ಕರ್ನಾಟಕ ರಾಜ್ಯದಲ್ಲಿ ಶ್ರೀಗಂಧದ ಕೃಷಿಯು ಹಲವಾರು ಜಿಲ್ಲೆಗಳಲ್ಲಿ ನಡೆಯುತ್ತಿದ್ದು ಶ್ರೀಗಂಧ ಬೆಳೆಗಾರರು ಹೇಳುವ ರೀತಿಯಲ್ಲಿ ಸುಮಾರು 20,000 ಎಕರೆ ಪ್ರದೇಶದಲ್ಲಿ ಬೆಳೆಯುತ್ತಾರೆ. ಇಡೀ ಭಾರತ ದೇಶದಲ್ಲಿ ಹೆಚ್ಚಾಗಿ ಶ್ರೀಗಂಧವನ್ನು ಕರ್ನಾಟಕ ರಾಜ್ಯದಲ್ಲಿ ಬೆಳೆಯಲಾಗುತ್ತದೆ. ಮೈಸೂರು, ಶಿವಮೊಗ್ಗದಲ್ಲಿ ಶ್ರೀಗಂಧ ಹೆಚ್ಚಾಗಿ ಬೆಳೆಯಲಾಗುತ್ತೆ. ಕೇರಳ, ಗುಜರಾತ್ ರಾಜ್ಯಗಳಲ್ಲಿ ಶ್ರೀಗಂಧ ಮರಗಳು ಎಷ್ಟಿದೆ ಎಂದು ಗಣತಿ ಮಾಡುವ ಮೂಲಕ ಅಲ್ಲಿನ ಅರಣ್ಯ ಇಲಾಖೆ ಹೇಳುತ್ತೆ ಆದರೆ ಅತಿ ಹೆಚ್ಚು ಶ್ರೀಗಂಧ ಬೆಳೆಯುವ ಕರ್ನಾಟಕದಲ್ಲಿ ಸರಿಯಾದ ರೀತಿಯಲ್ಲಿ ಮಾಹಿತಿ ಸಿಗುವುದಿಲ್ಲ ಎಂದು ಕೆಲವರು ಹೇಳುತ್ತಾರೆ. ಕೇಂದ್ರ ಬಜೆಟ್ ನಲ್ಲಿ ಶ್ರೀಗಂಧ ಬೆಳೆಗೆ ಪ್ರೋತ್ಸಾಹ ನೀಡಿರುವುದು ಒಂದು ಒಳ್ಳೆಯ ಬೆಳವಣಿಗೆಯಾಗಿದ್ದು ಎಷ್ಟರ ಮಟ್ಟಿಗೆ ಅದು ಶ್ರಿಗಂಧ ಬೆಳೆಯುವ ರೈತರಿಗೆ ಅನುಕೂಲವಾಗುತ್ತೆ ಎನ್ನುವುದನ್ನು ಕಾದು ನೋಡಬೇಕಾಗಿದೆ.
ಈ ದಿನ.ಕಾಮ್ ಗೆ ಪ್ರತಿಕ್ರಿಯೆ ನೀಡಿದ ಅಖಿಲ ಭಾರತ ಶ್ರೀಗಂಧ ಕೃಷಿಕರ ಸಂಘದ ಅಧ್ಯಕ್ಷ ಕೆ. ಅಮರ್ ನಾರಾಯಣ್ ಅವರು, “ಕೇಂದ್ರ ಬಜೆಟ್ ನಲ್ಲಿ ಶ್ರೀಗಂಧ ಬೆಳೆಯಲು ಶ್ರೀಗಂಧ ರೈತರಿಗೆ ಪ್ರೋತ್ಸಾಹ ನೀಡಲು ಘೋಷಣೆ ಮಾಡಿರುವುದು ಸ್ವಾಗತಾರ್ಹ. ಕೇಂದ್ರ ಬಜೆಟ್ 2026-27ರಲ್ಲಿ ಶ್ರೀಗಂಧ ಕೃಷಿಗೆ ಸಂಬಂಧಿಸಿದಂತೆ ಪ್ರಗತಿಪರ ನೀತಿ ಘೋಷಣೆ ಮಾಡಿದ ಮಾನ್ಯ ಕೇಂದ್ರ ಸರ್ಕಾರಕ್ಕೆ ಅಖಿಲ ಭಾರತ ಶ್ರೀಗಂಧ ಕೃಷಿಕರ ಸಂಘ (AISGTA) ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತದೆ” ಎಂದರು.
“ಈ ನೀತಿ ಘೋಷಣೆ ಭಾರತದಲ್ಲಿ ಶ್ರೀಗಂಧ ಮತ್ತು ವೃಕ್ಷಕೃಷಿಯ ಆರ್ಥಿಕ, ಪರಿಸರ ಮತ್ತು ಜೀವನೋಪಾಯ ಸಾಮರ್ಥ್ಯವನ್ನು ಗುರುತಿಸುವ ಐತಿಹಾಸಿಕ ಹಾಗೂ ಕಾಲೋಚಿತ ಕ್ರಮವಾಗಿದೆ. ಇದು ಸುಸ್ಥಿರ ಕೃಷಿಯನ್ನು ಉತ್ತೇಜಿಸುವುದು, ಹೆಚ್ಚಿನ ಮೌಲ್ಯದ ಮರ ಬೆಳೆಗಳಲ್ಲಿ ರೈತರ ಭಾಗವಹಿಸುವಿಕೆಯನ್ನು ಹೆಚ್ಚಿಸುವುದು ಹಾಗೂ ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುವ ಸರ್ಕಾರದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.
ಈ ಕ್ರಮದಿಂದ ಶ್ರೀಗಂಧ ಬೆಳೆಗಾರರಿಗೆ ಅಗತ್ಯವಿದ್ದ ವಿಶ್ವಾಸ ದೊರೆಯಲಿದ್ದು, ಹೊಸ ರೈತರು ವೃಕ್ಷಾಧಾರಿತ ಕೃಷಿಯತ್ತ ಆಕರ್ಷಿತರಾಗಲಿದ್ದಾರೆ ಎಂದು AISGTA ನಂಬಿದೆ. ಜೊತೆಗೆ ಈ ಕ್ಷೇತ್ರದಲ್ಲಿ ಇರುವ ನಿಯಂತ್ರಣ ಹಾಗೂ ಹಾಗೂ ಮಾರುಕಟ್ಟೆ ಸಂಬಂಧಿತ ಸವಾಲುಗಳನ್ನು ಸರಳಗೊಳಿಸಲು ಸಹಾಯಕವಾಗಲಿದೆ. ಈ ನೀತಿ ಪರಿಸರ ಸಂರಕ್ಷಣೆ, ಕಾರ್ಬನ್ ಸಂಗ್ರಹಣೆ ಮತ್ತು ರೈತರ ದೀರ್ಘಕಾಲೀನ ಆದಾಯ ಭದ್ರತೆಗೆ ಮಹತ್ವದ ಕೊಡುಗೆ ನೀಡಲಿದೆ.
ವೃಕ್ಷ ಬೆಳೆಗಾರರ ಪಾತ್ರವನ್ನು ರಾಷ್ಟ್ರ ನಿರ್ಮಾಣ ಮತ್ತು ಸುಸ್ಥಿರ ಅಭಿವೃದ್ಧಿಯಲ್ಲಿ ಗುರುತಿಸಿದ ಮಾನ್ಯ ಪ್ರಧಾನ ಮಂತ್ರಿಗಳು, ವಿತ್ತ ಸಚಿವರು, ಕೃಷಿ ಮತ್ತು ರೈತ ಕಲ್ಯಾಣ ಸಚಿವರು, ವಾಣಿಜ್ಯ ಮತ್ತು ಕೈಗಾರಿಕೆ ಸಚಿವರು, ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವರುಗಳ ದೃಷ್ಟಿಕೋನ ಮತ್ತು ಕೇಂದ್ರ ಸರ್ಕಾರದ ನಾಯಕತ್ವವನ್ನು ಸಂಘಟನೆ ಹೃತ್ಪೂರ್ವಕವಾಗಿ ಪ್ರಶಂಸಿಸುತ್ತದೆ. ಈ ನೀತಿಯನ್ನು ತಳಮಟ್ಟದಲ್ಲಿ ಪರಿಣಾಮಕಾರಿಯಾಗಿ ಜಾರಿಗೆ ತರುವಲ್ಲಿ ಸರ್ಕಾರದೊಂದಿಗೆ ಸಂಪೂರ್ಣ ಸಹಕಾರ ನೀಡುವುದಾಗಿ AISGTA ಭರವಸೆ ನೀಡುತ್ತದೆ.

ಈ ಘೋಷಣೆಯ ಪ್ರಯೋಜನಗಳು ದೇಶದಾದ್ಯಂತ ಇರುವ ಶ್ರೀಗಂಧ ಬೆಳೆಗಾರರಿಗೆ ತಲುವುವಂತೆ ಹಾಗೂ ಭಾರತವು ಶ್ರೀಗಂಧ ಉತ್ಪಾದನೆಯಲ್ಲಿ ಜಾಗತಿಕ ನಾಯಕತ್ವ ನಾಯಕತ್ವ ಸಾಧಿಸುವಂತೆ ನೀತಿ ನಿರ್ಧಾರಕರೊಂದಿಗೆ ನಿರಂತರ ಸಂವಾದ ನಡೆಸುವ ಆಶಯವನ್ನು ನಾವು ವ್ಯಕ್ತಪಡಿಸುತ್ತೇವೆ.
ಸದ್ಯದ ಪರಿಸ್ಥಿತಿಯಲ್ಲಿ ಯಾರು ಶ್ರೀಗಂಧ ಬೆಳೆದು ಶ್ರೀಮಂತರಾಗುವವರಿಲ್ಲ, ಯಾಕೆಂದರೆ ರೈತರು ಬೆಳೆದ ಶ್ರೀಗಂಧ ಕಳ್ಳಸಾಗಾಣಿಕೆಯಾಗಿ ಹೊರ ರಾಜ್ಯ ಹಾಗೂ ಹೊರ ದೇಶಗಳಿಗೆ ಹೋಗುತ್ತಿದ್ದು ಕಳ್ಳ ಸಾಗಾಣಿಕೆ ನಿಯಂತ್ರಣವನ್ನು ಯಾವುದೇ ಸರ್ಕಾರ ಪರಿಣಾಮಕಾರಿಯಾಗಿ ಮಾಡಿಲ್ಲ. ನಮ್ಮ ರಾಜ್ಯದಲ್ಲಿ ಶ್ರೀಗಂಧ ಬೆಳೆಯುವ ರೈತರ ಗೋಳು ಕೇಳುವವರೇ ಇಲ್ಲದಂತಾಗಿದೆ. ಒಂದು ಕಡೆ ವಿಪರೀತ ಕಳ್ಳತನ, ಇನ್ನೊಂದೆಡೆ ವಿಪರೀತ ನಿರ್ಬಂಧ, ಮತ್ತೊಂದೆಡೆ ಬ್ರಿಟಿಷರ ಕಾಲದ ಕಾನೂನುಗಳ ಪ್ರಯೋಗ ಇದರಿಂದ ರೈತರು ಕಂಗೆಟ್ಟು ಏನು ಮಾಡುವುದೆಂದು ತ್ರಿಶಂಕು ಸ್ಥಿತಿಯಲ್ಲಿದ್ದಾರೆ.
ಕೇರಳ ಸರ್ಕಾರ ಕಾಡು ಪ್ರದೇಶದಲ್ಲಿ ಎಷ್ಟು ಶ್ರೀಗಂಧದ ಮರಗಳು ಇದೆ ಎನ್ನುವುದನ್ನು ಗಣತಿ ಮಾಡಿದೆ. ಗುಜರಾತ್ ಸರ್ಕಾರ ರೈತರ ಭೂಮಿಯಲ್ಲಿರುವ ಶ್ರೀಗಂಧದ ಮರಗಳ ಗಣತಿ ಮಾಡಿದೆ ಆದರೆ ಶ್ರೀಗಂಧದ ತವರೂರು ಕರ್ನಾಟಕದಲ್ಲಿ ಯಾವುದೇ ಲೆಕ್ಕಪತ್ರ ಇಟ್ಟಿಲ್ಲ. ಅರಣ್ಯ ಇಲಾಖೆ ಸಾರ್ವಜನಿಕರಿಗೆ ಮಾಹಿತಿ ತಿಳಿಸುವುದರಲ್ಲಿ ವಿಫಲವಾಗಿದೆ.
ನಾವು ಈಗಾಗಲೇ ರಾಜ್ಯ ಸರ್ಕಾರಕ್ಕೆ ಶ್ರೀಗಂಧ ಅಭಿವೃದ್ಧಿ ಸಮಿತಿ ಶಿಫಾರಸ್ಸುಗಳನ್ನು ಸರ್ಕಾರದ ಮುಂದೆ ಇಟ್ಟಿದ್ದೇವೆ ಅದನ್ನು ಒಪ್ಪಬೇಕು ಎಂದು ಹಾಗೂ ಶ್ರೀಗಂಧವನ್ನು ಕೃಷಿ ಉತ್ಪನ್ನ ಎಂದು ಪರಿಗಣಿಸಬೇಕಾಗಿ ಮನವಿ ಮಾಡಿದ್ದೇವೆ” ಎಂದು ತಿಳಿಸಿದರು.





