ವಂದೇ ಮಾತರಂ | ತಿರುಗುಬಾಣವಾದ ರಾಮಬಾಣ

Date:

ಕಾಂಗ್ರೆಸ್ಸಿನ ಸಂಸದೆ ಪ್ರಿಯಾಂಕಾ ವಾದ್ರಾ ಮತ್ತು ತೃಣಮೂಲ ಕಾಂಗ್ರೆಸ್ಸಿನ ಮೊಹುವಾ ಮೊಯಿತ್ರಾ ಮಾತನಾಡಿದಾಗ ಪ್ರಧಾನಿ ನರೇಂದ್ರ ಮೋದಿ ಏನನ್ನು ಮುಚ್ಚಿಟ್ಟರು, ಏನನ್ನು ತಿರುಚಿದರು, ಇತಿಹಾಸವನ್ನು ಸರಿಯಾಗಿ ತಿಳಿಯದೆ ಎಲ್ಲೆಲ್ಲಿ ಎಡವಿದರು ಎಂಬುದೆಲ್ಲ ಬಯಲಾಯಿತು. ನಿಜಕ್ಕೂ ಪ್ರಧಾನಿ ಮತ್ತು ಗೃಹಮಂತ್ರಿ ಹಾಸ್ಯಾಸ್ಪದವಾಗಿ ಕಾಣಿಸಿದರು.

ಚರಿತ್ರ ಹೀನರು ಚರಿತ್ರೆಗೆ ಕೈಹಾಕಬಾರದು. ಆತ್ಮವೇ ಇಲ್ಲದವರು ಭಾವನಾತ್ಮಕ ಅಂಶಗಳನ್ನು ಮೆರೆಸಲು ಹೋಗಬಾರದು. ಜನರನ್ನು ಒಂದುಗೂಡಿಸಲು ಪ್ರೇರೇಪಿಸುವ ದೇಶಭಕ್ತಗೀತೆಯನ್ನು ಜನಮನವನ್ನು ಒಡೆಯುವ ಶಕ್ತಿಗಳು ಹಾಡಲೂ ಬಾರದು. ರಾಷ್ಟ್ರವನ್ನು ವಿಭಜಿಸುವ ಉದ್ದೇಶವನ್ನೇ ತಮ್ಮ ಗುಪ್ತ ಕಾರ್ಯಸೂಚಿಯಾಗಿ ಮಾಡಿಕೊಂಡಿರುವ ಶಕ್ತಿಗಳು, ಸಂಘಟನೆಗಳು ರಾಷ್ಟ್ರ ವಿಭಜನೆಗೆ ಪ್ರತಿರೋಧ ಒಡ್ಡಿದ ಗೀತೆಯಿಂದ ದೂರವಿದ್ದರೇ ಕ್ಷೇಮ.

ವಂದೇ ಮಾತರಂ ಬಂಗಾಳದ, ಅಷ್ಟೇಕೆ ಇಡೀ ಭಾರತದ ಆತ್ಮ. ಅದು ಸ್ಪೂರ್ತಿಯ ಚಿಲುಮೆ. ಬ್ರಿಟಿಷ್‌ ಆಳ್ವಿಕೆಯ ವಿರುದ್ಧ ಧ್ವನಿ ಎತ್ತಲು, ಪ್ರತಿಭಟಿಸಲು, ಜನತೆಯನ್ನು ಒಗ್ಗೂಡಿಸಲು ರಚಿಸಿದ ಈ ಗೀತೆ ಭಾರತೀಯ ಅಸ್ಮಿತೆಯ ಸಂಕೇತವೂ ಹೌದು. ಏಕತೆ, ತ್ಯಾಗ, ಬಲಿದಾನ, ಹೋರಾಟ, ಆತ್ಮಗೌರವ, ರಾಷ್ಟ್ರಪ್ರೇಮ-ಹೀಗೆ ಅನೇಕ ಭಾವನೆಗಳ ಪ್ರತೀಕವೂ ಹೌದು. ಹೀಗಾಗಿಯೇ ವಂದೇ ಮಾತರಂ ಗೀತೆ ರಚನೆಗೊಂಡು 150 ವರ್ಷಗಳಾದದ್ದು ಭಾರತೀಯರಾದ ನಮಗೆ ಹೆಮ್ಮೆಯ ವಿಚಾರ. ಇದು ಚರಿತ್ರೆಯ ಉಜ್ವಲ ಪುಟಗಳನ್ನು ಮತ್ತೆ ತೆರೆದು ನಮ್ಮ ಮುಂದಿರಿಸುತ್ತದೆ. ಇದು ಸ್ವದೇಶಿ ಚಳವಳಿಯ ಘನತೆಯನ್ನು ಎತ್ತಿ ಹಿಡಿಯುತ್ತದೆ. ಗುಲಾಮಗಿರಿಯಲ್ಲಿದ್ದ ಭಾರತೀಯರ ಸ್ವಾತಂತ್ರ್ಯದ ಹಂಬಲವನ್ನು ಮತ್ತು ಹೋರಾಟವನ್ನು ಬಿಂಬಿಸುತ್ತದೆ. ಈ ಎಲ್ಲ ಕಾರಣಗಳಿಂದಾಗಿಯೇ ವಂದೇ ಮಾತರಂ ಚಾರಿತ್ರಿಕವಾಗಿ ಮತ್ತು ಸಾಂಸ್ಕೃತಿಕವಾಗಿ ನಮಗೆ ಬಹಳ ಮಹತ್ವದ್ದು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ವಂದೇ ಮಾತರಂ ದೇಶಭಕ್ತಿ ಗೀತೆಯನ್ನುಹೆಸರಾಂತ ಕಾದಂಬರಿಕಾರ ಬಂಕಿಮಚಂದ್ರ ಚಟ್ಟೋಪಾಧ್ಯಾಯ ಅವರು ರಚಿಸಿದ್ದು 1870ರ ದಶಕದಲ್ಲಿ. ಇದು ಸಾಹಿತ್ಯ ಪತ್ರಿಕೆ ʼಬಂಗ ದರ್ಶನʼದಲ್ಲಿ ಪ್ರಕಟವಾದದ್ದು 1875ರಲ್ಲಿ; ಮೊದಲ ಎರಡು ಚರಣ( ಸ್ವಾಂಜಾ)ಗಳಲ್ಲಿ. ಮುಂದೆ ಬಂಕಿಮಚಂದ್ರರು ತಮ್ಮ ಕಾದಂಬರಿ- ಆನಂದ ಮಠವನ್ನು 1882ರಲ್ಲಿ ಪ್ರಕಟಿಸಿದಾಗ ಅಲ್ಲಿ ʼವಂದೇ ಮಾತರಂʼ ಗೀತೆಗೆ ಇನ್ನೂ ನಾಲ್ಕು ಚರಣಗಳನ್ನು ಸೇರಿಸಲಾಯಿತು. ಗುಲಾಮಗಿರಿಯಲ್ಲಿದ್ದ ಭಾರತೀಯರನ್ನು ಎಚ್ಚರಿಸುವ, ಅವರ ಅಸ್ಮಿತೆ, ಘನತೆ, ಗೌರವಗಳ ಬಗ್ಗೆ ಗಮನ ಸೆಳೆಯುವ, ಹಾಗೆಯೇ ಬ್ರಿಟಿಷ್‌ ದಬ್ಬಾಳಿಕೆಯನ್ನು ಏಕತೆಯಿಂದ ಪ್ರತಿರೋಧಿಸುವ ಉದ್ದೇಶವೂ ಈ ಗಿತರಚನೆಯ ಹಿಂದೆ ಇತ್ತು.

ಈ ವರ್ಷ ವಂದೇ ಮಾತರಂ ಗೀತ ರಚನೆಯಾದ 150 ವರ್ಷ. ಇದೊಂದು ಸಂಭ್ರಮ. ಹೀಗಾಗಿ ವಂದೇ ಮಾತರಂನ 150 ನೇ ವರ್ಷವನ್ನು ಅದ್ಧೂರಿಯಾಗಿ ಆಚರಿಸುವುದು ನಮ್ಮ ಕರ್ತವ್ಯ ಕೂಡಾ. ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಎನ್‌ ಡಿ ಎ ಸರ್ಕಾರವೂ ಈ ಕರ್ತವ್ಯಕ್ಕೆ ತಲೆಬಾಗುವುದು ಅನಿವಾರ್ಯವಾಯಿತು. ಸಂಸತ್ತಿನಲ್ಲಿ ವಂದೇ ಮಾತರಂ ಕುರಿತು ನಮ್ಮ ಸಂಸದರು ಮಾತನಾಡಲು ಎಂಟು ಗಂಟೆಗಳ ಕಾಲಾವಕಾಶವನ್ನೂ ಕೊಡಲಾಯಿತು. ಇದು ಒಳ್ಳೆಯ ಸಂಪ್ರದಾಯದಂತೆಯೂ ಕಾಣಿಸಿತು.

vande

ಪ್ರಧಾನಿ ಮತ್ತು ಗೃಹ ಸಚಿವರು ಉತ್ಸಾಹದಿಂದಲೇ ಮಾತನಾಡಿದರು. ಆದರೆ ಈ ಮಾತುಗಳಲ್ಲಿ ವಂದೇ ಮಾತರಂ ಗೀತೆಯ ಘನತೆಗೆ ಗೌರವ ಸಲ್ಲಿಸುವುದಕ್ಕಿಂತ ಹೆಚ್ಚಾಗಿ ವಿರೋಧ ಪಕ್ಷಗಳನ್ನು, ವಿಶೇಷವಾಗಿ ಕಾಂಗ್ರೆಸ್‌ ಪಕ್ಷವನ್ನು ಟೀಕಿಸುವ, ಹಣಿಯುವ ಸನ್ನಾಹವೇ ಇದ್ದದ್ದು ನಿಚ್ಚಳವಾಗಿತ್ತು. ಇತಿಹಾಸವನ್ನು ತಿರುಚುವ, ಉಪೇಕ್ಷಿಸುವ, ಅರೆಬರೆ ದಾಖಲಿಸುವ, ಮುಖ್ಯ ಅಂಶಗಳ ಮೇಲೆ ಮುಸುಕೆಳೆದು ತಮಗೆ ಬೇಕಾದ ರೀತಿಯಲ್ಲಿಇತಿಹಾಸವನ್ನು ಎಳೆದಾಡಿ, ಕಾಂಗ್ರೆಸ್ಸನ್ನು ಮತ್ತು ಭಾರತದ ಮೊದಲ ಪ್ರಧಾನಿ ಜವಾಹರ ಲಾಲ್‌ ನೆಹರೂ ಅವರನ್ನು ನಿಂದಿಸುವ ಪ್ರಯತ್ನವನ್ನು ಈ ಇಬ್ಬರು ನಾಯಕರು ಮಾಡಿದರು.

ವಂದೇ ಮಾತರಂ ಚರ್ಚೆಯನ್ನು ಸಂಸತ್ತಿನಲ್ಲಿ ತಂದದ್ದನ್ನು ವಿರೋಧ ಪಕ್ಷಗಳ ನಾಯಕರು ಹಲವು ಕೋನಗಳಲ್ಲಿ ನೋಡಿದರು. ಇವತ್ತು ಭಾರತ ಎದುರಿಸುವ ಜ್ವಲಂತ ಸಮಸ್ಯೆಗಳನ್ನು ಮರೆಮಾಚಲು ವಂದೇ ಮಾತರಂ ಚರ್ಚೆಯನ್ನು ಆರಂಭಿಸಲಾಗಿದೆ; ಮುಂದಿನ ವರ್ಷ ನಡೆಯಲಿರುವ ಪಶ್ಚಿಮ ಬಂಗಾಳದ ಚುನಾವಣೆಯನ್ನೇ ಈ ಚರ್ಚೆ ಗುರಿಯಾಗಿಟ್ಟುಕೊಂಡಿದೆ ಇತ್ಯಾದಿ. ಈ ಮಾತುಗಳಿಗೆ ಅರ್ಥವಿರುವುದು ಕೂಡಾ ನಿಜ. ಬಿಹಾರದ ಚುನಾವಣೆಯಲ್ಲಿ ಚುನಾವಣಾ ಆಯೋಗ ಪಕ್ಷಪಾತ ತೋರಿಸಿರುವುದು, ಮತದಾರರ ಪಟ್ಟಿಯಲ್ಲಿ ಹಲವು ದೋಷಗಳಿದ್ದರೂ ಚುನಾವಣಾ ಆಯೋಗ ಮೌನವಾಗಿರುವುದು, ʼವೋಟ್‌ ಚೋರಿʼ ಎಂದು ಕಾಂಗ್ರೆಸ್‌ ಆಧಾರ ಸಹಿತ ತೋರಿಸಿದರೂ, ಕೇಂದ್ರ ಸರ್ಕಾರವಾಗಲಿ, ಚುನಾವಣಾ ಆಯೋಗವಾಗಲಿ ತುಟಿಬಿಚ್ಚದಿರುವುದು- ಇವೆಲ್ಲ ಗಮನಿಸಲೇ ಬೇಕಾದ, ಸಂಸತ್ತಿನಲ್ಲಿ ಚರ್ಚಿಸಲೇ ಬೇಕಾದ ಸಮಸ್ಯೆಗಳಾಗಿ ಕಣ್ಣೆದುರು ಇರುವಾಗಲೂ, ಸಂಸತ್ತಿನ ಅಮೂಲ್ಯವಾದ ಎಂಟು ಗಂಟೆಗಳ ಅವಧಿಯನ್ನು ವಂದೇ ಮಾತರಂ ಚರ್ಚೆಗೆ ಮೀಸಲಿಟ್ಟದ್ದು ಅನುಮಾನಕ್ಕೆ ದಾರಿ ಮಾಡಿಕೊಡುತ್ತದೆ.

ಕವಿ ರವೀಂದ್ರನಾಥ ಟ್ಯಾಗೋರ್ ಈ ಗೀತೆಗೆ ಸಂಗೀತ ಹೊಂದಿಸಿ ಸಾರ್ವಜನಿಕವಾಗಿ ಮೊದಲ ಬಾರಿಗೆ ಹಾಡಿದ್ದು 1896ರಲ್ಲಿ; ಕಲ್ಕತ್ತಾದಲ್ಲಿ ನಡೆದ ಇಂಡಿಯನ್‌ ನ್ಯಾಷನಲ್‌ ಕಾಂಗ್ರೆಸ್ಸಿನ ಅಧಿವೇಶನದಲ್ಲಿ.

ಈ ಐತಿಹಾಸಿಕ ಸಂದರ್ಭವನ್ನು ಮುಚ್ಚಿಡಲು ಬರುವುದಿಲ್ಲ. ಆದರೆ ಕಾಂಗ್ರೆಸ್‌ ಹೆಸರನ್ನು ಹೇಳಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಾಧ್ಯವಾಗಲಿಲ್ಲ. ಅವರು ಅಧಿವೇಶನವೊಂದರಲ್ಲಿ ಎಂದು ಹೇಳಿ ಕಾಂಗ್ರೆಸ್‌ ಅಧಿವೇಶನವನ್ನು ಮುಚ್ಚಿಡಲು ನೋಡಿದರು. ತೃಣಮೂಲ ಕಾಂಗ್ರೆಸ್‌ನ ಸಂಸದೆ ಮೊಹುವಾ ಮೊಯಿತ್ರಾ ತಮ್ಮ ಮಾತಿನಲ್ಲಿ ಇದನ್ನು ಎತ್ತಿ ತೋರಿಸಿ, ʼಅದೇನು ಹಿಂದೂ ಮಹಾಸಭಾದ ಅಧಿವೇಶನವೇ?ʼ ಎಂದು ಚುಚ್ಚಿದರು.

1937ರಲ್ಲಿ ವಂದೇ ಮಾತರಂ ಅನ್ನು ಘೋಷಣೆಯಾಗಿ ಬಳಸಿ ಬಂಗಾಳದಲ್ಲಿ ಮೆರವಣಿಗೆಗಳನ್ನು ನಡೆಸಲಾಯಿತು. ಸಾವಿರಾರು ಜನ ವಿದ್ಯಾರ್ಥಿಗಳು ಈ ಮೆರವಣಿಗೆಯಲ್ಲಿ ಭಾಗವಹಿಸಿ ಘೋಷಣೆ ಕೂಗಿದರು. ಇದರಿಂದ ಗಾಬರಿಗೊಂಡ ಬ್ರಿಟಿಷ್‌ ಆಡಳಿತ ಈ ಘೋಷಣೆ ಬಳಸುವುದನ್ನು ಮತ್ತು ಮೆರವಣಿಗೆ ಮಾಡುವುದನ್ನು ನಿಷೇಧಿಸಿತು. ವಂದೇ ಮಾತರಂ ಘೋಷಣೆ ಕೂಗಿದರೆ ದಂಡ ಹಾಕುವುದನ್ನೂ ಜಾರಿ ಮಾಡಿತು.

1905ರಲ್ಲಿ ಬಂಗಾಳವನ್ನು ಬ್ರಿಟಿಷರು ವಿಭಜಿಸಿದಾಗ (ಬಂಗಾಳ, ಅಸ್ಸಾಂ, ಬಿಹಾರ, ಒಡಿಸ್ಸಾ ಸೇರಿ ಬಂಗಾಳವಾಗಿದ್ದವು.) ಅದನ್ನು ವಿರೋಧಿಸಿ ಚಳವಳಿ ನಡೆದಾಗ ವಂದೇ ಮಾತರಂ ಗೀತೆ ಮತ್ತು ಘೋಷಣೆ ಜನತೆಯ ಹೋರಾಟಕ್ಕೆ ಸ್ಪೂರ್ತಿ ನೀಡಿತು.

ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಬಹಳ ಹುರುಪಿನಿಂದಲೇ ಮಾತನಾಡಿದರು. ವಂದೇ ಮಾತರಂ ರಚನೆಯಾಗಿ 50ನೇ ವರ್ಷವಾದಾಗ ಈ ದೇಶದ ಮೊದಲ ಪ್ರಧಾನಿ ವಂದೇ ಮಾತರಂ ಗೀತೆಯನ್ನು ತುಂಡು ತುಂಡು ಮಾಡಿದರು. ಈ ಗೀತೆಗೆ ನೂರು ವರ್ಷವಾದಾಗ ಭಾರತದ ಪ್ರಜಾಪ್ರಭುತ್ವ ಅತ್ಯಂತ ಅಪಾಯದ ಸ್ಥಿತಿಯಲ್ಲಿತ್ತು. ತುರ್ತುಪರಿಸ್ಥಿತಿಯನ್ನು ಘೋಷಿಸಲಾಗಿತ್ತು. ಈಗ ಈ ಗೀತೆಗೆ 150 ವರ್ಷಗಳಾದಾಗ ಭಾರತವನ್ನು ನೋಡುವುದೇ ಗೌರವ. ಭಾರತ ಒಂದು ಸಾವಿರ ವರ್ಷಗಳ ಹಿಂದೆ ಪಡೆದುಕೊಂಡಿದ್ದ ಪರಂಪರಾಗತ ವಿಚಾರಗಳನ್ನು ವಂದೇ ಮಾತರಂ ತನ್ನೊಡಲಲ್ಲಿ ತುಂಬಿಕೊಂಡಿದೆ. ಈ ವಿಚಾರಗಳನ್ನು ನಾವು ಉಳಿಸಿಕೊಳ್ಳಬೇಕು-ಇತ್ಯಾದಿ ಇತ್ಯಾದಿ.

ಕಾಂಗ್ರೆಸ್ಸಿನ ಸಂಸದೆ ಪ್ರಿಯಾಂಕಾ ವಾದ್ರಾ ಮತ್ತು ತೃಣಮೂಲ ಕಾಂಗ್ರೆಸ್ಸಿನ ಮೊಹುವಾ ಮೊಯಿತ್ರಾ ಮಾತನಾಡಿದಾಗ ಪ್ರಧಾನಿ ನರೇಂದ್ರ ಮೋದಿ ಏನನ್ನು ಮುಚ್ಚಿಟ್ಟರು, ಏನನ್ನು ತಿರುಚಿದರು, ಇತಿಹಾಸವನ್ನು ಸರಿಯಾಗಿ ತಿಳಿಯದೆ ಎಲ್ಲೆಲ್ಲಿ ಎಡವಿದರು ಎಂಬುದೆಲ್ಲ ಬಯಲಾಯಿತು. ನಿಜಕ್ಕೂ ಪ್ರಧಾನಿ ಮತ್ತು ಗೃಹಮಂತ್ರಿ ಹಾಸ್ಯಾಸ್ಪದವಾಗಿ ಕಾಣಿಸಿದರು.

ವಂದೇ ಮಾತರಂಗೆ 50 ವರ್ಷಗಳಾದಾಗ ಆರ್‌ಎಸ್‌ಎಸ್‌ (1925) ಹುಟ್ಟಿಕೊಂಡಿತು. ಬಿಜೆಪಿ ಇನ್ನೂ ಹುಟ್ಟಿರಲೇ ಇಲ್ಲ. ವಂದೇ ಮಾತರಂಗೆ 105 ವರ್ಷಗಳಾದಾಗ ಬಿಜೆಪಿ ಜನ್ಮತಾಳಿತು (1980). ಮುಸ್ಲಿಮರು ಈ ಗೀತೆಯನ್ನು ಹಾಡಬೇಕೆಂದು ಸಂಘ ಪರಿವಾರದವರು ಒತ್ತಾಯಿಸುತ್ತಾರೆ. ಆದರೆ ಸಂಘ ಪರಿವಾರದವರು ವಂದೇ ಮಾತರಂ ಗೀತೆಯನ್ನು ಹಾಡುವುದೇ ಇಲ್ಲ. ಕೆಲ ವರ್ಷಗಳ ಹಿಂದೆ ಬಿಜೆಪಿ ಸದಸ್ಯರೊಬ್ಬರು ವಂದೇ ಮಾತರಂ ಗೀತೆಯನ್ನು ಹಾಡಲು ಹೋಗಿ ಹೇಗೆ ತಪ್ಪಿದರು-ಇತ್ಯಾದಿ ಸಂಗತಿಗಳನ್ನು ಹೇಳುವ ಮೂಲಕ ಮೊಹುವಾ ಮೊಯಿತ್ರಾ ಮತ್ತೆ ಮತ್ತೆ ಸಂಘ ಪರಿವಾರದ ಮೇಲೆ ಟೀಕಾಸ್ತ್ರ ಬಿಟ್ಟರು.

ನೆಹರೂ ಮೊದಲು ವಂದೇ ಮಾತರಂ ಗೀತೆಯನ್ನು ತುಂಡು ತುಂಡು ಮಾಡಿದರು. ನಂತರ ದೇಶವನ್ನು ತುಂಡು ಮಾಡಿದರು ಎಂದು ನೆಹರೂ ವಿರುದ್ಧ ಖಡ್ಗ ಬೀಸಿದರು ಪ್ರಧಾನಿ ಮೋದಿ.

ನೆಹರೂ ಇಂಡಿಯನ್‌ ನ್ಯಾಷನಲ್‌ ಕಾಂಗ್ರೆಸ್ಸಿನ ಅಧ್ಯಕ್ಷರಾಗಿದ್ದರು. 1920 ಮತ್ತು 30ರ ದಶಕಗಳು ಧಾರ್ಮಿಕ ವಿಚಾರಗಳಲ್ಲಿ ಬಹಳ ಸೂಕ್ಷ್ಮವಾಗಿದ್ದ ಕಾಲವೂ ಆಗಿತ್ತು. ಹಿಂದೂ, ಮುಸ್ಲಿಂ ಎಂದು ಭೇದ ಮಾಡದೆ ಎಲ್ಲರೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸುತ್ತಿದ್ದ ಸಂದರ್ಭವೂ ಅದಾಗಿತ್ತು. ಇಂಥ ದಿನಗಳಲ್ಲಿ ಯಾವ ಧರ್ಮದವರ ಭಾವನೆಗಳಿಗೂ ನೋವಾಗದಂತೆ ಎಲ್ಲರನ್ನೂ ಒಗ್ಗೂಡಿಸಿಕೊಂಡು ಮುನ್ನಡೆಯುವ, ಸ್ವಾತಂತ್ರ್ಯ ಹೋರಾಟಕ್ಕೆ ಬಲತುಂಬುವ ಹೊಣೆ ಕಾಂಗ್ರೆಸ್‌ ಪಕ್ಷದ ಮೇಲಿತ್ತು. ವಂದೇ ಮಾತರಂ ಗೀತೆಯ ಮೊದಲ ಎರಡು ಚರಣಗಳು ಸ್ವದೇಶಿ ಚಳವಳಿಯಲ್ಲಿ ಭಾಗವಹಿಸಿದವರನ್ನು ಒಗ್ಗೂಡಿಸಲು ಮತ್ತು ಹೋರಾಟಗಾರರಿಗೆ ಹುರುಪು ತುಂಬಲು ಪ್ರೇರಕ ಶಕ್ತಿಯಾಗಿದ್ದವು. ಈ ಕಾರಣದಿಂದಾಗಿ ವಂದೇ ಮಾತರಂ ಗೀತೆಯನ್ನು ಕಾಂಗ್ರೆಸ್‌ ತನ್ನ ದೇಶಭಕ್ತಿ ಗೀತೆಯಾಗಿ ಅಳವಡಿಸಿಕೊಳ್ಳಬೇಕೆಂಬ ಸೂಚನೆಯೂ ಕಾಂಗ್ರೆಸ್ಸಿನ ಮುಂದಿತ್ತು. ಆದರೆ ಮುಂದೆ ವಂದೇ ಮಾತರಂ ಗೀತ ತನ್ನ ಸ್ವರೂಪವನ್ನು ಬದಲಿಸಿಕೊಂಡಿತು. ಆನಂದ ಮಠ ಕಾದಂಬರಿಯಲ್ಲಿ ಈ ಗೀತೆ ಜಾಗ ಪಡೆದುಕೊಂಡಾಗ, ಬಂಕಿಮಚಂದ್ರರು ಇನ್ನೂ ನಾಲ್ಕು ಚರಣಗಳನ್ನು ಈ ಗೀತೆಗೆ ಸೇರಿಸಿದರು. ಈ ನಾಲ್ಕು ಚರಣಗಳು ಭಿನ್ನ ಆಶಯವನ್ನು ಒಳಗೊಂಡಿದ್ದವು. ವಾಸ್ತವವಾಗಿ ಆ ಕಾದಂಬರಿ 1776-1777ರಲ್ಲಿ ಬಂಗಾಳದಲ್ಲಿ ನಡೆದ ಬಂಡಾಯದ ವಸ್ತುವಿನ ಸುತ್ತ ರೂಪಿಸಿದ ಕಾದಂಬರಿ. ಆಗಿನ ಬಾಂಗ್ಲಾದ ಮುಸ್ಲಿಂ ದೊರೆಗಳ ವಿರುದ್ಧ ನಡೆದ ಹೋರಾಟ ಅದು. ಈ ಚರಣಗಳಲ್ಲಿ ದುರ್ಗಾ ದೇವತೆಯನ್ನು ವರ್ಣಿಸುವುದೂ ಇದೆ. ಮುಸ್ಲಿಂ ದೊರೆಗಳ ವಿರುದ್ಧವಿರುವ ಮತ್ತು ದುರ್ಗಾ ಆರಾಧನೆಯನ್ನು ಒಳಗೊಂಡ ಈ ಚರಣಗಳನ್ನು ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸುತ್ತಿದ್ದ ಮುಸ್ಲಿಮರು ಒಪ್ಪುವುದು ಕಷ್ಟವಾಗುತ್ತಿತ್ತು. ಹೀಗಾಗಿ ಈ ಗೀತೆಯನ್ನು ಇಡಿಯಾಗಿ ಕಾಂಗ್ರೆಸ್ಸಿನ ಗೀತೆಯಾಗಿ ಅಳವಡಿಸಿಕೊಳ್ಳುವುದು ಸುಲಭದ ಮಾತಾಗಿರಲಿಲ್ಲ. ಕಾಂಗ್ರೆಸ್‌ ಕಾರ್ಯಕಾರಿ ಸಮಿತಿಯಲ್ಲಿದ್ದ ಸುಭಾಷ್‌ಚಂದ್ರ ಬೋಸ್‌ ಅವರು ಈ ಗೀತೆಯನ್ನು ಪೂರ್ಣವಾಗಿ ಅಳವಡಿಸಬೇಕೆಂದು ನೆಹರೂ ಅವರಿಗೆ ಪತ್ರ ಬರೆದರು.

Rabindranath Tagore 1

ನೆಹರೂ ಇಕ್ಕಟ್ಟಿನಲ್ಲಿ ಸಿಕ್ಕಿಕೊಂಡರು. ಸುಭಾಷ್‌ ಅವರ ಸೂಚನೆಯನ್ನು ಸುಲಭವಾಗಿ ಒಪ್ಪುವಂತಿರಲಿಲ್ಲ. ಆಗವರು ಕವಿ ರವೀಂದ್ರರ ಸಲಹೆಯನ್ನು ಕೇಳಿದರು. ರವೀಂದ್ರನಾಥ ಟ್ಯಾಗೋರರು ವಂದೇ ಮಾತರಂ ಗೀತೆಯನ್ನು ಸಮಗ್ರವಾಗಿ ಪರಿಶೀಲಿಸಿ, ಗೀತೆಯ ಮೊದಲ ಎರಡು ಚರಣಗಳು ಸಾಕೆಂದರು. ಗಾಂಧಿ ಕೂಡಾ ಇದೇ ಸಲಹೆಯನ್ನು ನೀಡಿದರು. ನೆಹರೂ ಅವರು ರವೀಂದ್ರರ ಅಭಿಪ್ರಾಯವನ್ನು ಕಾಂಗ್ರೆಸ್‌ ಕಾರ್ಯಕಾರಿ ಸಮಿತಿಯ ಮುಂದೆ ಇಟ್ಟರು. ಈ ಸಮಿತಿಯಲ್ಲಿ ಮಹಾತ್ಮಾ ಗಾಂಧಿ, ನೆಹರು, ಪಟೇಲ್‌, ಸುಭಾಷ್‌ಚಂದ್ರ ಬೋಸ್‌, ಆಜಾದ್‌ ಮತ್ತು ರಾಜೇಂದ್ರ ಪ್ರಸಾದ್‌ ಅವರಿದ್ದರು. ಸಮಿತಿ ಇದಕ್ಕೆ ಒಪ್ಪಿಗೆ ನೀಡಿತು. ಹೀಗಾಗಿ 1937ರಲ್ಲಿ ವಂದೇ ಮಾತರಂ ಕಾಂಗ್ರೆಸ್ಸಿನ ಗೀತೆಯಾಯಿತು. ಮುಂದೆ 1950ರಲ್ಲಿ ವಂದೇ ಮಾತರಂ ಗೀತೆಯನ್ನು ರಾಷ್ಟ್ರದ ದೇಶಭಕ್ತಿ ಗೀತೆಯಾಗಿ ಆಗಿನ ರಾಷ್ಟ್ರಪತಿ ರಾಜೇಂದ್ರ ಪ್ರಸಾದರು ಅಂಗೀಕರಿಸಿ, ರಾಷ್ಟ್ರಗೀತೆಗೆ ಕೊಟ್ಟ ಗೌರವವನ್ನುಈ ಗೀತೆಗೂ ಸಂವಿಧಾನ ರಚನಾ ಸಭೆಯಲ್ಲಿ ನೀಡಿದಾಗ ಆ ಸಭೆಯಲ್ಲಿ ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರಿದ್ದರು; ಶ್ಯಾಮ್‌ ಪ್ರಸಾದ್‌ ಮುಖರ್ಜಿಯವರೂ ಇದ್ದರು.

ವಾಸ್ತವವಾಗಿ ಮುಸ್ಲಿಮರಿಗೆ ಪ್ರತ್ಯೇಕ ರಾಷ್ಟ್ರ ಬೇಕು ಬೇಡಿಕೆ ಬಂದದ್ದು 1940ರಲ್ಲಿ, ಮುಸ್ಲಿಂ ಲೀಗ್‌ನ ಲಾಹೋರ್‌ ಅಧಿವೇಶನದಲ್ಲಿ. ಪ್ರತ್ಯೇಕ ರಾಷ್ಟ್ರದ ಗೊತ್ತುವಳಿಯನ್ನೂ ಈ ಅಧಿವೇಶನ ಪಾಸುಮಾಡಿತ್ತು.

1908ರಲ್ಲಿ ಮುಸ್ಲಿಂ ಲೀಗ್‌ನ ನಾಯಕ ಸರ್‌ ಸೈಯದ್‌ ಅಹಮದ್‌ ಖಾನ್‌ ವಂದೇ ಮಾತರಂ ಗೀತೆಯನ್ನು ವಿರೋಧಿಸಿದ್ದರು.

ವಿನಾಯಕ ದಾಮೋದರ ಸಾವರ್ಕರ್‌ ಅವರು ಸೇರಿದಂತೆ ಸಂಘ ಪರಿವಾರ ಮತ್ತು ಬಿಜೆಪಿಯ ಅನೇಕ ನಾಯಕರು ಹಿಂದೂ ರಾಷ್ಟ್ರದ ಮಾತನ್ನು ನಿರಂತರವಾಗಿ ಆಡುತ್ತಲೇ ಬಂದಿದ್ದಾರೆ. ಅಲ್ಪ ಸಂಖ್ಯಾತರಾದ ಅನ್ಯ ಧರ್ಮೀಯರು ಭಾರತದಲ್ಲಿ, ಹಿಂದೂ ರಾಷ್ಟ್ರದಲ್ಲಿ ಇರಬಹುದು; ಆದರೆ ಎರಡನೇ ದರ್ಜೆ ಪ್ರಜೆಗಳಾಗಿ ಇರಬೇಕು ಎನ್ನುವ ಪರಿವಾರದ ಆಶಯ ಮುಚ್ಚಿಟ್ಟ ಸಂಗತಿಯೇನೂ ಅಲ್ಲ. ಇದೆಲ್ಲವನ್ನು ಗಮನಿಸಿದಾಗ ದೇಶವನ್ನು ತುಂಡು ಮಾಡಿದವರು ಯಾರು ಎಂಬುದು ಗೊತ್ತಾಗುತ್ತದೆ.

ಇದೆಲ್ಲವೂ ಗೊತ್ತಿದ್ದೂ ಮೋದಿ ಈ ಸಂಗತಿಗಳ ಮೇಲೆ ಮುಸುಕೆಳೆದು ದೇಶ ಒಡೆಯಲು ನೆಹರೂ ಈ ಗೀತೆಯನ್ನು ತುಂಡು ಮಾಡಿದ್ದೇ ಕಾರಣವಾಯಿತು ಎಂದು ಬಿಂಬಿಸಿ, ಜನತೆಯನ್ನು ನಂಬಿಸಲು ನೋಡಿದರು. ಆದರೆ ಪ್ರಿಯಾಂಕ ಇತಿಹಾಸದ ಪುಟಗಳನ್ನೆಲ್ಲ ತೆರೆದಿಟ್ಟರು. ಮೋದಿ ಹೇಳಿದರೂ, ಹೇಳದಿದ್ದರೂ ಇತಿಹಾಸ ಬದಲಾಗುವುದಿಲ್ಲ. ಮೋದಿಯವರ ಹುನ್ನಾರಗಳು ಬಯಲಾಗುತ್ತವೆ.

ವಂದೇ ಮಾತರಂನ ಮೊದಲ ಎರಡು ಚರಣಗಳ ಆಶಯವನ್ನು ಇಟ್ಟುಕೊಂಡು ಮೊಹುವಾ ಮೊಯಿತ್ರಾ ಬಹಳ ಅದ್ಭುತವಾಗಿ ಮಾತನಾಡಿದರು. ಭಾರತದ ನೀರು, ಗಾಳಿ, ಅರಣ್ಯ ಸಂಪತ್ತು ಮೋದಿಯವರ ಆಡಳಿತದಲ್ಲಿ ಹೇಗೆ ಪತನದ ಹಾದಿಯನ್ನು ಹಿಡಿದಿವೆ; ನಿರುದ್ಯೋಗ, ಆರೋಗ್ಯ ಸಮಸ್ಯೆಗಳು, ಬಡತನ ಇತ್ಯಾದಿ ಸಮಸ್ಯೆಗಳು ಹೇಗೆ ಭೂತಕಾರದಲ್ಲಿ ಬೆಳೆದು ನಿಂತಿವೆ ಎಂಬುದನ್ನು ಅವರು ಅಂಕಿ ಸಂಖ್ಯೆಗಳ ಆಧಾರದಲ್ಲಿ ಮಂಡಿಸಿದರು.

ವಂದೇ ಮಾತರಂ ನೆಪದಲ್ಲಿ ಮೋದಿ ಮತ್ತು ಶಾ ವಿರೋಧ ಪಕ್ಷಗಳ ಮೇಲೆ ರಾಮಬಾಣ ಪ್ರಯೋಗಿಸಲು ಹೊಂಚು ಹಾಕಿದರು. ಆದರೆ ಅದೇ ಬಾಣ ತಿರುಗು ಬಾಣವಾಗಿ ಬಂದು ಇವರಿಗೇ ಚುಚ್ಚಿಕೊಂಡಿತು.

ನಿಜಕ್ಕೂ ಇದೊಂದು ದುರಂತವೇ ಸರಿ.

G P Basavaraj
ಜಿ ಪಿ ಬಸವರಾಜು
+ posts

ಹಿರಿಯ ಪತ್ರಕರ್ತ, ಸಾಹಿತಿ. ಕತೆ, ಕವಿತೆ, ಪ್ರವಾಸ ಕಥನ, ವಿಮರ್ಶೆ, ಕಾದಂಬರಿ ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕ್ರಿಯಾಶೀಲ.  ಬೆತ್ತಲೆಯ ಬೆಳಕನುಟ್ಟು, ಕೊಳ್ಳದ ಹಾದಿ, ಶಿಖರ ಸಾಲು, ಕಾಗೋಡು, ಕಾಡಿನ ದಾರಿ ಪ್ರಮುಖ ಕೃತಿಗಳು. ಮೂರು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಪ್ರಶಸ್ತಿಯನ್ನು ಪಡೆದಿದ್ದಾರೆ. ಪುತಿನ ಕಾವ್ಯ ಪ್ರಶಸ್ತಿ, ಜಿಎಸ್‍ಎಸ್‍ ಕಾವ್ಯ ಪ್ರಶಸ್ತಿ, ಬೆಸಗರಹಳ್ಳಿ ರಾಮಣ್ಣ ಕಥಾ ಪ್ರಶಸ್ತಿ, ಕಿ.ರಂ. ಪುರಸ್ಕಾರ ಮುಂತಾದ ಗೌರವ ಪ್ರಶಸ್ತಿಗಳು ಸಂದಿವೆ.

ಪೋಸ್ಟ್ ಹಂಚಿಕೊಳ್ಳಿ:

ಜಿ ಪಿ ಬಸವರಾಜು
ಜಿ ಪಿ ಬಸವರಾಜು

ಹಿರಿಯ ಪತ್ರಕರ್ತ, ಸಾಹಿತಿ. ಕತೆ, ಕವಿತೆ, ಪ್ರವಾಸ ಕಥನ, ವಿಮರ್ಶೆ, ಕಾದಂಬರಿ ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕ್ರಿಯಾಶೀಲ.  ಬೆತ್ತಲೆಯ ಬೆಳಕನುಟ್ಟು, ಕೊಳ್ಳದ ಹಾದಿ, ಶಿಖರ ಸಾಲು, ಕಾಗೋಡು, ಕಾಡಿನ ದಾರಿ ಪ್ರಮುಖ ಕೃತಿಗಳು. ಮೂರು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಪ್ರಶಸ್ತಿಯನ್ನು ಪಡೆದಿದ್ದಾರೆ. ಪುತಿನ ಕಾವ್ಯ ಪ್ರಶಸ್ತಿ, ಜಿಎಸ್‍ಎಸ್‍ ಕಾವ್ಯ ಪ್ರಶಸ್ತಿ, ಬೆಸಗರಹಳ್ಳಿ ರಾಮಣ್ಣ ಕಥಾ ಪ್ರಶಸ್ತಿ, ಕಿ.ರಂ. ಪುರಸ್ಕಾರ ಮುಂತಾದ ಗೌರವ ಪ್ರಶಸ್ತಿಗಳು ಸಂದಿವೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...