ತಮಿಳುನಾಡು ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇವೆ. ಆಡಳಿತರೂಢ ಡಿಎಂಕೆ-ಕಾಂಗ್ರೆಸ್ ಮತ್ತು ವಿಪಕ್ಷ ಎಐಎಡಿಎಂಕೆ-ಬಿಜೆಪಿಯ ಎನ್ಡಿಎ ಮೈತ್ರಿಕೂಟಗಳು ಚುನಾವಣೆಗಾಗಿ ತಂತ್ರಗಳನ್ನು ಎಣೆಯುತ್ತಿವೆ. ಈ ಬಾರಿಯ ಚುನಾವಣೆಯಲ್ಲಿ ನಟ ವಿಜಯ್ ಅವರ ‘ತಮಿಳಗ ವೆಟ್ರಿ ಕಳಗಂ’ (ಟಿವಿಕೆ) ಪ್ರಬಲ ಸ್ಪರ್ಧೆಯೊಡ್ಡಲು ಅಣಿಯಾಗಿದೆ. ಯಾರೊಂದಿಗೂ ಮೈತ್ರಿಯಿಲ್ಲ ಎಂದಿರುವ ವಿಜಯ್, ತಮ್ಮ ಪಕ್ಷವು ಸ್ವತಂತ್ರವಾಗಿ ಸ್ಪರ್ಧಿಸಲಿದೆ ಎಂದು ಘೋಷಿಸಿದ್ದಾರೆ. ತಾವೇ ಮುಖ್ಯಮಂತ್ರಿ ಅಭ್ಯರ್ಥಿಯೆಂದೂ ಹೇಳಿದ್ದಾರೆ. ಆದರೆ, ಚುನಾವಣಾ ಹೊಸ್ತಿಲಿನಲ್ಲಿ ಅವರನ್ನು ಸಾಲು-ಸಾಲು ಸಂಕಷ್ಟಗಳು ಕಾಡುತ್ತಿವೆ. ಅವರಿಗೆ ಬಿಜೆಪಿ ಖೆಡ್ಡಾ ತೋಡಿ, ಬಲೆ ಬೀಸುತ್ತಿರುವಂತೆಯೇ ಕಾಣುತ್ತಿದೆ.
ಚುನಾವಣಾ ಸಿದ್ದತೆಯಲ್ಲಿ ತೊಡಗಿರುವ ವಿಜಯ್ ಅವರಿಗೆ ‘ಕರೂರು ಕಾಲ್ತುಳಿತ’ ಪ್ರಕರಣ, ಸಿಬಿಐ ಸಮನ್ಸ್, ಬಿಡುಗಡೆಗೆ ಸಜ್ಜಾಗಿರುವ ‘ಜನ ನಾಯಗನ್’ ಸಿನಿಮಾಗೆ ಕೇಂದ್ರ ಸೆನ್ಸರ್ ಮಂಡಳಿ (ಸಿಬಿಎಫ್ಸಿ) ಅಡ್ಡಿ ಮಾಡುತ್ತಿರುವುದು ಅವರ ಹಾದಿಗೆ ಮುಳ್ಳಾಗಿ ಪರಿಣಮಿಸಿವೆ.
2025ರ ಸೆಪ್ಟೆಂಬರ್ 27ರಂದು ಕರೂರ್ನಲ್ಲಿ ವಿಜಯ್ ಅವರು ತಮ್ಮ ಪಕ್ಷದ ಬೃಹತ್ ರ್ಯಾಲಿ ಆಯೋಜಿಸಿದ್ದರು. ಆದರೆ, ಆ ಸಮಾವೇಶಕ್ಕೆ ತಾವೇ ತಡವಾಗಿ ಬಂದಿದ್ದರಿಂದ ಭೀಕರ ಕಾಲ್ತುಳಿತ ಸಂಭವಿಸಿತ್ತು. ದುರಂತದಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ 41 ಮಂದಿ ಮೃತಪಟ್ಟರು. ಘಟನೆಯ ತನಿಖೆಗಾಗಿ ತಮಿಳುನಾಡು ಸರ್ಕಾರ ಎಸ್ಐಟಿ ರಚಿಸಿತು. ಎಸ್ಐಟಿ ತನಿಖೆಯನ್ನೂ ಆರಂಭಿಸಿತ್ತು. ಆದರೆ, ತನಿಖೆಯು ರಾಜಕೀಯ ಒತ್ತಡದಿಂದ ಪ್ರೇರೇಪಿತವಾಗಬಹುದು ಎಂದು ಟಿವಿಕೆಯೇ ಆರೋಪಿಸಿ ಹೈಕೋರ್ಟ್ನಲ್ಲಿ ಅರ್ಜಿಸಲ್ಲಿಸಿತು.
ಟಿವಿಕೆ ಮನವಿಯಂತೆ, ಪ್ರಕರಣವನ್ನು ‘ಸಿಬಿಐ’ಗೆ ವಹಿಸುವಂತೆ ಮದ್ರಾಸ್ ಹೈಕೋರ್ಟ್ ಆದೇಶಿಸಿತು. ಹೈಕೋರ್ಟ್ ಆದೇಶವು ‘ರಾಜ್ಯದ ಸ್ವಾಯತ್ತತೆಗೆ ಧಕ್ಕೆ ಉಂಟುಮಾಡುತ್ತದೆ ಮತ್ತು ಫೆಡರಲ್ ವ್ಯವಸ್ಥೆಗೆ ಅಪಾಯಕಾರಿ’ ಎಂದು ತಮಿಳುನಾಡು ಸರ್ಕಾರವು ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿತ್ತು. ಆದರೆ, ಹೈಕೋರ್ಟ್ ಆದೇಶವನ್ನೇ ಎತ್ತಿಹಿಡಿದ ಸುಪ್ರೀಂ, ಪ್ರಕರಣವನ್ನು ಸಿಬಿಐ ಮೂಲಕವೇ ತನಿಖೆ ನಡೆಸಬೇಕೆಂದು ತೀರ್ಪು ನೀಡಿತು.
ಇದೆಲ್ಲದರ, ನಡುವೆ, ಮತದಾರರ ಪಟ್ಟಿಯ ‘ವಿಶೇಷ ತೀವ್ರ ಪರಿಷ್ಕರಣೆ’ (ಎಸ್ಐಆರ್) ವಿರುದ್ಧ ಒಗ್ಗಟ್ಟಿನ ಹೋರಾಟಕ್ಕೆ ಡಿಎಂಕೆ ಕರೆ ನೀಡಿತ್ತು. ವಿಪಕ್ಷಗಳ ಸಭೆಗೆ ಟಿವಿಕೆಯನ್ನೂ ಆಹ್ವಾನಿಸಿತ್ತು. ಈ ಒಗ್ಗಟ್ಟು ಚುನಾವಣಾ ಹೋರಾಟಕ್ಕೂ ಮುಂದುವರೆಯಲಿದೆ ಎಂಬ ಚರ್ಚೆಗಳು ಇದ್ದವು. ಜೊತೆಗೆ, ಕಾಂಗ್ರೆಸ್ ಕೂಡ ತಮ್ಮ ಮೈತ್ರಿಗೆ ಟಿವಿಕೆಯನ್ನು ಕರೆಯುವ ಪ್ರಯತ್ನ ಮಾಡಿದ್ದಾಗಿ ವರದಿಯಾಗಿವೆ. ಟಿವಿಕೆ ವಕ್ತಾರ ಫೆಲಿಕ್ಸ್ ಜೆರಾಲ್ಡ್ ಕೂಡ, ‘ವಿಜಯ್-ರಾಹುಲ್ ಸ್ನೇಹಿತರು, ಕಾಂಗ್ರೆಸ್ ಜೊತೆ ಮೈತ್ರಿ ಸಾಧ್ಯತೆ ಇದೆ’ ಎಂದಿದ್ದರು.
ಆದರೆ, ಡಿಎಂಕೆ-ಕಾಂಗ್ರೆಸ್ ಜೊತೆಗಿನ ಮೈತ್ರಿಗೆ ಒಲವು ತೋರದ ವಿಜಯ್, ಡಿಎಂಕೆಯನ್ನು ‘ರಾಜಕೀಯ ಶತ್ರು’, ಬಿಜೆಪಿಯನ್ನು ‘ಸೈದ್ಧಾಂತಿಕ ಶತ್ರು’ ಎಂದು ಕರೆದರು. ಡಿಎಂಕೆ ಸಖ್ಯವನ್ನು ನಿರಾಕರಿಸಿದರು. ಮಾತ್ರವಲ್ಲದೆ, ಕರೂರು ದುರಂತ ಕುರಿತು ‘ನನ್ನ ಹೃದಯ ಒಡೆದುಹೋಗಿದೆ’ ಎಂದಿದ್ದ ವಿಜಯ್ ಕೂಡ, ಡಿಎಂಕೆ ಸರ್ಕಾರದ ಭರವಸೆಯನ್ನು ತಿರಸ್ಕರಿಸಿ ಸಿಬಿಐ ತನಿಖೆಗೆ ಆಗ್ರಹಿಸಿದ್ದರು. ಸಿಬಿಐ ತನಿಖೆಯನ್ನು ಸ್ವತಃ ವಿಜಯ್ ಅವರೇ ಬಯಸಿದ್ದರು.
ಈಗ, ಕರೂರು ದುರಂತ ಸಂಬಂಧ ಜನವರಿ 12ರಂದು ದೆಹಲಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ವಿಜಯ್ಗೆ ಸಿಬಿಐ ಸಮನ್ಸ್ ನೀಡಿದೆ. ಬಿಜೆಪಿಯ ‘ಪಂಜರದ ಗಿಳಿ’ಯಾಗಿರುವ ಸಿಬಿಐ ತ್ವರಿತವಾಗಿ ಸಮನ್ಸ್ ಜಾರಿ ಮಾಡಿರುವುದು, ಬಿಜೆಪಿಯ ರಾಜಕೀಯ ಒತ್ತಡದ ಪರಿಣಾಮವೆಂದು ನೋಡಲಾಗುತ್ತಿದೆ.
ಇದೇ ಹೊತ್ತಿನಲ್ಲಿ, ವಿಜಯ್ ಅವರ ಕಡೆಯ ಸಿನಿಮಾವೆಂದೇ ಹೇಳಲಾಗುತ್ತಿರುವ ‘ಜನ ನಾಯಗನ್’ ಜನವರಿ 9ರಂದು ಬಿಡುಗಡೆಯಾಗಬೇಕಿತ್ತು. ಆದರೆ. ಕೇಂದ್ರ ಸೆನ್ಸಾರ್ ಮಂಡಳಿಯ (CBFC) ಧೋರಣೆಯಿಂದಾಗಿ ಸಿನಿಮಾ ಬಿಡುಗಡೆಯಾಗಿಲ್ಲ.
ಈ ಲೇಖನ ಓದಿದ್ದೀರಾ?: ಬಂಗಾಳ ಚುನಾವಣೆ | ಅಧಿಕಾರಕ್ಕಾಗಿ ಬಿಜೆಪಿ ತಂತ್ರ – ಮಮತಾ ಪ್ರತಿತಂತ್ರ
ಸೆನ್ಸಾರ್ ಪ್ರಮಾಣಪತ್ರಕ್ಕಾಗಿ 2025 ಡಿಸೆಂಬರ್ 19ರಂದೇ ಸಿನಿಮಾವನ್ನು ಸಿಬಿಎಫ್ಸಿಗೆ ಸಲ್ಲಿಸಲಾಗಿತ್ತು. 27 ದೃಶ್ಯಗಳನ್ನು ತೆಗೆಯಲು ಮಂಡಳಿ ಸೂಚಿಸಿತ್ತು. ಅದರಂತೆ, ದೃಶ್ಯಗಳನ್ನು ತೆಗೆದುಹಾಕಿದ್ದರೂ, ಮಂಡಳಿಯು ಸೆನ್ಸಾರ್ ಸರ್ಟಿಫಿಕೇಟ್ ನೀಡಿಲ್ಲ. ಮಧ್ಯಪ್ರವೇಶಿಸಿರುವ ಮದ್ರಾಸ್ ಹೈಕೋರ್ಟ್, ಪ್ರಮಾಣಪತ್ರವನ್ನು ನೀಡುವಂತೆ ಸಿಬಿಎಫ್ಸಿಗೆ ಜನವರಿ 8ರಂದು ಆದೇಶಿಸಿದೆ.
ಆದಾಗ್ಯೂ, ಸಿನಿಮಾ ಬಿಡುಗಡೆಯನ್ನು ಚಿತ್ರತಂಡ ಅನಿರ್ಧಿಷ್ಟಾವಧಿಗೆ ಮುಂದೂಡಿದೆ. ಪರಿಣಾಮ, ನಿರ್ಮಾಪಕರು ಮತ್ತು ಥಿಯೇಟರ್ ಮಾಲೀಕರಿಗೆ ಆರ್ಥಿಕ ನಷ್ಟವಾಗಿದೆ. ಸಿನಿಮಾ ವೀಕ್ಷಣೆಗೆ ಟಿಕೆಟ್ ಬುಕಿಂಗ್ ಮಾಡಿದ್ದ ಎಲ್ಲರಿಗೂ ಮರುಪಾವತಿ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಸೆನ್ಸಾರ್ ಪ್ರಮಾಣಪತ್ರ ವಿಳಂಬ, ಚಿತ್ರ ಬಿಡುಗಡೆ ಮುಂದೂಡಿಕೆ ಹಾಗೂ ಮರುಪಾವತಿಯು ನಿರ್ಮಾಪಕರಿಗೆ ಆರ್ಥಿಕ ನಷ್ಟ ಮಾತ್ರವಲ್ಲ, ವಿಜಯ್ಗೆ ಅವಮಾನ/ಮುಖಭಂಗವೂ ಆಗಿದೆ.
‘ಜನ ನಾಯಗನ್’ ಸಿನಿಮಾ ವಿಚಾರದಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಕೇವಲ ಚಿತ್ರೋದ್ಯಮದ ವಿಚಾರವಲ್ಲ. ಇದು, ರಾಜಕೀಯ ಒತ್ತಡ ಪರಿಣಾಮವೂ ಆಗಿದೆ ಎಂದು ಕಾಂಗ್ರೆಸ್ ನಾಯಕರು ಮತ್ತು ತಮಿಳು ಚಿತ್ರರಂಗ ಹೇಳುತ್ತಿದೆ.
ಕರೂರು ಪ್ರಕರಣದಲ್ಲಿ ತ್ವರಿತ ಸಮನ್ಸ್ ಮತ್ತು ‘ಜನ ನಾಯಗನ್’ ಸಿನಿಮಾಗೆ ಸೆನ್ಸಾರ್ ಪ್ರಮಾಣಪತ್ರದ ವಿಳಂಬ – ಎರಡೂ ಕೂಡ ಕೇಂದ್ರ ಸಂಸ್ಥೆಗಳಿಂದಲೇ ಆಗಿದೆ. ಇದರ ಹಿಂದೆ, ಕೇಂದ್ರದ ಆಡಳಿತಾರೂಢ ಬಿಜೆಪಿಯ ರಾಜಕೀಯ ಮತ್ತು ಚುನಾವಣಾ ತಂತ್ರವಿದೆ ಎಂದು ರಾಜಕೀಯ ವೀಕ್ಷಕರು ಹೇಳುತ್ತಾರೆ. ಯಾಕೆಂದರೆ, ತಮಿಳುನಾಡಿಗೆ ಎಐಎಡಿಎಂಕೆ ತನ್ನ ಪ್ರಭಾವವನ್ನು ಕಳೆದುಕೊಳ್ಳುತ್ತಿದೆ. ಬಿಜೆಪಿ ಇನ್ನೂ ನೆಲೆಯನ್ನೇ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಅಮಿತ್ ಷಾ ಅವರು ತಮಿಳುನಾಡಿನಲ್ಲಿ ಎನ್ಡಿಎ ವಿಸ್ತರಣೆಗೆ ಒತ್ತು ನೀಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ತಮ್ಮ ಮೈತ್ರಿಯನ್ನು ಬಲಪಡಿಸಿಕೊಳ್ಳಲು ವಿಜಯ್ ನೆರವಾಗಬಹುದು ಎಂದು ಬಿಜೆಪಿ ಭಾವಿಸಿದೆ. ಅದಕ್ಕಾಗಿ, ವಿಜಯ್ ಅವರ ಟಿವಿಕೆಯನ್ನು ಎನ್ಡಿಎಗೆ ಸೆಳೆಯಲು ಹುನ್ನಾರ ಹೆಣೆಯುತ್ತಿದೆ. ಈ ಸಂದರ್ಭದಲ್ಲಿ ಸಿಬಿಐ ಸಮನ್ಸ್ ಮತ್ತು ಸೆನ್ಸಾರ್ ತೊಂದರೆಗಳು ವಿಜಯ್ ಅವರನ್ನು ಬಿಜೆಪಿ-ಎಐಎಡಿಎಂಕೆ ಮೈತ್ರಿಗೆ ಸೆಳೆಯಲು ಸೃಷ್ಟಿಸುತ್ತಿರುವ ಒತ್ತಡ ಎಂದು ರಾಜಕೀಯ ತಜ್ಞರು ಭಾವಿಸಿದ್ದಾರೆ.
ಆದಾಗ್ಯೂ, ವಿಜಯ್ ಅವರು ಬಿಜೆಪಿಯನ್ನು ತಮ್ಮ ‘ಏಕೈಕ ಸೈದ್ಧಾಂತಿಕ ಶತ್ರು’ ಎಂದು ಕರೆದಿದ್ದಾರೆ. ಬಿಜೆಪಿ ಜೊತೆಗೆ ಅವರು ರಾಜಿ ಅಥವಾ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇಲ್ಲವೆಂಬ ಅಭಿಪ್ರಾಯಗಳೂ ಇವೆ. ಆದರೆ, ರಾಜಕೀಯದ ಚದುರಂಗದಾಟದಲ್ಲಿ ಏನು ಬೇಕಾದರೂ ನಡೆಯಬಹುದು. ಚುನಾವಣಾ ಕಣ ಬಿರುಸು ಪಡೆಯುತ್ತಿದ್ದಂತೆ ಏನೆಲ್ಲ ಬೆಳವಣಿಗೆಗಳು ಆಗಬಹುದು? ಕಾದು ನೋಡೋಣ!




