ಮಹಿಳಾಪರ ಹೋರಾಟಗಾರರು, ಸಂವೇದನೆ ಉಳ್ಳವರೆಂದು ಕರೆಸಿಕೊಳ್ಳುವವರು, ಅತ್ಯಾಚಾರ ಮತ್ತು ಲೈಂಗಿಕ ಅಪರಾಧಗಳ ವಿಷಯಕ್ಕೆ ಬಂದಾಗ ಕೊನೆಗೆ "ಆಕೆ ತಡರಾತ್ರಿ ಏಕೆ ಹೊರಗೆ ಹೋಗಿದ್ದು? ಆಕೆ ಮದ್ಯಪಾನ ಮಾಡಿದ್ದು ಯಾಕೆ? ಆಕೆ ಆ ಬಟ್ಟೆ ಧರಿಸಿದ್ದು ಯಾಕೆ? ಆಕೆ ಆತನೊಂದಿಗೆ ಸ್ನೇಹ ಮಾಡಿದ್ದು ಯಾಕೆ? ಎಂಬ ಪ್ರಶ್ನೆಗಳನ್ನೇ ಮುಂದಿಡುವುದು ನಿರ್ಲಜ್ಜತನ.
ಅತ್ಯಾಚಾರ, ಲೈಂಗಿಕ ಕಿರುಕುಳ ಏನೇ ಆಗಲಿ ಕೊನೆಗೆ ಮಹಿಳೆಯನ್ನೇ ದೂಷಿಸುವುದು ಹಲವು ಬಾರಿ ನಡೆದಿದೆ. ಸಾಮಾನ್ಯ ಜನರು ಮಾತ್ರವಲ್ಲ ರಾಜಕೀಯ ನಾಯಕರುಗಳೂ ಹೆಣ್ಣು ಮಕ್ಕಳ ಕಡೆಗೆಯೇ ಬೊಟ್ಟು ಮಾಡಿ ಮಾನಸಿಕ ಸ್ಥೈರ್ಯವನ್ನು ಕುಗ್ಗಿಸುವಂತಹ ಅತಿ ಕೆಟ್ಟ ಕಾರ್ಯವನ್ನು ಈ ಹಿಂದೆಯೂ ಮಾಡಿದ್ದಾರೆ, ಇತ್ತೀಚೆಗೆಯೂ ಅದೇ ನಡೆದಿರುವುದು. ‘ವಿಕ್ಟಿಮ್ ಬ್ಲೇಮಿಂಗ್’ ವಿರುದ್ಧವಾಗಿ ಮಾತನಾಡುವ ಅದೆಷ್ಟೋ ನಾಯಕರುಗಳು ಸ್ವತಃ ತಾವೇ ‘ಬುದ್ಧಿವಾದ’ ಹೇಳುವ ನೆಪದಲ್ಲಿ ಮಹಿಳೆಯ ಘನತೆಗೆ ಧಕ್ಕೆ ಉಂಟಾಗುವಂತೆ ಮಾತನಾಡಿರುವುದೂ ಇದೆ. 2017ರಲ್ಲಿ ಕೇರಳದಲ್ಲಿ ನಡೆದ ನಟಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದಲ್ಲಿಯೂ ನಡೆದಿದ್ದು ಇದುವೇ!
ಕೇರಳದಲ್ಲಿ 2017ರಲ್ಲಿ ನಡೆದ ಅಪಹರಣ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತ ನಟಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕೆಲ ದುಷ್ಕರ್ಮಿಗಳು ಕೆಟ್ಟದಾಗಿ ಪೋಸ್ಟ್ಗಳನ್ನು ಮಾಡಲು ಆರಂಭಿಸಿದ್ದರು. ಎರಡನೇ ಆರೋಪಿ ಮತ್ತು ಇತ್ತೀಚೆಗೆ ಶಿಕ್ಷೆಗೆ ಗುರಿಯಾದ ಮಾರ್ಟಿನ್ ಆಥನಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದನ್ನು ಹಂಚಿಕೊಂಡು ನಟಿಯ ಗುರುತನ್ನೂ ಬಹಿರಂಗಪಡಿಸಿದ್ದ. ನಟಿಯ ಘನತೆಗೆ ಧಕ್ಕೆ ತರುವಂತಹ ಹೇಳಿಕೆಗಳನ್ನು ನೀಡಿದ್ದ. ಇವೆಲ್ಲವೂ ನಟಿಯನ್ನು ಮಾನಸಿಕವಾಗಿ ಎಷ್ಟು ಕುಗ್ಗಿಸಿದೆಯೆಂದರೆ, “ನಾನು ಮೌನವಾಗಿದ್ದರೆ ಅಪರಾಧದ ಬಗ್ಗೆ ದೂರು ನೀಡದ ಆರೋಪ ಹೊರಿಸಲಾಗುತ್ತಿತ್ತು. ಆದರೆ ನಾನು ಸುಮ್ಮನಿರಬೇಕಿತ್ತು. ಏನಾಯಿತೋ ಅದು ನನ್ನ ವಿಧಿ ಎಂದು ಒಪ್ಪಿಕೊಂಡು ನನ್ನ ಜೀವನವನ್ನು ಕೊನೆಗೊಳಿಸಬೇಕಿತ್ತು” ಎಂಬ ಭಾವನಾತ್ಮಕ ಪೋಸ್ಟ್ ಅನ್ನು ಮಾಡುವಷ್ಟು!
ಇದನ್ನು ಓದಿದ್ದೀರಾ? ಕೇರಳ ಅತ್ಯಾಚಾರ ಪ್ರಕರಣ | ‘ನೆಮ್ಮದಿಯಿಂದ ಬದುಕಲು ಬಿಡಿ’ – ಸಂತ್ರಸ್ತ ನಟಿ ಭಾವನಾತ್ಮಕ ಪೋಸ್ಟ್
ಈ ಒಂದು ಪ್ರಕರಣದಲ್ಲಿ ಮಾತ್ರವಲ್ಲ ನಿರ್ಭಯಾ ಪ್ರಕರಣ, ಪ್ರಜ್ವಲ್ ರೇವಣ್ಣ ಸಾಮೂಹಿಕ ಅತ್ಯಾಚಾರ ಹಗರಣ, ಮಥುರಾ ಅತ್ಯಾಚಾರ ಪ್ರಕರಣ- ಹೀಗೆ ಹಲವು ಪ್ರಕರಣಗಳಲ್ಲಿ ಪೊಲೀಸರು, ರಾಜಕೀಯ ನಾಯಕರು ಮತ್ತು ಈ ಸಮಾಜ ಬೊಟ್ಟು ಮಾಡಿದ್ದು ಸಂತ್ರಸ್ತೆಯತ್ತ. ಅಷ್ಟು ರಾತ್ರಿಗೆ ಅವಳು ಹೊರಗೆ ಹೋಗಿದ್ದು ಯಾಕೆ?, ಅವಳು ಆ ಬಟ್ಟೆ ಧರಿಸಿದ್ದು ಯಾಕೆ?, ಆಗಿದ್ದು ಆಗಿ ಹೋಯಿತು ದೂರು ನೀಡಿ ಡಂಗುರ ಸಾರುವುದು ಯಾಕೆ?- ಇಂತಹ ಅತಿ ಕೆಟ್ಟ ಪ್ರಶ್ನೆಗಳನ್ನು ಈ ಸಮಾಜ ಎತ್ತುತ್ತದೆ. ‘ಮಾನ-ಮರ್ಯಾದೆ’ ಎಂಬ ಪದಗಳಿಗೆ ಮಹಿಳೆಯ ಗುತ್ತಿಗೆದಾರಳು ಎಂಬಂತೆ ಮನೋಭಾವನೆ ಮೂಡಿಸಿ ಆಕೆಯನ್ನೇ ಕಟ್ಟಿಹಾಕುತ್ತದೆ. ಇತ್ತೀಚೆಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೀಡಿದ ಹೇಳಿಕೆಯೂ ಇದಕ್ಕೆ ಹೊರತಾಗಿಲ್ಲ.
‘ವಿಕ್ಟಿಮ್ ಬ್ಲೇಮಿಂಗ್’ ಮಾಡಿದ ರಾಜಕೀಯ ನಾಯಕರು
ಮಮತಾ ಬ್ಯಾನರ್ಜಿ ಅವರು ತಮ್ಮ ಕ್ಯಾಂಪಸ್ನ ಹೊರಗೆ ಅತ್ಯಾಚಾರಕ್ಕೊಳಗಾದ ದುರ್ಗಾಪುರದ ವೈದ್ಯಕೀಯ ವಿದ್ಯಾರ್ಥಿನಿಗೆ ಕೆಲವು ಸಲಹೆಗಳನ್ನು ನೀಡಿದ್ದರು! “ನಾವು ಯಾರನ್ನೂ ಸಮರ್ಥಿಸುತ್ತಿಲ್ಲ. ಆದರೆ ಹೆಣ್ಣು ಮಕ್ಕಳು ರಾತ್ರಿ ಕ್ಯಾಂಪಸ್ನಿಂದ ಹೊರಹೋಗಬಾರದು” ಎಂದಿದ್ದರು. ರಾತ್ರಿ 8 ಗಂಟೆ ಸುಮಾರಿಗೆ ತನ್ನ ಸ್ನೇಹಿತರೊಂದಿಗೆ ಊಟಕ್ಕೆ ಹೊರಗೆ ಹೋಗಿದ್ದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆದಿತ್ತು. ಈ ಪ್ರಕರಣದ ಬಗ್ಗೆ ಮಾತನಾಡುತ್ತಾ ಸಿಎಂ ಮಮತಾ ಅವರು, ‘ವಿಕ್ಟಿಮ್ ಬ್ಲೇಮಿಂಗ್’ ಮಾಡಿ ವಿಪಕ್ಷಗಳ, ಮಹಿಳಾಪರ ಹೋರಾಟಗಾರರ ಕೆಂಗಣ್ಣಿಗೆ ಗುರಿಯಾಗಿದ್ದರು.
ಇನ್ನು ನಮ್ಮ ರಾಜ್ಯದ ರಾಜಕಾರಣಿ 2021ರಲ್ಲಿ ಗೃಹ ಸಚಿವರಾಗಿದ್ದ ಆರಗ ಜ್ಞಾನೇಂದ್ರ ಅವರು, ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಬಗ್ಗೆ ಹೇಳಿಕೆ ನೀಡುತ್ತಾ, “ಯುವತಿ ಮತ್ತು ಯುವಕ ಆ ಸಮಯದಲ್ಲಿ ಅಲ್ಲಗೆ ಹೋಗಿದ್ದೇ ತಪ್ಪು, ಯುವತಿ ಸಂಜೆ 7.30ಕ್ಕೆ ಅಲ್ಲಿಗೆ ಹೋಗಬಾರದಿತ್ತು” ಎಂದು ಬೇಜವಾಬ್ದಾರಿಯುತವಾದ ಹೇಳಿಕೆಯನ್ನು ನೀಡಿದ್ದಾರೆ.

2012ರಲ್ಲಿ ‘ಪಾರ್ಕ್ ಸ್ಟ್ರೀಟ್ ಅತ್ಯಾಚಾರ’ ಪ್ರಕರಣದಲ್ಲಿ ಸಂತ್ರಸ್ತೆಯ ಬಗ್ಗೆ ವಿವರಿಸುತ್ತಾ ‘ಕಲ್ಪಿತ ಘಟನೆ’ ಎಂಬ ಪದವನ್ನು ಮಾಧ್ಯಮಗಳು ಬಳಸಿತ್ತು. ಅಂತಿಮವಾಗಿ ಕೋರ್ಟ್ ಸಂತ್ರಸ್ತೆಯನ್ನು ಸಮರ್ಥಿಸಿಕೊಂಡಿತು. ಸುಜೆಟ್ ಜೋರ್ಡಾನ್ ಎಂಬ 37 ವರ್ಷದ ಮಹಿಳೆಯನ್ನು ಕೋಲ್ಕತ್ತಾದ ಪಾರ್ಕ್ ಸ್ಟ್ರೀಟ್ನ ನೈಟ್ ಕ್ಲಬ್ ಒಂದರಿಂದ ಲಿಫ್ಟ್ ನೀಡುವ ಭರವಸೆ ನೀಡಿ ಅಪಹರಿಸಿ, ಚಲಿಸುತ್ತಿದ್ದ ವಾಹನದಲ್ಲೇ ಐವರು ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಆದರೆ ಆರೋಪಿಗಳಿಗೆ ಶಿಕ್ಷೆ ಪ್ರಕಟವಾಗುವ ಮೊದಲೇ, 2015ರ ಮಾರ್ಚ್ನಲ್ಲಿ ಮಿದುಳಿನ ಉರಿಯೂತದಿಂದ ಸುಜೆಟ್ ಜೋರ್ಡಾನ್ ನಿಧನರಾದರು.
ಇವಿಷ್ಟೇ ಅಲ್ಲ ಹಿಂಸಾಚಾರ, ಅತ್ಯಾಚಾರ, ಲೈಂಗಿಕ ದೌರ್ಜನ್ಯವಾದಾಗ ಮಹಿಳೆಯರಿಗೆಯೇ ಸಲಹೆ ನೀಡುವುದು ಹಲವು ಬಾರಿ ನಡೆದಿದೆ. ಪತ್ರಕರ್ತೆ ಸೌಮ್ಯ ವಿಶ್ವನಾಥನ್ ರಾತ್ರಿ ಪಾಳಿ ಕೆಲಸ ಮುಗಿಸಿ ಕಾರು ಚಲಾಯಿಸಿಕೊಂಡು ಮನೆಗೆ ತೆರಳುವಾಗ ಅವರ ಹತ್ಯೆ ನಡೆದಿದ್ದು ಅಂದಿನ ದೆಹಲಿ ಸಿಎಂ ಆಗಿದ್ದ ಶೀಲಾ ದೀಕ್ಷಿತ್, “ಮಹಿಳೆಯರು ಸಾಹಸ ಮಾಡಬಾರದು” ಎಂದು ಹೇಳಿದ್ದರು.
2021ರಲ್ಲಿ ಗೋವಾ ಸಿಎಂ ಪ್ರಮೋದ್ ಸಾವಂತ್ ಅವರು ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಹೇಳಿಕೆ ನೀಡುತ್ತಾ ಪೋಷಕರನ್ನು ದೂಷಿಸಿದ್ದರು. “ರಾತ್ರಿಯಲ್ಲಿ ಹೆಣ್ಣುಮಕ್ಕಳನ್ನು ಹೊರಗೆ ಹೋಗಲು ಬಿಟ್ಟದ್ದು ಯಾಕೆ” ಎಂದು ಪ್ರಶ್ನಿಸಿದ್ದರು. ಇನ್ನು ಹೆಣ್ಣುಮಕ್ಕಳನ್ನು ಕೀಳಾಗಿ ಕಾಣುವ, ಪುರುಷಪ್ರಧಾನ ಸಮಾಜಕ್ಕೆ ಆದ್ಯತೆ ನೀಡುವ ಮನುವಾದವೇ ದೇಶದ ಸಂವಿಧಾನವಾಗಬೇಕೆಂಬ ಆಶಯ ಹೊಂದಿರುವ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್, “ಪಾಶ್ಚಿಮಾತ್ಯ ಜೀವನಶೈಲಿಯೇ ಈ ಅತ್ಯಾಚಾರಗಳಿಗೆ ಕಾರಣ” ಎಂದು ಹೇಳಿದ್ದರು.
ಇದನ್ನು ಓದಿದ್ದೀರಾ? ಶೇ.97.5 ಪ್ರಕರಣಗಳ ವಿಚಾರಣೆ ಬಾಕಿ: ಆ್ಯಸಿಡ್ ದಾಳಿ ಸಂತ್ರಸ್ತರಿಗೆ ಬೇಕಾಗಿರುವುದು ಸಹಾನುಭೂತಿಯಲ್ಲ ನ್ಯಾಯ
ಉತ್ತರ ಪ್ರದೇಶದ ಮಾಜಿ ಸಿಎಂ ಮುಲಾಯಂ ಸಿಂಗ್ ಯಾದವ್ ಅತ್ಯಾಚಾರ ಪ್ರಕರಣವೊಂದರ ಬಗ್ಗೆ ಹೇಳಿಕೆ ನೀಡುತ್ತಾ, “ಅವರು ಹುಡುಗರು, ಹಾಗಾಗಿ ಅವರು ತಪ್ಪು ಮಾಡುತ್ತಾರೆ” ಎಂದಿದ್ದರು. ಮಹಾರಾಷ್ಟ್ರದ ಬೀಡ್ನ ಬಿಜೆಪಿ ಶಾಸಕ ಗೋಪಿಚಂದ್ ಪದಲ್ಕರ್, “ಮಹಿಳೆಯರು ಪರಿಚಯವಿಲ್ಲದ ತರಬೇತುದಾರರು ಇರುವ ಜಿಮ್ಗಳಿಗೆ ಸೇರುವ ಬದಲಾಗಿ ಮನೆಯಲ್ಲಿಯೇ ಯೋಗ ಮಾಡಬೇಕು” ಎಂದು ಸಲಹೆ ನೀಡಿದ್ದರು! ಈ ವೇಳೆ ಹಲವು ಮಂದಿ ಮನೆಯಲ್ಲಿಯೇ ಸಂಬಂಧಿಕರಿಂದ ಮಹಿಳೆಯರ ಮೇಲೆ ನಡೆಯುವ ಅತ್ಯಾಚಾರ, ದೌರ್ಜನ್ಯ ಪ್ರಕರಣಗಳನ್ನು ಮುನ್ನೆಲೆಗೆ ತಂದು ಬಿಜೆಪಿ ಶಾಸಕರನ್ನು ತರಾಟೆಗೆ ತೆಗೆದುಕೊಂಡಿದ್ದರು.
ಸಂತ್ರಸ್ತೆಯನ್ನೇ ದೂಷಿಸಿತ್ತು ಕೋರ್ಟ್ಗಳು!
ರಾಜಕಾರಣಿಗಳು ಮಾತ್ರವಲ್ಲ ಕೋರ್ಟ್, ಪೊಲೀಸರೂ ಇದೇ ರೀತಿ ಸಂತ್ರಸ್ತೆಯನ್ನೇ ದೂಷಿಸಿರುವ ಹಲವು ಪ್ರಕರಣಗಳಿವೆ. ಮಥುರಾ ಅತ್ಯಾಚಾರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಆರೋಪಿಗಳನ್ನು ಖುಲಾಸೆಗೊಳಿಸಿ, “ಗಾಯಗಳಾಗಿಲ್ಲ, ಆಕೆ ಗಟ್ಟಿಯಾಗಿ ಪ್ರತಿರೋಧಿಸಿಲ್ಲ, ಆಕೆಗೆ ಲೈಂಗಿಕ ಕ್ರಿಯೆಗೆ ಸಹಕರಿಸಿದ್ದಾಳೆ” ಎಂದು ಸಂತ್ರಸ್ತೆಯನ್ನೇ ದೂಷಿಸಿದೆ.
ಕೇರಳದಲ್ಲಿ ಸಿವಿಕ್ ಚಂದ್ರನ್ ಎಂಬ ಲೇಖಕ ಮತ್ತು ಸಾಮಾಜಿಕ ಕಾರ್ಯಕರ್ತನ ವಿರುದ್ಧದ ಲೈಂಗಿಕ ಕಿರುಕುಳ ಪ್ರಕರಣದ ವಿಚಾರಣೆ ನಡೆಸಿದ್ದ ಕೋಝಿಕೋಡ್ ಸೆಷನ್ಸ್ ಕೋರ್ಟ್ ನ್ಯಾಯಾಧೀಶ ಎಸ್. ಕೃಷ್ಣಕುಮಾರ್, “ಮಹಿಳೆ ‘ಲೈಂಗಿಕವಾಗಿ ಉತ್ತೇಜಿಸುವಂತಹ ಬಟ್ಟೆ’ ಧರಿಸಿದ್ದಳು” ಎಂದು ಹೇಳಿ ಆರೋಪಿಗೆ ಜಾಮೀನು ನೀಡಿದ್ದರು. ಈ ಆದೇಶದ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ, ಕೇರಳ ಹೈಕೋರ್ಟ್, ಕೋಝಿಕೋಡ್ ಸೆಷನ್ಸ್ ಕೋರ್ಟ್ ತೀರ್ಪನ್ನು ರದ್ದುಗೊಳಿಸಿತ್ತು. “ಮಹಿಳೆ ಯಾವ ಬಟ್ಟೆ ಧರಿಸಿದ್ದರೂ ಅದು ಪುರುಷನಿಗೆ ಅತ್ಯಾಚಾರ ಮಾಡಲು ನೀಡುವ ಪರವಾನಗಿ ಅಲ್ಲ” ಎಂದು ಸ್ಪಷ್ಟಪಡಿಸಿತು. ಜತೆಗೆ ಸಂತ್ರಸ್ತೆಯ ಬಟ್ಟೆ ಅಥವಾ ವರ್ತನೆಯ ಬಗ್ಗೆ ಚರ್ಚಿಸಬಾರದೆಂದು ಹೇಳಿತು.
ಇನ್ನು ಭಾನ್ವರಿ ದೇವಿ ಅತ್ಯಾಚಾರ ಪ್ರಕರಣದಲ್ಲಿ ಜೈಪುರದ ಜಿಲ್ಲಾ ಕೋರ್ಟ್, “ಉನ್ನತ ಜಾತಿಯ ಪುರುಷರು ಕೆಳ ಜಾತಿಯ ಮಹಿಳೆಯನ್ನು ಅತ್ಯಾಚಾರ ಮಾಡಿ ತಮ್ಮನ್ನು ತಾವು ಅಪವಿತ್ರಗೊಳಿಸಿಕೊಳ್ಳುವುದಿಲ್ಲ” ಎಂಬ ಕೀಳುಮಟ್ಟದ ತೀರ್ಪನ್ನು ನೀಡಿತ್ತು. ಆರೋಪಿಯನ್ನು ಖುಲಾಸೆಗೊಳಿಸಿತ್ತು. ಜಾತಿ ಪೂರ್ವಾಗ್ರಹ ಮತ್ತು ವಿಕ್ಟಿಮ್ ಬ್ಲೇಮಿಂಗ್ ಸಂಬಂಧಿಸಿದ ಈ ಪ್ರಕರಣದಿಂದಾಗಿ ಸುಪ್ರೀಂ ಕೋರ್ಟ್ನಲ್ಲಿ ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ತಡೆಗಟ್ಟುವ ಕಾನೂನು ರೂಪಿಸಲಾಯಿತು.
ಹೀಗೆ ಎಷ್ಟೇ ಪ್ರಗತಿಪರರು ಎನಿಸಿದರೂ, ಮಹಿಳಾಪರ ಹೋರಾಟಗಾರರು ಎಂದೆನಿಸಿಕೊಂಡಿದ್ದರೂ, ಅತ್ಯಾಚಾರ ಮತ್ತು ಲೈಂಗಿಕ ಅಪರಾಧಗಳ ವಿಷಯಕ್ಕೆ ಬಂದಾಗ ಕೊನೆಗೆ “ಆಕೆ ತಡರಾತ್ರಿ ಏಕೆ ಹೊರಗೆ ಹೋಗಿದ್ದು? ಆಕೆ ಮದ್ಯಪಾನ ಮಾಡಿದ್ದು ಯಾಕೆ? ಆಕೆ ಆ ಬಟ್ಟೆ ಧರಿಸಿದ್ದು ಯಾಕೆ? ಆಕೆ ಆತನೊಂದಿಗೆ ಸ್ನೇಹ ಮಾಡಿದ್ದು ಯಾಕೆ? ಎಂಬ ಪ್ರಶ್ನೆಗಳನ್ನೇ ಮುಂದಿಡುವುದು ತಮ್ಮ ನಿರ್ಲಜ್ಜತನ.
ಇದನ್ನು ಓದಿದ್ದೀರಾ? ಮಾತೃತ್ವ ರಜೆ ಒಂದು ವರ್ಷಕ್ಕೆ ಏರಿಸಿ: ಇದು ಕರುಣೆಯಲ್ಲ, ಮಹಿಳೆಯರ ಘನತೆಯ ಹಕ್ಕು
“ಯಾವ ದಿನ ಒಬ್ಬ ಮಹಿಳೆ ಮಧ್ಯರಾತ್ರಿಯಲ್ಲಿ ಒಂಟಿಯಾಗಿ ನಿರ್ಭಯವಾಗಿ ರಸ್ತೆಯಲ್ಲಿ ನಡೆದು ಹೋಗುತ್ತಾಳೋ, ಅಂದು ಭಾರತಕ್ಕೆ ನಿಜವಾದ ಸ್ವಾತಂತ್ರ್ಯ ಸಿಕ್ಕಿದೆ ಎಂದು ನಾನು ಪರಿಗಣಿಸುತ್ತೇನೆ” ಎಂಬುದು ಮಹಾತ್ಮ ಗಾಂಧೀಜಿಯವರು ಹೇಳಿದ್ದರು. ಆದರೆ ಇಂದು ಭಯಕ್ಕಿಂತ ಅಧಿಕವಾಗಿ ಮಧ್ಯರಾತ್ರಿ ಮನೆಯಿಂದ ಹೊರಗಿರುವ ಮಹಿಳೆಯನ್ನೇ ದೂಷಿಸಲಾಗುತ್ತಿರುವುದು ಖೇದಕರ. ನಿರ್ಭಯಾ ಪ್ರಕರಣದಲ್ಲಿ ಸಂತ್ರಸ್ತೆ ಅಷ್ಟು ರಾತ್ರಿ ಹೊರಗೆ ಹೋಗಿದ್ದು ಯಾಕೆ ಎಂದು ಈ ಸಮಾಜ ಪ್ರಶ್ನಿಸಿತೆ ಹೊರತು, ಮಹಿಳೆಯರು ಯಾವುದೇ ಸಮಸ್ಯೆ, ಆತಂಕವಿಲ್ಲದೆ ರಾತ್ರಿ ಓಡಾಡುವಷ್ಟು, ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವಷ್ಟು ಭಾರತ ಸ್ವತಂತ್ರವಾಗಿಲ್ಲ ಎಂಬ ಚಿಂತನೆ ನಡೆಸಿಲ್ಲ.
ಇವೆಲ್ಲವೂ ನೇರವಾಗಿ ಸಂತ್ರಸ್ತೆಯ ಮಾನಸಿಕ ಆರೋಗ್ಯದ ಮೇಲೆ ತೀವ್ರ ಹಾನಿಯನ್ನುಂಟು ಮಾಡುವುದು ಖಂಡಿತ. ಅಷ್ಟು ಮಾತ್ರವಲ್ಲದೆ ಇಂತಹ ‘ವಿಕ್ಟಿಮ್ ಬ್ಲೇಮಿಂಗ್’ ಪ್ರಕರಣಗಳಿಂದಾಗಿಯೇ ಮಹಿಳೆ ಯಾರದೋ ತಪ್ಪಿಗೆ ತಮ್ಮನ್ನು ತಾನು ದೂಷಿಸುತ್ತಾಳೆ, ಬದುಕಿನುದ್ದಕ್ಕೂ ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾಳೆ. ದೂರು ನೀಡಲೂ ಮುಂದಾಗುವುದಿಲ್ಲ. ಜತೆಗೆ ಇಂತಹ ಪ್ರಕರಣಗಳು ಅಪರಾಧಿಗೆ ಪರೋಕ್ಷ ಬೆಂಬಲ ನೀಡಿದಂತೆಯೇ ಅಲ್ಲವೇ? ‘ಅತ್ಯಾಚಾರ ಸಂಸ್ಕೃತಿ’ ಎಂಬುದನ್ನು ಉತ್ತೇಜಿಸಿದಂತೆ ಅಲ್ಲವೇ?

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.




