ಮಾರ್ಕ್ಸ್ ವಾದ, ಗಾಂಧಿವಾದ, ಅಂಬೇಡ್ಕರ್ ವಾದಗಳಲ್ಲಿ ಪರಿಹಾರ ಹುಡುಕಿದರೂ ಈಗಿನ ನಾಶದ ವೇಗ ನೋಡಿದರೆ, ಒಂದೋ ಜಗತ್ತಿನಾದ್ಯಂತ ಬೃಹತ್ ಕ್ರಾಂತಿಯಾಗಿ ಹೊಸ ಆರ್ಥಿಕ ನೀತಿ ಜಾರಿಯಾಗಬೇಕು; ಇಲ್ಲದಿದ್ದರೆ ಲೋಕ ನಾಶವಾಗಬೇಕು!
ಜಗತ್ತಿನ ಆರ್ಥಿಕ ನೀತಿಗಳು ಒಂದು ನಿರ್ಣಾಯಕ ಹಂತಕ್ಕೆ ಬಂದು ತಲುಪಿರುವಂತೆ ಕಾಣುತ್ತಿದೆ. ಇದಕ್ಕೆ ಜಗತ್ತಿನ ದೊಡ್ಡಣ್ಣನೆಂದು ಕರೆಸಿಕೊಂಡಿರುವ ಅಮೆರಿಕವೇ ನಡುಗಿ ಹೋಗುತ್ತಿರುವುದನ್ನು ನೋಡಬಹುದು. ಇದಕ್ಕೆ ಬರಿದಾಗುತ್ತಿರುವ ಭೂಮಿಯ ಖನಿಜ, ತಾಪಮಾನ, AI ತಂತ್ರಜ್ಞಾನ ಹಾಗೂ ಜಗತ್ತಿನಾದ್ಯಂತ ಶತಕೋಟಿಯ ಶ್ರೀಮಂತರು ವಿಶ್ವಬ್ಯಾಂಕ್, ವಿಶ್ವಸಂಸ್ಥೆ, ಆಮದು ರಫ್ತು ನೀತಿ ಹಾಗೂ ಶೇರು ಮಾರುಕಟ್ಟೆಯ ಮೂಲಕ ನಡೆಸಿದ ದಾಂಧಲೆಯೂ ಇವತ್ತು ಎಲ್ಲವನ್ನು, ಎಲ್ಲರನ್ನು ಅಪೋಶನ ತೆಗೆದುಕೊಳ್ಳುವಂತೆ ಮಾಡುತ್ತಿದೆ.
ಇದಕ್ಕೆ ಪರ್ಯಾಯವಾಗಿ ಮಾರ್ಕ್ಸ್ ವಾದ, ಗಾಂಧಿವಾದ, ಅಂಬೇಡ್ಕರ್ ವಾದಗಳಲ್ಲಿ ಪರಿಹಾರ ಹುಡುಕಿದರೂ ಈಗಿನ ನಾಶದ ವೇಗ ನೋಡಿದರೆ, ಇಲ್ಲ! ಜಗತ್ತಿನಾದ್ಯಂತ ಬೃಹತ್ ಕ್ರಾಂತಿಯಾಗಿ ಹೊಸ ಆರ್ಥಿಕ ನೀತಿ ಜಾರಿಯಾಗಬೇಕು; ಇಲ್ಲದಿದ್ದರೆ ಲೋಕ ನಾಶವಾಗಬೇಕು. ಮಧ್ಯಮ ಮಾರ್ಗಕ್ಕೆ ಬೇಕಾದ ಸಂಯಮ, ತಾಳ್ಮೆ ಈಗ ಯಾರಲ್ಲೂ ಉಳಿದಿಲ್ಲ. ಹಿಂದೆ ತೇಜಸ್ವಿಯವರು, ಜನಾರ್ದನ್ ಪೂಜಾರಿಯವರು ಕೇಂದ್ರ ಸಚಿವರಾಗಿ ತಂದ ಸಾಲದ ಯೋಜನೆಯ ಬಗ್ಗೆ ಬರೆಯುತ್ತಾ, “ಇದು ಮನ್ನಾ ಆಗೋ ಸಾಲ, ಯಾರು ಕಟ್ಟುವ ಅವಶ್ಯಕತೆ ಇಲ್ಲ” ಎಂದು ಹೇಳಿ ಅದಕ್ಕೆ ಅರ್ಥಶಾಸ್ತ್ರಜ್ಞರು ಪ್ರತಿಕ್ರಿಯೆ ಕೊಡಲು ಶುರುಮಾಡಿದ ಮೇಲೆ ʼಇವರು ಪ್ರತಿಕ್ರಿಯೆ ಕೊಡಲು ಇಷ್ಟು ಚಿವುಟಬೇಕಾಯಿತಲ್ಲʼ ಎನ್ನುವ ಅರ್ಥದಲ್ಲಿ ಹೇಳುತ್ತಾರೆ. ಕಡೆಗೆ ತೇಜಸ್ವಿ ಹಾಗೂ ಪ್ರೊ. ನಂಜುಂಡಸ್ವಾಮಿಯವರಿಗೆ ಜಾಗತೀಕರಣದ ಮೇಲೆ ತೀವ್ರವಾದ ವಾಗ್ವಾದಗಳಾಗುತ್ತವೆ. ಅದಕ್ಕೆ ನಂಜುಂಡಸ್ವಾಮಿ ಸಮರ್ಥವಾಗಿ ಉತ್ತರಕೊಡುವುದು ಮಾಡಿದರೂ ಇವತ್ತಿಗೂ ಈ ಚರ್ಚೆಯ ಭಾಗವಾಗೇ ನಾವು ನಿಂತಿದ್ದೇವೆ ಅನಿಸುತ್ತೆ.
ಇತ್ತೀಚೆಗೆ ರೈತ ಹೋರಾಟಗಾರರು ʼಸಫಾರಿ ನಿಲ್ಲಿಸಿ, ರೆಸಾರ್ಟ್ ನಿಲ್ಲಿಸಿ, ನಮ್ಮ ಹೊಲಕ್ಕೆ ಬನ್ನಿʼ ಎಂದು ಕರೆ ನೀಡುತ್ತಿರುವುದರ ಹಿಂದಿನ ಆರ್ಥಿಕ ವಿಶ್ಲೇಷಣೆ ಗಮನಿಸಿ ಜಗತ್ತಿನ ಆರ್ಥಿಕ ನೀತಿಯನ್ನು ವಿಶ್ಲೇಷಿಸಬಹುದು. ಸಫಾರಿ, ರೆಸಾರ್ಟ್ ಗಳಿಂದ ರೈತರ ಹೊಲಗಳಿಗೆ ಕಾಡುಪ್ರಾಣಿಗಳು ಬರುತ್ತವೆ. ಕಾಡು ರೆಸಾರ್ಟ್ ಪಾಲಾಗುತ್ತದೆ. ರೆಸಾರ್ಟ್ ಗಳ ಐಷಾರಾಮಿತನದಿಂದ ಪರಿಸರ ನಾಶವಾಗುತ್ತದೆ ಎಂಬುದು ರೈತರ ವಾದ. ಈ ಸಂಘರ್ಷ ಸ್ಥಳೀಯವಾಗಿ ಇದ್ದರೂ ಜಾಗತಿಕ ಆರ್ಥಿಕ ನೀತಿಗಳನ್ನು ಗಮನಿಸಿದರೆ ಅತಿ ದೊಡ್ಡ ಶ್ರೀಮಂತರ ಆರ್ಥಿಕ ನೀತಿಗಳಿಗೂ ಜನಸಾಮಾನ್ಯರ ಆರ್ಥಿಕ ನೀತಿಗಳ ನಡುವೆ ಇಂಥದ್ದೇ ದೊಡ್ಡ ಸಂಘರ್ಷವಾಗುವ ಸಾಧ್ಯತೆ ಎದ್ದು ಕಾಣುತ್ತಿದೆ.
ಇದಕ್ಕೆ ಪೂರಕವಾಗಿ ಎಪ್ಸ್ಟೀನ್ ಫೈಲ್ಸ್ನಿಂದ ಆಚೆ ಬಂದ ಸತ್ಯಗಳು ನಿಜಕ್ಕೂ ಗಾಬರಿಬೀಳಿಸುವಂತಿವೆ. ಹೊರನೋಟಕ್ಕೆ ಪ್ರಜಾಪ್ರಭುತ್ವದ ವ್ಯವಸ್ಥೆ ಇದ್ದರೂ ಒಳಗೊಳಗೆ ಅತಿ ಶ್ರೀಮಂತರ ಎಲೈಟ್ ಕ್ಲಾಸ್ಗಳೇ ಜಗತ್ತಿನ ಆರ್ಥಿಕ ನೀತಿಗಳನ್ನು ತಮ್ಮ ಕಪಿಮುಷ್ಟಿಯಲ್ಲಿ ಇಟ್ಟುಕೊಂಡಿದೆಯೇನೋ ಅನಿಸುತ್ತಿದೆ. ನಮ್ಮ ದೇಶದ ಪ್ರಧಾನ ಸೇವಕರು ಇಸ್ರೇಲ್ ಮುಂದೆ ಅಮೆರಿಕ ಮುಂದೆ ಹಲ್ಕಿರಿದು ನಿಂತಿರುವುದು ನೋಡಿದರೆ ಇದು ಅರಿವಿಗೆ ಬರುತ್ತದೆ.
ಅಮೆರಿಕ, ಇಸ್ರೇಲ್ ಜಾಗತಿಕವಾಗಿ ತೃತೀಯ ರಾಷ್ಟ್ರಗಳನ್ನು ಹೆದರಿಸಿ, ಬೆದರಿಸಿ ತಮ್ಮ ವಶದಲ್ಲಿ ಇಟ್ಟುಕೊಳ್ಳುತ್ತಿವೆ. ಇದಕ್ಕೆ ಯುರೋಪ್ ಪಡೆಗಳು ಕೆಲವೊಮ್ಮೆ ಪ್ರತಿರೋಧ ಒಡ್ಡಿದರೂ ಈ ನ್ಯಾಟೋ ಪಡೆಗಳು ಬಿಳಿಚರ್ಮದವರ ಪರವೇ ಎಂದು ಹಲವಾರು ಬಾರಿ ಸಾಬೀತುಪಡಿಸಿವೆ. ನಮ್ಮ ಭಾರತದಲ್ಲಿ ನೆಹರೂ ಆರ್ಥಿಕ ನೀತಿಗಳನ್ನು ಟೀಕಿಸಿದ ಲೋಹಿಯಾರವರು ಗಾಂಧಿ ಪ್ರಣೀತ ಆರ್ಥಿಕ ನೀತಿಯ ಬದಲಾಗಿ ಸಣ್ಣ ಕೈಗಾರಿಕೆಗಳ ಮಿತಿಯುಳ್ಳ ಬದುಕಿನ ಮಧ್ಯಮ ಮಾರ್ಗದ ವಿಶ್ಲೇಷಣೆ ಮಾಡಿದ್ದರು. ಯಾಕೆಂದರೆ, ಇಂದು ಆಧುನಿಕತೆಯ ಹೆಸರಲ್ಲಿ ಎಲೈಟ್ ಕ್ಲಾಸ್ ಗಳು ರೂಪಿಸಿರುವ ಮಜಾವಾದಿ ಸಿದ್ದಾಂತಗಳ ಕಡೆಗೆ, ಮಕ್ಕಳ ಮೇಲಿನ ಲೈಂಗಿಕತೆಗೆ, ಮಕ್ಕಳ ಮೇಲಿನ ಬಾಂಬುಗಳ ಸುರಿಮಳೆಯಲ್ಲಿ ಬಂದು ನಿಂತಿರುವುದನ್ನು ಈ ಇಪ್ಪತ್ತೊಂದನೆಯ ಶತಮಾನ ಕಣ್ಣಾರೆ ಕಂಡಿದೆ. ಬಹುಷಃ ಎಪ್ಸ್ಟೀನ್ ಫೈಲ್ಗಳು ಮಕ್ಕಳ ಮೇಲಿನ ದೌರ್ಜನ್ಯದ ಭಾಗವಾಗಿ ಪರಿಸರದ ಮೇಲಿನ ದೌರ್ಜನ್ಯವನ್ನೂ ಅಷ್ಟೇ ಸಲೀಸಾಗಿ ಪರಿಗಣಿಸಿವೆ.
ಇಂಥದ್ದೇ ಆರ್ಥಿಕ ನೀತಿಯನ್ನು ನೆಚ್ಚಿಕೊಂಡ ಬೆಂಗಳೂರು ಬೆಳೆಯುತ್ತಿರುವ ವೇಗವನ್ನು ಗಮನಿಸಿದರೆ ಗೊತ್ತಾಗುತ್ತದೆ. ನಮ್ಮ ಕರ್ನಾಟಕದ ಬಜೆಟ್ ನ ನಾಲ್ಕರಷ್ಟು ಹಣ ಖಾಸಗಿಯವರಿಂದ ಹರಿದು ಬರುತ್ತದೆಯಂತೆ. ಅದಕ್ಕೆ ಏನು ಬೇಕು? ಲಕ್ಷಗಟ್ಟಲೆ ಲೀಟರ್ ನೀರು ಬೇಕು, ಭೂಮಿ ಬೇಕು, ಬಡವರನ್ನು ಎತ್ತಂಗಡಿ ಮಾಡಬೇಕು, ಕಾಡು ನಾಶವಾಗಬೇಕು, ಕೆರೆಗಳು ಬತ್ತಿ ಹೋಗಬೇಕು. ಕಡೆಗೆ ಕಲುಷಿತ ನೀರು, ಕಲುಷಿತ ಆಹಾರ, ಕಲುಷಿತ ಗಾಳಿ, ನೀರಿಗೆ ಅಭಾವ ಇದು ನಮ್ಮ ನಾಗರೀಕತೆಯಾಗಬೇಕು? ಇದು ಅತ್ಯಂತ ಅನಾಗರೀಕ ಪ್ರಪಂಚವಲ್ಲದೆ ಮತ್ತೇನು?
ಈಗಾಗಲೇ ಕ್ವಾಂಟಂ ತಂತ್ರಜ್ಞಾನವು ಮನುಷ್ಯನನ್ನು ಸೂಪರ್ ಹ್ಯೂಮನ್ ಮಾಡುವ ಕಡೆ ಧಾಪುಗಾಲು ಇಡುತ್ತಿದೆ. ಸಣ್ಣಸಣ್ಣ ಮೈಕ್ರೋ ರೊಬೋಟ್ಗಳು ದೇಹದೊಳಗೆ ಹೋಗಿ ಮನುಷ್ಯನನ್ನು ರೋಗ ಮುಕ್ತಗೊಳಿಸುತ್ತವೆ ಎಂದು ಹೇಳಲಾಗುತ್ತಿದೆ. ಜೆನೆಟಿಕ್ ಇಂಜಿನಿಯರ್ ಅಂತೂ ಸ್ಮಾರ್ಟ್ ಹ್ಯೂಮನ್ಗಳನ್ನು ತಯಾರಿಸುವ ಕನಸು ಬಿತ್ತುತ್ತಿದೆ. ಈ ನಡುವೆ ಬಡವರು ಬಡವರಾಗೆ ಇದ್ದಾರೆ. ಅಮೆರಿಕಾದಂತವರ ಬೆದರಿಕೆಗೆ ಹಲ್ಕಿರಿದು ನಮ್ಮ ಪ್ರಧಾನ ಸೇವಕರು ನಿಲ್ಲುವಂತಾಗಿದೆ.
ಈಗಾಗಲೇ ನೆದರ್ ಲ್ಯಾಂಡ್ ನಂತ ರಾಷ್ಟ್ರಗಳು ಪರಿಸರ ಕಾಳಜಿಯ ಬಜೆಟ್ ಮಂಡಿಸುತ್ತಿವೆ. ಆರ್ಥಿಕ ನೀತಿಯಲ್ಲೂ ಇಕಾಲಜಿ ಮುಖ್ಯ ಪಾತ್ರವಹಿಸುತ್ತಿದೆ. ಇಂಥ ಪರಿಸರ ಸ್ನೇಹಿ, ನೈತಿಕ ಬದುಕಿಗೆ ಅಡ್ಡಗಾಲು ಹಾಕುತ್ತಿರುವವರೇ ಎಲೈಟ್ ಕ್ಲಾಸ್ ಎಂದು ಪರಿಸರ ನಾಶಕ್ಕೆ ಕಾರಣವಾಗಿರುವ ಎಪ್ಸ್ಟೀನ್ ಫೈಲ್ಸ್ನಲ್ಲಿರುವ ಶತಕೋಟಿಯ ಶ್ರೀಮಂತರು ತಮ್ಮ ಆರ್ಥಿಕ ನೀತಿಯ ಮೂಲಕ ಸಾಬೀತುಪಡಿಸಿದ್ದಾರೆ. ಹಾಗಾಗಿ ಈಗಿರುವ ಆರ್ಥಿಕ ನೀತಿಗಳ ಬದಲಾವಣೆಗೆ ಹೊಸಕಾಲದ ಜೆನ್-ಜಿ ಯುವಕರು ಕಾರಣರಾಗಬಹುದು. ಯಾಕೆಂದರೆ ಈಗಾಗಲೇ ಐಟಿ ಬಿಟಿಯಿಂದ ಐಷಾರಾಮಿ ಬದುಕು ಕಾಣುತ್ತಿದ್ದವರಿಗೂ AI ಶಾಕ್ ಕೊಡುತ್ತಿದೆ.
ಕೂಲಿ, ಕೃಷಿ, ದೊಡ್ಡ ಕಂಪನಿಗಳ ಹೊಡೆತ, ಎಲ್ಲ ಬಗೆಯ ಕಾರ್ಮಿಕರಿಗೂ, ಎಲ್ಲ ಸ್ಥರದ ಯುವಕರಿಗೂ ಇದು ಕೆಟ್ಟ ಕಾಲ. ಭವಿಷ್ಯವೇ ಕರಾಳವಾಗಿ ಕಾಣುತ್ತಿರುವ ಈ ಹೊತ್ತಿನಲ್ಲಿ ಮುಂದೆ ಭವಿಷ್ಯದ ವಾರಸುದಾರರು ಇವರೇ ಎನ್ನುವ ಹೊತ್ತಿನಲ್ಲಿ ಇವರು ಮುಂದೆ ರೂಪಿಸಬಹುದಾದ ಜಗತ್ತು ಈಗಿನ ಗುಲಾಮಗಿರಿಯ ಆರ್ಥಿಕನೀತಿಯ ಹೊರತಾಗಿರಬೇಕು. ಈಗಾಗಲೇ ಇಸ್ಲಾಂ ರಾಷ್ಟ್ರಗಳು ಒಂದು ಕಡೆಯಾದರೆ, ಅಮೆರಿಕ, ಇಸ್ರೇಲ್, ಯುರೋಪ್ ರಾಷ್ಟ್ರಗಳ ಹಿತಾಸಕ್ತಿಗಳೇ ಬೇರೆ. ಇನ್ನು ರಷ್ಯಾ, ಚೀನಾ ಸದ್ಯಕ್ಕೆ ಅಮೆರಿಕಗೆ, ಇಸ್ರೇಲ್ಗೆ ಸೆಡ್ಡು ಹೊಡೆಯಲು ಸಶಕ್ತ ರಾಷ್ಟ್ರಗಳಂತೆ ಕಾಣುತ್ತಿವೆ. ಇವೆಲ್ಲದರ ಮಧ್ಯೆ ನಮ್ಮಂಥ ತೃತೀಯ ರಾಷ್ಟ್ರಗಳ ನಿಲುವೇನು? ಮೂರನೇ ಮಹಾಯುದ್ದಕ್ಕೆ ಕ್ಷಣಗಣನೆ ಎನ್ನುತ್ತಿರುವಾಗ ಜಾಗತಿಕವಾಗಿ ಮನುಷ್ಯ ಕುಲ ಒಂದಾಗಿ ಪರಿಸರದ ಜೊತೆ ಹೆಜ್ಜೆ ಹಾಕಬೇಕಲ್ಲವೆ?
ಇದನ್ನೂ ಓದಿ: ಈ ದಿನ ಸಂಪಾದಕೀಯ | ನಿರುದ್ಯೋಗ ಸಮಸ್ಯೆ ಸರಳವಲ್ಲ, ಸ್ಪಂದಿಸದಿದ್ದರೆ ಸರ್ಕಾರಕ್ಕೆ ತೊಂದರೆ ತಪ್ಪಿದ್ದಲ್ಲ
ನ್ಯಾಯಲಯಗಳು, ಸರ್ಕಾರಿ ವ್ಯವಸ್ಥೆ, ರಾಜಕೀಯ ವ್ಯವಸ್ಥೆಗಳೆಲ್ಲ ಉಳ್ಳವರ ಪರವಾಗಿ ವರ್ತಿಸುತ್ತಾ ಭ್ರಷ್ಟಚಾರ ಮಾಡುತ್ತಿದ್ದರೆ, ಜನ ಎಲ್ಲಿಯವರೆಗೆ ಸಹಿಸುತ್ತಾರೆ. ಬಹುಷ ಜಾಗತಿಕವಾಗಿ ಇದನ್ನೆಲ್ಲ ಮೀರಿ ಬದಲಾವಣೆ ತರಬಹುದಾದ ಕಲಾವಿದರು, ಸಾಹಿತಿಗಳು, ಹೋರಾಟಗಾರರು ಹೊಸ ತಲೆಮಾರಿನ ತವಕ ತಲ್ಲಣಗಳ ಜೊತೆ ನಿಲ್ಲಬೇಕಿದೆ. ಪ್ರಕೃತಿಯ ಜೊತೆ ನಿಲ್ಲಬೇಕಿದೆ. ಶುದ್ದ ಗಾಳಿ, ನೀರು, ಆಹಾರದ ಪರವಾಗಿ ನಿಲ್ಲಬೇಕಿದೆ. ಅದಕ್ಕೆ ಎಪ್ಸ್ಟೀನ್ ಫೈಲ್ಸ್ಗಳಲ್ಲಿರುವ ಶತಕೋಟಿ ಶ್ರೀಮಂತರ ಜಾಗತಿಕ ಆರ್ಥಿಕ ನೀತಿಗಳನ್ನು ಪ್ರಶ್ನಿಸಬೇಕಿದೆ. ಇದಕ್ಕೆ ಜಗತ್ತು ಒಂದಾಗಿ ನಿಲ್ಲದಿದ್ದರೆ ಪ್ರಯೋಜನವಿಲ್ಲ. ಅಂಥ ದಿನಗಳಿಗಾಗಿ ಜಗತ್ತಿನಾದ್ಯಂತ ಒಂದು ಕುದಿಯಂತು ನಿರ್ಮಾಣವಾಗುತ್ತಿದೆ ಎಂದು ಅನಿಸುತ್ತಿದೆ.
ಇದಕ್ಕೆ ಉತ್ತರ, ರೈತ ಹೋರಾಟಗಾರರು ಪ್ರಕೃತಿ, ಕೃಷಿ, ರೆಸಾರ್ಟ್ ನಡುವೆ ನಿಮ್ಮ ಆಯ್ಕೆ ಯಾವುದು ಎನ್ನುವುದನ್ನು ಕೇಳುತ್ತಿರುವುದರಲ್ಲೇ ಇದೆ. ಇಲ್ಲದಿದ್ದರೆ ಭೂ ಕುಸಿತ, ಸರ್ವನಾಶಕ್ಕೆ ದಾರಿಯಂತೂ ಸುಗಮವಾಗಿ ಕಾಣುತ್ತಿದೆ. ವಿಪರ್ಯಾಸವೆಂದರೆ ಒಳ್ಳೆಯವರಾದಿಯಾಗಿ, ಎಪ್ಸ್ಟೀನ್ ಫೈಲ್ಸ್ನ ಕೆಟ್ಟವರೂ ಸೇರಿದಂತೆ ಎಲ್ಲರೂ ನಾಶವಾಗುತ್ತೇವೆ. ಪರ್ಯಾಯ ಬೀಜಗಳು ಭೂಮಿಯಿಂದ ಮೊಳಕೆ ಒಡೆಯಲು ಭೂಮಿ ಹದಗೊಳ್ಳುವುದು ಈಗಿನ ಅನಿವಾರ್ಯತೆಯಾಗಿದೆ.





