ಅಪರಾಧ ಎಸಗಿದ ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಜೈಲುವಾಸ ಶಿಕ್ಷೆಯನ್ನ ನ್ಯಾಯಾಲಯ ವಿಧಿಸಿ ಜೈಲಿಗೆ ಕಳುಹಿಸುತ್ತದೆ. ಕಾನೂನುಬಾಹಿರ ಕೃತ್ಯಗಳನ್ನು ಮಾಡಿದ ವ್ಯಕ್ತಿಯನ್ನು ಸ್ವಾತಂತ್ರ್ಯದಿಂದ ವಂಚಿತಗೊಳಿಸಿ, ಕಾರಾಗೃಹದಲ್ಲಿ ನಿರ್ದಿಷ್ಟ ಅವಧಿಗೆ ಅಥವಾ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಗುತ್ತದೆ. ಜೈಲುವಾಸ ಕೇವಲ ಶಿಕ್ಷೆಯಲ್ಲ, ಇದು ಸಮಾಜದ ಸುರಕ್ಷತೆ ಮತ್ತು ನ್ಯಾಯದ ಭಾಗವೂ ಕೂಡ ಆಗಿದೆ. ಹೌದು, ಅತ್ಯಾಚಾರ ಪ್ರಕರಣಗಳು, ಕೊಲೆ ಪ್ರಕರಣಗಳು ಹಾಗೂ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾದ ಅಪರಾಧಿಗಳಿಗೆ ಅತ್ಯಂತ ಕಠಿಣ ಶಿಕ್ಷೆಯನ್ನ ವಿಧಿಸಿದಾಗ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯವಾಗುತ್ತದೆ. ಹೀಗಾಗಿ, ಕಾನೂನು ಪ್ರಕಾರ ಅಪರಾಧಿಗಳಿಗೆ ಶಿಕ್ಷೆಯನ್ನು ವಿಧಿಸಿ ಜೈಲಿಗೆ ಕಳುಹಿಸಲಾಗುತ್ತದೆ. ಆದರೆ, ಜೈಲಿಗೆ ತೆರಳಿದ ಅತ್ಯಾಚಾರ, ಕೊಲೆ ಅಪರಾಧಿಗಳಿಗೆ, ಭಯೋತ್ಪಾದಕರಿಗೆ ರಾಜಾತಿಥ್ಯ ಸಿಗುತ್ತಿದೆ.
ಹೌದು, ಜೈಲುವಾಸ ಶಿಕ್ಷೆಯು – ತಪ್ಪು ಮಾಡಿದವರಿಗೆ ಕಾನೂನುಬಾಹಿರ ಚಟುವಟಿಕೆಗಳನ್ನು ನಿರ್ಬಂಧಿಸುವುದರ ಜತೆಗೆ ಆ ವ್ಯಕ್ತಿಯನ್ನು ಸುಧಾರಣೆಗೆ ತರುವುದು, ಈ ಕಠಿಣ ಶಿಕ್ಷೆಗಳಿಂದ ಸಮಾಜದಲ್ಲಿ ಶಾಂತಿ ನೆಲೆಸುವಂತೆ ಮಾಡುವುದು, ತಪ್ಪಿಗೆ ಶಿಕ್ಷೆ ಅನುಭವಿಸುವಂತೆ ಮಾಡಿ ಸಂತ್ರಸ್ತರಿಗೆ ನ್ಯಾಯ ಒದಗಿಸುವುದಾಗಿದೆ. ಆದರೆ, ಕೆಲವು ಜೈಲುಗಳಲ್ಲಿ ಅಪರಾಧಿಗಳನ್ನು ಶಿಕ್ಷಿಸದೇ, ಅವರನ್ನು ಸತ್ಕರಿಸಲಾಗುತ್ತಿದೆ.
ವಿಶೇಷವಾಗಿ, ‘ವಿಐಪಿ’ ಜೈಲು ಎಂದು ಹೆಸರುವಾಸಿಯಾಗಿರುವ ಬೆಂಗಳೂರಿನ ಹೃದಯಭಾಗದಲ್ಲಿರುವ ಪರಪ್ಪನ ಅಗ್ರಹಾರ ಭಾರತದ ಅತಿದೊಡ್ಡ ಜೈಲುಗಳಲ್ಲಿ ಒಂದಾಗಿದೆ. 1997ರಲ್ಲಿ ಸ್ಥಾಪಿತವಾದ ಈ ಜೈಲು 2,200ಕ್ಕೂ ಹೆಚ್ಚು ಕೈದಿಗಳನ್ನು ಇರಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಆದರೆ, ಪ್ರಸ್ತುತ ಸಾಮರ್ಥ್ಯ ಮೀರಿ ಹೆಚ್ಚುವರಿ ಕೈದಿಗಳನ್ನು ಹೊಂದಿದೆ. ಅಪರಾಧಿಗಳಿಗೆ ಶಿಕ್ಷೆ ವಿಧಿಸಬೇಕಾದ ಜೈಲು ಜೈಲಾಗಿರದೇ, ಅಪರಾಧಿಗಳ ಪಾಲಿಗೆ ಪಾರ್ಟಿ ಹಾಲ್, ಕ್ಲಬ್, ರೆಸ್ಟೋರೆಂಟ್ ಆಗಿ ಮಾರ್ಪಟ್ಟಿದೆ.

ಜೈಲಿನಲ್ಲಿರುವ ಕ್ರಿಮಿನಲ್ ಅಪರಾಧಿಗಳಿಗೆ ವಿಐಪಿ ಸೌಲಭ್ಯ ಸಿಗುತ್ತಿದೆ. ಒಟ್ಟಿನಲ್ಲಿ ಹೇಳಬೇಕೆಂದರೆ, ಪರಪ್ಪನ ಅಗ್ರಹಾರ ಅಪರಾಧಿಗಳ ಪಾಲಿಗೆ ‘ಐಷಾರಾಮಿ ಹೊಟೇಲ್’ ಆಗಿ ಬದಲಾಗಿದೆ.
ಇತ್ತೀಚೆಗೆ, ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳು ಕುಡಿದು ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ಜತೆಗೆ, ಜೈಲಿನಲ್ಲಿರುವ ಅಪರಾಧಿಗಳು ಮೊಬೈಲ್ ಬಳಸುವುದು, ಮದ್ಯಪಾನ ಮಾಡುವುದು, ಧೂಮಪಾನ ಮಾಡುವುದು, ಟಿವಿ ಬಳಕೆ, ಬೇಕಾದ ಅಡುಗೆಯನ್ನು ಅವರೇ ತಯಾರಿಸಿಕೊಳ್ಳುವುದು, ಎಲ್ಲದಕ್ಕೂ ಮಿಗಿಲಾಗಿ ಹಾಡಿ ಕುಣಿಯುವುದು ಪರಪ್ಪನ ಅಗ್ರಹಾರದಲ್ಲಿರುವ ಅಪರಾಧಿಗಳು ‘ಬಿಂದಾಸ್ ಲೈಫ್’ ನಡೆಸುತ್ತಿದ್ದಾರೆ ಎಂದು ಸೂಚಿಸುವ ಹಲವಾರು ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ್ದವು.
ಕುಖ್ಯಾತ ರೇಪಿಸ್ಟ್ ಉಮೇಶ್ ರೆಡ್ಡಿ – 20 ಮಹಿಳೆಯರ ಮೇಲೆ ಅತ್ಯಾಚಾರ ಮಾಡಿದ್ದಾನೆ. 18 ಮಹಿಳೆಯರನ್ನು ಅತ್ಯಂತ ಭೀಕರವಾಗಿ ಕೊಲೆ ಮಾಡಿದ್ದಾನೆ. ಕಾನೂನಿನಲ್ಲಿರುವ ಕೆಲವು ಅವಕಾಶಗಳನ್ನು ಬಳಸಿಕೊಂಡು ಗಲ್ಲುಶಿಕ್ಷೆಯಿಂದ ಪಾರಾಗಿ 30 ವರ್ಷಗಳ ಶಿಕ್ಷೆಯನ್ನು ಅನುಭವಿಸುತ್ತಿದ್ದಾನೆ. ಆದರೆ, ವೈರಲ್ ಆಗಿರುವ ವಿಡಿಯೋಗಳನ್ನ ಗಮನಿಸಿದರೆ, ಈತ ನಿಜಕ್ಕೂ ಶಿಕ್ಷೆಯನ್ನು ಅನುಭವಿಸುತ್ತಿಲ್ಲ. ಬದಲಾಗಿ, ಆರಾಮಾಗಿ ತನ್ನ ಜೀವನವನ್ನು ಜೈಲಿನಲ್ಲಿ ಕಳೆಯುತ್ತಿದ್ದಾನೆ ಎನಿಸುತ್ತದೆ.
ಮೊಬೈಲ್ ಬಳಕೆ, ತನ್ನ ಜೈಲು ಕೋಣೆಯಲ್ಲಿ ಪ್ರತ್ಯೇಕ ಟಿವಿ ಜತೆಗೆ ಜೈಲಿನೊಳಗೇ ತನಗೆ ಬೇಕಾದ ಅಡುಗೆ ಮಾಡಿಕೊಳ್ಳಲು ಈತನಿಗೆ ಅಧಿಕಾರಿಗಳು ವಿಶೇಷ ಸೌಲಭ್ಯ ಕಲ್ಪಿಸಿದ್ದಾರೆ.
ಇನ್ನೊಂದು ವೈರಲ್ ಆದ ವಿಡಿಯೋದಲ್ಲಿ ಲಷ್ಕರ್ – ಎ – ತೋಯ್ಬಾ ಉಗ್ರ ಸಂಘಟನೆಯ ಪ್ರಮುಖವಾದ ಉಗ್ರ ಹಮೀದ್ ಶಕೀಲ್ ಮುನ್ನಾ ಮೊಬೈಲ್ ಬಳಸುತ್ತಿರುವುದು ಕಂಡು ಬಂದಿದೆ. ಅಮಾಯಕ ಜನರ ತಲೆ ತುಂಬಿಸಿ ಅವರನ್ನ ಉಗ್ರ ಸಂಘಟನೆಗಳಿಗೆ ಸೇರುವಂತೆ ಮಾಡುತ್ತಿದ್ದನು. ನಿರಂತರವಾಗಿ ಐಸಿಸ್ ಉಗ್ರಸಂಘಟನೆಯ ಜತೆಗೆ, ಸಂಪರ್ಕದಲ್ಲಿದ್ದ ಈತ ಪರಪ್ಪನ ಅಗ್ರಹಾರದಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದಾನೆ.
ಇನ್ನು ಮತ್ತೊಂದು ವಿಡಿಯೋದಲ್ಲಿ, ಬ್ಯಾರಕ್ನ ಕೊಠಡಿಯಲ್ಲಿ 10 ರಿಂದ 15 ಮಂದಿ ವಿಚಾರಣಾಧೀನ ಕೈದಿಗಳು ಮದ್ಯದ ಬಾಟಲಿ ಹಿಡಿದು ನೃತ್ಯ ಮಾಡಿದ್ದಾರೆ. ಜೈಲಿನಲ್ಲಿ ಮೋಜು ಮಸ್ತಿ ಮಾಡುತ್ತಿರುವ 1 ನಿಮಿಷ 44 ಸೆಕೆಂಡಿನ ವಿಡಿಯೋ ಇದಾಗಿದೆ. ಸಜಾ ಕೈದಿ ಪ್ಯಾಟ್ರಿಕ್ ಟೀಂನಿಂದಲೇ ಮೋಜುಮಸ್ತಿ ನಡೆದಿದೆ ಎಂದು ತಿಳಿದುಬಂದಿದೆ. ಹೀಗಾಗಿ, ಪ್ಯಾಟ್ರಿಕ್ ಟೀಂ ವಿರುದ್ಧ ಕೇಸ್ ದಾಖಲಾಗಿದೆ.
ಗೋಲ್ಡ್ ಸ್ಮಗ್ಲಿಂಗ್ ಕೇಸ್ನಲ್ಲಿ ಬಂಧನ ಆಗಿರುವ ರನ್ಯಾ ರಾವ್ ಅವರ ಗೆಳೆಯ, ತೆಲುಗು ಸಿನಿಮಾ ನಟ ತರುಣ್ ರಾಜ್ ಕೂಡ ಜೈಲಿನಲ್ಲಿ ಬಿಂದಾಸ್ ಆಗಿ ಬದುಕುತ್ತಿದ್ದಾರೆ. ಮೊಬೈಲ್ ಜತೆಗೆ ಟಿವಿ ಸೌಲಭ್ಯ ಕಲ್ಪಿಸಿರೋದು ವೈರಲ್ ಆಗಿರುವ ವಿಡಿಯೋದಿಂದ ಗೊತ್ತಾಗಿದೆ.
ಒಟ್ಟಿನಲ್ಲಿ, ಕೈದಿಗಳ ರಾಜಾತಿಥ್ಯಕ್ಕೆ ಹೆಸರುವಾಸಿಯಾಗಿರುವ ಪರಪ್ಪನ ಅಗ್ರಹಾರ ಜೈಲಿನ ಅಧಿಕಾರಿಗಳಿಗೆ, ಸಿಬ್ಬಂದಿಗೆ ಈಗ ಸಂಕಷ್ಟ ಎದುರಾಗಿದೆ. ಈ ವಿಡಿಯೋಗಳು ವೈರಲ್ ಆದ ಹಿನ್ನೆಲೆ ಪರಪ್ಪನ ಅಗ್ರಹಾರದ ಸುತ್ತ ಸದ್ಯ ರಾಜ್ಯದಲ್ಲಿ ಚರ್ಚೆ ನಡೆಯುತ್ತಿದೆ. ಜೈಲಿನ ‘ಹೈಫೈ ಲೈಫ್’ನ ವಿಡಿಯೋಗಳು ದಿನಕ್ಕೊಂದರಂತೆ ರಿವೀಲ್ ಆಗುತ್ತಿದ್ದಂತೆ, ಜೈಲಿನ ಇಬ್ಬರು ಅಧಿಕಾರಿಗಳ ತಲೆದಂಡವಾದರೆ, ಒಬ್ಬರ ವರ್ಗಾವಣೆಯಾಗಿದೆ.

ಕಾರಾಗೃಹದಲ್ಲಿ ಕೈದಿಗಳಿಗೆ ವಿಶೇಷ ಸೌಲಭ್ಯ, ಮೊಬೈಲ್ ಬಳಕೆಗೆ ಅವಕಾಶ ನೀಡಿದ್ದ ಕಾರಣ ಕಾರಾಗೃಹ ಮುಖ್ಯ ಅಧೀಕ್ಷಕ ಸುರೇಶ್ ಅವರನ್ನ ತಕ್ಷಣಕ್ಕೆ ಎತ್ತಂಗಡಿ ಮಾಡಿರುವ ಸರ್ಕಾರ, ಕರ್ತವ್ಯ ಲೋಪ ಆರೋಪದಲ್ಲಿ ಕಾರಾಗೃಹ ಸೂಪರಿಂಟೆಂಡೆಂಟ್ ಇಮಾಮ್ಸಾಬ್ ಮ್ಯಾಗೇರಿ ಮತ್ತು ಸಹಾಯಕ ಅಧೀಕ್ಷಕ ಅಶೋಕ್ ಭಜಂತ್ರಿಯನ್ನ ಅಮಾನತು ಮಾಡಲಾಗಿದೆ.
ಗೃಹ ಸಚಿವ ಡಾ. ಜಿ. ಪರಮೇಶ್ವರ್ ಕಾರಾಗೃಹ ಇಲಾಖೆ ಎಡಿಜಿಪಿ ಬಿ. ದಯಾನಂದ್ ಅನುಪಸ್ಥಿತಿಯಲ್ಲೇ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ಮಾಡಿದ್ದರು. ವೈರಲ್ ಆಗಿರುವ ಫೋಟೋ, ವಿಡಿಯೋಗಳನ್ನೇ ತೋರಿಸಿ ಜೈಲು ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. “ಜೈಲಿನೊಳಗೆ ಕೈದಿಗಳು ಮೋಜು-ಮಸ್ತಿ ಮಾಡುತ್ತಿದ್ದಾರೆ ಎಂದರೆ ಏನು ಅರ್ಥ? ಸಿಬ್ಬಂದಿ ಏನು ಮಾಡುತ್ತಿದ್ದಾರೆ? ಕೈದಿಗಳಿಗೆ ಮೊಬೈಲ್ ನೀಡಿದವರು ಯಾರು” ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಗೃಹ ಸಚಿವರು, “ಈಗ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವಿಡಿಯೋಗಳು 2023ರಲ್ಲಿ ಆಗಿರುವಂತಹದ್ದು, ನಿನ್ನೆ, ಮೊನ್ನೆ ಆಗಿರುವ ವಿಡಿಯೋಗಳಲ್ಲ” ಎಂದು ತಿಳಿಸಿದ್ದಾರೆ.
ಕಾರಾಗೃಹದ ಮುಖ್ಯ ಸೂಪರಿಂಟೆಂಡೆಂಟ್ ಜಾಗಕ್ಕೆ ಇದೇ ಮೊದಲ ಬಾರಿಗೆ ಐಪಿಎಸ್ ಅಧಿಕಾರಿ ಅನ್ಶುಕುಮಾರ್ ಅವರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ. ಜತೆಗೆ, ಈ ಪ್ರಕರಣದ ತನಿಖೆ ಕುರಿತು ಕಾನೂನು ಸುವ್ಯವಸ್ಥೆ ಎಡಿಜಿಪಿ ಹಿತೇಂದ್ರ ಅವರು ಮುಖ್ಯಸ್ಥರಾಗಿರುವ ಉನ್ನತ ಮಟ್ಟದ ಸಮಿತಿ ರಚನೆ ಮಾಡಲಾಗಿದೆ. ಈ ತಂಡದ ಸದಸ್ಯರಾಗಿ ಐಜಿಪಿ ಸಂದೀಪ್ ಪಾಟೀಲ, ಎಸ್ ಪಿಗಳಾದ ಅಮರನಾಥ್ ರೆಡ್ಡಿ, ಸಿ ಬಿ ರಿಷ್ಯಂತ್ ಇದ್ದಾರೆ. ಈ ಕುರಿತು ಒಂದು ತಿಂಗಳ ಒಳಗಾಗಿ ವರದಿಯನ್ನು ಸಲ್ಲಿಸುವಂತೆ ಸೂಚನೆ ನೀಡಲಾಗಿದೆ.
ಏಕಾಏಕಿ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಈ ವಿಡಿಯೋಗಳನ್ನು ದರ್ಶನ್ ತಂಡದ ಸದಸ್ಯರಿಂದಲೇ ಹರಿಬಿಟ್ಟಿರೋದಾಗಿ ಅನುಮಾನ ವ್ಯಕ್ತವಾಗಿದೆ. ಈ ಅನುಮಾನದಡಿ ನಟ ದರ್ಶನ ಅಳಿಯ ಧನ್ವೀರ್ ಅವರನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಸಿಸಿಬಿ ಪೊಲೀಸರು ನಟ ಧನ್ವೀರ್ ಅವರನ್ನು ಬರೋಬ್ಬರಿ 10 ತಾಸುಗಳ ಕಾಲ ವಿಚಾರಣೆ ನಡೆಸಿದ್ದಾರೆ. ಸದ್ಯ ದರ್ಶನ್ ಅವರು ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಸೇರಿದ್ದಾರೆ. ಜೈಲಿನಲ್ಲಿ ಮೂಲಸೌಕರ್ಯಗಳಿಲ್ಲದೇ ಪರಿತಪಿಸುತ್ತಿದ್ದಾರೆ. ಇತ್ತೀಚೆಗೆ, ಜೈಲಾಧಿಕಾರಿಗಳು ಹಾಸಿಗೆ, ಸಿಂಬು ನೀಡುತ್ತಿಲ್ಲ ಎಂದು ಕೋರ್ಟ್ ಮೇಟ್ಟಿಲೇರಿದ್ದರು. ಅಲ್ಲಿಯೂ ಕೂಡ ದರ್ಶನ್ ಅವರಿಗೆ ಹಿನ್ನಡೆ ಆಗಿತ್ತು. ಹೀಗಾಗಿ, ಜೈಲಿನ ಒಳಗಡೆ ನಡೆಯುತ್ತಿರುವ ಅಕ್ರಮಗಳ ಕುರಿತ ವಿಡಿಯೋಗಳನ್ನು ಧನ್ವೀರ್ ಅವರು ಜೈಲಿನಿಂದ ಬಿಡುಗಡೆಯಾಗಿದ್ದ ಕೈದಿಯಿಂದ ಪಡೆದು ಬಹಿರಂಗಪಡಿಸಿದ್ದಾರೆ ಎಂಬ ಅನುಮಾನದ ಮೇಲೆ ಅವರನ್ನು ವಿಚಾರಣೆ ನಡೆಸಲಾಗಿದೆ.

ವಿಚಾರಣೆ ವೇಳೆ, ಧನ್ವೀರ್ ಅವರ ಮೊಬೈಲ್ ಅನ್ನು ವಶಪಡಿಸಿಕೊಂಡಿರುವ ಪೊಲೀಸರು ವಿಡಿಯೋಗಳು ಇಲ್ಲದೇ ಇರುವುದುನ್ನು ಗಮನಿಸಿದ್ದು, ಡಿಲೀಟ್ ಆಗಿರುವ ಸಾಧ್ಯತೆ ಹಿನ್ನೆಲೆ, ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈಗಷ್ಟೇ ಅಲ್ಲ, ಈ ಹಿಂದಿನಿಂದಲೂ ಪರಪ್ಪನ ಅಗ್ರಹಾರ ‘ವಿಐಪಿ ಅಗ್ರಹಾರ’ ಎಂದು ಹೆಸರು ಪಡೆದಿದೆ. ಈ ಹಿಂದೆ ಮಾಜಿ ಸಿಎಂ ಜಯಲಲಿತಾ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ವಿ.ಕೆ.ಶಶಿಕಲಾ ಹಾಗೂ ಇಳವರಸಿ ನಾಲ್ಕು ವರ್ಷಗಳ ಕಾಲ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸೆರೆವಾಸ ಅನುಭವಿಸಿದ್ದರು. ಜೈಲು ಶಿಕ್ಷೆ ವೇಳೆ ಇವರಿಬ್ಬರು ಅಧಿಕಾರಿಗಳಿಗೆ 2 ಕೋಟಿ ರೂಪಾಯಿ ಲಂಚ ನೀಡಿ ಶಾಪಿಂಗ್ಗೆಂದು ಈ ಇಬ್ಬರು ಜೈಲಿನಿಂದ ಹೊರ ಬಂದಿದ್ದರು. ಅಷ್ಟೇ ಅಲ್ಲದೇ, ಜೈಲಿನಲ್ಲಿ ಐಷಾರಾಮಿ ಸೌಲಭ್ಯಗಳನ್ನು ಪಡೆದಿದ್ದರು ಎಂಬ ಆರೋಪವಿದೆ.
ಇನ್ನು ಇತ್ತೀಚೆಗೆ, ‘ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಟ ದರ್ಶನ್ ಅವರಿಗೆ ರಾಜಾತಿಥ್ಯ ನೀಡಲಾಗುತ್ತಿದೆ’ ಎಂಬ ಸುದ್ದಿ ದೊಡ್ಡ ಮಟ್ಟದಲ್ಲಿ ಕೇಳಿತ್ತು. ಹೀಗಾಗಿ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಲಾಗಿತ್ತು. ದರ್ಶನ್ ರಾಜಾತಿಥ್ಯ ಕೇಸ್ ಬಳಿಕ ಸೆಂಟ್ರಲ್ ಜೈಲ್ನಲ್ಲಿ 26 ಮೊಬೈಲ್ಗಳು ಪತ್ತೆಯಾಗಿದ್ದವು.
ಈ ಸುದ್ದಿ ಓದಿದ್ದೀರಾ? ಉಗ್ರರ ನಿರ್ಮೂಲನೆ; ಮೋದಿ ಮಾತುಗಳು ಭಾಷಣಕ್ಕಷ್ಟೆ ಸೀಮಿತ
ಜೈಲಿನಲ್ಲಿ ಕಾನೂನುಬಾಹಿರವಾಗಿ ಕೈದಿಗಳಿಗೆ ಸೌಲಭ್ಯ ಕಲ್ಪಿಸುವುದಕ್ಕೆ ನಟ ದರ್ಶನ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿತ್ತು. ಇದಾದ ನಂತರವೂ ಇಂತಹ ಪ್ರಕರಣಗಳು ಬೆಳಕಿಗೆ ಬಂದಿರುವುದು ಕಾರಾಗೃಹ ಆಡಳಿತ ವ್ಯವಸ್ಥೆ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಬಹಿರಂಗವಾದ ಐದು ವಿಡಿಯೋಗಳ ಪೈಕಿ ಒಂದನ್ನು ಮಾತ್ರ 2022ರಲ್ಲಿ ಚಿತ್ರೀಕರಿಸಲಾಗಿದೆ. ಇನ್ನುಳಿದವು ಇತ್ತೀಚಿನ ದಿನಗಳಲ್ಲಿ ಚಿತ್ರೀಕರಿಸಿದ ವಿಡಿಯೋಗಳಾಗಿವೆ ಎಂದು ತಿಳಿದು ಬಂದಿದೆ. ವಿಡಿಯೋಗಳ ಬಿಡುಗಡೆ ಹಿಂದಿನ ಕೈವಾಡ ಕುರಿತು ಇಲಾಖೆ ತನಿಖೆ ನಡೆಸುತ್ತಿದೆ.
ಪರಪ್ಪನ ಅಗ್ರಹಾರ ಜೈಲು – ಒಂದು ಕಡೆ ಅಪರಾಧಿಗಳಿಗೆ ಶಿಕ್ಷೆ ವಿಧಿಸುವಲ್ಲಿ ಸಂಫೂರ್ಣವಾಗಿ ವಿಫಲವಾದರೇ, ಮತ್ತೊಂದೆಡೆ ಭ್ರಷ್ಟಾಚಾರ ತಾಂಡವಾಡುತ್ತಿದೆ.
ಪರಪ್ಪನ ಅಗ್ರಹಾರ ಜೈಲಿನ ಈ ವಿವಾದವು ಭಾರತದ ಜೈಲು ವ್ಯವಸ್ಥೆಯ ಆಳವಾದ ಸಮಸ್ಯೆಗಳನ್ನು ಭ್ರಷ್ಟಾಚಾರ, ಸುರಕ್ಷತಾ ಲೋಪ ಹಾಗೂ ಸಮಾನತೆಯ ಕೊರತೆಯನ್ನು ಎತ್ತಿ ತೋರಿಸುತ್ತದೆ.




