಗಲಿಗೂ ಚೆಲ್ಲಿಕೊಂಡು ಆತ ಇಡೀ ದೇಶದ ಒಳಗೂ, ಸುತ್ತಲೂ ಧಾವಂತ ಸುತ್ತಿದ. ಈ ಧಾವಂತದಲ್ಲಿ ಸತಿಯ ದೇಹದ ಅಂಗಾಂಗಳು ಒಂದೊಂದೇ ಕಳಚಿ ಬೀಳುತ್ತಿದ್ದವು. ಕೊನೆಯ ಚೂರು ಉದುರುವ ತನಕವೂ ಶಿವ ನಿಲ್ಲಲಿಲ್ಲ. ತೀಕ್ಷ್ಣವೂ, ನಿಸ್ಸಂಕೋಚವೂ ಆದ ಮೈತ್ರಿಯ ಇಂಥ ಅವಧೂತ ಕಥೆಯನ್ನು ಯಾವ ಪ್ರೇಮಿಯೂ ಉಳಿಸಿಹೋಗಿಲ್ಲ- ದೇವಾನುದೇವತೆಗಳಲ್ಲಾಗಲಿ, ದೈತ್ಯರಲ್ಲಾಗಲಿ, ಮನುಷ್ಯರಾಗಲಿ. ಅದಷ್ಟೇ ಅಲ್ಲ, ಈ ಕಥೆ ಇಂಡಿಯಾದ ಕ್ಷಯವಿಲ್ಲದಂಥ ಅಂತಃಸ್ಫೂರ್ತವಾದ ಏಕತೆಯ ಕಥೆಯನ್ನು ಹೇಳುತ್ತದೆ.
ಸತಿಯ ಒಂದೊಂದು ಅಂಗ ಕೆಳಗೆ ಬಿದ್ದಲ್ಲೂ ಒಂದೊಂದು ಯಾತ್ರಾಸ್ಥಳ ಕಲ್ಪಿತವಾಗಿದೆ. ಮಾಣಿಕ್ಯ ಮುಡಿದ ಆಕೆಯ ಕಿವಿ ವಾರಣಾಸಿಯಲ್ಲಿ ಬಿತ್ತು. ಅದು ಮಣಿಕರ್ಣಿಕಾ ಎನ್ನಿಸಿಕೊಂಡಿತು. ಇವೊತ್ತಿಗೂ, ಸತ್ತವರನ್ನು ಅಲ್ಲಿ ಸುಟ್ಟರೆ, ಅವರಿಗೆ ನಿಸ್ಸಂಶಯ ಮುಕ್ತಿ ದೊರೆಯುತ್ತದೆ ಎಂದು ತಿಳಿಯಲಾಗುತ್ತದೆ.
ಭಾರತದ ಉತ್ತರದ ತುದಿಯಲ್ಲಿ ದೂರಕ್ಕಿರುವ ಕಾಮರೂಪದಲ್ಲಿ ಆಕೆಯ ಭಿನ್ನಮುಂಡ ಬಿದ್ದಿತಂತೆ. ನೂರಾರು ಪೀಳಿಗೆಗಳು ಬಂದು ಹೋಗಿದ್ದರೂ ಈಗಲೂ ಅದರ ಮಾಂತ್ರಿಕತೆ ಅಳಿದಿಲ್ಲ. ಈಗ ಕೂಡ ಮನೆಯೊಳಗಿನ ಅಜ್ಜಿಯರು ಕಾಮರೂಪದ ಸ್ತ್ರೀಯರ ಬಗೆಗೆ ಮಕ್ಕಳಿಗೆ ಎಚ್ಚರ ಹೇಳುತ್ತಾರೆ, ಅವರು ತಮ್ಮ ಗಂಡಸರನ್ನು ಪಳಗಿದ ಕೋಣವಾಗಿಸಿಬಿಡುತ್ತಾರೆ ಎಂದು….
ಶಿವ- ತಾತ್ಕ್ಷಣಿಕ ಸಿದ್ಧಾಂತಕ್ಕೆ ಸಾಕಾರನಾಗಿದ್ದಾನೆ. ಅವನ ಪ್ರತಿಯೊಂದು ಕೃತಿಯೂ ತತ್ಕ್ಷಣದಲ್ಲೆ ತನ್ನನ್ನು ಸಮರ್ಥಿಸಿಕೊಳ್ಳುವಂಥದು; ಅದಕ್ಕಾಗಿ ಹಿಂದಿನ ಅಥವಾ ಮುಂದಿನ ಕಾರ್ಯಕಾರಣಗಳನ್ನು ಕೆದಕಬೇಕಾಗಿಲ್ಲ. ಗಾತ್ರಾತೀತವಾದ ಈ ವ್ಯಕ್ತಿತ್ವ, ತಾತ್ಕ್ಷಣಿಕತೆಯ ಈ ಮಹತ್ ಪುರಾಣ ತತ್ವಜಗತ್ತಿಗೆ ಮತ್ತೂ ಎರಡು ದರ್ಶನವೈಭವಗಳನ್ನು ಕೊಟ್ಟಿದೆ.
ಈ ಲೇಖನ ಓದಿದ್ದೀರಾ?: ‘ಮೊಹಮ್ಮದ್ ದೀಪಕ್’ ವಿರುದ್ಧ ಕೆರಳಿದ ಹಿಂದುತ್ವ ಮತಾಂಧರು; ಜಿಮ್ ಸದಸ್ಯತ್ವ ಪಡೆದು ಬೆಂಬಲಿಸಿದ ಸಹೃದಯಿಗಳು
ದೇವತೆಗಳು ಮತ್ತು ರಾಕ್ಷಸರು ಸಮುದ್ರ ಮಥನ ಮಾಡಿದಾಗ, ಅಮೃತ ಬರುವ ಮೊದಲೇ ವಿಷ ಹೊರಟಿತು. ಈ ವಿಷವನ್ನು ಯಾರಾದರೂ ಕುಡಿದು ಮುಗಿಸಬೇಕಾಗಿತ್ತು. ಈ ಹಿಂದೆ ನಡೆದ ದೇವ-ರಾಕ್ಷಸ ಯುದ್ಧಗಳಲ್ಲಾಗಲಿ, ಸಮುದ್ರಮಂಥನದ ಸಾಹಸಲ್ಲಾಗಲಿ ಶಿವ ಪಾಲುಗೊಂಡವನಲ್ಲ. ಹಾಗಿದ್ದೂ, ಅವನು ಹುಟ್ಟಿದ ವಿಷವನ್ನು ಹೀರಿ ಕಥೆ ಮುಂದುವರಿಯುವಂತೆ ಮಾಡಿದ. ಕುಡಿದ ವಿಷವನ್ನು ಗಂಟಲಲ್ಲೆ ನಿಲ್ಲಿಸಿಕೊಂಡು ಅಲ್ಲಿಂದ ಮುಂದೆ ನೀಲಕಂಠ ಎಂದು ಹೆಸರಾದ.
ಶಿವತತ್ವದ ಇನ್ನೊಂದು ದರ್ಶನ- ಎಲ್ಲ ಕಾಲಕ್ಕೂ, ಎಲ್ಲ ಹೊತ್ತಿನಲ್ಲೂ ಪೂಜಾರ್ಹವಾದದ್ದು. ಒಮ್ಮೆ ಯಾವನೋ ಭಕ್ತ ಶಿವನ ಜೊತೆಯಲ್ಲಿ ಪಾರ್ವತಿಗೂ ಪೂಜೆ ಸಲ್ಲಿಸಲು ನಿರಾಕರಿಸಿದಾಗ ಶಿವ ಅರ್ಧನಾರೀಶ್ವರನಾಗಿ ನಿಂತ; ದೇಹಾರ್ಧ ತಾನಾಗಿ, ಮತ್ತೊಂದರ್ಧ ಪಾರ್ವತಿಯಾಗಿ ಪೂಜೆಗೊಂಡ. ಈ ಚಿತ್ರವನ್ನು ಅಡಿತನಕ ವಿವರವಿವರವಾಗಿ ಇಡೀ ಕಲ್ಪಿಸಿಕೊಳ್ಳಲು ಯತ್ನಿಸಿ ತುಂಬ ಕಷ್ಟವಾಗಿದೆ ನನಗೆ, ಅನೇಕ ಸಲ. ಆದರೆ ಈ ದರ್ಶನ ಮಾತ್ರ ತುಂಬ ಸುಂದರವಾದದ್ದು.”
-ರಾಮಮನೋಹರ ಲೋಹಿಯಾ
ಉಲ್ಲೇಖ: -‘ರಾಮ, ಕೃಷ್ಣ, ಶಿವ’ (ಲೇಖನದಲ್ಲಿ, ಜುಲೈ, 1956, ‘ಇಂಟರ್ವಲ್ ಡ್ಯೂರಿಂಗ್ ಪಾಲಿಟಿಕ್ಸ್’ ಪುಸ್ತಕ)
ಕನ್ನಡಕ್ಕೆ: -ಕೆ.ವಿ. ಸುಬ್ಬಣ್ಣ
ಕೃಪೆ: -‘ರಾಜಕೀಯದ ಮಧ್ಯೆ ಬಿಡುವು’ (ರಾಮಮನೋಹರ ಲೋಹಿಯಾ ಪುಸ್ತಕ ಮಾಲಿಕೆ-2, ಪುಟ: 59 & 62-63, 2022)
ಸಂಪಾದಕರು: -ನಟರಾಜ್ ಹುಳಿಯಾರ್




