ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷ ಮತ್ತು ಹಾರ್ಮುಜ್ ಜಲಸಂಧಿಯ ಸ್ಥಗಿತಗೊಂದಾಗಿ ಭಾರತವು ಭಾರೀ ‘ದ್ರವೀಕೃತ ಪೆಟ್ರೋಲಿಯಂ ಅನಿಲ’ (ಎಲ್ಪಿಜಿ) ಕೊರತೆಯನ್ನು ಎದುರಿಸುತ್ತಿದೆ. ವಾಣಿಜ್ಯ ಸಿಲಿಂಡರ್ಗಳ ಪೂರೈಕೆ ಸ್ಥಗಿತಗೊಂಡಿದ್ದು, ಹಲವಾರು ಹೋಟೆಲ್ಗಳು ಮುಚ್ಚಿವೆ. ಗೃಹಬಳಕೆಯ ಸಿಲಿಂಡರ್ಗಳಲ್ಲೂ ಬುಕಿಂಗ್ ಅವಧಿ ಮತ್ತು ಸರಬರಾಜುವಿನಲ್ಲಿ ಭಾರೀ ಅಂತರವಿದೆ. ಈ ಸಂಕಷ್ಟದ ನಡುವೆ, ಭಾರತೀಯ ಧ್ವಜವುಳ್ಳ ‘ಶಿವಾಲಿಕ್’ ಮತ್ತು ‘ನಂದಾದೇವಿ’ ಎಲ್ಪಿಜಿ ಸಾಗಾಣಿಕೆ ಹಡಗುಗಳು ಇರಾನ್ನ ಕೃಪಾಕಟಾಕ್ಷದಿಂದ ಹಾರ್ಮುಜ್ ಜಲಸಂಧಿ ದಾಟಿವೆ. ಶಿವಾಲಿಕ್ ಸುರಕ್ಷಿತವಾಗಿ ಭಾರತಕ್ಕೆ ತಲುಪಿದ್ದರೆ, ನಂದಾದೇವಿ ಮಾರ್ಚ್ 17 (ಇಂದು) ತಲುಪಲಿದೆ. ಇದು ದೇಶದ ಎಲ್ಪಿಜಿ ಕೊರತೆಗೆ ತಾತ್ಕಾಲಿಕ ರಿಲೀಫ್ ನೀಡಲಿದೆ ಎಂದೂ ಹೇಳಲಾಗುತ್ತಿದೆ.
ಇರಾನ್ ಮೇಲೆ ಫೆಬ್ರವರಿ 28ರಂದು ಅಮೆರಿಕ-ಇಸ್ರೇಲ್ ಜಂಟಿ ದಾಳಿ ನಡೆಸಿ, ಯುದ್ಧ ಆರಂಭಿಸಿದ್ದವು. ಆ ಬಳಿಕ, ಹಾರ್ಮುಜ್ ಜಲಸಂಧಿಯನ್ನು ಮುಚ್ಚಿದ ಇರಾನ್, ಚೀನಾ ಹೊರತುಪಡಿಸಿ ಇನ್ನಾವುದೇ ದೇಶದ ಸರಕು ಹಡಗುಗಳು ಜಲಸಂಧಿ ದಾಟಲು ಬಿಡುವುದಿಲ್ಲ ಎಂದು ಘೋಷಿಸಿತ್ತು. ಜಾಗತಿಕ ಆರ್ಥಿಕ ಅಸ್ಥಿರತೆಯೇ ಅಮೆರಿಕವು ಈ ಯುದ್ಧದಿಂದ ಹಿಂದೆ ಸರಿಯುವಂತೆ ಮಾಡುತ್ತದೆ ಎಂದು ಇರಾನ್ ಹೇಳಿತ್ತು. ಇದು, ಜಾಗತಿಕವಾಗಿ ಇಂಧನ ಬಿಕ್ಕಟ್ಟಿಗೆ ಕಾರಣವೂ ಆಗಿತ್ತು. ಭಾರತದ ಒಟ್ಟು 24 ಹಡಗುಗಳು ಹಾರ್ಮುಜ್ ಜಲಸಂಧಿಯ ಹಿಂದೆ ಸಿಲುಕಿಕೊಂಡಿದ್ದವು. ಇದೀಗ, ಭಾರತೀಯ ಹಡಗುಗಳ ಸಂಚಾರಕ್ಕೆ ಇರಾನ್ ಅನುಮತಿ ನೀಡಿದೆ. ಎರಡು ಹಡಗುಗಳು ಭಾರತಕ್ಕೆ ಬಂದಿವೆ.
ಪರ್ಷಿಯನ್ ಗಲ್ಫ್ ಪ್ರದೇಶದಿಂದ ಎಲ್ಪಿಜಿ ಲೋಡ್ ಮಾಡಿಕೊಂಡು ಕತಾರ್ನಿಂದ ಹೊರಟಿದ್ದ ಶಿವಾಲಿಕ್ ಹಡಗು, ಸೋಮವಾರ ಸಂಜೆ ಗುಜರಾತ್ನ ಮುಂದ್ರಾ ಬಂದರನ್ನು ತಲುಪಿದೆ. ಅರ್ಧದಷ್ಟು ಎಲ್ಪಿಜಿಯನ್ನು ಅಲ್ಲಿ ಇಳಿಸಿ, ಉಳಿದ ಎಲ್ಪಿಜಿಯನ್ನು ಹೊತ್ತು ಮಂಗಳೂರಿಗೆ (ನವಮಂಗಳೂರು ಬಂದರ್) ಬರಲಿದೆ.
“ಭಾರತದ ಧ್ವಜ ಹೊಂದಿರುವ ಶಿವಾಲಿಕ್ ಮತ್ತು ನಂದಾದೇವಿ ಹಗಡುಗಳು ಸುಮಾರು 92,712 ಮೆಟ್ರಿಕ್ ಟನ್ ಎಲ್ಪಿಜಿಯನ್ನು ಹೊತ್ತು ಯಶಸ್ವಿಯಾಗಿ ಭಾರತಕ್ಕೆ ಬಂದಿವೆ. ಇದು ಪೂರೈಕೆಯ ಆತಂಕವನ್ನು ನಿವಾರಿಸಿದೆ” ಎಂದು ಮೋತಿಲಾಲ್ ಓಸ್ವಾಲ್ ಫೈನಾನ್ಶಿಯಲ್ ಸರ್ವಿಸಸ್ ಲಿಮಿಟೆಡ್ನ ಸಂಶೋಧನಾ ವಿಭಾಗದ ಮುಖ್ಯಸ್ಥ ಸಿದ್ಧಾರ್ಥ ಖೇಮ್ಕಾ ಹೇಳಿದ್ದಾರೆ.
ಶಿವಾಲಿಕ್ ಮತ್ತು ನಂದಾದೇವಿ ಸಾಮರ್ಥ್ಯವೆಷ್ಟು?
ಶಿವಾಲಿಕ್ ಹಡಗು ಸುಮಾರು 45,000 ರಿಂದ 46,000 ಮೆಟ್ರಿಕ್ ಟನ್ ಎಲ್ಪಿಜಿ ಹೊತ್ತುಬಂದಿದೆ. ಕೆಲವು ವರದಿಗಳ ಪ್ರಕಾರ ಇದು 40,000 ರಿಂದ 55,000 ಮೆಟ್ರಿಕ್ ಟನ್ಗಳೂ ಇರಬಹುದು ಎಂದು ಹೇಳಲಾಗಿದೆ. ಭಾರತದ ದೈನಂದಿನ ಎಲ್ಪಿಜಿ ಬಳಕೆ ಸುಮಾರು 70,000-80,000 ಮೆಟ್ರಿಕ್ ಟನ್ (ಗೃಹಬಳಕೆ + ಕಮರ್ಷಿಯಲ್) ಇರುತ್ತದೆ. ಶಿವಾಲಿಕ್ ಹಡಗಿನಲ್ಲಿರುವ ಎಲ್ಪಿಜಿ ದೇಶದ ಒಂದು ದಿನ ಒಟ್ಟು ಅಗತ್ಯದ ಸುಮಾರು 40-50% ಭಾಗವನ್ನು ಪೂರೈಸುತ್ತದೆ. ಸುಮಾರು 28 ಲಕ್ಷಕ್ಕೂ ಹೆಚ್ಚು ಗೃಹಬಳಕೆಯ ಸಿಲಿಂಡರ್ಗಳನ್ನು ಭರ್ತಿ ಮಾಡಲು ನೆರವಾಗುತ್ತದೆ ಎಂದು ಅಂದಾಜಿಸಲಾಗಿದೆ. ಇದು ತಾತ್ಕಾಲಿಕ ರಿಲೀಫ್ ನೀಡುತ್ತದೆ ಎಂದು ಹೇಳಲಾಗಿದೆ.
ಇನ್ನು, ನಂದಾ ದೇವಿ ಹಡಗು 47,000+ ಮೆಟ್ರಿಕ್ ಟನ್ ಎಲ್ಪಿಜಿ ಹೊತ್ತು ಭಾರತವನ್ನು ಇಂದು (ಮಾರ್ಚ್ 17) ತಲುಪಲಿದ್ದು, ಕಾಂಡ್ಲಾ ಅಥವಾ ವಡಿನಾರ್ ಬಂದರಿನಲ್ಲಿ ಅನಿಲವನ್ನು ಇಳಿಸಲಾಗಿದೆ. ಇದು, ಕೂಡ ದೈನಂದಿನ ಬಳಕೆಯ ಸುಮಾರು 45% ಅನಿಲವನ್ನು ಪೂರೈಸಲಿದೆ.
ಇಂಧನ ಕೊರತೆಗೆ ಪರಿಹಾರವೇ?
ಶಿವಾಲಿಕ್ ಹಡಗು ಮುಂದ್ರಾ ಬಂದರಿನಲ್ಲಿ ಅನಿಲವನ್ನು ಅನ್ಲೋಡ್ ಮಾಡಿದ ನಂತರ, ಎಲ್ಪಿಜಿ ತ್ವರಿತವಾಗಿ ರಿಫೈನರೀಸ್ ಮತ್ತು ಬಾಟ್ಲಿಂಗ್ ಪ್ಲಾಂಟ್ಗಳಿಗೆ ಸಾಗಣೆಯಾಗುತ್ತದೆ. ಇದರಿಂದ ದೇಶದಲ್ಲಿ ಸಿಲಿಂಡರ್ ಲಭ್ಯತೆ ಸುಧಾರಿಸಲಿದೆ. ಆದಾಗ್ಯೂ, ಇದು, ಪರಿಪೂರ್ಣ ಕೊರತೆಯನ್ನು ನೀಗಿಸುವುದಿಲ್ಲ.
ಈ ಲೇಖನ ಓದಿದ್ದೀರಾ?: ವರದಕ್ಷಿಣೆ ಸಾವು | 3 ತಿಂಗಳಲ್ಲಿ 508 ಮಂದಿಗೆ ಜಾಮೀನು: ಹೈಕೋರ್ಟ್ ನ್ಯಾಯಾಧೀಶರಿಗೆ ಸುಪ್ರೀಂ…
ಕರ್ನಾಟಕದಲ್ಲಿಯೇ ಸುಮಾರು 1.48 ಕೋಟಿ ಕುಟುಂಬಳಿವೆ. ಈ ಪೈಕಿ ಸುಮಾರು 90 ಲಕ್ಷ ಕುಟುಂಬಗಳು ಎಲ್ಪಿಜಿ ಬಳಸುತ್ತಿವೆ. ಅಂದರೆ, 90 ಲಕ್ಷ ಗೃಹಬಳಕೆಯ ಸಿಲಿಂಡರ್ಗಳು ಏಕಕಾಲದಲ್ಲಿ ಬಳಕೆಯಲ್ಲಿರುತ್ತವೆ. ಹೀಗಾಗಿ, ಶಿವಾಲಿಕ್ ಮತ್ತು ನಂದಾ ದೇವಿ ಹಗಡುಗಳು ಹೊತ್ತು ತಂದಿರುವ ಎಲ್ಪಿಜಿ ಸುಮಾರು 40 ಲಕ್ಷ ಗೃಹಬಳಕೆಯ ಸಿಲಿಂಡರ್ಗಳನ್ನು ಭರ್ತಿ ಮಾಡಿದರೂ, ಇದು ಅರ್ಧ ಕರ್ನಾಟಕಕ್ಕೆ ಮಾತ್ರವೇ ಸಾಕಾಗುತ್ತದೆ.
ಆದಾಗ್ಯೂ, ಎಲ್ಲರೂ ಏಕಕಾಲದಲ್ಲಿಯೇ ಸಿಲಿಂಡರ್ಗಳನ್ನು ಖರೀದಿಸದೇ ಇರುವುದರಿಂದ, ಕರ್ನಾಟಕದ ಸಿಲಿಂಡರ್ ಬೇಡಿಕೆಯನ್ನು ಈ ಎರಡೂ ಹಡಗುಗಳ ಎಲ್ಪಿಜಿ ನೀಗಿಸಬಹುದಾದ ಸಾಮರ್ಥ್ಯ ಹೊಂದಿದೆ. ಅಥವಾ, ದೇಶದ ದೈನಂದಿನ ಅಗತ್ಯದಲ್ಲಿ ಅರ್ಧದಷ್ಟು ಅಗತ್ಯವನ್ನು ಪೂರೈಸಲಿದೆ. ಆದರೆ, ಇಡೀ ದೇಶದ ಬೇಡಿಕೆ ನೀಗಿಸಲು ತ್ವರಿತ ಮತ್ತು ಅತೀ ಹೆಚ್ಚು ಎಲ್ಪಿಜಿ ಆಮದಿನ ಅಗತ್ಯವಿದೆ.
ಸದ್ಯಕ್ಕೆ, ಈ ಎರಡೂ ಹಡಗುಗಳು ಕೊರತೆಯ ಆತಂಕವನ್ನು ಕಡಿಮೆ ಮಾಡಲಿವೆ. ಸಿಲಿಂಡರ್ ಬೆಲೆಗಳು ಮತ್ತು ಲಭ್ಯತೆಯಲ್ಲಿ ಸುಧಾರಣೆ ಕಾಣಿಸಲಿದೆ.




