ಈಗ ಕೈಕೋಳ ತೊಡಿಸಿಕೊಂಡು ಅಮೆರಿಕೆಯ ಮಿಲಿಟರಿ ವಿಮಾನದಿಂದ ಕೆಳಗಿಳಿದು ಕ್ಯಾಮೆರಾಗಳ ಮುಂದೆ ತಲೆತಗ್ಗಿಸಿ ಮುಖ ಮುಚ್ಚಿಕೊಂಡು ಅವಮಾನ ಅನುಭವಿಸಿದ ಭಾರತೀಯರ ವಿಡಿಯೋ ತುಣುಕುಗಳನ್ನು ನೋಡಿ ತಮಗೆ ಏನೆನ್ನಿಸಿತು ಎಂದು ಮೋದಿಯವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಸಾಹಸವನ್ನು ಈವರೆಗೂ ಮಾಡಿಲ್ಲ.
ಅಮೆರಿಕದಲ್ಲಿ ನೆಲೆಸಿದ ತನ್ನ ಅಕ್ರಮ ವಲಸಿಗರನ್ನು ಘನತೆ ಗೌರವದಿಂದ ವಾಪಸು ಕರೆತರಲು ಕೊಲಂಬಿಯಾ ದೇಶದ ರಾಷ್ಟ್ರಪತಿ ಗಸ್ತಾವೊ ಪೆಟ್ರೋ ‘ರಾಷ್ಟ್ರಪತಿಯವರ ವಿಮಾನ’ವನ್ನೇ ಕಳಿಸಿದ್ದರು. ಆದರೆ ‘ಭಾರತದ ವೀಸಾಕ್ಕಾಗಿ ವಿಶ್ವವೇ ಸರದಿಯ ಸಾಲಿನಲ್ಲಿ ನಿಂತು ಕಾಯಲಿದೆ’ ಎನ್ನುವ ‘ವಿಶ್ವಗುರು’ ಭಾರತ ಏನು ಮಾಡಿತು? ಅಮೆರಿಕ ಮಿಲಿಟರಿ ವಿಮಾನದಲ್ಲಿ ಕೈ ಕಾಲುಗಳಿಗೆ ಸಂಕೋಲೆ ತೊಡಿಸಲಾದ ತನ್ನ ನಾಗರಿಕರನ್ನು ಬರಮಾಡಿಕೊಂಡಿತು!
ಕೊಲಂಬಿಯಾದ ವಿದ್ಯಮಾನ 10 ದಿನಗಳ (ಜ.27) ಹಿಂದೆ ನಡೆದದ್ದು. ಆದರೂ ಮೋದಿ ಸರ್ಕಾರ ಈ ಮೇಲ್ಪಂಕ್ತಿಯಿಂದ ಏನನ್ನೂ ಕಲಿಯದಿರುವುದು ನಿರಾಶಾದಾಯಕ. ತಾವು ಅಧಿಕಾರಕ್ಕೆ ಬರುವ ತನಕ (2014)’ ಭಾರತೀಯರು ತಾವು ಭಾರತೀಯರೆಂದು ಹೇಳಿಕೊಳ್ಳಲು ನಾಚಿಕೆಯಿಂದ ತಲೆತಗ್ಗಿಸಬೇಕಿತ್ತು. ಹಿಂದಿನ ಜನ್ಮದಲ್ಲಿ ಪಾಪ ಮಾಡಿದ್ದಕ್ಕಾಗಿ ಭಾರತೀಯರಾಗಿ ಹುಟ್ಟಿದ್ದೇವೆ ಎಂದುಕೊಳ್ಳುವ ಪರಿಸ್ಥಿತಿ ಇತ್ತು. ಈಗ (2015) ಭಾರತವನ್ನು ಪ್ರತಿನಿಧಿಸಲು ಹೆಮ್ಮೆ ಪಡುತ್ತಾರೆ’ ಎಂದಿದ್ದರು ಮೋದಿ.
ಈಗ ಕೈಕೋಳ ತೊಡಿಸಿಕೊಂಡು ಅಮೆರಿಕೆಯ ಮಿಲಿಟರಿ ವಿಮಾನದಿಂದ ಕೆಳಗಿಳಿದು ಕ್ಯಾಮೆರಾಗಳ ಮುಂದೆ ತಲೆತಗ್ಗಿಸಿ ಮುಖ ಮುಚ್ಚಿಕೊಂಡು ಅವಮಾನ ಅನುಭವಿಸಿದ ಭಾರತೀಯರ ವಿಡಿಯೋ ತುಣುಕುಗಳನ್ನು ನೋಡಿ ತಮಗೆ ಏನೆನ್ನಿಸಿತು ಎಂದು ಮೋದಿಯವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಸಾಹಸವನ್ನು ಈವರೆಗೂ ಮಾಡಿಲ್ಲ.
ಬ್ರೆಜಿಲ್ ನ ಅಕ್ರಮ ವಲಸಿಗರನ್ನು ಕೈಗೆ ಕೋಳ ತೊಡಿಸಿ ಅಮೆರಿಕೆಯ ಮಿಲಿಟರಿ ವಿಮಾನದಲ್ಲಿ ಕಳಿಸಿದ ಅವಮಾನದ ದುಸ್ಥಿತಿ ತಮ್ಮ ದೇಶದ ನಾಗರಿಕರಿಗೆ ಬಾರದಂತೆ ತಡೆಯುವುದಾಗಿ ಗಸ್ತಾವೋ ಹೇಳಿದ್ದರು. ರಾಷ್ಟ್ರಪತಿಯವರ ಆದೇಶದ ಮೇರೆಗೆ ರಾಷ್ಟ್ರಪತಿ ಬಳಕೆಗೆ ಮೀಸಲಾಗಿರುವ ವಿಮಾನವನ್ನು ಕಳಿಸುತ್ತಿರುವುದಾಗಿ ಗಸ್ತಾವೊ ಕಚೇರಿ ಪ್ರಕಟಣೆ ಹೊರಡಿಸಿತ್ತು.

ಉಳಿದಂತೆ ಕೊಲಂಬಿಯಾದ ಎರಡು ವಾಯುದಳದ ವಿಮಾನಗಳಲ್ಲಿ ತನ್ನ ಅಕ್ರಮ ವಲಸಿಗ ನಾಗರಿಕರನ್ನು ಅಮೆರಿಕೆಯಿಂದ ವಾಪಸು ಕರೆಯಿಸಿಕೊಂಡಿತು. ಇಂತಹ ಒಂದು ವಿಮಾನದಲ್ಲಿ ಖುದ್ದು ಗಸ್ತಾವೊ ಅವರೇ ತಮ್ಮ ನಾಗರಿಕರ ಯೋಗಕ್ಷೇಮ ವಿಚಾರಿಸುವ ಫೋಟೋವೊಂದನ್ನು ಬಿಬಿಸಿ ಪ್ರಕಟಿಸಿದೆ.
ಈ ಮೊದಲು ತನ್ನ ಅಕ್ರಮ ವಲಸಿಗರನ್ನು ಮಿಲಿಟರಿ ವಿಮಾನಗಳಲ್ಲಿ ವಾಪಸು ಕಳಿಸುವ ಕ್ರಮವನ್ನು ಅವಮಾನಕರ ಎಂದು ಬಣ್ಣಿಸಿತ್ತು ಕೊಲಂಬಿಯಾ. ತನ್ನ ನಾಗರಿಕರನ್ನು ಮಿಲಿಟರಿ ವಿಮಾನಗಳಲ್ಲಿ ಪರಮ ಪಾತಕಿಗಳಂತೆ ನಡೆಸಿಕೊಂಡು ಕರೆತರುವುದು ತಮಗೆ ಸಮ್ಮತವಿಲ್ಲ ಎಂದು ಗಸ್ತಾವೊ ಸ್ಪಷ್ಟಪಡಿಸಿದ್ದರು. ಈ ವಿಮಾನಗಳಲ್ಲಿ ಕಳಿಸಿದರೆ ತನ್ನ ನಾಗರಿಕರನ್ನು ವಾಪಸು ಸ್ವೀಕರಿಸಲು ನಿರಾಕರಿಸಿತ್ತು.
ಮರುಕ್ಷಣವೇ ಪ್ರತೀಕಾರದ ಕ್ರಮವಾಗಿ ಶೇ.25ರಷ್ಟು ತುರ್ತು ಸುಂಕವನ್ನು ಕೊಲಂಬಿಯಾ ಮೇಲೆ ಹೇರಿದ್ದರು ಟ್ರಂಪ್. ಅಷ್ಟಕ್ಕೇ ನಿಲ್ಲದೆ ಕೊಲಂಬಿಯಾವನ್ನು ಕಟು ಶಬ್ದಗಳಲ್ಲಿ ಖಂಡಿಸಿದ್ದರು ಮತ್ತು ಹತ್ತು ಹಲವು ಯರ್ರಾಬಿರ್ರಿ ನಿರ್ಬಂಧಗಳ ಹೇರಿದ್ದರು. ಕೊಲಂಬಿಯಾದಿಂದ ಅಮೆರಿಕ ಆಮದು ಮಾಡಿಕೊಳ್ಳುವ ಎಲ್ಲ ಸರಕು-ಸೇವೆಗಳ ಮೇಲೆ ಶೇ.25ರಷ್ಟು ಸುಂಕ ಹೇರಿದ್ದರು. ವಾರದ ನಂತರ ಈ ಸುಂಕವನ್ನು ಶೇ.50ಕ್ಕೆ ಏರಿಸುವುದಾಗಿ ಬೆದರಿಸಿದ್ದರು. ಕೊಲಂಬಿಯಾದ ಪ್ರಜೆಗಳು ಅಮೆರಿಕೆಗೆ ಬರುವಂತಿಲ್ಲವೆಂಬ ನಿಷೇಧ ಹೇರಿದ್ದರು. ಅಮೆರಿಕೆಯಲ್ಲಿನ ಎಲ್ಲ ಕೊಲಂಬಿಯಾದ ಅಧಿಕಾರಿಗಳು ಮತ್ತು ನಾಗರಿಕರಿಗೆ ವೀಸಾಗಳನ್ನು ರದ್ದು ಮಾಡಿದ್ದರು.
ಈ ಪ್ರತೀಕಾರಕ್ಕೆ ಕೊಲಂಬಿಯಾದ ರಾಷ್ಟ್ರಪತಿ ಪ್ರತಿಕ್ರಿಯಿಸಿದ್ದು ಅತ್ಯಂತ ವಿಶಿಷ್ಟವಾಗಿತ್ತು. ತಮ್ಮ ದೇಶದ ಆತ್ಮಘನತೆಯನ್ನು ಎತ್ತಿ ಹಿಡಿಯುವ ಮಾದರಿಯುತ ಉದಾಹರಣೆ ಆಗಿತ್ತು. ರಾಷ್ಟ್ರಾಧ್ಯಕ್ಷರ ವಿಮಾನಯಾನಕ್ಕೆಂದೇ ಮೀಸಲಾಗಿರುವ ವಿವಿಐಪಿ ಬೋಯಿಂಗ್ ಬ್ಯುಸಿನೆಸ್ ಜೆಟ್ ಎಂಬ ವಿಶೇಷ ವಿಮಾನವನ್ನು ಅಮೆರಿಕೆಗೆ ಕಳಿಸಿದರು. ತನ್ನ ವಲಸಿಗ ನಾಗರಿಕರನ್ನು ಈ ವಿಮಾನದಲ್ಲಿ ವಾಪಸು ಕರೆಯಿಸಿಕೊಂಡರು!
ದುಬೈ ಮತ್ತು ಸೌದಿ ಅರೇಬಿಯಾದ ಅರಸರು, ಮಧ್ಯಪ್ರಾಚ್ಯದ ತೈಲಾಧಿಪತಿಗಳು, ದಕ್ಷಿಣ ಆಫ್ರಿಕಾ, ಟ್ಯೂನೀಸಿಯಾ ಜೋರ್ಡನ್, ಯುಎಇ, ತುರ್ಕಿ, ಆಸ್ಟ್ರೇಲಿಯಾ, ಆಫ್ರಿಕಾ ದೇಶಗಳ ಮುಖ್ಯಸ್ಥರು ಈ ವಿಮಾನವನ್ನು ಬಳಸುತ್ತಾರೆ. ನಮ್ಮ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿದೇಶ ಪ್ರಯಾಣಕ್ಕೂ ಇಂತಹುದೇ ಪ್ರತ್ಯೇಕ ವಿಮಾನ ಉಂಟು. ಅದರ ಬೆಲೆ ಅಂದಾಜು 8,500 ಕೋಟಿ ರುಪಾಯಿಗಳು.

ಕೊಲಂಬಿಯಾದ ಸರ್ಕಾರ ಅಮೆರಿಕೆಯಲ್ಲಿನ ತನ್ನ ಅಕ್ರಮ ವಲಸಿಗರನ್ನು ಗೌರವದಿಂದ ವಾಪಸು ಕರೆತರಲು ತನ್ನ ರಕ್ಷಣಾ ಮಂತ್ರಾಲಯ, ಜನತಾ ಕಚೇರಿ, ಛಾನ್ಸೆಲರ್ ಕಚೇರಿ, ರಾಷ್ಟ್ರಪತಿ ಕಚೇರಿಯ ಪ್ರತಿನಿಧಿಗಳನ್ನು ಒಳಗೊಂಡ ‘ಯೂನಿಫೈಡ್ ಕಮಾಂಡ್ ಪೋಸ್ಟ್’ನ್ನು ರಚಿಸಿದೆ. ವಲಸೆಯ ಸವಾಲುಗಳಿಗೆ ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ಮಟ್ಟಗಳಲ್ಲಿ ಮಾನವೀಯ ಮತ್ತು ನ್ಯಾಯಯುತ ಪರಿಹಾರಗಳನ್ನು ಕಂಡು ಹಿಡಿಯಲು ಹಾಗೂ ತನ್ನ ನಾಗರಿಕರನ್ನು ರಕ್ಷಿಸಲು ಕೊಲಂಬಿಯಾ ತನ್ನ ಬದ್ಧತೆಯನ್ನು ಪುನರುಚ್ಚರಿಸಿದೆ. ಟ್ರಂಪ್ ಆಡಳಿತ ವಲಸಿಗರನ್ನು ಹೀನಾಯವಾಗಿ ನಡೆಸಿಕೊಳ್ಳುತ್ತಿರುವ ರೀತಿನೀತಿ ಕುರಿತು ಚರ್ಚಿಸಲು ಮಧ್ಯ ಅಮೆರಿಕ ಮತ್ತು ದಕ್ಷಿಣ ಅಮೆರಿಕದ ನಾಯಕರು ಸಭೆ ಸೇರಿ ಚರ್ಚಿಸಲಿದ್ದಾರೆ.
ಭಾರತದ ಅಮೃತಕಾಲದ ಆಡಳಿತ ತುಟಿ ಹೊಲಿದುಕೊಂಡಿದೆ. ಜೊತೆಗೆ ಟ್ರಂಪ್ ಬೆದರಿಕೆಗೆ ಮಣಿದು ಅಮೆರಿಕೆಯ ವಿಲಾಸೀ ಮೋಟರ್ ಸೈಕಲ್ ಉತ್ಪಾದನಾ ದೈತ್ಯ ಹಾರ್ಲೆ ಡೇವಿಡ್ಸನ್ ಕಂಪನಿಗೆ ತನ್ನ ಬಾಗಿಲು ತೆರೆದಿದೆ. ತಮ್ಮ ಅಧಿಕಾರ ಸ್ವೀಕಾರ ಸಮಾರಂಭಕ್ಕೆ ಟ್ರಂಪ್ ಅವರು ತಮ್ಮನ್ನು ಆಹ್ವಾನಿಸದಿದ್ದ ಬೆಳವಣಿಗೆಯಿಂದ ಮೋದಿ ತೀವ್ರವಾಗಿ ಕುಗ್ಗಿ ಹೋಗಿದ್ದರು. ಅಮೆರಿಕೆಯ ಉತ್ಪನ್ನಗಳ ಆಮದಿನ ಮೇಲೆ ಹೆಚ್ಚು ಸುಂಕ ಹೇರುವ ದೇಶಗಳಿಗೆ ನಾವೂ ಹೆಚ್ಚು ಸುಂಕ ಹೇರುತ್ತೇವೆ ಎಂದು ಭಾರತಕ್ಕೆ ಪರೋಕ್ಷ ಬೆದರಿಕೆ ಹಾಕಿದ್ದರು. ಈ ಮಾತು ಹಾರ್ಲೆ ಡೇವಿಡ್ಸನ್ ಕಂಪನಿಯನ್ನು ಕುರಿತಾಗಿತ್ತು. 1600 ಸಿಸಿಗಳಿಗೂ ಹೆಚ್ಚು ಸಾಮರ್ಥ್ಯದ ಎಂಜಿನ್ಗಳನ್ನು ಹೊಂದಿದ ವಿಲಾಸೀ ಮೋಟರ್ ಸೈಕಲ್ಗಳನ್ನು ಈ ಕಂಪನಿ ಉತ್ಪಾದಿಸುತ್ತದೆ. ಇತ್ತೀಚಿನ ಕೇಂದ್ರ ಬಜೆಟ್ ನಲ್ಲಿ ಇವುಗಳ ಮೇಲಿನ ಆಮದು ಸುಂಕವನ್ನು ಶೇ.50ರಿಂದ ಶೇ.30ಕ್ಕೆ ಇಳಿಸಲಾಯಿತು. ಅಂದ ಹಾಗೆ ಭಾರತದಲ್ಲಿ ಹಾರ್ಲೆ ಡೇವಿಡ್ಸನ್ ಮೋಟರ್ ಸೈಕಲ್ಗಳ ಬೆಲೆ 2.30 ಲಕ್ಷ ರುಪಾಯಿಗಳಿಂದ 40 ಲಕ್ಷ ರುಪಾಯಿಗಳು! ಇದು ‘ಆನ್ ರೋಡ್’ ಪ್ರೈಸ್ ಅಲ್ಲ. ಈ ಬೆಲೆ ಇನ್ನಷ್ಟು ಜಾಸ್ತಿ.
ಜನಸಾಮಾನ್ಯರು ಬಳಸುವ ದಿನನಿತ್ಯದ ಸರಕು ಸರಂಜಾಮುಗಳನ್ನು ಹುಡುಕಿ ಹುಡುಕಿ ಮೇಲೆ ಬೆನ್ನು ಮುರಿಯುವಷ್ಟು ಜಿ.ಎಸ್.ಟಿ. ಹೇರುವ ನಿರ್ಮಲಾ ಸೀತಾರಾಮನ್ ಅವರು ಹಾರ್ಲೆ ಡೇವಿಡ್ಸನ್ ಮೋಟರ್ ಸೈಕಲ್ ಮೇಲಿನ ಆಮದು ಸುಂಕವನ್ನು ಶೇ.50ರಿಂದ ಶೇ.30ಕ್ಕೆ ಇಳಿಸಿದ್ದಾರೆ!
ವಿಶ್ವಗುರು…ಅಮೃತಕಾಲ..ಹಿಂದು ರಾಷ್ಟ್ರ…ಮುಸ್ಲಿಮ್ ದ್ವೇಷ…ಸನಾತನ ಸಂವಿಧಾನ ರಚನೆಯ ಅಮಲುಗಳಲ್ಲಿ ಭಾರತದ ಜನಸಾಮಾನ್ಯ ತತ್ತರಿಸಿದ್ದಾನೆ. ‘ದೇಹಕ್ಕೆ ಬಿದ್ದ ಪೆಟ್ಟು ಮಿದುಳಿಗೆ ತಿಳಿಯುತ್ತಿಲ್ಲ’.

ಡಿ ಉಮಾಪತಿ
ಹಿರಿಯ ಪತ್ರಕರ್ತರು




