ಮುದ್ರಣ ಕಾಶಿ ಗದಗ ಜಿಲ್ಲೆಯ ಅಭಿವೃದ್ಧಿಯ ವೇಗ ಎಷ್ಟಿದೆ ಎಂಬುದು ಈಗಾಗಲೇ ತಿಳಿದಿರುವ ಸಂಗತಿ. ಜಿಲ್ಲೆಯ ಕೃಷಿ, ಶಿಕ್ಷಣ, ಕೈಗಾರಿಕೋದ್ಯಮ, ಕುಡಿಯುವ ನೀರು, ಪ್ರವಾಸೋದ್ಯಮ ಸೇರಿದಂತೆ ಹಲವು ಕ್ಷೇತ್ರಗಳಿಗೆ ಅನುದಾನ ಸಿಗದೆ ಸೊರಗುತ್ತಿವೆ. ಕಳೆದ ಬಾರಿಯೂ ಹೇಳಿಕೊಳ್ಳುವಂತ ಯೋಜನೆಗಳು ಬಜೆಟ್ನಿಂದ ಸಿಕ್ಕಿರಲಿಲ್ಲ. ಅನುದಾನವನ್ನಾಗಲೀ ಹೊಸ ಯೋಜನೆಯನ್ನಾಗಲೀ ಘೋಷಣೆ ಮಾಡದೇ, ಜಿಲ್ಲೆಯ ಜನರ ಮೂಗಿಗೆ ತುಪ್ಪ ಸವರಿದ್ದರು. ಪ್ರತಿ ಬಾರಿಯಂತೆ ಈ ಬಾರಿಯೂ ಬಜೆಟ್ ಮಂಡಿಸಿ ಸುಮ್ಮನಾಗದೆ, ಸಿಎಂ ಸಿದ್ದರಾಮಯ್ಯ ಗದಗ ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪೂರಕವಾದ ಬಜೆಟ್ ಮಂಡಿಸುವ ನಿರೀಕ್ಷೆಯಲ್ಲಿ ಜನರಿದ್ದಾರೆ.
ಹೇಳಿಕೇಳಿ ಗದಗ ಕೃಷಿ ಪ್ರಧಾನ ಜಿಲ್ಲೆ. ಮೆಣಸಿನಕಾಯಿ, ಜೋಳ, ಹತ್ತಿ, ಈರುಳ್ಳಿ ಜಿಲ್ಲೆಯಲ್ಲಿ ಅತೀ ಹೆಚ್ಚಾಗಿ ಬೆಳೆಯುವ ವಾಣಿಜ್ಯ ಬೆಳೆಗಳು. ಈ ಬೆಳೆಗಳ ಆಧಾರಿತ ಕೈಗಾರಿಕೆಗಳ ಸ್ಥಾಪನೆ ಇನ್ನೂ ಮೌಖಿಕ ಯೋಜನೆಯಾಗಿಯೇ ಉಳಿದಿದೆ. ಜಿಲ್ಲೆಯಲ್ಲಿ ರೈತಸ್ನೇಹಿ, ಪರಿಸರ ಸ್ನೇಹಿ ಉದ್ಯಮ ರೂಪಿಸಿ, ರೈತರು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ದೊರಕಿಸುವ ನಿಟ್ಟಿನಲ್ಲಿ ಕೆಲಸಗಳಾಗುತ್ತಿಲ್ಲ. ಕೃಷಿ, ಕೈಗಾರಿಕೋದ್ಯಮ ಸೇರಿ ಹಲವು ಕ್ಷೇತ್ರಗಳಿಂದ ಈ ವರ್ಷದ ಬಜೆಟ್ ನೆಡೆಗೆ ಒತ್ತಾಯಗಳು ಕೇಳಿಬಂದಿವೆ.
ಜವಳಿ ಪಾರ್ಕ್ ಬೇಡಿಕೆ: ಗದಗ-ಬೆಟಗೇರಿ ಅವಳಿ ನಗರದ ಸಮೀಪದ ನರಸಾಪುರದಲ್ಲಿ ನೇಕಾರಿಕೆ ಪ್ರಮುಖ ಗುಡಿ ಕೈಗಾರಿಕೆಯಾಗಿದೆ. ನೇಕಾರಿಕೆ ಅವಲಂಬಿಸಿರುವ ಸಾವಿರಾರು ಕುಟುಂಬಗಳು ಜಿಲ್ಲೆಯಲ್ಲಿದ್ದು, ನೇಕಾರಿಕೆಗೆ ಪುನಶ್ಚೇತನ ನೀಡುವ ಸಂಬಂಧ ನರಸಾಪುರದಲ್ಲಿ ಜವಳಿ ಪಾರ್ಕ್ ಸ್ಥಾಪನೆ ಆಗಬೇಕು. ಜವಳಿ ಉದ್ಯಮಕ್ಕೆ ಉತ್ತೇಜನ ನೀಡಬೇಕಾದರೆ ನರಸಾಪುರದಲ್ಲಿ ಜವಳಿ ಪಾರ್ಕ್ ಸ್ಥಾಪನೆ ಆಗಬೇಕು ಎನ್ನುವುದು ನೇಕಾರರ ಒತ್ತಾಯ.
ಕುಡಿಯುವ ನೀರಿನ ಸಮಸ್ಯೆ: ಗದಗ-ಬೆಟಗೇರಿ ಅವಳಿ ನಗರಗಳು ಸುಮಾರು 30 ವರ್ಷಗಳಿಂದಲೂ ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದು, ಈ ಸಾರಿಯ ಬಜೆಟ್ ನಲ್ಲಿ ಶಾಶ್ವತ ಪರಿಹಾರವನ್ನು ಕಂಡುಕೊಳ್ಳವ ಆಸೆಯಲ್ಲಿದ್ದಾರೆ ನಗರದ ಜನ.
ರಾಣಿ ವಿಕ್ಟೋರಿಯಾ ಕೆರೆ ಅಭಿವೃದ್ದಿಗೆ ಒತ್ತಾಯ: ಗದಗಿನ ಭೀಷ್ಮ ಕೆರೆಯನ್ನು ಪ್ರವಾಸೋದ್ಯಮಕ್ಕೆ ಪೂರಕವಾಗಿ ಅಭಿವೃದ್ಧಿಪಡಿಸಿದ ರೀತಿಯೇ ಡಂಬಳದ ಐತಿಹಾಸಿಕ ವಿಕ್ಟೋರಿಯಾ ಕೆರೆಯನ್ನು ಅಭಿವೃದ್ಧಿಪಡಿಸಿ, ಈ ಭಾಗದ ಪ್ರವಾಸೋದ್ಯಮಕ್ಕೆ ಒತ್ತು ಕೊಡಬೇಕೆಂಬುದು ಇಲ್ಲಿಯ ಪರಿಸರ ಪ್ರೇಮಿಗಳ ಬೇಡಿಕೆ.
ಬುದ್ಧ ವಿಹಾರ ನಿರ್ಮಾಣ ಆಗ್ರಹ: ಇದು ಜಿಲ್ಲೆಯ ಜನರ ಬಹುದಿನಗಳ ಬೇಡಿಕೆ. ಬುದ್ಧ ವಿಹಾರ ನಿರ್ಮಾಣ ಮಾಡಲು ಪ್ರವಾಸೋದ್ಯಮ ಸಚಿವ ಎಚ್ ಕೆ ಪಾಟೀಲ್ ಅವರಿಗೂ ಮನವಿ ಮಾಡಲಾಗಿತ್ತು. 2024-25ರ ಬಜೆಟ್ ಮಂಡಿಸಿದಾಗ ಗದಗಿನಲ್ಲಿ ಬೌದ್ಧ ವಿಹಾರಕ್ಕೆ 2 ಕೋಟಿ ರೂ ಅನುದಾನ ನಿಗದಿ ಮಾಡಲಾಗಿತ್ತು. ಕಳೆದ ಬಜೆಟ್ ನಲ್ಲಿ ಅದರ ಸೊಲ್ಲಿಲ್ಲ. ಈ ಬಜೆಟ್ಟಿನಲ್ಲಿ ಬುದ್ದ ವಿಹಾರ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಯಾವಾಗ ಎಂಬ ಪ್ರಶ್ನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಉತ್ತರಿಸಬೇಕು ಎಂದು ದಲಿತಪರ ಸಂಘಟನೆಗಳು ಒತ್ತಾಯಿಸಿವೆ.
ಪ್ರಸಕ್ತ ಬಜೆಟ್ನಲ್ಲಿ ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿಗೆ ವಿಶೇಷ ಅನುದಾನ ನಿರೀಕ್ಷೆ ಗರಿಗೆದರಿದೆ. ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ಕಪ್ಪತ ಗುಡ್ಡ, ಹಾಗೂ ಮಾಗಡಿ ಪಕ್ಷಿಧಾಮವನ್ನು ಜಿಲ್ಲೆಯ ಪ್ರವಾಸೋದ್ಯಮ ತಾಣವಾಗಿ ಅಭಿವೃದ್ಧಿಪಡಿಸಬೇಕಿದೆ. ಗದಗ ಉಸ್ತುವಾರಿ ಸಚಿವರೂ ಆದ ಪ್ರವಾಸೋದ್ಯಮ ಸಚಿವ ಎಚ್ ಕೆ ಪಾಟೀಲರ ಮಹತ್ವಕಾಂಕ್ಷೆಯ ಯೋಜನೆಗಳಲ್ಲಿ ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರವೂ ಒಂದಾಗಿದೆ. ಸಚಿವರ ತವರು ಜಿಲ್ಲೆ ಕೂಡ ಗದಗ. ಐತಿಹಾಸಿಕ ಲಕ್ಕುಂಡಿ ಸಹಿತ ಜಿಲ್ಲೆಯ 56 ಸ್ಮಾರಕಗಳ ಅಭಿವೃದ್ಧಿ, ಪ್ರಚಾರ ಮತ್ತು ಪ್ರವಾಸಿಗರನ್ನು ಆಕರ್ಷಿಸಲು ಒಟ್ಟಾರೆ 804.33 ಕೋಟಿ ರೂ. ಪ್ರಸ್ತಾವನೆಯನ್ನು ಸಚಿವ ಪಾಟೀಲರಿಗೆ ಸಲ್ಲಿಸಲಾಗಿದೆ.
ರೋಣ ಪಟ್ಟಣಕ್ಕೆ ಬೇಕಿದೆ ಸರಕಾರಿ ಪದವಿ ಕಾಲೇಜು: ಸುಮಾರು ಹದಿನಾಲ್ಕು ವರ್ಷಗಳ ಹಿಂದೆ ಸರಕಾರಿ ಪ್ರಥಮ ದರ್ಜೆ ಕಾಲೇಜು ರೋಣ ಪಟ್ಟಣದಲ್ಲಿತ್ತು. ದಾಖಲಾತಿ ಕಡಿಮೆ ಆಗುತ್ತಿದೆ ಎಂಬ ಕಾರಣಕ್ಕೆ ಪದವಿ ಕಾಲೇಜನ್ನು ಬೇರೆ ಜಿಲ್ಲೆಯ ತಾಲೂಕಿಗೆ ಸ್ಥಳಾಂತರಿಸಲಾಯಿತು. ಕ್ಷೇತ್ರದ ಅಭ್ಯರ್ಥಿಗಳು, ಜನಪ್ರತಿನಿಧಿಗಳು ಕಾಲೇಜು ಉಳಿಸಿಕೊಳ್ಳುವ ಯಾವ ಪ್ರಯತ್ನಗಳನ್ನೂ ಮಾಡಲಿಲ್ಲ. ಜನಪ್ರತಿನಿಧಿಗಳ ನಿರ್ಲಕ್ಷದಿಂದ ತಾಲೂಕಿನ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಅನಿವಾರ್ಯವಾಗಿ ದೂರದ ನರಗುಂದ, ಹೊಳೆಆಲೂರು, ಬಾದಾಮಿ, ಗದಗ, ನರೇಗಲ್, ಗಜೇಂದ್ರಗಡ ಪಟ್ಟಣದ ಸರಕಾರಿ ಪದವಿ ಕಾಲೇಜುಗಳಿಗೆ ಹೋಗುವ ಪರಿಸ್ಥಿತಿ ಉಂಟಾಯಿತು. ಇದರಿಂದ ಗ್ರಾಮೀಣ ಪ್ರದೇಶದ ಹೆಣ್ಣುಮಕ್ಕಳು ಹೋಗಿ ಬರಲು ದೂರ ಆಗಿದ್ದರಿಂದ ಪದವಿ ಶಿಕ್ಷಣವನ್ನು ಮೊಟಕುಗೊಳಿಸುತ್ತಿದ್ದಾರೆ. ಈ ಬಾರಿಯ ಬಜೆಟ್ನಲ್ಲಿ ಸಿಎಂ ಸಿದ್ದರಾಮಯ್ಯ ಅವರು ರೋಣ ಪಟ್ಟಣಕ್ಕೆ ಸರಕಾರಿ ಪ್ರಥಮ ದರ್ಜೆ ಘೋಷಣೆ ಮಾಡುವ ಮೂಲಕ ಗ್ರಾಮೀಣ ಭಾಗದ ಹೆಣ್ಣು ಮಕ್ಕಳು ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದು ಪ್ರಜ್ಞಾವಂತರು ಆಗ್ರಹಿಸಿದ್ದಾರೆ.
ಉದ್ಯೋಗ ಸೃಷ್ಟಿಗೆ ಒತ್ತು: ಜಿಲ್ಲೆಯಲ್ಲಿ ಬಹಳ ಮಂದಿ ನಿರುದ್ಯೋಗ ಯುವಕ ಯುವತಿಯರಿದ್ದಾರೆ. ಉದ್ಯೋಗ ಅರಸಿ ದೂರದ ಮೈಸೂರು, ಬೆಂಗಳೂರು, ಮಂಗಳೂರು, ಮುಂಬೈಗೆ ಹೋಗುತ್ತಾರೆ. ಜಿಲ್ಲೆಯಲ್ಲಿಯೇ ಯುವಕ ಯುವತಿಯರಿಗೆ ಉದ್ಯೋಗ ಸಿಗುವಂತೆ ಆಗಬೇಕು.
ಕಳಸಾ-ಬಂಡೂರಿ ಶೀಘ್ರ ಜಾರಿಗೊಳಿಸಿ: 2026ರ ಬಜೆಟ್ನಲ್ಲಿ, ಕೃಷಿ ಮತ್ತು ನೀರಾವರಿ ಯೋಜನೆಗಳಿಗೆ ಒತ್ತು ನೀಡುವುದರೊಂದಿಗೆ ಕಳಸಾ-ಬಂಡೂರಿ ಯೋಜನೆ ಶೀಘ್ರ ಜಾರಿಗೊಳಿಸುವ ನಿರೀಕ್ಷೆಯಿದೆ.
ಗದಗ-ಯಲಿವಿಗಿ ರೈಲ್ವೆ ಭೂಸ್ವಾಧೀನಕ್ಕೆ ಅನುದಾನ ಮೀಸಲು ಹಾಗೂ ಭೂಸ್ವಾಧೀನ ಪ್ರಕ್ರಿಯೆಗೆ ಚಾಲನೆ ನೀಡಬೇಕಿದೆ. ಗದಗ-ಬೆಟಗೇರಿ ಅವಳಿ ನಗರದ ರಿಂಗ್ ರೋಡ್ ನಿರ್ಮಾಣಕ್ಕೆ ಅನುದಾನ ಬೇಕಿದೆ. ಕಪ್ಪತಗುಡ್ಡ ಔಷಧೀಯ ಸಸ್ಯಗಳ ಸಂರಕ್ಷಣೆಗಾಗಿ ಆಯುರ್ವೇದ ಮಹಾವಿದ್ಯಾಲಯ ಅಥವಾ ಸಂಶೋಧನಾ ಕೇಂದ್ರ ಘೋಷಣೆಯಾಗಬೇಕಿದೆ. ಜಿಲ್ಲಾ ಹೆದ್ದಾರಿಯಿಂದ ರಾಜ್ಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿದ ರಸ್ತೆಗಳ ಅಭಿವೃದ್ಧಿಗೆ ಅನುದಾನ ಘೋಷಣೆ ಮಾಡಬೇಕಿದೆ. ಇನ್ನು ಹಲವು..
ಈ ಕುರಿತು ಎಸ್ಎಫ್ಐ ಜಿಲ್ಲಾಧ್ಯಕ್ಷ ಚಂದ್ರು ರಾಠೋಡ್ ಮಾತನಾಡಿ, “ಜಿಲ್ಲೆಯಲ್ಲಿ ಸರ್ಕಾರಿ ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಕುಂಠಿತಗೊಳ್ಳುತ್ತಿದೆ. ದಿನದಿಂದ ದಿನಕ್ಕೆ ಖಾಸಗಿ ಶಾಲೆಗಳ ಸಂಖ್ಯೆ ಹೆಚ್ಚುತ್ತಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿ-ಪಾಲಕರ ಮಧ್ಯೆ ಕಾನೂನು ಬಾಹಿರವಾಗಿ ಹಣ ವಸೂಲಿ ಮಾಡುತ್ತಿದ್ದಾರೆ. ಸರ್ಕಾರ ಅವುಗಳಿಗೆ ಕಡಿವಾಣ ಹಾಕಬೇಕು. ಜಿಲ್ಲೆಯಲ್ಲಿ ಮೂರಾರ್ಜಿ ದೆಸಾಯಿ ಮಾದರಿ ವಸತಿ ಶಾಲೆ, ಕಿತ್ತೂರಾಣಿ ಚೆನ್ನಮ್ಮ ವಸತಿ ಶಾಲೆ, ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ, ವಸತಿ ಶಾಲೆಗಳ ಸಂಖ್ಯೆ ಹೆಚ್ಚಳ ಮಾಡಬೇಕು” ಎಂದು ಒತ್ತಾಯಿಸಿದರು.

“ರೋಣ ಹೆಸರಿಗಷ್ಟೆ ತಾಲೂಕು ಆಗಿದ್ದು, ಒಂದು ಸರಕಾರಿ ಕಾಲೇಜು ಇಲ್ಲದೇ ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳು ಪದವಿ ಹಂತದ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಪದವಿ ಪೂರ್ವ ಕಾಲೇಜು ವಿಜ್ಞಾನ ವಿಭಾಗದ ಕೋರ್ಸ್ಗಳು ಇಲ್ಲ. ಆದ್ದರಿಂದ ಬಜೆಟ್ ನಲ್ಲಿ ಸರಕಾರಿ ಪದವಿ ಕಾಲೇಜು, ಸರ್ಕಾರಿ ಕಾನೂನು ಮಹಾವಿದ್ಯಾಲಯ ಘೊಷಣೆ ಮಾಡಬೇಕು. ಗಜೇಂದ್ರಗಡ ತಾಲೂಕಿನಲ್ಲಿ ಸ್ನಾತಕೋತ್ತರ ಪದವಿ ಕೇಂದ್ರ ಸ್ಥಾಪಿಸಬೇಕು. ಪಿಯುಸಿ ಸೈನ್ಸ್ ವಿಭಾಗ ಆರಂಭಿಸಬೇಕು” ಎಂದು ಒತ್ತಾಯಿಸಿದ್ದಾರೆ.
ಕರ್ನಾಟಕ ರೈತ ಪ್ರಾಂತ ಸಂಘ ಜಿಲ್ಲಾ ಮುಖಂಡ ಎಮ್ ಎಸ್ ಹಡಪದ ಮಾತಾನಡಿ, “ಕೃಷ್ಣ-ಬಿ ಸ್ಕೀಮ್ ಮೂರನೇ ಹಂತದ ಕೊಪ್ಪಳ ಸೂಕ್ಷ್ಮ ಏತ ನೀರಾವರಿ ಯೋಜನೆ ಅಡಿಯಲ್ಲಿ ಗಜೇಂದ್ರಗಡ ಹಾಗೂ ರೋಣದ ವಿವಿಧ ಕೆರೆಗಳನ್ನ ತುಂಬಿಸಲು ಅಗತ್ಯ ಅನುದಾನವನ್ನ ಬಿಡುಗಡೆ ಮಾಡಬೇಕು. ಗಜೇಂದ್ರಗಡ ಸರಕಾರಿ ಆಸ್ಪತ್ರೆಯನ್ನು ಮೇಲ್ದರ್ಜೇಗೇರಿಸಿ ಅದಕ್ಕೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಅನುದಾನವನ್ನು ಮೀಸಲಿಡಬೇಕು. ನೇಕಾರ ಉಳಿವಿಗೆ ಉದ್ಯೋಗ ಅವಕಾಶಗಳನ್ನು ಹೆಚ್ಚಿಸಬೇಕು. ಗಜೇಂದ್ರಗಡದ ಎಪಿಎಮ್ಸಿ ಯಲ್ಲಿ ಆಹಾರವನ್ನು ಸಂರಕ್ಷಣೆ ಮಾಡಲು ಕೋಲ್ಡ್ ಸ್ಟೋರೆಜ್ ಘೋಷಣೆ ಮಾಡಬೇಕು” ಎಂದು ಒತ್ತಾಯಿಸಿದರು.
ಈ ಕುರಿತು ದತಲಿ ಹೋರಾಟಗಾರ ಶರೀಫ್ ಬಿಳಿಯಲಿ ಮಾತನಾಡಿ, ಈ ಬಾರಿಯ ಬಜೆಟ್ ನಲ್ಲಿ ದಲಿತ ಸಮುದಾಯಕ್ಕೆ ಮೀಸಲಿಟ್ಟ 24.10% ಹಣವನ್ನು ಬೇರೆ ಯಾವುದೇ ಯೋಜನೆಗಳಿಗೆ ವರ್ಗಾವಣೆ ಮಾಡದಂತೆ ಘೋಷಿಸಬೇಕು. ಎಸ್ ಸಿ-ಎಸ್ ಟಿ ಅನುದಾನವನ್ನು ಬೇರೆ ಯೋಜನೆಗಳಿಗೆ ಸಾವಿರಾರು ಕೋಟಿ ರೂ ವಿವಿಧ ಯೋಜನೆಗಳಿಗೆ ವರ್ಗಾಯಿಸಿದರೂ ಒಬ್ಬನೇ ಒಬ್ಬ ಅಧಿಕಾರಿ ಮೇಲೆ ಯಾವುದೇ ಕ್ರಮ ಗೈಗೊಂಡಿಲ್ಲ. ಇದನ್ನು ಗಂಬೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕು” ಎಂದಿದ್ದಾರೆ.

ಇದನ್ನೂ ಓದಿ: ಗದಗ | ಕವಿವಿ ಬ್ಲೂ ಆಗಿ ವಿದ್ಯಾರ್ಥಿನಿ ರೇಖಾ ಗೊಕಾವಿ ಆಯ್ಕೆ
ತಕ್ಷಣ ಬೌದ್ದ ವಿಹಾರ ನಿರ್ಮಾಣದ ಕಾಮಗಾರು ಪ್ರಾರಂಭಿಸಬೇಕು. ಗ್ಯಾರಂಟಿ ಯೋಜನೆಗಳಲ್ಲಿ ಶಕ್ತಿ ಯೋಜನೆಗೆ ಅಡಿಯಲ್ಲಿ ಮಹಿಳೆಯರ ಪ್ರಯಾಣದ ಸಂಖ್ಯೆ ಹೆಚ್ಚುತ್ತಿದೆ. ಜೊತೆಗೆ ಬೇಸಿಗೆ ಬರುವುದರಿಂದ ಶಾಲಾ ಕಾಲೇಜುಗಳು ರಜೆ ಇರುವುದರಿಂದ ಪ್ರವಾಸಕ್ಕೆ ಹೋಗುವ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಿಗೆ ಹೊಸ ಬಸ್ ಗಳನ್ನು ಬಿಡಬೇಕು. ಈಗಾಗಲೇ ಮೊದಲ ಹಂತದಲ್ಲಿ ಬಿಡಲಾಗಿರುವ ಬಸ್ ಗಳು ಸಾರ್ವಜನಿಕರಿಗೆ ಸಾಲುತ್ತಿಲ್ಲ. ಇದನ್ನು ಸರ್ಕಾರ ಗಂಭಿರವಾಗಿ ಪರಿಗಣಿಸಬೇಕು” ಎಂದರು.
“ಪ.ಜಾತಿ-ಪ.ಪಂಗಡದ ಜನಾಂಗಕ್ಕೆ ಅಂಬೇಡ್ಕರ್ ನಿಮಗದಲ್ಲಿ ಭೂ ಒಡೆತನ ಯೋಜನೆ ಗಂಗಾಕಲ್ಯಾಣ ಸಾರಥಿ ಸ್ವಯಂ ಉದ್ಯೋಗಕ್ಕೆ ಸರಿಯಾದ ಅನುದಾನ ದೊರೆಯುತ್ತಿಲ್ಲ. ಕಳೆದ 10 ವರ್ಷಗಳಲ್ಲಿ ಬೆರಳೆಣಿಕೆಷ್ಟು ಮಂದಿಗೆ ಭೂಮಿ ನೀಡಿದ್ದು ಬಿಟ್ಟರೆ ಯಾವುದೇ ಬದಲಾವಣೆಯಾಗಿಲ್ಲ” ಎಂದು ತಿಳಿಸಿದ್ದಾರೆ.
ಗದಗ ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ಈ ಬಾರಿಯ ಬಜೆಟ್ ಭರವಸೆಗಳ ಮಟ್ಟಕ್ಕೆ ಸೀಮಿತವಾಗದೆ, ನಿಖರ ಅನುದಾನ, ಸ್ಪಷ್ಟ ಕಾಲಬದ್ಧ ಯೋಜನೆಗಳು ಮತ್ತು ಕಾರ್ಯಗತಗೊಳಿಸುವ ಬದ್ಧತೆಯೊಂದಿಗೆ ಹೊರಬರಬೇಕಾಗಿದೆ. ಕೃಷಿ, ಶಿಕ್ಷಣ, ಕೈಗಾರಿಕೆ, ಕುಡಿಯುವ ನೀರು, ಪ್ರವಾಸೋದ್ಯಮ, ಉದ್ಯೋಗ ಸೃಷ್ಟಿ, ಸಾಮಾಜಿಕ ನ್ಯಾಯ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಕ್ಷೇತ್ರಗಳಲ್ಲಿ ಜಿಲ್ಲೆ ವರ್ಷಗಳಿಂದ ಎದುರಿಸುತ್ತಿರುವ ಸಮಸ್ಯೆಗಳಿಗೆ ರಾಜಕೀಯ ಇಚ್ಛಾಶಕ್ತಿ ಮತ್ತು ಆಡಳಿತಾತ್ಮಕ ಗಂಭೀರತೆ ಅಗತ್ಯವಾಗಿದೆ.

ಶರಣಪ್ಪ ಎಚ್ ಸಂಗನಾಳ
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.




