ಪವಿತ್ರ ರಂಜಾನ್ ಮಾಸದ ಕಠಿಣ ಉಪವಾಸ (ರೋಜಾ) ಮುಕ್ತಾಯದ ಹಂತಕ್ಕೆ ತಲುಪಿದ್ದು, ಮುಸ್ಲಿಂ ಬಾಂಧವರು ‘ಈದ್-ಉಲ್-ಪಿತರ್’ ಸಂಭ್ರಮಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ವಿಜಯಪುರದ ಮಾರುಕಟ್ಟೆಗಳಲ್ಲಿ ಹಬ್ಬದ ಕಳೆ ಮನೆಮಾಡಿದ್ದರೂ, ಈ ಬಾರಿ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಬೆಲೆ ಏರಿಕೆಯ ಬಿಸಿಯ ನಡುವೆಯೂ ಗ್ರಾಹಕರು ಹೊಸ ಬಟ್ಟೆ, ಆಭರಣ ಹಾಗೂ ಸಿಹಿ ಪದಾರ್ಥಗಳ ಖರೀದಿಯಲ್ಲಿ ತೊಡಗಿದ್ದು, ಮಾರುಕಟ್ಟೆಗಳು ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸುತ್ತಿವೆ.
ಹಬ್ಬದ ಪ್ರಯುಕ್ತ ವಿಜಯಪುರ ನಗರದ ವಿವಿಧ ಶಾಪ್ಗಳಲ್ಲಿ ಚಪ್ಪಲಿ, ಬಟ್ಟೆ ಮೇಲಿನ ಶೇ.30 ರಿಂದ 40 ರಷ್ಟು ರಿಯಾಯಿತಿ ಗ್ರಾಹಕರನ್ನು ಸೆಳೆಯುತ್ತಿದೆ. ಒಂದು ಜೊತೆ ಬಟ್ಟೆ ತೆಗೆದುಕೊಳ್ಳುವಲ್ಲಿ ಗ್ರಾಹಕರು ಮೂರ್ನಾಲ್ಕು ಜೊತೆ ತೆಗೆದುಕೊಳ್ಳುತ್ತಿದ್ದಾರೆ. ಮಹಿಳೆಯರು ಕೂಡಾ ಬಟ್ಟೆ ಜತೆಗೆ ಚಪ್ಪಲಿ, ಆಭರಣ ಕೊಳ್ಳುವಲ್ಲಿ ಉತ್ಸುಕರಾಗಿದ್ದಾರೆ.

ವಿಜಯಪುರ ನಗರದ ಕೆ ಸಿ ಮಾರುಕಟ್ಟೆಯಿಂದ ಟಿಪ್ಪು ಸುಲ್ತಾನ್ ಸರ್ಕಲ್, ಗಾಂಧಿ ವೃತ್ತದವರೆಗೂ ರಸ್ತೆಗಳು, ಮಸೀದಿಗಳು ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸುತ್ತಿವೆ. ಗಾಂಧಿ ಚೌಕ, ಕೆಸಿ ಮಾರ್ಕೆಟ್ ಗಳಲ್ಲಿ ರಂಜಾನ್ ಶಾಪಿಂಗ್ಗಾಗಿಯೇ ಕೆಲ ಹೊಸ ಅಂಗಡಿಗಳು ತಲೆಯೆತ್ತಿವೆ. ಮಹಿಳೆಯರು ಬಟ್ಟೆ, ಸೌಂದರ್ಯ ವರ್ಧಕ, ಮೆಹಂದಿ ಸೇರಿದಂತೆ ವಿಧ ವಿಧವಾದ ಆಭರಣಗಳನ್ನು ಖರೀದಿಸುವಲ್ಲಿ ನಿರತರಾಗಿದ್ದಾರೆ. ಪುರುಷರು ಹಬ್ಬಕ್ಕಾಗಿ ಹೊಸ ಬಟ್ಟೆ, ಟೋಪಿ, ಕರವಸ್ತ್ರ, ಸುಗಂಧ ದ್ರವ್ಯ ಖರೀದಿಸುವಲ್ಲಿ ನಿರತರಾಗಿದ್ದಾರೆ.
ಈ ಮಧ್ಯೆ ಮಾರುಕಟ್ಟೆಯಲ್ಲಿ ದಿನಸಿ ವಸ್ತುಗಳು ವಿಶೇಷವಾಗಿ ಸುರಕುಂಬ (ಶೀರ್ ಖುರ್ಮಾ) ಮಾಡಲು ಬೇಕಾಗುವ ಗೋಡಂಬಿ ಬಾದಾಮಿ ಸೇರಿದಂತೆ ಡ್ರೈ ಫ್ರೂಟ್ಸ್ ಹಾಗೂ ವಿವಿಧ ಮಸಾಲೆ ಪದಾರ್ಥಗಳು ಭರ್ಜರಿಯಾಗಿ ಮಾರಾಟವಾಗುತ್ತಿದ್ದರೂ, ಬೆಲೆ ಏರಿಕೆಯಿಂದ ಕಳೆದ ವರ್ಷಕ್ಕೆ ಹೋಲಿಸಿದರೆ ಕೊಂಚ ವ್ಯಾಪಾರ ಕುಂಠಿತವಾಗಿದೆ ಎನ್ನುತ್ತಾರೆ ಕೆಲ ವ್ಯಾಪಾರಿಗಳು.

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಪ್ರತಿ ಕೆಜಿಗೆ ಸುಮಾರು ರೂ.400ರಷ್ಟು ದರ ಏರಿಕೆಯಾಗಿದೆ. 120 ಇದ್ದ ಕೊಬ್ಬರಿ ಬೆಲೆ 350 ಆಗಿದೆ. ಕಳೆದ ವರ್ಷ ಸುರಕುಂಬ ಮಸಾಲೆ ಪ್ರತಿಯೊಂದು 50 ಗ್ರಾಂನಂತೆ ಕೇವಲ 600 ರಿಂದ 700ಗಳಲ್ಲಿ ಸಿಗುತ್ತಿತ್ತು. ಆದರೆ, ಅದು ಈ ಬಾರಿ 1200 ರಿಂದ 1300 ಆಗಿದೆ. ಹೀಗಾಗಿ ಗ್ರಾಹಕರು ಕೊಂಡುಕೊಳ್ಳುವ ಪ್ರಮಾಣ ಇಳಿಮುಖವಾಗಿದೆ ಎನ್ನುತ್ತಾರೆ ವ್ಯಾಪಾರಿ ಪ್ರವೀಣ ಕುಮಾರ.
ರಂಜಾನ್ ಹಬ್ಬ ನಮಗೆ ಅತ್ಯಂತ ಪವಿತ್ರ ಹಬ್ಬ. ನಾವು ಅತ್ಯಂತ ಸಡಗರದಿಂದ ಆಚರಿಸುತ್ತೇವೆ. ಈ ಹಬ್ಬದಲ್ಲಿ ಹೊಸಬಟ್ಟೆ ಖರೀದಿಸುತ್ತೇವೆ. ಆದರೆ ಈ ವರ್ಷ ಯುದ್ಧದ ಪರಿಣಾಮ ಖರೀದಿಸುವುದು ಬಹಳ ಕಷ್ಟವಾಗಿದೆ. ಆದರೂ ಇದ್ದದ್ದರಲ್ಲಿ ಖರೀದಿಸುತ್ತಿದ್ದೇವೆ ಎನ್ನುತ್ತಾರೆ ಕರ್ನಾಟಕ ರಕ್ಷಣಾ ವೇದಿಕೆ ನಗರ ಘಟಕದ ಅಧ್ಯಕ್ಷ ಫಯಾಜ್ ಕಲಾದಗಿ.

ಯುದ್ಧದಿಂದ ವ್ಯಾಪಾರ ಕುಸಿದಿರುವುದು ಸತ್ಯ. ಹೋದ ವರ್ಷ ಬೆಲೆ ಕಡಿಮೆ ಇತ್ತು. ವ್ಯಾಪಾರ ಛಲೋ ಇತ್ತು. ಆದರೆ ಈ ವರ್ಷ ವ್ಯಾಪಾರ ಮಾಡಲು ಬಹಳ ತೊಂದರೆ ಆಗಿದೆ ಎನ್ನುತ್ತಾರೆ ಅಶೋಕ ಕನ್ನೂರು.
ಇದನ್ನೂ ಓದಿ: ವಿಜಯಪುರ | ವೈದ್ಯಕೀಯ ನಿರ್ಲಕ್ಷ್ಯ ಕಾನೂನು ವಿಷಯದ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ

ಜಾಗತಿಕ ರಾಜಕೀಯ ವಿದ್ಯಮಾನಗಳು ಮತ್ತು ಯುದ್ಧದ ಭೀತಿಯು ಸ್ಥಳೀಯ ಮಾರುಕಟ್ಟೆಯ ಮೇಲೆ ತೀವ್ರ ಪರಿಣಾಮ ಬೀರಿದೆ. ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿದ್ದರೂ, ಹಬ್ಬದ ಭಕ್ತಿ ಮತ್ತು ಸಡಗರಕ್ಕೆ ಯಾವುದೂ ಅಡ್ಡಿಯಾಗಿಲ್ಲ. ʼಖರ್ಚು ಹೆಚ್ಚಾದರೂ ಪವಿತ್ರ ಹಬ್ಬದ ಆಚರಣೆಯಲ್ಲಿ ಕುಂದು ಬರಬಾರದುʼ ಎಂಬ ಮನೋಭಾವದೊಂದಿಗೆ ಮುಸ್ಲಿಂ ಬಾಂಧವರು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಬೆಲೆ ಏರಿಕೆಯ ಕಹಿಯ ನಡುವೆಯೂ ಈದ್ ಹಬ್ಬದ ಸಿಹಿಯನ್ನು ಸವಿಯಲು ವಿಜಯಪುರ ಜನತೆ ಸಜ್ಜಾಗಿದೆ.





