ಸಿಆರ್ಪಿಎಫ್ ಸಿಬ್ಬಂದಿ ಪ್ರತಿಭಟನಾ ನಿರತ ಸಂತ್ರಸ್ತೆಯ ಕುಟುಂಬದ ಮೇಲೆ ದೌರ್ಜನ್ಯ ನಡೆಸಿದ ಕೆಲವೇ ಗಂಟೆಗಳ ಬಳಿಕ, ಅದೇ ದಿನ ಸಂಜೆ ಲೋಕಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದರು. ಈ ಮಹತ್ವದ ಸಭೆ ದೆಹಲಿಯ 10 ಜನಪಥ್ ರಸ್ತೆಯಲ್ಲಿರುವ ಸೋನಿಯಾ ಗಾಂಧಿ ಅವರ ನಿವಾಸದಲ್ಲಿ ನಡೆಯಿತು.
ಉತ್ತರಪ್ರದೇಶದ ಉನ್ನಾಂವ್ ಜಿಲ್ಲೆಯಲ್ಲಿ 2017ರಲ್ಲಿ ನಡೆದ ಅತ್ಯಾಚಾರ ಪ್ರಕರಣವು ಇಂದಿಗೂ ಭಾರತದ ನ್ಯಾಯವ್ಯವಸ್ಥೆಯನ್ನು ಪರೀಕ್ಷಿಸುತ್ತಿದೆ. ಈ ಪ್ರಕರಣದ ಮುಖ್ಯ ಅಪರಾಧಿ, ಬಿಜೆಪಿಯ ಮಾಜಿ ಶಾಸಕ ಕುಲದೀಪ್ ಸಿಂಗ್ ಸೆಂಗರ್ಗೆ ನೀಡಲಾಗಿದ್ದ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಿ ಷರತ್ತುಬದ್ಧ ಜಾಮೀನು ನೀಡಿರುವ ದೆಹಲಿ ಹೈಕೋರ್ಟ್ನ ಆದೇಶವನ್ನು ಪ್ರಶ್ನಿಸಿ, ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ (ಎಸ್ಎಲ್ಪಿ) ಸಲ್ಲಿಸಿದೆ. ಉನ್ನಾಂವ್ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ನ ವಿಭಾಗೀಯ ಪೀಠ ನೀಡಿದ ತೀರ್ಪನ್ನು ಅಧ್ಯಯನ ಮಾಡಿದ ನಂತರ ಮೇಲ್ಮನವಿ(ಎಸ್ಎಲ್ಪಿ) ಸಲ್ಲಿಸಲಾಗಿದೆ ಎಂದು ಸಿಬಿಐ ವಕ್ತಾರರು ತಿಳಿಸಿದ್ದಾರೆ.
ಹೈಕೋರ್ಟ್ ತೀರ್ಪಿಗೆ ತಡೆ ನೀಡುವಂತೆ ಕೋರಿ ವಕೀಲರಾದ ಅಂಜಲಿ ಪಟೇಲ್ ಮತ್ತು ಪೂಜಾ ಶಿಲ್ಪಕರ್ ಮೇಲ್ಮನವಿ ಸಲ್ಲಿಸಿದ್ದಾರೆ. ವಿಚಾರಣಾ ನ್ಯಾಯಾಲಯ ಸೆಂಗರ್ಗೆ ಜೀವಾವಧಿ ಶಿಕ್ಷೆ ವಿಧಿಸಿದ್ದಲ್ಲದೆ, ತಮ್ಮ ಸಹಜ ಜೀವನದ ಉಳಿದ ಅವಧಿಯವರೆಗೆ ಜೈಲಿನಲ್ಲಿಯೇ ಇರಬೇಕು ಅಂತ ಆದೇಶಿಸಿತ್ತು. ಆದರೆ ಈ ಪ್ರಕರಣದ ನೈಜ ಸತ್ಯವನ್ನ ಪರಿಗಣಿಸದೇ ಹೈಕೋರ್ಟ್ ತೀರ್ಪು ನೀಡಿದೆ” ಅಂತ ವಕೀಲರು ವಾದಿಸಿದ್ದಾರೆ. ಸೆಂಗರ್ ಗಂಭೀರ ಕ್ರಿಮಿನಲ್ ಹಿನ್ನಲೆ ಹೊಂದಿದ್ದಾರೆ. ಅತ್ಯಾಚಾರದಂತಹ ಘೋರ ಅಪರಾಧಗಳಲ್ಲಿ ಭಾಗಿಯಾಗಿದ್ದಾರೆ. ಅಂಥವರಿಗೆ ನೀಡಲಾದ ಶಿಕ್ಷೆಯನ್ನು ಅಮಾನತುಗೊಳಿಸಿ, ಜಾಮೀನು ನೀಡುವ ಮೂಲಕ ಹೈಕೋರ್ಟ್ ಗಂಭೀರ ತಪ್ಪು ಮಾಡಿದೆ ಅಂತ ಅವರು ತಮ್ಮ ಅರ್ಜಿಯಲ್ಲಿ ಪ್ರತಿಪಾದಿಸಿದ್ದಾರೆ.
“ಅಪರಾಧಿ ಆರ್ಥಿಕ ಮತ್ತು ರಾಜಕೀಯವಾಗಿ ಪ್ರಭಾವಿ ವ್ಯಕ್ತಿ. ತೋಳ್ಬಲದಿಂದ ಬೆದರಿಸುವ ಹಿನ್ನಲೆ ಹೊಂದಿದ್ದಾರೆ. ಸಂತ್ರಸ್ತೆಯ ತಂದೆಯ ಕಸ್ಟಡಿ ಸಾವು ಪ್ರಕರಣದಲ್ಲೂ ಆರೋಪಿಯಾಗಿದ್ದಾರೆ. ಇಷ್ಟೆಲ್ಲಾ ಕ್ರಿಮಿನಲ್ ಪ್ರವೃತ್ತಿ ಹೊಂದಿರುವ ವ್ಯಕ್ತಿಯ ಶಿಕ್ಷೆ ಅಮಾನತುಗೊಳಿಸಿರುವುದು ಸರಿಯಿಲ್ಲ ಅಂತ” ಉಲ್ಲೇಖಿಸಿದ್ದಾರೆ. ಅಪರಾಧ ನಡೆಯುವ ಸಂದರ್ಭದಲ್ಲಿ ಸೆಂಗರ್ ಶಾಸಕನಾಗಿದ್ದರು. ಅಂದರೆ ಸಾರ್ವಜನಿಕ ಸೇವಕರಾಗಿದ್ದರು. 1998ರ ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 2 (ಸಿ)ಮತ್ತು ಇತರ ನಿಬಂಧನೆಗಳ ಅಡಿಯಲ್ಲಿ ಪರಿಗಣಿಸಲಾಗಿರುವ ಸಾರ್ವಜನಿಕ ಸೇವಕ ಪದದ ಶಾಸನಬದ್ಧ ವ್ಯಾಖ್ಯಾನವನ್ನ ಹೈಕೋರ್ಟ್ ತಪ್ಪಾಗಿ ಅರ್ಥೈಸಿಕೊಂಡು ತೀರ್ಪು ನೀಡಿದೆ. ಇದು ಶಾಸನದ ಉದ್ದೇಶದವನ್ನೇ ದುರ್ಬಲಗೊಳಿಸುತ್ತದೆ” ಅಂತ ವಾದಿಸಿದ್ದಾರೆ.

ಈ ಪ್ರಕರಣದ ಶಿಕ್ಷೆ ಅಮಾನತುಗೊಂಡಿದ್ದರೂ ಸಂತ್ರಸ್ತೆ ತಂದೆಯ ಕಸ್ಟಡಿ ಸಾವು ಪ್ರಕರಣದಲ್ಲಿ ಸೆಂಗರ್ಗೆ 10 ವರ್ಷಗಳ ಶಿಕ್ಷೆಯಾಗಿದೆ. ಹೀಗಾಗಿ ಅವರು ಜೈಲಿನಲ್ಲಿಯೇ ಇರುತ್ತಾರೆ ಎಂದೂ ನ್ಯಾಯಾಲಯ ಹೇಳಿದೆ. 2017ರ ಜೂನ್ 4ರಂದು ಕೆಲಸ ಕೊಡಿಸುವ ನೆಪದಲ್ಲಿ ಹದಿನೇಳು ವರ್ಷದ ಯುವತಿಯ ಮೇಲೆ ಸೆಂಗರ್ ಅತ್ಯಾಚಾರ ಎಸಗಿದ್ದ. ಕೊನೆಗೆ ಆಕೆಯನ್ನ 60,000ಕ್ಕೆ ಮಾರಾಟವೂ ಮಾಡಿದ್ದ. ಆತನ ಸಹವರ್ತಿಗಳು ಆಕೆಯನ್ನು ಹೊತ್ತೊಯ್ದು ಬಂಧನದಲ್ಲಿಟ್ಟು, ಸಾಮೂಹಿಕ ಅತ್ಯಾಚಾರ ಮಾಡಿದ್ದರು. 2018ರ ಏಪ್ರಿಲ್ 3ರಂದು, ಸಂತ್ರಸ್ತೆಯ ತಂದೆ ಮೇಲೆ ಆರೋಪಿಯ ಬೆಂಬಲಿಗರು ಹಲ್ಲೆ ನಡೆಸಿದರು. ಆಗಲೂ ಆರೋಪಿಯನ್ನು ವಶಕ್ಕೆ ಪಡೆಯುವ ಬದಲು, ಸಂತ್ರಸ್ತೆಯ ತಂದೆಯನ್ನೇ ಪೊಲೀಸರು ಬಂಧಿಸಿದ್ದರು. 2019ರ ಡಿಸೆಂಬರ್ 16ರಂದು, ಸೆಂಗರ್ ತಪ್ಪಿತಸ್ಥ ಎಂದು ನ್ಯಾಯಾಲಯ ನಿರ್ಣಯ ನೀಡಿತು. ಡಿಸೆಂಬರ್ 20ರಂದು ಜೀವಾವಧಿ ಶಿಕ್ಷೆ ಪ್ರಕಟಿಸಿತ್ತು.
ಉನ್ನಾಂವ್ ಅತ್ಯಾಚಾರ ಪ್ರಕರಣ ಸಂಬಂಧ 2019ರಲ್ಲಿ ದೆಹಲಿಯ ವಿಚಾರಣಾ ನ್ಯಾಯಾಲಯ ಸೆಂಗರ್ಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಅದನ್ನು ಪ್ರಶ್ನಿಸಿ ಸೆಂಗರ್ ಸಲ್ಲಿಸಿರುವ ಮೇಲ್ಮನವಿ ಅರ್ಜಿ ಇತ್ಯರ್ಥ ಆಗುವವರೆಗೆ ಶಿಕ್ಷೆಯನ್ನು ಅಮಾನತಿನಲ್ಲಿರಿಸಿ ದೆಹಲಿ ಹೈಕೋರ್ಟ್ ಮಂಗಳವಾರ ತೀರ್ಪು ನೀಡಿ, ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ಸೆಂಗರ್ಗೆ ವಿಧಿಸಲಾಗಿದ್ದ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಿರುವುದನ್ನು ಖಂಡಿಸಿ ಸಂತ್ರಸ್ತೆ, ಅವರ ತಾಯಿ ಮತ್ತು ಮಹಿಳಾ ಪರ ಹೋರಾಟಗಾರರು ದೆಹಲಿ ಹೈಕೋರ್ಟ್ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿದ್ದರು. ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಸಂತ್ರಸ್ತೆಯ ತಾಯಿ, ನನ್ನ ಮಗಳು ತುಂಬಾ ಕಷ್ಟ ಅನುಭವಿಸಿದ್ದರಿಂದ ಪ್ರತಿಭಟಿಸಲು ಉಚ್ಚ ನ್ಯಾಯಾಲಯಕ್ಕೆ ಬಂದಿದ್ದೇನೆ ಎಂದು ಹೇಳಿದರು. ‘‘ನಾನು ಇಡೀ ಉಚ್ಚ ನ್ಯಾಯಾಲಯವನ್ನು ದೂಷಿಸುತ್ತಿಲ್ಲ. ನಮ್ಮ ನಂಬಿಕೆಯನ್ನು ನುಚ್ಚು ನೂರು ಮಾಡಿದ ಆದೇಶ ನೀಡಿದ ಇಬ್ಬರು ನ್ಯಾಯಾಧೀಶರನ್ನು ಮಾತ್ರ ದೂಷಿಸುತ್ತೇನೆ’’ ಎಂದು ಹೇಳಿದ್ದರು.
ದೆಹಲಿ ಹೈಕೋರ್ಟ್ ಆದೇಶವನ್ನು ಖಂಡಿಸಿ, ಸಂತ್ರಸ್ತೆ ಮತ್ತು ಆಕೆಯ ವಯಸ್ಸಾದ ತಾಯಿ ದೆಹಲಿಯ ಇಂಡಿಯಾ ಗೇಟ್ ಬಳಿ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಅರೆಸೈನಿಕ ಪಡೆ ಸಿಬ್ಬಂದಿ ಅವರನ್ನು ಬಲವಂತವಾಗಿ ಅಲ್ಲಿಂದ ತೆರವುಗೊಳಿಸಿದ್ದರು. ಪ್ರತಿಭಟನೆಯ ಸಂದರ್ಭದಲ್ಲಿ, ಸಿಆರ್ಪಿಎಫ್ ಸಿಬ್ಬಂದಿ ಸಂತ್ರಸ್ತೆ ಮತ್ತು ಆಕೆಯ ತಾಯಿಗೆ ಮಾಧ್ಯಮಗಳೊಂದಿಗೆ ಮಾತನಾಡಲು ಅವಕಾಶ ನೀಡಲಿಲ್ಲ. ಅಲ್ಲದೆ, ಚಲಿಸುತ್ತಿದ್ದ ಬಸ್ಸಿನಿಂದ ಇಳಿಯುವಂತೆ ಒತ್ತಾಯಿಸಿ, ವೃದ್ಧ ಮಹಿಳೆಯ ಮೇಲೆ ದೌರ್ಜನ್ಯ ನಡೆಸಿದ ಆರೋಪವೂ ಕೇಳಿಬಂದಿದೆ.
ಕೇಂದ್ರ ಅರೆಸೈನಿಕ ಪಡೆ (ಸಿಆರ್ಪಿಎಫ್) ಸಿಬ್ಬಂದಿ ದೌರ್ಜನ್ಯ ನಡೆಸಿದ ಕೆಲವೇ ಗಂಟೆಗಳ ಬಳಿಕ, ಅದೇ ದಿನ ಸಂಜೆ ಲೋಕಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದರು. ಈ ಮಹತ್ವದ ಸಭೆ ದೆಹಲಿಯ 10 ಜನಪಥ್ ರಸ್ತೆಯಲ್ಲಿರುವ ಸೋನಿಯಾ ಗಾಂಧಿ ಅವರ ನಿವಾಸದಲ್ಲಿ ನಡೆಯಿತು. ಜರ್ಮನಿಯಿಂದ ವಿದೇಶಿ ಪ್ರವಾಸ ಮುಗಿಸಿ ಹಿಂದಿರುಗಿದ ಮರುದಿನವೇ ರಾಹುಲ್ ಗಾಂಧಿ ಸಂತ್ರಸ್ತ ಕುಟುಂಬವನ್ನು ಭೇಟಿಯಾದರು. ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಈ ಸಭೆಯಲ್ಲಿ ಸೋನಿಯಾ ಗಾಂಧಿ ಕೂಡ ಉಪಸ್ಥಿತರಿದ್ದರು. “ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗುವುದು ಮತ್ತು ಸಂತ್ರಸ್ತೆಗೆ ನ್ಯಾಯ ಒದಗಿಸುವ ಎಲ್ಲ ಪ್ರಯತ್ನಗಳನ್ನೂ ಕೈಗೊಳ್ಳಲಾಗುವುದು ಎಂದು ರಾಹುಲ್ ಗಾಂಧಿ ಭರವಸೆ ನೀಡಿದ್ದಾಗಿ ಸಂತ್ರಸ್ತೆ ಹೇಳಿದ್ದರು.
“ಸಂತ್ರಸ್ತೆ, ದೆಹಲಿ ಹೈಕೋರ್ಟ್ ಜಾಮೀನು ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಲು ಉನ್ನತ ವಕೀಲರನ್ನು ಒದಗಿಸಲು ರಾಹುಲ್ ಗಾಂಧಿ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಇಬ್ಬರೂ ನಮ್ಮ ನೋವನ್ನು ಕೇಳಿ ಕಣ್ಣೀರಿಟ್ಟರು. ಅವರು ನಮ್ಮೊಂದಿಗೆ ನಿಂತಿದ್ದಾರೆ ಎಂಬ ಭರವಸೆ ನೀಡಿದರು” ಎಂದು ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಉನ್ನಾವ್ ಅತ್ಯಾಚಾರ ಸಂತ್ರಸ್ತೆ ಹೇಳಿದ್ದರು.
ಈ ಭೇಟಿಯು ಕಾಂಗ್ರೆಸ್ ಪಕ್ಷದಿಂದ ಮೋದಿ ಸರ್ಕಾರದ ಮೇಲೆ ಒತ್ತಡ ಹಾಕುವಂತೆ ಮಾಡಿತ್ತು. ಇದರಿಂದ ಮೋದಿ ಸರ್ಕಾರ ಎಚ್ಚೆತ್ತುಕೊಂಡಂತೆ ಕಾಣಿಸುತ್ತಿದೆ.
ತನಿಖೆಯಲ್ಲಿ ಯಾವುದೇ ರಾಜಕೀಯ ಹಸ್ತಕ್ಷೇಪವಿರಬಾರದು. ಸೂಕ್ಷ್ಮವಾಗಿ ಹೇಳುವುದಾದರೆ, ಬಿಜೆಪಿ ಶಾಸಕನಾಗಿದ್ದ ಸೆಂಗರ್ ಅವರನ್ನು ಪಕ್ಷ ಕಿತ್ತುಹಾಕಿದರೂ, ರಾಜಕೀಯ ಚಟುವಟಿಕೆಗಳು ಮುಂದುವರೆಯುತ್ತಿವೆ. ಅದಕ್ಕೆ ಉದಾಹರಣೆ, 2021ರ ಉತ್ತರ ಪ್ರದೇಶ ಪಂಚಾಯತಿ ಚುನಾವಣೆಯಲ್ಲಿ ಅಪರಾಧಿ ಸೆಂಗರ್ನ ಪತ್ನಿ ಸಂಗೀತಾ ಸೆಂಗರ್ಗೆ ಬಿಜೆಪಿ ಟಿಕೆಟ್ ನೀಡಿತು. ಚುನಾವಣೆಯಲ್ಲಿ ಗೆಲುವು ಸಾಧಿಸಿ ಸೆಂಗರ್ ಪತ್ನಿ ಸಂಗೀತಾರನ್ನು ಉನ್ನಾಂವ್ ಜಿಲ್ಲಾ ಪಂಚಾಯತಿಯ ಅಧ್ಯಕ್ಷೆಯಾಗಿ ಬಿಜೆಪಿ ನೇಮಿಸಿತು. ಇದು ಜನರ ಆಕ್ರೋಶಕ್ಕೆ ಇನ್ನೊಂದು ಕಾರಣ. ಅಂದರೆ ಬಿಜೆಪಿ ಸೆಂಗರ್ನನ್ನ ಪಕ್ಷದಿಂದ ಉಚ್ಚಾಟಿಸಿದಂತೆ ನಟಿಸಿತ್ತು. ಪತ್ನಿಗೆ ಟಿಕೆಟ್ ನೀಡಿತ್ತು.
ಆದ್ರೆ ಉನ್ನಾಂವ್ ಪ್ರಕರಣ ಬಿಜೆಪಿಗೆ ಬೆನ್ನು ಹತ್ತಿದ ಬೇತಾಳನಂತೆ ಕಾಡತೊಡಗಿದೆ. ಬಿಜೆಪಿಯ ಕಪಟತನವನ್ನ ಇಂತಹ ನೂರಾರು ಅತ್ಯಾಚಾರ ಪ್ರಕರಣಗಳು ಬಯಲಿಗೆಳೆದಿವೆ.
ಮೋದಿ ಸರ್ಕಾರದಲ್ಲಿ ಎಂತಹ ಅತ್ಯಾಚಾರ, ಕೊಲೆಗಡುಕನಾದ್ರೂ ಆತನಿಗೆ ರಕ್ಷಣೆ ಸಿಗತ್ತೆ ಅನ್ನೋದನ್ನ ಈಗಾಗಲೇ ಹಲವಾರು ಪ್ರಕರಣಗಳು ಸಾಬೀತು ಪಡಿಸಿದೆ. ಈಗ ನ್ಯಾಯವನ್ನ ರಕ್ಷಿಸುವ ಹೊಣೆ ಸುಪ್ರೀಂ ಕೋರ್ಟ್ ಮೇಲಿದೆ. ನಂಬಿಕೆಯನ್ನೇ ಕಳೆದುಕೊಂಡ ಸಂತ್ರಸ್ತರಿಗೆ ನ್ಯಾಯಾಲಯ ಬೆಳಕಿನ ಕಿರಣವಾಗುತ್ತಾ ಕಾದುನೋಡಬೇಕಿದೆ.





