ಕನೇರಿ ಸ್ವಾಮೀಜಿಗೆ ವಿಜಯಪುರ ಜಿಲ್ಲಾ ಪ್ರವೇಶಕ್ಕೆ ಎರಡು ತಿಂಗಳ (ಡಿ.14ರವರೆಗೆ) ನಿರ್ಬಂಧ ವಿಧಿಸಿ ಜಿಲ್ಲಾಡಳಿತ ಆದೇಶಿಸಿತ್ತು. ಹೈಕೋರ್ಟ್ ಕೂಡ ಈ ಆದೇಶವನ್ನು ಎತ್ತಿಹಿಡಿದಿತ್ತು. ಈಗ ಸುಪ್ರೀಂ ಕೋರ್ಟ್ ಸಹ ಹೈಕೋರ್ಟ್ ಆದೇಶವನ್ನು ಮಾನ್ಯ ಮಾಡಿ, ಕನೇರಿ ಸ್ವಾಮೀಜಿಗೆ ಛೀಮಾರಿ ಹಾಕಿದೆ. ಬಹುತೇಕ ಬಿಜೆಪಿಗರು ಕನೇರಿ ಸ್ವಾಮೀಜಿ ಹೇಳಿಕೆ ಬೆಂಬಲಿಸಿದ್ದಾರೆ. ಅವರಿಗೂ ಕೋರ್ಟ್ ಛೀಮಾರಿ ಪಾಠವಾಗಬಲ್ಲದೇ?
ಇತ್ತೀಚೆಗೆ ರಾಜ್ಯದಲ್ಲಿ ನಡೆದ ‘ಬಸವ ಸಂಸ್ಕೃತಿ ಅಭಿಯಾನ’ ಮತ್ತು ಅದರ ಭಾಗವಾಗಿ ಗುರುತಿಸಿಕೊಂಡ ಲಿಂಗಾಯತ ಸ್ವಾಮೀಜಿಗಳು ಹಾಗೂ ಬಸವ ಸಂಸ್ಕೃತಿ ಅಭಿಯಾನ ಬೆಂಬಲಿಸಿ ಭಾಷಣ ಮಾಡಿದ ಚಿಂತಕರ ಬಗ್ಗೆ ಕೀಳುಮಟ್ಟದ ಪದ ಪ್ರಯೋಗ ಬಳಸಿ ದ್ವೇಷ ಭಾಷಣ ಮಾಡಿದ್ದ ಮಹಾರಾಷ್ಟ್ರದ ಕನೇರಿ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಗೆ ಸುಪ್ರೀಂ ಕೋರ್ಟ್ ಸಹ ಛೀಮಾರಿ ಹಾಕಿದೆ.
ಲಿಂಗಾಯತ ಮಠಾಧಿಪತಿಗಳ ವಿರುದ್ಧ ಅವಹೇಳನಕಾರಿ ಮಾತುಗಳನ್ನು ಬಳಸಿ ಸಮಾಜದಲ್ಲಿ ಅಶಾಂತಿಗೆ ಕಾರಣವಾಗಿದ್ದಾರೆ ಎಂಬ ಕಾರಣಕ್ಕೆ ವಿಜಯಪುರ ಜಿಲ್ಲಾಧಿಕಾರಿ ಅವರು ಕನೇರಿ ಸ್ವಾಮೀಜಿ ಜಿಲ್ಲಾ ಪ್ರವೇಶಕ್ಕೆ ನಿರ್ಬಂಧ ಹೇರಿದ್ದರು. ವಿಜಯಪುರ ಜಿಲ್ಲೆ ನಿರ್ಬಂಧ ತೆರವಿಗೆ ಕನೇರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಮಾತ್ರವಲ್ಲದೇ, ಸ್ವಾಮೀಜಿ ನಡೆಗೆ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದ್ದು, ಮೌನವಾಗಿ ಬೇರೆ ಮಠಕ್ಕೆ ಹೋಗಿ ಸ್ವಲ್ಪ ಧ್ಯಾನ ಮಾಡಿ ಎನ್ನುವ ಮೂಲಕ ಪರೋಕ್ಷವಾಗಿ ಮೊದಲು ನಾಗರಿಕರಾಗಿ ಮಾತನಾಡಿ ಎಂದು ಸಲಹೆ ನೀಡಿದೆ.
ನ್ಯಾ. ಪಂಕಜ್ ಮಿತ್ತಲ್ ಮತ್ತು ಪ್ರಸನ್ನ ವರಾಡೆ ಅವರಿದ್ದ ಪೀಠ ಬುಧವಾರ ವಿಚಾರಣೆ ನಡೆಸಿದೆ. “ಸ್ವಾಮೀಜಿ ನೀಡಿದ್ದ ಕೀಳುಮಟ್ಟದ ಹೇಳಿಕೆ ಸರಿಯಲ್ಲ. ಹೈಕೋರ್ಟ್ ಹೇಳಿರುವುದರಲ್ಲಿ ತಪ್ಪೇನಿದೆ? ನೀವು ಸ್ವಾಮೀಜಿಯಾಗಿ ಗಂಭೀರವಾಗಿರಬೇಕು. ಅವಹೇಳನಕಾರಿ ಭಾಷೆ ಬಳಸಿರುವುದು ವಾಕ್ ಸ್ವಾತಂತ್ರ್ಯದ ವ್ಯಾಪ್ತಿಗೆ ಬರುವುದಿಲ್ಲ. ನೀವು ಮಾತನಾಡುವುದನ್ನು ಮೊದಲು ನಿಲ್ಲಿಸಿ, ಮೌನವಾಗಿ ಬೇರೆ ಮಠದಲ್ಲಿ ಧ್ಯಾನ ಮಾಡಿ” ಎಂದು ಕನೇರಿ ಸ್ವಾಮೀಜಿಯನ್ನು ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ಕನೇರಿ ಸ್ವಾಮೀಜಿ ಇದಕ್ಕೂ ಮೊದಲು ಹೈಕೋರ್ಟ್ನಿಂದಲೂ ಛೀಮಾರಿ ಹಾಕಿಸಿಕೊಂಡಿದ್ದಾರೆ. ಸ್ವಾಮೀಜಿಗೆ ವಿಜಯಪುರ ಜಿಲ್ಲಾ ಪ್ರವೇಶಕ್ಕೆ ಎರಡು ತಿಂಗಳ (ಡಿ.14ರವರೆಗೆ) ನಿರ್ಬಂಧ ವಿಧಿಸಿ ಜಿಲ್ಲಾಡಳಿತ ಆದೇಶಿಸಿತ್ತು. ನಿರ್ಬಂಧ ಪ್ರಶ್ನಿಸಿ ಸ್ವಾಮೀಜಿ ಹೈಕೋರ್ಟ್ನ ಕಲಬುರಗಿ ವಿಭಾಗೀಯ ಪೀಠದ ಮೊರೆ ಹೋಗಿದ್ದರು.
ವಿಚಾರಣೆ ನಡೆಸಿದ ಹೈಕೋರ್ಟ್ ಕಲಬುರಗಿ ಪೀಠ, “ಸಾಮಾನ್ಯ ಜನರೂ ಕೂಡ ಸ್ವಾಮೀಜಿ ಬಳಸಿದ ಭಾಷೆಯನ್ನು ಬಳಸುವುದಿಲ್ಲ. ಈಗಾಗಲೇ ಸಮಾಜದಲ್ಲಿ ಅಶಾಂತಿಯ ವಾತಾವರಣ ತಾಂಡವವಾಡುತ್ತಿದೆ. ಸ್ವಾಮೀಜಿ ಆಗಮನದಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗುತ್ತದೆ ಎಂಬುದು ತಿಳಿದರೆ ಸ್ವಾಮೀಜಿ ಆದವರೇ ಅಂತಹ ಕಡೆ ಬರುವುದಿಲ್ಲ ಎಂದು ಹೇಳುವಲ್ಲಿ ಮೊದಲಿಗರಾಗಬೇಕು” ಎಂದು ತರಾಟೆಗೆ ತೆಗೆದುಕೊಂಡಿತ್ತು.
ಪ್ರಕರಣ ಹಿನ್ನೆಲೆ
ಮಹಾರಾಷ್ಟ್ರದ ಜತ್ತ ತಾಲೂಕಿನ ಬೀಳೂರು ಗ್ರಾಮದಲ್ಲಿ ನಡೆದ ಸಮಾರಂಭಕ್ಕೆ ತೆರಳಿದ್ದ ಕನೇರಿ ಸ್ವಾಮೀಜಿ, ಕರ್ನಾಟಕದ ಕೆಲ ಲಿಂಗಾಯತ ಸ್ವಾಮೀಜಿಗಳ ವಿರುದ್ಧ ವಾಗ್ದಾಳಿ ನಡೆಸಿದ್ದರು. “ಕಳೆದ ಎರಡು ತಿಂಗಳಿಂದ ದೇವಾಲಯಕ್ಕೆ ಹೋಗಬೇಡಿ ಎಂದು ಪ್ರಚಾರ ಮಾಡಲಾಗುತ್ತಿದೆ. ಮುಖ್ಯಮಂತ್ರಿಗಳ ಕೃಪಾಪೋಷಿತ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಕಲಾವಿದರು ಸೇರಿ ‘ಬಸವ ಸಂಸ್ಕೃತಿ ಅಭಿಯಾನ’ ಎನ್ನುವ ನಾಟಕವನ್ನು ರಾಜ್ಯಾದ್ಯಂತ ಮಾಡುತ್ತಿದ್ದಾರೆ. ಗುಡಿಯಲ್ಲಿ ದೇವರಿಲ್ಲ. ಮನೆಯಲ್ಲಿನ ದೇವರನ್ನು ಹೊಳೆಗೆ ಹಾಕಿ ಎನ್ನುತ್ತಿದ್ದಾರೆ. ಅವರನ್ನು ಮೆಟ್ಟಿನಿಂದ ಹೊಡೆಯಬೇಕು ಎಂದೆಲ್ಲ ಅಸಂಸದೀಯ ಪದಗಳನ್ನು ಬಳಸಿ ದ್ವೇಷ ಭಾಷಣ ಮಾಡಿದ್ದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ನಿತೀಶ್ ಕುಮಾರ್ ಮುಖ್ಯಮಂತ್ರಿ ಎಂದು ಹೇಳುತ್ತಿಲ್ಲವೇಕೆ ಮೋದಿ-ಶಾ?
ಕೊಳಕು ಹೇಳಿಕೆಗೆ ಬೆಂಬಲಿಸಿದ ನಾಯಕರಿವರು
ಕನೇರಿ ಸ್ವಾಮೀಜಿಗೆ ವಿಜಯಪುರ ಜಿಲ್ಲಾ ನಿರ್ಬಂಧ ಬಳಿಕ ಸ್ವಾಮೀಜಿ ಪರವಾಗಿ ಮಾತನಾಡಿದ್ದ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್ ಅಶೋಕ್, “ರಾಜ್ಯದ ಲಜ್ಜೆಗೇಡಿ ಕಾಂಗ್ರೆಸ್ ಸರ್ಕಾರ, ಮತ್ತೊಮ್ಮೆ ಹಿಂದೂ ಧರ್ಮ ಗುರುಗಳ ದನಿಯನ್ನ ಅಡಗಿಸುವ ದುಸ್ಸಾಹಸಕ್ಕೆ ಕೈಹಾಕಿದೆ. ಈ ಹಿಂದೆ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ದಿವಂಗತ ಚಂದ್ರಶೇಖರನಾಥ ಸ್ವಾಮೀಜಿ ವಿರುದ್ಧ ಎಫ್ಐಆರ್ ಹಾಕಿದ್ದ ಕಾಂಗ್ರೆಸ್ ಸರ್ಕಾರ, ಈಗ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಅವರ ಮೇಲೆ ನಿಷೇಧ ಹೇರುವ ಮೂಲಕ ಪಕ್ಷಕ್ಕೆ ಸಂವಿಧಾನದ ವಾಕ್ ಸ್ವಾತಂತ್ರ್ಯದಲ್ಲಿ ನಂಬಿಕೆಯಿಲ್ಲ ಎನ್ನುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ” ಎಂದು ಹರಿಹಾಯ್ದಿದ್ದರು.
ಆರ್ ಅಶೋಕ್ ಪ್ರಸ್ತಾಪಿಸಿದ್ದ ವಾಕ್ ಸ್ವಾತಂತ್ರ್ಯವನ್ನೇ ಸುಪ್ರೀಂ ಕೋರ್ಟ್ ಉಲ್ಲೇಖಿಸಿದೆ. “ಸ್ವಾಮೀಜಿ ಬಳಸಿರುವ ಅವಹೇಳನಕಾರಿ ಭಾಷೆ ವಾಕ್ ಸ್ವಾತಂತ್ರ್ಯದ ವ್ಯಾಪ್ತಿಗೆ ಬರುವುದಿಲ್ಲ” ಎಂದು ಕಡ್ಡಿ ಮುರಿದಂತೆ ಹೇಳಿದೆ.

ಸಮುದಾಯದವರು ಏನಂತಾರೆ?
ಕನೇರಿ ಸ್ವಾಮೀಜಿಗೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದ ವಿಚಾರವಾಗಿ ಮಾತನಾಡಿದ ಪಂಚಮಸಾಲಿ ಸಮುದಾಯದ ಮುಖಂಡ ಮತ್ತು ಬಸವಪರ ಚಿಂತಕ ದೀಪಕ ಜುಂಜರವಾಡ ಅವರು ಈ ದಿನ.ಕಾಮ್ ಜೊತೆ ಮಾತನಾಡಿ, “ಕನೇರಿ ಸ್ವಾಮೀಗೆ ಮೊದಲು ನಾಗರಿಕನಾಗಿ ನಡೆದುಕೊಳ್ಳು ಎನ್ನುವ ಸೂಚನೆಯನ್ನು ಸುಪ್ರೀಂ ಕೋರ್ಟ್ ಹೇಳಿದೆ. ಇದು ನಿಜಕ್ಕೂ ಕನೇರಿ ಸ್ವಾಮೀಜಿಗೆ ಅಪಮಾನಕರ. ಸಮಾಜಕ್ಕೆ ಬುದ್ದಿ ಹೇಳುವ ಸ್ವಾಮೀಜಿ ಈಗ ಕೋರ್ಟ್ಗಳಿಂದ ಬುದ್ಧಿ ಮಾತು ಹೇಳಿಸಿಕೊಳ್ಳುತ್ತಿದ್ದಾರೆ. ಬಸವ ಚಿಂತನೆಗಳನ್ನು ಜಪಿಸುತ್ತ ಸ್ವಾಮೀಜಿಯಾದ ಇವರು ಈಗ ಲಿಂಗಾಯತರಲ್ಲೇ ಒಡಕು ಮೂಡಿಸಲು ಅತಿಯಾಗಿ ಶ್ರಮಿಸುತ್ತಿದ್ದಾರೆ. ಇವರ ಹಿಂದೆ ಆರ್ಎಸ್ಎಸ್ ಇದೆ. ಸುಪ್ರೀಂ ಕೋರ್ಟ್ವರೆಗೂ ಸ್ವಾಮೀಜಿ ಹೋಗುತ್ತಾರೆ ಎಂದರೆ ಲೆಕ್ಕ ಹಾಕಿ, ಅವರ ಹಿಂದೆ ಯಾರು ದುಡ್ಡು ಸುರಿಯುತ್ತಿದ್ದಾರೆ? ಇದೆಲ್ಲ ವ್ಯವಸ್ಥಿತ ನಾಟಕ. ಆ ನಾಟಕದ ಭಾಗವಾಗಿ ಸ್ವಾಮೀಜಿ ಮಾತನಾಡುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಈತ ಸ್ವಾಮೀಜಿಯಾಗುವುದಕ್ಕೆ ಅರ್ಹತೆಯಿಲ್ಲ. ಒಬ್ಬ ಮಾರ್ಕೆಟಿಂಗ್ ಸೇಲ್ಸ್ ಮ್ಯಾನ್ ಆಗಿದ್ದ ಇವರು ತಮ್ಮ ಕರ್ಮಕಾಂಡವನ್ನು ಮುಚ್ಚಿಕೊಳ್ಳಲು ಸ್ವಾಮೀಜಿ ವೇಷ ಧರಿಸಿದ್ದಾರೆ. ಅವರ ಈಗಿನ ವಿವಾದದ ಮಾತುಗಳೇ ಅವರ ವ್ಯಕ್ತಿತ್ವವನ್ನು ಹರಾಜು ಹಾಕುತ್ತಿವೆ. ಈಗಲೂ ಕಾಲ ಮಿಂಚಿಲ್ಲ. ಲಿಂಗಾಯತ ಸಮುದಾಯದ ಸ್ವಾಮೀಜಿಗಳ ಬಳಿ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಮುಂದೆ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರಲಿದೆ. ಮೊದಲು ಸಂಘಿಗಳ ಸಹವಾಸವನ್ನು ಬಿಟ್ಟು ಸಾಮಾನ್ಯ ಮನುಷ್ಯನಾಗಿಯಾದರೂ ಬಾಳಲಿ” ಎಂದು ಕಿಡಿಕಾರಿದರು.
ಬೆಳಗಾವಿಯ ಮಲ್ಲು ಗೋಡಿಗೌಡರ ಮಾತನಾಡಿ, “ಬಸವಾಭಿಮಾನಿಗಳ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಕನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಬಸವಪರ ಸ್ವಾಮೀಜಿಗಳ ಕ್ಷಮೆ ಕೇಳಬೇಕು. ಅವರು ಬಸವ ಸಂಸ್ಕೃತಿ ಅಭಿಯಾನವನ್ನು ಅಪಮಾನಿಸಿದ್ದಾರೆ. ಲಿಂಗಾಯತ ಮಠಾಧೀಶರ ವಿರುದ್ಧ ಮಾತನಾಡಿದ್ದಾರೆ. ಒಬ್ಬ ಸ್ವಾಮೀಜಿಯಾಗಿ ಈ ರೀತಿ ಪದ ಬಳಸಿರುವುದು ಖಂಡನೀಯ. ಇದು ಬಸವಣ್ಣನವರ ಅನುಯಾಯಿಗಳಿಗೆ ನೋವುಂಟು ಮಾಡಿದೆ” ಎಂದು ಹೇಳಿದರು.
ಕನೇರಿ ಸ್ವಾಮೀಜಿ ಅವರಿಗೆ ವಿಜಯಪುರ, ಬಾಗಲಕೋಟೆ ಜಿಲ್ಲೆಗಳಿಗೆ ನಿರ್ಬಂಧ ವಿಧಿಸಿದ್ದನ್ನು ಖಂಡಿಸಿ ಬೆಳಗಾವಿ ಹೊರವಲಯದ ಖಾಸಗಿ ಹೋಟೆಲ್ನಲ್ಲಿ ಹಿಂದೂ ಮುಖಂಡರು ಸಭೆ ನಡೆಸಿದ್ದಾರೆ. ರಾಜ್ಯಾದ್ಯಂತ ಕನೇರಿ ಸ್ವಾಮೀಜಿಗಳ ಪರ ಹೋರಾಟಕ್ಕೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಅಲ್ಲದೆ ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಅದನ್ನೇ ದೊಡ್ಡ ಅಸ್ತ್ರವನ್ನಾಗಿ ಬಳಸಲು ಮುಂದಾಗಿರುವುದು ಈ ಸಭೆಯಿಂದ ಸ್ಪಷ್ಟವಾಗಿದೆ ಎನ್ನುವ ಮಾತುಗಳು ವ್ಯಕ್ತವಾಗಿವೆ.
ಸಭೆಯಲ್ಲಿ ಕನೇರಿ ಸ್ವಾಮೀಜಿ ಕೂಡ ಉಪಸ್ಥಿತರಿದ್ದರು. ಸಭೆಯಲ್ಲಿ ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ ಮುತಾಲಿಕ್, ಚಕ್ರವರ್ತಿ ಸೂಲಿಬೆಲೆ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ಸಿ.ಸಿ. ಪಾಟೀಲ, ಶಶಿಕಲಾ ಜೊಲ್ಲೆ, ಅರವಿಂದ ಬೆಲ್ಲದ, ಅಭಯ ಪಾಟೀಲ, ಸಿ.ಟಿ. ರವಿ, ಮಾಜಿ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ, ಭಗವಂತ ಖೂಬಾ, ಪ್ರತಾಪ್ ಸಿಂಹ ಸೇರಿ ಮತ್ತಿತರರು ಪಾಲ್ಗೊಂಡಿದ್ದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಆದಿಯಾಗಿ ಬಹುತೇಕ ಬಿಜೆಪಿಗರು ಕನೇರಿ ಸ್ವಾಮೀಜಿ ಹೇಳಿಕೆ ಬೆಂಬಲಿಸಿದ್ದಾರೆ. ಆದರೀಗ ಸುಪ್ರೀಂ ಕೋರ್ಟ್ ಹಾಕಿರುವ ಛೀಮಾರಿ ಈ ಎಲ್ಲ ನಾಯಕರಿಗೂ ಪಾಠವಾಗಬಲ್ಲದೇ?

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.




