ಉತ್ತರ ಕರ್ನಾಟಕದ ಜಾನಪದ ಸಾಹಿತ್ಯವು ತನ್ನದೇ ಆದ ಘನತೆ, ಪರಂಪರೆ ಮತ್ತು ಸಾಂಸ್ಕೃತಿಕ ಹಿರಿಮೆಯನ್ನು ಹೊಂದಿದೆ. ಸೋಬಾನೆ ಪದಗಳು, ಹಂತಿ ಪದಗಳು, ಗೀಗಿ ಪದಗಳು, ಗೌರಿ ಹಬ್ಬ, ಹೊಳಿ ಹಬ್ಬ, ಮೊಹರಂ, ಡೊಳ್ಳಿನ ಪದಗಳು, ದುರ್ಗ–ಮುರಗಿ ಪದಗಳು ಸೇರಿದಂತೆ ಕರಡಿ ಮಜಲು, ಸೋಮನ ಕುಣಿತ, ಪೂಜಾ ಕುಣಿತ, ಕೃಷ್ಣ ಪಾರಿಜಾತ, ಬಯಲಾಟ ಮುಂತಾದ ಜಾನಪದ ಹಾಡು–ನೃತ್ಯ ಪ್ರಕಾರಗಳು ನಾಡಿನ ಜನಪದ ಸಂಸ್ಕೃತಿಯನ್ನು ಶ್ರೀಮಂತಗೊಳಿಸಿವೆ.
ಇತ್ತೀಚಿನ ದಿನಗಳಲ್ಲಿ ಕೆಲ ಹಾಡುಗಾರರು ಜಾನಪದದ ಹೆಸರಿನಲ್ಲಿ ಅಶ್ಲೀಲ ಹಾಗೂ ಅಸಭ್ಯ ಭಾಷೆ ಬಳಸಿ ಹಾಡುಗಳನ್ನು ರಚಿಸಿ ಹಾಡುತ್ತಿರುವುದು ಹಾಗೂ ಯುಟ್ಯೂಬ್ ಮೂಲಕ ಅವುಗಳಿಂದ ಮಹಿಳೆಯರಿಗೆ ಮುಜುಗರ ಉಂಟುಮಾಡುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಇದರಿಂದ ಉತ್ತರ ಕರ್ನಾಟಕದ ಜಾನಪದ ಸಾಹಿತ್ಯಕ್ಕೆ ಮಸಿ ಬಳಿದಂತಾಗಿದ್ದು, ಪ್ರದೇಶದ ಸಾಂಸ್ಕೃತಿಕ ಗೌರವಕ್ಕೆ ಧಕ್ಕೆಯುಂಟಾಗುತ್ತಿದೆ ಎಂದು ಉತ್ತರ ಕರ್ನಾಟಕದ ಪ್ರಗತಿಪರ ಚಿಂತಕರು ಆರೋಪಿಸಿದ್ದಾರೆ.
ಮಹಿಳೆಯರನ್ನು ಗುರಿಯಾಗಿಸಿಕೊಂಡು ಅವರ ಮಾನ–ಮರ್ಯಾದೆ ಹಾಗೂ ತೇಜಸ್ಸಿಗೆ ಧಕ್ಕೆ ತರುವ ಪದಗಳ ಬಳಕೆ ನಾಚಿಕೆಗೇಡಿನ ಸಂಗತಿಯಾಗಿದ್ದು, ಜಾನಪದ ಎಂಬ ಪವಿತ್ರ ಪರಂಪರೆಗೆ ಅವಮಾನ ಮಾಡುತ್ತಿದ್ದಾರೆ.
ಅಶ್ಲೀಲ ಜಾನಪದ ಹಾಡುಗಳ ವಿರುದ್ಧ ಹೋರಾಟ ನಡೆಸುತ್ತಿರುವ ಸಾಮಾಜಿಕ ಹೋರಾಟಗಾರ ಶ್ರೀನಿವಾಸಗೌಡ ಪಾಟಿಲ್ ಅವರು ಈ ದಿನ.ಕಾಮ್ ಜತೆ ಮಾತನಾಡಿ, “ಅಶ್ಲೀಲ ಪದಗಳನ್ನು ಬಳಸಿಕೊಂಡು ಜಾನಪದ ಗೀತೆಗಳೆಂದು ಬಿಂಬಿಸಲಾಗುತ್ತಿದ್ದು, ಇದರಿಂದ ಯುವಜನರನ್ನು ದಾರಿ ತಪ್ಪಿಸಲಾಗುತ್ತಿದೆ. ಇದರ ಪರಿಣಾಮವಾಗಿ ಉತ್ತರ ಕರ್ನಾಟಕದ ಸಂಸ್ಕೃತಿ ಹಾಳಾಗುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಈ ವಿಷಯವಾಗಿ ಬೆಳಗಾವಿಯ ಪ್ರಾದೇಶಿಕ ಆಯುಕ್ತರು ಹಾಗೂ ಪೊಲೀಸ್ ಮಹಾನಿರೀಕ್ಷಕರಿಗೆ ಮನವಿ ಸಲ್ಲಿಸಿದ್ದೇನೆ. ಅಶ್ಲೀಲ ಹಾಗೂ ಅಸಭ್ಯ ಜಾನಪದ ಗೀತೆಗಳನ್ನು ರಚಿಸಿ ಸಾರ್ವಜನಿಕವಾಗಿ ಪ್ರಸಾರ ಮಾಡುವವರ ವಿರುದ್ಧ ಐಟಿ ಕಾಯ್ದೆ–2000 ಹಾಗೂ ಬಿಎನ್ಎಸ್ ಸೆಕ್ಷನ್ 296 ಸೇರಿದಂತೆ ಇತರೆ ಸಂಬಂಧಿತ ಕಾನೂನುಗಳಡಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದೇನೆ” ಎಂದು ತಿಳಿಸಿದರು.
“ಟ್ರ್ಯಾಕ್ಟರ್ಗಳಲ್ಲಿ, ಮೆರವಣಿಗೆಗಳಲ್ಲಿ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಇಂತಹ ಅಶ್ಲೀಲ ಜಾನಪದ ಗೀತೆಗಳನ್ನು ಸಂಪೂರ್ಣವಾಗಿ ನಿಷೇಧಿಸಬೇಕು” ಎಂದು ಆಗ್ರಹಿಸಿದರು.
ಈ ಕುರಿತು ಉತ್ತರ ಕರ್ನಾಟಕದ ಪ್ರಖ್ಯಾತ ಜಾನಪದ ಹಾಡುಗಾರ ಶಬ್ಬಿರ್ ಡಾಂಗೆ ಈ ದಿನ.ಕಾಮ್ ಜತೆ ಮಾತನಾಡಿ, “ಕೆಲವರು ಜಾನಪದ ಹೆಸರಿನಲ್ಲಿ ಮಡಿವಂತಿಕೆ ಇಲ್ಲದೆ ಹಾಡುಗಳನ್ನು ಹಾಡುತ್ತಿದ್ದಾರೆ. ನಾಚಿಕೆ, ಮಾನ–ಮರ್ಯಾದೆ ಬಿಟ್ಟು ಹೈಸ್ಕೂಲ್ ಹಾಗೂ ಕಾಲೇಜು ಹುಡುಗಿಯರ ಹೆಸರಿನಲ್ಲಿ ಹಾಡುಗಳನ್ನು ಹಾಡಲಾಗುತ್ತಿದೆ. ಇದರಿಂದ ಹೆಣ್ಣು ಮಕ್ಕಳಿಗೆ ಅವಮಾನವಾಗುತ್ತಿದೆ” ಎಂದು ಆತಂಕ ವ್ಯಕ್ತಪಡಿಸಿದರು.
“ಈ ಹಿನ್ನೆಲೆ ಅಶ್ಲೀಲ ಜಾನಪದ ಹಾಡುಗಳ ವಿರುದ್ಧ ಸಭೆ ನಡೆಸಿ, ಇಂತಹ ಹಾಡುಗಳನ್ನು ರಚಿಸಿ ಹಾಡಬಾರದೆಂದು ಕಲಾವಿದರಿಗೆ ತಿಳಿಸಲಾಗಿದೆ. ಈ ಕ್ರಮಕ್ಕೆ ಹಂಪಿ ವಿಶ್ವವಿದ್ಯಾಲಯದವರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಸರ್ಕಾರದ ಮಟ್ಟದಲ್ಲೂ ಹೋರಾಟ ಮಾಡುತ್ತೆವೆ” ಎಂದು ಹೇಳಿದರು.
“ಜಾನಪದ ಸಾಹಿತ್ಯ ಜನರಿಂದಲೇ ಹುಟ್ಟಿಕೊಂಡಿದ್ದು, ಇಂದು ಜನರು ಉತ್ತಮ ಜಾನಪದ ಗೀತೆಗಳನ್ನು ಕೇಳುವುದನ್ನು ಬಿಟ್ಟು ಅಶ್ಲೀಲ ಪದಗಳಿರುವ ಸಾಹಿತ್ಯವನ್ನು ಕೇಳುತ್ತಿರುವುದು ದುರಂತವಾಗಿದೆ. ಮೊದಲು ಜನರು ಇಂತಹ ಹಾಡುಗಳನ್ನು ಕೇಳುವುದನ್ನು ನಿಲ್ಲಿಸಿದಾಗ ಮಾತ್ರ ಅಶ್ಲೀಲ ಜಾನಪದ ಗೀತೆಗಳಿಗೆ ಕಡಿವಾಣ ಹಾಕಲು ಸಾಧ್ಯವಾಗುತ್ತದೆ” ಎಂದು ಶಬ್ಬಿರ್ ಡಾಂಗೆ ಹೇಳಿದರು.
“ಕೆಲವು ಹೆಣ್ಣು ಮಕ್ಕಳೂ ಕೂಡ ಅಶ್ಲೀಲ ಪದಗಳನ್ನು ಬಳಸಿ ಹಾಡುತ್ತಿರುವುದು ಜಾನಪದ ಸಾಹಿತ್ಯದ ಮಾನ–ಮರ್ಯಾದೆಯನ್ನು ಹಾಳು ಮಾಡುತ್ತಿದೆ. ಇದರ ವಿರುದ್ಧ ಹೋರಾಟ ಮುಂದುವರಿಸಲಾಗುವುದು” ಎಂದು ಹೇಳಿದರು.
ಮಹಿಳೆಯರ ಗೌರವಕ್ಕೆ ಧಕ್ಕೆ ತರುವ ಈ ಕ್ರಿಯೆಗಳನ್ನು ತಡೆಹಿಡಿಯಲು ಹಲವಾರು ಕಾನೂನು ಕ್ರಮಗಳು ಕಾಯ್ದಿರಿಸಲಾಗಿದೆ.
1.ಐಟಿ ಕಾಯ್ದೆ, 2000(Information Technology Act, 2000) ಸೆಕ್ಷನ್ 66A / 66E / 67:
ಇಂಟರ್ನೆಟ್, ಯುಟ್ಯೂಬ್, ಸಾಮಾಜಿಕ ಮಾಧ್ಯಮದಲ್ಲಿ ಅಶ್ಲೀಲ, ಕಿರುಕುಳ ಅಥವಾ ಮಾನಹಾನಿ ಮಾಡುವ ವಿಷಯ ಪ್ರಸಾರಕ್ಕೆ ಸಂಬಂಧ.
ಉದಾಹರಣೆ: ಯುಟ್ಯೂಬ್ನಲ್ಲಿ ಮಹಿಳೆಯರ ಗೌರವಕ್ಕೆ ಧಕ್ಕೆ ತರುವ ಹಾಡುಗಳನ್ನು ಅಪ್ಲೋಡ್ ಮಾಡಿದರೆ, ದಂಡ ಅಥವಾ ಜೈಲು ಶಿಕ್ಷೆಯಾಗಬಹುದು. ಇಲ್ಲವೇ ಎರಡೂ ಶಿಕ್ಷೆಗಳೂ ಆಗಬಹುದು.
2.BNS ಸೆಕ್ಷನ್ 296 : ಸಾರ್ವಜನಿಕವಾಗಿ ಪವಿತ್ರ ಪದ ಅಥವಾ ಸಂಸ್ಕೃತಿಗೆ ಧಕ್ಕೆ ತರುವ ಕಾರ್ಯಗಳು ಅಂದರೆ ಜಾನಪದ ಪರಂಪರೆಯನ್ನು ಅವಮಾನ ಮಾಡುವ ಅಶ್ಲೀಲ ಹಾಡುಗಳನ್ನು ಸಾರ್ವಜನಿಕ ಕಾರ್ಯಕ್ರಮದಲ್ಲಿ ಹಾಡಿದರೆ ಜೈಲು ಮತ್ತು ದಂಡ, 3 ತಿಂಗಳ ಜೈಲು ಶಿಕ್ಷೆ ಮತ್ತು 1000 ದಂಡದ ಶಿಕ್ಷೆಯಾಗುತ್ತದೆ.
2000ನೇ ಇಸವಿಯ ಐಟಿ ಕಾಯ್ದೆಯ ಸೆಕ್ಷನ್ 67A : ಎಲೆಕ್ಟ್ರಾನಿಕ್ ರೂಪದಲ್ಲಿ ಲೈಂಗಿಕವಾಗಿ ಸ್ಪಷ್ಟವಾದ ಕೃತ್ಯಗಳನ್ನು ಹೊಂದಿರುವ ವಿಷಯವನ್ನು ಪ್ರಕಟಿಸುವ ಅಥವಾ ಹಂಚಿಕೊಳ್ಳುವ ಶಿಕ್ಷೆಯ ಬಗ್ಗೆ 2000ನೇ ಇಸವಿಯ ಐಟಿ ಕಾಯ್ದೆಯ ಸೆಕ್ಷನ್ 67A ಕಾಯ್ದೆ ವ್ಯವಹರಿಸುತ್ತದೆ.
ಮೊದಲನೇ ಅಪರಾಧ ಸಾಬೀತಾದಾಗ, ಅಂತಹ ವಿಷಯವನ್ನು ಪ್ರಕಟಿಸುವ ವ್ಯಕ್ತಿಗಳು 3 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 5 ಲಕ್ಷ ರೂಪಾಯಿಗಳವರೆಗೆ ದಂಡವನ್ನು ಎದುರಿಸಬೇಕಾಗುತ್ತದೆ. ಎರಡನೇ ಅಥವಾ ನಂತರದ ಅಪರಾಧ ಸಾಬೀತಾದರೆ, ಶಿಕ್ಷೆಯು 5 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 10 ಲಕ್ಷ ರೂಪಾಯಿವರೆಗೆ ದಂಡವನ್ನು ವಿಧಿಸಬಹುದು.
ಇದನ್ನೂ ಓದಿದ್ದೀರಾ? ‘ನಮ್ಮ ಕ್ಲಿನಿಕ್’ ರಿಯಾಲಿಟಿ ಚೆಕ್ | ಬಡವರಿಗಾಗಿ ಆರೋಗ್ಯ ಸೇವೆ ಎಂದಿದ್ದ ಯೋಜನೆ; ಬಾಗಿಲೇ ತೆರೆಯದ ಕ್ಲಿನಿಕ್ಗಳು!
ಮಹಿಳೆಯರ ಗೌರವ ಕಾಪಾಡುವುದು, ಯುವಜನರನ್ನು ತಪ್ಪುದಾರಿಗೆ ಹೋಗುವುದನ್ನು ತಪ್ಪಿಸುವುದನ್ನು, ಸಾಮಾಜಿಕ ಶಾಂತಿ ಮತ್ತು ನೈತಿಕತೆ ಕಾಯ್ದುಕೊಳ್ಳುವುದು ಈ ಕಾನೂನುಗಳ ಉದ್ದೇಶವಾಗಿದೆ.
ಉತ್ತರ ಕರ್ನಾಟಕದ ಜಾನಪದ ಸಾಹಿತ್ಯವು ನಮ್ಮ ಸಾಂಸ್ಕೃತಿಕ ಅಸ್ತಿತ್ವದ ಪ್ರತೀಕವಾಗಿದೆ. ಜಾನಪದದ ಹೆಸರಿನಲ್ಲಿ ಅಶ್ಲೀಲತೆ ಮತ್ತು ಅಸಭ್ಯ ಪದಗಳನ್ನು ಬಳಸುವುದು ಉತ್ತರ ಕರ್ನಾಟಕದ ಜಾನಪದ ಪರಂಪರೆಯನ್ನು ಹಾಳುಮಾಡುವ ಕೃತ್ಯವಾಗಿದ್ದು, ಮಹಿಳೆಯರ ಗೌರವಕ್ಕೂ ಸಮಾಜದ ನೈತಿಕತೆಯಿಗೂ ಭಾರೀ ಧಕ್ಕೆಯಾಗಿದೆ. ಇಂತಹ ಪ್ರವೃತ್ತಿಗಳಿಗೆ ಕಾನೂನು ಕ್ರಮಗಳ ಜತೆಗೆ ಸಮಾಜದ ಜಾಗೃತಿಯೂ ಅಗತ್ಯವಾಗಿದೆ. ಕಲಾವಿದರು, ಜನಸಾಮಾನ್ಯರು ಮತ್ತು ಆಡಳಿತ ವ್ಯವಸ್ಥೆ ಒಟ್ಟಾಗಿ ಜವಾಬ್ದಾರಿಯುತವಾಗಿ ನಡೆದುಕೊಂಡಾಗ ಮಾತ್ರ ಜಾನಪದ ಸಾಹಿತ್ಯದ ಘನತೆ ಉಳಿಸಿ, ಮುಂದಿನ ತಲೆಮಾರಿಗೆ ಶುದ್ಧ ಸಂಸ್ಕೃತಿ ವರ್ಗಾಯಿಸಲು ಸಾಧ್ಯವಾಗುತ್ತದೆ.

ಸುನಿಲ್ ಹಂಪನ್ನವರ
ಬೆಳಗಾವಿ ಜಿಲ್ಲಾ ಸಂಯೋಜಕರು




