ಕಲಬುರಗಿ, ಬಳ್ಳಾರಿ, ರಾಯಚೂರು ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ತಾಪಮಾನವು 40°C ಗಡಿ ದಾಟಿದೆ. ಇತ್ತ ಕರಾವಳಿ ಮತ್ತು ಮಲೆನಾಡು ಭಾಗದಲ್ಲೂ ಆರ್ದ್ರತೆ (Humidity) ಹೆಚ್ಚಾಗಿರುವುದರಿಂದ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗಿದೆ.
ಪ್ರತಿವರ್ಷ ಬೇಸಿಗೆ ಬರುತ್ತದೆ, ಹೋಗುತ್ತದೆ. ಆದರೆ ಕಳೆದ ಕೆಲ ವರ್ಷಗಳ ಬೇಸಿಗೆಯ ಕಥೆಯೇ ಬೇರೆ. ವಿಶೇಷವಾಗಿ ಈ ವರ್ಷ ಮಾರ್ಚ್ ಆರಂಭದಲ್ಲೇ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಸೂರ್ಯ ಕೆಂಡ ಉಗುಳುತ್ತಿದ್ದಾನೆ. ಹವಾಮಾನ ಇಲಾಖೆ ಅಪಾಯಕಾರಿ ʼಹೀಟ್ ವೇವ್ʼ ಅಥವಾ ಬಿಸಿಗಾಳಿಯ ಮುನ್ಸೂಚನೆ ನೀಡಿದೆ. ಕರ್ನಾಟಕ ಸರ್ಕಾರ ಈಗಾಗಲೇ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಜನತೆಗೆ ಕರೆ ನೀಡಿದೆ. ಜವಾಬ್ದಾರಿಯುತ ನಾಗರಿಕರಾಗಿ ನಾವು ಎಷ್ಟು ಜಾಗೃತರಾಗಿದ್ದೇವೆ, ನಮ್ಮನ್ನು-ನಮ್ಮವರನ್ನು ಸುರಕ್ಷಿತವಾಗಿಡಲು ಏನು ಕ್ರಮ ಕೈಗೊಂಡಿದ್ದೇವೆ ಎಂಬುದು ಮುಖ್ಯ.
ಸಾಮಾನ್ಯ ತಾಪಮಾನಕ್ಕಿಂತ 4.5°C ನಿಂದ 6.4°C ವರೆಗೆ ಏರಿಕೆಯಾದರೆ ಅದನ್ನು ‘ಬಿಸಿಗಾಳಿ’ ಎಂದು ಮತ್ತು 6.4°C ಗಿಂತ ಹೆಚ್ಚು ಏರಿಕೆಯಾದರೆ ಅದನ್ನು ‘ತೀವ್ರ ಬಿಸಿಗಾಳಿ’ (Severe Heat Wave) ಎಂದು ಕರೆಯಲಾಗುತ್ತದೆ. ಬಯಲು ಸೀಮೆಯಲ್ಲಿ ಗರಿಷ್ಠ ತಾಪಮಾನವು 40°C ಅಥವಾ ಅದಕ್ಕಿಂತ ಹೆಚ್ಚಾದಾಗ, ಕರಾವಳಿಭಾಗದಲ್ಲಿ 37°C ದಾಟಿದಾಗ ಹಾಗೂ ಗುಡ್ಡಗಾಡು ಪ್ರದೇಶದಲ್ಲಿ 30°C ತಲುಪಿದಾಗ ಅದನ್ನು ಹೀಟ್ ವೇವ್ ಎಂದು ಪರಿಗಣಿಸಲಾಗುತ್ತದೆ.

ಸದ್ಯದ ಪರಿಸ್ಥಿತಿ ನಿಜಕ್ಕೂ ಆತಂಕಕಾರಿಯಾಗಿದೆ. ಕಳೆದ ಕೆಲವು ದಿನಗಳಿಂದ ಉತ್ತರ ಕರ್ನಾಟಕದ ಕಲಬುರಗಿ, ಬಳ್ಳಾರಿ, ರಾಯಚೂರು ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ತಾಪಮಾನವು 40°C ಗಡಿ ದಾಟಿದೆ. ಇತ್ತ ಕರಾವಳಿ ಮತ್ತು ಮಲೆನಾಡು ಭಾಗದಲ್ಲೂ ಆರ್ದ್ರತೆ (Humidity) ಹೆಚ್ಚಾಗಿರುವುದರಿಂದ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗಿದೆ. ಹವಾಮಾನ ತಜ್ಞರ ಪ್ರಕಾರ, ʼಎಲ್-ನಿನೋʼ (El-Nino- ಸಮುದ್ರದ ಮೇಲ್ಮೈ ತಾಪಮಾನದಲ್ಲಿನ ಏರುಪೇರುಗಳು ಮಳೆಯ ಪ್ರಮಾಣವನ್ನು ತಗ್ಗಿಸಿ ಬಿಸಿಲನ್ನು ಹೆಚ್ಚಿಸುವುದು) ಪ್ರಭಾವದಿಂದಾಗಿ ಈ ಬಾರಿ ವಾಡಿಕೆಗಿಂತ ಹೆಚ್ಚು ತಾಪಮಾನ ದಾಖಲಾಗುತ್ತಿದೆ. ಇದು ನಮ್ಮ ಆರೋಗ್ಯದ ಮೇಲೆ ನೇರ ದಾಳಿ ಮಾಡುವಂತಹ ಸನ್ನಿವೇಶ. ಇಂತಹ ಪರಿಸ್ಥಿತಿಯಲ್ಲಿ ಹೆಚ್ಚಿನ ಅಪಾಯ ಸಂಭವಿಸುವುದು ಅಜ್ಞಾನದಿಂದ ಮತ್ತು ʼನನಗೇನೂ ಆಗಲ್ಲʼ ಎನ್ನುವ ಅತಿಯಾದ ಆತ್ಮವಿಶ್ವಾಸದಿಂದ.
ಹಾಗಾದರೆ ಏನು ಮಾಡಬೇಕು?
- ಮಧ್ಯಾಹ್ನದ ‘ಕರ್ಫ್ಯೂ’ ಪಾಲಿಸುವುದು ಅನಿವಾರ್ಯ. ಅಂದರೆ ಮಧ್ಯಾಹ್ನ 12 ರಿಂದ 4 ಗಂಟೆಯವರೆಗೆ (ಕನಿಷ್ಠ 3 ಗಂಟೆಗಳವರೆಗೆ) ಸೂರ್ಯನ ಕಿರಣಗಳು ಪ್ರಖರವಾಗಿರುವ ಸಮಯದಲ್ಲಿ ಹೊರಗಡೆ ಕೆಲಸ ಮಾಡುವುದು ಅಥವಾ ಪ್ರಯಾಣ ಮಾಡುವುದನ್ನು ಎಷ್ಟು ಸಾಧ್ಯವೋ ಅಷ್ಟು ನಿಲ್ಲಿಸಬೇಕು. ಸಾಧ್ಯವಾಗದಿದ್ದರೆ, ತಂಪೊತ್ತಿಗೆ ಮುಂದೂಡಬೇಕು. ಒಂದು ವೇಳೆ ಆ ಸಮಯದಲ್ಲಿ ಹೆಚ್ಚು ಹೊತ್ತು ಇದ್ದೀರೆಂದರೆ, ನಿಮ್ಮ ದೇಹದ ಆಂತರಿಕ ತಾಪಮಾನ ಏಕಾಏಕಿ ಹೆಚ್ಚಿ ‘ಹೀಟ್ ಸ್ಟ್ರೋಕ್’ಗೆ ಕಾರಣವಾಗಬಲ್ಲದು.
- ಹೈಡ್ರೇಶನ್ ಕಡ್ಡಾಯ. ದೇಹದಲ್ಲಿ ನೀರಿನಾಂಶ ಕಡಿಮೆಯಾದರೆ ರಕ್ತದ ಒತ್ತಡದಲ್ಲಿ ಏರುಪೇರಾಗುತ್ತದೆ. ಹೀಗಾಗಿ ಬಾಯಾರಿಕೆಯಾಗದಿದ್ದರೂ ನೀರು ಕುಡಿಯಿರಿ.
- ಈಗಾಗಲೇ ಅಲ್ಲಲ್ಲಿ ‘ಅರವಟಿಗೆ’ಗಳನ್ನು ತೆರೆಯಲು ಸರ್ಕಾರ ಜಿಲ್ಲೆಗಳಿಗೆ ಸೂಚಿಸಿದೆ. ಹೊರಗೆ ಹೋಗುವಾಗ ಒಂದು ಬಾಟಲಿ ನೀರು, ಚಿಕ್ಕದೊಂದು ಛತ್ರಿ ಹಿಡಿದುಕೊಳ್ಳಿ. ಫ್ಯಾಷನ್ಗಾಗಿ ಅಲ್ಲ!
- ಕಾರ್ಮಿಕರ ರಕ್ಷಣೆ ವಿಷಯದಲ್ಲಿ ಉದ್ಯೋಗದಾತರು ಮಾನವೀಯತೆ ತೋರಬೇಕಿದೆ. ಕಟ್ಟಡ ಮತ್ತು ಕೃಷಿ ಕಾರ್ಮಿಕರಿಗೆ ಮಧ್ಯಾಹ್ನದ ವಿರಾಮ ಕಡ್ಡಾಯಗೊಳಿಸುವುದರ ಮೂಲಕ ಅವರ ಜೀವಕ್ಕೂ ಬೆಲೆ ನೀಡಬೇಕಾಗಿದೆ.

- ನಾವು ಧರಿಸುವ ಉಡುಪುಗಳ ಬಗ್ಗೆ ಎಚ್ಚರವಿಲ್ಲದಿದ್ದರೆ ಚರ್ಮದ ಕಾಯಿಲೆಗಳು ಬೆಂಬತ್ತುತ್ತವೆ. ಸಿಂಥೆಟಿಕ್ ಬಟ್ಟೆಗಳಿಗಿಂತ ತಿಳಿ ಬಣ್ಣದ ಹತ್ತಿ ಬಟ್ಟೆಗಳು ಸೂರ್ಯನ ಶಾಖವನ್ನು ಪ್ರತಿಫಲಿಸಿ ದೇಹವನ್ನು ತಂಪಾಗಿರಿಸುತ್ತವೆ.
- ತುರ್ತು ಚಿಕಿತ್ಸೆಯ ಬಗ್ಗೆ ತುಸು ಹೆಚ್ಚೇ ಅರಿವಿರಲಿ. ತಲೆನೋವು, ವಾಂತಿ ಅಥವಾ ವಿಪರೀತ ಸುಸ್ತು ಕಾಣಿಸಿಕೊಂಡರೆ ಅದು ಹೀಟ್ ಸ್ಟ್ರೋಕ್ ಇರಬಹುದು, ತಕ್ಷಣ ಸಮೀಪದ ಆಸ್ಪತ್ರೆಗೆ ಧಾವಿಸಿ.
- ಈ ಸಮಯದಲ್ಲಿ ಮಾಂಸಾಹಾರ, ಮಸಾಲೆಯುಕ್ತ ಆಹಾರ ಮತ್ತು ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ಸೇವಿಸಿದರೆ ದೇಹದ ಉಷ್ಣತೆ ಮತ್ತಷ್ಟು ಏರುತ್ತದೆ. ಅದರ ಬದಲು ಮಜ್ಜಿಗೆ, ಎಳನೀರು ಅಥವಾ ಮನೆಯಲ್ಲೇ ಮಾಡಿದ ಲಿಂಬೆ ಶರಬತ್ತು ಅಮೃತದಂತೆ ಕೆಲಸ ಮಾಡುತ್ತವೆ.
- ಮನೆಯಲ್ಲಿರುವ ಮಕ್ಕಳು ಮತ್ತು ಹಿರಿಯರ ಮೇಲೆ ವಿಶೇಷ ನಿಗಾ ಇಡಬೇಕು. ಏಕೆಂದರೆ ಅವರ ದೇಹದಲ್ಲಿ ಉಷ್ಣ ನಿಯಂತ್ರಣ ಶಕ್ತಿ ಕಡಿಮೆ ಇರುತ್ತದೆ. ಹೊರಗೆ ಪಾರ್ಕಿಂಗ್ ನಲ್ಲಿ ನಿಂತಿರುವ ಕಾರ್ಗಳಲ್ಲಿ ಮಕ್ಕಳನ್ನು ಬಿಟ್ಟು ಹೋಗದಿರಿ. ಅದು ಸ್ವಲ್ಪ ಸಮಯವಾದರೂ ಸರಿ.
- ಮನುಷ್ಯರಾದವರೇನೋ ನೀರು, ನೆರಳು ಹುಡುಕಿಕೊಂಡು ಓಡುತ್ತೇವೆ. ಮೂಕ ಪ್ರಾಣಿಗಳ ಕತೆ? ರಸ್ತೆಯಲ್ಲಿರುವ ನಾಯಿ, ಹಸು ಮತ್ತು ಹಕ್ಕಿಗಳು ಹನಿ ನೀರಿಲ್ಲದೆ ಪರದಾಡುತ್ತಿವೆ. ಅದಕ್ಕೆ ಮನೆಯ ಮುಂದೆ ಅಥವಾ ಟೆರೇಸ್ ಮೇಲೆ ಒಂದು ಸಣ್ಣ ಪಾತ್ರೆಯಲ್ಲಿ ನೀರಿಡಿ. ಇಂತಹ ಕಠಿಣ ಸಮಯದಲ್ಲಿ ಮಾಡಬಹುದಾದ ಅತ್ಯುನ್ನತ ಮಾನವೀಯ ಕೆಲಸ ಇದು.
ಇದನ್ನೂ ಓದಿ: ʼಕಾಂಕ್ರೀಟ್ʼ ಮಾಡುವ ಗಾಯಕ್ಕೆ ಜಪಾನಿ ʼಮಿಯಾವಾಕಿʼಯೇ ಮದ್ದು!
ಬಿಸಿಗಾಳಿಯಿಂದ ಪಾರಾಗಲು ಜಾಗೃತಿಯೇ ಏಕೈಕ ಮದ್ದು. ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಿ, ಈ ಬೇಸಿಗೆಯನ್ನು ಸುರಕ್ಷಿತವಾಗಿ ಕಳೆಯಿರಿ. ಆರೋಗ್ಯವಂತ ಸಮಾಜವೇ ಸದೃಢ ದೇಶದ ಅಡಿಪಾಯ.





